ಬೇಸಾಯದಲ್ಲಿ ಆಗಬೇಕಾದ ಸುಧಾರಣೆಗಳು

(ಇಗೋ ವಿಜ್ಞಾನ – 2020 ಪೈಪೋಟಿಯಲ್ಲಿ ವಿಶೇಷ ಬಹುಮಾನ ಪಡೆದ ಬರಹ)

ನಯನ.ಸಿ.ಕೆ.

ಬೇಸಾಯದಲ್ಲಿ ಇಂದು ಆಗಬೇಕಾದ ಮುಖ್ಯ ಸುಧಾರಣೆಗಳೆಂದರೆ:

೧. ಉಳುವ ರೈತನಿಗೆ ಆದಾಯ ಬರಬೇಕಾದರೆ ಯಾವ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಬೇಕು?
೨. ರೈತ, ಮಾರುಕಟ್ಟೆ ಮತ್ತು ಗ್ರಾಹಕ – ಇವರ ನಡುವಿನ ನಂಟನ್ನು ಸರಿದೂಗಿಸುವುದು ಹೇಗೆ?

ಇದರ ವಿವರಗಳನ್ನು ಕೆಳಗೆ ನೋಡೋಣ.

ಭೂಮಿಯನ್ನು ಉಳುಮೆಮಾಡಿ, ಸಸ್ಯಗಳನ್ನು ಪೋಷಿಸಿ, ಅದರಿಂದ ಮಾನವ ಮತ್ತು ಪ್ರಾಣಿಗಳಿಗೆ ಉಪಯೋಗಗಳನ್ನು ಪಡೆಯುವುದೇ ವ್ಯವಸಾಯ. ವ್ಯವಸಾಯ ಮಾನವನಿಗೆ ಅಗತ್ಯವಾದ ಆಹಾರ ಧಾನ್ಯಗಳನ್ನು ಹಾಗೂ ಕೈಗಾರಿಕೆಗಳಿಗೆ ಕಚ್ಚಾವಸ್ತುಗಳನ್ನು ಪೂರೈಸುತ್ತದೆ.

ಕೃಷಿಭೂಮಿಯ ಸ್ವರೂಪ, ವಾಯುಗುಣ, ಮಳೆಹಂಚಿಕೆ, ಮಣ್ಣಿನಗುಣ, ಬಂಡವಾಳ ಹೂಡಿಕೆಯ ಆಧಾರದ ಮೇಲೆ ಭಾರತದ ವಿವಿಧ ಭಾಗಗಳಲ್ಲಿ ವಿವಿಧ ಬಗೆಯ ಬೇಸಾಯ ಪದ್ಧತಿಗಳು ರೂಡಿಯಲ್ಲಿವೆ. ಅಂತೆಯೇ ವ್ಯವಸಾಯದ ಮುಖ್ಯ ಲಕ್ಷಣಗಳಾದ ಭೂಬಳಕೆ, ಬೆಳೆಸುವ ಬೆಳೆಗಳು, ತಳಿ, ಇಳುವರಿ, ಬಳಸುವ ಉಪಕರಣಗಳು ಮತ್ತು ಗೊಬ್ಬರಗಳ ಬಳಕೆ ಸ್ಥಳದಿಂದ ಸ್ಥಳಕ್ಕೆ ವ್ಯತ್ಯಾಸ ಹೊಂದುತ್ತದೆ.

ಕೃಷಿ ಕ್ಷೇತ್ರದಲ್ಲಿ ಮುನ್ನಡೆಯಬೇಕಾದರೆ, ಲಾಭ ಗಳಿಸಬೇಕಾದರೆ ರೈತರು ಆಧುನಿಕ ಕೃಷಿ ಪದ್ದತಿ ಹಾಗೂ ತಂತ್ರಜ್ಞಾನದ ಅಳವಡಿಕೆ ಅಥವಾ ಬಳಕೆಯ ಪರಿಕಲ್ಪನೆಯನ್ನು ಅರ್ಥೈಸಿಕೊಳ್ಳಬೇಕು. ಇತ್ತೀಚಿನ ದಿನಗಳಲ್ಲಿ ರೈತರು ಎದುರಿಸುತ್ತಿರುವ ಪ್ರಮುಖ ಸಮಸ್ಯೆಯೆಂದರೆ  ಕಾರ್ಮಿಕರ ಕೊರತೆ. ಕೂಲಿಭತ್ಯೆ ಹೆಚ್ಚಳದಿಂದಾಗಿ ದುಡಿಯುವ ಜನರಿಲ್ಲದ ಮನೆಗಳಲ್ಲಿ ಉತ್ಪಾದನಾ ವೆಚ್ಚ ಹೆಚ್ಚಳದಿಂದ ಕೃಷಿಯಿಂದ, ಲಾಭ ಪಡೆಯುವುದು ಕನಸಿನ ಮಾತಾಗಿದೆ. ಇದರಿಂದ ವಿಮುಕ್ತಿ ಹೊಂದಲು, ಅಂದರೆ ಕೃಷಿಯ ಕಾರ್ಯಕ್ಷಮತೆ ಹೆಚ್ಚಿಸಿ ಮತ್ತು ಉತ್ಪಾದನಾ ವೆಚ್ಚ ತಗ್ಗಿಸಿ, ಹೆಚ್ಚು ಲಾಭಗಳಿಸಲು  “ಕೃಷಿ ಯಾಂತ್ರೀಕರಣ” ಹಾಗೂ “ಆಧುನಿಕ ತಂತ್ರಜ್ಞಾನ”ದ ಬಳಕೆ ಅನಿವಾರ್ಯವಾಗಿದೆ.

ಕೃಷಿ ಯಾಂತ್ರೀಕರಣ

ಮಾನವಸಂಪನ್ಮೂಲದ ಕೊರತೆ ಕೃಷಿಕ್ಷೇತ್ರದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಅಲ್ಪಸ್ವಲ್ಪ ಯಂತ್ರಗಳ ಅಳವಡಿಕೆ ತೀರಾ ಅಗತ್ಯವಾಗಿದೆ. ಭೂಮಿ ಯನ್ನು ಅಣಿಗೊಳಿಸಲು  ಮತ್ತು ಆಳವಾಗಿ ಉಳುಮೆ ಮಾಡಲು ಟ್ರ್ಯಾಕ್ಟರ್ ಗಳ ಬಳಕೆ ಸಾಮಾನ್ಯವಾಗಿದೆ. ನವೀಕರಣಗೊಂಡ ೪೦ಹೆಚ್ ಪಿ ಟ್ರ್ಯಾಕ್ಟರ್ ಗಳ ಬಳಕೆ ಹೆಚ್ಚಾಗಿದೆ. ಬಹುಪಯೋಗಿ ಕಳೆ ಕೊಚ್ಚುವ ಯಂತ್ರ, ಹಾಲು ಹಿಂಡುವ ಯಂತ್ರ, ಪಾಲಿ ಟನಲ್ ಡ್ರೈಯರ್, ವಿದ್ಯುತ್ ಬೇಲಿ, ರೋಟರಿ ಟಿಲ್ಲರ್, ಕೀಟನಾಶಕಗಳ ಸಿಂಪಡಣೆಗೆ ವಿವಿಧ ಬಗೆಯ ಸ್ಪ್ರೇಯರ್ ಗಳು , ಮಿಸ್ಟ್ ಬ್ಲೋಯರ್, ಗುಂಡಿ ತೋಡುವ ಯಂತ್ರ, ಸಂಯೋಜಿತ ಕೊಯ್ಲು ಮತ್ತು ನಾಟಿಯಂತ್ರ, ಮುಂತಾದವುಗಳು ಹೆಚ್ಚು ಉಪಯುಕ್ತವಾಗಿವೆ.

ಜಿ ಪಿ ಎಸ್ ತಂತ್ರಜ್ಞಾನ ಅಳವಡಿಸಿರುವ  ಆಟೊಪೈಲಟ್ ಸ್ಪ್ರೇಯರ್ ಮತ್ತು ಟ್ರ್ಯಾಕ್ಟರ್ ಗಳು ಹೆಚ್ಚು ಸಾಮರ್ಥ್ಯ ಹೊಂದಿವೆ. ಇವು ಸ್ವಯಂಚಾಲಿತವಾಗಿದ್ದು, ಮಾನವ ತೊಡಕುಗಳ ಪ್ರಮಾಣ ಕಡಿಮೆ.

“ಸಮಯೋಚಿತ ಉತ್ಪಾದನೆ” ಕೃಷಿಯಲ್ಲಿ ಲಾಭಗಳಿಸಲು  ಒಂದು ಪ್ರಮುಖ ಅಂಶವಾಗಿದೆ. ಮುಂಗಡ ಬಿತ್ತನೆ, ಸಮಯಕ್ಕೆ ಸರಿಯಾಗಿ ಕಟಾವು ಮಾಡುವುದು ಮತ್ತು ಫಸಲನ್ನು ಸರಿಯಾದ ಸಮಯದಲ್ಲಿ ಮತ್ತು ಸ್ಥಳದಲ್ಲಿ ಶೇಖರಿಸುವುದು ಅತ್ಯಗತ್ಯ. ಫಸಲುಗಳನ್ನು ಶೇಖರಿಸಿ ಅಗತ್ಯಬಿದ್ದಾಗ, ಅಂದರೆ ಹೆಚ್ಚಿನ ಬೆಲೆ ದೊರೆತಾಗ ಮಾರಲು ಶೀತಲ ಶೇಖರಣಾ ಘಟಕದ  ಅವಶ್ಯಕತೆ ಇದೆ. ಹಾಗಾಗಿ  ರೈತರು ಸರ್ಕಾರದಿಂದ  ದೊರೆಯುವ ಸವಲತ್ತುಗಳನ್ನು  ಬಳಸಿಕೊಂಡು ತಾಲೂಕು ಅಥವಾ ಹೋಬಳಿ ಮಟ್ಟದಲ್ಲಿ  ಹೆಚ್ಚು ಅವಶ್ಯಕತೆಯಿರುವಲ್ಲಿ,  ಈ ಘಟಕಗಳನ್ನು  ನಿರ್ಮಿಸಿಕೊಳ್ಳುವುದು ಹೆಚ್ಚು ಉಪಯುಕ್ತ .

