ಜೇನುಹುಳವು ಗೂಡನ್ನು ಕಟ್ಟುವ ಬಗೆ

ರತೀಶ ರತ್ನಾಕರ.

1024px-Natural_Beehive_and_Honeycombs

ಗಿಡದ ಟೊಂಗೆಯಲ್ಲೋ, ಮರದ ಪೊಟರೆಯಲ್ಲೋ ಇಲ್ಲವೇ ದೊಡ್ಡ ಕಟ್ಟಡದ ಮಾಳಿಗೆಯಲ್ಲೋ ನಾವು ಜೇನುಗೂಡುಗಳನ್ನು ಕಂಡಿರುತ್ತೇವೆ. ಹೀಗೆ ಸಾವಿರಾರು ಹುಳಗಳು ಸೇರಿ ಗೂಡನ್ನು ಕಟ್ಟಿ, ಸಿಹಿಯನ್ನು ಕೂಡಿಟ್ಟು ಬದುಕನ್ನು ನಡೆಸುವ ಪರಿ ಬೆರಗಿನಿಂದ ಕೂಡಿದೆ. ಇವು ಒಂದೇ ಗೂಡಿನಲ್ಲಿ ಹೆಚ್ಚುಕಾಲ ವಾಸಮಾಡದೇ ತಮ್ಮ ಗೂಡನ್ನು ಆಗಾಗ ಬದಲಿಸುತ್ತಲೇ ಇರುತ್ತವೆ. ಹೊಸ ಜಾಗವೊಂದನ್ನು ಹುಡುಕಿ, ಹೊಸ ಗೂಡೊಂದನ್ನು ಕಟ್ಟಿ ತಮ್ಮ ಬಾಳ್ವೆಯನ್ನು ಮುಂದುವರಿಸುತ್ತವೆ. ಈ ಜೇನುಹುಳಗಳು ಹೊಸ ಗೂಡನ್ನು ಹೇಗೆ ಕಟ್ಟುತ್ತವೆ, ಅದರ ವಿಶೇಷತೆಗಳೇನು ಎಂಬುದರ ಮೇಲೆ ಬೆಳಕು ಚೆಲ್ಲುವ ಪ್ರಯತ್ನವೇ ಈ ಬರಹ.

ಹಳೆಯ ಗೂಡನ್ನು ಬಿಟ್ಟು…
ಜೇನುಹುಳದ ಬಾಳ್ಮೆಸುತ್ತು ಬರಹದಲ್ಲಿ ಓದಿದ ಹಾಗೆ ಒಂದು ಗೂಡಿನಲ್ಲಿ ಹೊಸ ಒಡತಿ ಜೇನು ಹುಟ್ಟಿದರೆ, ಆಗ ಹಳೆಯ ಒಡತಿ ಜೇನುಹುಳವು ಒಂದಷ್ಟು ದುಡಿಮೆಗಾರ ಹುಳಗಳ ಜೊತೆಗೂಡಿ ಹೊಸ ಗೂಡನ್ನು ಕಟ್ಟಲು ಹೊರಡುತ್ತದೆ. ಇದಲ್ಲದೇ, ಈಗಿರುವ ಜೇನುಗೂಡಿಗೆ ಇತರ ಪ್ರಾಣಿಗಳು, ಬಿರುಗಾಳಿ ಇಲ್ಲವೇ ಜೋರಾದ ಮಳೆಯಿಂದಾಗಿ ಏನಾದರು ತೊಂದರೆಯಾದರೆ ಅವು ಇರುವ ಗೂಡನ್ನು ಬಿಡಬೇಕಾಗವುದು. ಹೀಗೆ ಗೂಡನ್ನು ಬಿಟ್ಟು ಹೋಗುವ ಕೆಲದಿನಗಳ ಮುಂಚೆ ಜೇನುಹುಳಗಳು ಕೆಲವು ಸಿದ್ಧತೆಗಳನ್ನು ಮಾಡಿಕೊಳ್ಳುತ್ತವೆ. ಅವನ್ನು ಈ ಕೆಳಗೆ ನೀಡಲಾಗಿದೆ;

1. ಮೊಟ್ಟೆಯನ್ನು ಇಡುತ್ತಿರುವ ಹಳೆಯ ಒಡತಿಯು ಹೆಚ್ಚು ದೂರ ಹಾರುವ ತಾಕತ್ತನ್ನು ಹೊಂದಿರುವುದಿಲ್ಲ, ಅದಕ್ಕಾಗಿ ಗೂಡು ಬಿಡುವ ಕೆಲವು ದಿನಗಳ ಮುಂಚೆ ದುಡಿಮೆಗಾರ ಹುಳಗಳು ಒಡತಿ ಹುಳಕ್ಕೆ ‘ಜೇನುಗಂಜಿ‘(Royal Jelly) ನೀಡುವುದನ್ನು ನಿಲ್ಲಿಸುತ್ತವೆ. ಇದರಿಂದ ಒಡತಿಯು ಮೊಟ್ಟೆ ಇಡುವುದನ್ನು ನಿಲ್ಲಿಸುತ್ತದೆ, ಇದು ಒಡತಿಗೆ ದೂರ ಹಾರಲು ನೆರವಾಗುತ್ತದೆ.
2. ಈಗಿರುವ ಗೂಡಿನ ಹತ್ತಿರದಲ್ಲೇ ಇರುವ ತಕ್ಕುದಾದ ಜಾಗವನ್ನು ‘ಬೇಹುಗಾರ’ ಹುಳಗಳು ಗುರುತಿಸಿರುತ್ತವೆ. ಗೂಡನ್ನು ಬಿಟ್ಟು ಹಾರುವ ಹುಳಗಳು ನೇರವಾಗಿ ಹೊಸ ಗೂಡು ಕಟ್ಟುವ ಜಾಗಕ್ಕೆ ಹೋಗುವುದಿಲ್ಲ, ಬದಲಾಗಿ ಬೇಹುಗಾರ ಹುಳಗಳು ಗುರುತಿಸಿದ ಜಾಗದಲ್ಲಿ ತುಸುಹೊತ್ತು ತಂಗಿರುತ್ತವೆ.

ಒಡತಿಯೊಂದಿಗೆ ಗೂಡನ್ನು ಬಿಡುವಾಗ ಹೊಟ್ಟೆ ತುಂಬಾ ಜೇನನ್ನು ಹೀರಿಕೊಂಡು ಹಾರುತ್ತವೆ. ಹೊಸ ಜಾಗವನ್ನು ತಲುಪುವವರೆಗೆ ತಮ್ಮ ಹಸಿವನ್ನು ನೀಗಿಸಿಕೊಳ್ಳಲು ಇದು ನೆರವಾಗುತ್ತದೆ. ಸುಮಾರು 1000 ದಿಂದ 10,000 ಸಾವಿರ ಹುಳಗಳು ಗೂಡುಬಿಟ್ಟು ಒಮ್ಮೆಲೆ ಹೊರ ಹೋಗಬಹುದು. ಗೂಡುಬಿಟ್ಟು ಹಾರುವ ಜೇನುಹುಳದ ಹಿಂಡು ಮೊದಲು ಬೇಹುಗಾರ ಹುಳಗಳು ಗುರುತಿಸಿದ ಹತ್ತಿರದ ಜಾಗಕ್ಕೆ ಬಂದು ತಂಗುತ್ತವೆ. ಅಲ್ಲಿಂದ ಸುಮಾರು 25-50 ಬೇಹುಗಾರ ಹುಳಗಳು ಹೊಸ ಜಾಗವನ್ನು ಅರಸುತ್ತಾ ಹೊರಡುತ್ತವೆ. ಈ ಹೊತ್ತಿನಲ್ಲಿ ಉಳಿದ ದುಡಿಮೆಗಾರ ಹುಳಗಳು ಒಡತಿಯನ್ನು ಸುತ್ತುವರೆದು ಒಡತಿಗೆ ಬೇಕಾದ ಬಿಸಿಯನ್ನು ಕಾಯ್ದುಕೊಳ್ಳುತ್ತವೆ. ಗೂಡಿನಲ್ಲಿ ಹೀರಿದ ಜೇನನ್ನು ಹೆಚ್ಚುಹೊತ್ತು ಉಳಿಸಿಕೊಳ್ಳಲು ದುಡಿಮೆಗಾರ ಹುಳಗಳು ಯಾವುದೇ ಕೆಲಸವನ್ನು ಮಾಡದೆ ಒಡತಿಯನ್ನು ಸುತ್ತುವರಿದಿರುತ್ತವೆ.

ಬೇಹುಗಾರ ಹುಳಗಳು ಕೆಲವು ಗಂಟೆ ಇಲ್ಲವೇ ಒಂದು ದಿನದೊಳಗಾಗಿ ಹೊಸ ಜಾಗದ ಮಾಹಿತಿಯನ್ನು ತರುತ್ತವೆ. ಇರುವ ಹಲವಾರು ಬೇಹುಗಾರ ಹುಳಗಳು ಬೇರೆ ಬೇರೆ ಜಾಗದ ಮಾಹಿತಿಯನ್ನು ತಂದಿರುತ್ತವೆ. ಆ ಹುಳಗಳು ಹೊಸ ಜಾಗದ ಮಾಹಿತಿಯನ್ನು ‘ಜೇನುಹುಳದ ಕುಣಿತ‘ದ ಮೂಲಕ ಇತರೆ ಬೇಹುಗಾರ ಹುಳಗಳಿಗೆ ತಿಳಿಸುತ್ತವೆ. ಒಂದು ಬೇಹುಗಾರ ಹುಳವು ತಾನು ಕಂಡುಬಂದ ಜಾಗವು, ಗೂಡುಕಟ್ಟಲು ತುಂಬಾ ಚೆನ್ನಾಗಿದೆ ಎಂದು ತಿಳಿಸಲು ಹೆಚ್ಚು ಹುರುಪಿನಿಂದ ಕುಣಿತವನ್ನು ಹಾಕುತ್ತದೆ. ಉಳಿದ ಬೇಹುಗಾರ ಹುಳಗಳು ಬೇಕಾದರೆ ಒಮ್ಮೆ ಆ ಜಾಗವನ್ನು ಹೋಗಿ ನೋಡಿಕೊಂಡು ಬರುತ್ತವೆ. ಕೊನೆಗೆ, ಹೆಚ್ಚು ಬೇಹುಗಾರ ಹುಳಗಳಿಗೆ ಒಪ್ಪಿತವಾಗುವ ಜಾಗಕ್ಕೆ ಎಲ್ಲಾ ಹುಳಗಳು ಪ್ರಯಾಣ ಮಾಡುತ್ತವೆ. ಹೀಗೆ ಹಿಂಡು ಹಿಂಡಾಗಿ ಸಾಗಿ ಹೊಸ ಗೂಡನ್ನು ಕಟ್ಟುವ ಬಗೆಗೆ ‘ಜೇನುಹುಳದ ಬಿಡಯ‘ (Swarming) ಎಂದು ಕರೆಯುತ್ತಾರೆ.

ಜೇನುಗೂಡು:
ಜೇನುಹುಳಗಳು ಗೂಡನ್ನು ಕಟ್ಟಲು ಹೊರಗಿನ ಪ್ರಾಣಿಗಳಿಂದ ಹೆಚ್ಚು ತೊಂದರೆಗಳಿಲ್ಲದ ಮತ್ತು ವಾಸಕ್ಕೆ ಬೇಕಾದ ಬಿಸುಪು (temperature) ಇರುವ ಜಾಗವನ್ನು ಆರಿಸಿಕೊಳ್ಳುತ್ತವೆ. ಹೊಸ ಗೂಡನ್ನು ಕಟ್ಟುವ ಜಾಗವನ್ನು ತಲುಪಿದೊಡನೆ ದುಡಿಮೆಗಾರ ಹುಳಗಳು ಗೂಡು ಕಟ್ಟುವ ಕೆಲಸವನ್ನು ಮೊದಲು ಮಾಡುತ್ತವೆ. ಜೇನುಗೂಡನ್ನು ‘ಜೇನುಮೇಣ’ದಿಂದ ಕಟ್ಟಲಾಗುತ್ತದೆ. ಆರ‍್ಮೂಲೆಯ (hexagon) ಆಕಾರದಲ್ಲಿರುವ ಚಿಕ್ಕಚಿಕ್ಕ ಕೋಣೆಗಳು (Cells) ಸೇರಿ ಒಂದು ಜೇನುಗೂಡಾಗಿರುತ್ತದೆ. ಒಂದು ಗೂಡಿನಲ್ಲಿ ಸುಮಾರು 1 ಲಕ್ಶದವರೆಗೆ ಕೋಣೆಗಳಿರುತ್ತವೆ. ಇದಕ್ಕಾಗಿ ಸುಮಾರು 1 ರಿಂದ 1.5 ಕೆ.ಜಿ. ಗಳಷ್ಟು ಜೇನುಮೇಣವು ಬೇಕಾಗುತ್ತದೆ. ಜೇನುಗೂಡಿನ ಮೇಲ್ಬಾಗದ ಕೋಣೆಗಳಲ್ಲಿ ಸಿಹಿ, ನಡುಭಾಗದಲ್ಲಿ ಮೊಟ್ಟೆ ಹಾಗು ಗೂಡುಹುಳಗಳು ಮತ್ತು ಕೆಳಭಾಗದ ಕೋಣೆಗಳಲ್ಲಿ ಗಂಡು ಜೇನುಹುಳಗಳಿರುತ್ತವೆ. ಒಡತಿ ಹುಳಕ್ಕಾಗಿ ಗೂಡಿನ ಕೆಳಭಾಗದಲ್ಲಿ ಒಂದು ವಿಶೇಷ ಕೋಣೆಯಿರುತ್ತದೆ.

ಜೇನುಗೂಡು ಕಟ್ಟುವ ಬಗೆ:
ಜೇನುಗೂಡನ್ನು ಕಟ್ಟಲು ಬೇಕಾದ ಜೇನುಮೇಣವು ಹೇಗೆ ಸಿಗುತ್ತದೆ ಎಂಬುದನ್ನು ಮೊದಲು ನೋಡೋಣ; ದುಡಿಮೆಗಾರ ಹುಳಗಳು ಸುಮಾರು 6 ವಾರಗಳಷ್ಟು ಮಾತ್ರ ಬದುಕುತ್ತವೆ. ತಮ್ಮ 10-16 ನೇ ದಿನದ ವಯಸ್ಸಿನಲ್ಲಿದ್ದಾಗ ಇವುಗಳ ಹೊಟ್ಟೆಯ ಭಾಗದಲ್ಲಿರುವ ಮೇಣದ ಸುರಿಗೆ(Wax gland)ಯಿಂದ ಮೇಣವು ಒಸರುತ್ತದೆ(secrete). ಹೀಗೆ ಒಸರಿದ ಮೇಣವು ಹೊಟ್ಟೆಯ ಹೊರಭಾಗದಲ್ಲಿರುವ ಹೊಟ್ಟೆಯ ತಟ್ಟೆಗಳ (Abdominal plates) ಸುತ್ತಲೂ ಅಂಟಿಕೊಂಡು ಚಿಕ್ಕ ಹಲ್ಲೆಗಳ ರೂಪದಲ್ಲಿ ಇರುತ್ತದೆ. ಮೇಣವು ಅಂಟಿರುವ ಹೊಟ್ಟೆಯ ತಟ್ಟೆಗಳನ್ನು ಕೆಳಗೆ ನೀಡಿರುವ ಚಿತ್ರದಲ್ಲಿ ನೋಡಬಹುದು.

Wax and mandible

ಹೀಗಿರುವ ಮೇಣವನ್ನು ಜೇನುಹುಳಗಳು ತಮ್ಮ ಹಿಂಗಾಲುಗಳ ನೆರವಿನಿಂದ ಕೆರೆದು ಕೆಳದವಡೆಗಳಿಗೆ ಸಾಗಿಸುತ್ತವೆ. ಕೆಳದವಡೆಗಳ ನೆರವಿನಿಂದ ಮೇಣವನ್ನು ಚೆನ್ನಾಗಿ ಜಗಿದು ತಮಗೆ ಬೇಕಾದ ಹಾಗೆ ಬಾಗುವಂತೆ ಮೆತ್ತಗೆ ಮಾಡಿಕೊಂಡು, ಗೂಡನ್ನು ಕಟ್ಟಲು ಬಳಸುತ್ತವೆ. ಸುಮಾರು ಅರ‍್ದ ಕೆ.ಜಿ. ಮೇಣಕ್ಕಾಗಿ, ಹೆಚ್ಚು-ಕಡಿಮೆ 4 ಕೆ.ಜಿ ಜೇನನ್ನು ದುಡಿಮೆಗಾರ ಹುಳವು ತಿನ್ನಬೇಕಾಗುತ್ತದೆ. ಹಾಗಾಗಿ, ಜೇನುಹುಳಗಳ ಮಟ್ಟಿಗೆ ಈ ಮೇಣವು ತುಂಬಾ ಬೆಲೆಬಾಳುವಂತದ್ದು. ಮೇಣದಿಂದ ಕಟ್ಟುವ ಜೇನುಗೂಡಿನ ಹಲ್ಲೆಯನ್ನು ಜೇನುಹಲ್ಲೆ ಇಲ್ಲವೇ ಜೇನುಹುಟ್ಟು (honeycomb) ಎಂದು ಕರೆಯುತ್ತಾರೆ.

ಜೇನುಮೇಣದ ವಿವರ:
– ತಿರುಳಿನ ಅಡಕದ ಬರೆಹ: C15 H31 CO2 C30 H61
– ನೀರಿನಲ್ಲಿ ಇದು ಕರಗುವುದಿಲ್ಲ.
– ಸುಮಾರು 18 ಡಿಗ್ರಿ ಸೆಲ್ಶಿಯಸ್ ನಲ್ಲಿ ಗರಗಾಗಿ (brittle) ಬಿರುಕು ಬಿರುಕಾಗುವ ಗುಣಹೊಂದಿದೆ.
– ಸುಮಾರು 35- 40 ಡಿಗ್ರಿ ಸೆಲ್ಶಿಯಸ್ ನಲ್ಲಿ ಮೆದುವಾಗಿ ಮೇಣದಂತಿರುತ್ತದೆ.
– 65 ಡಿಗ್ರಿ ಸೆಲ್ಶಿಯಸ್ ನಲ್ಲಿ ಇದು ಕರಗುತ್ತದೆ.
– ಯಾವ ಕಾಲಕ್ಕೂ ಇದು ಹದಗೆಡುವುದಿಲ್ಲ. ಹಲವು ಪಳೆಯುಳಿಕೆಗಳಲ್ಲಿಯೂ ಕೂಡ ಜೇನುಮೇಣ ಸಿಕ್ಕಿದೆ.

ದುಡಿಮೆಗಾರ ಹುಳಗಳು ತಮ್ಮ ಗೂಡು ಕಟ್ಟುವಿಕೆಯನ್ನು ಮೇಲಿನಿಂದ ಕೆಳಕ್ಕೆ ಮಾಡುತ್ತವೆ. ಮರದ ಪೊಟರೆ, ಟೊಂಗೆ, ಕಲ್ಲಿನ ಹಾಸು ಇಲ್ಲವೇ ಗೋಡೆಯ ಭಾಗವನ್ನು, ಗೂಡು ಕಟ್ಟಲೆಂದು ಮೊದಲು ನಿಗದಿಮಾಡಿಕೊಳ್ಳುತ್ತವೆ. ಆ ಜಾಗವನ್ನು ಎಲ್ಲಾ ದುಡಿಮೆಗಾರ ಹುಳಗಳು ಕೂಡಿ ಚೊಕ್ಕಮಾಡುತ್ತವೆ. ಮರ, ಗೋಡೆ ಇಲ್ಲವೇ ಕಲ್ಲಿನ ಯಾವ ಭಾಗಕ್ಕೆ ಗೂಡು ಅಂಟಿಕೊಳ್ಳುವುದೋ ಆ ಜಾಗದಲ್ಲಿರುವ ಕಸ-ಕಡ್ಡಿಗಳನ್ನು, ಟೊಳ್ಳಾದ ಭಾಗಗಳನ್ನು ತಮ್ಮ ಕಾಲುಗಳ ನೆರವಿನಿಂದ ಕೆಳಗೆ ಉದುರಿಸುತ್ತವೆ. ಬಳಿಕ ತಮ್ಮ ಜೇನುಮೇಣವನ್ನು ಅಂಟಿಸಿ ಒಂದೊಂದಾಗಿ ಆರ‍್ಮೂಲೆ(hexagon) ಆಕಾರದ ಕೋಣೆಗಳನ್ನು ಮೇಲಿನಿಂದ ಕೆಳಕ್ಕೆ ಹಂತ ಹಂತವಾಗಿ ಕಟ್ಟುತ್ತಾ ಬರುತ್ತವೆ. ಈ ಕೆಳಗಿನ ಚಿತ್ರದಲ್ಲಿ ಜೇನುಗೂಡನ್ನು ಬೇರೆ ಬೇರೆ ಹಂತದಲ್ಲಿ ಕಟ್ಟುವ ಬಗೆಯನ್ನು ಕಾಣಬಹುದು.

jenugoodu halle

ಆರ‍್ಮೂಲೆಯೇ ಏಕೆ?
ಜೇನುಗೂಡಿನಲ್ಲಿರುವ ಆರ‍್ಮೂಲೆಯ ಕೋಣೆಗಳ ಬಗ್ಗೆ ಅರಿಯಲು ಹಲವು ಅರಕೆಗಳೇ ನಡೆದಿವೆ. ಜೇನುಗೂಡಿನ ಹಲ್ಲೆಯನ್ನು ನೋಡಿದರೆ ಆರುಬದಿಯ ಕೋಣೆಗಳು ಒಂದರ ಹಿಂದೆ ಒಂದು ಇರುತ್ತವೆ. (ಕೆಳಗಿನ ಚಿತ್ರವನ್ನು ನೋಡಿ) ಸಾವಿರಾರು ವರುಶಗಳಿಂದ ಗೂಡುಗಳನ್ನು ಕಟ್ಟುತ್ತಾ ಬಂದಿರುವ ಜೇನುಹುಳಗಳು ಆರ‍್ಮೂಲೆಯ ಆಕಾರದಲ್ಲಿಯೇ ಏಕೆ ಕೋಣೆಗಳನ್ನು ಕಟ್ಟುತ್ತವೆ? ಇದು ಹೇಗೆ ನೆರವಾಗುತ್ತದೆ? ಇಂತಹ ಕುತೂಹಲ ಹಲವರಲ್ಲಿತ್ತು. ಅದಕ್ಕೆ ಸಿಕ್ಕ ಮರುನುಡಿಯೇ ‘ಜೇನುಹುಟ್ಟಿನ ಗೆರೆಯರಿಮೆ‘ (Geometry of Honeycomb).800px-Bienenwabe_mit_Eiern_und_Brut_5

ನಾವು ಮೊದಲೇ ತಿಳಿದಂತೆ ಜೇನುಹುಳಗಳಿಗೆ ಜೇನುಮೇಣವು ತುಂಬಾ ಬೆಲೆಬಾಳುವಂತದ್ದು. ಹಾಗಾಗಿ ಅವು ಕಡಿಮೆ ಮೇಣವನ್ನು ಬಳಸಿ ಹೆಚ್ಚು ಸಿಹಿಯನ್ನು ಕೂಡಿಡುವ ಗೂಡನ್ನು ಕಟ್ಟಬೇಕು. ಗೂಡನ್ನು ಕಟ್ಟುವಾಗ ಜೇನುಹುಳಗಳಿಗೆ ಇದೇ ಮೂಲ ಗುರಿ. ಮುಮ್ಮೂಲೆ (triangle), ನಾಲ್ಮೂಲೆ (quadrangle) ಹಾಗು ಆರ‍್ಮೂಲೆ ಆಕಾರದಲ್ಲಿರುವ ಕೋಣೆಗಳ ಆಳವು ಒಂದೇ ಆಗಿದ್ದರೆ ಅವುಗಳಲ್ಲಿ ಒಂದೇ ಅಳತೆಯ ಜೇನನ್ನು ಕೂಡಿಡಬಹುದು. ಆದರೆ ಒಂದು ಜಾಗದಲ್ಲಿ ಮುಮ್ಮೂಲೆ ಮತ್ತು ನಾಲ್ಮೂಲೆಯ ಕೋಣೆಗಳನ್ನು ಕಟ್ಟಲು ಆರ‍್ಮೂಲೆಗಿಂತ ಹೆಚ್ಚಿನ ಮೇಣ ಬೇಕಾಗುತ್ತದೆ. ಮೂಮ್ಮೂಲೆ ಮತ್ತು ನಾಲ್ಮೂಲೆಯಲ್ಲಿ ಬದಿಗಳು ದೊಡ್ಡದಾದ್ದರಿಂದ ಅವು ಹೆಚ್ಚು ಮೇಣವನ್ನು ಬಳಸಿಕೊಳ್ಳುತ್ತವೆ. ಇನ್ನು ಸುತ್ತುಗಳ ಆಕಾರದಲ್ಲಿ ಇದ್ದರೂ ಹೆಚ್ಚಿನ ಮೇಣ ಬೇಕಾಗುತ್ತದೆ. ಆದರೆ ಆರ‍್ಮೂಲೆಯ ಸುತ್ತಳತೆಯು ಉಳಿದ ಆಕಾರಗಳಿಗಿಂತ ಕಡಿಮೆ ಇದ್ದು ಉಳಿದ ಆಕಾರಗಳಷ್ಟೇ ಜೇನನ್ನು ಕೂಡಿಡಬಲ್ಲದು. ಸಾವಿರಾರು ವರುಶಗಳ ಲೆಕ್ಕಾಚಾರ ಜೇನುಹುಳಗಳನ್ನು ಈ ಆಕಾರದಲ್ಲಿ ಕೋಣೆಯನ್ನು ಕಟ್ಟುವಂತೆ ಮಾಡಿದೆ.

