ಕಾಫಿ ಒಣಗಿಸಲೊಂದು ಚುರುಕಿನ ಚಳಕ

ರತೀಶ ರತ್ನಾಕರ.

ಕರ್ನಾಟಕದ ಹಲವು ಮುಖ್ಯ ಬೆಳೆಗಳಲ್ಲಿ ಕಾಫಿಯೂ ಒಂದು. ಪಡುವಣ ಬೆಟ್ಟದ ಸಾಲುಗಳಲ್ಲಿ ಹೆಚ್ಚಾಗಿ ಬೆಳೆಯುವ ಬೆಳೆಯಾಗಿದ್ದು ವರುಶಕ್ಕೆ ಒಂದು ಬಾರಿ ಮಾತ್ರ ಕುಯ್ಲಿಗೆ ಬರುವ ಬೆಳೆ. ಮಳೆಯ ಆಧಾರದ ಮೇಲೆ ಕೆಲವು ಕಡೆ ನವೆಂಬರ್ ಕೊನೆಯ ವಾರಕ್ಕೆ ಕುಯ್ಲಿಗೆ ಬಂದರೆ ಇನ್ನು ಕೆಲವು ಕಡೆ ಡಿಸೆಂಬರ್ ಕೊನೆಯ ವಾರಕ್ಕೆ ಕಾಫಿ ಹಣ್ಣು ಕುಯ್ಲಿಗೆ ಬರುತ್ತದೆ. ಹಾಗಾಗಿ ನವೆಂಬರ್ ಕೊನೆಯ ವಾರದಿಂದ ಜನವರಿಯ ಸುಗ್ಗಿ ಹಬ್ಬದವರೆಗೂ ಕಾಫಿ ಕುಯ್ಲಿನ ಕಾಲ ಎಂದು ಹೇಳಬಹುದು. ಹೀಗೆ ಕುಯ್ದ ಕಾಫಿಯನ್ನು ಮಾರುಕಟ್ಟೆಗೆ ಸಾಗಿಸುವ ಮೊದಲು ಅದನ್ನು ಒಣಗಿಸಲಾಗುತ್ತದೆ.

ಸದ್ಯಕ್ಕೆ ಕಾಫಿ ಬೆಳೆಗಾರರ ಮನೆಗಳ ಅಂಗಳದಲ್ಲಿ ನೇಸರನ ಬಿಸಿಲಿಗೆ ಹರಡಿ ಕಾಫಿಯನ್ನು ಹಲವು ದಿನಗಳ ಕಾಲ ಒಣಗಿಸಲಾಗುತ್ತದೆ. ಹೀಗೆ ಒಣಗಿಸುವುದಕ್ಕೆ, ಸಾಕಷ್ಟು ಜಾಗ ಹಾಗು ಮಯ್ಗೆಲಸದ ಅವಶ್ಯಕತೆ ಇದೆ. ಆದರೆ ಇತ್ತೀಚಿನ ದಿನಗಳಲ್ಲಿ ಹೊಸ ಚಳಕಗಳನ್ನು ಬಳಸಿ ಕಾಫಿಯನ್ನು ಅತಿ ಕಡಿಮೆ ಜಾಗದಲ್ಲಿ, ಕಡಿಮೆ ಮೈಗೆಲಸದಲ್ಲಿ, ಆದಷ್ಟು ಬೇಗ ಒಣಗಿಸುವ ವಿಧಾನಗಳನ್ನು ಕಂಡುಕೊಂಡಿದ್ದಾರೆ. ಅಂತಹ ಒಂದು ವಿಧಾನವನ್ನು ಇಲ್ಲಿ ನೋಡೋಣ ಬನ್ನಿ.

ಕಾಫಿ ಕುಯ್ಲು ಮುಗಿದ ಮೇಲೆ ಕೆಲವರು ಇಡೀ ಕಾಫಿಯನ್ನು ಸಿಪ್ಪೆಯ ಜೊತೆಗೆ ಒಣಗಿಸಿ ಮಾರುಕಟ್ಟೆಗೆ ಸಾಗಿಸಿದರೆ ಇನ್ನು ಕೆಲವರು ಹಸಿಯಾಗಿರುವ ಕಾಫಿ ಹಣ್ಣಿನ ಸಿಪ್ಪೆಯನ್ನು ಒಂದು ಬಿಣಿಗೆಯ ನೆರವಿನಿಂದ ಸಿಪ್ಪೆಯನ್ನು ತೆಗೆದು ಬಳಿಕ ಒಳಗಿನ ಕಾಳುಗಳನ್ನು ಒಣಗಿಸಿ ಮಾರುತ್ತಾರೆ. ಎರಡಕ್ಕೂ ಅವುಗಳದ್ದೇ ಆದ ಬೆಲೆಗಳಿವೆ. ಹೀಗೆ ಇಡಿಯಾಗಿ ಒಣಗಿಸಿದ ಕಾಫಿಯನ್ನು ಚೆರ‍್ರಿ ಎಂದು ಸಿಪ್ಪೆ ತೆಗೆದ ಕಾಫಿಯನ್ನು ಪಾರ‍್ಚ್ ಮೆಂಟ್ ಎಂದು ಕರೆಯುತ್ತಾರೆ.

Coffee cherry and parchment

ಹಸಿಯಾಗಿರುವ ಕಾಫಿಯಲ್ಲಿ ಸುಮಾರು 50% ನಿಂದ 70% ನಷ್ಟು ನೀರಿನ ಪಸೆ (moisture) ಇರುತ್ತದೆ. ಕಾಫಿಯು ಚೆನ್ನಾಗಿ ಒಣಗಿ ಮಾರುಕಟ್ಟೆಗೆ ಸಾಗಿಸಲು ಯೋಗ್ಯ ಎಂದು ಕರೆಸಿಕೊಳ್ಳಲು ಅದರ ಪಸೆ ಸುಮಾರು 10% ನಿಂದ 12% ಮಾತ್ರ ಇರಬೇಕು. ಕಾಫಿಯನ್ನು ಒಣಗಿಸುವುದರಲ್ಲಿ ಅದರ ಪಸೆಯನ್ನು 70% ನಿಂದ 10% ಗೆ ಇಳಿಸುವುದಾಗಿರುತ್ತದೆ.

ಒಂದು ಕಾಫಿಬೀಜದ ಪಸೆಯ ಆರುವಿಕೆ ಎರಡು ಹಂತದಲ್ಲಿ ನಡೆಯುತ್ತದೆ. ಮೊದಲು ಸಿಪ್ಪೆಯ ಒಳಗಿನ ಭಾಗದ ಪಸೆಯು ಆರಿ ಹೊರಭಾಗಕ್ಕೆ ಬರುತ್ತದೆ, ಬಳಿಕ ಹೊರಭಾಗದ ಪದರದಲ್ಲಿರುವ ಪಸೆಯು ಆರಿ ಸುತ್ತಲಿನ ಗಾಳಿಗೆ ಸೇರಿಕೊಳ್ಳುತ್ತದೆ. ಹೀಗೆ ಎರೆಡು ಹಂತಗಳಲ್ಲಿ ಕಾಫಿಯು ಒಣಗಬೇಕಾದರೆ ಅದಕ್ಕೆ ಬಿಸಿಗಾಳಿಯನ್ನು ಹರಿಸುವುದರ ಮೂಲಕ ಪಸೆಯನ್ನು ಆರಿಸಿ ಒಣಗಿಸಬಹುದು ಎಂದು ಕಂಡುಕೊಂಡಿದ್ದಾರೆ.

ಯಾವುದೇ ಕಾಳುಗಳನ್ನು ಚೆನ್ನಾಗಿ ಒಣಗಿಸಲು ಗಾಳಿಯು ಈ ಮೂರು ಗುಣಗಳನ್ನು ಹೊಂದಿರಬೇಕು. ಅವು ಗಾಳಿಯು ಒಣಗಿರಬೇಕು (ಯಾವುದೇ ಪಸೆ ಗಾಳಿಯಲ್ಲಿ ಇರಬಾರದು), ಬಿಸಿಯಾಗಿರಬೇಕು ಮತ್ತು ಹರಿಯುತ್ತಿರಬೇಕು (ಒಂದೇ ಕಡೆ ನಿಂತಿರುವ ಗಾಳಿ ಕಾಳುಗಳ ಪಸೆಯನ್ನು ಹೊರಗಿನ ತಣ್ಣನೆಯ ಗಾಳಿಗೆ ಸಾಗಿಸಲಾಗದು). ಈ ಎಲ್ಲಾ ವಿವರಗಳನ್ನು ಕಲೆ ಹಾಕಿದಾಗ, ಕಾಫಿಯ ಪಸೆಯನ್ನು 10% ರಿಂದ 12% ಗೆ ಇಳಿಸಬೇಕಾದರೆ ಗಾಳಿಯನ್ನು 40 ಡಿಗ್ರಿ ಯಿಂದ 60 ಡಿಗ್ರಿಯಷ್ಟು ಬಿಸಿಯಾಗಿ ಹಾಯಿಸಿದಾಗ ಅದು ಆದಷ್ಟು ಬೇಗ ಮತ್ತು ಚೆನ್ನಾಗಿ ಒಣಗುತ್ತದೆ. (ಎಷ್ಟು ಹೊತ್ತು ಈ ಬಿಸಿಗಾಳಿಯನ್ನು ಹಾಯಿಸಬೇಕು ಎಂಬುದನ್ನು ಮುಂದೆ ತಿಳಿಯೋಣ)

ಈಗ, ಕಾಳಿನ ಒಣಗುವಿಕೆಯ ಹಂತಗಳು ಮತ್ತು ಗಾಳಿಗೆ ಇರಬೇಕಾದ ಬಿಸುಪಿನ ಬಗ್ಗೆ ತಿಳಿದೆವು. ಇನ್ನು ನೇಸರನ ಬೆಳಕು ಇಲ್ಲವೇ ಇತರ ಉರುವಲಿನ ನೆರವನಿಂದ ಬಿಸಿಗಾಳಿಯನ್ನು ಕಾಫಿಯ ಮೇಲೆ ಹಾಯಿಸಿ ಅದನ್ನು ಒಣಗಿಸುವ ಬಗೆಯನ್ನು ಅರಿಯೋಣ.

ಹೊಸಬಗೆಯ ಒಣಗಿಸುವಿಕೆಯಲ್ಲಿ ಎರೆಡು ಬಗೆಗಳಲ್ಲಿ ಬಿಸಿಗಾಳಿಯನ್ನು ಹಾಯಿಸಬಹುದು, ಒಂದು ನೇಸರನ ಬೆಳಕಿನಿಂದ ಮತ್ತೊಂದು ಉರುವಲುಗಳಿಂದ (ಬಯೋಮಾಸ್, ಸವ್ದೆ ಮತ್ತಿತರೆ ಉರುವಲು). ಚಿತ್ರ 1 ರಲ್ಲಿ ಇದರ ಮಾದರಿಯನ್ನು ನೀಡಲಾಗಿದೆ. ಅದರ ಒಂದೊಂದು ಭಾಗಗಳು ಮತ್ತು ಒಣಗಿಸುವುದರಲ್ಲಿ ಅವುಗಳ ಕೆಲಸವನ್ನು ತಿಳಿಯೋಣ.

Coffee Drying 1

(ಕಾಫಿಯನ್ನು ಒಣಗಿಸುವ ಮಾದರಿ)

ಒಣಗಿಸುವ ಕೋಣೆ: ಒಣಗಿಸುವ ಕೋಣಯು ಬೇಕಾದಷ್ಟು (ಎತ್ತುಗೆಗಾಗಿ 20×30 (ಉದ್ದ x ಅಗಲ)ರಷ್ಟು) ಜಾಗದಲ್ಲಿ ಕಟ್ಟಿರಬೇಕು. ಕೋಣೆಯ ಒಳಗಿನ ಗೋಡೆಗಳಿಗೆ ಮರದ ಹಲಗೆ (ಪ್ಲಯ್ ವುಡ್) ಹೊಡೆದಿರಬೇಕು, ಇದು ಬಿಸಿಗಾಳಿಯನ್ನು ಹೊರಗೆ ಹೋಗದಂತೆ ತಡೆಯುತ್ತದೆ. ಕೋಣೆಯ ಮಾಡು (ಸೂರು) ಮೂಡಣ ಮತ್ತು ಪಡುವಣ ದಿಕ್ಕುಗಳಿಗೆ ಮುಖ ಮಾಡಿರಬೇಕು, ಇದರಿಂದ ಹೆಚ್ಚು ಹೊತ್ತು ನೇಸರನ ಬೆಳಕು ಮಾಡಿನ ಮೇಲೆ ಬೀಳುವಂತಾಗುತ್ತದೆ. (ಚಿತ್ರ 2 ನ್ನು ನೋಡಿ)

Coffee Drying 2

(ನೇಸರ ಪಟ್ಟಿ, ಬಿಸಿಗಾಳಿ ಕೊಳವೆಯ ಸೀಳುನೋಟ)