ಬೆಳೆ ಸೆನ್ಸರ್ಸ್ :

samvedagala-balake(ಚಿತ್ರ ಕೃಪೆ: Benedette cuffari)

ರಸಗೊಬ್ಬರ ಹಾಗೂ ಕೀಟನಾಶಕಗಳ ಪರಿಣಾಮಕಾರಿ ಸಿಂಪಡಣೆ ಒಂದು ದೊಡ್ಡ ಸವಾಲಾಗಿ ಪರಿಣಮಿಸಿದೆ. ಮುಖ್ಯವಾಗಿ, ಪ್ರತ್ಯೇಕ ಬೆಳೆಗೆ ಬೇಕಾದ ನಿರ್ದಿಷ್ಠ ರಸಗೊಬ್ಬರದ ಬಳಕೆ, ಸಿಂಪಡಿಸಬೇಕಾದ  ಸಮಯ  ಮತ್ತು ಅಳತೆ – ಇವುಗಳು ಸಾಮಾನ್ಯ ರೈತರಿಗೆ ತಿಳಿದಿರುವುದಿಲ್ಲ. ಕ್ರಾಪ್ ಸೆನ್ಸಾರ್ ಗಳು ಈ ಕಾರ್ಯವನ್ನು ಸುಲಭವಾಗಿಸುತ್ತವೆ. ಈ ತಂತ್ರಜ್ಞಾನದಿಂದ ಬೆಳೆಗಳ ಗುಣಮಟ್ಟವನ್ನು  ಅಳೆಯುವುದಲ್ಲದೆ, ಕೃಷಿ  ಭೂಮಿಯ  ಮೇಲ್ಮೈ ಕೂರೆತದ ಸಂಭವನೀಯತೆಯನ್ನು  ತಗ್ಗಿಸುತ್ತದೆ. ಈ ಬೆಳೆ ಸೆನ್ಸರ್ ಗಳು ಬೆಳೆಸಸ್ಯಗಳಿಗೆ  ಅಗತ್ಯವಾದ  ರಸಗೊಬ್ಬರ ಅಥವಾ ಕೀಟನಾಶಕದ  ಅಳತೆಯನ್ನು, ಅಗತ್ಯವಾದ ಸಮಯವನ್ನೂ ನಿರ್ದೇಶಿಸುವಂತೆ  ವಿನ್ಯಾಸಗೊಂಡಿವೆ. ಇವುಗಳ ಬಳಕೆಯಿಂದಾಗಿ  ಸಸ್ಯಗಳ ಗುಣಮಟ್ಟವನ್ನು ಕಾಪಾಡಿಕೊಂಡು ಅಗತ್ಯವಿರುವಷ್ಟೇ  ಕ್ರಿಮಿನಾಶಕ, ಗೊಬ್ಬರಗಳನ್ನು ಒದಗಿಸುವುದರಿಂದ ಅವುಗಳ ನಿಯಮಿತ ಬಳಕೆಯಿಂದಾಗಿ, ಹೂಡಿಕೆಯನ್ನು ತಗ್ಗಿಸಿ, ಮಣ್ಣಿನ ಗುಣಮಟ್ಟವನ್ನು ಕಾಪಾಡಿಕೊಂಡು ಹೆಚ್ಚಿನ ಲಾಭ ಪಡೆಯಬಹುದಾಗಿದೆ.

ಮಾಹಿತಿ ತಂತ್ರಜ್ಞಾನದ ಬಳಕೆ

ಇತ್ತೀಚಿನ ದಿನಗಳಲ್ಲಿ  ರಿಮೋಟ್ ಸೆನ್ಸಿಂಗ್, ಜಿಪಿಎಸ್ ಮತ್ತು ಜಿಯೋಗ್ರಾಫಿಕಲ್ ಇನ್ಫರ್ಮೇಷನ್ ಸಿಸ್ಟಮ್ ತಂತ್ರಜ್ಞಾನಗಳು ಕೃಷಿ ಚಟುವಟಿಕೆಗಳ ಮೌಲ್ಯಮಾಪನ ಮತ್ತು ನಿರ್ವಹಣೆಯಲ್ಲಿ ಗಮನಾರ್ಹ ಪಾತ್ರವಹಿಸುತ್ತಿವೆ. ಇವು ಅನೇಕ ತರನಾಗಿ ಉಪಯುಕ್ತವಾಗಿವೆ. ಫಸಲಿನ ಬೆಳವಣಿಗೆಯ ಗುಣಮಟ್ಟ ನೋಡಿಕೊಳ್ಳುವುದು, ಮಣ್ಣಿನ ತೇವಾಂಶ, ಫಲವತ್ತತೆಯ ಮೌಲ್ಯಮಾಪನ, ಬೆಳೆಗೆ ತಗುಲಬಹುದಾದ ಅಥವಾ ತಗುಲಿರಬಹುದಾದ ರೋಗ ಮತ್ತು ಕೀಟಗಳ ಭಾದೆ, ನೀರಿನ ಉಬ್ಬರ ಅಥವಾ ಕೊರತೆಯ ಸ್ಥಿತಿಗತಿ, ಅಂದಾಜು ಇಳುವರಿ, ಹವಾಮಾನ ವೈಪರೀತ್ಯದ ವರದಿಗಳ ನಿಖರ ಮಾಹಿತಿಯಿಂದಾಗಿ, ಕೃಷಿ ಪದ್ಧತಿಯ ಸಂರಕ್ಷಣೆ ಹಾಗೂ ಕೃಷಿಕ ಸಮುದಾಯದ ಆರ್ಥಿಕ ಸ್ಥಿತಿಗತಿಯ ಸುಧಾರಣೆ ಸಾಧ್ಯವಾಗುತ್ತದೆ. ಜಿಪಿಎಸ್ ತಂತ್ರಜ್ಞಾನದಿಂದ, ನಿರ್ದಿಷ್ಟ ಭೂಮಿಯಿಂದ ಬರುವ ಇಳುವರಿಯನ್ನು ಊಹಿಸಿ ದಾಖಲಿಸಬಹುದು. ಈ ಇಳುವರಿ ನಕ್ಷೆಯನ್ನು ಅವಲಂಬಿಸಿಕೊಂಡು ಯಾವ ಬೆಳೆ ಬೆಳೆಯುವುದು ಸೂಕ್ತವೆಂದು ನಿರ್ಣಯ ಮಾಡುವುದರೊಂದಿಗೆ, ಅತಿ ಹೆಚ್ಚುಉತ್ಪಾದನೆಯಿಂದಾಗುವ ಬೆಲೆ ಕುಸಿತದ ನಷ್ಟ ತಪ್ಪುತ್ತದೆ.

ಸಂರಕ್ಷಿತ ಕೃಷಿ ( ಹಸಿರು ಮನೆ ತಂತ್ರಜ್ಞಾನ)

hasiru-mane

ಚಿತ್ರ ಕೃಪೆ: Krishijagran.com

ಪಾಲಿಹೌಸ್ ಅಥವಾ ಹಸಿರುಮನೆಗಳಲ್ಲಿ, ಬೆಳೆಯುವ ಬೆಳೆಗಳ ಬೇಸಾಯಕ್ಕೆ ಅನುಕೂಲವಾದ ವಾತಾವರಣ ಕಲ್ಪಿಸಿ, ಉತ್ತಮ ಗುಣಮಟ್ಟ ಮತ್ತು ಅಧಿಕ ಇಳುವರಿ ಪಡೆಯಬಹುದಾಗಿದೆ. ಭಾರ ಕಡಿಮೆಯಿದ್ದು, ಹೆಚ್ಚು ಲಾಭ ತರುವಂತಹ ತರಕಾರಿ, ಹೂವು ಹಾಗೂ ಹಣ್ಣಿನ ಬೆಳೆಗಳಿಗೆ ಇದು ಸೂಕ್ತ. ಉತ್ತಮ ತಳಿಗಳನ್ನು ಅಳವಡಿಸಿಕೊಂಡು ವೈಜ್ಞಾನಿಕವಾಗಿ ಕಡಿಮೆ ಸ್ಥಳದಲ್ಲಿ ಉತ್ತಮ ಗುಣಮಟ್ಟದ ಇಳುವರಿ ಮತ್ತು ಹೆಚ್ಚಿನ ಉತ್ಪಾದಕತೆ ಪಡೆಯಬಹುದು. ವರ್ಷದ ಎಲ್ಲಾ ಕಾಲದಲ್ಲೂ ಮಾರುಕಟ್ಟೆಗೆ ತಕ್ಕಂತೆ ಬೆಳೆಗಳನ್ನು ಬೆಳೆದು ಲಾಭಗಳಿಸಬಹುದು ಮತ್ತು ಒಳ್ಳೆಯ ಗುಣಮ್ಟದ ಹಾಗೂ ರಫ್ತುಮಾಡಲು ಯೋಗ್ಯವಾದ ಬೆಳೆ ಸಾಧ್ಯವಾಗುತ್ತದೆ.

ಜೈವಿಕ ತಂತ್ರಜ್ಞಾನ

ಕೃಷಿ ಅಭಿವೃದ್ಧಿಯಲ್ಲಿ ಜೈವಿಕ ತಂತ್ರಜ್ಞಾನ ಪ್ರಮುಖ ಪಾತ್ರವಹಿಸಿದೆ. ಟ್ರಾನ್‍ಜೆನಿಕ್ (ಕುಲಾಂತರಿ ತಳಿ) ತಂತ್ರಜ್ಞಾನದಿಂದ ಸುಧಾರಿತ ಇಳುವರಿ, ವಾತಾವರಣದ ಒತ್ತಡಕ್ಕೆ ಪ್ರತಿರೋಧಕತೆ, ಹೆಚ್ಚಿನ ಪೌಷ್ಟಿಕತೆ, ಗ್ಲೈಫೋಸೇಟ್ (ರೌಂಡಪ್), ಫಾಸ್ಫೀನೋತ್ರಿಸಿನ್ (ಬಾಸ್ಟಾ)  ಮುಂತಾದ ಕಳೆನಾಶಕ ಔಷಧಗಳಿಗೆ, ನಿರೋಧಕ ಶಕ್ತಿ ಹೊಂದಿರುವ ಬೆಳೆ ಸಸ್ಯಗಳು ದೊರಕುತ್ತಿವೆ.  ಕೀಟ ಹಾಗೂ ರೋಗ ನಿರೋಧಕ ತಳಿಗಳಾದ ಬಿ ಟಿ ಹತ್ತಿ, ಭತ್ತ, ಟೊಮ್ಯಾಟೋ, ಬದನೆ ಮುಂತಾದವು, ಇಳುವರಿಯ ಗುಣಮಟ್ಟ ಹೆಚ್ಚಿಸಿ ಲಾಭ ತಂದುಕೊಡುತ್ತಿವೆ.  ಉಪಯುಕ್ತ ಗುಣಗಳನ್ನು ಸಮೀಕರಿಸಿ ತಯಾರಿಸಿದ ಹೈಬ್ರಿಡ್ ತಳಿಗಳಿಂದ ರೋಗನಿರೋಧಕತೆ, ಅಧಿಕ ಇಳುವರಿ ಮತ್ತು ಬರನಿರೋಧಕ ಶಕ್ತಿ ಹೊಂದಿದ್ದು ಪ್ರಾದೇಶಿಕ ತಳಿಗಳಿಗಿಂತ ಹೆಚ್ಚು ಉಪಯುಕ್ತವಾಗಿವೆ.