Jenu goodu

ಹುಳಗಳು ಮೊದಲು ಕೋಣೆಯ ತಳವನ್ನು ಕಟ್ಟತೊಡಗುತ್ತವೆ. ಒಂದು ಗೂಡಿನಲ್ಲಿ ಹೆಚ್ಚಾಗಿ ಎರೆಡು ಪದರದ ಕೋಣೆಗಳು ಒಂದರ ಹಿಂದೆ ಒಂದು ಇರುತ್ತವೆ, ಇವು ಒಂದೇ ತಳವನ್ನು ಹಂಚಿಕೊಳ್ಳುತ್ತವೆ. ಕೆಳಗಿನ ಚಿತ್ರದಲ್ಲಿ (ಅ) ತೋರಿಸಿರುವಂತೆ ಎರಡು ಬದಿಯ ಕೋಣೆಗಳಿಗೆ ಒಂದೇ ತಳವಿದೆ. ಚಿತ್ರ (ಇ) ದಲ್ಲಿ ತೋರಿಸಿರುವಂತೆ ತಳದ ಬದಿಗಳಾಗಿ 1, 2, 3 ಸರಿಬದಿಯುಳ್ಳ ನಾಲ್ಮೂಲೆಗಳನ್ನು ಮೊದಲು ಕಟ್ಟುತ್ತವೆ, ಈ ನಾಲ್ಮೂಲೆಗಳನ್ನು ಇನ್ನೊಂದು ಬದಿಯಲ್ಲಿರುವ ಕೋಣೆಗಳಿಗೂ ತಳವಾಗಿ ಬಳಸಲಾಗುತ್ತದೆ. ಹೀಗೆ, ತಳವು ಎರಡೂ ಬದಿಗೆ ಹಂಚಿಕೆಯಾಗುವುದರಿಂದ ಕಡಿಮೆ ಜೇನುಮೇಣದಿಂದ ಹೆಚ್ಚು ಕೋಣೆಗಳನ್ನು ಕಟ್ಟಬಹುದು, ಮತ್ತು ಗೂಡನ್ನು ಕಟ್ಟಲು ಬೇಕಾಗುವ ಹೊತ್ತು ಮತ್ತು ಹುರುಪನ್ನು ಕಡಿಮೆಮಾಡಬಹುದು ಎಂಬುದು ಜೇನುಹುಳಗಳ ಲೆಕ್ಕಾಚಾರ! ಬಳಿಕ ಉದ್ದದ ಬದಿಯನ್ನು ಹುಳಗಳು ಕಟ್ಟುತ್ತವೆ. ತಳವು ಮೂರು ನಾಲ್ಮೂಲೆಗಳಿಂದ ಮಾಡಿರುವುದರಿಂದ ಅದು ಹೊಂಡದಂತಾಗಿ ಆಳವು ಹೆಚ್ಚಿರುತ್ತದೆ, ಇದು ಹೆಚ್ಚು ಜೇನನ್ನು ಕೂಡಿಡಲು ನೆರವಾಗುತ್ತದೆ. ಜೇನುಹುಳದ ಆರುಕಾಲುಗಳು ಆರ‍್ಮೂಲೆಯ ಕೋಣೆಯನ್ನು ಒಂದೇ ಅಳತೆಯಲ್ಲಿ ಕಟ್ಟಲು ನೆರವಾಗುತ್ತದೆ ಎಂದು ಕೆಲವು ಅರಿಗರ ಅನಿಸಿಕೆ.

Soolugoodu

ಹೀಗೆ ಕಟ್ಟಿದ ಕೋಣೆಗಳು ಹೆಚ್ಚಾಗಿ ನೆಲಕ್ಕೆ ಒಂದೇ ತೆರಪಿನಲ್ಲಿರುತ್ತವೆ (parallel – 0 ಡಿಗ್ರಿ ಕೋನ). ಒಂದು ಹಂತದ ಗೂಡನ್ನು ಕಟ್ಟಿದ ಕೂಡಲೆ ಕೆಲವು ದುಡಿಮೆಗಾರ ಹುಳಗಳು ತಮ್ಮ ತಲೆ ಹಾಗು ಬಗ್ಗರಿಯ ಭಾಗವನ್ನು ಕೋಣೆಯ ಒಳಕ್ಕೆ ಹಾಕಿ ಸುಮಾರು 9 ರಿಂದ 14 ಡಿಗ್ರಿಗಳಷ್ಟು ಮೇಲ್ಬದಿಗೆ ಬಾಗಿಸುತ್ತವೆ. ದುಡಿಮೆಗಾರ ಹುಳಗಳ ಮೈಬಿಸಿಯಿಂದ ಮೇಣವು ಕೊಂಚ ಸಡಿಲಾಗಿ ಕೋಣೆಯು ಬಾಗುತ್ತದೆ. ಇದರಿಂದ ಕೋಣೆಯ ಬಾಯಿಯು ಮೇಲ್ಮುಕವಾಗಿ, ಕೂಡಿಟ್ಟ ಜೇನು/ಮೊಟ್ಟೆ ಸೋರಿ ನೆಲಕ್ಕೆ ಬೀಳುವುದಿಲ್ಲ.

ಕೋಣೆಗಳ ಕಟ್ಟುವಿಕೆ ಮುಗಿಯುತ್ತಿದ್ದಂತೆ ಕೆಲವು ದುಡಿಮೆಗಾರ ಹುಳಗಳು ಅದನ್ನು ಚೊಕ್ಕ ಮಾಡುತ್ತಾ ಬರುತ್ತವೆ. ಗೂಡಿನಲ್ಲಿರುವ ಸಣ್ಣ ಕಸ-ಕಡ್ಡಿಗಳನ್ನು ತೆಗೆಯುತ್ತವೆ, ಯಾವುದಾದರು ಸಣ್ಣ ಬಿರುಕಿದ್ದರೆ ಅದನ್ನು ಮರದಂಟಿನಿಂದ (propolis) ಇವು ಮುಚ್ಚುತ್ತವೆ. ಈ ಮರದಂಟನ್ನು ಗಿಡ ಇಲ್ಲವೇ ಮರದ ಮೇಣ ಮತ್ತು ಜೇನುಮೇಣವನ್ನು ಕೂಡಿಸಿ ಮಾಡಿರುತ್ತವೆ. ಇದಕ್ಕೆ ಬ್ಯಾಕ್ಟೀರಿಯಗಳನ್ನು ಕೊಲ್ಲುವ ತಾಕತ್ತಿರುತ್ತದೆ, ಅಲ್ಲದೇ ಜೇನುಮೇಣಕ್ಕಿಂತ ಹೆಚ್ಚು ಅಂಟುವ ಮೇಣವಾಗಿರುತ್ತದೆ. ಈ ಮೇಣವನ್ನು ಬಳಸಿ ಗೂಡುಗಳ ಬಿರುಕು ಮತ್ತು ಗೋಡೆಗಳ ಏರು-ತಗ್ಗುಗಳನ್ನು ಮುಚ್ಚುವುದರಿಂದ ಕೋಣೆಗಳಿಗೆ ನೀರು ಸೋರುವುದು ಮತ್ತು ಸಿಹಿಯನ್ನು ಹಾಳುಗೆಡುವ ‘ಸೀರುಸಿರಿ‘ಗಳ (micro organisms) ಬೆಳವಣಿಗೆ ನಿಲ್ಲುತ್ತದೆ.

ಇಶ್ಟೆಲ್ಲಾ ಕಷ್ಟಪಟ್ಟು ಕಟ್ಟುವ ಗೂಡನ್ನು ಕಾಪಾಡಿಕೊಳ್ಳಲು ಜೇನುಹುಳಗಳು ಸಾಕಷ್ಟು ಕೆಲಸ ಮಾಡುತ್ತವೆ. ಜೇನುಮೇಣವನ್ನು ಹಾಳುಮಾಡುವ ಕೀಟಗಳನ್ನು ಮತ್ತು ಜೇನನ್ನು ತಿನ್ನಲು ಬರುವ ಇರುವೆಗಳಿಗೆ ಅವಕಾಶ ಮಾಡಿಕೊಡುವುದಿಲ್ಲ. ಹಲವು ದುಡಿಮೆಗಾರ ಹುಳಗಳಿಗೆ ಇವುಗಳಿಂದ ಗೂಡನ್ನು ಕಾಪಾಡುವುದೇ ಕೆಲಸವಾಗಿರುತ್ತದೆ. ಇದಲ್ಲದೇ ಗೂಡಿನ ಬಿಸುಪನ್ನು ಯಾವಾಗಲು 35 ಡಿಗ್ರಿ ಸೆಲ್ಶಿಯಸ್ ಆಸುಪಾಸಿನಲ್ಲಿ ಕಾದುಕೊಳ್ಳಬೇಕು, ಗೂಡಿನ ತೇವಾಂಶ (humidity)ವನ್ನು ಮತ್ತು ಗಾಳಿಯ ಹರಿದಾಟವನ್ನು ಕೂಡ ಕಾದುಕೊಳ್ಳಬೇಕಾಗುತ್ತದೆ. ಇಲ್ಲದಿದ್ದರೆ ಗೂಡಿನಲ್ಲಿರುವ ಮೊಟ್ಟೆ, ಮರಿಹುಳ, ಗೂಡುಹುಳದ ಬೆಳವಣಿಗೆಗೆ ತೊಂದರೆಯಾಗುತ್ತದೆ ಮತ್ತು ಕೂಡಿಟ್ಟಿರುವ ಜೇನು ಕೆಡುವ ಸಾದ್ಯತೆ ಇರುತ್ತದೆ.

ಚಳಿಗಾಲ ಇಲ್ಲವೇ ಮಳೆಗಾಲದಲ್ಲಿ ಹೊರಗಿನ ಬಿಸುಪು ಕಡಿಮೆಯಿರುತ್ತದೆ ಆಗ ಗೂಡಿನ ಬಿಸುಪು 35 ಡಿಗ್ರಿಗಿಂತ ಕೆಳಗಿಳಿಯುತ್ತದೆ, ಆಗ ಹುಳಗಳು ಗೂಡನ್ನು ಸುತ್ತುವರಿದು ಗೊಂಚಲ ಹಾಗೆ ಆಗುತ್ತವೆ, ಜೊತೆಗೆ ತಮ್ಮ ಹಾರುವ ಕಂಡಗಳನ್ನು (flight muscles) ಜೋರಾಗಿ ಅಲುಗಾಡಿಸುತ್ತವೆ. ಇದರಿಂದ ಹುಳದ ಮೈಬಿಸಿ ಹೆಚ್ಚಿ ಅದು ಗೂಡಿನ ಒಟ್ಟಾರೆ ಬಿಸುಪನ್ನು ಏರಿಸಲು ನೆರವಾಗುತ್ತದೆ. ಇನ್ನು, ಬೇಸಿಗೆಯ ಕಾಲದಲ್ಲಿ ಹೊರಗಿನ ಬಿಸುಪಿನಿಂದ ಗೂಡಿನ ಬಿಸುಪು ಹೆಚ್ಚಾಗುತ್ತದೆ ಆಗ ಹುಳಗಳು ತಮ್ಮ ರಕ್ಕೆಯನ್ನು ಬೀಸಣಿಗೆಯಂತೆ ಬಡಿದು ಗಾಳಿಯನ್ನು ಬೀಸಿ ಗೂಡಿನ ಬಿಸುಪನ್ನು ಕಡಿಮೆಗೊಳಿಸುತ್ತವೆ.

ಗೂಡಿನಲ್ಲಿರುವ ಜೇನಿನ ಗುಣಮಟ್ಟವನ್ನು ಕಾಯ್ದುಕೊಳ್ಳಲು ತೇವಾಂಶ, ಬಿಸುಪು ಮತ್ತು ಗಾಳಿಯ ಹರಿದಾಟದ ಜೊತೆಗೆ ಹೊರಗಿನ ಕೀಟಗಳು ಗೂಡಿಗೆ ಲಗ್ಗೆ ಹಾಕದಂತೆ ನೋಡಿಕೊಳ್ಳುತ್ತವೆ, ಗೂಡಿನ ಒಳಗೇ ಸೀರುಸಿರಿಗಳು, ಬ್ಯಾಕ್ಟೀರಿಯಗಳು ಬೆಳೆಯದಂತೆ ತಡೆಯಲು ಮರದಂಟನ್ನು (propolis) ಬಳಸುತ್ತವೆ. ಹಾಗೇನಾದರು ಇವುಗಳ ಬೆಳವಣಿಗೆ ಕಂಡು ಬಂದರೆ ಮರದಂಟಿನಿಂದ ಆ ಜಾಗವನ್ನು ಮುಚ್ಚುತ್ತವೆ. ಗೂಡಿನಲ್ಲಿ ಸತ್ತಿರುವ ಜೇನುಹುಳ, ಮರಿಹುಳ, ಗೂಡುಹುಳ ಮತ್ತು ಹಾಳಾದ ಮೊಟ್ಟೆಗಳನ್ನು ಗೂಡಿನಿಂದ ಹೊರಹಾಕುತ್ತವೆ. ಹೀಗೆ ತಮ್ಮ ಹೊಟ್ಟೆಗೆ ಬೇಕಾದ ಜೇನನ್ನು ಕಾಪಾಡಿಕೊಂಡು ಬದುಕನ್ನು ನಡೆಸಲು ಜೇನುಹುಳಗಳು ಗೂಡನ್ನು ಕಟ್ಟಿಕೊಂಡು ಬಾಳುತ್ತವೆ.

(ಮಾಹಿತಿ ಸೆಲೆ: westmtnapairy.cominsect.tamu.eduiflscience.com)

ತನ್ನಿಂದ ತಾನೇ ಸರಿದೂಗಿಸಿಕೊಳ್ಳಬಲ್ಲ ಬೈಕ್

ಜಯತೀರ್ಥ ನಾಡಗೌಡ.

ಬಿಎಮ್‌ಡಬ್ಲ್ಯೂ (BMW) ಕಾರು ತಯಾರಕ ಕೂಟವಾಗಿ ಹೆಸರು ಮಾಡುವ ಮೊದಲೇ ಇಗ್ಗಾಲಿ ಬಂಡಿ (ಬೈಕ್) ತಯಾರಿಕೆಯಲ್ಲಿ ಹೆಸರುವಾಸಿ ಕೂಟವಾಗಿತ್ತು. ಇಂದಿಗೂ ಬಿಎಮ್‌ಡಬ್ಲ್ಯೂ ಬೈಕ್‌ಗಳಿಗೆ ಭಾರೀ ಬೇಡಿಕೆ. ಬೈಕ್ ತಯಾರಿಕೆಯಲ್ಲಿ ಹಲವಾರು ವರುಶಗಳ ಇತಿಹಾಸ ಹೊಂದಿರುವ ಬಿಎಮ್‌ಡಬ್ಲ್ಯೂ, ಬೈಕ್ ಓಡಿಸುವ ಹವ್ಯಾಸಿಗರಿಗೆ ಬಲು ಅಚ್ಚುಮೆಚ್ಚು. 2016ರ ವರುಶ ಬಿಎಮ್‌ಡಬ್ಲ್ಯೂ ಕೂಟಕ್ಕೆ ನೂರನೇ ಹುಟ್ಟುಹಬ್ಬದ ಸಂಭ್ರಮವಾಗಿತ್ತು. ಇದನ್ನು ಆಚರಿಸಲೆಂದೇ ಬಿಎಮ್‌ಡಬ್ಲ್ಯೂ ಕೂಟ, ಹೊಸದೊಂದು ಇಗ್ಗಾಲಿ ಬಂಡಿಯ ಹೊಳಹನ್ನು (Concept) ಮುಂದಿಟ್ಟಿತ್ತು. ಬಿಎಮ್‌ಡಬ್ಲ್ಯೂರವರ ಈ ಹೊಸ ಹೊಳಹಿನ ಇಗ್ಗಾಲಿ ಬಂಡಿಯ ಬಗ್ಗೆ ತಿಳಿಯೋಣ ಬನ್ನಿ.

 ಈಗ ಎಲ್ಲವೂ ಚೂಟಿ ಎಣಿಗಳ (Smart Devices) ಕಾಲ. ನಮ್ಮ ಮೊಬೈಲ್, ಎಣ್ಣುಕ (Computer), ಅಲ್ಲದೇ ಮುಂದೊಮ್ಮೆ ಇಂಟರ್‌ನೆಟ್ ಆಫ್ ತಿಂಗ್ಸ್ (Internet of Things) ಮೂಲಕ ನಾವು ಬಳಸುವ ಹೆಚ್ಚಿನ ವಸ್ತುಗಳು ಚೂಟಿಯಾಗಿರಲಿವೆ. ಬಿಎಮ್‌ಡಬ್ಲ್ಯೂ ಇದೀಗ ತನ್ನ ಬೈಕ್‌ಗಳನ್ನು ಚೂಟಿಯಾಗಿಸುವತ್ತ ಸಾಗಿದೆ. ಬಿಎಮ್‌ಡಬ್ಲ್ಯೂ ಮೋಟರ್ರಾಡ್ ಕೂಟದ ವಿಷನ್ ನೆಕ್ಸ್ಟ್ 100 (Vision Next 100)  ಹೆಸರಿನ ಈ ವಿಶೇಷ ಬೈಕ್ ಓಡಿಸುಗರಿಗೆ ಬೇರೆಯದೇ ಆದ ಅನುಭವ ನೀಡಲಿದೆ. ಈ ಇಗ್ಗಾಲಿ ಬಂಡಿ ಸೆಲ್ಫ್ ಬ್ಯಾಲನ್ಸಿಂಗ್ (Self Balancing bike) ಎಂಬ ಏರ್ಪಾಟನ್ನು ಹೊಂದುವ ಮೂಲಕ ಪೂರ್ತಿಯಾಗಿ ತನ್ನಿಡಿತದಲ್ಲಿರಲಿದೆ. ಹೊಸಬರೂ ಕೂಡ ಈ ಬಂಡಿಯನ್ನು ಸಲೀಸಾಗಿ ಓಡಿಸಿಕೊಂಡು ಹೋಗುವಂತೆ ಅಣಿಗೊಳಿಸುತ್ತಿದ್ದಾರಂತೆ ಬಿಎಮ್‌ಡಬ್ಲ್ಯೂ ಬಿಣಿಯರಿಗರು(Engineers). ಇದರ ಇನ್ನೊಂದು ಪ್ರಮುಖ ವಿಶೇಷತೆಯೆಂದರೆ ಈ ಇಗ್ಗಾಲಿ ಬಂಡಿ ಓಡಿಸುಗನಿಗೆ ಯಾವುದೇ ಅಡೆತಡೆಯಾಗದಂತೆ ಸುಲಭವಾಗಿ ಕಾಪಾಡಬಲ್ಲುದು. ಹಾಗಾಗಿ ಓಡಿಸುಗರು ತಲೆಗಾಪು (Helmet) ತೊಟ್ಟುಕೊಳ್ಳುವುದು ಬೇಕಿಲ್ಲ.

 ಹೊಸ ಓಡಿಸುಗರಿಗೆ ಇದೊಂದು ವರವಾದರೆ, ಅನುಭವಿ ಓಡಿಸುಗರಿಗೆ ಇದು ಹೆಚ್ಚಿನ ನೆರವು ನೀಡಲಿದೆಯಂತೆ. ಈ ಬೈಕ್‌‌ನೊಂದಿಗೆ ವೈಸರ್ (Visor) ಎಂಬ ಕನ್ನಡಕವನ್ನು ಓಡಿಸುಗರು ಧರಿಸಬೇಕಾಗುತ್ತದೆ. ಈ ವೈಸರ್ ಕನ್ನಡಕ ಸುತ್ತಮುತ್ತಲಿನ ಸ್ಥಿತಿಗತಿ ಬಗ್ಗೆ, ದಾರಿಯ ಬಗ್ಗೆ ಓಡಿಸುಗನಿಗೆ ಮಾಹಿತಿ ಕಳಿಸುತ್ತಿರುತ್ತದೆ. ಇದಕ್ಕೆ ತಕ್ಕಂತೆ ಓಡಿಸುಗರು ಬದಲಾವಣೆ ಮಾಡಿಕೊಂಡು ಬಂಡಿ ಓಡಿಸಿಕೊಂಡು ಹೋಗಬಹುದು. ಓಡಿಸುಗನ ಕಣ್ಣಾಡಿಸುವಿಕೆಯ ಮೂಲಕವೇ ಈ ವೈಸರ್ ಕನ್ನಡಕ ಬಂಡಿಗೆ ಮಾಹಿತಿ ಹಂಚಿಕೊಳ್ಳಲಿದೆ. ಇದಲ್ಲದೇ ಓಡಿಸುಗನ ಬಗೆ (Rider’s Style) ಅರಿಯಬಲ್ಲ ಚಳಕ(technology) ಈ ಇಗ್ಗಾಲಿ ಬಂಡಿ ಹೊಂದಿದ್ದು ಅದಕ್ಕೆ ತಕ್ಕಂತೆ ಸಾಗಬಲ್ಲದಾಗಿದೆ. ಗೂಗಲ್, ಟೆಸ್ಲಾ ಕೂಟದವರು ಬೆಳೆಸುತ್ತಿರುವ ತಂತಾನೇ ಸಾಗಬಲ್ಲ ಕಾರುಗಳಲ್ಲಿರುವ ಚಳಕಗಳಿಗೆ ಈ ಇಗ್ಗಾಲಿ ಬಂಡಿಯ ಚಳಕ ಸರಿಸಾಟಿಯಾಗಿ ನಿಲ್ಲಬಲ್ಲದು.

ವೈಸರ್ ಕನ್ನಡಕ ತೊಟ್ಟು ತನ್ನಿಂದ ತಾನೇ ಸರಿದೂಗಿಸಿಕೊಳ್ಳುವ ಬೈಕ್ ಮೇಲೆ ಸಾಗುತ್ತಿರುವ ಓಡಿಸುಗ

 ಬಿಎಮ್‌ಡಬ್ಲ್ಯೂ ಮುಂದಾಳುಗಳಲ್ಲೊಬ್ಬರಾದ ಹೋಲ್ಗರ್ ಹಾಂಪ್ (Holger Hampf) ಹೇಳುವಂತೆ,”ವಿಷನ್ ನೆಕ್ಸ್ಟ್ 100 ಬಂಡಿಯ, ಮಾಡುಗೆಯ ಜಾಣ್ಮೆಯು (Artificial Intelligence) ತನ್ನ ಸುತ್ತಲಿನ ಬಗ್ಗೆ, ಹೆಚ್ಚು ಹರವಿನ ಮಾಹಿತಿ ಪಡೆಯಬಲ್ಲದಾಗಿದ್ದು, ಬಂಡಿಯ ಮುಂದೆ ಕಾಣಲಿರುವ ದಾರಿಯ ಬಗ್ಗೆ ಕರಾರುವಕ್ಕಾದ ವಿವರ ಓಡಿಸುಗನ ಮುಂದಿಡಲಿದೆ.”  ಸಾಮಾನ್ಯವಾಗಿ ಬಂಡಿಗಳನ್ನು ತಿರುಗಿಸುವಾಗ ಬಂಡಿಯ ವೇಗವನ್ನು ಕಡಿಮೆಗೊಳಿಸಿ ಅದರ ಹಿಡಿಕೆಯನ್ನು(Handle bar) ಸಂಪೂರ್ಣವಾಗಿ ವಾಲಿಸಿಕೊಳ್ಳುತ್ತ ಬಂಡಿಯ ಅಡಿಗಟ್ಟು (Chassis frame) ಪೂರ್ತಿಯಾಗಿ ತಿರುಗುವಂತೆ  ಮಾಡಬೇಕಾಗುತ್ತದೆ. ಹೆಚ್ಚಿನ ವೇಗದಿಂದ ಬಂಡಿಯನ್ನು ತಿರುಗಿಸಬೇಕೆಂದಾಗ ಬಂಡಿಯ ಮೇಲಿನ ಹಿಡಿತ ತಪ್ಪಿ ಬಂಡಿ ಬೇರೆಡೆಗೆ ವಾಲುವ ಸಾಧ್ಯತೆ ಹೆಚ್ಚು. ಆದರೆ ಬಿಎಮ್‌ಡಬ್ಲ್ಯೂ ಕೂಟದವರ ಹೊಳಹಿನ ಬೈಕ್,  “ಫ್ಲೆಕ್ಸ್ ಫ್ರೇಮ್” (Flex Frame) ಚಳಕವನ್ನು ಅಳವಡಿಸಿಕೊಂಡಿದ್ದು ವೇಗದಿಂದ ಬೈಕ್ ತಿರುಗಿಸಿದಾಗಲೂ ಸಲೀಸಾಗಿ ಮುನ್ನುಗ್ಗಲಿದೆ. ಈ ಚಳಕದ ನೆರವಿನಿಂದ, ಬಂಡಿ ಓಡಿಸುಗರು 100 ಮೈಲಿ ಪ್ರತಿ ಗಂಟೆ ವೇಗದಲ್ಲೂ ಯಾವುದೇ ಅಳುಕಿಲ್ಲದೆ ಬಂಡಿಯನ್ನು ಸರ್ರನೆ ತಿರುಗಿಸಿ ಕೊಂಡೊಯ್ಯಬಹುದೆಂಬುದು ಕೂಟದವರ ಅಂಬೋಣ.