ನೇಸರ ಪಟ್ಟಿ: ಕೋಣೆಯ ಮಾಡಿನ ಮೇಲೆ ಮರದ ಹಲಗೆಗಳನ್ನು (ಪ್ಲಯ್ ವುಡ್) ಹೊಡೆದು ಅದರ ಮೇಲೆ ಮರದ ಪಟ್ಟಿಯನ್ನು ಮಾಡಿನ ಇಳಿಜಾರಿಗೆ ಅಡ್ಡಲಾಗಿ ಹೊಡೆದಿರಬೇಕು (ಎತ್ತುಗೆಗೆ ಸುಮಾರು 3 ಇಂಚುಗಳಷ್ಟು ದಪ್ಪದ ಮರದ ಪಟ್ಟಿ). ಈ ಮರದ ಪಟ್ಟಿಗಳ ಮೇಲೆ ನೇಸರ ಪಟ್ಟಿಗಳನ್ನು ಹೊಡೆಯಬೇಕು (ಸಾಮಾನ್ಯವಾಗಿ ಕಪ್ಪು ಬಣ್ಣದ ತಗಡಿನ ಪಟ್ಟಿಗಳನ್ನು ಬಳಸಲಾಗುವುದು). ಈಗ ನೇಸರ ಪಟ್ಟಿ ಮತ್ತು ಮಾಡಿನ ಹಲಗೆಯ ನಡುವೆ ಸಣ್ಣ ಜಾಗ ಇರುತ್ತದೆ. ಈ ಜಾಗದಲ್ಲಿ ಗಾಳಿಯು ಸುಳಿದಾಡುತ್ತದೆ. ಗಾಳಿಯು ತೆಂಕಣ/ಬಡಗಣ ದಿಕ್ಕಿನಿಂದ ಬಡಗಣ ಇಲ್ಲವೇ ತೆಂಕಣ ದಿಕ್ಕಿನ ಮೂಲಗ ಈ ಜಾಗದ ಒಳಗೆ ಬರುತ್ತಿರುತ್ತದೆ. (ಚಿತ್ರ 2 ನ್ನು ನೋಡಿ)

ಬಿಸಿಗಾಳಿ ಕೊಳವೆ: ನೇಸರ ಪಟ್ಟಿ ಮತ್ತು ಮಾಡಿನ ನಡುವೆ ಉಂಟಾಗುವ ಬಿಸಿಗಾಳಿಯನ್ನು ಕೋಣೆಯ ಒಳಗೆ ಸಾಗಿಸಲು ದೊಡ್ಡದ್ದಾದ ಒಂದು ಕೊಳವೆಯನ್ನು ಚಿತ್ರದಲ್ಲಿ ತೋರಿಸಿದಂತೆ ಮಾಡಿಗೆ ಸೇರಿಸಬೇಕು. ಈ ಕೊಳವೆಯು ಬಿಸಿಯನ್ನು ಹೊರಹಾಕದಿರುವ ವಸ್ತುವಿನಿಂದ ಮಾಡಿರಬೇಕು.

ಬಲೆ/ಬುಟ್ಟಿ: ಇದರಲ್ಲಿ ಕಾಫಿ ಬೀಜಗಳನ್ನು ಒಣಗಿಸಲು ಹಾಕಲಾಗುವುದು. ಬಿಸಿಯನ್ನು ತಡೆದುಕೊಳ್ಳುವ ವಸ್ತುವಿನಿಂದ ಇದನ್ನು ಮಾಡಿರಬೇಕು. ಇದರ ಬುಡದಲ್ಲಿ ಸಣ್ಣ ಕಿಂಡಿಗಳಿದ್ದು, ಗಾಳಿಯ ಒಳಬರುವಂತಿರಬೇಕು (ಬಲೆಯ ಹಾಗೆ ಸಣ್ಣ ಸಣ್ಣ ಕಿಂಡಿಗಳಿರಬೇಕು)

ಬೀಸಣಿಕೆ: ಕೊಳವೆಯಿಂದ ಬಂದ ಬಿಸಿಗಾಳಿಯನ್ನು ಒಣಗಲು ಹಾಕಿರುವ ಕಾಫಿ ಬೀಜದ ಬುಟ್ಟಿಯ ಕಡೆ ಜೋರಾಗಿ ಹಾಯಿಸಲು ಮತ್ತು ಗಾಳಿಯ ಬಿಸುಪನ್ನು ಆದಷ್ಟು ಹೆಚ್ಚಿನ ಬಿಸುಪಿನಲ್ಲಿ ಕಾದಿಡಲು ಇದು ನೆರವಾಗುತ್ತದೆ.

ಬಯೋಮಾಸ್/ಉರುವಲಿನ ಒಲೆ: ಬಯೋಮಾಸ್/ಉರುವಲಿನ ಒಲೆಯಿಂದ ಹೊರಗಿನ ಗಾಳಿಯನ್ನು ಬಿಸಿಮಾಡಿ ಹಾಯಿಸ ಬಹುದಾಗಿದೆ. ಬಗೆಬಗೆಯ ಉರುವಲಿನ/ಬಯೋಮಾಸ್ ಒಲೆಗಳು ಮಾರುಕಟ್ಟೆಯಲ್ಲಿ ಸಿಗಲಿದ್ದು, ಗಾಳಿಯನ್ನು 40 ಡಿಗ್ರಿಯಿಂದ 60 ಡಿಗ್ರಿಯವರೆಗೆ ಕಾಯಿಸುವ ಸಾಮರ್‍ತ್ಯವುಳ್ಳ ಒಲೆಗಳನ್ನು ಬಳಸಬೇಕಾಗುತ್ತದೆ.

ಇದು ಹೇಗೆ ಕೆಲಸ ಮಾಡುತ್ತದೆ:

ಮೊದಲು ನೇಸರನಿಂದ ಬಿಸಿಗಾಳಿಯನ್ನು ಪಡೆದು ಒಣಗಿಸುವ ಬಗೆಯನ್ನು ನೋಡೋಣ. ನೇಸರನ ಬೆಳಕು ಪಟ್ಟಿಯ ಮೇಲೆ ಬಿದ್ದೊಡನೆ ಪಟ್ಟಿಯ ಮೇಲ್ಬಾಗ ಮತ್ತು ಕೆಳಭಾಗದಲ್ಲಿರುವ ಗಾಳಿಯು ಬಿಸಿಯಾಗುತ್ತದೆ. ನೇಸರನ ಪಟ್ಟಿಯ ಸುತ್ತ ಗಾಳಿಯ ಬಿಸುಪು ಹೆಚ್ಚಿದಂತೆ ಗಾಳಿಯು ಕಡಿಮೆ ಬಿಸುಪಿನ ಕಡೆಗೆ ನಡೆಯುತ್ತದೆ. ಬಿಸಿಗಾಳಿಯ ಕೊಳವೆಯಲ್ಲಿ ಪಟ್ಟಿಯ ಬಳಿಗಿಂತ ಕಡಿಮೆ ಬಿಸುಪು ಇರುತ್ತದೆ, ಅಲ್ಲದೇ ಬೀಸಣಿಕೆಯು ಗಾಳಿಯನ್ನು ಕೊಳವೆಯಿಂದ ಸೆಳೆದು ಕಾಫಿ ಬುಟ್ಟಿಯ ತಳಕ್ಕೆ ಸಾಗಿಸುತ್ತಿರುತ್ತದೆ.

ಇದರಿಂದ ಬೀಸಣಿಕೆಯಿರುವ ಕೊಳವೆಯ ಭಾಗದ ಗಾಳಿಯ ಒತ್ತಡವು ನೇಸರನ ಪಟ್ಟಿಯ ಕೆಳಗಿನ ಗಾಳಿಯ ಒತ್ತಡಕ್ಕಿಂತ ಕಡಿಮೆಯಾಗುತ್ತದೆ. ಹಾಗಾಗಿ ನೇಸರನ ಪಟ್ಟಿಯ ಸುತ್ತಲಿರುವ ಬಿಸಿಗಾಳಿಯು ಕೊಳವೆಯಲ್ಲಿ ಸಾಗಿ ಬೀಸಣಿಕೆಯ ಬಳಿ ಬರುತ್ತದೆ. ಈ ಬೀಸಣಿಕೆಯು ದೊಡ್ಡ ಕೊಳವೆಯಿಂದ ಬಂದ ಬಿಸಿಗಾಳಿಯನ್ನು ತನ್ನ ಮುಂದಿನ ಸಣ್ಣಕೊಳವೆಗೆ ಜೋರಾಗಿ ಸಾಗಿಸುತ್ತದೆ. ಈ ಗಾಳಿಯು ಬುಟ್ಟಿಯಲ್ಲಿರುವ ಕಾಫಿ ಬೀಜಗಳ ನಡುವೆ ಸಾಗಿ ಅದರ ಪಸೆಯನ್ನು ಆರಿಸತೊಡಗುತ್ತದೆ. ಮೇಲೆ ಬಂದ ಪಸೆ(Moisture)ಯು ಕೋಣೆಯ ಗಾಳಿಗೆ ಸೇರಿಹೋಗುತ್ತದೆ.

ಕಾಫಿ ಒಣಗಿಸುವ ಹಂತಗಳು:
ಕಾಫಿಯನ್ನು ಎರಡು ಹಂತಗಳಲ್ಲಿ ಒಣಗಿಸಲಾಗುತ್ತದೆ.
1. ಮೊದಲು ಹಸಿಯಾದ ಕಾಫಿಯಲ್ಲಿರುವ ನೀರಿನ ಅಂಶವನ್ನು ತೆಗೆಯಬೇಕಾಗುತ್ತದೆ ಅದಕ್ಕಾಗಿ ಕಾಫಿಯನ್ನು ಒಂದು ಬುಟ್ಟಿಗೆ ಹಾಕಿ ಬುಟ್ಟಿಯ ಮೇಲಿನಿಂದ ಸಾಮಾನ್ಯಗಾಳಿ ಇಲ್ಲವೇ ಕೊಂಚ ಬಿಸಿ ಇರುವ ಗಾಳಿ(40 ಡಿಗ್ರಿಗಿಂತ ಕಡಿಮೆ)ಯನ್ನು ಹಾಯಿಸಲಾಗುತ್ತದೆ. ನೀರಿನಿಂದ ಕೂಡಿರುವ ಕಾಫಿಯ ಮೇಲೆ 40 ಡಿಗ್ರಿಗಿಂತ ಬಿಸಿ ಇರುವ ಗಾಳಿಯನ್ನು ಹಾಯಿಸಿದರೆ ಅದು ಕಾಫಿಯ ಬಣ್ಣ ಮತ್ತು ಪರಿಮಳದ ಮೇಲೆ ಕೆಟ್ಟ ಪರಿಣಾಮ ಬೀರುವ ಸಾದ್ಯತೆಗಳಿವೆ. ಹೀಗೆ ಕಾಫಿಯ ಬುಟ್ಟಿಯ ಮೇಲಿನಿಂದ ಗಾಳಿಯನ್ನು ಹಾಯಿಸಿದಾಗ ಅದರ ಮೇಲಿರುವ ನೀರಿನಂಶವು ಬುಟ್ಟಿಯ ಕೆಳಗಿಳಿದು ಬುಟ್ಟಿಯ ತೂತುಗಳಲ್ಲಿ ಹರಿದು ಹೊರಹೋಗುತ್ತದೆ.

ಸುಮಾರು ಎರಡರಿಂದ ಮೂರು ಗಂಟೆಗಳ ಕಾಲ ಹೀಗೆ ಗಾಳಿಯನ್ನು ಹಾಯಿಸಿ ನೀರನ್ನು ಹೊರತೆಗೆಯಬೇಕಾಗುತ್ತದೆ. ಈ ಬಗೆಯನ್ನು ಮುನ್ನಾರಿಕೆ(ಪ್ರೀ-ಡ್ರಯಿಂಗ್) ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ 6×6 ಅಡಿಗಳಷ್ಟು ದೊಡ್ಡದಿರುವ ಕಾಫಿ ಬುಟ್ಟಿಯಲ್ಲಿ ಒಂದು ಅಡಿಗಳಷ್ಟು ದಪ್ಪನಾಗಿ ಕಾಫಿಯನ್ನು ಹರಡಿ ನೀರನ್ನು ತೆಗೆಯಲು 1.5 ಹಾರ‍್ಸ್ ಪವರ್ ಸಾಮರ್ಥ್ಯ ಹೊಂದಿರುವ ಮತ್ತು 18 ಇಂಚು ದುಂಡಳತೆ ಇರುವ ಬೀಸಣಿಕೆಯನ್ನು ಬಳಸಲಾಗುತ್ತದೆ.

2. ಎರಡನೆಯ ಹಂತದಲ್ಲಿ ನೀರನ್ನು ಆರಿಸಿದ ಕಾಫಿಯನ್ನು ಬಿಸಿಗಾಳಿ ಬರುವ ಬುಟ್ಟಿಗೆ ಹಾಕಿ ಒಣಗಿಸಲಾಗುತ್ತದೆ. ಈ ಬುಟ್ಟಿಯೂ ಕೂಡ ಮುನ್ನಾರಿಕೆಯಲ್ಲಿ ಬಳಸಿದಷ್ಟು ದೊಡ್ಡದಾಗಿಯೇ ಇದ್ದು, 40-60 ಡಿಗ್ರಿ ಬಿಸುಪಿರುವ ಗಾಳಿಯನ್ನು ಮಾತ್ರ ಬುಟ್ಟಿಯ ತಳಭಾಗದಿಂದ ಹಾಯಿಸಲಾಗುತ್ತದೆ. ಇದರಲ್ಲೂ ಕೂಡ ಬೀಸಣಿಕೆಯ ಸಾಮರ್ಥ್ಯವು 1.5 ಹಾರ‍್ಸ್ ಪವರ್ ಇದ್ದು 18 ಇಂಚು ದುಂಡಳತೆ ಹೊಂದಿರುತ್ತದೆ.