ಅಂಗಾಂಶ ಕೃಷಿ ಮತ್ತು ಕ್ಲೋನಿಂಗ್ ತಂತ್ರಜ್ಞಾನವು, ಪ್ರಮುಖವಾಗಿ ತಿರುಳು, ಮರದ ದಿಮ್ಮಿ, ತೊಗಟೆ, ಹಣ್ಣು ಮುಂತಾದ ಉತ್ಪನ್ನಗಳಿಗಾಗಿ ಬೆಳೆಯುವ ಅರಣ್ಯ ಕೃಷಿ ಮತ್ತು ತೋಟಗಾರಿಕಾ ಬೆಳೆಗಳಲ್ಲಿ ಹೆಚ್ಚು ಬಳಕೆಯಲ್ಲಿದೆ. ಕಡಿಮೆ ಸಮ ಯ ದಲ್ಲಿ ಅಧಿಕ ಸಂಖ್ಯೆಯ ಸಸಿಗಳು, ಬೀಜದ ಜಡಸ್ಥಿತಿ ಹಾಗೂ ಅದು ಮೊಳೆತು ಸಸಿಯಾಗಿ ಫಲಕೊಡಲು ತೆಗೆದುಕೊಳ್ಳುವ ಕಾಲಾವಧಿ, ಈ ವಿಧಾನದಲ್ಲಿ ಉತ್ಪಾದಿಸಿದ ಸಸ್ಯಗಳಲ್ಲಿ ದುಪ್ಪಟ್ಟು ಕಡಿಮೆಯಿರುತ್ತದೆ.

ಜೈವಿಕ ತಂತ್ರಜ್ಞಾನದ ಪರ ಮತ್ತು ವಿರೋಧದ ಚರ್ಚೆಗಳು ಹಲವಾರು ವರುಷಗಳಿಂದ ನಡೆಯುತ್ತಿವೆ. ಈ ನಿಟ್ಟಿನಲ್ಲಿ ವೈಜ್ಞಾನಿಕವಾಗಿ ಸರಿಯಾಗಿರುವ ಕ್ರಮಗಳನ್ನು ಜಾರಿಗೆ ತರಬೇಕು. ಹೆಚ್ಚು ಇಳುವರಿ ಪಡೆಯುವಂತಾಗಬೇಕು ಆದರೆ ಇದರಿಂದ ಭೂಮಿಯ ಫಲವತ್ತತೆ ಹಾಳಾಗದಂತೆಯೂ ನೋಡಿಕೊಳ್ಳಬೇಕು. ಹೀಗಾಗಿ ಇಲ್ಲಿ ಸಮದೂಗಿದ ನಡೆ ತುಂಬಾ ಮುಖ್ಯ.

ಆಧುನಿಕ ನೀರಾವರಿ ಪದ್ಧತಿ

ಇತ್ತೀ ಚಿ ನ ದಿನಗಳಲ್ಲಿ, ಬೆಳೆಗೆ ಅಗತ್ಯವಿರುವ ಪ್ರಮಾಣದಲ್ಲಿ  ನೀರನ್ನು ಒದಗಿಸಿ, ಹೆಚ್ಚು ನೀರು ಪೋಲಾಗುವುದನ್ನು ತಡೆಗಟ್ಟುವಲ್ಲಿ ಮಹತ್ತರ ಆವಿಷ್ಕಾರಗಳು ನಡೆದಿವೆ. ಅದರ ಪರಿಣಾಮವಾಗಿ ಡ್ರಿಪ್ ಅಟೋಮೇಶನ್ ಸಿಸ್ಟಮ್ (ತಂತಾನೇ ನಡೆಯುವ ಹನಿ ನೀರಾವರಿ ವ್ಯವಸ್ಥೆ)  ಅನ್ನು ಫೋನಿನಿಂದ ಪ್ರೋಗ್ರಾಂ ಮಾಡಬಹುದು  ಮತ್ತು ಅದು ನಿಖರ ಪ್ರಮಾಣದ ನೀರನ್ನು ಹಾಯಿಸುತ್ತದೆ .

ಹೊಸ ಮಾದರಿಯ ಡೀಪ್ ಡ್ರಿಪ್ ಇರ್ರಿಗೇಶನ್ (ಆಳ ಹನಿ ನೀರಾವರಿ) ಇತ್ತೀಚಿಗೆ ನಮ್ಮ ದೇಶಕ್ಕೆ ಪರಿಚಯಗೊಂಡಿದೆ. ಈ ವ್ಯವಸ್ಥೆಯಿಂದ ಬೇರಿಗೆ ನೇರವಾಗಿ  ನೀರುಣಿಸುವುದರಿಂದ ಉಳಿದೆಲ್ಲ ನೀರಾವರಿ ತಂತ್ರಜ್ಞಾನಕ್ಕೆ ಹೋಲಿಸಿದರೆ, ಇದು ಹೆಚ್ಚು ನೀರನ್ನು ಉಳಿಸುತ್ತದೆ ಮತ್ತು ಮರದ ಸುತ್ತ ಕಳೆಯೂ ಬೆಳೆಯುವುದಿಲ್ಲ.

neerina-vitarane(ಚಿತ್ರ ಕೃಪೆ: chahtech.com)

ಹೀಗೆ ಸ್ವಯಂಚಾಲಿತ ಸೂಕ್ಷ್ಮ ಹನಿ ನೀರಾವರಿ ಅಥವಾ ತುಂತುರು ನೀರಾವರಿ ಪದ್ದತಿಯಿಂದ, ನೀರಿನ ಮಿತಬಳಕೆ ಮಾಡಿಕೊಂಡು ಹೆಚ್ಚಿನ ಆದಾಯಗಳಿಸಬಹುದು.

ಕೃಷಿ  ಬೆಳೆವಣಿಗೆಯಲ್ಲಿ  ಸ್ಮಾರ್ಟ್ ಫೋನ್

smartphone-balake(ಚಿತ್ರಕೃಪೆ: lmkt.com)

ಸ್ಮಾರ್ಟ್ ಫೋನ್ ಬಳಕೆ ಈಗ ಸರ್ವೇಸಾಮಾನ್ಯ. ಇದರ ಬಳಕೆಯಿಂದ ಕೃಷಿಕಾರ್ಯಗಳನ್ನು ಸುಲಭಗೊಳಿಸಬಹುದಾಗಿದೆ. ಮಣ್ಣಿನ ತೇವಾಂಶ, ಉಷ್ಣಾಂಶ,ಹವಾಗುಣ ದಾಖಲಿಸುವ ರೋ ಬೋಟಿಕ್ಸ್ ಟೆಕ್ನಾಲಜಿಯನ್ನು  ಕೃಷಿಭೂಮಿಯಲ್ಲಿ   ಅಳವಡಿಸಿ, ಅದರ ದಾಖಲೆಗಳನ್ನು ಸ್ಮಾರ್ಟ್ ಫೋನಿನಿಂದ ನೋಡಬಹುದು. ಅದಕ್ಕೆ ತಕ್ಕಂತಹ ಬದಲಾವಣೆ ಗಳನ್ನೂ  ಅಳವಡಿಸಿಕೊಳ್ಳಬಹುದು. ಉದಾಹರಣೆಗೆ, ಉಷ್ಣಾಂಶ ಹೆಚ್ಚಾಗಿದ್ದರೆ ನೀರುಣಿಸುವುದು, ಪಾಲಿಹೌಸ್ ನ  ಮೇಲ್ಛಾವಣಿಯನ್ನು ಅಗತ್ಯಕ್ಕೆ ತಕ್ಕಂತೆ ಸರಿಸುವುದು.

ಕೃಷಿ ಅಪ್ಲಿ ಕೇ ಷನ್ ಗಳು ವ್ಯವಹಾರದಲ್ಲಿ ನಿರ್ಣಾಯಕ ನಿರ್ಧಾರಗಳನ್ನು ಕೈಗೊಳ್ಳಲು ಸಹಾಯಕವಾಗಿವೆ. ಇವುಗಳಿಂದ ಜಾಗತಿಕ ಕೃಷಿ, ಉಪಗ್ರಹ ಚಿತ್ರಣ, ದತ್ತಾಂಶ, ವಿಶ್ಲೇಷಣೆ, ತಜ್ಞರ ಸಲಹೆ, ಮೊಬೈಲ್ ಕ್ಯಾಮರಾದಿಂದ ರೋಗಗಳ ನಿರ್ಣಯ ಪಡೆಯಬಹುದಾಗಿದೆ. ಡಿಜಿಟಲ್ ಯುಗದಲ್ಲಿರುವ ಯುವ ರೈತರಿಗೆ ಬೇಸಾಯದ ಮಾಹಿತಿಗಳು ಬೆರಳ ತುದಿಯಲ್ಲಿ ದೊರೆಯುತ್ತವೆ.

1. ಸಣ್ಣ ಹಿಡುವಳಿದಾರರು ಗಣನೀಯ ಪ್ರಮಾಣದ ವೆಚ್ಚವನ್ನು ಭರಿಸಲಾರದೆ ಸಾಂಪ್ರದಾಯಿಕ ಪದ್ಧತಿಯನ್ನೇ ಅನುಸರಿಸುತ್ತಿದ್ದಾರೆ. ಇದರಿಂದ ಉತ್ಪಾದನಾ ವೆಚ್ಚ ಹಾಗೂ ಬರುವ ಲಾಭಕ್ಕೆ ಹೆಚ್ಚೇನು ಅಂತರವಿರುವುದಿಲ್ಲ, ಹೀಗಾಗಿ ಮಧ್ಯಮ ವರ್ಗದ ಕೃಷಿಕರ ಪರಿಸ್ಥಿತಿ ಚಿಂತಾಜನಕವಾಗಿದೆ. ನಮ್ಮ ರಾಜ್ಯದಲ್ಲಿ ಸಣ್ಣ ಮತ್ತು ಅತೀ ಸಣ್ಣ ರೈತರ ಪ್ರಮಾಣವು ಶೇಕಡ ೭೦ ರಷ್ಟಿದ್ದು ಸಮಗ್ರಕೃಷಿ ಮಾಡುವುದು ಸೂಕ್ತ. ಈ ಪದ್ಧತಿಯಲ್ಲಿ, ಒಂದರಲ್ಲಿ ನಷ್ಟ ಹೊಂದಿದರೂ ಆಧಾರಕ್ಕೆ ಇನ್ನೊಂದಿರುತ್ತದೆ. ಪೂರಕವಾದ ಉಪಕಸುಬಿನಿಂದ ವರ್ಷವಿಡೀ ಆದಾಯ ಬರುತ್ತಿರುತ್ತದೆ. ಕೃಷಿತ್ಯಾಜ್ಯಗಳನ್ನು ಬಳಸಿ ಎರೆಹುಳು ಗೊಬ್ಬರ, ಕಾಂಪೋಸ್ಟ್ ತಯಾರಿಸಿಕೊಂಡು ತಮ್ಮ ಜಮೀನಿಗೆ ಅವಶ್ಯಕವಿರುವ ಪೋಷಕಾಂಶಗಳನ್ನು ಸಾವಯವ ರೂಪದಲ್ಲಿ ಬಳಸುವುದರಿಂದ ರಾಸಾಯನಿಕ ಗೊಬ್ಬರಗಳ ಅವಲಂಬನೆಯನ್ನೂ ಕಡಿತಗೊಳಿಸಬಹುದು.