” ನಮ್ಮ ಬೈಕುಗಳು, ಹತ್ತಾರು ವರುಶಗಳ ಮುಂದಿರುವ ಸಮಸ್ಯೆಗಳನ್ನು ನೀಗಿಸಬಲ್ಲ ಈಡುಗಾರಿಕೆ (Design) ಹೊಂದಿರುತ್ತವೆ. ಈ ಹೊಸ ಹೊಳಹಿನ ಬಂಡಿಯಲ್ಲಿ ಅಡೆತಡೆಯಿಲ್ಲದ ಓಡಾಟದ ಅನುಭವ ನಿಮ್ಮದಾಗಿರಲಿದೆ, ತಲೆಗಾಪಿನಂತ ಯಾವುದೇ ಕಾಪಿನ ಎಣಿಗಳು (Safety Devices) ನಿಮಗೆ ಬೇಕಿಲ್ಲ “, ಎಂಬುದು ಬಿಎಮ್‌ಡಬ್ಲ್ಯೂ ಈಡುಗಾರಿಕೆಯ ಮುಂದಾಳು ಎಡ್ಗಾರ್ ಹೆನ್ರಿಶ್ (Edgar Heinrich) ಅನಿಸಿಕೆ. 2030-40ರ ಹೊತ್ತಿಗೆ ಈ ಹೊಳಹನ್ನು ದಿಟವಾಗಿಸುವತ್ತ ಬಿಎಮ್‌ಡಬ್ಲ್ಯೂ ಕೂಟ ಹೆಜ್ಜೆ ಇಡುತ್ತಿದೆ. ಅಲ್ಲಿಯವರೆಗೆ ಈ ವಿಶೇಷ ಬೈಕ್‌ಗಾಗಿ ಕಾಯಲೇಬೇಕು.

(** ಬಿಎಮ್‌ಡಬ್ಲ್ಯೂ ಮೋಟರ್ರಾಡ್ ಎಂಬುದು ಬಿಎಮ್‌ಡಬ್ಲ್ಯೂ ಬೈಕ್ ಕೂಟದ ಹೆಸರು)

ಮಾಹಿತಿ ಮತ್ತು ತಿಟ್ಟ ಸೆಲೆ: bmw-motorrad

ಜೇನುಹುಳದ ಕುಣಿತ

ರತೀಶ ರತ್ನಾಕರ.

“ಧಾರವಾಡದ ಅಂಗಡಿಯಲ್ಲಿ ಹಾಲಿನ ಪೇಡ ತುಂಬಾ ಚೆನ್ನಾಗಿರುತ್ತೆ.” “ಬೆಂಗಳೂರಿನ ತಿಂಡಿ ಬೀದಿಯಲ್ಲಿ ಬಗೆಬಗೆಯ ತಿನಿಸು ಸಿಗುತ್ತೆ…” – ನಮಗೆ ಬೇಕಾದ ಊಟ-ತಿಂಡಿಗಳ ಬಗ್ಗೆ ಮತ್ತೊಬ್ಬರಿಗೆ ತಿಳಿಸುವಾಗ ನಾವು ಹೇಗೆಲ್ಲಾ ಮಾತನಾಡಿ ತಿಳಿಸುತ್ತೇವೆ ಅಲ್ಲವೇ? ಯಾವ ಯಾವ ಊರಿನಲ್ಲಿ, ಕೇರಿಯಲ್ಲಿ, ಅಂಗಡಿಯಲ್ಲಿ ಯಾವ ತಿನಿಸುಗಳು ಎಲ್ಲಿ ಸಿಗುತ್ತವೆ ಎಂದು ಸರಿಯಾದ ವಿಳಾಸದೊಂದಿಗೆ ನಮ್ಮ ಮಾತಿನ ಮೂಲಕವೋ ಬರಹದ ಮೂಲಕವೋ ಇನ್ನೊಬ್ಬರಿಗೆ ತಿಳಿಸುತ್ತೇವೆ. ನಮ್ಮ ಮಾತಿನದ್ದೇನೋ ಸರಿ, ಆದರೆ ಯಾವುದೋ ಹೂವಿನ ತೋಟದಲ್ಲಿ ಸಿಗುವ ಹೂ ಜೇನಿನ ದಾರಿಯನ್ನು ಒಂದು ಜೇನುಹುಳವು ಮತ್ತೊಂದು ಹುಳಕ್ಕೆ ಹೇಗೆ ತಿಳಿಸಬಹುದು? ಜೇನುಹುಳಗಳು ಒಂದಕ್ಕೊಂದು ಮಾತನಾಡುತ್ತವೆಯೇ? ಅವುಗಳ ನುಡಿ ಯಾವುದು? ಬನ್ನಿ, ಈ ಪ್ರಶ್ನೆಗಳಿಗೆ ಮರುನುಡಿ ಹುಡುಕುವ ಪ್ರಯತ್ನ ಮಾಡೋಣ.

ಜೇನುಹುಳಗಳ ಮೇವು ಎಂದರೆ ಅದು ಹೂವಿನ ಬಂಡು (pollen), ಜೇನು (nectar) ಹಾಗು ನೀರು. ಹೂವಿನ ಬಂಡು ಮತ್ತು ಜೇನನ್ನು ಅವು ಹೂವುಗಳಿಂದಲೇ ಹುಡುಕಿ ತರಬೇಕು. ಹಿಂದಿನ ಬರಹದಲ್ಲಿ ತಿಳಿದಂತೆ ಒಂದು ಜೇನುಗೂಡಿನಲ್ಲಿ ಸವಿಯಾದ ಜೇನನ್ನು ಕೂಡಿಡುವ ಕೆಲಸ ದುಡಿಮೆಗಾರ ಹುಳಗಳದ್ದಾಗಿರುತ್ತದೆ. ಈ ದುಡಿಮೆಗಾರ ಹುಳಗಳಲ್ಲಿ ಸುಮಾರು 5-25% ಹುಳಗಳು ಬೇಹುಗಾರ(scouts) ಹುಳಗಳಾಗಿರುತ್ತವೆ. ಅಂದರೆ, ಮೇವಿಗಾಗಿ ಸುತ್ತಮುತ್ತಲಿನ ಜಾಗದಲ್ಲಿ ಹುಡುಕಾಟವನ್ನು ನಡೆಸಿ, ಸೊಂಪಾಗಿ ಹೂವುಗಳು ಸಿಗುವ ಜಾಗವನ್ನು ಕಂಡುಹಿಡಿದು, ಗೂಡಿಗೆ ಹಿಂತಿರುಗಿ ಉಳಿದ ದುಡಿಮೆಗಾರ ಜೇನುಹುಳಗಳಿಗೆ ಹೂವುಗಳಿರುವ ಜಾಗವನ್ನು ತಿಳಿಸುವುದು ಈ ಬೇಹುಗಾರ ಹುಳಗಳ ಕೆಲಸವಾಗಿರುತ್ತದೆ.

ಹಾಗಾದರೆ ಈ ಬೇಹುಗಾರ ಹುಳಗಳು ಉಳಿದ ಜೇನುಹುಳಗಳಿಗೆ ಹೂವು ಸಿಗುವ ಜಾಗವನ್ನು ಹೇಗೆ ತಿಳಿಸುತ್ತವೆ? ಜೇನುಗೂಡಿನಿಂದ ಹೂವುಗಳು ಎಷ್ಟು ದೂರದಲ್ಲಿವೆ ಮತ್ತು ಯಾವ ದಿಕ್ಕಿನಲ್ಲಿವೆ ಎಂಬ ವಿವರವನ್ನು ಹೇಗೆ ತೋರಿಸುತ್ತವೆ? ಈ ಎಲ್ಲಾ ಕುತೂಹಲಗಳಿಗೆ ಮರುನುಡಿಯೇ ‘ಜೇನುಹುಳದ ಕುಣಿತ‘! ಹೌದು, ಬೇಹುಗಾರ ಜೇನುಹುಳಗಳು ಉಳಿದ ಜೇನುಹುಳಗಳಿಗೆ ಸೊಂಪಾಗಿ ಸಿಗುವ ಮೇವಿನ ಜಾಗದ ವಿವರವನ್ನು ಕುಣಿತದ ಮೂಲಕ ತಿಳಿಸುತ್ತವೆ. ಇದನ್ನೇ ಜೇನುಹುಳದ ಕುಣಿತ ಎನ್ನಲಾಗುತ್ತದೆ.

ಜೇನುಹುಳಗಳು ಹೇಗೆ ಮಾತನಾಡಿಕೊಳ್ಳುತ್ತವೆ ಎನ್ನುವುದನ್ನು ಅರಿಯಲು ಸಾಕಷ್ಟು ಅರಕೆಗಳನ್ನು ಮಾಡಲಾಗಿದೆ. ಬೇಹುಗಾರ ಜೇನುಹುಳಗಳು ಮೇವಿನ ಜಾಗವನ್ನು ಹುಡುಕಾಡಿ, ಅಲ್ಲಿರುವ ಹೂವಿನ ಬಂಡು ಮತ್ತು ಜೇನನ್ನು ಹೊತ್ತುಕೊಂಡು ಗೂಡಿಗೆ ಹಿಂತಿರುಗುತ್ತವೆ. ಬೇಹುಗಾರ ಜೇನುಹುಳವು ತಂದ ಬಂಡಿನ ನರುಗಂಪಿನ (odor) ಜಾಡನ್ನು ಹಿಡಿದು ಉಳಿದ ದುಡಿಮೆಗಾರ ಹುಳಗಳು ಮೇವಿನ ಜಾಗವನ್ನು ಕಂಡುಹಿಡಿಯುತ್ತವೆ ಎಂದು ಈ ಮೊದಲು ನಂಬಲಾಗಿತ್ತು. ಬಳಿಕ ನಡೆದ ಹೆಚ್ಚಿನ ಅರಕೆಗಳಲ್ಲಿ ಜೇನುಹುಳದ ಕುಣಿತವು ಬೆಳಕಿಗೆ ಬಂದಿತು. ಜರ್ಮನಿಯ ಅರಕೆಗಾರ ಕಾರ‍್ಲ್ ವೊನ್ ಪ್ರಿಸ್ಕ್ ಅರಕೆಯನ್ನು ನಡೆಸಿ, ಜೇನುಹುಳದ ಕುಣಿತವನ್ನು ಪರಿಚಯಿಸಿದರು, ಅದಕ್ಕಾಗಿ ಅವರು ನೊಬೆಲ್ ಪ್ರಶಸ್ತಿಯನ್ನು ಕೂಡ ಪಡೆದರು.

ಏನಿದು ಜೇನುಹುಳದ ಕುಣಿತ?
ಮೇವನ್ನು ಅರಸಿ ಗೂಡಿನಿಂದ ಹೊರಹೋದ ಬೇಹುಗಾರ ಹುಳಗಳು ಗೂಡಿನ ಯಾವುದೋ ದಿಕ್ಕಿನಲ್ಲಿರುವ, ಎಷ್ಟೋ ದೂರದಲ್ಲಿರುವ ಹೂಗಳ ರಾಶಿಯನ್ನು ಹುಡುಕುತ್ತವೆ. ಆ ಹೂವಿನಿಂದ ಸಾಕಷ್ಟು ಜೇನನ್ನು ಹೀರಿ, ಹೂವಿನ ಬಂಡನ್ನು ಕೂಡ ತೆಗೆದುಕೊಂಡು ಜೇನುಗೂಡಿಗೆ ಮರಳುತ್ತವೆ. ಜೇನುಗೂಡಿನಲ್ಲಿರುವ ಉಳಿದ ದುಡಿಮೆಗಾರ ಹುಳಗಳಿಗೆ ತಾನು ಕಂಡ ಮೇವಿನ ಜಾಗವನ್ನು ತಿಳಿಸಲು ಅದು ಗೂಡಿನ ಪಕ್ಕದಲ್ಲಿ ಕುಣಿತವನ್ನು ಮಾಡುತ್ತದೆ. ಈ ಕುಣಿತವು ಮೇವು ಸಿಗುವ ದೂರ ಮತ್ತು ದಿಕ್ಕನ್ನು ತಿಳಿಸುತ್ತದೆ! ಅದು ಹೇಗೆ ಎಂದು ಈಗ ನೋಡೋಣ.

ಮೇವು ಸಿಗುವ ದೂರ:
ಮೇವು ಜೇನುಗೂಡಿನಿಂದ 50 ಮೀಟರ್ ಗಿಂತ ಕಡಿಮೆ ದೂರದಲ್ಲಿದ್ದರೆ, ಬೇಹುಗಾರ ಹುಳವು ‘ಸುತ್ತು ಕುಣಿತ’ವನ್ನು (round dance) ಹಾಕುತ್ತದೆ. (ಕೆಳಗಿನ ಚಿತ್ರ ವನ್ನು ನೋಡಿ). ಹುಳವು ಒಂದು ಬಾರಿ ಇಲ್ಲವೇ ಗೂಡಿನ ಸುತ್ತಲೂ ಹಲವು ಬಾರಿ ಸುತ್ತು ಕುಣಿತವನ್ನು ಹಾಕಿ, ಮೇವಿನ ಜಾಗದ ಬಗ್ಗೆ ಮಾಹಿತಿಯನ್ನು ನೀಡುವುದು. ಸುತ್ತು ಕುಣಿತವನ್ನು ಹಾಕಿದ ಮೇಲೆ, ತಾನು ಹೊತ್ತು ತಂದ ಹೂವಿನ ಬಂಡು ಮತ್ತು ಜೇನನ್ನು ಗೂಡಿನಲ್ಲಿರುವ ಮತ್ತೊಂದು ಜೇನಿಗೆ ಸಾಗಿಸಿ, ಮತ್ತೊಂದು ಕಡೆ ಮೇವನ್ನು ಹುಡುಕಲು ಹೋಗುತ್ತದೆ. ಸುತ್ತು ಕುಣಿತವು ಕೇವಲ ದೂರವನ್ನು ತಿಳಿಸುತ್ತದೆ, ಗೂಡಿನಿಂದ ಕೇವಲ 50 ಮೀ ದೂರದಲ್ಲಿ ಇರುವುದರಿಂದ ದಿಕ್ಕನ್ನು ತಿಳಿಸುವ ಅವಶ್ಯಕತೆ ಇಲ್ಲ. ಸುತ್ತು ಕುಣಿತವನ್ನು ನೋಡಿದ ಉಳಿದ ದುಡಿಮೆಗಾರ ಹುಳಗಳು, ಹತ್ತಿರದಲ್ಲೇ ಹೂವು ಇದೆ ಎಂದು ಅರಿತು, ಹೂವಿನ ಕಂಪಿನ ಜಾಡನ್ನು ಹಿಡಿದು ಮೇವನ್ನು ತರಲು ಹೋರಡುತ್ತವೆ.

ಒಂದು ವೇಳೆ ಮೇವು ಸಿಗುವ ಜಾಗವು 50 ರಿಂದ 150 ಮೀಟರ್ ದೂರದಲ್ಲಿ ಇದ್ದರೆ ಆಗ ಬೇಹುಗಾರ ಹುಳವು ‘ಕುಡುಗೋಲು ಕುಣಿತ‘ವನ್ನು(sickle dance) ಹಾಕುತ್ತದೆ. ಹೆಸರೇ ಹೇಳುವಂತೆ ಕುಡುಗೋಲಿನ ಆಕಾರದಲ್ಲಿ ಹುಳವು ಓಡಾಡಿ ಮೇವಿನ ಜಾಗದ ಬಗ್ಗೆ ತಿಳಿಸುತ್ತದೆ. ಕುಡುಗೋಲು ಕುಣಿತವು ಕೂಡ ಕೇವಲ ದೂರವನ್ನು ತಿಳಿಸುತ್ತದೆಯೇ ಹೊರತು ದಿಕ್ಕನ್ನಲ್ಲ.

ಇನ್ನು 150 ಮೀ. ಗಿಂತ ದೂರದಲ್ಲಿರುವ ಮೇವಿನ ಮಾಹಿತಿಯನ್ನು ತಿಳಿಸಲು ಬೇಹುಗಾರ ಹುಳವು ‘ಓಲಾಟದ ಕುಣಿತ‘ವನ್ನು (waggle dance) ಮಾಡುತ್ತದೆ. ಈ ಓಲಾಟದ ಕುಣಿತವು ದೂರ ಮತ್ತು ದಿಕ್ಕು ಎರಡನ್ನೂ ತಿಳಿಸುತ್ತದೆ. ಓಲಾಟದ ಕುಣಿತಕ್ಕೆ ಚಿತ್ರ 2 ನ್ನು ನೋಡಿ. ಓಲಾಟದ ಕುಣಿತದಲ್ಲಿ ಬೇಹುಗಾರ ಹುಳವು ಒಂದಷ್ಟು ದೂರ ನೇರವಾಗಿ ಹಾರುತ್ತದೆ, ಬಳಿಕ ಬಲ/ಎಡಕ್ಕೆ ಅರೆಸುತ್ತನ್ನು ಹಾಕಿ ಹಾರಾಟವನ್ನು ಶುರುಮಾಡಿದ ಜಾಗಕ್ಕೆ ಬಂದು ತಲುಪುತ್ತದೆ, ಮತ್ತೆ ಮೊದಲು ಓಡಿದ ನೇರದಾರಿಯಲ್ಲೇ ಹಾರಿ, ತಿರುಗಿ ಎಡ/ಬಲಕ್ಕೆ ಅರೆಸುತ್ತನ್ನು ಹಾಕಿ ಹಾರಾಟವನ್ನು ಶುರುಮಾಡಿದ ಜಾಗಕ್ಕೆ ಬರುತ್ತದೆ. ಈ ಕುಣಿತದಲ್ಲಿ ಹುಳವು ನೇರದಾರಿಯಲ್ಲಿ ಹಾರುವಾಗ ತನ್ನ ಹೊಟ್ಟೆಯ ಭಾಗವನ್ನುಅಲ್ಲಾಡಿಸಿಕೊಂಡು ಇಲ್ಲವೇ ಓಲಾಡಿಸಿಕೊಂಡು ಹಾರುತ್ತದೆ, ಇದು ಬಾಲವನ್ನು ಅಲ್ಲಾಡಿಸಿದಂತೆ ಕಾಣಿಸುತ್ತದೆ. ಆದ್ದರಿಂದ ಇದನ್ನು ಓಲಾಟದ ಕುಣಿತ ಎನ್ನುತ್ತಾರೆ. ಅಲ್ಲದೇ ನೇರದಾರಿಯಲ್ಲಿ ಹಾರುವಾಗ ‘ಜುಂಯ್’ ಎಂಬ ಸದ್ದನ್ನು ಕೂಡ ಮಾಡಿ ಹಾರುತ್ತದೆ.

ಓಲಾಟದ ಕುಣಿತದಲ್ಲಿ ನೇರದಾರಿಯನ್ನು ಸಾಗಲು ಹುಳವು ಎಷ್ಟು ಹೊತ್ತು ತೆಗೆದುಕೊಳ್ಳುತ್ತದೆ ಎಂಬುದರ ಮೇಲೆ ಮೇವು ಸಿಗುವ ದೂರವನ್ನು ಲೆಕ್ಕಹಾಕಲಾಗುತ್ತದೆ. ನೇರದಾರಿಯಲ್ಲಿ ಕಡಿಮೆ ಹೊತ್ತು ಹಾರಿದರೆ ಮೇವಿನ ಜಾಗವು ಕಡಿಮೆ ದೂರವೆಂದು, ಹೆಚ್ಚು ಹೊತ್ತು ಹಾರಿದರೆ ಹೆಚ್ಚು ದೂರವೆಂದು ತಿಳಿಯಲಾಗುತ್ತದೆ. ಉದಾಹರಣೆಗೆ, ನೇರದಾರಿಯಲ್ಲಿ 2 ಸೆಕೆಂಡ್ ಹಾರಿದರೆ ಮೇವಿನ ದೂರ 2000 ಮೀ. ಇದೆ ಎಂದು, 4 ಸೆಕೆಂಡ್ ಹಾರಿದರೆ ಸುಮಾರು 4400 ಮೀ. ದೂರದಲ್ಲಿ ಮೇವು ಇದೆ ಎಂದು ಅಂದಾಜಿಸಲಾಗುತ್ತದೆ. ಇದಲ್ಲದೇ, ನೇರದಾರಿಯಲ್ಲಿ ಹಾರುವಾಗ ಮಾಡುವ ಓಲಾಟದ ಉರುಬು (tempo) ಮತ್ತು ಎಷ್ಟು ಹೊತ್ತು ‘ಜಂಯ್’ ಎಂದು ಮಾಡುವ ಸದ್ದು ಮಾಡುವುದು ಎಂಬುದನ್ನು ಕೂಡ ಲೆಕ್ಕಕ್ಕೆ ತೆಗೆದುಕೊಂಡು, ಮೇವು ಇರುವ ದೂರವನ್ನು ದುಡಿಮೆಗಾರ ಹುಳಗಳು ಕಂಡುಕೊಳ್ಳುತ್ತವೆ.

ಹೀಗೆ ಮೇವಿನ ದೂರವನ್ನು ಓಲಾಟದ ಕುಣಿತದಲ್ಲಿ ಲೆಕ್ಕಹಾಕಲಾಗುತ್ತದೆ. ಮೇವಿನ ದೂರ ಮತ್ತು ನೇರದಾರಿಯಲ್ಲಿ ಹಾರುವ ಹೊತ್ತಿನ ನಡುವೆ ಇರುವ ನಂಟನ್ನು ಈ ಕೆಳಗಿನ ಚಿತ್ರದಲ್ಲಿ ಕಾಣಬಹುದು.

ಮೇವು ಇರುವ ದಿಕ್ಕು ಮತ್ತು ಓಲಾಟದ ಕುಣಿತ:

ಓಲಾಟದ ಕುಣಿತದಲ್ಲಿ ಮೇವು ಇರುವ ದಿಕ್ಕು ಕಂಡುಹಿಡಿಯುವುದನ್ನು ನೋಡಿದರೆ, ಜೇನುಹುಳಗಳು ಲೆಕ್ಕದಲ್ಲಿ ಎತ್ತಿದ ಕೈ ಎನ್ನಬಹುದು. ಓಲಾಟದ ಕುಣಿತದ ನೇರದಾರಿಯಲ್ಲಿ ಜೇನುಹುಳವು ಯಾವ ದಿಕ್ಕಿನಲ್ಲಿ ಹಾರುತ್ತದೆ, ಜೇನುಗೂಡಿಗೆ ಯಾವ ಕೋನದಲ್ಲಿ ಹಾರುತ್ತಿದೆ ಮತ್ತು ನೇಸರನು ಯಾವ ದಿಕ್ಕಿನಲ್ಲಿ ಇದ್ದಾನೆ ಎಂಬುದರ ಮೇಲೆ ದಿಕ್ಕನ್ನು ಕಂಡುಕೊಳ್ಳಲಾಗುತ್ತದೆ. ಇದನ್ನು ಸುಳುವಾಗಿ ತಿಳಿಸಲು ಈ ಕೆಳಗಿನ ಚಿತ್ರವನ್ನು ನೋಡಿ.

– ಮೇವು ಸಿಗುವ ಜಾಗವು ನೇಸರನು ಇರುವ ದಿಕ್ಕಿನ ಕಡೆ ಇದ್ದರೆ, ಕುಣಿತದ ನೇರದಾರಿಯು ಗೂಡಿಗೆ ಒಂದೇ ತೆರಪಿನಲ್ಲಿ (parallel) ಇರುತ್ತದೆ (ಅಂದರೆ 0 ಡಿಗ್ರಿ ಕೋನ) ಮತ್ತು ನೇರದಾರಿಯ ದಿಕ್ಕು ಗೂಡಿನ ಮೇಲ್ಮುಖವಾಗಿ ಇರುತ್ತದೆ.

– ಮೇವು ಸಿಗುವ ಜಾಗವು ನೇಸರನ ಎದುರು ದಿಕ್ಕಿನಲ್ಲಿ ಇದ್ದರೆ, ಕುಣಿತದ ನೇರದಾರಿಯು ಗೂಡಿಗೆ ಒಂದೇ ತೆರಪಿನಲ್ಲಿ ಇರುತ್ತದೆ ಆದರೆ ಹಾರಾಟದ ದಿಕ್ಕು ಗೂಡಿನ ಕೆಳಮುಖವಾಗಿ ಇರುತ್ತದೆ.

– ಒಂದು ವೇಳೆ ಮೇವು ಸಿಗುವ ಜಾಗವು ನೇಸರನಿಂದ ಬಲಕ್ಕೆ ಸುಮಾರು 30 ಡಿಗ್ರಿ ಕೋನದಲ್ಲಿ ಇದ್ದರೆ. ಕುಣಿತದ ನೇರದಾರಿಯ ಕೋನವು ಗೂಡಿನಿಂದ 30 ಡಿಗ್ರಿ ಬಲಕ್ಕೆ ಬಾಗಿರುತ್ತದೆ.

– ಹಾಗೆಯೇ ಮೇವು ನೇಸರನಿಂದ ಎಡಕ್ಕೆ 90 ಡಿಗ್ರಿಯಲ್ಲಿ ಇದ್ದರೆ ಕುಣಿತದ ನೇರದಾರಿಯ ಕೋನವು ಗೂಡಿಗೆ 90 ಡಿಗ್ರಿಯಲ್ಲಿ ಬಲಕ್ಕೆ ಬಾಗಿರುತ್ತದೆ.

ಈ ಓಲಾಟದ ಕುಣಿತವು ನೇಸರನ ಜಾಗದ ಮೇಲೆ ಹೆಚ್ಚು ನೆಚ್ಚಿಕೊಂಡಿರುತ್ತದೆ. ಉದಾಹರಣೆಗೆ, ಬೇಹುಗಾರ ಹುಳವು ಮೂಡಣ ದಿಕ್ಕಿನಲ್ಲಿರುವ ಮೇವಿನ ಬಗ್ಗೆ ಉಳಿದ ಹುಳಗಳಿಗೆ ತಿಳಿಸಬೇಕಿದೆ ಎಂದಿಟ್ಟುಕೊಳ್ಳೋಣ. ಒಂದು ವೇಳೆ ಬೆಳಗಿನ ಹೊತ್ತು ಆ ದಿಕ್ಕನ್ನು ತಿಳಿಸಬೇಕೆಂದರೆ ಬೇಹುಗಾರ ಹುಳವು ತನ್ನ ಕುಣಿತದ ನೇರದಾರಿಯಲ್ಲಿ ಮೇಲ್ಮುಖವಾಗಿ ಸಾಗಬೇಕು, ಏಕೆಂದರೆ ನೇಸರ ಮತ್ತು ಮೇವು ಒಂದೇ ದಿಕ್ಕಿನಲ್ಲಿವೆ. ಅದೇ ಮೂಡಣ ದಿಕ್ಕಿನಲ್ಲಿರುವ ಮೇವಿನ ಬಗ್ಗೆ ಸಂಜೆಯ ಹೊತ್ತು ತಿಳಿಸಬೇಕೆಂದರೆ ಹುಳವು ಕುಣಿತದ ನೇರದಾರಿಯಲ್ಲಿ ಕೆಳಮುಖವಾಗಿ ಸಾಗಬೇಕು. ಏಕೆಂದರೆ ನೇಸರನು ಈಗ ಪಡುವಣ ದಿಕ್ಕಿನಲ್ಲಿ ಇದ್ದಾನೆ ಮತ್ತು ಮೇವು ನೇಸರನ ಎದುರು ದಿಕ್ಕಿನಲ್ಲಿದೆ.