Coffee Drying 3

(ಕಾಫಿ ಒಣಗುವ ಪಟ್ಟಿಗಳು)

ಕಾಫಿ ಒಣಗುವುದು ಒಣಗಿಸುವ ಬುಟ್ಟಿ ಇಲ್ಲವೇ ಬಲೆಯ ಆದರಾದ ಮೇಲೆ ಬೇರೆ ಬೇರೆ ಪಟ್ಟಿಗಳಲ್ಲಿ ಒಣಗುತ್ತಾ ಬರುತ್ತದೆ. ಚಿತ್ರ 3ಅ ನಲ್ಲಿ ತೋರಿಸುರುವಂತೆ ಬುಟ್ಟಿಯಲ್ಲಿ ಕಾಫಿಯನ್ನು ದಪ್ಪನಾಗಿ ಹಾಕಿದ್ದಾಗ, ಬಿಸಿಗಾಳಿಯು ಕೆಳಗಿನಿಂದ ಮೇಲಕ್ಕೆ ಹರಿಯುತ್ತಿರುತ್ತದೆ. ಬಿಸಿಗಾಳಿಯು ಮೊದಲು ಬುಡದಲ್ಲಿರುವ ಕಾಫಿಯ ಪಸೆ (moisture)ಯನ್ನು ಹೀರುಕೊಳ್ಳುತ್ತಾ ಬರುತ್ತದೆ, ಹೀಗೆ ಹೀರಿಕೊಳ್ಳುವ ಗಾಳಿಯು ಬುಟ್ಟಿಯಲ್ಲಿ, ಕಾಳುಗಳ ನಡುವೆ ಮೇಲೆ ಸರಿದಂತೆ ತನ್ನ ಬಿಸುಪನ್ನು ಕಳೆದುಕೊಳ್ಳುತ್ತಾ ಹೋಗುತ್ತದೆ. ಹಾಗಾಗಿ, ಮೇಲಿನ ಭಾಗದಲ್ಲಿರುವ ಕಾಫಿಯೂ ಕೆಳಗಿನ ಭಾಗದ ಕಾಫಿಗಿಂತ ಬೇಗ ಒಣಗುವುದಿಲ್ಲ.

ಹೀಗೆ ಬುಟ್ಟಿಯಲ್ಲಿ ದಪ್ಪನಾಗಿ ಹಾಸಿ ಒಣಗಿಸುವ ಬಗೆಯಲ್ಲಿ ಮೊದಲಿಗೆ ಮೂರು ಪಟ್ಟಿಗಳು ಮೂಡುತ್ತವೆ ಅವು ಒಣಗಿದ ಪಟ್ಟಿ, ಒಣಗುತ್ತಿರುವ ಪಟ್ಟಿ ಮತ್ತು ಒಣಗಿರದ ಪಟ್ಟಿಗಳು. ಈ ಪಟ್ಟಿಗಳ ಅಗಲವು ಕಾಫಿಯಲ್ಲಿರುವ ಪಸೆ, ಹರಿಯುತ್ತಿರುವ ಗಾಳಿಯ ಬಿಸುಪು ಮತ್ತು ಗಾಳಿಯ ವೇಗಕ್ಕೆ ತಕ್ಕಂತೆ ಬೇರೆ ಬೇರೆಯಾಗಿರುತ್ತದೆ. ಹಾಗಾಗಿ ಕಾಫಿಯ ಸರಿಯಾದ ಒಣಗುವಿಕೆಗೆ ಬುಟ್ಟಿಯಲ್ಲಿರುವ ಕಾಳುಗಳನ್ನು ಕೆಲವು ಗಂಟೆಗಳ ಅಂತರದಲ್ಲಿ ಮಗುಚುತ್ತಿರಬೇಕು. ಆಗ ಒಣಗಿದ ಕಾಫಿ ಮೇಲೆ ಬಂದು ಒಣಗಿರದ ಕಾಫಿ ತಳಕ್ಕೆ ಹೋಗಿ ಒಣಗಲಾರಂಬಿಸುತ್ತದೆ.

ಇನ್ನು ತೆಳುವಾಗಿ ಹಾಸಿ ಒಣಗಿಸುವ ಬಗೆಯಲ್ಲಿ ಚಿತ್ರ 3ಇ ನಲ್ಲಿ ತೋರಿಸುರುವಂತೆ ಕೇವಲ ಒಂದೇ ಪಟ್ಟಿ ಇದ್ದು ಅದು ಒಣಗುತ್ತಿರುವ ಪಟ್ಟಿಯಾಗಿರುತ್ತದೆ. ಗಾಳಿಗೆ ಕಾಳುಗಳ ನಡುವೆ ಸಾಗಲು ಸಾಕಷ್ಟು ಜಾಗ ಇರುವುದರಿಂದ ಇದು ಬಲೆ/ಬುಟ್ಟಿಯಲ್ಲಿ ಹರಡಿರುವ ಎಲ್ಲಾ ಕಾಳುಗಳನ್ನು ಒಂದೇ ಬಗೆಯಲ್ಲಿ ಒಣಗಿಸುತ್ತದೆ.

ಕಾಫಿಯನ್ನು ಒಣಗಿಸುವ ಬುಟ್ಟಿಯ ಅಳತೆ, ಬೀಸಣಿಕೆಯ ಸಾಮರ‍್ತ್ಯ ಎಲ್ಲವೂ ಮತ್ತು ಒಣಗಿಸಲು ಬೇಕಾದ ಜಾಗವು ಬೆಳೆಗಾರರು ವರುಶಕ್ಕೆ ಎಷ್ಟು ಬೆಳೆ ಬೆಳೆಯುತ್ತಾರೆ ಎಂಬುದರ ಮೇಲೆ ತೀರ‍್ಮಾನಿಸಬೇಕಾಗುತ್ತದೆ. ಹಲವು ಅರಕೆಗಳ ಮೂಲಕ ಈ ಕೆಳಗಿನ ಸಲಹೆಗಳನ್ನು ನೀಡಲಾಗಿದೆ.

  1. ವರುಶಕ್ಕೆ ಒಬ್ಬ ಬೆಳೆಗಾರ 200 ಮೂಟೆ (10000 ಕಿಲೋ) ಕಾಫಿ ಬೆಳೆಯುತ್ತಿದ್ದರೆ, ಆತ 10×10 ಆಡಿಗಳಷ್ಟು ದೊಡ್ಡ ಬುಟ್ಟಿಗಳಲ್ಲಿ ಒಣಗಿಸಬೇಕಾಗುತ್ತದೆ (ಇದರಲ್ಲಿ ಸುಮಾರು 250 ಕಿಲೋ ಕಾಫಿ ಹಿಡಿಯುತ್ತದೆ).
  2. ಬೀಸಣಿಕೆಯ ಸಾಮರ‍್ತ್ಯವು 100 ಸಿ. ಎಪ್. ಎಮ್ (ಕ್ಯುಬಿಕ್ ಪೀಟ್ ಪರ್‍ ಮಿನಿಟ್) ಪರ್ ಸ್ಕ್ವಯರ್ ಪರ್ ಡ್ರಯಿಂಗ್ ಏರಿಯಾ. ಅಂದರೆ 10×10 ಅಡಿಗಳಷ್ಟು ದೊಡ್ಡದಾದ ಬುಟ್ಟಿಯಲ್ಲಿ ಒಂದು ಅಡಿಗಳಷ್ಟು ದಪ್ಪನಾಗಿ ಹರಡಿರುವ ಕಾಫಿಗೆ ಒಂದು ಇಂಚಿನಷ್ಟು ಒತ್ತಡದಲ್ಲಿ ಗಾಳಿಯನ್ನು ಹಾಯಿಸಲು 1000 ಸಿ.ಎಪ್.ಎಮ್ ಸಾಮರ್ಥ್ಯ ಹೊಂದಿರುವ ಬೀಸಣಿಕೆ ಬಳಸಬೇಕಾಗುತ್ತದೆ.
  3. ಗಾಳಿಯನ್ನು 10 ರಿಂದ 60 ಡಿಗ್ರೀ ಬಿಸುಪಿನಲ್ಲಿ ತಡೆಯಿಲ್ಲದೇ ಹರಿಸಿದರೆ, 10×10 ಬುಟ್ಟಿಯಲ್ಲಿ ಒಂದು ಅಡಿ 24 ಗಂಟೆಗಳಲ್ಲಿ ಕಾಫಿಯ ಪಸೆಯು 10% ರಿಂದ 12%ಗೆ ಇಳಿದು, ಕಾಫಿಯು ಒಣಗಿ ಸಿದ್ದವಾಗುತ್ತದೆ. ಇಶ್ಟೇ ಕಾಫಿಯನ್ನು ಅಂಗಳದಲ್ಲಿ ನೇರವಾದ ನೇಸರನ ಬಿಸಿಲಿನಲ್ಲಿ ಒಣಗಿಸಲು ಸುಮಾರು 4 ರಿಂದ 5 ದಿನಗಳು ತಗಲುತ್ತವೆ. ಮತ್ತು ಅದಕ್ಕೆ ಹೆಚ್ಚಿನ ಮಯ್ಗೆಲಸದ ಅವಶ್ಯಕತೆ ಇದೆ. ಅಲ್ಲದೇ ಪಡುವಣ ಬೆಟ್ಟದ ಸಾಲಿನಲ್ಲಿ ಡಿಸೆಂಬರ್‍ ಹಾಗು ಜನವರಿ ಮೊದಲವಾರ ಕೆಲವೊಮ್ಮೆ ಮಳೆಯಾಗುವ ಸಾದ್ಯತೆಗಳು ಇರುವುದರಿಂದ ಕಾಫಿ ಯನ್ನು ಒಣಗಿಸಲು ಹರಸಾಹಸ ಪಡಬೇಕಾಗುತ್ತದೆ.

ಕಾಫಿ ಬೆಳೆಯುವ ಜಾಗದಲ್ಲಿ ಎಲ್ಲಾ ದಿನಗಳೂ ಒಂದೇ ಬಗೆಯ ಬಿಸಿಲು ಇರುವುದಿಲ್ಲ, ಹಾಗಾಗಿ 40 ರಿಂದ 60 ಡಿಗ್ರಿ ಬಿಸುಪಿನಲ್ಲಿ ಯಾವಗಲೂ ಗಾಳಿಯನ್ನು ಹಾಯಿಸಲು ಆಗುವುದಿಲ್ಲ ಇದಕ್ಕಾಗಿ ಬಯೋಮಾಸ್/ಉರುವಲಿನ ಒಲೆಯ ನೆರವನ್ನು ಪಡೆಯಬಹುದು. ಇರುಳಿನಲ್ಲಿ ನೇಸರ ಬಿಸಿಲು ಸಿಗದೇ ಇರುವುದರಿಂದ ಈ ಒಲೆಗಳ ನೆರವಿನಿಂದ ಬಿಸಿಗಾಳಿಯನ್ನು ಹಾಯಿಸಿ ಒಣಗಿಸಬಹುದು. ಹೀಗೆ ಬಿಟ್ಟಿಯಾಗಿ ಸಿಗುವ ನೇಸರನ ಬಿಸಿಲು ಮತ್ತು ಕಡಿಮೆ ಬೆಲೆಯಲ್ಲಿ ಸಿಗುವ ಉರುವಲುಗಳನ್ನು ಬಳಸಿ ಬಿಸಿಗಾಳಿಯನ್ನು ಒದಗಿಸಿ ಕಾಫಿಯನ್ನು ಕಡಿಮೆ ಮಯ್ಗೆಲಸ ಮತ್ತು ಹೆಚ್ಚಿನ ಗುಣಮಟ್ಟದಲ್ಲಿ ಒಣಗಿಸಬಹುದು.

ಬೆಳೆಗಾರರು ವರುಶಕ್ಕೆ ಬೆಳೆಯುವ ಕಾಫಿಯ ಅಳತೆ, ಆ ಜಾಗದಲ್ಲಿನ ಬಿಸುಪು ಮತ್ತು ಹಣಕಾಸಿನ ವಿವರಗಳನ್ನು ಕಲೆಹಾಕಿ ಪರಿಣಾಮಕಾರಿಯಾದ ಒಣಗಿಸುವ ಬಗೆಗಳನ್ನು ಕಟ್ಟಿಕೊಳ್ಳಬಹುದು. ಹಾಗೆಯೇ ಈ ಬಗೆಯಿಂದ ಕಾಫಿ ಒಂದೇ ಅಲ್ಲ ಬೇರೆ ಬೇರೆ ಕಾಳುಗಾಳನ್ನು ಒಣಗಿಸುವ ಬಗೆಗಳನ್ನು ಕಟ್ಟಿಕೊಳ್ಳಬಹುದು.

 

(ಮಾಹಿತಿಸೆಲೆ: academic.uprm.eduaee-intec.at)

ಚಳಿಗಾಲಕ್ಕೆ ಕಾರಿನ ಆರೈಕೆ

ಜಯತೀರ್ಥ ನಾಡಗೌಡ

ನಮ್ಮ ದೇಹ ಮತ್ತು ಆರೋಗ್ಯವನ್ನು ನಾವು ಹೇಗೆ ಬಿಸಿಲು, ಮಳೆ, ಮತ್ತು ಚಳಿಗಾಲಕ್ಕೆ ತಕ್ಕಂತೆ ಕಾಪಾಡಿಕೊಳ್ಳುತ್ತೇವೋ ಅದೇ ತರಹ ನಮ್ಮ ಗಾಡಿಗಳನ್ನು ನಾವು ನೋಡಿಕೊಳ್ಳಬೇಕು. ಈ ಬರಹದಲ್ಲಿ ಗಾಡಿಗಳನ್ನು ಚಳಿಗಾಲದಲ್ಲಿ ಹೇಗೆ ಆರೈಕೆ ಮಾಡಬೇಕು ಎಂಬುದರ ಕುರಿತಾಗಿ ತಿಳಿಸಿಕೊಡುವೆ.