2. ಫಸಲು ಚೆನ್ನಾಗಿ ಬಂದಿದ್ದರೂ ಮಾರುಕಟ್ಟೆಯಲ್ಲಿ ರೈತರಿಗೆ ಉತ್ತಮ ಬೆಲೆ ಸಿಗುವುದಿಲ್ಲ. ಮಧ್ಯವರ್ತಿಗಳ ಹಾವಳಿಯಿಂದ ಮಾರುಕಟ್ಟೆಗೆ ನೇರವಾಗಿ ರೈತ ಪ್ರವೇಶಿಸಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಪರಿಹಾರವೆಂದರೆ ರೈತರು ಬೆಳೆದ ಬೆಳೆಗಳನ್ನು ನೇರವಾಗಿ ಗ್ರಾಹಕರಿಗೆ ತಲುಪಿಸುವ ವ್ಯವಸ್ಥೆ ಮಾಡುವುದು.

ಕೃಷಿಭೂಮಿ ಇರುವ ಪ್ರದೇಶ, ಮಾರಬೇಕಾಗುವ ಉತ್ಪನ್ನ, ಅದರ ಪ್ರಮಾಣ ಮತ್ತು ಬೆಳೆಯುವ ರೈತನ ಸ್ಥಿತಿಗತಿ ಮುಂತಾದ ಅಂಶಗಳನ್ನು ಆಧರಿಸಿ ರೈತರಿಂದ ನೇರವಾಗಿ ಗ್ರಹಕರಿಗೆ ಉತ್ಪನ್ನವನ್ನು ತಲುಪಿಸುವ ಪರಿಕಲ್ಪನೆಯಲ್ಲಿ ವಿವಿಧ ವಿಧಗಳಿವೆ. ಅವುಗಳೆಂದರೆ ರಸ್ತೆಬದಿಯ ಅಂಗಡಿಗಳು, ರಸ್ತೆಬದಿಯ ಮಾರುಕಟ್ಟೆ, ರೈತ ಮಾರುಕಟ್ಟೆ, ಗ್ರಾಹಕರೇ ಫಸಲನ್ನು ಆರಿಸಿಕೊಳ್ಳುವುದು. ಇನ್ನಿತರ ಆಯ್ಕೆಗಳೆಂದರೆ ಇ- ಮಾರುಕಟ್ಟೆ, ನೇರವಾಗಿ ರೆಸ್ಟೋರೆಂಟ್, ಹೋಟೆಲ್ ಉದ್ಯಮಗಳಿಗೆ ಮಾರುವುದು, ಕೃಷಿ ಅರಣ್ಯ ಅಥವಾ ತೋಟಗಾರಿಕೆ ಬೆಳೆಗಳನ್ನು ಫಸಲಿನ ಕಟಾವಿಗೆ ಗುತ್ತಿಗೆಕೊಡುವುದು.

ರಸ್ತೆಬದಿಯ ಅಂಗಡಿ

ಕೃಷಿಕ ತಾನು ಬೆಳೆದ ಉತ್ಪನ್ನಗಳನ್ನು ತನ್ನ ಕೃಷಿ ಭೂಮಿಯಲ್ಲೇ ಗ್ರಾಹಕರಿಗೆ ಮಾರುವುದು. ಇದರಿಂದ ಮಾರುಕಟ್ಟೆಗೆ ಸಾಗಾಣಿಕಾ ವೆಚ್ಚವನ್ನು ಕಡಿತಗಳಿಸಬಹುದಲ್ಲದೆ ಗ್ರಾಹಕರ ಬೇಡಿಕೆಗೆ ಅನುಸಾರವಾಗಿ ಉತ್ಪಾದನಾ ಪ್ರಮಾಣವನ್ನು ಹೆಚ್ಚಿಸಬಹುದಾಗಿದೆ.

ರಸ್ತೆಬದಿಯ ಮಾರುಕಟ್ಟೆ

ಒಂದು ಪ್ರದೇಶದ ರೈತ ಸಮುದಾಯ ಒಂದುಗೂಡಿ, ತಾವು ವರ್ಷವಿಡೀ ಬೆಳೆಯುವ ವಿವಿಧ ಬೆಳೆಗಳನ್ನು, ಋತುಕಾಲಿಕ ಹಣ್ಣು ಮತ್ತು ತರಕಾರಿಗಳನ್ನು ಒಂದೆಡೆ ಒಟ್ಟುಗೂಡಿಸಿ, ಗ್ರಾಹಕರಿಗೆ ಹತ್ತಿರದ ಜಾಗದಲ್ಲಿ ರಸ್ತೆಬದಿಯ ಮಾರುಕಟ್ಟೆ ಸೌಲಭ್ಯ ರೂಪಿಸುವುದರಿಂದ, ಹೆಚ್ಚಿನ ಆದಾಯಗಳಿಸುವುದರೊಂದಿಗೆ ಕುಟುಂಬ ಸದ್ಯಸ್ಯರನ್ನೂ ತೊಡಗಿಸಿಕೊಂಡು ಉದ್ಯೋಗಸ್ಥರನ್ನಾಗಿಸಬಹುದು.

ರೈತ ಮಾರುಕಟ್ಟೆ

ರೈತ ಮಾರುಕಟ್ಟೆ ಸಹಕಾರಿ ಸಂಸ್ಥೆಗಳು, ರೈತ ಉತ್ಪಾದಕರ ಸಂಸ್ಥೆ ಅಥವಾ ಪುರಸಭೆಯ ಮುಖಾಂತರ ರೈತರು ಅಥವಾ ಮಾರಾಟಗಾರರು ಒಪ್ಪಿದ ಮಾರ್ಗಸೂಚಿ, ನಿಯಮ ಮತ್ತು ಕಾಯ್ದೆಗಳಡಿಯಲ್ಲಿ ಕಾರ್ಯನಿರ್ವಹಿಸುತ್ತವೆ. ಈ ಸೌಲಭ್ಯವು ಪ್ರತ್ಯೇಕ ಮಳಿಗೆಗಳನ್ನೊಳಗೊಂಡ, ವಿಶಾಲವಾದ ಸ್ಥಿರ ಮಾರುಕಟ್ಟೆಯಿಂದ ಹಿಡಿದು ರಸ್ತೆಬದಿಯ ಗಾಡಿ ವ್ಯಾಪಾರದವರೆಗೂ ವ್ಯಾಪಿಸಿದೆ. ಅಗತ್ಯ ಉತ್ಪನ್ನಗಳನ್ನು ಕ್ರೋಢೀಕರಿಸಿ ಒಂದೆಡೆ ಮಾರುವುದರಿಂದ ಗ್ರಾಹಕರನ್ನು ಸೆಳೆಯುವುದರೊಟ್ಟಿಗೆ, ಮಧ್ಯವರ್ತಿಗಳ ಹಸ್ತಕ್ಷೇಪ ತಗ್ಗಿಸಿ ಹೆಚ್ಚಿನ ಬೆಲೆ ಸಿಗುತ್ತದೆ.

ಮಾರುಕಟ್ಟೆ

ವಿದ್ಯಾವಂತ ಯುವಜನಾಂಗ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವಲ್ಲಿ ಮುಂದಿದ್ದಾರೆ.  ಇತ್ತೀಚೆಗೆ ಇ- ಮಾರ್ಕೆಟಿಂಗ್ ಅಥವಾ ಆನ್ಲೈನ್ ಮಾರ್ಕೆಟಿಂಗ್ ಹೆಚ್ಚು ಚಾಲ್ತಿಗೆ ಬರುತ್ತಿದೆ. ಕೃಷಿ ಕ್ಷೇತ್ರದಲ್ಲೂ ಈ ವ್ಯವಸ್ಥೆ ಅಳವಡಿಕೆಯಾಗುತ್ತಿದೆ. ಯುವ ಕೃಷಿಕರು ಸಾಫ್ಟ್ ವೇರ್ ಗಳನ್ನು ಅಭಿವೃದ್ಧಿಪಡಿಸಿ ಇಲ್ಲವೇ ಇತರ ವೆಬ್ಸೈಟ್ ಗಳ ಸಹಾಯದಿಂದ ತಾವು ಬೆಳೆದ ಪದಾರ್ಥಗಳನ್ನು ಹೊಲದಲ್ಲೇ ಸಂಸ್ಕರಿಸಿ, ಪ್ಯಾಕಿಂಗ್ ಮಾಡಿ ಗ್ರಾಹಕರ ಮನೆಬಾಗಿಲಿಗೆ ತಲುಪಿಸುವ ವ್ಯವಸ್ಥೆ ಮಾಡುವುದರಿಂದ ಲಾಭಗಳಿಸುವುದರೊಂದಿಗೆ ನಿರುದ್ಯೋಗಿಗಳಿಗೆ ಉದ್ಯೋಗವನ್ನೂ ಸೃಷ್ಟಿಸಬಹುದು. ಅತ್ಯಂತ ಅಗತ್ಯವಿರುವ, ದಿನಬಳಕೆಯ ಹೂವು, ಹಣ್ಣು, ತರಕಾರಿ, ದಿನಸಿ ಪದಾರ್ಥಗಳಿಗೆ ಈ ವ್ಯವಸ್ಥೆ ಉತ್ತಮವಾಗಬಲ್ಲದು.

ರೆಸ್ಟೋರೆಂಟ್, ಹೋಟೆಲ್ ಉದ್ಯಮ, ಶಾಲೆ ಹಾಗೂ ಇನ್ನಿತರ ಸಂಸ್ಥೆಗಳಿಗೆ ನೇರವಾಗಿ ತರಕಾರಿ, ಇನ್ನಿತರ ಉತ್ಪನ್ನಗಳನ್ನು ಮಾರುವುದರಿಂದ ಮಧ್ಯವರ್ತಿಗಳ ಭಾಗವಹಿಸುವಿಕೆಯನ್ನು ತಡೆದು, ಸಗಟು ವ್ಯಾಪಾರಿತನವನ್ನೂ ನಿರ್ವಹಿಸಬಹುದು. ಆದರೆ ಇದಕ್ಕೆ ಕಾರ್ಯಕ್ಷಮತೆಯುಳ್ಳ ಜನರ ಅವಶ್ಯಕತೆ ಇರುತ್ತದೆ.