ಇದು ಬೇಹುಗಾರ ಹುಳಗಳು ತಮ್ಮದೇ ಆದ ಕುಣಿತದ ಮೂಲಕ ಗೂಡಿನ ಉಳಿದ ಹುಳಗಳಿಗೆ ಮೇವು ಸಿಗುವ ದೂರ ಮತ್ತು ದಿಕ್ಕನ್ನು ತಿಳಿಸುವ ಬಗೆ. ಈ ಕುಣಿತವಷ್ಟೆ ಅಲ್ಲದೆ ಬೇಹುಗಾರ ಹುಳಗಳು ಹೊತ್ತು ತರುವ ಹೂವಿನ ಬಂಡು ಮತ್ತು ಜೇನಿನ ನರುಗಂಪಿನ ನೆರವನ್ನು ಪಡೆದುಕೊಂಡು, ದುಡಿಮೆಗಾರ ಹುಳಗಳು ಹೂವು ಸಿಗುವ ಜಾಗವನ್ನು ಕಂಡುಹಿಡಿಯುತ್ತವೆ. ಬಳಿಕ ಗೂಡಿಗೆ ಬೇಕಾದ ಜೇನನ್ನು ಹೊತ್ತು ತಂದು ಕೂಡಿಕೊಳ್ಳುತ್ತವೆ.

ಹೆಚ್ಚಿನ ಮಾಹಿತಿಗಾಗಿ ಯೂಟ್ಯೂಬಿನಲ್ಲಿರುವ ಕೆಲವು ವೀಡಿಯೊಗಳು:

(ಮಾಹಿತಿ ಮತ್ತು ಚಿತ್ರ ಸೆಲೆ: cals.ncsuusers.rcn.comwestmtnapairypinterest.com)

ಕಾರುಗಳಿಂದ ಸಿಗಲಿದೆ ಕುಡಿಯುವ ನೀರು

ಜಯತೀರ್ಥ ನಾಡಗೌಡ.

ಕುಡಿಯುವ ನೀರು ಬಲು ಮುಖ್ಯ. ಅದರಲ್ಲೂ ಬೇಸಿಗೆಯಲ್ಲಿ ಬೇರೆನೂ ಸಿಗದೇ ಇದ್ದರೂ ಇರಬಹುದು, ಆದರೆ ನೀರು ಇಲ್ಲದಿದ್ದರೆ ಬಾಳು ಊಹಿಸಿಕೊಳ್ಳಲು ಆಗದು. ಜಗತ್ತು ಎಷ್ಟೇ ಮುಂದುವರೆದರೂ ಹಲವೆಡೆ ನೀರು ಸಿಗದೇ ಮಂದಿಯ ಪರದಾಟ ಇನ್ನೂ ಮುಂದುವರೆಯುತ್ತಲೇ ಇದೆ. ಅದರಲ್ಲೂ ದೂರದ ಪಯಣಕ್ಕೆ ಕಾರು/ಗಾಡಿಗಳಲ್ಲಿ ತಪ್ಪದೇ ನೀರಿನ ಬಾಟಲಿಗಳನ್ನು ಕೊಂಡೊಯ್ಯಲೇಬೇಕು. ಮರಳುಗಾಡಿನಲ್ಲಿ ಕಾರಿನಲ್ಲಿ ಕುಳಿತು ಸಾಗುತ್ತಿದ್ದೀರಿ ಅಂತ ಅಂದುಕೊಳ್ಳಿರಿ, ನಿಮ್ಮ ನೀರಿನ ಬಾಟಲಿಗಳು ಖಾಲಿ, ಹೊರಗೆ ಎಲ್ಲೂ ಕುಡಿಯಲು ನೀರು ಸಿಗದಂತಿದ್ದರೆ ಹೇಗೆ? ಬಾಯಾರಿಕೆಯನ್ನು ಹೇಗೆ ತಣಿಸುವುದು ಎಂದು ಒದ್ದಾಡುವ ಪರಿಸ್ಥಿತಿ ಅದು. ಆದರೆ, ಇಲ್ಲೊಂದು ಹೊಸ ಚಳಕ ನಮ್ಮ ಮುಂದಿದೆ. ಈಗ ಕಾರಿನ ಮೂಲಕವೇ ಕುಡಿಯುವ ನೀರನ್ನು ಪಡೆಯಬಹುದು! ನೀರಿಗಾಗಿ ಅಲ್ಲಿಲ್ಲಿ ತಡಕಾಡುವ, ಅಂಗಡಿ/ಹೋಟೆಲ್‌ಗಳಲ್ಲಿ ದುಡ್ಡು ಕೊಟ್ಟು ನೀರು ಕುಡಿಯಬೇಕಿಲ್ಲ. ಹೌದು ನೂರಾರು ವರುಶಗಳ ಹಳಮೆ ಹೊಂದಿರುವ ಜಗತ್ತಿನೆಲ್ಲೆಡೆ ಹೆಸರುವಾಸಿಯಾಗಿರುವ ಫೋರ‍್ಡ್ ಕಾರು (Ford) ತಯಾರಕ ಕೂಟ ಇಂತದೊಂದು ಹೊಳಹನ್ನು(Concept) ಎಲ್ಲರ ಮುಂದಿಟ್ಟಿದೆ.

ಎಲ್ಲ ಕಾರುಗಳಲ್ಲಿ ಇದೀಗ ಗಾಳಿ ಪಾಡುಕದ ಏರ್ಪಾಟನ್ನು(Air conditioning system) ಅಳವಡಿಸಿರುತ್ತಾರೆ.  ನೀರಾವಿಯು ಗಾಳಿ ಪಾಡುಕದ ಏರ್ಪಾಟಿನ ಇಂಗುಕದ(Condenser) ಮೇಲೆ ಕೂಡಿಕೊಳ್ಳುತ್ತವೆ. ಹೀಗೆ ಕೂಡಿಕೊಂಡ ನೀರಾವಿ ಸುತ್ತ ಮುತ್ತಲಿನ ವಾತಾವರಣದ ಬಿಸುಪಿನಿಂದ ನೀರಾಗಿ ಮಾರ್ಪಟ್ಟು ನೆಲಕ್ಕೆ ಬೀಳುತ್ತದೆ. ಈ ರೀತಿ ನೀರು ನೆಲಕ್ಕೆ ಬಿದ್ದು ಪೋಲಾಗುವ ಬದಲು ಅದನ್ನೇಕೆ ಬಳಸಬಾರದೆಂದು ಫೋರ‍್ಡ್ ಕಂಪನಿಯ ಪ್ರಮುಖ ಇಂಜಿನೀಯರ್ ಡೌಗ್ ಮಾರ್ಟಿನ್(Doug Martin) ಅವರಿಗೆ ಅನಿಸಿತು. ಈ ದಿಕ್ಕಿನಲ್ಲಿ ಕೆಲಸ ಮಾಡಿ, ನೀರಾವಿಯನ್ನು ಬಳಸಿಕೊಂಡು ಕಾರಿನ ಒಳಗಡೆಯೇ ಕುಡಿಯುವ ನೀರು ಸಿಗುವ ಹಾಗೆ ಮಾಡಬಹುದೆಂದು ಮಾರ್ಟಿನ್ ತೋರಿಸಿಕೊಟ್ಟಿದ್ದಾರೆ.

ದಕ್ಷಿಣ ಅಮೇರಿಕಾದ ಪೆರು ದೇಶದ ಬಿಲ್‌ಬೋರ್ಡ್ ಗಳೇ (Billboard) ಈ ಹೊಳಹಿನ ಹಿಂದಿನ ಸ್ಪೂರ್ತಿ ಎಂದು ಮಾರ್ಟಿನ್ ಹೇಳಿಕೊಂಡಿದ್ದಾರೆ. ಬಿಲ್‌ಬೋರ್ಡ್ ಎಂಬ ಬಯಲರಿಕೆ ಹಲಗೆಗಳು(Advertising Boards/Hoardings) ವಾತಾವರಣದ ಆವಿಯನ್ನು ಕೂಡಿಟ್ಟು, ಆ ನೀರನ್ನು ಸೋಸಿ, ಕುಡಿಯುವ ನೀರನ್ನು ಒದಗಿಸಿಕೊಡುತ್ತವೆ. ಇದೇ ಬಗೆಯಲ್ಲಿ, ಬಂಡಿಯ ಗಾಳಿಪಾಡುಕದ ಏರ್ಪಾಟಿನ ನೀರಾವಿಯನ್ನು ಕೂಡಿಟ್ಟು, ಅದೇ ನೀರನ್ನು ಸೋಸಿ, ನೀರಿನ ಚೀಲದಲ್ಲಿ ಕೂಡಿಟ್ಟು ಬೇಕೆಂದಾಗ ಕುಡಿಯಬಹುದು. ಸಂಗಡಿಗ ಜಾನ್ ರೊಲಿಂಗರ್(John Rollinger) ಜೊತೆಗೂಡಿ ಮೊದಲ ಮಾದರಿಯನ್ನು ತಯಾರಿಸಿ ಓಡಿಸುಗನ ಪಕ್ಕದಲ್ಲಿ ಚಿಕ್ಕ ನಲ್ಲಿಯೊಂದರ ಮೂಲಕ ನೀರನ್ನು ಒದಗಿಸುವ ಏರ್ಪಾಟು ಅಣಿ ಮಾಡಿ ತೋರಿಸಿದ್ದಾರೆ ಮಾರ್ಟಿನ್.

ಈ ಏರ್ಪಾಟು ಎಷ್ಟು ನೀರನ್ನು ಕೊಡುತ್ತದೆ ಎಂಬ ಪ್ರಶ್ನೆಗೆ, ಸುಮಾರು 1.9ಲೀಟರ್ ಎಂದು ಮಾರ್ಟಿನ್ ವಿವರಿಸಿದ್ದಾರೆ. ಬಂಡಿಯ ಗಾಳಿ ಪಾಡುಕದ ಏರ್ಪಾಟಿಗೆ ತಕ್ಕಂತೆ ನೀರಿನ ಪ್ರಮಾಣ ಹೆಚ್ಚು ಕಡಿಮೆಯಾಗುತ್ತದೆ. ದೂರದ ಪಯಣಗಳಿಗೆ ಇದು ನೆರವಾಗಲಿದೆ. ಬಂಡಿಯಲ್ಲೇ ನೀರು ಸಿಗುವುದರಿಂದ ನೀರಿಗಾಗಿ ಹೆಚ್ಚು ಅಲೆದಾಡಬೇಕಿಲ್ಲ. ಕಾರಿನ AC ಏರ್ಪಾಟಿನ ಇಂಗಿಸುಕದ(Condenser) ಮೂಲಕ ಹೊರಬರುವ ನೀರನ್ನು ಒಂದು ಪುಟ್ಟ ಕೊಳಾಯಿ ಇಲ್ಲವೇ ಬುಟ್ಟಿಯಲ್ಲಿ ಕೂಡಿಡಲಾಗುತ್ತದೆ. ಇದೇ ನೀರನ್ನು ಚೊಕ್ಕಟವಾಗಿಸಲು ಸೋಸುಕವೊಂದನ್ನು ಅಳವಡಿಸಿರಲಾಗುತ್ತದೆ, ಸೋಸುಕದ ಮೂಲಕ ನೀರನ್ನು ಎತ್ತುಕದಿಂದ(Pump) ಓಡಿಸುಗನೆಡೆಯಲ್ಲಿ(Driver Cabin) ನಲ್ಲಿ(tap) ಮೂಲಕ ಪಡೆದುಕೊಳ್ಳಬಹುದು. ನೀರು ಪಡೆಯುವ ಈ ಪುಟ್ಟ ಏರ್ಪಾಟಿಗೆ ಹೆಚ್ಚಿನ ದುಡ್ಡು ಮತ್ತು ಜಾಗದ ಅವಶ್ಯಕತೆಯಿಲ್ಲ. ಒಂದು ನೀರಿನ ಕೊಳಾಯಿ, ಸೋಸುಕ, ನೀರಿನ ಕೊಳವೆ ಮತ್ತು ನಲ್ಲಿಯಂತ ಕಡಿಮೆ ವೆಚ್ಚದ ವಸ್ತುಗಳಿದ್ದರೆ ಆಯಿತು.

ಈಗಾಗಲೇ ಮಾದರಿಯೊಂದನ್ನು ಸಿದ್ಧಪಡಿಸಿ ತೋರಿಸಿರುವ ಮಾರ್ಟಿನ್ ಮತ್ತು ಅವರ ತಂಡ, ಮಾದರಿ ತಯಾರಿಸಿ 7-8 ವರುಷ ಕಳೆದರೂ ಈ ಏರ್ಪಾಟಿನ ಕಾರು ಮಾರುಕಟ್ಟೆಗೆ ಯಾವಾಗ ಹೊರಬರುವುದು ಎಂಬುದನ್ನು ಇನ್ನೂ ಹೊರಹಾಕಿಲ್ಲ. 

 

ಮಾಹಿತಿ ಮತ್ತು ತಿಟ್ಟ ಸೆಲೆ:

http://newatlas.com/on-the-go-h2o-air-conditioner-water/45458/

Thirsty? Try On-The-Go H2O (ford.com)

ಜೇನುಹುಳದ ಬಾಳ್ಮೆಸುತ್ತು

ರತೀಶ ರತ್ನಾಕರ.

ಸಿಹಿಯಾದ ಜೇನನ್ನು ನೀಡುವ ಜೇನುಹುಳುಗಳ ಹುಟ್ಟು ಮತ್ತು ಬೆಳವಣಿಗೆಯು ಹಲವು ಕುತೂಹಲಕಾರಿ ಅಂಶಗಳನ್ನು ಒಳಗೊಂಡಿದೆ. ಪುಟ್ಟಗೂಡಿನಲ್ಲಿ ದೊಡ್ಡ ಸಂಸಾರವನ್ನು ನಡೆಸಿಕೊಂಡು ಹೋಗುವ ಈ ಕೀಟಗಳ ಬದುಕಿನ ಬಗೆಯಲ್ಲಿ ಸಾಕಷ್ಟು ಹಲತನವಿದೆ. ಒಂದು ಜೇನಿನ ಗೂಡಿನಲ್ಲಿ ಒಡತಿ, ಗಂಡು ಜೇನು ಮತ್ತು ದುಡಿಮೆಗಾರ ಜೇನುಹುಳಗಳೆಂಬ ಮೂರು ಬಗೆಯ ಹುಳಗಳಿರುತ್ತವೆ. ಎಲ್ಲಾ ಜೇನುಹುಳಗಳು ಮೊಟ್ಟೆ, ಮರಿಹುಳ (larvae), ಗೂಡುಹುಳ (pupa) ಮತ್ತು ಜೇನುಹುಳವೆಂಬ ನಾಲ್ಕು ಹಂತಗಳಲ್ಲಿ ಜೇನುಗೂಡಿನಲ್ಲಿ ಬದುಕು ನಡೆಸುತ್ತಿರುತ್ತವೆ.

ಜೇನುಹುಳದ ಬಾಳ್ಮೆಸುತ್ತು (Life cycle):

ಜೇನುಗೂಡಿನಲ್ಲಿ ಸಾಕಷ್ಟು ಹೆಣ್ಣು ಜೇನುಹುಳಗಳಿದ್ದರೂ ಒಡತಿ ಜೇನುಹುಳವು ಮಾತ್ರ ಎರುಬುಳ್ಳ (fertile) ಹುಳವಾಗಿದೆ. ಒಡತಿ ಜೇನು ಮಾತ್ರ ಮೊಟ್ಟೆಗಳನ್ನಿಡುವ ಕಸುವನ್ನು ಹೊಂದಿದೆ. ಜೇನುಹುಳು ಎರಡು ಬಗೆಯ ಮೊಟ್ಟೆಯಿಂದ ಹುಟ್ಟಬಹುದು;
1) ಹೆಣ್ಣು ಗಂಡಿನೊಡನೆ ಕೂಡುವಿಕೆಯ ಬಳಿಕ ಇಟ್ಟ ಮೊಟ್ಟೆ 2) ಹೆಣ್ಣು ಗಂಡಿನೊಂದಿಗೆ ಕೂಡದೆಯೇ ಇಟ್ಟ ಮೊಟ್ಟೆ
ಮೊದಲ ಬಗೆಯಲ್ಲಿ ಹುಟ್ಟಿದ ಜೇನುಹುಳುಗಳು ಯಾವಾಗಲೂ ಹೆಣ್ಣು ಜೇನುಗಳಾಗಿರುತ್ತವೆ ಅದೇ ಎರಡನೇ ಬಗೆಯಲ್ಲಿ ಹುಟ್ಟಿದ ಜೇನುಹುಳುಗಳು ಗಂಡಾಗಿರುತ್ತವೆ; ಒಡತಿ ಹುಳವು ಗಂಡು ಹುಳದೊಡನೆ ಕೂಡಿದಾಗ ಅದರ ಗಂಡು ಬಿತ್ತುಗಳನ್ನು ಪಡೆದು ತನ್ನಲ್ಲಿ ಅಡಗಿಸಿಟ್ಟುಕೊಳ್ಳುತ್ತದೆ. ಯಾವಾಗ ಹೆಣ್ಣು ಜೇನುಹುಳುಗಳನ್ನು ಹುಟ್ಟಿಸಬೇಕು ಮತ್ತು ಯಾವಾಗ ಗಂಡು ಜೇನುಗಳನ್ನು ಅನ್ನುವುದನ್ನು ಒಡತಿ ಜೇನು ತೀರ್ಮಾನಿಸುತ್ತದೆ. ಹೆಣ್ಣು ಜೇನುಹುಳುಗಳು ಬೇಕೆಂದಾಗ ಒಡತಿ ಜೇನು ತನ್ನಲ್ಲಿ ಕೂಡಿಟ್ಟುಕೊಂಡಿರುವ ಗಂಡುಬಿತ್ತುಗಳನ್ನು(sperm) ತನ್ನ ಮೊಟ್ಟೆಯೊಡನೆ ಬೆರಸಿ ಹೆಣ್ಣು ಜೇನುಹುಳುಗಳನ್ನು ಹುಟ್ಟಿಸುತ್ತದೆ. ಒಡತಿ ಜೇನು ಗಂಡು ಜೇನುಹುಳಗಳನ್ನು ಹುಟ್ಟಿಸಬೇಕೆಂದಾಗ ಗಂಡುಬಿತ್ತುಗಳೊಂದಿಗೆ ಬೆರಸದೆಯೇ ಬರೀ ಮೊಟ್ಟೆಗಳನ್ನು ಇಡುತ್ತದೆ!

ಒಡತಿ ಜೇನುಹುಳವು ಗೂಡಿನಲ್ಲಿ ಮೊಟ್ಟೆಗಳನಿಟ್ಟ ಮೂರು ದಿನಗಳ ಬಳಿಕ ಮೊಟ್ಟೆಯೊಡೆದು ಮರಿಹುಳು(larvae) ಹೊರಗಡೆ ಬರುತ್ತದೆ. ಈ ಮರಿಹುಳಗಳಿಗೆ ದುಡಿಮೆಗಾರ ಜೇನುಹುಳಗಳು ಬೇಕಾದ ಊಟವನ್ನು ಒದಗಿಸುತ್ತವೆ. ಮರಿಹುಳಗಳಿಗೆ ಒದಗಿಸುವ ಊಟವು ‘ಜೇನುಗಂಜಿ‘ (Royal jelly) ಮತ್ತು ಜೇನುರೊಟ್ಟಿ (Bee Bread) ಆಗಿರುತ್ತದೆ. ಹೆಚ್ಚು ಮುನ್ನುಗಳಿರುವ (protein) ಹೂವಿನ ಬಂಡು (pollen), ಜೇನುತುಪ್ಪ ಮತ್ತು ಜೇನುಹುಳಗಳೇ ಹೊರಹಾಕುವ ದೊಳೆ(enzyme)ಗಳನ್ನು ಸೇರಿಸಿ ಜೇನುಗಂಜಿಯನ್ನು ಈ ದುಡಿಮೆಗಾರ ಹುಳಗಳು ಅಣಿಮಾಡುತ್ತವೆ. ಜೇನುರೊಟ್ಟಿ ಎಂಬುದನ್ನು ಜೇನುತುಪ್ಪ ಮತ್ತು ಹೂವಿನ ಬಂಡನ್ನು ಸೇರಿಸಿ ಹುಳಗಳು ತಯಾರಿಸಿರುತ್ತವೆ.

ಹೀಗೆ ದುಡಿಮೆಗಾರ ಹುಳಗಳಿಂದ ಆರೈಕೆ ಮಾಡಿಸಿಕೊಂಡ ಮರಿಹುಳಗಳು ಬೆಳೆಯುತ್ತಿದ್ದಂತೆ, ಅವುಗಳ ಗೂಡುಗಳನ್ನು ದುಡಿಮೆಗಾರ ಹುಳಗಳು ಮೇಲಿನಿಂದ ಮೇಣವನ್ನು ಬಳಸಿ ಮುಚ್ಚುತ್ತವೆ, ಇದು ಮರಿಹುಳಗಳನ್ನು ಹೊರಗಿನ ತೊಂದರೆಗಳಿಂದ ಕಾಪಾಡುತ್ತದೆ ಮತ್ತು ಅವುಗಳ ಬೆಳವಣಿಗೆಗೆ ಬೇಕಾದ ಬಿಸುಪನ್ನು ಕಾದುಕೊಳ್ಳುತ್ತದೆ. ಮುಚ್ಚಿದ ಗೂಡಿನೊಳಗಿರುವ ಮರಿಹುಳ ಮತ್ತಷ್ಟು ಬೆಳೆದು ಗೂಡುಹುಳದಹಂತಕ್ಕೆ ಹೋಗುತ್ತದೆ. ಬಳಿಕ ಗೂಡುಹುಳದಿಂದ ಜೇನುಹುಳ ಹೊರಗೆ ಬರುತ್ತದೆ. ಇದು ಗೂಡಿನ ಮುಚ್ಚನ್ನು ಒಡೆದು ಹೊರಬಂದು ಉಳಿದ ಹುಳಗಳೊಡನೆ ಬೆರೆತು ಬೆಳೆಯುತ್ತದೆ.

ಮೊಟ್ಟೆಯಿಂದ ಒಡತಿ, ಗಂಡುಹುಳ ಮತ್ತು ದುಡಿಮೆಗಾರ ಹುಳಗಳು ಆಗುವ ಬಗೆಯನ್ನು ಈ ಕೆಳಗಿನ ಚಿತ್ರದಲ್ಲಿ ಕಾಣಬಹುದು:

ಒಡತಿ ಜೇನುಹುಳ:

ದುಡಿಮೆಗಾರ ಜೇನುಹುಳಗಳು ಯಾವ ಮರಿಹುಳವು ಒಡತಿ ಜೇನುಹುಳವಾಗಬೇಕೆಂದು ಆರಿಸುತ್ತವೆ. ಹಾಗಾಗಿ, ಒಡತಿಯಾಗುವ ಆ ಮರಿಹುಳಕ್ಕೆ ಹೆಚ್ಚು ಜೇನುಗಂಜಿಯನ್ನು ಒದಗಿಸುತ್ತವೆ. ತನ್ನ ಮರಿಹುಳದ ಹಂತದ ಕೊನೆಯವರೆಗೂ ಒಡತಿಯು ಊಟವನ್ನು ಪಡೆಯುತ್ತದೆ. ಇದು ಒಡತಿಯ ಹೆರುವ ಅಂಗಗಳು ಮತ್ತು ಸುರಿಗೆ(hormone)ಗಳ ಬೆಳವಣಿಗೆಗೆ ನೆರವಾಗುತ್ತದೆ. ಒಡತಿಯು ದುಡಿಮೆಗಾರ ಹುಳಕ್ಕಿಂತ ಒಂದೂವರೆ ಪಟ್ಟು ದೊಡ್ಡದಿರುತ್ತದೆ. ತನ್ನ ಬಾಳಿನುದ್ದಕ್ಕೂ ಇದು ಜೇನುಗಂಜಿಯನ್ನು ತಿಂದೇ ಬದುಕುತ್ತದೆ.