  1. ಗಾಡಿಯ ದೀಪಗಳು ಸರಿಯಾಗಿ ಕೆಲಸ ಮಾಡುತ್ತಿವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ:

ಸಾಮಾನ್ಯವಾಗಿ ಚಳಿಗಾಲದಲ್ಲಿ ಹಗಲು ಕಿರಿದಾಗಿದ್ದು, ಸೂರ್ಯ ತಡವಾಗಿ ಹುಟ್ಟಿ ಬೇಗನೆ ಮುಳುಗುವವನು. ಇದರಿಂದ ಗಾಡಿ ಓಡಿಸುಗರಿಗೆ ಗಾಡಿಯ ದೀಪದ ಅಗತ್ಯ ಹೆಚ್ಚು. ಕೆಲವೊಮ್ಮೆ ಬೆಳಗಿನ ಜಾವದಲ್ಲಿ ಇಬ್ಬನಿ ಕವಿದು ದಾರಿ ಮಂಜು ಮಂಜಾಗುವುದು ಹೆಚ್ಚು, ಆಗ ಕೂಡ ಗಾಡಿಗಳ ದೀಪ ಆನ್ ಮಾಡಿ ಗಾಡಿಗಳನ್ನು ಓಡಿಸಿಕೊಂಡು ಹೋಗಬೇಕು. ಆದ್ದರಿಂದ ಬಂಡಿಯ ಮುಂದೀಪ, ಹಿಂದೀಪ, ಇಬ್ಬನಿಗೆಂದೇ ನೀಡಿರುವ(Fog Lamp) ದೀಪಗಳು ಹಾಗೂ ತೋರುಕ(Indicator) ಸರಿಯಾಗಿ ಕೆಲಸ ಮಾಡುತ್ತಿವೆಯೇ ಎಂದು ಖಚಿತ ಪಡಿಸಿಕೊಳ್ಳಬೇಕು. ಸರಿಯಾಗಿ ಕೆಲಸ ಮಾಡದೇ ಇದ್ದಲ್ಲಿ, ನುರಿತ ಮೆಕ್ಯಾನಿಕ್‌ಗಳ ಬಳಿ ತೋರಿಸಿ ಸರಿಪಡಿಸಿಕೊಳ್ಳಬೇಕು.

  1. ಗಾಡಿಯ ಮಿಂಕಟ್ಟು:

ಗಾಡಿಯ ಮಿಂಕಟ್ಟು ಸರಿಯಾಗಿ ಕೆಲಸ ಮಾಡಬೇಕು. ಚಳಿಗಾಲದಲ್ಲಿ ಸಂಜೆ ಮತ್ತು ಬೆಳಗಿನ ಜಾವ ಕಡಿಮೆ ತಾಪಮಾನ ಇರುವುದರಿಂದ, ಗಾಡಿಗಳ ಬ್ಯಾಟರಿ ತಣ್ಣಗಾಗಿರುತ್ತದೆ. ಕೆಲವೊಮ್ಮೆ, ರಾತ್ರಿಯಿಡೀ ನಿಂತಿರುವ ಗಾಡಿಗಳು ಬೆಳಗಿನ ಜಾವ ಬೇಗನೇ ಶುರುವಾಗಲ್ಲ, ಕಾರಣ ಬ್ಯಾಟರಿ ವಾರ್ಮ್-ಅಪ್ ಆಗಿರುವುದಿಲ್ಲ. ಗಾಡಿಯ ಬ್ಯಾಟರಿ ಹಳೆಯದಾಗಿದ್ದಾಗ ಈ ತೊಂದರೆ ಕಂಡುಬರುವುದುಂಟು. ಈ ಸಮಯದಲ್ಲಿ ಜಂಪರ್ ತಂತಿಗಳು ಇದ್ದರೆ, ಅವುಗಳನ್ನು ನೆರೆಹೊರೆಯವರ ಕಾರಿನ ಬ್ಯಾಟರಿಗೆ ಜೋಡಿಸಿ ಜಂಪ್ ಸ್ಟಾರ್ಟ್ ಮಾಡಬಹುದು. ಅಕ್ಕಪಕ್ಕದಲ್ಲಿ ಬೇರೆ ಕಾರು ಸಿಗದೇ ಇದ್ದಲ್ಲಿ, ಹೀಗೆ ಮಾಡಬಹುದು. ಬಹಳಷ್ಟು ಕಾರಿನ ವಿಮೆಗಳು ಇಲ್ಲವೇ ಶೋರೂಮ್‌ಗಳು ದಾರಿಬದಿ ನೆರವು(roadside assist) ಎಂಬ ಸೇವೆಗಳನ್ನು ನೀಡಿರುತ್ತಾರೆ. ದಾರಿಬದಿ ನೆರವು ನವರಿಗೆ ಕರೆಮಾಡಿದರೆ, ಉಚಿತವಾಗಿ ಬಂದು ನಿಮಗೆ ಜಂಪ್ ಸ್ಟಾರ್ಟ್ ಮಾಡಿಕೊಡುತ್ತಾರೆ. ದಾರಿಬದಿ ನೆರವು ಎಂಬುದು ಇಂತಹ ಇಕ್ಕಟ್ಟಿನ ಸಂದರ್ಭಗಳಲ್ಲಿ ನೆರವಿಗೆ ಬರುತ್ತದೆ. ಪದೇ ಪದೇ ಈ ರೀತಿ ಗಾಡಿಯ ಬ್ಯಾಟರಿ ಕೆಟ್ಟು ನಿಲ್ಲುತ್ತಿದ್ದರೆ, ಬ್ಯಾಟರಿಯನ್ನು ಒಂದೊಮ್ಮೆ ನುರಿತ ಮೆಕ್ಯಾನಿಕ್ ಬಳಿ ತೋರಿಸಿ ಹೊಸ ಬ್ಯಾಟರಿಗೆ ಬದಲಾಯಿಸಿಕೊಳ್ಳುವುದು ಒಳ್ಳೆಯದು.

3.ಕೀಲೆಣ್ಣೆ ಮತ್ತು ತಂಪುಕಗಳ ಮಾಹಿತಿ:

ಗಾಡಿಯ ಕೀಲೆಣ್ಣೆ (Engine Oil) ಮತ್ತು ತಂಪುಕಗಳ(Coolant) ಮಟ್ಟವನ್ನು ಆಗಾಗ ಪರೀಕ್ಷಿಸಿ. ಇವುಗಳ ಮಟ್ಟ ಕಡಿಮೆ ಎನ್ನಿಸಿದರೆ, ಗಾಡಿಯ ಬಳಕೆ ಕೈಪಿಡಿಯಲ್ಲಿ ಹೆಸರಿಸಿದ ಗುಣಮಟ್ಟದ ಕೀಲೆಣ್ಣೆ ಮತ್ತು ತಂಪುಕವನ್ನು ತುಂಬಿಸಬೇಕು.ಅತಿಯಾದ ಚಳಿಯ ವಾತಾವರಣದಲ್ಲಿ ಗಾಡಿಯು ಸುಮಾರು ಹೊತ್ತು ಶುರು ಮಾಡದೇ ಬಿಟ್ಟರೆ, ಕೀಲೆಣ್ಣೆ ಮುಂತಾದವು ಕೆಲವೊಮ್ಮೆ ಹೆಪ್ಪುಗಟ್ಟುವುದುಂಟು, ಇದರಿಂದ ಗಾಡಿಯು ಬೇಗನೇ ಶುರುವಾಗದೇ ಇರಬಹುದು. ಒಂದೊಮ್ಮೆ, ಗಾಡಿಯನ್ನು ಒಂದೇ ಕಡೆ ಹಲವಾರು ದಿನ ನಿಲ್ಲಿಸುವ ಸಂದರ್ಭ ಬಂದರೆ, ದಿನವೂ ಒಂದು ಸಲ ಕಾರನ್ನು ಶುರು ಮಾಡಿ ಇಲ್ಲವೇ ಮನೆಯ ಅಕ್ಕಪಕ್ಕದಲ್ಲಿ 2-3 ಸುತ್ತು ಹಾಕಿ ಬಂದರೆ ಒಳ್ಳೆಯದು.

  1. ಒರೆಸುಕ ಮತ್ತು ಗಾಳಿತಡೆ ಗಾಜುಗಳು:

ಚಳಿಗಾಲದಲ್ಲಿ ಒರೆಸುಕ(Wiper) ಮತ್ತು ಗಾಳಿತಡೆ ಗಾಜುಗಳು(Wind Shield Glass) ಸರಿಯಾಗಿ ಕೆಲಸ ಮಾಡುತ್ತಿರಬೇಕು. ಗಾಳಿತಡೆ ಗಾಜುಗಳಲ್ಲಿ ಯಾವ ಚಿಕ್ಕ ಪುಟ್ಟ ತೂತುಗಳು ಇರದೇ ಭದ್ರವಾಗಿರಬೇಕು. ಒರೆಸುಕಗಳು ಹಳತಾಗಿದ್ದರೆ, ಬದಲಾಯಿಸಿ ಬಿಡಿ. ಗಾಡಿಯನ್ನು ಆಚೆ ಕಡೆ, ಯಾವುದೇ ಹೊದಿಕೆಯಿರದೇ ರಾತ್ರಿಹೊತ್ತು ನಿಲ್ಲಿಸಬೇಕಾಗಿ ಬಂದರೆ, ಬೆಳಿಗ್ಗೆ ಗಾಡಿಯ ಗಾಳಿತಡೆ ಗಾಜಿನ ಮೇಲೆ ಸಾಕಷ್ಟು ಮಂಜು ಸೇರಿಕೊಂಡು, ಗಾಡಿ ಮುಂದೆ ಏನೂ ಕಾಣದಂತೆ ಅಡ್ಡಿಯಾಗುತ್ತದೆ. ಆಗ, ಗಾಡಿಯಲ್ಲಿರುವ ಮಂಜು ಕರಗಿಸುಕ(Defroster) ಶುರು ಮಾಡಿ ಸ್ವಲ್ಪ ಹೊತ್ತು ಬಿಟ್ಟರೆ ಮಂಜು ಕರಗಿ, ಮುಂದಿನ ದಾರಿ ಸ್ಪಷ್ಟವಾಗಿ ಕಾಣುತ್ತದೆ. ಗಾಡಿಯಲ್ಲಿರುವ ಮಂಜು ಕರಗಿಸುಕ ಕೂಡ ಸರಿಯಾಗಿ ಕೆಲಸ ಮಾಡುತ್ತಿರುವ ಬಗ್ಗೆ ಖಾತರಿ ಪಡಿಸಿಕೊಳ್ಳಿ.

  1. ಗಾಲಿಯ ಸ್ಥಿತಿ:

ಗಾಡಿಯ ಗಾಲಿಗಳ ಒತ್ತಡದ ಮಟ್ಟ ಕುಸಿದಿದ್ದರೆ, ಗಾಳಿ ತುಂಬಿಸಿ ಸರಿಯಾದ ಮಟ್ಟದಲ್ಲಿರುವಂತೆ ನೋಡಿಕೊಳ್ಳಬೇಕು. ಇಂದಿನ ಹೆಚ್ಚಿನ ಕಾರುಗಳಲ್ಲಿ ಗಾಲಿಗಳ ಒತ್ತಡದ ಮಟ್ಟ ತಿಳಿಸುವ ಅರಿವಿಕ(Tyre pressure monitroing sensor) ಇರುತ್ತವೆ. ಇವುಗಳು ಕಾರಿನ ತೋರುಮಣೆ(Dashboard) ನಲ್ಲೇ ಗಾಲಿಗಳ ಒತ್ತಡದ ಮಟ್ಟ ತೋರಿಸುತ್ತವೆ. ಗಾಲಿಗಳಲ್ಲಿ ಗಾಳಿ ಕಡಿಮೆಯಾದಾಗ ಅರಿವಿಕಗಳು ಸರಿಪಡಿಸುವಂತೆ ಮಾಹಿತಿ ಕೊಡುತ್ತವೆ. ಅದನ್ನು ಬಳಸಿಕೊಂಡು, ಗಾಳಿ ಒತ್ತಡ ಸರಿಯಾದ ಮಟ್ಟದಲ್ಲಿ ಇರುವಂತೆ ಗಾಳಿ ತುಂಬಿಸಬೇಕು. ಹಾಗೆಯೇ ಗಾಲಿಗಳು ಅತಿಯಾಗಿ ಸವೆದಿದ್ದರೆ, ಒಮ್ಮೆ ಸರಿಯಾಗಿ ಪರೀಕ್ಷಿಸಿಕೊಳ್ಳಬೇಕು. ಗಾಲಿಗಳ ಸವೆತದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಕಾರಿನ ಬಳಕೆದಾರರ ಕೈಪಿಡಿಯಲ್ಲಿ ನೋಡಿ ತಿಳಿಯಬಹುದು. ಕಾರಿನಲ್ಲಿರುವ ಬಿಡಿ-ಗಾಲಿ(spare wheel)ಯನ್ನು ತುರ್ತು ಅಗತ್ಯಕ್ಕೆ ಬಳಸಿಕೊಳ್ಳಿ.