ಬೇರೆ ರಾಜ್ಯಗಳಿಗೆ ಹೋಲಿಸಿದರೆ, ಕರ್ನಾಟಕ ಇ-ಮಾರುಕಟ್ಟೆ ಅಳವಡಿಸಿಕೊಳ್ಳುವಲ್ಲಿ ಮುಂಚೂಣಿಯಲ್ಲಿದೆ. ಕರ್ನಾಟಕದ ಮಾದರಿಯನ್ನು ಈಗ ಕೇಂದ್ರ ಸರಕಾರ ರಾಷ್ಟ್ರೀಯ ಮಟ್ಟದಲ್ಲಿ ಅಳವಡಿಸಲು ಮುಂದಾಗುತ್ತಿದೆ.

Capture(ವೆಬ್‍ಸೈಟ್ : ಕೃಷಿ ಮಾರಾಟ ವಾಹಿನಿ)

ಒಂದು ರೈತ ಕುಟುಂಬದ ಹೆಣ್ಣುಮಗಳಾಗಿ ನಾನು ಕಂಡಂತೆ ಸರ್ಕಾರದ ಕೃಷಿ ಯೋಜನೆಗಳು ಕೇವಲ ಕಡತಗಳಲ್ಲಿ ಮುದ್ರಿತಗೊಂಡು ಮುಚ್ಚಿಡುವಂತಾಗಿವೆ. ಬೆಳೆವಿಮೆಯಂತಹ ಯೋಜನೆಗಳಿಂದ  ವಿಮಾ ಕಂಪನಿಗಳು ಬೊಕ್ಕಸ ತುಂಬಿಸಿಕೊಳ್ಳುತ್ತವೆಯಷ್ಟೇ ಎಂಬುದು ರೈತರ ಅಭಿಪ್ರಾಯ ಹಾಗೂ ಎಷ್ಟೋ ಅಗತ್ಯವಿರುವ ಯೋಜನೆಗಳು, ಕಾರ್ಯನೀತಿಗಳು ರೈತರನ್ನು ತಲುಪುತ್ತಿಲ್ಲ, ಸಕ್ರಿಯವಾಗಿಲ್ಲ ಎಂಬುದು ವಿಷಾದನೀಯ.

ಬೆಳೆಗೆ ಸೂಕ್ತ ಬೆಲೆ ದೊರೆಯಬೇಕು, ಅಧಿಕ ಉತ್ಪಾದನೆಯಿಂದ ಠೇವಣಿ ಕಳೆದುಕೊಳ್ಳುವ ಸ್ಥಿತಿಯುಂಟಾಗಬಾರದೆಂದರೆ, ಪ್ರತಿಯೊಂದು ಬೆಳೆಗೂ ಬೆಂಬಲ ಬೆಲೆ ನಿಗದಿಯಾಗಬೇಕು. ಮಾರುಕಟ್ಟೆ ವ್ಯವಸ್ಥೆಯನ್ನು ಸುಧಾರಿಸುವುದು ಕೇವಲ ಪರಿಕಲ್ಪನೆಗಳಾಗದೆ, ಕಾರ್ಯರೂಪ ಪಡೆಯಬೇಕಾಗಿದೆ. ದಲ್ಲಾಳಿಗಳ ಹಾವಳಿ ನಿಯತ್ರಣಗೊಂಡರೆ ಪೂರ್ಣಪ್ರಮಾಣದ ಹಣ ಬೆಳೆಗಾರರ ಕೈಸೇರುವುದರಲ್ಲಿ ಸಂಶಯವಿಲ್ಲ ಎಂಬುದು ನನ್ನ ಸ್ವಗತ.

ಮಂಗಳಗ್ರಹದಲ್ಲಿ ಒಂದು ಮನೆ

(ಇಗೋ ವಿಜ್ಞಾನ – 2020 ಪೈಪೋಟಿಯಲ್ಲಿ ವಿಶೇಷ ಬಹುಮಾನ ಪಡೆದ ಬರಹ)

ಎಮ್. ಎಸ್. ಎಸ್. ಮೂರ್ತಿ

ಭೂಮಿಯ ಮೇಲಿರುವಂತೆ ಇತರ ಗ್ರಹಗಳಲ್ಲಿ ಜೀವ ಸಂಪತ್ತು ಇದೆಯೆ?  ಅನಾದಿಕಾಲದಿಂದಲೂ ಈ ಪ್ರಶ್ನೆ ಮನುಷ್ಯನ ಕುತೂಹಲವನ್ನು ಕೆರಳಿಸುತ್ತಾ ಬಂದಿದೆ. ಆದರೆ, ಇದುವರೆಗೆ ತಿಳಿದಿರುವಂತೆ, ಜೀವ ಸಂಪತ್ತು ಸಾಧ್ಯವಾಗಿರುವುದು ಭೂಮಿಯ ಮೇಲೆ ಮಾತ್ರ. ಅದಕ್ಕೆ ಅನೇಕ ಕಾರಣಗಳು ಇವೆ. ಭೂಮಿಯ ಮೇಲಿನ ತಾಪಮಾನ ಸರಾಸರಿ 15°C ಇರುವುದರಿಂದಾಗಿ, ನೀರು ಜಲರೂಪದಲ್ಲಿ ಲಭ್ಯವಿದ್ದು ಜೀವ ಸಂಪತ್ತು ವೃದ್ಧಿಯಾಗಲು ಪೂರಕವಾಗಿದೆ. ಜೀವಿಗಳು ಉಸಿರಾಡಲು ಅನುಕೂಲವಾಗುವಂತೆ ಭೂಮಿಯ ಗುರುತ್ವ ವಾತಾವರಣವನ್ನು ಹಿಡಿದಿದೆ. ಭೂಮಿಯ ಕಾಂತ ಕ್ಷೇತ್ರ ಸೂರ್ಯನಿಂದ ನಿರಂತರವಾಗಿ ಹೊಮ್ಮುವ ಸೌರಮಾರುತದ ವಿಕಿರಣ ಕಣಗಳನ್ನು ತಡೆಗಟ್ಟಿ, ಅದರ ವಾತಾವರಣ ಹಾಗೂ ಜೀವಿಗಳನ್ನು ರಕ್ಷಿಸುತ್ತದೆ. ಈ ಎಲ್ಲ ಕಾರಣಗಳಿಂದ ಭೂಮಿ ವಾಸಯೋಗ್ಯ ಎಂದು ಪರಿಗಣಿಸಲಾಗಿದೆ.

ಸುಮಾರು 200,000 ವರ್ಷಗಳ ಹಿಂದೆ ಆಧುನಿಕ ಮಾನವ ಈ ಭೂಮಿಯ ಮೇಲೆ ಮೈದಳೆದನೆಂಬುದು ತಜ್ಞರ ಲೆಕ್ಕಾಚಾರ. ಆದರೆ, ಈ ದೀರ್ಘಾವಧಿಯಲ್ಲಿ ಮನುಷ್ಯ ತನ್ನ ಪರಿಸರವನ್ನೇ ಬದಲಾಯಿಸಿಬಿಟ್ಟಿದ್ದಾನೆ. ಏರುತ್ತಿರುವ ಜನಸಂಖ್ಯೆ, ಅನಿಯಂತ್ರಿತ ನಗರೀಕರಣ ಇವುಗಳಿಂದಾಗಿ ನೈಸರ್ಗಿಕ ಸಂಪನ್ಮೂಲಗಳು ಬರಿದಾಗುವುದಲ್ಲದೆ, ಹವಾಮಾನದಲ್ಲಿಯೂ ತೀವ್ರ ಏರುಪೇರುಗಳಾಗಿ ಜೀವಿಗಳ ಅಸ್ತಿತ್ವಕ್ಕೇ ಮಾರಕವಾಗುವ ಸನ್ನಿವೇಶ ಉಂಟಾಗಿದೆ. ಇವುಗಳನ್ನೆಲ್ಲಾ ತಕ್ಷಣಾ ತಡೆಗಟ್ಟದಿದ್ದರೆ, ಮುಂದಿನ ಕೆಲವು ಶತಮಾನಗಳಲ್ಲಿ ಭೂಮಿಯ ಮೇಲೆನ ಜೀವರಾಶಿಗಳು ಸರ್ವನಾಶವಾಗಬಹುದೆಂದು ತಜ್ಞರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಮಾನವ ಚಟುವಟಿಕೆಗಳು ಮಾತ್ರವೇ ಅಲ್ಲದೆ ನಿಸರ್ಗದಲ್ಲಿ ಸಂಭವಿಸುವ ಹಲವು ಘಟನೆಗಳೂ ಭೂಮಿಯ ಮೇಲಿನ ಜೀವಿಗಳ ಅಸ್ತಿತ್ವಕ್ಕೆ ಮಾರಕವಾಗಬಹುದು. ಖಗೋಳ ವಿಜ್ಞಾನಿಗಳ ಪ್ರಕಾರ ಸುಮಾರು 5 ಬಿಲಿಯನ್ ವರ್ಷಗಳ ಹಿಂದೆ ಸೌರಮಂಡಲ ಮೈದಳೆಯಿತು. ಈ ಸೌರಮಂಡಲದ ಅಧಿಪತಿಯಾದ ಸೂರ್ಯ ಇನ್ನೊಂದು 4.5 ಬಿಲಿಯನ್ ವರ್ಷಗಳನಂತರ ಅವಸಾನ ಸ್ಥಿತಿಯನ್ನು ತಲುಪಿ, ಕೆಂಪುದೈತ್ಯವಾಗಿ (Red Giant) ಪರಿವರ್ತನೆಯಾಗುತ್ತದೆ. ಆಗ ಅದರ ವ್ಯಾಸ ಸುಮಾರು 250 ಪಟ್ಟು ಹಿಗ್ಗಿ, ಭೂಮಿಯನ್ನೂ ಆವರಿಸಿಕೊಳ್ಳುವುದರಿಂದ, ಇಲ್ಲಿ ಇರಬಹುದಾದ ಜೀವಿಗಳೆಲ್ಲಾ ನಾಶವಾಗುತ್ತವೆ. ಇದು ಶತಸ್ಸಿದ್ಧ. ಅದಕ್ಕೆ ಮೊದಲೇ ಇನ್ನೂ ಕೆಲವು ವಿಪತ್ತುಗಳು ಸಂಭವಿಸಬಹುದು. ಅತಿ ಪ್ರಬಲವಾದ ಒಂದು ಜ್ವಾಲಾಮುಖಿ ಭೂಗರ್ಭದಲ್ಲಿ ಸಿಡಿಯಬಹುದು; ಅಥವಾ ಕ್ಷುದ್ರಗ್ರಹವೊಂದು ಭೂಮಿಗೆ ಅಪ್ಪಳಿಸಿ, ಸರ್ವನಾಶಗೊಳಿಸಬಹುದು. ಭೂಮಿಯ ಇತಿಹಾಸದಲ್ಲಿಯೇ ಇದಕ್ಕೆ ಸಾಕ್ಷಿ ಇದೆ. ಸುಮಾರು 160 ಮಿಲಿಯನ್ ವರ್ಷಗಳ ಹಿಂದೆ, ಅಂದರೆ, ಭೂಮಿಯಮೇಲೆ ಮಾನವ ಪಾದಾರ್ಪಣ ಮಾಡುವ ಮೊದಲೇ, ದೈತ್ಯಾಕಾರದ ಡೈನೊಸಾರ್ ಗಳು  ಇಲ್ಲಿ ಸಾರ್ವಭೌಮತ್ವ ಸ್ಥಾಪಿಸಿದ್ದವು. ಆದರೆ, ಈಗ್ಗೆ ಸುಮಾರು 65 ಮಿಲಿಯನ್ ವರ್ಷಗಳ ಹಿಂದೆ ಬೃಹತ್ ಗಾತ್ರದ ಒಂದು ಕ್ಷುದ್ರಗ್ರಹ ಭೂಮಿಗೆ ಅಪ್ಪಳಿಸಿದುದರಿಂದಾಗಿ, ಅವೆಲ್ಲ ಹಠಾತ್ ಕಣ್ಮರೆಯಾದವು.  ಮಾನವ ಸಂತತಿ ಮುಂದುವರಿದಿದ್ದೇ ಆದರೆ, ಅಂತಹ ದುರ್ಘಟನೆಗಳಿಂದ ಪಾರಾಗಬೇಕಾದರೆ, ಅದಕ್ಕೆ ಮೊದಲೇ ಭೂಮಿಯ ಜೊತೆಗೆ ಮತ್ತೊಂದು ಗ್ರಹದಲ್ಲಿ ವಾಸ್ತವ್ಯ ಹೂಡುವುದು ಅನಿವಾರ್ಯ. ಅದರ ಬಗ್ಗೆ ವಿಜ್ಞಾನಿಗಳು ಈಗಾಗಲೇ ಚಿಂತನೆ ನಡೆಸುತ್ತಿದ್ದಾರೆ. ಅವರ ಪ್ರಕಾರ, ಸಧ್ಯಕ್ಕೆ ಮಾನವನ ಮುಂದಿನ ನೆಲೆ ಸೌರಮಂಡಲದಲ್ಲೇ ಇರುವ ನಮ್ಮ ನೆರಯ ಮಂಗಳಗ್ರಹ.