ಮೊಟ್ಟೆಯೊಡೆದು ಹೊರಬರುವ ಹೊಸ ಒಡತಿ ಹುಳವು ಮೊದಲು ಮಾಡುವ ಕೆಲಸವೆಂದರೆ, ಉಳಿದ ಗೂಡುಗಳಿಗೆ ಹೋಗಿ ಅಲ್ಲಿ ಯಾವುದಾದರು ಒಡತಿಯಾಗುತ್ತಿರುವ ಗೂಡುಹುಳವಿದ್ದರೆ ಅದಕ್ಕೆ ತನ್ನ ಕೊಂಡಿಯಿಂದ ನಂಜನ್ನು ಚುಚ್ಚಿ ಸಾಯಿಸುವುದು. ಬಳಿಕ ಜೇನುಗೂಡಿನ ತುಂಬೆಲ್ಲಾ ಓಡಾಡಿ ಆಗುತ್ತಿರುವ ಕೆಲಸವನ್ನು ಗಮನಿಸುತ್ತದೆ. ಈ ಹೊಸ ಒಡತಿ ಹುಳವನ್ನು ಒಮ್ಮೆಲೆ ಒಡತಿ ಹುಳವೆಂದು ಉಳಿದ ದುಡಿಮೆಗಾರ ಹುಳಗಳು ಒಪ್ಪಿಕ್ಕೊಳ್ಳುವುದಿಲ್ಲ. ಒಡತಿ ಎಂದು ಹೇಳಿ ತಿರುಗುತ್ತಿರುವ ಈ ಹುಳವು ಗೂಡಿನಿಂದ ಹೊರಬಂದ ಎರಡು ಮೂರು ವಾರಗಳಲ್ಲಿ ಗಂಡು ಜೇನುಹುಳದ ಜೊತೆ ಒಂದಾಗಿ ಮೊಟ್ಟೆಗಳನ್ನಿಡುವ ಸುಳಿವನ್ನು ನೀಡಬೇಕು. ಆಗ ಮಾತ್ರ ಇದನ್ನು ಒಡತಿ ಎಂದು ಎಲ್ಲರು ಒಪ್ಪಿಕೊಳ್ಳುತ್ತಾರೆ, ಇಲ್ಲವಾದರೆ ದುಡಿಮೆಗಾರ ಹುಳಗಳು ಈ ಒಡತಿಯ ಸಾಯಿಸಿಯೋ, ಓಡಿಸಿಯೋ ಇನ್ನೊಂದು ಒಡತಿ ಹುಳವನ್ನು ನೇಮಿಸುತ್ತವೆ.

ಗೂಡಿನಿಂದ ಹೊರಬಂದ ಆರನೇ ದಿನಕ್ಕೆ ಒಡತಿ ಹುಳವು ಮೈನೆರೆದು ಗಂಡು ಹುಳದೊಡನೆ ಒಂದಾಗಲು ಸಿದ್ಧವಾಗಿರುತ್ತದೆ. ಮೊದಲು ಗೂಡಿನ ಸುತ್ತಲು ಅದು ತನ್ನ ಹಾರಾಟವನ್ನು ಆರಂಬಿಸುತ್ತದೆ. ಗೂಡಿನ ಸುತ್ತ ಹಾರಾಡುವುದರಿಂದ ಅದರ ಕಂಡಗಳು ಬಲಗೊಳ್ಳುತ್ತವೆ. ಕಂಡಗಳು ಬಲಗೊಳ್ಳುವುದರಿಂದ ಹೆಚ್ಚು ಗಂಡು ಹುಳಗಳ ಜೊತೆ ಒಂದಾಗಲು ಸಾಧ್ಯವಾಗುತ್ತದೆ, ಹಾಗಾಗಿ ಹೆಚ್ಚು ಗಂಡುಬಿತ್ತುಗಳನ್ನು (sperms) ಪಡೆದುಕೊಳ್ಳಲು ನೆರವಾಗುತ್ತದೆ. ಇದರಿಂದ ಒಡತಿ ಜೇನುಹುಳದ ಹುಟ್ಟಿಸುವಿಕೆಯ ಕಸುವು ಹೆಚ್ಚುತ್ತದೆ. ಇದು ಎರಡು ವಾರಗಳಲ್ಲಿ ಗಂಡು ಹುಳಗಳ ಜೊತೆ ಒಂದಾಗಿ ಮೊಟ್ಟೆಗಳನ್ನು ಇಡುವ ಸೂಚನೆ ಕೊಡಬೇಕು, ಇಲ್ಲವಾದರೆ ಅದು ಬೇಟದ (sexual) ಹರೆಯ ದಾಟಿದೆ ಎಂದು ಬೇರೆ ಒಡತಿಯನ್ನು ನೇಮಿಸಲಾಗುತ್ತದೆ.

ಒಂದು ಒಡತಿ ಹುಳವು ತನ್ನ ಹರೆಯದಲ್ಲಿ ಸುಮಾರು 40 ಗಂಡು ಹುಳಗಳ ಜೊತೆ ಒಂದಾಗುತ್ತವೆ. ತಾನು ಮೊಟ್ಟೆಯಿಡಲು ಶುರುಮಾಡಿದರೆ ದಿನಕ್ಕೆ 2000 ದ ತನಕ ಮೊಟ್ಟೆಗಳನ್ನಿಡುತ್ತವೆ. ಒಂದು ಒಡತಿ ಹುಳವು ಸುಮಾರು 5 ವರುಶಗಳವರೆಗೆ ಬದುಕಬಲ್ಲದು, ಆದರೆ ವಯಸ್ಸಾದಂತೆ ಅದರೆ ಮೊಟ್ಟೆಗಳನ್ನಿಡುವ ಕಸುವು ಕಡಿಮೆಯಾಗುತ್ತದೆ. ಆಗ ಗೂಡಿನ ಹುಳಗಳು ಅದನ್ನು ಬದಲು ಮಾಡಬಹುದು. ಅಲ್ಲದೇ, ಗಾಳಿಪಾಡು (weather) ಮತ್ತು ಹೊರಗಿನ ತೊಂದರೆಗಳಿಂದಲೂ ಇದು ತನ್ನ ಮೊಟ್ಟೆಯಿಡುವ ಕಸುವನ್ನು ಕಳೆದುಕೊಂಡು ಒಡತಿಯ ಜಾಗದಿಂದ ಕೆಳಗಿಳಿಯಬಹುದು. ಹೊಸ ಒಡತಿಯೊಂದು ಗೂಡಿನಲ್ಲಿ ಬೆಳೆಯುವಾಗ ಈಗಾಗಲೇ ಇರುವ ಒಡತಿ ಏನಾಗುತ್ತದೆ ಎಂಬ ಪ್ರಶ್ನೆ ನಮ್ಮಲ್ಲಿ ಮೂಡುತ್ತದೆ. ಈಗಾಗಲೇ ಗೂಡಿನಲ್ಲಿರುವ ಒಡತಿ ತನ್ನ ಮೊಟ್ಟೆಯಿಡುವ ಕಸುವನ್ನು ಚೆನ್ನಾಗಿರಿಸಿಕೊಂಡಿದ್ದರೆ ಅದು ಕೆಲವು ದುಡಿಮೆಗಾರ ಹುಳಗಳ ಒಡನೆ ಇನ್ನೊಂದು ಜಾಗಕ್ಕೆ ಹಾರಿಹೋಗುತ್ತದೆ, ಅಲ್ಲಿ ಮತ್ತೊಂದು ಜೇನುಗೂಡು ಹುಟ್ಟುತ್ತದೆ.

ಒಡತಿ, ಗಂಡು ಮತ್ತು ದುಡಿಮೆಗಾರ ಹುಳಗಳ ಬೆಳವಣಿಗೆಯ ದಿನದ ಹಂತಗಳನ್ನು ಈ ಕೆಳಗಿನ ಪಟ್ಟಿಯಲ್ಲಿ ನೋಡಬಹುದು.

ಗಂಡು ಜೇನುಹುಳ:

ನಾವು ಮೊದಲೇ ತಿಳಿದಂತೆ ಒಡತಿ ಹುಳವು ಗಂಡು ಹುಳದ ಜೊತೆ ಒಂದಾಗದೆ, ಬಸಿರಿಲ್ಲದೆಯೂ ಕೂಡ ಮೊಟ್ಟೆಗಳನ್ನು ಇಡಬಲ್ಲದು. ಇಂತಹ ಬಸಿರಿಲ್ಲದೆ ಇಟ್ಟ ಮೊಟ್ಟೆಗಳಿಂದ ಮೂಡಿದ ಹುಳಗಳೇ ಗಂಡುಹುಳಗಳು. ಮೊಟ್ಟೆಯೊಡೆದ ಹದಿನಾರು ದಿನಗಳಿಗೆ ಗಂಡು ಹುಳವು ಮೈನೆರೆಯುತ್ತದೆ. ಜೇನುಗೂಡಿನ ಸುತ್ತ ಹಾರಾಡುತ್ತ ಒಡತಿ ಜೇನುಹುಳವನ್ನು ಕಂಡು ಒಂದಾಗುವುದು ಇದರ ಕೆಲಸವಾಗಿರುತ್ತದೆ.

ಈ ಗಂಡುಹುಳದ ಮುಕ್ಯ ಕೆಲಸವೇ ಒಡತಿ ಹುಳದ ಜೊತೆ ಒಂದಾಗಿ ಜೇನು ಹುಳದ ಸಂತತಿಯನ್ನು ಬೆಳೆಸುವುದು, ಈ ಕೆಲಸಕ್ಕಾಗಿ ಅದಕ್ಕೆ ದಕ್ಕುವ ಬಹುಮಾನ ಎಂದರೆ ಸಾವು! ಹೌದು, ಒಂದು ಗಂಡು ಜೇನುಹುಳವು, ಒಮ್ಮೆ ಒಡತಿ ಜೇನಿನ ಜೊತೆ ಒಂದಾದ ಕೂಡಲೆ ಅದರ ಬೇಟದ ಅಂಗವು (sexual organ) ಕಿತ್ತು ಒಡತಿ ಹುಳದೊಳಗೆ ಉಳಿಯುತ್ತದೆ. ಇದರಿಂದ ಗಂಡು ಹುಳವು ಸಾವನ್ನಪ್ಪುತ್ತದೆ ಮತ್ತು ಒಡತಿ ಹುಳವು 100% ಗಂಡುಬಿತ್ತನ್ನು (Sperm) ಪಡೆದು ತನ್ನಲ್ಲಿಟ್ಟುಕೊಳ್ಳುತ್ತದೆ. ಗಂಡು ಹುಳಗಳು ಗೂಡಿನಲ್ಲಿ ಯಾವುದೇ ಹೆಚ್ಚಿನ ಕೆಲಸ ಮಾಡುವುದಿಲ್ಲ. ಚಳಿಗಾಲದಲ್ಲಿ ರಕ್ಕೆಯನ್ನು ಬಡಿದು ಗೂಡಿನ ಬಿಸುಪನ್ನು ಕಾಯ್ದುಕೊಳ್ಳಲು ಇವು ನೆರವು ನೀಡುತ್ತವೆ ಅದನ್ನು ಬಿಟ್ಟರೆ ಗೂಡುಕಟ್ಟುವುದಾಗಲಿ, ಮೇವು ತರುವುದಾಗಲಿ ಇನ್ನಿತರ ಯಾವ ಕೆಲಸವನ್ನು ಮಾಡುವುದಿಲ್ಲ. ಗಂಡುಹುಳಗಳು ಒಡತಿಯ ಜೊತೆ ಒಂದಾದಾಗ ಸಾಯುತ್ತವೆ, ಇಲ್ಲವೇ ಹಸಿವಿನಿಂದ, ಹೊರಗಿನ ದಾಳಿಯಿಂದ ಸಾಯುತ್ತವೆ.

ದುಡಿಮೆಗಾರ ಹುಳಗಳು:
ಒಡತಿಯು ಗಂಡು ಹುಳಗಳ ಜೊತೆ ಒಂದಾಗಿ ಬಸಿರಾಗಿ ಇಡುವ ಮೊಟ್ಟೆಗಳಿಂದ ಮೂಡಿಬರುವ ಹುಳಗಳೇ ದುಡಿಮೆಗಾರ ಹುಳಗಳು. ಈ ಬಗೆಯಲ್ಲಿ ಹುಟ್ಟುವ ದುಡಿಮೆಗಾರ ಹುಳಗಳು ಹೆಣ್ಣು ಹುಳಗಳೇ ಆಗಿರುತ್ತವೆ. ಒಡತಿ ಮತ್ತು ಗಂಡುಹುಳಕ್ಕಿಂತ ಚಿಕ್ಕದಾಗಿ ಕಾಣುವ ಇವು ಗೂಡನ್ನು ಕಟ್ಟುವುದು, ಮೊಟ್ಟೆಗಳ ಆರೈಕೆ, ಒಡತಿಯ ಆರೈಕೆ, ಗೂಡಿನ ಆರೈಕೆ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಹೂವಿಂದ ಹೂವಿಗೆ ಹಾರಿ ಜೇನನ್ನು ತುಂಬಿಕೊಂಡು ಬಂದು ಕೂಡಿಡುವುದು. ಅದಕ್ಕಾಗಿ ಇವು ನಿಜವಾದ ದುಡಿಮೆಗಾರ ಹುಳಗಳು.

ಗೂಡಿನ ಎಲ್ಲಾ ಕೆಲಸಗಳನ್ನು ನೋಡಿಕೊಂಡು ಎಣಿಕೆಯಲ್ಲಿಯೂ ಕೂಡ ಹೆಚ್ಚಿರುವ ಈ ದುಡಿಮೆಗಾರ ಹುಳಗಳನ್ನು, ‘ಜೇನುಗೂಡಿನ ಬೆನ್ನೆಲುಬು’ ಎಂದು ಕರೆಯುತ್ತಾರೆ. ಚಳಿಗಾಲದಲ್ಲಿ ಹೆಚ್ಚಾಗಿ ಗೂಡಿನಲ್ಲೇ ಇರುವ ದುಡಿಮೆಗಾರ ಹುಳಗಳು ರಕ್ಕೆಯನ್ನು ಬಡಿದು ಗೂಡಿನ ಬಿಸುಪನ್ನು ಕಾಪಾಡುತ್ತವೆ. ಮೇವಿಗಾಗಿ ಹೆಚ್ಚು ಹಾರಾಟ ನಡೆಸದೇ ಹೋದಲ್ಲಿ ಇವುಗಳು 4-5 ತಿಂಗಳು ಬದುಕುತ್ತವೆ. ಆದರೆ ಮೇವಿಗಾಗಿ ಹೂವಿಂದ ಹೂವಿಗೆ ಹೆಚ್ಚು ತಿರುಗಾಟ ಮಾಡುತ್ತಿದ್ದರೆ ಕೇವಲ 1-2 ತಿಂಗಳು ಮಾತ್ರ ಬದುಕುತ್ತವೆ.
ಹೀಗೆ ಒಡತಿ, ಗಂಡು ಮತ್ತು ದುಡಿಮೆಗಾರ ಹುಳಗಳು ತಮ್ಮ ಕೆಲಸಗಳನ್ನು ನಡೆಸುತ್ತ, ಒಂದಕ್ಕೊಂದು ನೆರವಾಗಿ ಜೇನುಗೂಡಿನಲ್ಲಿ ಸಂಸಾರ ನಡೆಸುತ್ತಿರುತ್ತವೆ.

(ಮಾಹಿತಿ ಮತ್ತು ಚಿತ್ರಸೆಲೆ: theholyhabibee.comgetbuzzingaboutbees.com)

ಮಿದುಳ್ ಬಂಡಿ

ಜಯತೀರ್ಥ ನಾಡಗೌಡ.

ಹೆದ್ದಾರಿಯೊಂದರಲ್ಲಿ ಬಂಡಿಯಲ್ಲಿ ಸಾಗುತ್ತಿದ್ದೀರಿ, ಸಾಲು ಬದಲಿಸಬೇಕೆಂದು(Lane change) ನೀವು ಅಂದುಕೊಳ್ಳುತ್ತಿದ್ದಂತೆ ನಿಮ್ಮ ಬಂಡಿ ಸಾಲು ಬದಲಿಸಿಬಿಟ್ಟಿರುತ್ತದೆ. ಕಡಿದಾದ ಕಣಿವೆಯ ತಿರುವೊಂದರಲ್ಲಿ ಗಾಡಿ ತಿರುಗಿಸಬೇಕಲ್ಲ ಎಂದು ನೀವು ವಿಚಾರ ಮಾಡುತ್ತಿರುವಾಗಲೇ ನಿಮ್ಮ ಗಾಡಿ ತಿರುವಿಕೊಂಡು ಮುನ್ನುಗ್ಗಿರುತ್ತದೆ. ಇದೇನಿದು ಎಂದುಕೊಳ್ಳುತ್ತಿದ್ದೀರಾ? ಹೌದು, ಇದೇ ಬ್ರೈನ್ ಟು ವೆಹಿಕಲ್(Brain to Vehicle) ಅನ್ನುವ ಹೊಸ ಚಳಕ(Technology).

ಜಗತ್ತಿನ ಮುಂಚೂಣಿಯ ಬಂಡಿ ತಯಾರಕ ಕೂಟ ನಿಸ್ಸಾನ್(Nissan) ಇಂತದೊಂದು ಹೊಸ ಚಳಕ ಎಲ್ಲರ ಮುಂದಿಟ್ಟಿದೆ. ಈ ಮಿದುಳ್ ಬಂಡಿಯನ್ನು (ಮಿದುಳಿನ ಅಲೆ ಗುರುತಿಸಿ ಕೆಲಸ ಮಾಡುವ ಬಂಡಿ), 2018ರ ಅಮೇರಿಕಾದಲ್ಲಿ ನಡೆದ ವರ್ಡ್ ಎಕಾನಾಮಿಕ್ ಫೋರಮ್‌ನಲ್ಲಿ(World Economic Forum) ನಿಸ್ಸಾನ್ ಕೂಟ ಈ ಚಳಕದ ಪರಿಚಯ ಮಾಡಿಸಿತ್ತು. ಫೋರಮ್ ನಲ್ಲಿ ಸೇರಿದ್ದ ಮಂದಿಗೆ, ಹೆದ್ದಾರಿಯಲ್ಲಿ ಇಂತ ಗಾಡಿ ಓಡಿಸುವ ಅವಕಾಶ ನೀಡಲಾಗಿತ್ತು. ಈ ಚಳಕ ಅಳವಡಿಸಿಕೊಂಡ ಗಾಡಿ, ದಿಟಹೊತ್ತಿನಲ್ಲಿ(Real Time) ತಂತಾನೇ ಹೊಂದಾಣಿಕೆ ಮಾಡಿಕೊಂಡು ಸಾಗುವ ಹೊಸ ಅನುಭವವೊಂದನ್ನು ಓಡಿಸುಗರಿಗೆ ನೀಡಿತ್ತು. ಮಿದುಳಿನ ಅಲೆಗಳ ಮೂಲಕ ಓಡಿಸುಗನ ಕೆಲಸ ಮಾಡುವುದು ಮತ್ತು ಓಡಿಸುಗರ ಅನಾನುಕೂಲಗಳನ್ನು ತಿಳಿಯುವುದು – ಈ ಏರ್ಪಾಟಿನ ಪ್ರಮುಖ ಕೆಲಸ.

ಈ ಚಳಕವನ್ನು ಎರಡು ಭಾಗಗಳಲ್ಲಿ ಬೇರ್ಪಡಿಸಬಹುದು, ಮೊದಲನೇಯದಾಗಿ ಮುನ್ಹೊಳಹುವಿಕೆ(Prediction): 

ಗಾಡಿಯನ್ನು ಓಡಿಸುಗನೇ ಓಡಿಸುತ್ತಿರುವಾಗ(Normal mode), ಓಡಿಸುಗನ ಮಿದುಳಿನ ಚಟುವಟಿಕೆಯನ್ನು ಈ ಚಳಕ ಮೊದಲೇ ಅರಿತು, ಆತ ಬಂಡಿಯನ್ನು ತಿರುಗಿಸಿಕೊಳ್ಳುವ ಇಲ್ಲವೇ ಬಂಡಿಯ ವೇಗ(Speed) ಹೆಚ್ಚಿಸಲು ತುಳಿಗೆಯನ್ನು(Accelerator Pedal) ಹೆಚ್ಚಿಗೆ ಒತ್ತುವ ಕ್ಷಣಗಳ ಮೊದಲೇ ಈ ಕೆಲಸ ನಡೆದು ಹೋಗಿರುತ್ತದೆ. ಅಂದರೆ ಇಲ್ಲಿ ಮಾರ್ಪೆಸಕದ ಹೊತ್ತು(Reaction Time) ಕಡಿತಗೊಂಡು, ಗಾಡಿ ಓಡಿಸುವಿಕೆಯ ನಲಿವನ್ನು ಹೆಚ್ಚಿಸುತ್ತದೆ. ಉದಾಹರಣೆಗೆ, ಇಕ್ಕಟ್ಟಿನ ಬೆಟ್ಟ-ಗುಡ್ಡದ ದಾರಿಯಲ್ಲಿ ಓಡಿಸುಗರು ಸಲೀಸಾಗಿ ಗಾಡಿ ಓಡಿಸಿಕೊಂಡು ಹೋಗಬಹುದು. ಇಂತಲ್ಲಿ, ನುರಿತ ಓಡಿಸುಗರು, ಈ ಚಳಕದ ಮೂಲಕ ತಮ್ಮ ಅಳವುತನವನ್ನು(Efficiency) ಇನ್ನೂ ಹೆಚ್ಚಿಸಿಕೊಳ್ಳಬಹುದು.

ಚಳಕದ ಎರಡನೇ ಬಾಗಕಂಡುಹಿಡಿಯುವಿಕೆ(Detection): 

ಈ ಹಂತದಲ್ಲಿ ಗಾಡಿ ತಂತಾನೇ ಸಾಗುವ ಬಗೆಯಲ್ಲಿದೆ(Autonomous Mode) ಎಂದುಕೊಳ್ಳಿ, ಈಗಲೂ ಓಡಿಸುಗನ ಮಿದುಳಿನಲ್ಲಿ ಬರುವ ಯೋಚನೆಗಳನ್ನು ಅದು ತಿಳಿದುಕೊಳ್ಳುತ್ತಿರುತ್ತದೆ. ಕಟ್ಟುಜಾಣ್ಮೆಯ(Artificial Intelligence) ಮೂಲಕ ಓಡಿಸುಗನ ಕಿರಿಕಿರಿ, ಅನಾನುಕೂಲಗಳನ್ನು ಅರಿಯುವ ಈ ಚಳಕ, ಬಂಡಿ ಓಡಿಸುವ ಬಗೆಯನ್ನು ಬದಲಿಸುವ ಕೆಲಸ ಮಾಡುತ್ತದೆ. ಉದಾಹರಣೆಗೆ, ಹೆದ್ದಾರಿಯಲ್ಲಿ ಹೋಗುವಾಗ, ಗಾಡಿ ತಂತಾನೇ ಒಂದು ವೇಗದಲ್ಲಿ ಸಾಗುತ್ತಿರುತ್ತದೆ, ಆಗ ಓಡಿಸುಗ ತನ್ನ ಬಂಡಿ ಹೆಚ್ಚಿನ ವೇಗದ ಸಾಲು(Fast Speed Lane) ಯಲ್ಲಿ ಸಾಗಬೇಕೆಂದುಕೊಂಡರೆ, ಕೆಲವು ಸೆಕೆಂಡುಗಳ ನಂತರ ಬಂಡಿ ಅದನ್ನರಿತು, ಓಡಿಸುಗ ಅಂದುಕೊಂಡಂತೆ ಅವನಿಷ್ಟದ ಓಣಿಯಲ್ಲಿ ಸಾಗುತ್ತದೆ.

ನಿಸ್ಸಾನ್‌ರವರ ಮಿದುಳ್ ಬಂಡಿ ಚಳಕ, ಗಾಡಿಗೆ ಸಂಬಂಧಿಸಿದಂತೆ, ದಿಟಹೊತ್ತಿನಲ್ಲಿ ಮಿದುಳಿನ ಅಲೆಗಳನ್ನು, ಚಟುವಟಿಕೆಗಳನ್ನು ಅರಿಯುವ ಮೊಟ್ಟ ಮೊದಲ ಚಳಕವಾಗಿದೆ. ಮಿದುಳಿನ ಅಲೆ ಅರಿಯಲು ಈ ಚಳಕದಲ್ಲಿ ಓಡಿಸುಗ ಒಂದು ಟೋಪಿ ತಲೆಗೆ ಧರಿಸಬೇಕು. ಈ ಟೋಪಿ ಸಾಮಾನ್ಯ ಟೋಪಿಯಾಗಿರದೇ, ಎಲೆಕ್ಟ್ರೊಎನ್ಸಿಫಾಲೋಗ್ರಫಿ(Electroencephalography) ಬಳಸಿ ಓಡಿಸುಗನ ಮಿದುಳಿನ ಅಲೆಗಳ ಅರಿವುಕಗಳ(Brain Wave Sensors) ಮೂಲಕ ಓಡಿಸುಗನ ಯೋಚನೆಗಳನ್ನು ದಿಟಹೊತ್ತಿನಲ್ಲಿ ಅರಿತು ಗಾಡಿಯ ಗಣಕಕ್ಕೆ(Computer) ಸಾಗಿಸುವಂತದ್ದು. ಇನ್ನೇನು ಗಾಡಿ ಓಡಿಸುಗ ತುಳಿಗೆಯನ್ನು ಬಲವಾಗಿ ತುಳಿಯಬೇಕು, ಬಂಡಿಯನ್ನು ತಿರುಗಿಸಬೇಕು ಎಂದುಕೊಳ್ಳುತ್ತಿರುವ 0.2 ರಿಂದ 0.5 ಸೆಕೆಂಡುಗಳ ಮೊದಲೇ ಆ ಕೆಲಸವನ್ನು ಬಂಡಿ ಮಾಡಿರುತ್ತದೆ.

ಮಿದುಳ್ ಬಂಡಿ ಓಡಿಸುಗರು ಧರಿಸಬೇಕಾದ ಟೋಪಿ

ಈ ಚಳಕವನ್ನು ಓಡಿಸುಗರ, ಪಯಣಿಗರ ಮತ್ತು ಬಂಡಿಯ ಕಾಪಿನ(Safety) ಬಗ್ಗೆ ಯಾವುದೇ ರಾಜಿಮಾಡಿಕೊಳ್ಳದಂತೆ ತಯಾರು ಮಾಡಲಾಗುತ್ತಿದೆ. ಈ ಹೊಸ ಚಳಕದ ಮೇಲೆ ಬಲು ನಂಬುಗೆ ಇಟ್ಟುಕೊಂಡಿರುವ ನಿಸ್ಸಾನ್ ಕೂಟದ ಮಾರಾಟ ವಿಭಾಗದ ಹಿರಿಯಾಳು ಡ್ಯಾನಿಯಲ್ ಶಿಲ್ಲಾಚಿ(Daniele Schillaci), ಮುಂಬರುವ ವರುಶಗಳಲ್ಲಿ ತಂತಾನೇ ಓಡುವ ಗಾಡಿಗಳ ಸಂಖ್ಯೆ ಏರಿಕೆಯಾಗಲಿದ್ದು, ಅಲ್ಲಿ ತಮ್ಮ ಮಿದುಳ್ ಬಂಡಿ ಚಳಕ ಸಾಕಷ್ಟು ಕ್ರಾಂತಿ ಉಂಟುಮಾಡಲಿದೆಯೆಂದು ಹೇಳಿಕೊಂಡಿದ್ದಾರೆ. ಈ ಚಳಕ ಬಲು ಭದ್ರವಾಗಿದ್ದು(Safe), ಓಡಿಸುಗರಿಗೆ ಹೊಸ ಹುರುಪು ಮತ್ತು ನಲಿವು ತರಲಿದೆ ಎನ್ನುತ್ತಾರೆ-ಶಿಲ್ಲಾಚಿ.