 

ದೂರದೂರಿಗೆ, ಮಂಜುಬೀಳುವ ಅತಿಚಳಿಯ ಪ್ರದೇಶಗಳ ತೆರಳುವ ಮುನ್ನ ಅಲ್ಲಿನ ವಾತಾವರಣ ಬಗ್ಗೆ ತಿಳಿದುಕೊಂಡು, ಕಾರಿನ ಎಲ್ಲ ಏರ್ಪಾಟು ಸರಿಯಾಗಿ ಕೆಲಸ ಮಾಡುವುದನ್ನು ಖಚಿತಪಡಿಸಿಕೊಂಡಿರಿ.

 

ತಿಟ್ಟ ಸೆಲೆ: acko.com

ಜಿ-ಕ್ಯಾನ್ಸ್: ನೆರೆಗೊಂದು ಬಗೆಹರಿಕೆ

ರತೀಶ ರತ್ನಾಕರ.

G-Cans-9003

ನೆಲನಡುಗುವಿಕೆ ಮತ್ತು ನೆರೆಯಂತಹ ಪ್ರಕೃತಿ ವಿಕೋಪಗಳು ಜಪಾನ್ ನಾಡಿಗೆ ಹೊಸದೇನಲ್ಲ. ಇಂತಹ ಹಲವಾರು ಆಪತ್ತುಗಳನ್ನು ಎದುರಿಸಲು ಅಲ್ಲಿನ ಮಂದಿ ಎಂದಿಗೂ ಅಣಿಯಾಗಿರುತ್ತಾರೆ. ಇಂತಹ ಆಪತ್ತುಗಳಿಂದ ಕಾಪಾಡಿಕೊಳ್ಳಲು ಹೆಚ್ಚಾಗಿ ಅವರು ಅರಿಮೆಯ ಮೊರೆಹೋಗಿ, ಅದರ ಆಧಾರದ  ಮೇಲೆ ತಮ್ಮ ಮನೆ ಹಾಗು ಊರುಗಳನ್ನು ಕಟ್ಟಿಕೊಂಡಿದ್ದಾರೆ. ಇಂತಹದ್ದೇ ಒಂದು ಹಮ್ಮುಗೆಗಳಲ್ಲಿ ಜಿ-ಕ್ಯಾನ್ಸ್ ಹಮ್ಮುಗೆಯೂ ಒಂದು. ಜಪಾನಿನ ರಾಜಧಾನಿ ಟೋಕಿಯೋ ನಗರವನ್ನು ನೆರೆಯಿಂದ ಕಾಪಾಡಿಕೊಳ್ಳಲು ಹಾಕಿಕೊಂಡ ಹಮ್ಮುಗೆಯೇ ಜಿ-ಕ್ಯಾನ್ಸ್ (G-Cans). ಇದು ನೆರೆಯಿಂದ ಕಾಪಾಡಿಕೊಳ್ಳಲು ಇರುವ ಹಮ್ಮುಗೆಗಳಲ್ಲಿ ಜಗತ್ತಿನಲ್ಲಿಯೇ ಅತಿ ದೊಡ್ಡ ಹಮ್ಮುಗೆಯಾಗಿದೆ.

ಟೋಕಿಯೋ ನಗರವು ಹಲವಾರು ನದಿಗಳಿಂದ ಕೂಡಿದೆ, ಮಳೆಯು ಹೆಚ್ಚಾದಂತೆ ಈ ನದಿಗಳಲ್ಲಿ ನೆರೆ ಬಂದು ಟೋಕಿಯೋ ನಗರಕ್ಕೆ ತೊಂದರೆಯಾಗುತ್ತಿತ್ತು. ಇದನ್ನು ತಪ್ಪಿಸಲೆಂದೇ ಜಿ-ಕ್ಯಾನ್ಸ್ ಹಮ್ಮುಗೆಯನ್ನು ಕಯ್ಗೆತ್ತಿಕೊಳ್ಳಲಾಯಿತು. ಇದನ್ನು ಮೆಟ್ರೋಪಾಲಿಟನ್ ಏರಿಯಾ ಅವ್ಟರ್ ಅಂಡರ್ ಗ್ರವ್‍ಂಡ್ ಡಿಸ್‍ಚಾರ್‍ಜ್ ಚಾನೆಲ್ (Metropolitan Area Outer Underground Discharge Channel) ಎಂದು ಕೂಡ ಕರೆಯುತ್ತಾರೆ. ಈ ಹಮ್ಮುಗೆಯಲ್ಲಿ ನದಿಯಿಂದ ಬರುವ ಹೆಚ್ಚಿನ ನೀರನ್ನು ಉರುಳೆ ಆಕಾರವಿರುವ ಅಯ್ದು ಬೇರೆ ಬೇರೆ ಹೆಗ್ಗಂಬ(silos)ಗಳು ಮತ್ತು ಸುರಂಗದ ನೆರವಿನಿಂದ ಟೋಕಿಯೋ ನಗರದ ಹೊರಕ್ಕೆ ಕಳುಹಿಸಲಾಗುವುದು. ನೀರನ್ನು ಟೋಕಿಯೋ ನಗರದಿಂದ 30 ಕಿ. ಮೀ ದೂರವಿರುವ ಕಸುಕಾಬೆ ನಗರದ ಬಳಿ ಇರುವ ಎಡೊಗೊವಾ ನದಿಗೆ ಹರಿಸಲಾಗುವುದು. ಬನ್ನಿ ಇದನ್ನು ಹೇಗೆ ಮಾಡಲಾಗಿದೆ ಎಂಬುದನ್ನು ತಿಳಿಯೋಣ.

l_tecb130312

ಟೋಕಿಯೋದಲ್ಲಿ ಬರುವ ನೆರೆಯ ನೀರನ್ನು ಸುರಂಗಕ್ಕೆ ತಲುಪಿಸಲು ನಗರದ ಅಯ್ದು ಕಡೆಗಳಲ್ಲಿ ಉರುಳೆ ಆಕಾರಾದ ಹೆಗ್ಗಂಬಗಳನ್ನು ಕಟ್ಟಲಾಗಿದೆ. ಒಂದೊಂದು ಹೆಗ್ಗಂಬ 65 ಮೀ. ಎತ್ತರ ಮತ್ತು 32 ಮೀ. ಅಡ್ಡಗಲವಿದೆ. ಈ ಹೆಗ್ಗಂಬದ ತುದಿಗಳು ನೆಲದಿಂದ ಕೆಲವೇ ಮೀಟರುಗಳಷ್ಟು ಎತ್ತರವಿದ್ದು ಉಳಿದ ಭಾಗವೆಲ್ಲ ನೆಲದ ಅಡಿಗೆ ಹೋಗಿರುತ್ತದೆ. ಮೇಲಿನ ಚಿತ್ರದಲ್ಲಿ ತೋರಿಸಿದಂತೆ ಹೆಗ್ಗಂಬಗಳ ನಡುವೆ ಸುರಂಗವಿದೆ. ಈ ಸುರಂಗದ ಅಡ್ಡಳತೆ 10.6 ಮೀ ಆಗಿದೆ, ಮತ್ತು ಈ ಸುರಂಗವು ನೆಲದಿಂದ ಮೇಲಿಂದ 50 ಮೀಟರ್ ನಷ್ಟು ಆಳಕ್ಕೆ ಇದೆ. ಹೀಗೆ ಬೇರೆ ಬೇರೆ ಕಡೆಗಳಲ್ಲಿರುವ ಅಯ್ದು ಹೆಗ್ಗಂಬಗಳು ಸುರಂಗದಿಂದ ಕೂಡಿಕೊಂಡು ಒಟ್ಟು 6 ಕಿಲೋ ಮೀಟರ್ ನಷ್ಟು ಉದ್ದಕ್ಕೆ ಹರಡಿಕೊಂಡಿದೆ.

gcans4_1024x683

ಈ ಸುರಂಗ ಹಾಗು ಹೆಗ್ಗಂಬದ ಕೊನೆಗೆ ದೊಡ್ಡದೊಂದು ನೀರಿನ ತೊಟ್ಟಿಯನ್ನು ನೆಲದೊಳಗೆ ಕಟ್ಟಲಾಗಿದೆ. ಇದನ್ನು ದಿ ಟೆಂಪಲ್ (The Temple) ಎಂದು ಕರೆಯುತ್ತಾರೆ. ಇದು ಕೇವಲ 25.4 ಮೀ ಎತ್ತರವಿದೆ ಆದರೆ ಇದರ ಉದ್ದ ಸುಮಾರು 177 ಮೀ. ಮತ್ತು ಅಗಲ 78 ಮೀ. ಇದೆ. ಇಷ್ಟು ದೊಡ್ಡ ನೀರಿನ ತೊಟ್ಟಿಯ ನಡುವೆ ಆನಿಕೆಗಾಗಿ (support) ಸುಮಾರು 59 ಕಂಬಗಳನ್ನು (20 ಮೀ. ಉದ್ದ) ಕಟ್ಟಲಾಗಿದೆ.

ಇದು ಹೇಗೆ ಕೆಲಸ ಮಾಡುತ್ತದೆ?

ಟೋಕಿಯೋ ನಗರದ ಸುತ್ತಮುತ್ತ ಮಳೆ ಹೆಚ್ಚಾಗಿ ನದಿಗಳಲ್ಲಿ ನೆರೆ ಬಂದಾಗ, ನದಿಯು ತುಂಬಿ ಹೆಚ್ಚಾದ ನೀರನ್ನು ಹೆಗ್ಗಂಬಗಳ ಮೇಲ್ತುದಿಯ ಕಡೆಗೆ ಸಾಗಿ

ಸುವ ಏರ್ಪಾಡನ್ನು ಮಾಡಲಾಗಿದೆ. ಈ ಹೆಗ್ಗಂಬಗಳ ತಳದಲ್ಲಿ ನದಿಯ ನೀರು ತುಂಬಿಕೊಳ್ಳುತ್ತಾ ಹೋಗುತ್ತದೆ, ತುಂಬಿಕೊಂಡ ನೀರು ಸುರಂಗದ ಮೂಲಕ ಮತ್ತೊಂದು ಹೆಗ್ಗಂಬವನ್ನು ಸೇರುತ್ತದೆ. ಹೀಗೆ ಮುಂದುವರಿದು ಹೆಚ್ಚಿನ ನೀರು ಸುರಂಗದ ಮೂಲಕ ಕೊನೆಯ ಹೆಗ್ಗಂಬದಲ್ಲಿ ತುಂಬಿಕೊಳ್ಳುತ್ತದೆ. ಕೊನೆಯ ಹೆಗ್ಗಂಬದಿಂದ ನೀರು ಮುಂದುವರಿದು ದೊಡ್ಡ ನೀರಿನ ತೊಟ್ಟಿಯಲ್ಲಿ ತುಂಬಿಕೊಳ್ಳುತ್ತದೆ.

ಈ ದೊಡ್ಡ ನೀರಿನ ತೊಟ್ಟಿಗೆ 10 ಮೆಗಾ ವ್ಯಾಟ್ ಹುರುಪಿರುವ 78 ನೀರೆತ್ತುಕ (water pump)ಗಳನ್ನು ಮತ್ತು 14000 ಎಚ್ ಪಿ ಹುರುಪುಳ್ಳ ಟರ್ಬೈನ್ ಗಳನ್ನು ಅಳವಡಿಸಲಾಗಿದೆ. ಇದರ ನೆರವಿನಿಂದ 200 ಟನ್ ನೀರನ್ನು ಒಂದು ಸೆಕೆಂಡಿಗೆ ನೀರಿನ ತೊಟ್ಟಿಯಿಂದ ಎತ್ತಿ ಹೊರ ಹಾಕಬಹುದಾಗಿದೆ. ಹೀಗೆ ಹೊರಗೆತ್ತುವ ನೀರನ್ನು ಎಡೊಗೊವಾ ನದಿಗೆ ಬಿಡಲಾಗುವುದು. ಟೋಕಿಯೋ ನಗರವು ಎಡಗೋವಾ ನದಿಗಿಂತ ಎತ್ತರದ ಬಾಗದಲ್ಲಿದೆ, ಮತ್ತು ಎಡೊಗೊವಾ ನದಿಯು ಕಡಲಿಗೆ ಹತ್ತಿರವಾಗಿದೆ. ಹಾಗಾಗಿ ಎಡಗೋವಾ ನದಿಗೆ ಹರಿಸುವ ಹೆಚ್ಚಿನ ನೀರಿನಿಂದ ಟೋಕಿಯೋ ನಗರಕ್ಕಾಗಲಿ ಇಲ್ಲವೇ ಆ ನದಿಯ ದಡದಲ್ಲಿರುವ ಬೇರೆ ನಗರಗಳಿಗೆ ಯಾವುದೇ ಹಾನಿಯಾಗುವುದಿಲ್ಲ. ಅಲ್ಲದೇ ನೀರಿನ ಹರಿವನ್ನು ಗಮನಿಸಲು ಮತ್ತು ಹತೋಟಿಯಲ್ಲಿಡಲು ಒಂದು ಹತೋಟಿ ಕೋಣೆ (control room) ಕೂಡ ಕೆಲಸ ಮಾಡುತ್ತಿರುತ್ತದೆ.

tokyo-underground-temple-6

ಈ ಹಮ್ಮುಗೆಗೆ ಬೇಕಾದ ನೆಲದಡಿಯ ಕಾಲುವೆಯನ್ನು ‘ಕಾಪಿಡುವ ಸುರಂಗ ಕಟ್ಟುವ ಚಳಕ‘ (Shield Tunneling Technology)ವನ್ನು ಬಳಸಿ ಕಟ್ಟಲಾಗಿದೆ. ಈ ಚಳಕದಲ್ಲಿ, ಮೊದಲು ಗಟ್ಟಿಯಾದ, ಬಲಪಡಿಸುವಂತಹ ಪಟ್ಟಿಗಳನ್ನು ನೆಲಕ್ಕೆ ತಳ್ಳಿ ಒಂದು ಚೌಕಟ್ಟನ್ನು ಮಾಡಿಕೊಳ್ಳಲಾಗುವುದು. ಈ ಚೌಕಟ್ಟಿನಲ್ಲಿ ನಡುವಿನ ಮಣ್ಣನ್ನು ತೆಗೆದು ಸುರಂಗ ಇಲ್ಲವೆ ಹೆಗ್ಗಂಬ ಕಟ್ಟುವ ಕೆಲಸ ಮಾಡಲಾಗುವುದು. ಸುತ್ತಲಿನ ಮಣ್ಣು ಜಾರದಂತೆ ಈ ಚೌಕಟ್ಟು ನೆರವಾಗುತ್ತದೆ. ಹೀಗೆ ಚೌಕಟ್ಟನ್ನು ಕಟ್ಟಿಕೊಂಡು ನೆಲವನ್ನು ಅಗೆಯುತ್ತಾ ಕೆಲಸವನ್ನು ಮುಂದುವರಿಸಲಾಗುವುದು.