ಮಂಗಳಗ್ರಹದಲ್ಲಿ ಏನಿದೆ, ಏನಿಲ್ಲ?

1ಮಂಗಳಗ್ರಹವು, ಭೂಮಿಯಿಂದ ಆಚೆಗೆ, ಸೂರ್ಯನಿಂದ ಸರಾಸರಿ 228 ಮಿಲಿಯನ್ ಕಿಮೀ ದೂರದಲ್ಲಿದೆ. ಮಂಗಳಗ್ರಹ ಮೈದಳೆದಾಗ, ಅದು ಬಹುಮಟ್ಟಿಗೆ ಭೂಮಿಯಂತೆಯೇ ಇತ್ತು. ಅಲ್ಲಿನ ಒಂದು ದಿನದ ಅವಧಿ, ಭೂಮಿಯ ದಿನಕ್ಕಿಂತ ಸುಮಾರು 39 ನಿಮಿಶಗಳು ಅಧಿಕ. ವರ್ಷ ಮಾತ್ರ 687 ಭೂದಿನಗಳು. ಹಾಗೆಯೇ, ಋತುಮಾನಗಳು ಕೂಡ ದೀರ್ಘ. ಆಗ ಅಲ್ಲಿ  ದಟ್ಟ ವಾತಾವರಣ, ಹರಿವ ನೀರು, ಪ್ರಬಲ ಕಾಂತಕ್ಷೇತ್ರ ಎಲ್ಲ ಇದ್ದವು. ಆದರೆ, ಕೆಲವು ಭೂವೈಜ್ಞಾನಿಕ ಕಾರಣಗಳಿಂದಂದಾಗಿ, ಸುಮಾರು 3.2 ಬಿಲಿಯನ್ ವರ್ಷಗಳ ಹಿಂದೆ ಅದರ ಕಾಂತಕ್ಷೇತ್ರ ಬಹುಮಟ್ಟಿಗೆ ನಶಿಸಿ ಹೊಯಿತು. ಅದರಿಂದಾಗಿ, ಸೌರಮಾರುತದ ವಿಕಿರಣಗಳು ಯಾವ ತಡೆಯೂ ಇಲ್ಲದೆ ಮಂಗಳದ ಮಾಯುಮಂಡಲವನ್ನು ದಾಳಿಮಾಡಿ, ಅಲ್ಲಿನ ಅನಿಲ ಅಣುಗಳೊಂದಿಗೆ ಪ್ರತಿಕ್ರಿಯಿಸಿ ಅಯನೀಕರಣಗೊಳಿಸಲಾರಂಭಿಸಿದವು. ಅದರಿಂದ ಉಂಟಾದ ವಿದ್ಯುತ್ ಕ್ಷೇತ್ರದಲ್ಲಿ ಅನಿಲ ಅಯಾನುಗಳು ವೇಗವರ್ಧಕಗೊಂಡು, ಮಂಗಳದ ವಾಯುಮಂಡಲದ ಮೇಲಿನ ಸ್ತರಗಳಿಂದ ಬಾಹ್ಯಾಕಾಶಕ್ಕೆ ಸರಿದುಹೋದವು. ಹಾಗಾಗಿ, ಇಂದು ಮಂಗಳಗ್ರಹವನ್ನು ಆವರಿಸಿಕೊಂಡು ಒಂದು ತೆಳುವಾದ ವಾಯುಮಂಡಲ ಮಾತ್ರವಿದೆ. ಮಂಗಳದ ಮೇಲ್ಮೈನಲ್ಲಿ ಈ ವಾಯುಮಂಡಲದ ಒತ್ತಡ ಭೂಮಿಯ ವಾಯುಮಂಡಲದ ಒತ್ತಡದ ನೂರನೇ ಒಂದು ಭಾಗ ಮಾತ್ರ. ಅಲ್ಲದೇ ಅದು ಶೇಕಡ 95 ಭಾಗ ಕಾರ್ಬನ್  ಡೈಆಕ್ಸೈಡ್ ನಿಂದ ಕೂಡಿದೆ. ಆಮ್ಲಜನಕ ಶೇಕಡ 0.2 ಭಾಗ ಮಾತ್ರ. ಆದ್ದರಿಂದ, ಅಲ್ಲಿ  ಉಸಿರಾಡಲು ಸಾಧ್ಯವಿಲ್ಲ.

2
ಮಂಗಳದ ವ್ಯಾಸ, ಭೂಮಿಯ ವ್ಯಾಸದ ಅರ್ಧದಷ್ಟು. ಹಾಗಾಗಿ ಅದರ ಗುರುತ್ವ ಭೂಮಿಯ ಗರುತ್ವದ ಶೇಕಡ 40ರಷ್ಟು ಮಾತ್ರ. ಅದಲ್ಲದೆ, ಮಂಗಳ ಸೂರ್ಯನಿಂದ, ಭೂಮಿಗಿಂತ ಸರಾಸರಿ 60 ಮಿಲಿಯನ್ ಕಿಲೊಮೀಟರ್ ಅಧಿಕ ದೂರದಲ್ಲಿದೆ. ಹಾಗಾಗಿ, ಅಲ್ಲಿ ಬೀಳುವ ಸೂರ್ಯನ ಬೆಳಕು, ಭೂಮಿಯ ಮೇಲೆ ಬೀಳುವ ಬೆಳಕಿನ ಅರ್ಧದಷ್ಟು. ಸರಾಸರಿ ತಾಪಮಾನ ಮೈನಸ್ 63°C ಇಂದು ಮಂಗಳ ಒಂದು ಶೀತ, ಬಂಜರು ಗ್ರಹವಾಗಿದೆ.

ಮಂಗಳದಲ್ಲಿ ಬದುಕುವುದು ಹೇಗೆ?

ಹಾಗಾಗಿ, ಮಂಗಳಗ್ರಕ್ಕೆ ವಲಸೆ ಹೋಗುವುದೆಂದರೆ, ಬೇರೊಂದು ಊರು ಅಥವಾ ದೇಶಕ್ಕೆ ಹೋಗಿ ನೆಲಸಿದಷ್ಟು ಸುಲಭವಲ್ಲ. ಮಾನವ ಹಾಗೂ ಇತರ ಜೀವಿಗಳು ಲಕ್ಷಾಂತರ ವರ್ಷಗಳಿಂದ ವಿಕಸನಗೊಂಡು ಭೂಮಿಯಮೇಲಿನ ಪರಿಸರಕ್ಕೆ ಹೊಂದಿಕೊಂಡಿವೆ. ಮಂಗಳಗ್ರಹದಲ್ಲಿ ಇಲ್ಲಿನಂತೆ ಮುಕ್ತವಾಗಿ ಓಡಾಡಿಕೊಂಡಿರಲು ಸಾಧ್ಯವಿಲ್ಲ. ಯಾವಾಗಲೂ ಆಮ್ಲಜನಕದ ಸಿಲೆಂಡರ್ ಜೊತೆಯಲ್ಲಿ ಇರಲೇಬೇಕು. ವಾತಾವರಣದ ಒತ್ತಡ ತೀರ ಕಡಿಮೆಯಾದ್ದರಿಂದ ದೇಹದ ರಕ್ತನಾಳಗಳು ಉಬ್ಬಿ, ಒಡೆದು ರಕ್ತಸ್ರಾವವಾಗುತ್ತದೆ. ಹಾಗಾಗಿ, ಯಾವಾಗಲೂ ಪ್ರೆಷರ್ ಸೂಟ್ ಧರಿಸಿರಬೇಕು. ಕಾಂತಕ್ಷೇತ್ರ ಇಲ್ಲದಿರುವುದರಿಂದ ವಿಕಿರಣ ತೀವ್ರತೆ ಅಧಿಕವಾಗಿರುತ್ತದೆ. ಭೂಮಿಯಮೇಲೆ ಒಂದು ವರ್ಷ ಕಾಲದಲ್ಲಿ ಉಂಟಾಗುವ ವಿಕಿರಣ ತಾಡನೆ, ಮಂಗಳದಲ್ಲಿ ಒಂದೇ ದಿನದಲ್ಲಿ ಸಂಭವಿಸುತ್ತದೆ. ಅತಿಯಾದ ವಿಕಿರಣ ತಾಡನೆಯಿಂದಾಗಿ, ಕಣ್ಣಿನ ಪೊರೆ, ಕ್ಯಾನ್ಸರ್, ತಳಿವಿಕೃತಿ ಮುಂತಾದ ಸಮಸ್ಯೆಗಳು ತೋರಿಬರುತ್ತವೆ. ವಿಕಿರಣ ದಾಳಿಯಿಂದ ಪಾರಾಗಲು ನೆಲಮಾಳಿಗೆಗಳಲ್ಲಿ ವಾಸಮಾಡಬೇಕಾಗುತ್ತದೆ. ಹೀಗೆ ನಿಸರ್ಗಕ್ಕೆ ತೆರೆದುಕೊಳ್ಳದೆ, ಮುಚ್ಚಿದ ಪರಿಸರದಲ್ಲಿ ದೀರ್ಘಕಾಲ ವಾಸಿಸುವುದರಿಂದ ಹಲವು ಮಾನಸಿಕ ತೊಂದರೆಗಳು ಉಂಟಾಗಬಹುದು.