ಈ ಚಳಕದ ಅನಾನುಕೂಲವೆಂದರೆ ಇಲ್ಲಿ ಓಡಿಸುಗನ ಮಿದುಳಿನಲ್ಲಿ ನಡೆಯುವ ಚಟುವಟಿಕೆಗಳನ್ನು ಅರಿಯುವುದರ ಮೂಲಕ ಅವರ ಗುಟ್ಟಿನ(Privacy) ವಿಷಯ ಇತರರಿಗೆ ತಿಳಿಯುವ ಸಾಧ್ಯತೆ ಇರುತ್ತದೆ. ಇದರ ಬಗ್ಗೆ ಸಾಕಶ್ಟು ಚರ್ಚೆಗಳು ನಡೆಯುತ್ತಿವೆ. ಓಡಿಸುಗನ ತಲೆಯಲ್ಲಿ ಬರುವ ವಿಚಾರಗಳು ಗಾಡಿಯ ಗಣಕದ ಮೂಲಕ ತಿಳಿದು ಆಯಾ ವ್ಯಕ್ತಿಗಳ ಪ್ರೈವೆಸಿಗೆ ಅಡ್ಡಿಯುಂಟಾಗುವುದು ಖಚಿತ. ಇನ್ನೂ ಗಾಡಿಯ ಗಣಕದ ಮೂಲಕ ಈ ವಿಚಾರಗಳು ಇತರರಿಗೆ ಸೋರಿಕೆಯಾದರೆ ಹೆಚ್ಚಿನ ತೊಂದರೆ ತಪ್ಪಿದಲ್ಲ. ಈ ಅನಾನುಕೂಲ ಮೆಟ್ಟಿ, ಹೊಸ ಚಳಕದಲ್ಲಿ ಹೇಗೆ ನಿಸ್ಸಾನ್ ಕೂಟದವರು ಗೆಲುವು ಕಾಣಲಿದ್ದಾರೆ ಎಂದು ಜಗತ್ತೇ ಎದುರುನೋಡುತ್ತಿದೆ. ಕಳೆದ 2-3 ವರ್ಷಗಳಲ್ಲಿ ನಿಸ್ಸಾನ್ ತಮ್ಮ ಮಿದುಳ್-ಬಂಡಿಯ ಬೆಳವಣಿಗೆ ಬಗ್ಗೆ ಹೆಚ್ಚಿನ ಗುಟ್ಟು ಬಿಟ್ಟುಕೊಟ್ಟಿಲ್ಲ. ಇದರರ್ಥ ತಂತ್ರಜ್ಞಾನದ ಬಗ್ಗೆ ಇನ್ನೂ ಹೆಚ್ಚಿನ ಅರಕೆ ನಡೆಯುತ್ತಿರಬಹುದೆಂದು ಆಟೋಮೊಬೈಲ್ ವಲಯದಲ್ಲಿ ಕೇಳಿಬಂದ ಸುದ್ದಿ. ಬ್ರೈನ್-ಟು-ವೆಹಿಕಲ್ ಬೀದಿಗಿಳಿಯಲು ಇನ್ನೂ ಕಾಯಲೇಬೇಕು.

ಮಾಹಿತಿ ಮತ್ತು ತಿಟ್ಟ ಸೆಲೆ:  nissan

ಜೇನಿನ ಜಾಡು ಹಿಡಿದು

ರತೀಶ ರತ್ನಾಕರ.

‘ಸಾವಿರ ಹೂವ ಎದೆಹನಿ ಬೇಕು ಜೀನಿನ ಗೂಡಾಗಲು… ಸಾವಿರ ಭಾವ ಸಂದಿಸ ಬೇಕು ಕನ್ನಡ ನಾಡಾಗಲು…‘ ಈ ಹಾಡಿನ ಸಾಲುಗಳು ಹೇಳುವಂತೆ, ಸಾವಿರ ಹೂವಿನ ಸವಿಯನ್ನು ಕೂಡಿಟ್ಟು ಸಿಹಿಯಾದ ಜೇನನ್ನು ನೀಡುವ ಜೇನುಹುಳುಗಳ ಬದುಕು ಹಲವು ಸೋಜಿಗದಿಂದ ಕೂಡಿದೆ. ಪುಟ್ಟ ಹುಳುವಿನ ಬದುಕಿನ ಬಗೆಯನ್ನು ಅರಿಯ ಹೊರಟರೆ ನಮಗೆ ಸಾಕಷ್ಟು ಬೆರಗುಗಳು ಎದುರಾಗುತ್ತವೆ. ಈ ಹಸಿರು ನೆಲವು ನೀಡಿರುವ ಅಪರೂಪದ ಕೀಟ ಜೇನುಹುಳ ಎಂದರೆ ತಪ್ಪಾಗಲಾರದು. ಜೇನಿನ ಮಡಕೆ, ಪೆಟ್ಟಿಗೆಗಳನ್ನಿರಿಸಿ ಜೇನುಗಳಿಗೆ ಬೇಕಾದ ಕಾವು ಮತ್ತು ಗಾಳಿಪಾಡನ್ನು ಕೊಟ್ಟರೆ, ನಾವು ಇಟ್ಟ ಪೆಟ್ಟಿಗೆ-ಮಡಕೆಗಳಲ್ಲಿ ಜೇನುಗೂಡನ್ನು ಕಟ್ಟಿ, ಜೇನುತುಪ್ಪವನ್ನು ನಮಗೆ ಬಿಟ್ಟು ಹೋಗುತ್ತವೆ. ಇದ್ಯಾವುದು ಇಲ್ಲದಿದ್ದರೆ ತನ್ನ ಪಾಡಿಗೆ ಗಿಡದ ಕೊಂಬೆಯಲ್ಲೋ, ಮರದ ಪೊಟರೆಯಲ್ಲೋ ತನ್ನ ಗೂಡನ್ನು ಕಟ್ಟಿಕೊಂಡು ಬದುಕನ್ನು ಕಂಡುಕೊಳ್ಳುತ್ತದೆ. ಮಾನವನಿಗೆ ಬೇಕಾದರೆ ನೆರವಾಗುವ, ಬೇಡವಾದರೆ ತನ್ನ ಪಾಡಿಗೆ ತಾನು ಬದುಕುವ ಒಂದು ಬೆರಗಿನ ಹುಳು ಇದಾಗಿದೆ!

ಈ ನೆಲದಲ್ಲಿ ಇನ್ನೂ ಬದುಕಿರುವ ತುಂಬಾ ಹಳೆಯದಾದ ಪೀಳಿಗೆಗಳಲ್ಲಿ ಜೇನುಹುಳವು ಕೂಡ ಒಂದು. ನೆಲದ ಮೇಲೆ ಹೂವಿನ ಹುಟ್ಟು ಆದ ಹೊತ್ತಿನಲ್ಲಿ ಜೇನುಹುಳುಗಳ ಹುಟ್ಟು ಆಗಿರಬೇಕು ಎಂದು ಅಂದಾಜಿಸಲಾಗುತ್ತದೆ. ಹೂದುಂಬುಗೆ(Pollination)ಯಿಂದ ಹೂವಿನ ಪೀಳಿಗೆ ಬೆಳೆಯಲು ಜೇನುಹುಳ ಹಾಗು ಮತ್ತಿತರ ಕೀಟಗಳ ನೆರವು ಬೇಕಾಗುತ್ತದೆ. ಹಾಗೆಯೇ, ಹೂವಿನ ಸವಿಕುಡಿಗೆ(nectar)ಯನ್ನು ತಿಂದು ಬದುಕನ್ನು ನಡೆಸಲು ಜೇನಿಗೆ ಹೂವು ಬೇಕಾಗುತ್ತದೆ. ಒಂದಕ್ಕೊಂದು ನೆರವಾಗಿ ಹೀಗೆ ಉಳಿದು ಬೆಳೆದುಕೊಂಡು ಬಂದವು ಇವು.

ಕಾಡಿನಲ್ಲಿ ಅಲೆಮಾರಿಯಾಗಿದ್ದ ಮಾನವನಿಗೆ ಜೇನಿನ ಪರಿಚಯ ಮೊದಲೇ ಇದ್ದಿರಬೇಕು. ಆದರೂ, ಪುರಾವೆಗಳ ನೆರವಿನಿಂದ ಹೇಳುವುದಾದರೆ ಜೇನಿನ ಪರಿಚಯವು ಮಾನವನಿಗೆ ಸುಮಾರು 6000 C.E ದಿಂದ ಇರಬಹುದು ಎಂದು ಹೇಳಲಾಗಿದೆ. ಸ್ಪೇನ್ ನಲ್ಲಿ ಇರುವ ಕಲ್ಲುಕಾಲದ (Stone Age) ಗುಹೆಗಳಲ್ಲಿ, ಕೆತ್ತಿರುವ ಜೇನುಗೂಡಿನ ಚಿತ್ರಗಳು ಕಂಡುಬಂದಿವೆ. ಸುಮಾರು 3000 ವರುಶಗಳಷ್ಟು ಹಿಂದೆ ಕಟ್ಟಲಾಗಿರುವ ಈಜಿಪ್ಟಿನ ಹೂಳುಕಟ್ಟಡಗಳಲ್ಲಿಯೂ (Tomb) ಕೂಡ ಜೇನುಗೂಡಿನ ಚಿತ್ರಗಳು ಕಂಡುಬಂದಿವೆ. ಬಡಗಣ ಇಸ್ರೇಲಿನಲ್ಲಿ ಸುಮಾರು 3000 ವರುಶಗಳಷ್ಟು ಹಳೆಯದಾದ ಪಳೆಯುಳಿಕೆಗಳಲ್ಲಿ, ಆ ಕಾಲದ ಜೇನುಸಾಕಣೆಯ ಪಾಳು ಮಡಕೆಗಳು ಕಂಡುಬಂದಿವೆ. ನಮ್ಮ ಹಿರಿಯರಿಗೆ ತುಂಬಾ ಮುಂಚಿನಿಂದಲೇ ಪರಿಚಯವಿರುವ ಜೇನುಗಳು ನಮ್ಮ ಬದುಕಿಗೆ ಒಂದಲ್ಲ ಒಂದು ಬಗೆಯಲ್ಲಿ ನೆರವಾಗುತ್ತಾ ಬಂದಿವೆ.

ಜೇನುಹುಳವು ‘ಅಪಿಸ್‘(Apis) ಎಂಬ ಕೀಟದ ತಳಿಯಾಗಿದ್ದು (Genus) ಇದರಲ್ಲಿ ಐದು ಮುಖ್ಯವಾಗಿ ಪಂಗಡ (species)ಗಳಿವೆ. ಜೇನಿನ ಪಂಗಡಗಳು ಮತ್ತು ಅವು ಹೆಚ್ಚಾಗಿ ಕಂಡು ಬರುವ ಜಾಗಗಳ ವಿವರ ಕೆಳಗೆ ನೀಡಲಾಗಿದೆ.

 

ಜೇನುಗೂಡು:
ಯಾವುದೇ ಒಂದು ಜೇನುಗೂಡಿನಲ್ಲಿ ಬೇಸಿಗೆಯ ಹೊತ್ತಿನಲ್ಲಿ ಸುಮಾರು 40 – 60 ಸಾವಿರ ಜೇನುಹುಳುಗಳು ಇರುತ್ತವೆ. ಹಾಗೆಯೇ ಚಳಿಗಾಲದಲ್ಲಿ ಸುಮಾರು 20 ಸಾವಿರ ಜೇನುಹುಳುಗಳಿರುತ್ತವೆ. ಚಳಿಗಾಲದ ಹೊತ್ತಿಗೆ ಒಂದು ಜೇನುಗೂಡಿನಿಂದ ಹಲವು ಹುಳಗಳು ಬೇರೊಂದು ಒಡತಿ ಜೇನಿನ ಒಡಗೂಡಿ ಬೇರೆ ಗೂಡಿಗೆ ಹೋಗುವುದರಿಂದ ಮತ್ತು ಕೆಲವು ಗೂಡುಗಳಲ್ಲಿ, ಇನ್ನೂ ಮೊಟ್ಟೆಯೊಡೆದು ಜೇನುಹುಳಗಳು ಹೊರ ಬರದೇ ಇರುವುದರಿಂದ, ಚಳಿಗಾಲದಲ್ಲಿ ಅವುಗಳ ಎಣಿಕೆ ಒಂದು ಗೂಡಿನಲ್ಲಿ ಕಡಿಮೆಯಿರುತ್ತದೆ. ಒಂದು ಜೇನುಗೂಡಿನಲ್ಲಿ ಮೂರು ಬಗೆಯ ಜೇನುಹುಳಗಳಿರುತ್ತವೆ. ಅವೆಂದರೆ ಒಡತಿ ಜೇನುಹುಳ(Queen), ಗಂಡು ಜೇನುಹುಳ(Drone) ಮತ್ತು ದುಡಿಮೆಗಾರ ಜೇನುಹುಳಗಳು(Worker). ಒಂದು ಸಾಮಾನ್ಯವಾದ ಜೇನುಗೂಡಿನಲ್ಲಿ ಈ ಹುಳುಗಳ ಎಣಿಕೆ ಈ ಕೆಳಗಿನಂತಿರುತ್ತದೆ;
– 1 ಒಡತಿ ಜೇನುಹುಳ
– 100 – 300 ಗಂಡು ಜೇನುಹುಳಗಳು
– 20 – 60 ಸಾವಿರ ದುಡಿಮೆಗಾರ ಜೇನುಹುಳಗಳು
ಇದಲ್ಲದೇ, ಒಡತಿ ಜೇನುಹುಳವು ಇಟ್ಟ ಮೊಟ್ಟೆಗಳು, ಕಾವುಗೂಡುಗಳು (Brood), ಮೊಟ್ಟೆಯಿಂದ ಮರಿಯಾಗುವ ಹಂತದಲ್ಲಿರುವ ಲಾರ‍್ವ ಹಾಗು ಪ್ಯೂಪಗಳು ಒಂದು ಜೇನುಹುಟ್ಟಿನಲ್ಲಿ ಕಂಡುಬರುವ ಜೀವಿಗಳು.

ಜೇನುಹುಳದ ಒಡಲರಿಮೆ:
ಒಂದು ಜೇನುಹುಳವನ್ನು ಮೂರು ತುಂಡುಗಳಾಗಿ ನೋಡಬಹುದು. ಅವು ತಲೆ, ಬಗ್ಗರಿ(Thorax) ಮತ್ತು ಹೊಟ್ಟೆಯ ಭಾಗ (abdomen). ಜೇನಿನ ಮುಖ್ಯವಾದ ಭಾಗ ಗಳ ಬಗ್ಗೆ ಈ ಕೆಳಗೆ ನೀಡಲಾಗಿದೆ.

ತೆಲೆ: ಎದುರುಗಡೆಯಿಂದ ಜೇನುಹುಳದ ತಲೆಯನ್ನು ನೋಡಿದರೆ ಮುಮ್ಮೂಲೆಯ ಆಕಾರದಲ್ಲಿ ಕಾಣುತ್ತದೆ. ತಲೆಯ ಮುಖ್ಯವಾದ ಭಾಗ ಎಂದರೆ ಮಿದುಳು. ಜೇನುಹುಳದ ಮಿದುಳಿನಲ್ಲಿ ಸುಮಾರು 950,000 ನ್ಯೂರಾನ್ ಗಳು ಇವೆ. ತಲೆಯ ಭಾಗದಲ್ಲೇ ಕಣ್ಣು ಮತ್ತು ಎರಡು ಅರಿಗೊಂಬುಗಳು (Antennae) ಇವೆ.

ಅರಿಗೊಂಬುಗಳು: ಜೇನುಹುಳುವಿನ ಅರಿಗೆಗಳಾಗಿ (Sense Organ) ಇವು ಕೆಲಸ ಮಾಡುತ್ತವೆ. ಅರಿಗೊಂಬುಗಳಲ್ಲಿರುವ ಸಣ್ಣ ಸಣ್ಣ ಕೂದಲುಗಳು ವಾಸನೆ ಮತ್ತು ತಾಕುವಿಕೆಯ ಅರಿವನ್ನು ಮಿದುಳಿಗೆ ಕಳಿಸಲು ನೆರವಾಗುತ್ತವೆ.

ಕಣ್ಣುಗಳು: ಜೇನುಹುಳುವಿಗೆ ಒಟ್ಟು ಐದು ಕಣ್ಣುಗಳು! ಹೌದು, ಎರಡು ಕೂಡುಗಣ್ಣುಗಳು (compound eyes) ಮತ್ತು ಮೂರು ಸುಳುಗಣ್ಣುಗಳು(simple eyes) ಸೇರಿ ಒಟ್ಟು ಐದು ಕಣ್ಣುಗಳನ್ನು ಜೇನುಹುಳವು ಹೊಂದಿದೆ. ತುಂಬಾ ಚಿಕ್ಕದಾಗಿರುವ ಗಾಜಿನಂತಹ ಸಾವಿರಾರು ತುಣುಕುಗಳು ಸೇರಿ ಕೂಡುಕಣ್ಣುಗಳು ಆಗಿವೆ. ಈ ಸಣ್ಣ ತುಣುಕುಗಳನ್ನು ಒಮ್ಮಟಿಡಿಯಾ (ommatidia) ಎಂದು ಕರೆಯುತ್ತಾರೆ. ಕೂಡುಕಣ್ಣಿನ ಪ್ರತಿಯೊಂದು ತುಣುಕು, ತಾನು ಕಾಣುವ ಚಿತ್ರವನ್ನು ಮಿದುಳಿಗೆ ಕಳಿಸುತ್ತದೆ. ಹೀಗೆ ಎಲ್ಲಾ ತುಣುಕುಗಳಿಂದ ಬರುವ ಚಿತ್ರಗಳನ್ನು ಒಟ್ಟುಗೂಡಿಸಿ ಹೊರಗೆ ಒಟ್ಟಾರೆಯಾಗಿ ಏನು ಕಾಣುತ್ತಿದೆ ಎಂಬುದನ್ನು ಮಿದುಳು ಗುರುತಿಸುತ್ತದೆ. ಈ ಕೂಡುಕಣ್ಣಿನ ನೆರವಿನಿಂದ ಹೂಗಳ ಇಲ್ಲವೇ ತಾನು ಕಾಣುವ ಯಾವುದೇ ವಸ್ತುವಿನ ಅಲುಗಾಟವನ್ನು ಜೇನುಹುಳವು ಕೂಡಲೇ ಗುರುತಿಸಬಹುದು.
ಇನ್ನು, ಮೂರು ಸುಳುಗಣ್ಣುಗಳು ಕೂಡುಕಣ್ಣುಗಳ ಮೇಲೆ ಇವೆ. ಇವು ಬೆಳಕು ಮತ್ತು ಕಾಣುವ ಇತರೆ ಸಾಮಾನ್ಯ ವಸ್ತುಗಳನ್ನು ಗುರುತಿಸುತ್ತವೆ. ಮಾನವನ ಕಣ್ಣು ಕೆಂಪು-ಹಸಿರು-ನೀಲಿ (RGB) ಬಣ್ಣಗಳ ಪಟ್ಟಿಯನ್ನು ಗುರುತಿಸುವ ತಾಕತ್ತು ಹೊಂದಿದೆ ಆದರೆ ಜೇನುಹುಳದ ಕಣ್ಣು ಹಸಿರು-ನೀಲಿ-ಅತಿನೇರಳೆ (ultraviolet) ಬಣ್ಣಗಳನ್ನು ಮಾತ್ರ ಗುರುತಿಸಬಲ್ಲದು. ಇದು ಕೆಂಪು ಬಣ್ಣವನ್ನು ಗುರುತಿಸುವುದಿಲ್ಲ. ಆದರೂ ಕೆಂಪು ಹೂವಿನಿಂದ ಸವಿಯನ್ನು ಹೀರುತ್ತದೆ, ಅದಕ್ಕೆ ಕಾರಣ ಹೂವಿನ ಪರಿಮಳ ಮತ್ತು ಅದನ್ನು ಕಂಡುಹಿಡಿಯಲು ಜೇನುಹುಳಕ್ಕಿರುವ ಕಸುವು.

ಬಗ್ಗರಿ(Thorax) – ಜೇನುಹುಳದ ನಡುಭಾಗವಾಗಿರುವ ಬಗ್ಗರಿಯು ಆರು ಕಾಲುಗಳು ಮತ್ತು ಎರಡು ರೆಕ್ಕೆಗಳಿಗೆ ನೆಲೆಯಾಗಿದೆ.
ಕಾಲುಗಳು – ಪ್ರತಿಯೊಂದು ಕಾಲು ಮೂರು ತುಂಡುಗಳಾಗಿದ್ದು ಅವು ತೊಡೆಯೆಲುಬು (femur), ಕಣಕಾಲೆ (Tibia) ಮತ್ತು ಮುಂಗಾಲೆಲುತಂಡ(tarsus). ಕಾಲುಗಳನ್ನು ನಡೆಯಲು ಬಳಸಲಾಗುತ್ತದೆ. ಅಲ್ಲದೇ ಮುಂಭಾಗದ ಎರೆಡು ಕಾಲುಗಳಲ್ಲಿ ‘ಅರಿಗೊಂಬು ತೊಳಕ’ಗಳು (Antennae Cleaner) ಮತ್ತು ಹಿಂಬಾಗದ ಕಾಲುಗಳಲ್ಲಿ ಹೂವಿನ ಬಂಡನ್ನು(Pollen) ಕೂಡಿಟ್ಟುಕೊಳ್ಳಲು ‘ಬಂಡು ಚೀಲ’ (Pollen Basket)ವನ್ನು ಹೊಂದಿದೆ. ಅಲ್ಲದೇ ಬಂಡು ಚೀಲದಿಂದ ಬಂಡನ್ನು ತುಂಬಿಕೊಳ್ಳಲು ಮತ್ತು ತೆಗೆದುಹಾಕಲು ಬೇಕಾದ ಗೋರೆ(rake) ಮತ್ತು ಹಣಿಗೆಯಂತಹ (comb) ಇಟ್ಟಳ ಇದರ ಕಾಲುಗಳಲ್ಲಿವೆ.

ರೆಕ್ಕೆಗಳು – ಹುಳದ ಹಾರಾಟಕ್ಕೆ ನೆರವಾಗಲು ಎರಡು ಜೊತೆ ರೆಕ್ಕೆಗಳನ್ನು ಇದು ಹೊಂದಿದೆ. ಮುಂಭಾಗದ ರೆಕ್ಕೆಯು ಹಿಂಬಾಗದ ರೆಕ್ಕೆಗಿಂತ ಎತ್ತರವಾಗಿದೆ. ಈ ಹುಳದ ರೆಕ್ಕೆಗಳು ಮೇಲೆ-ಕೆಳಗೆ ಪಟ ಪಟ ಬಡಿಯುವುದರ ಜೊತೆಗೆ, ದೋಣಿಯ ಹುಟ್ಟನ್ನು ಹಾಕುವ ಬಗೆಯಲ್ಲಿ ರೆಕ್ಕೆಯನ್ನು ಬಡಿಯುತ್ತವೆ. ಇದರಿಂದ ಹಾರಲು ಮತ್ತು ಮುಂದೆ ಹೋಗಲು ಸಾಕಷ್ಟು ಬಲ ಸಿಗುತ್ತದೆ.

ಹೊಟ್ಟೆಯ ಭಾಗ(Abdomen): ಹೊಟ್ಟೆಯ ಭಾಗದಲ್ಲಿ ಹೊಟ್ಟೆ ಮತ್ತು ಕೊಂಡಿ(sting) ಹೊರಗೆ ಕಾಣುವಂತಹವು. ಉಳಿದಂತೆ ಕಿಬ್ಬೊಟ್ಟೆಯ ಒಳಗೆ ಅರಗೇರ್ಪಾಟು (Digestive System) ಮತ್ತು ಉಸಿರೇರ್ಪಾಟು ಇರುತ್ತದೆ. ಯಾವುದೇ ಅನಾಹುತಗಳು ಎದುರಾದಾಗ ತನ್ನನ್ನು ಕಾಪಾಡಿಕೊಳ್ಳಲು ಕೊಂಡಿಯ ನೆರವಿನಿಂದ ನಂಜನ್ನು ಚುಚ್ಚುತ್ತದೆ.

ಜೇನುಹುಳುವಿನ ಕೆಲವು ಮುಖ್ಯಭಾಗಗಳನ್ನು ಇಲ್ಲಿ ಹೇಳಲಾಗಿದೆ. ಇವಲ್ಲದೇ, ಇದರ ಕೆಲಸಕ್ಕೆ ನೆರವಾಗುವ ಇನ್ನಷ್ಟು ಅಂಗಗಳನ್ನು ಇದು ಹೊಂದಿದೆ. ಆ ಅಂಗಗಳಾವವು? ಅವುಗಳ ಕೆಲಸಗಳೇನು? ಜೇನುಹುಳವು ಜೇನುತುಪ್ಪವನ್ನು ಹೇಗೆ ಕೂಡಿಡುತ್ತದೆ? ಏಕೆ ಕೂಡಿಡುತ್ತದೆ? ಜೇನುಗೂಡನ್ನು ಹೇಗೆ ಕಟ್ಟುತ್ತದೆ? ಇಂತಹ ಹಲವಾರು ಪ್ರಶ್ನೆಗಳಿಗೆ ಉತ್ತರಗಳನ್ನು ಮುಂದಿನ ಬರಹಗಳಲ್ಲಿ ತಿಳಿದುಕೊಳ್ಳೋಣ.