ಹೀಗೆ, ನೆರೆಯಿಂದ ಬಳಲುತ್ತಿದ್ದ ಟೋಕಿಯೋ ನಗರವನ್ನು ಕಾಪಾಡಲು ನೆರೆಯ ನೀರನ್ನು ಕೂಡಿಹಾಕಿ, ನೆಲದಡಿಗೆ ಕಳುಹಿಸಿ, ಸುರಂಗದ ಮೂಲಕ ಟೋಕಿಯೋ ನಗರವನ್ನು ದಾಟಿಸಿ, ದೂರದ, ತೊಂದರೆಗೊಳಗಾಗದ ಜಾಗವಾದ ಎಡೊಗೊವಾ ನದಿಗೆ ತಲುಪಿಸಿದ್ದಾರೆ. ಈ ಹಮ್ಮುಗೆಯನ್ನು 1992 ರಿಂದ 2009 ರವರೆ ಅಂದರೆ ಸುಮಾರು 17 ವರುಶಗಳ ಕಾಲ ತೆಗೆದುಕೊಂಡು ಮುಗಿಸಿದ್ದಾರೆ. ಇನ್ನು ಮಳೆಗಾಲವಲ್ಲದ ಹೊತ್ತಿನಲ್ಲಿ ಈ ಹಮ್ಮುಗೆಯು ಪ್ರವಾಸಿ ತಾಣವಾಗಿ ಮಾರ್‍ಪಡುತ್ತದೆ. ಹೆಗ್ಗಂಬಗಳಲ್ಲಿರುವ ಮೆಟ್ಟಿಲುಗಳ ಮೂಲಕ ಕೆಳಗಿಳಿದು ಸುರಂಗ ಮತ್ತು ದೊಡ್ಡ ನೀರಿನ ತೊಟ್ಟಿಯನ್ನೆಲ್ಲಾ ನೋಡಿಕೊಂಡು ಬರಬಹುದು.

(ಮಾಹಿತಿ ಮತ್ತು ಚಿತ್ರ ಮೂಲinterestingengineering.com g-cans)

ಬೆಳ್ಳಿ ಕಿರಣ ಮೂಡಿಸಿದ ಸಾಲಿಡ್ ಸ್ಟೇಟ್ ಬ್ಯಾಟರಿ

ಜಯತೀರ್ಥ ನಾಡಗೌಡ

ಬಹುತೇಕ ವಿದ್ಯುತ್ತಿನ ಕಾರುಗಳಲ್ಲಿ ಬಳಸಲ್ಪಡುವ ಲಿಥಿಯಮ್ ಅಯಾನ್ ಬ್ಯಾಟರಿ ಬದಲಿಗೆ ಸೋಡಿಯಮ್ ಅಯಾನ್ ಬ್ಯಾಟರಿಗಳ ಬಗ್ಗೆ ಸಂಶೋಧನೆಗಳು ಒಂದೆಡೆ ನಡೆಯುತ್ತಿದ್ದರೆ, ಸ್ಯಾಮ್‌ಸಂಗ್ ರವರ ಹೊಸದಾದ ಸಂಶೋಧನೆ ಬ್ಯಾಟರಿಗಳ ಲೋಕದಲ್ಲಿ ಸಂಚಲನ ಮೂಡಿಸಿದೆ. ಹೆಸರುವಾಸಿ ಸ್ಯಾಮ್‌ಸಂಗ್ ಕಂಪನಿಯವರು ಬೆಳ್ಳಿಯ ಸಾಲಿಡ್ ಸ್ಟೇಟ್ ಬ್ಯಾಟರಿಯನ್ನು ಕಂಡುಹಿಡಿದಿದ್ದು. ಬ್ಯಾಟರಿ ಉದ್ದಿಮೆಯಲ್ಲಿ ಇದು ಹೊಸತಾಗಿದೆ. ಇಂದು ಹೆಚ್ಚಾಗಿ ಬಳಸುವ ಲಿಥಿಯಂ ಅಯಾನ್ ಬ್ಯಾಟರಿಗಳಲ್ಲಿ ಬಳಸಲ್ಪಡುವ ಎಲೆಕ್ಟ್ರೋಲೈಟ್‌ಗಳು ದ್ರವ ರೂಪದಲ್ಲಿರುತ್ತವೆ(Liquid State). ಆದರೆ, ಸ್ಯಾಮ್‌ಸಂಗ್ ಮುಂದಿಟ್ಟಿರುವ ಸಿಲ್ವರ್ ಸಾಲಿಡ್ ಸ್ಟೇಟ್ ಬ್ಯಾಟರಿಗಳಲ್ಲಿ ಗಟ್ಟಿಯಾದ ಬೆಳ್ಳಿಯ ಎಲೆಕ್ಟ್ರೋಲೈಟ್‌ಗಳು ಇರಲಿವೆ.

ಸಾಮಾನ್ಯ ಮಿಂಕಟ್ಟುಗಳಲ್ಲಿ ದ್ರವರೂಪದ ಎಲೆಕ್ಟ್ರೋಲೈಟ್‌ಗಳೇ ಅಯಾನ್‌ಗಳು ಕ್ಯಾಥೋಡ್ ಮತ್ತು ಅನೋಡ್ ಬದಿ ಬೇರ್ಪಡುವಂತೆ ಮಾಡುತ್ತವೆ. ಈ ದ್ರವರೂಪದ ಎಲೆಕ್ಟ್ರೋಲೈಟ್ ಬದಲು ಇದೇ ಮೊದಲ ಬಾರಿಗೆ ಘನರೂಪದ ಗಟ್ಟಿಯಾದ ಬೆಳ್ಳಿ-ಇಂಗಾಲದ(Silver-Carbon, Ag-C) ಎಲೆಕ್ಟ್ರೋಲೈಟ್ ಅಭಿವೃದ್ಧಿ ಪಡಿಸಲಾಗಿದೆ. ಗಟ್ಟಿಯಾದ ಎಲೆಕ್ಟ್ರೋಲೈಟ್ ಹೆಚ್ಚಿನ ಅಳುವು ಹೊಂದಿವೆ. ಸಾಮಾನ್ಯ ದ್ರವ ರೂಪದ ಎಲೆಕ್ಟ್ರೋಲೈಟ್ ಸುಮಾರು 270 Wh/kg ಅಳುವು ಹೊಂದಿದ್ದರೆ, ಗಟ್ಟಿಯಾದ ಎಲೆಕ್ಟ್ರೋಲೈಟ್ 500 Wh/kg ನಷ್ಟು ಹೆಚ್ಚಿನ ಅಳುವು ಹೊಂದಿದೆ. ಇದು ಅಲ್ಲದೇ, ದ್ರವರೂಪದ ಎಲೆಕ್ಟ್ರೋಲೈಟ್‌ಗಳು ಉರಿ ಹೊತ್ತಿಕೊಳ್ಳಬಲ್ಲವಂತವು, ಇದರಿಂದ ಬೆಂಕಿ ಹೊತ್ತಿಕೊಳ್ಳುವ ಅಪಾಯ ಹೆಚ್ಚಾಗಿರುತ್ತದೆ. ಸ್ಯಾಮ್‌ಸಂಗ್ ರವರ ಗಟ್ಟಿಯಾದ ಬೆಳ್ಳಿಯ ಮಿನ್ನೊಡೆಕಗಳಲ್ಲಿ(Electrolyte) ಈ ಅಪಾಯ ಇರುವುದಿಲ್ಲ.  ಹೆಚ್ಚಿನ ಅಳುವು ಹೊಂದಿರುವ ಸಾಲಿಡ್ ಸ್ಟೇಟ್ ಎಲೆಕ್ಟ್ರೋಲೈಟ್ ಮಿಂಕಟ್ಟುಗಳು ಒಮ್ಮೆ ಹುರುಪು(Charge) ತುಂಬಿದರೆ ಹೆಚ್ಚಿನ ದೂರದವರೆಗೆ ಸಾಗಬಲ್ಲವು ಅಂದರೆ ಸುಮಾರು 960 ಕಿಮೀಗಳಷ್ಟು.

ಈ ಬ್ಯಾಟರಿಗಳಿಗೆ ಕೇವಲ 9-10 ನಿಮಿಷಗಳಲ್ಲಿ ಪೂರ್ತಿಯಾಗಿ ಹುರುಪು ತುಂಬಬಹುದಾಗಿದೆ. ಹೆಚ್ಚಿನ ಅಳುವು(Efficiency), ಒಮ್ಮೆ ಹುರುಪು ತುಂಬಿಸಿದರೆ ಹೆಚ್ಚು ದೂರದವರೆಗೆ ಸಾಗಣೆ ಹಾಗೂ ಕಡಿಮೆ ಸಮಯದಲ್ಲಿ 100% ಚಾರ್ಜ್ ಆಗುವ ಈ ಬ್ಯಾಟರಿಗಳು ವೇಗವಾಗಿ ಬೆಳೆಯುತ್ತಿರುವ ಎಲೆಕ್ಟ್ರಿಕ್ ವಾಹನ ಉದ್ದಿಮೆಗೆ ಸಾಕಷ್ಟು ನೆರವಾಗಲಿದೆ ಎಂದು ಸ್ಯಾಮ್‌ಸಂಗ್ ಸಂಸ್ಥೆ ಹೇಳಿಕೊಂಡಿದೆ.  ಈಗಾಗಲೇ ಇಂತಹ ಬೆಳ್ಳಿಯ ಮಿಂಕಟ್ಟುಗಳ ಮಾದರಿಗಳನ್ನು ತಯಾರಿಸಿ ಕೆಲವು ಕಾರುತಯಾರಕರಿಗೆ ಸ್ಯಾಮ್‌ಸಂಗ್ ಸಂಸ್ಥೆ ನೀಡಿದ್ದು, ಅವರ ಮೊದಲ ಪ್ರಯೋಗಗಳಲ್ಲಿ ಸಕಾರಾತ್ಮಕ ಫಲಿತಾಂಶ ಬಂದಿವೆಯಂತೆ.

ಬೆಳ್ಳಿ ಲೋಹ ದುಬಾರಿಯಾಗಿರುವುದು ಇಂತಹ ಬ್ಯಾಟರಿಗಳ ಬೆಳವಣಿಗೆಗೆ ಇರುವ ಮೊದಲ ತೊಡಕು. ಈ ಬೆಳವಣಿಗೆಯಿಂದ ಬೆಳ್ಳಿಗೆ ಬೇಡಿಕೆ ಏರಿಕೆಯಾಗಿ ಅದರ ಬೆಲೆ ಇನ್ನೂ ದುಬಾರಿಯಾಗಲಿದೆ ಎಂದು ಹಲವರು ಅಭಿಪ್ರಾಯ ಪಟ್ಟಿದ್ದಾರೆ. ಮುಂಬರುವ ದಿನಗಳಲ್ಲಿ ಈ ಘನರೂಪದ ಮಿಂಕಟ್ಟುಗಳು ಹೆಚ್ಚಿನ ಮಿಂಚಿನ ಕಾರುಗಳಲ್ಲಿ ಬಳಕೆಯಾಗಲಿದ್ದು, ಚೀನಾ ಮೂಲದ ಲಿಥಿಯಮ್-ಅಯಾನ್ ಬ್ಯಾಟರಿ ಕಂಪನಿಗಳಿಗೆ ಇದು ಪಣವೊಡ್ಡಲಿದೆ ಎಂಬುದು ಆಟೋಮೊಬೈಲ್ ಉದ್ಯಮದಲ್ಲಿ ಕೇಳಿ ಬರುತ್ತಿರುವ ಸುದ್ದಿ.

ತಿಟ್ಟ ಮತ್ತು ಮಾಹಿತಿ ಸೆಲೆ:

chargedevs.com

samsung.com

ಕಡಲಾಳದಲ್ಲಿ ಮುತ್ತುಗಳು ಹೇಗೆ ಮೂಡುತ್ತವೆ?