ಮಂಗಳಗ್ರಹದ ಕಡಿಮೆ ಗುರುತ್ವವೂ ಅನೇಕ ಸಮಸ್ಯೆಗಳಿಗೆ ಕಾರಣವಾಗಬಹುದು.ಇಂಟರ್ನ್ಯಾಶನಲ್ ಸ್ಪೇಸ್ ಸ್ಟೇಶನ್ (International Space Station – ISS) ಗಗನ ಯಾತ್ರಿಗಳ ಅನುಭವದ ಪ್ರಕಾರ, ಮಿನಿ ಗುರುತ್ವದಿಂದಾಗಿ ದೇಹದ ಮೂಳೆ, ಮಾಂಸ ಕ್ಷೀಣಿಸಿ ಮೂಳೆ ಮುರಿತ ಉಂಟಾಗಬಹುದು. ಅಲ್ಲದೇ, ಭೂಮಿಯ ಮೇಲಿರುವಾಗ, ಗುರುತ್ವಕ್ಕೆ ವಿರುದ್ಧ ದಿಕ್ಕಿನಲ್ಲಿ ರಕ್ತ ಸಂಚಲನೆಯಾಗಬೇಕಾದುದರಿಂದ, ನಮ್ಮ ಹೃದಯ ಹೆಚ್ಚು ದಕ್ಷತೆಯಿಂದ ಪಂಪ್ ಮಾಡುತ್ತಿರುತ್ತದೆ. ಗುರುತ್ವ ಕಡಿಮೆ ಇದ್ದಲ್ಲಿ, ಹೃದಯ ದುರ್ಬಲಗೊಂಡು, ಹೃದಯ ಸಂಬಂಧಿ ರೋಗಗಳಿಗೆ ಎಡೆಯಾಗುತ್ತದೆ.

ಹಾಗಾದರೆ, ಮನುಷ್ಯನಿಗೆ ಮಂಗಳಗ್ರಹದಲ್ಲಿ ವಾಸಮಾಡಲು ಸಾಧ್ಯವಿಲ್ಲವೆ? ಸಾಧ್ಯವಿದೆ ಎನ್ನುತ್ತಾರೆ ವಿಜ್ಞಾನಿಗಳು. ಅದಕ್ಕಾಗಿ ಕೆಲವು ಪರಿಹಾರಗಳನ್ನು ಸೂಚಿಸಿದ್ದಾರೆ.

ಎರಡನೇ ಭೂಮಿ:

ಈ ಸಮಸ್ಯೆಗಳಿಗೆ ಒಂದು ದೀರ್ಘಕಾಲದ ಪರಿಹಾರವೆಂದರೆ, ಮಂಗಳಗ್ರಹವನ್ನು ಎರಡನೇ ಭೂಮಿಯಾಗಿ ಪರಿವರ್ತಿಸುವುದು. ಅದಕ್ಕೆ ಟೆರಾಪಾರ್ಮಿಂಗ್ (Terraforming) ಎನ್ನುತ್ತಾರೆ. ಮೊದಲನೆಯದಾಗಿ, ಅಲ್ಲಿ ಒಂದು ದಟ್ಟ ವಾತಾವರಣ ಸೃಷ್ಟಿಸಬೇಕು. ಅಲ್ಲಿನ ಬಂಡೆಗಳು, ಮಣ್ಣು, ಉತ್ತರ ಮತ್ತು ದಕ್ಷಿಣ ಧ್ರುವ ಇವುಗಳಲ್ಲಿ  ಹೇರಳವಾಗಿ ಕಾರ್ಬನ್ ಡೈಆಕ್ಸೈಡ್ ಘನೀಭೂತವಾಗಿದೆ. ಅದನ್ನು ಬಿಡುಗಡೆ ಮಾಡುವುದರಿಂದ ವಾತಾವರಣದ ದಟ್ಟಣೆಯನ್ನು ಹೆಚ್ಚಿಸಬಹುದು. ಆದರೆ,  ಘನೀಭೂತವಾದ ಆಷ್ಟೊಂದು ಕಾರ್ಬನ್ ಡೈಆಕ್ಸೈಡ್ ನ್ನು ಕರಗಿಸುವುದು ಹೇಗೆ? ಒಂದು ಬೃಹದಾಕಾರದ ಸೌರಪಟವನ್ನು (Solar Sail) ಹೊತ್ತ ಉಪಗ್ರಹವನ್ನು ಮಂಗಳದ ಸುತ್ತ ಒಂದು ಕಕ್ಷೆಯಲ್ಲಿ ಸ್ಥಾಪಿಸುವುದರಿಂದ ಅದು ಸಾಧ್ಯ ಎನ್ನುತ್ತಾರೆ ವಿಜ್ಞಾನಿಗಳು. ಕನ್ನಡಿಯು ಬೆಳಕನ್ನು ಪ್ರತಿಫಲಿಸುವಂತೆ, ಸೌರಪಟವು ಸೂರ್ಯನ ಬೆಳಕನ್ನು ಮಂಗಳದ ಧ್ರುವಪ್ರದೇಶದಮೇಲೆ ಸಾಂದ್ರೀಕರಿಸುವಂತೆ ಮಾಡಿದರೆ, ಘನೀಭೂತವಾದ ಕಾರ್ಬನ್ ಡೈಆಕ್ಸೈಡ್ ನಿಧಾನವಾಗಿ ಕರಗಿ, ವಾತಾವರಣವನ್ನು ಸೇರುತ್ತದೆ. ಕಾರ್ಬನ್ ಡೈಆಕ್ಸೈಡ್ ಹಸಿರುಮನೆ ಅನಿಲವೂ ಆದ್ದರಿಂದ, ವಾತಾವರಣದ ಒತ್ತಡ ಹೆಚ್ಚಿದಂತೆ, ಮಂಗಳಗ್ರಹದ ತಾಪಮಾನವೂ ಏರುತ್ತದೆ. ಆಗ ಹೆಪ್ಪುಗಟ್ಟಿದ ನೀರು ಕರಗಿ ಹರಿಯಲಾರಂಭಿಸುತ್ತದೆ. ಹೀಗೆ, ವಾತಾವರಣ, ತಾಪಮಾನ, ಹರಿಯುವ ನೀರೂ ಎಲ್ಲವೂ ಲಭ್ಯವಾಗುತ್ತವೆ. ಹರಿಯುವ ನೀರು ಬಾಷ್ಪೀಕರಣಗೊಂಡು, ವಾಯುಮಂಡಲ ಸೇರಿ, ಮೋಡವಾಗಿ, ಮಳೆ ಸುರಿಯುವುದರಿಂದ ಜಲಚಕ್ರ ಸ್ಥಾಪಿತವಾಗುತ್ತದೆ. ಆಗ ಕೃಷಿ ಆರಂಭಿಸಿ, ಅಲ್ಲಿಯೇ ಆಹಾರವನ್ನೂ ಬೆಳೆದುಕೊಳ್ಳಬಹುದು. ಅಲ್ಲದೆ, ಗಿಡಮರಗಳನ್ನು ಬೆಳೆಸಿದಾಗ, ಅವು ವಾತಾವರಣಕ್ಕೆ ಮತ್ತಷ್ಟು ಆಮ್ಲಜನಕವನ್ನು ಒದಗಿಸುತ್ತವೆ.

ಮಂಗಳದ ಮಣ್ಣಿನಲ್ಲಿ, ಕಬ್ಬಿಣದ ಅಂಶ ಹೆಚ್ಚಿನ ಸಾಂದ್ರತೆಯಲ್ಲಿದೆ. ಅದೇ ಮಾದರಿಯ ಮಣ್ಣನ್ನು ಪ್ರಯೋಗಾಲಯದಲ್ಲಿ ಸೃಷ್ಟಿಸಿ, ಅದಕ್ಕೆ ಸೂಕ್ತವಾದ ಪಾಲಿಮರ್ ನ್ನು ಬೆರಸಿ, ಒತ್ತಡಕ್ಕೆ ಒಳಪಡಿಸಿದರೆ, ಗಟ್ಟಿಯಾದ ಇಟ್ಟಿಗೆಗಳನ್ನು ತಯಾರಿಸಬಹುದೆಂದು ವಿಜ್ಞಾನಿಗಳು ಕಂಡುಕೊಂಡಿದ್ದಾರೆ. ಅದರಿಂದ ಸುರಕ್ಷಿತವಾದ ವಸತಿಗಳನ್ನು ಮಂಗಳದ ಮಣ್ಣಿನಿಂದಲೇ ನಿರ್ಮಾಣ ಮಾಡಬಹುದು.

3
ಆದರೆ, ಮಂಗಳದಲ್ಲಿ ಹೀಗೆ ಸೃಷ್ಟಿಸಿದ ವಾಯುಮಂಡಲ, ಮತ್ತೆ ಚದುರಿಹೋಗದೆ, ಸ್ಥಿರವಾಗಿರಬೇಕಾದರೆ, ಅದನ್ನು ಸೌರಮಾರುತದ ವಿಕಿರಣಗಳಿಂದ ರಕ್ಷಿಸಲು ಒಂದು ಪ್ರಬಲ ಕಾಂತಕ್ಷೇತ್ರ ಬೇಕು. ಅದಕ್ಕಾಗಿ ನಾಸಾ ವಿಜ್ಞಾನಿಗಳು ಒಂದು ಅದ್ಭುತ ಯೋಜನೆಯನ್ನು ರೂಪಿಸಿದ್ದಾರೆ. ಅದರ ಪ್ರಕಾರ ಸೂರ್ಯ ಮತ್ತು ಮಂಗಳದ ನಡುವೆ ಒಂದು ಪ್ರಬಲವಾದ (1 ರಿಂದ 2 ಟೆಸ್ಲ) ಕೃತಕ ಕಾಂತಕ್ಷೇತ್ರವನ್ನು ನಿರ್ಮಿಸಲಾಗುವುದು. ಅದು ಸೌರಮಾರುತವನ್ನು ತಡೆಹಿದಿದು, ಜೀವಿಗಳನ್ನು ವಿಕಿರಣ ತಾಡನೆಯಿಂದ ರಕ್ಷಿಸುತ್ತದೆ.