(ಮಾಹಿತಿ ಸೆಲೆ: askabiologist.asu.edu, )
(ಚಿತ್ರ ಸೆಲೆ: wikipedia)

ಬ್ಯಾಟರಿಲೋಕದ ಹೊಸ ಚಳಕ

ಜಯತೀರ್ಥ ನಾಡಗೌಡ.

ಬ್ಯಾಟರಿ ಇಲ್ಲವೇ ಮಿಂಕಟ್ಟು ಈ ಪದದ ಹೆಸರು ಕೇಳದವರು ಅತಿ ಕಡಿಮೆ. ರೇಡಿಯೋ, ರಿಮೋಟ್, ಮಕ್ಕಳ ಆಟಿಕೆಯಿಂದ ಹಿಡಿದು ಮೊಬೈಲ್, ಕಾರು, ಬಸ್‌ಗಳಲ್ಲಿ ಬಳಕೆಯಾಗಲ್ಪಡುವ ವಸ್ತುವಾಗಿ ಬೆಳೆದಿದೆ. ಬಂಡಿಯ ಇಲೆಕ್ಟ್ರಿಕ್ ಏರ್ಪಾಟು ನಡೆಸಲಷ್ಟೇ ಸೀಮಿತವಾಗಿದ್ದ ಬ್ಯಾಟರಿ, ಇಂದು ಮಿಂಚಿನ ಬಂಡಿಗಳ(Electric Vehicle) ಪ್ರಮುಖ ಭಾಗವಾಗಿದೆ. ಮಿಂಚಿನ ಬಂಡಿಗಳ ಬಳಕೆ ಹೆಚ್ಚುತ್ತಿರುವಂತೆ ಅವುಗಳಲ್ಲಿ ಬಳಸಲ್ಪಡುವ ಬ್ಯಾಟರಿ ತಾಳಿಕೆ-ಬಾಳಿಕೆ ಬಗ್ಗೆಯೂ ಹೆಚ್ಚಿನ ಅರಕೆಗಳು ನಡೆಯುತ್ತಿವೆ. ಇಂದು ಬಹುಪಾಲು ಮೊಬೈಲ್, ಮಿಂಚಿನ ಬಂಡಿಗಳಲ್ಲಿ ಕಂಡುಬರುವ ಮಿಂಕಟ್ಟು ಲಿಥಿಯಮ್-ಅಯಾನ್ ರಾಸಾಯನಿಕಗಳಿಂದ ಮಾಡಲ್ಪಟ್ಟಿವೆ. ಹೆಚ್ಚಿನ ಬಾಳಿಕೆಗೆ ಹೆಸರಾಗಿರುವ ಲಿಥಿಯಮ್-ಅಯಾನ್ ಬ್ಯಾಟರಿ ಬಳಕೆ ಎಲ್ಲೆಡೆ ಹೆಚ್ಚುತ್ತಿದೆ. ಹೆಚ್ಚು ಲಿಥಿಯಮ್ ನಿಕ್ಷೇಪ ಹೊಂದಿರುವ ಚೀನಾ ದೇಶ, ಲಿಥಿಯಮ್-ಅಯಾನ್ ಮಿಂಕಟ್ಟು ಬಳಕೆ ಹೆಚ್ಚಿಸಿ ಜಗತ್ತಿನ ಮೇಲೆ ತನ್ನ ಹಿಡಿತ ಪಡೆಯುವತ್ತ ಮುನ್ನುಗ್ಗಿದೆ. ಅದರಲ್ಲೂ ಮಿಂಚಿನ ಕಾರುಗಳಲ್ಲಿ ಬಳಸಲ್ಪಡುವ ಬಹುತೇಕ ಲಿಥಿಯಮ್-ಅಯಾನ್ ಮಿಂಕಟ್ಟುಗಳು ಚೀನಾ ದೇಶದಿಂದ ಬರುತ್ತಿವೆ. ಇದರಿಂದ ಜಾಗತಿಕ ಸರಬರಾಜು ಸರಪಳಿ ಮೇಲೂ ಸಾಕಷ್ಟು ಒತ್ತಡ ಬಂದಿದೆ. ಇದನ್ನು ಮೆಟ್ಟಿನಿಲ್ಲಲು ಹೊಸದೊಂದು ರಾಸಾಯನಿಕ,  ಸೋಡಿಯಮ್-ಅಯಾನ್ ಬ್ಯಾಟರಿ ಈಗ ಮುನ್ನೆಲೆಗೆ ಬಂದಿದೆ. ಈ ನಿಟ್ಟಿನಲ್ಲಿ ಅರಕೆ ಮಾಡಿದ ವಿಜ್ಞಾನಿಗಳು ಸೋಡಿಯಮ್ , ಲಿಥಿಯಮ್ ಗಿಂತ ಹೆಚ್ಚಿನ ಅನುಕೂಲ ಹೊಂದಿದೆ ಎಂದು ತೋರಿಸಿ ಕೊಟ್ಟಿದ್ದಾರೆ. ಸೋಡಿಯಮ್ ಕಡಲ ನೀರಿನಲ್ಲಿ ಹೇರಳವಾಗಿ ಸಿಗುವ ರಾಸಾಯನಿಕವಾದ್ದರಿಂದ, ಕಡಲ ನೀರನ್ನು ಭಟ್ಟಿಕರೀಸಿ ಸೋಡಿಯಮ್ ಪಡೆಯಬಹುದು. ಸೋಡಿಯಮ್-ಅಯಾನ್ ಬ್ಯಾಟರಿಗಳು ಬೆಲೆಯಲ್ಲೂ ಅಗ್ಗವಾಗಿರಲಿವೆ. ಸೋಡಿಯಮ್-ಅಯಾನ್ ಬ್ಯಾಟರಿ ಹೇಗೆ ಲಿಥಿಯಮ್-ಅಯಾನ್ ಮಿಂಕಟ್ಟುಗಳಿಗಿಂತ ಹೆಚ್ಚು ಅನುಕೂಲವಾಗಿರಲಿದೆ ನೋಡೋಣ ಬನ್ನಿ.

ಸೋಡಿಯಮ್-ಅಯಾನ್ ಮಿಂಕಟ್ಟನ್ನು ತೋರಿಸುವ ತಿಟ್ಟ

ಸಿಗುವಿಕೆ ಕುರಿತು ನೋಡಿದಾಗ ಸೋಡಿಯಮ್ ಸುಲಭವಾಗಿ ಸಿಗುವಂತ ರಾಸಾಯನಿಕ, ಕಡಲ ನೀರಿನಿಂದಲೂ ಸೋಡಿಯಮ್ ಸುಲಭ ಮತ್ತು ಅಗ್ಗವಾಗಿ ಪಡೆಯಬಹುದು. ಲಿಥಿಯಮ್ ಚೀನಾ, ಅರ್ಜಂಟೀನಾ ಹೀಗೆ ಕೆಲವೇ ದೇಶಗಳಲ್ಲಿ ಸಿಗುತ್ತಿದೆ. ಸೋಡಿಯಮ್, ಸಾಗಣೆ ಮತ್ತು ಕೂಡಿಡಲು ಯಾವುದೇ ಅಪಾಯ ತಂದೊಡ್ಡುವುದಿಲ್ಲ. ಲಿಥಿಯಮ್ ಅನ್ನು ಸಾಗಿಸುವುದು ಮತ್ತು ಕೂಡಿಡುವುದು ಕಷ್ಟದ ಕೆಲಸ, ಸಾಗಿಸುವಾಗ  ಸಾಮಾನ್ಯವಾಗಿ 30% ಹುರುಪು(Charge) ಬ್ಯಾಟರಿಗಳಲ್ಲಿ ಇರಲೇಬೇಕು. ಲಿಥಿಯಮ್-ಅಯಾನ್ ಬ್ಯಾಟರಿಗಳಲ್ಲಿ ಕಾರ್ಬನ್ ಮೂಲದ ಆನೋಡ್(Anode) ಮತ್ತು ತಾಮ್ರದ ಕರೆಂಟ್ ಕಲೆಕ್ಟರ್‌ಗಳ(Copper Current Collector) ಬಳಕೆ ಮಾಡಿರುವುದರಿಂದ, ಇದು ಶಾರ್ಟ್ ಸರ್ಕ್ಯೂಟ್ ಮೂಲಕ ಬೆಂಕಿ ಅವಘಡದಂತ ಇರ್ಕು(Risk) ತಂದೊಡ್ಡಬಲ್ಲುದು. ಸೋಡಿಯಮ್-ಅಯಾನ್ ಮಿಂಕಟ್ಟನ್ನು ಹುರುಪಿಲ್ಲದೇ(Zero Charge) ಸುಲಭವಾಗಿ ಸಾಗಿಸಬಹುದು, ಇದರಲ್ಲಿ ಕಾರ್ಬನ್ ಮೂಲದ ಆನೋಡ್ ಮತ್ತು ಅಲ್ಯುಮಿನಿಯಮ್ ಕರೆಂಟ್ ಕಲೆಕ್ಟರ್‌ಗಳು ಇರುವುದರಿಂದ ಯಾವುದೇ ಅಪಾಯವಿಲ್ಲ. ಹಾಗೆಯೇ ಲಿಥಿಯಮ್-ಅಯಾನ್ ಬ್ಯಾಟರಿಗಳಲ್ಲಿ ತಾಮ್ರದ ಕಲೆಕ್ಟರ್‌ಗಿಂತ  ಸೋಡಿಯಮ್-ಅಯಾನ್ ಬ್ಯಾಟರಿಗಳ ಅಲ್ಯುಮಿನಿಯಮ್ ಕಲೆಕ್ಟರ್‌ಗಳು ಅಗ್ಗವಾಗಿವೆ. ಸೋಡಿಯಮ್‌ನ ಮಿಂಕಟ್ಟುಗಳು ಹೆಚ್ಚಿನ ಬಿಸುಪನ್ನು ತಡೆಕೊಳ್ಳುವ ಶಕ್ತಿಹೊಂದಿವೆ, ಅಂದರೆ ಹೆಚ್ಚು ಬಿಸುಪಿನ ವಾತಾವರಣದಲ್ಲಿ ಹೆಚ್ಚಿನ ಬಾಳಿಕೆ ಬರುತ್ತವೆ. ಆದರೆ ಲಿಥಿಯಮ್ ಮಿಂಕಟ್ಟುಗಳು ಸೋಡಿಯಮ್ ಮೂಲದ ಮಿಂಕಟ್ಟುಗಳಷ್ಟು ಬಿಸುಪನ್ನು ತಡೆಯಲಾರವು. ಸೋಡಿಯಮ್-ಅಯಾನ್ ಬ್ಯಾಟರಿಗಳು ಬೇಗನೆ ಹುರುಪು(Charge) ಪಡೆಕೊಳ್ಳಬಲ್ಲವು ಮತ್ತು ಇದರಿಂದ ಇವುಗಳ ಲಿಥಿಯಮ್ ಅಯಾನ್ ಬ್ಯಾಟರಿಗಳಿಗಿಂತ 3ಪಟ್ಟು ಹೆಚ್ಚಿನ ಕಾಲ ಬಾಳಿಕೆ ಹೊಂದಿವೆ.

ಸೋಡಿಯಮ್-ಅಯಾನ್ ಮಿಂಕಟ್ಟುಗಳು ಕೆಲವು ಅನಾನುಕೂಲಗಳನ್ನು ಹೊಂದಿವೆ. ಅವು ಹೀಗಿವೆ:

  1. ಸೋಡಿಯಮ್ ಬ್ಯಾಟರಿಗಳ ಸರಬರಾಜು-ಸರಪಳಿ ಏರ್ಪಾಟು(Supply Chain System) ಇನ್ನೂ ತಕ್ಕಮಟ್ಟಿಗೆ ಬೆಳೆದಿಲ್ಲ. ಸಾಕಷ್ಟು ಕೊರತೆಗಳಿವೆ.
  2. ಈ ಚಳಕ(Technology) ಇನ್ನೂ ಎಳವೆಯಲ್ಲಿದೆ ಎನ್ನಬಹುದು, ಕೇವಲ ಬೆರಳೆಣಿಕೆ ಕಂಪನಿಗಳು ಮಾತ್ರ ಇದರಲ್ಲಿ ತೊಡಗಿಕೊಂಡಿರುವುದರಿಂದ ಸೋಡಿಯಮ್-ಅಯಾನ್ ಮಿಂಕಟ್ಟುಗಳು ದುಬಾರಿ ಎನಿಸಿವೆ.
  3.  ಚಳಕ ಎಳವೆಯಲ್ಲಿರುವುದರಿಂದ ಅದಕ್ಕೆ ಸಂಬಂಧಿಸಿದ ಮೂಲಭೂತ ಸೌಕರ್ಯಗಳು ಕೂಡ ದೊಡ್ಡಮಟ್ಟದಲ್ಲಿ ಬೆಳವಣಿಗೆ ಕಂಡಿಲ್ಲ. ಆದಕಾರಣ ಈ ಹೊಸ ಬ್ಯಾಟರಿಗಳನ್ನು ಅಳವಡಿಸಿಕೊಳ್ಳುವುದು ಸುಲಭದ ಮಾತಲ್ಲ.
  4. ಇನ್ನೊಂದು ಪ್ರಮುಖ ಅನಾನುಕೂಲವೆಂದರೆ, ಸೋಡಿಯಮ್-ಅಯಾನ್ ಮಿಂಕಟ್ಟುಗಳನ್ನು ನಮಗಿಷ್ಟದ ಆಕಾರದಂತೆ ಅಂದರೆ ಸಿಲಿಂಡರ್, ಒಡಕಗಳಂತೆ(Prism) ಮಾರ್ಪಡಿಸಲಾಗದು.
  5. ಸೋಡಿಯಮ್-ಅಯಾನ್ ಬ್ಯಾಟರಿಯ ದಟ್ಟಣೆಯೂ(Density) ಕಡಿಮೆ ಇರುವುದರಿಂದ ಇವುಗಳು ಕೂಡಿಡುವ ಅಳವು(Storage Capacity) ಕಡಿಮೆ.

ಕೆಲವೊಂದು ಅನಾನುಕೂಲಗಳು ಇದ್ದರೂ ಸೋಡಿಯಮ್-ಅಯಾನ್ ಬ್ಯಾಟರಿಗಳ ಬಗ್ಗೆ ಇನ್ನೂ ಹೆಚ್ಚಿನ ಬೆಳವಣಿಗೆ ಮಾಡಿದರೆ ಅಗ್ಗದ ಬೆಲೆಯಲ್ಲಿ ಹೆಚ್ಚಿನ ಅಳವು(Efficiency) ನೀಡುವಲ್ಲಿ ಇವುಗಳು ಲಿಥಿಯಮ್-ಅಯಾನ್ ಬ್ಯಾಟರಿಗಳಿಗೆ ತಕ್ಕ ಪೈಪೋಟಿಯಾಗುವುದು ಖಚಿತ.

ಮಾಹಿತಿ ಸೆಲೆ:

https://www.gep.com/blog/strategy/lithium-ion-vs-sodium-ion-battery

https://faradion.co.uk/technology-benefits/strong-performance/

 

ಕಾಫಿಗಿಡ ನೆಡುವುದು ಮತ್ತು ಆರಯ್ಕೆ

ರತೀಶ ರತ್ನಾಕರ.

ಹಿಂದಿನ ಬರಹಗಳಲ್ಲಿ ಕಾಫಿ ಬೀಜದ ಬಿತ್ತನೆ ಮತ್ತು ಪಾತಿಯ ಬುಟ್ಟಿಗಳಲ್ಲಿ ಕಾಫಿ ಗಿಡದ ಬೆಳವಣಿಗೆಯ ಕುರಿತು ತಿಳಿದುಕೊಂಡೆವು. ಬುಟ್ಟಿಯಲ್ಲಿರುವ ಕಾಫಿ ಗಿಡಗಳನ್ನು ತೋಟದ ಜಾಗದಲ್ಲಿ ನೆಡುವುದು ಮುಂದಿನ ಕೆಲಸವಾಗಿರುತ್ತದೆ. ಈ ಕೆಲಸದ ಕುರಿತು ಈ ಬರಹದಲ್ಲಿ ಅರಿಯೋಣ.

ತೋಟಕ್ಕೆಂದು ಜಾಗದ ಆಯ್ಕೆ:
ಕಾಫಿ ಬೆಳೆಯಲು ಬೇಕಾದ ಗಾಳಿಪಾಡು ಮತ್ತು ಜಾಗದ ಗುಣದ ವಿವರವನ್ನು ಕೂಡ ಕಾಫಿಯ ಹುಟ್ಟು ಮತ್ತು ಹರವು ಬರಹದಲ್ಲಿ ತಿಳಿದಿದ್ದೇವೆ. ಕಾಫಿಗೆ ಇಳಿಜಾರಿನ, ತಂಪಿರುವ ಹಾಗು ಸಾಕಷ್ಟು ಮಳೆಯಾಗುವ ಜಾಗವು ಬೇಕಾಗುತ್ತದೆ. ತೋಟದ ಮಣ್ಣು ಸಾಕಷ್ಟು ಫಲವತ್ತತೆಯಿಂದ ಕೂಡಿರಬೇಕು. ಕಾಫಿಯ ಬೆಳವಣಿಗೆ ಚೆನ್ನಾಗಿರಲು ಮಣ್ಣಿನ ಹುಳಿಯಳತೆಯು (pH) 6.1 ಇರಬೇಕು. ಗಿಡಗಳ ಬೆಳವಣಿಗೆಗೆ ಬೇಕಾಗಿರುವ, ಮಣ್ಣಿನಲ್ಲಿರುವ ಆರಯ್ಕೆಯು ಹಾಳಾಗದಂತಿರಲು ಈ ಹುಳಿಯಳತೆಯನ್ನು ಕಾಪಾಡಿಕೊಳ್ಳಬೇಕಾಗುತ್ತದೆ. ಪ್ರತಿ 2-3 ತಿಂಗಳಿಗೊಮ್ಮೆ ಮಣ್ಣನ್ನು ಹುಳಿಯಳಕದಲ್ಲಿ ಒರೆಹಚ್ಚಿ ಇದರ ಹುಳಿಯಳತೆಯನ್ನು ಅರಿತುಕೊಳ್ಳಬೇಕು, ಮತ್ತು ಅದು ಹೆಚ್ಚು-ಕಡಿಮೆಯಾಗಿದ್ದರೆ ರಾಸಾಯನಿಕ ಇಲ್ಲವೇ ಸಾವಯವ ಪದ್ಧತಿಯಿಂದ ಮಣ್ಣಿನ ಹುಳಿಯಳತೆ ಸರಿಪಡಿಸಿಕೊಳ್ಳಬೇಕು.

ಹೆಚ್ಚಾಗಿ ಇಳಿಜಾರಿನ ಬೆಟ್ಟದಂತಹ ಜಾಗಗಳೇ ಕಾಫಿ ಬೆಳೆಯಲು ಬೇಕಾಗಿರುವುದರಿಂದ ಈ ಇಳಿಜಾರಿನ ಜಾಗದಲ್ಲಿ ಸಾಕಷ್ಟು ನೆರಳು ಇರಬೇಕಾಗುತ್ತದೆ. ತೋಟದ ಜಾಗವು ಯಾವುದೇ ಮರಗಳಿಲ್ಲದೆ ಬೋಳುಬೆಟ್ಟವಾಗಿದ್ದರೆ, ನೆರಳಿಗಾಗಿ ಸಿಲ್ವರ್, ಅಗರ್, ಶ್ರಿಗಂದ, ಸಾಗುವಾನಿಯಂತಹ ಮರಮಟ್ಟಾಗುವ (Timber) ಗಿಡಗಳನ್ನು ಮೊದಲು ನೆಡಬೇಕು. ಇಲ್ಲವೇ ಬೆಳೆಯುವವರು ತಾವೇ ಆಯ್ದುಕೊಂಡ ಗಿಡಗಳನ್ನು ನೆರಳಿಗಾಗಿ ನೆಡಬಹುದು. ಈಗಾಗಲೇ ಸಾಕಷ್ಟು ಮರಗಳು ತೋಟದ ಜಾಗದಲ್ಲಿದ್ದರೆ ಮರಗಸಿ ಮಾಡಿ ಬೇಕಾದಷ್ಟು ನೆರಳನ್ನು ಮಾತ್ರ ಕಾಯ್ದುಕೊಳ್ಳಬೇಕು. ಕಡುಹೆಚ್ಚು ನೆರಳು ಇಲ್ಲವೇ ಹೆಚ್ಚು ಬಿಸಿಲು ಗಿಡದ ಬೆಳವಣಿಗೆಯನ್ನು ಹಾಳುಮಾಡುತ್ತದೆ.

ಗಿಡನೆಡುವ ಮೊದಲು ಜಾಗದಲ್ಲಿರುವ ಕಳೆಗಿಡ ಮತ್ತು ಕಾಡುಗಿಡಗಳನ್ನು ತೆಗೆಯಬೇಕು. ಕಳೆಗಿಡಗಳನ್ನು ತೆಗೆದು, ಒಣಗಿಸಿ ಸುಡುವ ಪರಿಪಾಟ ಈ ಹಿಂದೆ ಇತ್ತು, ಆದರೆ ಅದು ತೋಟದ ಜಾಗದಲ್ಲಿನ ಉಸಿರಿಗಳ ಬದುಕನ್ನು ಹಾಳುಗೆಡುವುತ್ತದೆ ಮತ್ತು ಮಣ್ಣಿನ ಫಲವತ್ತತೆಗೆ ಒಂದಲ್ಲ ಒಂದು ಬಗೆಯಲ್ಲಿ ನೆರವಾಗುವ ಗಿಡ, ಕೀಟ ಹಾಗು ಪ್ರಾಣಿಗಳನ್ನು ಸಾಯಿಸುತ್ತದೆ. ಆದ್ದರಿಂದ ಈಗ ಕಳೆಗಿಡಗಳನ್ನು ತೆಗೆದು ಅಲ್ಲಿಯೇ ಕೊಳೆಯಿಸಿ ಮಣ್ಣಿಗೆ ಗೊಬ್ಬರವಾಗುವಂತೆ ಮಾಡುತ್ತಾರೆ.

ತೋಟದ ಜಾಗವನ್ನು ಸರಿಮಟ್ಟದ ದೊಡ್ಡ ತುಂಡುಗಳನ್ನಾಗಿ ಅಳತೆ ಮಾಡಿಕೊಳ್ಳಬೇಕು. ಒಂದೊಂದು ತುಂಡಿನಲ್ಲೂ ಕಾಫಿಗಿಡಗಳನ್ನು ಹಲವು ಸಾಲುಗಳಲ್ಲಿ ನೆಡಲಾಗುವುದು. ಎರೆಡು ತುಂಡುಗಳ ನಡುವೆ ನಾಲ್ಕು ಗಾಲಿಯ ಗಾಡಿಗಳು ಓಡಾಡುವಷ್ಟು ಜಾಗವಿದ್ದರೆ ಒಳ್ಳೆಯದು. ಪ್ರತಿ ತುಂಡಿನಲ್ಲೂ ಕಾಫಿಗಿಡಗಳನ್ನು ಸಾಲಾಗಿ ನೆಡಲು ಗುರುತುಗಳನ್ನು ಮೊದಲು ಮಾಡಬೇಕಾಗುತ್ತದೆ. ಅರಾಬಿಕಾ ಮತ್ತು ರೊಬಸ್ಟಾ ಗಿಡಗಳನ್ನು ಈ ಕೆಳಗಿನ ಅಳತೆಯಲ್ಲಿ ಹಲವು ಸಾಲುಗಳಲ್ಲಿ ನೆಡಬಹುದು.

ಅರಾಬಿಕಾ – 7‍ X 7, 5 X 5 ಇಲ್ಲವೇ 8 X 8 ಅಡಿಗಳು (ಒಂದು ಸಾಲಿನಲ್ಲಿರುವ ಗಿಡಗಳ ನಡುವಿನ ದೂರ x ಎರೆಡು ಸಾಲುಗಳ ನಡುವಿನ ದೂರ)
ರೊಬಸ್ಟಾ – 8 X 8 ಇಲ್ಲವೇ 10 X 10 ಅಡಿಗಳು

ಗುಂಡಿ ತೆಗೆಯುವುದು:

ಕಾಫಿ ಗಿಡಗಳನ್ನು ನೆಡಲು ಗುರುತು ಮಾಡಿರುವ ಸಾಲಿನಲ್ಲಿ ಗುಂಡಿಯನ್ನು ತೆಗೆಯುವುದು ಮುಂದಿನ ಕೆಲಸವಾಗಿರುತ್ತದೆ. ಈ ಗುಂಡಿಗಳನ್ನು ತೆಗೆಯುವಾಗ ಹಲವು ಅಂಶಗಳನ್ನು ಗಮನಿಸಬೇಕಾಗುತ್ತದೆ;

1. ಕಾಫಿಗಿಡದಲ್ಲಿ ನಲ್ಲಿಬೇರುಗಳಿರುತ್ತವೆ ಇವು ಮಣ್ಣಿನ ಆಳಕ್ಕೆ ನೇರವಾಗಿ ಹೋಗುತ್ತವೆ. ಕಾಫಿಗಿಡದ ಬದಿಯ ಬೇರುಗಳು ಕೂಡ ಮಣ್ಣಿನಲ್ಲಿ ಸಾಕಷ್ಟು ಹರಡಿಕೊಳ್ಳುತ್ತವೆ. ಹೀಗಾಗಿ ಮಣ್ಣು ಸಡಿಲವಾಗಿದ್ದರೆ ಒಳ್ಳೆಯದು ಮತ್ತು ಗುಂಡಿಯು ಆಳವಿದ್ದಷ್ಟು ಒಳ್ಳೆಯದು.