ರತೀಶ ರತ್ನಾಕರ.

pearls-in-oyster-shell

‘ನುಡಿದರೆ ಮುತ್ತಿನ ಹಾರದಂತಿರಬೇಕು…’ ಹನ್ನೆರಡನೇ ಶತಮಾನದಲ್ಲಿ ಹುಟ್ಟಿದ ವಚನಗಳನ್ನು ಕೇಳಿದರೆ ಮುತ್ತು-ರತ್ನಗಳ ಪರಿಚಯ ನಮಗೆ ತುಂಬಾ ಹಿಂದಿನಿಂದ ಇರುವುದು ತಿಳಿಯುತ್ತದೆ. ಕಡಲ ತೀರದಲ್ಲಿ ಮಾನವನು  ಊಟಕ್ಕಾಗಿ ಹುಡುಕಾಟ ನಡೆಸುತ್ತಿದ್ದಾಗ ಮುತ್ತುಗಳು ಕಣ್ಣಿಗೆ ಬಿದ್ದವು, ಬಳಿಕ ಅವು ಒಡವೆಗಳಾಗಿ ನಮ್ಮ ಬದುಕಿನಲ್ಲಿ ಬಳಕೆಗೆ ಬಂದವು. ಚೀನಾದ ಹಳಮೆಯ ಪ್ರಕಾರ ಸುಮಾರು  2300 BCE ಯಲ್ಲಿ ಮುತ್ತುಗಳ ಪರಿಚಯವಿತ್ತೆಂದು ಹೇಳಲಾಗುತ್ತದೆ. ಇಂಡಿಯಾದ ಹಳಮೆಯಲ್ಲಿ ಮುತ್ತುಗಳ ಬಗ್ಗೆ ದೊರೆತಿರುವ ಮೊದಲ ಗುರುತು ಎಂದರೆ,  600 BCE ಯಲ್ಲಿ ತೆಂಕಣ ಇಂಡಿಯಾವನ್ನು ಆಳುತ್ತಿದ್ದ ಪಾಂಡ್ಯರು ಮುತ್ತುಗಳ ವ್ಯಾಪಾರ ಮಾಡುತ್ತಿದ್ದರು ಎಂಬುದು. ಒಟ್ಟಾರೆಯಾಗಿ ಸುಮಾರು 4000 ವರುಶಗಳ ಹಿಂದಿನಿಂದ ಮುತ್ತುಗಳು ಬಳಕೆಯಲ್ಲಿರುವುದನ್ನು ನಾವು ಕಾಣಬಹುದು.

ತನ್ನದೇ ಆದ ನೋಟ, ಹೊಳಪು ಹಾಗು ಎಣೆಯಿಲ್ಲದ ಚೆಲುವಿನಿಂದ ಮುತ್ತುಗಳು ಬೆಲೆಬಾಳುವ ಒಡವೆಗಳಾಗಿವೆ. ಹಳಮೆಯ ಹಲವಾರು ದೊರೆಗಳ, ಒಡತಿಯರ ಕಿರೀಟದಲ್ಲಿ ಇವು ಮಿನುಗಿವೆ. ಕಡಲ ಆಳದಲ್ಲಿರುವ ಚಿಪ್ಪಿನಲ್ಲಿ ಮುತ್ತುಗಳು ಹೇಗೆ ಮೂಡುವುದು ಎಂಬುವುದಕ್ಕೆ ಹಲವಾರು ಕಟ್ಟುಕತೆಗಳೂ ಇವೆ. ಅವುಗಳಲ್ಲಿ ಒಂದು ಕತೆಯೆಂದರೆ ‘ಸ್ವಾತಿಮಳೆಯ ಹನಿಗಳು ಕಡಲಿಗೆ ಬಿದ್ದು ಆ ಹನಿಗಳು ಚಿಪ್ಪಿನಲ್ಲಿ ಕೂತು ಮುತ್ತುಗಳಾಗುತ್ತವೆ’ ಎಂಬುದು. ಮೊದಲೇ ಹೇಳಿದಂತೆ ಇದೊಂದು ಕತೆ ಆದರೆ ದಿಟವಾಗಿಯು ಮುತ್ತುಗಳು ಆಗುವುದು ಬೇರೆಯ ಬಗೆಯಲ್ಲಿ. ಸ್ವಾತಿಮಳೆಗೂ ಮುತ್ತಿಗೂ ಯಾವ ನಂಟು ಇಲ್ಲ!

ಕಡಲಿನಲ್ಲಿರುವ ಕೆಲವು ಬಗೆಯ ಮುತ್ತಿನ ಚಿಪ್ಪುಸಿರಿ(pearl oyster)ಯ ಚಿಪ್ಪಿನ ಒಳಗೆ ಮರಳಿನ ಕಣ ಇಲ್ಲವೇ ಚಿಕ್ಕ ಹೊರಕುಳಿ(parasite)ಗಳು ಹೊಕ್ಕುತ್ತವೆ. ಆ ಹೊರಕುಳಿಗಳು ಚಿಪ್ಪುಸಿರಿಯ ಮೈಯೊಳಗೆ ಬಂದು ತೊಂದರೆಯನ್ನು ನೀಡುವ ಸಾಧ್ಯತೆಗಳಿರುತ್ತವೆ. ಈ ತೊಂದರೆಯಿಂದ ತಪ್ಪಿಸಿಕೊಂಡು ತನ್ನ ಮೈಯನ್ನು ಕಾಪಾಡಿಕೊಳ್ಳಲು ಚಿಪ್ಪುಸಿರಿಯು ಮರಳಿನಕಣ/ಹೊರಕುಳಿಯನ್ನು, ಕ್ಯಾಲ್ಸಿಯಂ ಕಾರ‍್ಬೊನೇಟ್‍ನಿಂದಾದ ಮಡಿಕೆ(layer)ಗಳಿಂದ ಸುತ್ತುವರೆಯುತ್ತದೆ. ಹೀಗೆ ಹಲವಾರು ಮಡಿಕೆಗಳಿಂದ ಸುತ್ತುವರೆದಿರುವ ಹೊರಕುಳಿಯು ಚಿಪ್ಪುಸಿರಿಯ ಮಯ್ಯಿಗೆ ಯಾವುದೇ ತೊಂದರೆಯನ್ನು ನೀಡಲು ಆಗುವುದಿಲ್ಲ. ಹೀಗೆ ಹೊರಕುಳಿ ಮತ್ತು ಅದನ್ನು ಸುತ್ತುವರೆದಿರುವ ಕ್ಯಾಲ್ಸಿಯಂ ಕಾರ‍್ಬೊನೇಟ್ ನ ಮಡಿಕೆಗಳು ಗಟ್ಟಿಯಾಗಿ ‘ಮುತ್ತು’ಗಳಾಗಿ ಮಾರ್ಪಾಡುಗೊಳ್ಳುತ್ತವೆ.

ಮುತ್ತುಗಳನ್ನು ಮೂಡಿಸುವ ಚಿಪ್ಪುಸಿರಿಗಳು:
ಎಲ್ಲಾ ಬಗೆಯ ಚಿಪ್ಪುಸಿರಿಗಳಲ್ಲಿ ಮುತ್ತುಗಳು ಸಿಗುವುದಿಲ್ಲ. ಮುತ್ತುಗಳನ್ನು ಕೊಡುವ ಚಿಪ್ಪಿನ ಕೆಲವು ಪಂಗಡಗಳೆಂದರೆ;
-ಪಿಂಕ್ಟಡ ವುಲ್ಗರಿಸ್ (Pinctada vulgaris)
-ಪಿಂಕ್ಟಡ ಮಾರ‍್ಗರಿಟಿಪೆರಾ (Pinctada margaritifera)
-ಪಿಂಕ್ಟಡ ಕೆಮ್ನಿಟ್ಜಿ (Pinctada chemnitzi)

ಪಿಂಕ್ಟಡ ತಳಿಯಲ್ಲಿ ಇರುವ ಎಲ್ಲಾ ಪಂಗಡಗಳು(species) ಮುತ್ತುಗಳನ್ನು ಮೂಡಿಸುತ್ತವೆ.

ಮುತ್ತುಗಳನ್ನು ಮೂಡಿಸುವ ಚಿಪ್ಪುಸಿರಿಯ ಮೈ ಭಾಗಗಳು:

Thitta 2ಚಿಪ್ಪುಸಿರಿಯ ಹೊರ ಪದರವು ಗಟ್ಟಿಯಾದ ಚಿಪ್ಪಿನಿಂದ ಕೂಡಿರುತ್ತದೆ. ಈ ಚಿಪ್ಪಿನ ಪದರದ ಕೆಳಗೆ ತೆಳುವಾದ ಹೊದಿಕೆ(mantle) ಇರುತ್ತದೆ, ಚಿಪ್ಪು ಹಾಗು ಹೊದಿಕೆಯ ನಡುವೆ ಮುತ್ತುಗಳು ಮೂಡುತ್ತವೆ.

ಗಟ್ಟಿಯಾದ ಚಿಪ್ಪಿನ ಸೀಳುನೋಟದಲ್ಲಿ ಮೂರು ಮಡಿಕೆಗಳನ್ನು ನೋಡಬಹುದು;
1. ಚಿಪ್ಪುಸಿಪ್ಪೆ (Periostracum): ಇದು ಚಿಪ್ಪಿನ ಮೇಲ್ಪರೆ. ಕಾನ್ಕಿಯೋಲಿನ್ (Conchiolin) ಎನ್ನುವ ತಿರುಳಿನಿಂದ ಮಾಡಲ್ಪಟ್ಟಿರುತ್ತದೆ.
2. ಒಡೆಕದ ಮಡಿಕೆ(Prismatic layer): ಈ ಮಡಿಕೆಯು ಕ್ಯಾಲ್ಸಿಯಂ ಕಾರ‍್ಬೊನೇಟ್ ನ ಸಣ್ಣ ಸಣ್ಣ ಹರುಳಗಳಿಂದ ಆಗಿದೆ. ಈ ಹರಳುಗಳು ಒಂದರ ಮೇಲೊಂದು ನೆಟ್ಟಗೆ ಕಂಬದಂತೆ ಜೋಡಿಸಲ್ಪಟ್ಟ್ರಿರುತ್ತವೆ. ಒಂದೊಂದು ಕಂಬಗಳು ಕಾನ್ಕಿಯೋಲಿನ್ ತಿರುಳಿನಿಂದ ಬೇರ‍್ಪಟ್ಟಿರುತ್ತವೆ. ಈ ಮಡಿಕೆಯು ಚಿಪ್ಪಿಗೆ ಬೇಕಾದ ಗಟ್ಟಿತನವನ್ನು ಒದಗಿಸುತ್ತವೆ.
3. ಮುತ್ತೊಡಲ ಮಡಿಕೆ (Nacreous Layer): ಚಿಪ್ಪಿನ ಒಳಗಿನ ಮಡಿಕೆ ಇದು. ಇದನ್ನು ಮುತ್ತಿನ ತಾಯಿ (mother of pearl) ಇಲ್ಲವೇ ಮುತ್ತಿನ ಒಡಲು ಎಂದು ಕರೆಯುತ್ತಾರೆ. ಈ ಮಡಿಕೆಯೇ ಮುತ್ತನ್ನು ಮೂಡಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಕ್ಯಾಲ್ಸಿಯಂ ಕಾರ‍್ಬೊನೇಟ್ ಮತ್ತು ಕಾನ್ಕಿಯೋಲಿನ್ ನ ಸಣ್ಣ ಮಡಿಕೆಗಳು ಒಂದರ ಮೇಲೆ ಒಂದರಂತೆ ಇದರಲ್ಲಿರುತ್ತವೆ.

thitta 1

ಹೊದಿಕೆ(Mantle)ಯ ಭಾಗಗಳು: ಹೊದಿಕೆಯು ಕೂಡ ಮೂರು ಮಡಿಕೆಗಳನ್ನು ಹೊಂದಿದೆ.
1. ಕಂಬದಂತಿರುವ ಮೇಲ್ಪರೆ (Columnar epithelium): ಮುತ್ತೊಡಲನ್ನು (Nacre) ಒಸರುವ ಸುರಿಗೆಗಳನ್ನು ಇದು ಹೊಂದಿದೆ.
2. ಕೂಡಿಸುವ ಗೂಡುಕಟ್ಟಿನ ಮಡಿಕೆ (Connective tissue layer:): ಕೂಡಿಸುವ ಗೂಡುಕಟ್ಟುಗಳನ್ನು ಹೊಂದಿರುವ ಮಡಿಕೆ.
3. ಮುಂಚಾಚಿನ ಮೇಲ್ಪರೆ (Ciliated epithelium): ಲೋಳೆಯನ್ನು ಒಸರುವ ಸೂಲುಗೂಡನ್ನು ಇದು ಹೊಂದಿದೆ.