ಮಂಗಳದಲ್ಲಿ ಒಂದು ಹೊಸ ಮಾನವ ಪ್ರಭೇದ?

ಹೀಗೆ ಮಂಗಳಗ್ರಹವನ್ನು ಎರಡನೇ ಭೂಮಿಯಾಗಿ ಪರಿವರ್ತಿಸಲು ಹಲವಾರು ಯೋಜನೆಗಳಿವೆ. ಆದರೆ, ಅವುಗಳಿಂದ ಭಿನ್ನವಾಗಿ, ವಿಜ್ಞಾನಿಗಳು ಮತ್ತೊಂದು ರೀತಿಯ ಯೋಜನೆಯ ಬಗ್ಗೆಯೂ ಚರ್ಚಿಸುತ್ತಿದ್ದಾರೆ. ಮಂಗಳವನ್ನು ಎರಡನೇ ಭೂಮಿಯಾಗಿ ರೂಪಿಸುವ ಬದಲು, ಮನುಷ್ಯನನ್ನೇ ಮಂಗಳದ ಪರಿಸರಕ್ಕೆ ಹೊಂದಿಕೊಳ್ಳುವಂತೆ ಏಕೆ ಪರಿವರ್ತಿಸಬಾರದು? ಅಂತಹ ಮನುಷ್ಯ ಉಸಿರಾಡಲು ವಾತಾವರಣ ಬೇಕಿಲ್ಲ. ಅಲ್ಲಿನ ಕಡಿಮೆ ವಾಯು ಒತ್ತಡ, ಗುರುತ್ವ, ಅತಿಯಾದ ವಿಕಿರಣದ  ಪರಿಸರದಲ್ಲಿಯೇ ಯಾವ ತೊಂದರೆಯೂ ಇಲ್ಲದೆ ಬದುಕಬಲ್ಲ. ಅದಕ್ಕೆ ಅವಶ್ಯವಾದ ನ್ಯಾನೊ ಮತ್ತು ತಳಿ ತಂತ್ರಜ್ಞಾನ ಈಗಾಗಲೇ ಲಭ್ಯವಿದೆ. ಉದಾಹರಣೆಗೆ, ದೇಹಕ್ಕೆ ಬೇಕಾಗುವ ಆಮ್ಲಜನಕವನ್ನು ಒದಗಿಸುವ ನ್ಯಾನೊಮಷೀನ್ ಗಳನ್ನು ತಯಾರಿಸಬಹುದು. ಮಿನಿಗುರತ್ವದಿಂದ ಉಂಟಾಗುವ ಮೂಳೆ ಮತ್ತು ಮಾಂಸ ಕ್ಷೀಣಿಸುವುದನ್ನು ತಡೆಗಟ್ಟುವಂತಹ ತಳಿ ವಿಕೃತಿಗಳನ್ನು (Gene mutations) ವಿಜ್ಞಾನಿಗಳು ಈಗಾಗಲೇ ಗುರುತಿಸಿದ್ದಾರೆ. “Deinococcus radioduran” ಎಂಬ ಬ್ಯಾಕ್ಟೀರಿಯ ಪ್ರಭೇದ ಇತರ ಪ್ರಭೇದಗಳಿಗಿಂತ ನೂರುಪಟ್ಟು ಹೆಚ್ಚು ವಿಕಿರಣ ತಾಡನೆಯನ್ನು ಸಹಿಸಿಕೊಳ್ಳಬಲ್ಲದು. ಅದಕ್ಕೆ ಕಾರಣವಾದ ವಿಶಿಷ್ಟ ತಳಿಗಳನ್ನೂ ಪತ್ತೆಹಚ್ಚಲಾಗಿದೆ. ಹಾಗಿದ್ದಲ್ಲಿ, ಆ ರೀತಿಯ ತಳಿಗಳನ್ನು ಮನುಷ್ಯನಿಗೆ ವರ್ಗಾಯಿಸಿದರೆ, ಅವನು ಮಂಗಳದ ಪರಿಸರದಲ್ಲಿ ಆರಾಮವಾಗಿ ಬದುಕಬಹುದಲ್ಲವೆ? ಅಲ್ಲದೇ, ಆ ಗುಣಗಳನ್ನು ಮುಂದಿನ ಪೀಳಿಗೆಗಳಿಗೂ ವರ್ಗಾಯಿಸಬಹುದಾದ್ದರಿಂದ, ಮಂಗಳ ಗ್ರಹಕ್ಕಾಗಿಯೇ ಒಂದು ಮಾನವ ಪ್ರಭೇದವನ್ನು ಸೃಷ್ಟಿಸಿದಂತಾಗುತ್ತದೆ!

ಈ ಎಲ್ಲ ಯೋಜನೆಗಳೂ, ಸೈದ್ಧಾಂತಿಕವಾಗಿ ಸಾಧ್ಯವಾದರೂ, ಸಾಕ್ಷಾತ್ಕಾರಗೊಳ್ಳಬೇಕಾದರೆ, ಸಹಸ್ರಾರು ವರ್ಷಗಳೇ ಬೇಕಾಗಬಹುದೆಂದು ತಜ್ಞರ ಅಭಿಪ್ರಾಯ. ಇವೆಲ್ಲದರ ನಡುವೆಯೂ, ಮಾನವನ ಪ್ರಥಮ ಮಂಗಳಯಾನಕ್ಕೆ ಸಿದ್ಧತೆ ನಡೆಯುತ್ತಿದೆ. ಅಮೆರಿಕದ ನಾಸಾ ಸಂಸ್ಥೆಯು ಒಂದು ಶೋಧಕ ತಂಡವನ್ನು 2030ರ ದಶಕದಲ್ಲಿ ಕಳುಹಿಸಲು ತಯಾರಿ ನಡೆಸುತ್ತಿದೆ. ಅನೇಕ ಖಾಸಗಿ ಸಂಸ್ಥೆಗಳೂ ಮಂಗಳದ ವಾಸ್ತವ್ಯದಲ್ಲಿ ಉತ್ಸುಕವಾಗಿವೆ. ಅಮೆರಿಕದ ಸ್ಪೇಸ್‍ಎಕ್ಸ್ (SpaceX) ಕಂಪನಿಯ ಮುಖ್ಯಸ್ಥ ಎಲೋನ್ ಮಸ್ಕ್ (Elon Mask) ಅದಕ್ಕಾಗಿ 100 ಟನ್ ತೂಕ ಹೊರಬಲ್ಲ ಪ್ರಬಲವಾದ ರಾಕೆಟ್ ಹಾಗೂ ಗಗನ ನೌಕೆಗಳನ್ನು ತಯಾರಿಸಿ, ಪರೀಕ್ಷಿಸುತ್ತಿದ್ದಾರೆ. ಅಂತಹ ನೌಕೆಗಳಲ್ಲಿ, 100 ರಿಂದ 200 ಪ್ರಯಾಣಿಕರು ಹಾಗೂ ಅವರ ವಾಸ್ತವ್ಯಕ್ಕೆ ಬೇಕಾಗುವ ಎಲ್ಲ ಸರಕುಗಳನ್ನೂ ಹೊತ್ತ ಸಾವಿರಾರು ಉಡಾವಣೆಗಳನ್ನು ಆಯೋಜಿಸಿ, ಒಂದು ಮಿಲಿಯನ್ ಜನರ ವಸಾಹತುವನ್ನು ಮಂಗಳ ಗ್ರಹದಲ್ಲಿ ನಿರ್ಮಿಸಬೇಕೆಂಬುದು ಅವರ ಗುರಿ. ಮುಂದಿನ 40 ರಿಂದ 100 ವರ್ಷಗಳ ಅವಧಿಯಲ್ಲಿ ಅದನ್ನು ಸಾಧಿಸಬಹುದೆಂದು ಅವರು ಆಶಾದಾಯಕರಾಗಿದ್ದಾರೆ.

4
ಅದೇ ರೀತಿ ಯುನೈಟೆಡ್ ಅರಬ್ ರಿಪಬ್ಲಿಕ್ ಕೂಡ  ಒಂದು ಯೋಜನೆಯನ್ನು ಹಮ್ಮಿಕೊಂಡು, ಅದಕ್ಕಾಗಿ ದುಬೈ ನಗರದಲ್ಲಿ ಮಾದರಿ ಮಾರ್ಸ್ ಸಿಟಿ (Mars City) ನಿರ್ಮಾಣವಾಗುತ್ತಿದೆ. ಅದು 2023ರಲ್ಲಿ ಮುಗಿಯಬಹುದು.

ಹಾಗಾಗಿ, ಮಂಗಳಗ್ರಹದಲ್ಲಿ ವಾಸ್ತವ್ಯ ಹೂಡುವುದು ಹಗಲುಗನಸೇನಲ್ಲ. ಆದರೆ, ಅದರ ಉತ್ಸಾಹಿಗಳು ಬಯಸಿದಷ್ಟು ಬೇಗ ಸಾಧ್ಯವಾಗದೇ ಇರಬಹುದು. ಆದರೆ, ವಿಜ್ಞಾನಿಗಳು ಅಷ್ಟಕ್ಕೇ ತೃಪ್ತರಾಗಿಲ್ಲ. ಮೊದಲೇ ಹೇಳೀದಂತೆ, ಸೂರ್ಯನ ಅವಸಾನದ ವೇಳೆ ಮಂಗಳ ಗ್ರಹ ಕೂಡ ನಾಶವಾಗುವುದು. ಅಂತಹ ಆಪತ್ತು ಸಂಭವಿಸುವ ಮೊದಲೇ, ಮನುಕುಲ ಸೌರಮಂಡಲದಿಂದಲೇ ಹೊರಗೆ, ಬೇರೆ ನಕ್ಷತ್ರಗಳ ಗ್ರಹಗಳಲ್ಲಿ   ವಾಸ್ತವ್ಯ ಹೂಡಬೇಕಾಗುತ್ತದೆ. ಅದಕ್ಕೆ ಪೂರಕವಾಗಿ ಮಾನವನ ಅಂತರ್ ನಕ್ಷತ್ರೀಯ ಯಾನದ ಬಗ್ಗೆ ಈಗಾಗಲೇ ವಿಜ್ಞಾನಿಗಳು ಚಿಂತಿಸುತ್ತಿದ್ದಾರೆ.