2. ಗಿಡ ನೆಡಲು ಗುರುತು ಮಾಡಿರುವ ಜಾಗದ ಸುತ್ತ, ಬೇರುಗಳ ಬೆಳವಣಿಗೆಗೆ ಅಡ್ಡಿಯಾಗುವ ಕಲ್ಲುಗಳು ಇರದಂತೆ ನೋಡಿಕೊಳ್ಳಬೇಕು.

3. ಹೆಚ್ಚಾಗಿ ಕಾಫಿಗಿಡಗಳನ್ನು ಜುಲೈ ಇಲ್ಲವೇ ಆಗಸ್ಟ್ ತಿಂಗಳಿನ ಮುಂಗಾರು ಮಳೆಯ ಹೊತ್ತಿನಲ್ಲಿ ತೋಟದಲ್ಲಿ ನೆಡಲಾಗುವುದು. ಅದಕ್ಕಾಗಿ ಬೇಕಾದ ಕಾಫಿಗುಂಡಿಗಳನ್ನು ಎರೆಡು ತಿಂಗಳು ಮುಂಚೆಯೇ ತೋಡಿದರೆ ಒಳ್ಳೆಯದು. ಇದರಿಂದ ಗಿಡನೆಡುವ ಜಾಗದ ಸುತ್ತಲಿನ ಮಣ್ಣು ಸಡಿಲವಾಗುತ್ತದೆ.

4. ಕಾಫಿಗುಂಡಿಯು 1.5 ‍X 1.5 X 1.5 (ಉದ್ದ x ಅಗಲ x ಆಳ) ಅಡಿಗಳಷ್ಟು ಇರಬೇಕು.

5. ಬೇಕಾದ ಆಳದ ಗುಂಡಿಯನ್ನು ತೆಗೆದ ಬಳಿಕ ಗುಂಡಿಯನ್ನು ಕೇವಲ ಮಣ್ಣಿನಿಂದ ಮುಚ್ಚಬೇಕು. ಮಣ್ಣನ್ನು ಯಾವುದೇ ಕಾರಣಕ್ಕೂ ಗುಂಡಿಗೆ ಒತ್ತಿ ತುಂಬಬಾರದು. ಸಣ್ಣ ಕಲ್ಲು ಮತ್ತು ಇತರೆ ಕಸಗಳಿದ್ದರೆ ಅವನ್ನು ತುಂಬಬಾರದು. ಹೀಗೆ ಮಣ್ಣು ಮುಚ್ಚಿದ ಗುಂಡಿಯ ಮೇಲೆ ಗುರುತಿಗಾಗಿ ಒಂದು ಬಿದಿರಿನ ಕಡ್ಡಿಯನ್ನೋ, ಕೋಲನ್ನೋ ನೆಡಬಹುದು (ನೆನಪಿರಲಿ, ನಾವಿನ್ನು ಕಾಫಿಗಿಡವನ್ನು ನೆಟ್ಟಿಲ್ಲ)

ಗಿಡನೆಡುವುದು ಮತ್ತು ಆರಯ್ಕೆ:
ಪಾತಿಯ ಬುಟ್ಟಿಗಳಲ್ಲಿರುವ ಕಾಫಿಗಿಡಗಳನ್ನು ತೋಟದ ಜಾಗಕ್ಕೆ ಸಾಗಿಸಿಟ್ಟಿರಬೇಕು. ಈಗಾಗಲೇ ಮಣ್ಣನ್ನು ಮುಚ್ಚಿರುವ ಕಾಫಿಗುಂಡಿಗಳನ್ನು ಕೈಯಿಂದಲೇ ಬಗೆಯಬಹುದು, ಕಾಫಿ ಬುಟ್ಟಿಯ ಅಳತೆಗೆ ಸರಿಹೊಂದುವಂತೆ ಗುಂಡಿಗೆ ಮುಚ್ಚಿದ್ದ ಮಣ್ಣನ್ನು ಕೈಯಿಂದ ತೆಗೆಯಬೇಕು. ಪ್ಲಾಸ್ಟಿಕ್ ಬುಟ್ಟಿಯನ್ನು ಜೋಪಾನವಾಗಿ ಹರಿದು ತೆಗೆದು, ಕಾಫಿ ಗಿಡದ ಬೇರಿನ ಸುತ್ತಲಿನ ಮಣ್ಣು ಒಡೆದುಹೋಗದಂತೆ, ಆ ಬುಟ್ಟಿಯ ಮಣ್ಣಿನ ಸಮೇತ ಗಿಡವನ್ನು ಗುಂಡಿಯೊಳಗೆ ನೇರವಾಗಿ ನೆಡಬೇಕು. ಬಳಿಕ ಸುತ್ತಲಿನ ಮಣ್ಣಿನಿಂದ ಮುಚ್ಚಿ ಗಿಡವನ್ನು ಗಟ್ಟಿಯಾಗಿ ಊರಬೇಕು. ಹೀಗೆ ನೆಟ್ಟ ಗಿಡವು ಬಾಗದಂತೆ ನೆರವಿಗಾಗಿ ಒಂದು ಮರದ ಕೋಲನ್ನು ನೆಡುವುದು ಒಳ್ಳೆಯದು.

ಗಿಡವನ್ನು ನೆಡುವಾಗ ಕೊಟ್ಟಿಗೆ ಗೊಬ್ಬರ ಇಲ್ಲವೇ ಪ್ರತಿ ಗುಂಡಿಗೆ 50-100 ಗ್ರಾಂ ನಷ್ಟು ರಾಕ್ ಪಾಸ್ಪೇಟ್ ರಾಸಾಯನಿಕ ಗೊಬ್ಬರವನ್ನು ಹಾಕಿದರೆ ಗಿಡದ ಬೆಳವಣಿಗೆಗೆ ನೆರವಾಗುತ್ತದೆ. ಸಾವಯವ ಬೆಳೆಗಾರರು ಬೆಳವಣಿಗೆಗೆ ನೆರವಾಗುವ ಸಾವಯವ ಗೊಬ್ಬರವನ್ನು ಬಳಸಬಹುದು.

ಆರಯ್ಕೆ:

1. ಗಿಡವನ್ನು ನೆಟ್ಟ ಒಂದು ತಿಂಗಳೊಳಗೆ ಮಳೆ ಬಂದರೆ ಒಳ್ಳೆಯದು ಇಲ್ಲವಾದರೆ ಗಿಡಕ್ಕೆ ನೀರಿನ ಏರ್ಪಾಡನ್ನು ಮಾಡಬೇಕು.

2. ಮಳೆಗಾಲ ಮುಗಿಯುವ ಹೊತ್ತಿಗೆ, ಕಾಡುಮರದ ಸೊಪ್ಪಿನಿಂದ ಗಿಡದ ಸುತ್ತಲು ಮರೆಯನ್ನು ಮಾಡಿ ನೇಸರನ ಬಿಸಿಲು ಸುಡದಂತೆ ಎಚ್ಚರ ವಹಿಸಬೇಕು.

3. ಗಿಡವನ್ನು ನೆಟ್ಟ ಕೆಲವು ದಿನದಲ್ಲಿ ಅದರ ಬುಡದಲ್ಲಿರುವ ಮಣ್ಣು ಮಳೆಯ ನೀರಿಗೆ ಕೊಚ್ಚಿ ಹೋಗಿದ್ದರೆ, ಗಿಡದ ಸುತ್ತಲಿನ ಮಣ್ಣನ್ನು ಕಡೆದು ಗಿಡದ ಬುಡಕ್ಕೆ ಹಾಕಿ ಮಣ್ಣನ್ನು ಏರಿಸಬೇಕು. ಇದು ಗಿಡವು ಗಟ್ಟಿಯಾಗಿ ಹಾಗು ನೇರವಾಗಿ ಬೆಳೆಯಲು ನೆರವಾಗುತ್ತದೆ.

4. ಕಾಫಿ ಗಿಡದ ಸಾಲುಗಳ ನಡುವೆ, ಹೆಚ್ಚಿನ ನೆರಳು ಮತ್ತು ಸೊಪ್ಪಿನ ಗೊಬ್ಬರಕ್ಕಾಗಿ ಹಾಲುವಾಣ/ಪಂಗಾರು ಗಿಡಗಳನ್ನು ನೆಡುತ್ತಾರೆ. ಇದು ಗಿಡಕ್ಕೆ ಬೇಕಾದ ನೆರಳನ್ನು ಒದಗಿಸುತ್ತದೆ. ಕಾಫಿಗಿಡಗಳು ಸಾಕಷ್ಟು ಎತ್ತರಕ್ಕೆ ಬಂದಾಗ ನೆರಳು ಹೆಚ್ಚಾದರೆ ಇವನ್ನು ಕಡಿದು ತೆಗೆಯಲಾಗುತ್ತದೆ. ಈ ಗಿಡಗಳ ಸೊಪ್ಪು ತೊಟಕ್ಕೆ ಒಳ್ಳೆಯ ಗೊಬ್ಬರವಾಗಿದೆ.

5. ಸಾವಯವ ಇಲ್ಲವೇ ರಾಸಾಯನಿಕ ಬೇಸಾಯ ಪದ್ಧತಿಯ ಆದಾರದ ಮೇಲೆ ಗಿಡಕ್ಕೆ ಗೊಬ್ಬರವನ್ನು ಹಾಕಬೇಕು.

6. ಗಿಡಗಳನ್ನು ತೋಟದಲ್ಲಿ ನೆಟ್ಟಾಗ ಗಿಡಗಳ ನಡುವೆ ಸಾಕಷ್ಟು ಜಾಗ ಇರುವುದರಿಂದ ಅಲ್ಲಿ ಕಳೆಗಿಡಗಳು ಹುಟ್ಟುತ್ತಲೇ ಇರುತ್ತವೆ. ಕಳೆಗಿಡಗಳು ಗಿಡದ ಬೆಳವಣಿಗೆಗೆ ತೊಂದರೆ ನೀಡುತ್ತವೆ. ಈ ಕಳೆಗಿಡಗಳನ್ನು ಕೊಚ್ಚಿ ತೆಗೆಯುತ್ತಿರಬೇಕು ಇದನ್ನು ‘ಹಳ ಹೊಡೆಯುವುದು’ ಎಂದು ನಮ್ಮಲ್ಲಿ ಕರೆಯುತ್ತಾರೆ.

ಹೀಗೆ ಗಿಡವನ್ನು ನೆಟ್ಟ ಮೊದಲ ವರುಶ ಅದರ ಆರಯ್ಕೆಯನ್ನು ಚೆನ್ನಾಗಿ ನೋಡಿಕೊಳ್ಳಬೇಕಾಗುತ್ತದೆ. ಕಾಫಿಗಿಡವು ಬೆಳೆದು ಇಳುವರಿಯನ್ನು ಕೊಡಲು ಸುಮಾರು ನಾಲ್ಕರಿಂದ ಅಯ್ದು ವರುಶಗಳು ಬೇಕಾಗುತ್ತವೆ. ಇಳುವರಿ ಕೊಡುತ್ತಿರುವ ಗಿಡದಿಂದ ವರುಶಕ್ಕೆ ಒಮ್ಮೆ ಕಾಫಿಬೆಳೆಯ ಕುಯ್ಯಲನ್ನು ಮಾಡಬಹುದು. ಕಾಫಿ ತೋಟಕ್ಕೆಂದು ಇರುವ ಜಾಗದಲ್ಲಿ ಹೆಚ್ಚಿನ ಮರಗಳನ್ನು ಕಡಿಸದೇ, ಇತರೆ ಉಸಿರಿಗಳ ಬದುಕಿಗೆ ಹಾನಿ ಮಾಡದೇ, ಕಾಡಿನ ನಡುವೆಯೇ ಒಂದು ಬೆಳೆ ನೀಡುವ ಗಿಡಗಳಾಗಿ ಈ ಕಾಫಿಗಿಡಗಳನ್ನು ಬೆಳೆಸಬಹುದು. ತಾನೂ ಒಂದು ಬಗೆಯ ಗಿಡವಾಗಿ ಕಾಡಿನಲ್ಲಿರುವ ಮರಗಿಡಗಳ ಹಲತನದೊಂದಿಗೆ ಸೇರಿಕೊಳ್ಳುವುದು ಈ ಬೆಳೆಯ ಮೇಲ್ಮೆ.

(ಚಿತ್ರಸೆಲೆ: homongfoundation)

ಕುಡಿಯುವ ನೀರಿನ ಬವಣೆ ನೀಗಿಸಲಿರುವ ‘ವಾಟರ್‌ಸೀರ್’

ಜಯತೀರ್ಥ ನಾಡಗೌಡ.

ವಿಶ್ವಸಂಸ್ಥೆಯ ಅಂಕಿ-ಸಂಖ್ಯೆಗಳು ಹೇಳುವಂತೆ ದಿನಕ್ಕೆ ಸುಮಾರು 9 ಸಾವಿರ ಮಂದಿ ಚೊಕ್ಕಟವಾದ ಕುಡಿಯುವ ನೀರಿನ ಕೊರತೆಯಿಂದ ಸಾಯುತ್ತಿದ್ದಾರಂತೆ. ಜಗತ್ತಿನ ಬಹುತೇಕ ಭಾಗ ನೀರಿನಿಂದ ಆವರಿಸಿದ್ದರೂ, ಅದರಲ್ಲಿ ಕುಡಿಯಲು ತಕ್ಕುದಾಗಿರುವುದು ತೀರಾ ಕಡಿಮೆ. ಕುಡಿಯುವ ನೀರಿನ ಕೊರತೆ ಮತ್ತು ಅದರಿಂದ ಆಗುತ್ತಿರುವ ಸಾವು-ನೋವುಗಳ ಕಂಡು ಈಗಾಗಲೇ ಸಾಕಷ್ಟು ಸಂಘ ಸಂಸ್ಥೆಗಳು ಇದನ್ನು ಹೋಗಲಾಡಿಸಲು ಕೆಲಸ ಮಾಡುತ್ತಿವೆ. ಕುಡಿಯುವ ನೀರನ್ನು  ಹಸನಾಗಿಸಲು ಇಂತ ಸಂಸ್ಥೆಗಳು ಹೊಸ ಹೊಸ ಚಳಕಗಳನ್ನು ಕಂಡು ಹಿಡಿಯುತ್ತಿವೆ.

ವಾರ್ಕಾ ವಾಟರ್ ಎಂಬ ಹೊಸ ಚಳಕವೊಂದರ ಬಗ್ಗೆ ಹಿಂದೊಮ್ಮೆ ಓದಿದ್ದೀರಿ. ಅದನ್ನೇ ಹೋಲುವ ಇನ್ನೊಂದು ನೀರು ಹಸನಾಗಿಸುವ ಎಣಿಯೊಂದು(Device) ಹೊರಬಂದಿದೆ. ಅದೇ ವಾಟರ್ ಸೀರ್(WaterSeer). ಮಿಂಚಿನ ಕಸುವು ಬಳಸದೇ ಕಡಿಮೆ ವೆಚ್ಚದಲ್ಲಿ ನೀರು ಹಸನಾಗಿಸುವ ಎಣಿಯೇ ವಾಟರ್ ಸೀರ್. ವಿಸಿ ಲ್ಯಾಬ್ಸ್ (VICI Labs) ಹೆಸರಿನ ಅಮೇರಿಕಾದ ಕೂಟ, ಕ್ಯಾಲಿಫೋರ್ನಿಯಾದ ಬರ್ಕಲಿ ವಿಶ್ವವಿದ್ಯಾಲಯ (UC Berkeley) ಮತ್ತು ನ್ಯಾಶನಲ್ ಪೀಸ್ ಕಾರ್ಪ್ಸ್ ಅಸೋಸಿಯೇಶನ್ (National Peace Corps Association)ಎಂಬ ಸಂಘಟನೆಗಳು ಒಟ್ಟಾಗಿ ಈ ಕೆಲಸಕ್ಕೆ ಕೈ ಹಾಕಿವೆ.

ವಾಟರ್ ಸೀರ್ ಎಣಿಯು ಒಂದು ಗಾಳಿದೂಡುಕ(Turbine), ಒಂದು ಬೀಸಣಿಗೆ(Fan) ಮತ್ತು ಆವಿ ಇಂಗಿಸುವ ಗೂಡುಗಳನ್ನು(Condensation Chamber) ಹೊಂದಿದೆ. ವಾಟರ್ ಸೀರ್ ಎಣಿಯನ್ನು ಗಾಳಿಯಾಡುವ ಬಯಲು ಜಾಗದಲ್ಲಿ 6 ರಿಂದ 8 ಅಡಿಗಳವರೆಗೆ ನೆಡಬೇಕಾಗುತ್ತದೆ. ಎಣಿಯ ಮೇಲ್ಭಾಗದಲ್ಲಿ ಜೋಡಿಸಲಾಗಿರುವ ಸುರುಳಿಯಾಕಾರದ ಗಾಳಿದೂಡುಕ, ಸುತ್ತಮುತ್ತಲೂ ಬೀಸುವ ಗಾಳಿಯನ್ನು ಒಳದೂಡುತ್ತಿರುತ್ತದೆ. ಇದರಿಂದ ಒಳಭಾಗದ ಬೀಸಣಿಗೆ ತಿರುಗುತ್ತ, ಬೆಚ್ಚನೆಯ ಗಾಳಿಯನ್ನು ನೆಲದಡಿ ನೆಡಲಾಗಿರುವ ಆವಿ ಇಂಗಿಸುವ ಗೂಡಿಗೆ ಸಾಗಿಸುತ್ತದೆ. ಆವಿ ಇಂಗಿಸುವ ಗೂಡಿನಲ್ಲಿ ಕೂಡಿಕೊಂಡ ಬೆಚ್ಚನೆಯ ಗಾಳಿ, ಸುತ್ತಲಿನ ನೆಲದಡಿಯ ತಂಪಿನ ವಾತಾವರಣದಿಂದ ಇಂಗಿಸಲ್ಪಟ್ಟು ನೀರಿನ ಹನಿಗಳಾಗಿ ಮಾರ್ಪಡುತ್ತವೆ. ಗೂಡಿನಲ್ಲಿ ಇದೇ ರೀತಿ ನೀರು ಕೂಡಿಡಲ್ಪಟ್ಟು, ಬೇಕೆಂದಾಗ ಈ ನೀರನ್ನು ಕೊಳವೆ (Hose) ಮತ್ತು ಎತ್ತುಕದ(Pump) ಮೂಲಕ ಕೊಡ, ಕ್ಯಾನ್‌ಗಳಲ್ಲಿ ತುಂಬಿಸಿಕೊಂಡು ಕುಡಿಯಲು ಬಳಕೆ ಮಾಡಬಹುದು. ಈ ಏರ್ಪಾಟಿನಲ್ಲಿ ಮಿಂಚಿನ ಕಸುವು(Electricity) ಬೇಕಿಲ್ಲ, ಇದನ್ನು ನೆಟ್ಟಜಾಗದಲ್ಲಿ ಯಾವಾಗಲೂ ಗಾಳಿ ಬೀಸುತ್ತಿರಬೇಕೆಂಬ ಅಗತ್ಯವೂ ಇಲ್ಲ. ಇರುಳಿನಲ್ಲೂ ಇದು ಕೆಲಸ ಮಾಡಬಲ್ಲುದು. ಈಗಾಗಲೇ ಇದರ ಮಾದರಿಯನ್ನು ತಯಾರಿಸಿ, ಮೊದಲ ಹಂತದ ಒರೆಹಚ್ಚುವ ಕೆಲಸಗಳು ಪೂರ್ಣಗೊಂಡಿವೆ. 9 ಅಡಿ ಆಳಕ್ಕೆ ನೆಡಲಾಗಿದ್ದ ಈ ಚಿಕ್ಕ ಎಣಿಯ ಮಾದರಿಯೊಂದು 11 ಗ್ಯಾಲನ್ ಅಂದರೆ ಸುಮಾರು 37 ಲೀಟರ್‌ಗಳಶ್ಟು ಹಸನಾದ ಕುಡಿಯುವ ನೀರನ್ನು ಒದಗಿಸಿದ್ದು, ವಿಜ್ಞಾನಿಗಳ ಕೆಲಸಕ್ಕೆ ಹುರುಪು ಹೆಚ್ಚಿಸಿದೆ.

ಯಾವುದೇ ರಾಸಾಯನಿಕ ವಸ್ತುಗಳು, ಕಲಬೆರಕೆ ಇಲ್ಲದ ನೀರನ್ನು ವಾಟರ್ ಸೀರ್ ಮೂಲಕ ಪಡೆದುಕೊಳ್ಳಬಹುದು. ವಾತಾವರಣ ಬೆಚ್ಚನೆಯ ಗಾಳಿ ಮತ್ತು ನೆಲದಡಿಯ ತಂಪು ವಾತಾವರಣಗಳ ನಡುವಿರುವ ಬಿಸುಪುಗಳ ಅಂತರವೇ ಈ ಕುಡಿಯಲು ತಕ್ಕುದಾದ ನೀರಿನ ಹನಿಗಳನ್ನು ಉಂಟುಮಾಡಲಿದೆ. ಇಂಗಿಸುವ ಗೂಡಿಗೆ ಸೋಸುಕ ಜೋಡಿಸಿರುವುದರಿಂದ ಯಾವುದೇ ತೆರನಾದ ಕಸ, ಧೂಳು, ನಂಜುಳುಗಳು ನೀರಿನಲ್ಲಿ ಸೇರಿಕೊಳ್ಳುವ ಸಾಧ್ಯತೆಯೇ ಇಲ್ಲವಂತೆ. ನೀರಿನ ಭಟ್ಟಿ ಇಳಿಸುವಿಕೆಯ ಮೂಲಕ ಚೊಕ್ಕಟಗೊಳಿಸಿ ಪಡೆದ ನೀರಿನಷ್ಟೇ, ವಾಟರ್ ಸೀರ್‌ನಿಂದ ಹೊರಬರುವ ನೀರು ಚೊಕ್ಕಟವಾಗಿರಲಿದೆಯಂತೆ.

ಈ ಮೊದಲು ಬಂದ ನೀರು ಹಸನಾಗಿಸುವ ಏರ್ಪಾಟುಗಳು ಹೆಚ್ಚಿನ ಮಿಂಚು ಪಡೆದೋ, ಇಲ್ಲವೇ ಇತರೆ ಕಸುವಿನ ಸೆಲೆ ಬಳಸಿ ನೀರನ್ನು ಹಸನಾಗಿಸುತ್ತಿದ್ದವು. ಆದರೆ ವಾಟರ್ ಸೀರ್ ಇಂತ ಯಾವುದೇ ಕಸುವಿನ ಸೆಲೆಗಳನ್ನು ಬಳಸದೇ, ಇತರೆ ಏರ್ಪಾಟುಗಳಿಗಿಂತ ಹೆಚ್ಚು ಅಳವುತನ(Efficiency) ಹೊಂದಿರಲಿದೆಯಂತೆ. ಬಿಸಿಲಿರುವ ಜಾಗ ಇಲ್ಲವೇ ವಾತಾವರಣಗಳಲ್ಲಿ ಅಡೆತಡೆಯಿಲ್ಲದೇ ಕೆಲಸ ಮಾಡುವ ವಾಟರ್ ಸೀರ್, ತಂಪು ಹೆಚ್ಚಿರುವ ಜಾಗಗಳಲ್ಲೂ ಅಡೆತಡೆಯಿಲ್ಲದೇ ಕೆಲಸ ಮಾಡುವಂತೆ ಅದಕ್ಕೆ ತಕ್ಕ ಮಾರ್ಪಾಟು ಮಾಡಲಾಗಿದೆ.

ಒಂದೇ ಜಾಗದಲ್ಲಿ ಹಲವು ವಾಟರ್ ಸೀರ್ ಎಣಿಗಳನ್ನು ನೆಟ್ಟು ಅವುಗಳ ಮೂಲಕ ಹೊರಬರುವ ನೀರನ್ನು ಒಟ್ಟಿಗೆ ಕೊಳವೊಂದರಲ್ಲಿ ಸೇರಿಸಿ ಚಿಕ್ಕ ಹಳ್ಳಿಗಳ ಮಂದಿಯ ನೀರಿನ ಬವಣೆ ನೀಗಿಸಬಹುದು. 134 ಅಮೇರಿಕನ್ ಡಾಲರ್‌ಗಳಷ್ಟು ಅಗ್ಗದ ಬೆಲೆಯ (ಸುಮಾರು 9200 ರೂಪಾಯಿಗಳು) ಈ ಎಣಿಯನ್ನು ನಡೆಸಿಕೊಂಡು ಹೋಗುವ ವೆಚ್ಚವೂ ಕಡಿಮೆ ಎಂದು ವಾಟರ್ ಸೀರ್ ಕೂಟ ಹೇಳಿಕೊಂಡಿದೆ. ಅಂದಹಾಗೆ ಈ ಹಮ್ಮುಗೆ ಮಂದಿ ದೇಣಿಗೆ (Crowd Funding) ಪಡೆದುಕೊಂಡು ತಯಾರಾಗುತ್ತಿದೆ. ಹಸನಾದ ಕುಡಿಯುವ ನೀರಿನ ಕೆಲಸಕ್ಕೆ ಫೇಸ್‌ಬುಕ್ ಮುಂತಾದ ಸಾಮಾಜಿಕ ಕೂಡತಾಣಗಳ ಮೂಲಕ ಪ್ರಚಾರ ನೀಡಿ ಮಂದಿ ದೇಣಿಗೆ ಪಡೆಯಲಾಗುತ್ತಿದೆ. ಆದಷ್ಟು ಬೇಗ ಇಂತಹ ಒಳ್ಳೆಯ ಕೆಲಸಗಳು ಕುಡಿಯುವ ನೀರು ಪಡೆಯಲು ಕಶ್ಟಪಡುತ್ತಿರುವ ಮಂದಿಯ ಬದುಕಿಗೆ ದಾರಿ ಮಾಡಿಕೊಡಲಿ.