ಮುತ್ತು ಮೂಡುವ ಹಂತಗಳು:

Thitta 31. ಮರಳಿನ ಕಣ ಇಲ್ಲವೇ ಹೊರಕುಳಿಯೊಂದು ಚಿಪ್ಪಿನ ಗಟ್ಟಿಯಾದ ಮೇಲ್ಪರೆಯನ್ನು ಕೊರೆದುಕೊಂಡು ಒಳಗೆ ಬರುತ್ತದೆ.
2. ಇಂತಹ ಹೊರಕುಳಿಯು ಚಿಪ್ಪಿನ ಒಳಭಾಗ ಮತ್ತು ಹೊದಿಕೆಯ ನಡುವೆ ಸಿಕ್ಕಿಹಾಕಿಕೊಳ್ಳುತ್ತದೆ.
3. ಎರಡು ಮಡಿಕೆಗಳ ನಡುವೆ ಇರುವ ಕಣವು ಮೈಯಲ್ಲಿ ಕಿರಿಕಿರಿಯನ್ನು ಉಂಟುಮಾಡುತ್ತದೆ ಇದರಿಂದ ಕಾಪಾಡಿಕೊಳ್ಳಲು ಹೊದಿಕೆಯ ಕಂಬದಂತಿರುವ ಮೇಲ್ಪರೆಯು (Columnar epithelium) ಹೆಚ್ಚು ಹೆಚ್ಚು ಮುತ್ತೊಡಲನ್ನು(Nacre) ಮುತ್ತೊಡಲ ಮಡಿಕೆಗೆ ಒಸರುತ್ತದೆ.
4. ಮುತ್ತೊಡಲು ಹಲವು ಚಿಕ್ಕ ಚಿಕ್ಕ ಮಡಿಕೆಗಳಾಗಿ ಕಣವನ್ನು ಸುತ್ತುವರಿಯುತ್ತವೆ. ಹೊದಿಕೆಯ ಮೇಲ್ಪರೆಯು ಮುತ್ತೊಡಲು ಸುತ್ತುವರೆದಿರುವ ಕಣವನ್ನು ಮೇಲಿನ ಚಿತ್ರದಲ್ಲಿ ತೋರಿಸಿದಂತೆ ಸುತ್ತುವರೆದು ಹೊದಿಕೆಯತ್ತ ಎಳೆದುಕೊಳ್ಳುತ್ತದೆ.
5. ಕೊನೆಗೆ ಮುತ್ತೊಡಲ ಪದರಗಳು ಗಟ್ಟಿಯಾಗಿ ‘ಮುತ್ತು’ ಮೂಡುತ್ತದೆ.
6. ಸುಮಾರು 90% ನಷ್ಟು ಮುತ್ತು ಕ್ಯಾಲ್ಸಿಯಂ ಕಾರ‍್ಬೋನೇಟ್, 5% ಕಾನ್ಕಿಯೋಲಿನ್ ಮತ್ತು 5% ನೀರನ್ನು ಹೊಂದಿರುತ್ತದೆ.

ಮುತ್ತು ಎಷ್ಟು ದೊಡ್ಡದಿಂದೆ ಎಂಬುದು ಹೊರಕುಳಿಯು ಎಷ್ಟು ಕಿರಿಕಿರಿ ಉಂಟುಮಾಡುತ್ತದೆ ಎಂಬುದನ್ನು ಅವಲಂಬಿಸಿರುತ್ತದೆ. ಹೆಚ್ಚು ಕಿರಿಕಿರಿಯಾದರೆ ಹೆಚ್ಚು ಹೆಚ್ಚು ಮುತ್ತೊಡಲನ್ನು ಒಸರಿ, ಹಲವು ಮಡಿಕೆಗಳಿಂದ ಕಣವನ್ನು ಸುತ್ತುವರೆದು ದೊಡ್ಡದಾದ ಮುತ್ತನ್ನು ಮೂಡಿಸುತ್ತದೆ. ಒಂದು ಸಾಮಾನ್ಯ ಮುತ್ತು ಮೂಡಲು ಸುಮಾರು 3-5 ವರುಶ ತಗುಲುತ್ತದೆ.

ಕಡಲಿನಲ್ಲಿ ಸಿಗುವ ಎಲ್ಲಾ ಮುತ್ತುಗಳು ದುಂಡಗಿರುವುದಿಲ್ಲ, ಮರಳಿನ ಕಣ/ಹೊರಕುಳಿಯ ಆಕಾರ ಮತ್ತು ಚಿಪ್ಪಿನೊಳಗೆ ಮೂಡುವ ಮುತ್ತೊಡಲ ಮಡಿಕೆಗಳ ಆದಾರದ ಮೇಲೆ ಮುತ್ತುಗಳು ಬೇರೆ ಬೇರೆ ಆಕಾರದಲ್ಲಿ ಇರುತ್ತವೆ. ದುಂಡಾಗಿರುವ ಮುತ್ತಿಗೆ ಎಲ್ಲಿಲ್ಲದ ಬೇಡಿಕೆ ಇದೆ. ಹಲವಾರು ವರುಶಗಳಿಂದ ಮುತ್ತಿನ ಉದ್ದಿಮೆ ಬೆಳೆಯುತ್ತಿರುವುದರಿಂದ, ಚಿಪ್ಪುಸಿರಿಗಳ ಸಾಕಣೆಯನ್ನು ಮಾಡಿ ಮುತ್ತುಗಳನ್ನು ಪಡೆಯುತ್ತಾರೆ. ಇದರಲ್ಲಿ ಸಾಕಿದ ಚಿಪ್ಪುಸಿರಿಗಳ ಚಿಪ್ಪಿಗೆ ಹೊರಕುಳಿಗಳು ಹೊಕ್ಕುವಂತೆ ಮಾಡಿ ಮುತ್ತುಗಳನ್ನು ಮೂಡಿಸುವಂತೆ ಮಾಡಲಾಗುತ್ತದೆ. ಉದ್ದಿಮೆಯ ಗುರಿಯಿಂದ ಬೆಳೆಯುವ ಮುತ್ತುಗಳು ಕಡಲಿನಲ್ಲಿ ತಾನಾಗಿಯೇ ಸಿಗುವ ಮುತ್ತುಗಳಿಗಿಂತ ಕಡಿಮೆ ಗುಣಮಟ್ಟದಲ್ಲಿರುತ್ತವೆ.

(ಮಾಹಿತಿ ಸೆಲೆ: yourarticlelibrary.comwikipedia)
(ಚಿತ್ರ ಸೆಲೆ: yourarticlelibrary.comsaffronart.com)

ಬಳಸಿದ ಬಂಡಿಕೊಳ್ಳುಗರಿಗೊಂದು ಕಿರುಕೈಪಿಡಿ

ಜಯತೀರ್ಥ ನಾಡಗೌಡ

ಬಳಸಿದ ಬಂಡಿ(Used or Pre-owned car) ಕೊಳ್ಳುವುದು ಇದೀಗ ಎಲ್ಲೆಡೆ ಹೆಚ್ಚಿದೆ. ಏರುತ್ತಿರುವ ಜನಸಂಖ್ಯೆಯೊಂದಿಗೆ ಕಾರುಗಳ ಬಳಕೆಯೂ ಏರುಮುಖ ಕಂಡಿದೆ. ಇದರಿಂದಾಗಿ ಬಳಸಿದ ಬಂಡಿಗಳ ಮಾರುಕಟ್ಟೆ ಹೆಮ್ಮರವಾಗಿ ಬೆಳೆದಿದೆ. ಬಹಳಶ್ಟು ದುಡ್ಡು ಕೊಟ್ಟು ಹೊಸ ಬಂಡಿ ಕೊಳ್ಳಲಾಗದವರು, ಬಂಡಿ ಓಡಿಸುವುದನ್ನು ರೂಢಿಸಿಕೊಂಡು ನುರಿತರಾಗಬೇಕೆನ್ನುವವರಿಗೆ ಬಳಸಿದ ಕಾರುಗಳು ಒಳ್ಳೆಯ ಆಯ್ಕೆಯಾಗಿ ಮಾರ್ಪಟ್ಟಿವೆ. ಅದಕ್ಕೆಂದೇ ಹಲವಾರು ಪ್ರಮುಖ ಕಾರು ತಯಾರಕ ಕೂಟದವರು ತಮ್ಮದೇ ಆದ ಬಳಸಿದ ಕಾರು ಮಳಿಗೆಗಳನ್ನು ಹೊರತಂದು ತಮ್ಮ ವ್ಯಾಪಾರವನ್ನು ಹಿಗ್ಗಿಸಿಕೊಳ್ಳುವತ್ತ ಹೆಜ್ಜೆ ಇಟ್ಟಿದ್ದಾರೆ. ಈ ಮಳಿಗೆಗಳಲ್ಲಿ ನಿಮಗೆ ವಿವಿಧ ಬಗೆಯ, ಬೇರೆ ಕೂಟದವರು ತಯಾರಿಸಿದ ಬಳಸಿದ ಕಾರುಗಳು ಸಿಗುತ್ತವೆ. ಇಂತ ಮಳಿಗೆಗಳು ಹಳೆಯ ಬಂಡಿ ಮಾರುವವರಿಗೆ ಮತ್ತು ಬಳಸಿದ ಕಾರು ಕೊಳ್ಳುವವರಿಗೆ ಒಳ್ಳೆಯ ವೇದಿಕೆ ಒದಗಿಸಿವೆ.

ಇದರಲ್ಲಿ ಈ-ಕಾಮರ್ಸ್ (E-commerce) ತಾಣಗಳು ಹಿಂದೆ ಬಿದ್ದಿಲ್ಲ. ಮಳಿಗೆಗಳಲ್ಲಿ ಮಾರಲು, ಕೊಳ್ಳಲು ಸಮಯವಿಲ್ಲ ಎನ್ನುವವರು ಈ ತಾಣಗಳನ್ನು ಬಳಸಬಹುದು. ಈ ತಾಣಗಳಲ್ಲಿ ಮಂದಿಗೆ, ತಮ್ಮ ಗಾಡಿಯ ತಿಟ್ಟಗಳನ್ನು ಮೇಲೇರಿಸಿ, ತಮ್ಮ ವಿವರಗಳನ್ನು ಸೇರಿಸಿ ಪುಕ್ಕಟೆಯಾಗಿ ಬಯಲರಿಕೆ(Advertisement) ನೀಡುವ ಸವಲತ್ತು ಇರುತ್ತದೆ. ಆಸಕ್ತರು ನೇರವಾಗಿ ಕೊಳ್ಳುಗ ಇಲ್ಲವೇ ಮಾರುಗರೊಂದಿಗೆ ಮಾತುಕತೆ ನಡೆಸಿ ವ್ಯವಹರಿಸಿಕೊಂಡು ದಲ್ಲಾಳಿತನ, ಮದ್ಯವರ್ತಿಗಳ ಕಾಟದಿಂದ ತಪ್ಪಿಸಿಕೊಳ್ಳಬಹುದಾಗಿದೆ. ನೀವು ಬಳಸಿದ ಗಾಡಿಗಳನ್ನು ಮಳಿಗೆ ಇಲ್ಲವೇ ಈ-ಕಾಮರ್ಸ್ ತಾಣ ಎಲ್ಲಿಯಾದರೂ ಕೊಂಡು ಕೊಳ್ಳಿ ಆದರೆ ಕೊಳ್ಳುವಾಗ ಕೆಲವು ಎಚ್ಚರಿಕೆ ವಹಿಸಲೇಬೇಕು. ಬಳಸಿದ ಕಾರು ಕೊಳ್ಳುವ ಆಸಕ್ತರು ಈ ಕೆಳಗೆ ಪಟ್ಟಿ ಮಾಡಿದ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಖರೀದಿಸಿದರೆ ನಿರಾಳವಾಗಿರಬಹುದು.

  1. ಹಗಲಿನ ಹೊತ್ತಲ್ಲೇ ಗಾಡಿ ನೋಡಿಕೊಳ್ಳಿ:
    ಹಗಲು ಹೊತ್ತಿನಲ್ಲಿ ಬಂಡಿಯನ್ನು ಚೆನ್ನಾಗಿ ನೋಡುವುದು ಯಾವಾಗಲೂ ಒಳಿತು. ಕಾರಿನ ಒಳಮಯ್-ಹೊರಮಯ್‌ಗಳಲ್ಲಿ ಯಾವುದಾದರೂ ಕುಂದು ಕೊರತೆಗಳು ಇಲ್ಲವೇ ಬಣ್ಣ ಮಾಸಿರುವಿಕೆ, ಗೀರುಗಳು ಹಗಲಿನಲ್ಲಿ ಎದ್ದು ಕಾಣುತ್ತವೆ. ಅದಕ್ಕಾಗಿ, ಸಂಜೆ-ಇರುಳು ಹೊತ್ತಿಗಿಂತ ಹಗಲು ಹೊತ್ತಿನಲ್ಲಿ ಬಂಡಿಯ ಮೇಲೆ ಕಣ್ಣಾಡಿಸಿ.
  2. ನುರಿತ ಮೆಕ್ಯಾನಿಕ್ (Mechanic) ಜೊತೆಗಿರಲಿ:
    ಬಳಸಿದ ಗಾಡಿ ಕೊಳ್ಳುವ ಮುನ್ನ ಅದನ್ನು ಒರೆ ಹಚ್ಚಿ ನೋಡಲು ಹೋಗುತ್ತೇವೆ. ಬಂಡಿಗಳ ಬಗ್ಗೆ ನಾವು ಎಷ್ಟೇ ಅನುಭವಸ್ಥರಾಗಿದ್ದರೂ ಒಬ್ಬ ಒಳ್ಳೆಯ ಮೆಕ್ಯಾನಿಕ್‌ನನ್ನು ಸಂಗಡ ಕರೆದುಕೊಂಡು ಹೋಗುವುದು ಜಾಣತನವೆನಿಸುತ್ತದೆ. ಬಂಡಿಗಳಲ್ಲಿ ಉಂಟಾಗುವ ಸಮಸ್ಯೆಗಳು, ಕುಂದು ಕೊರತೆಗಳ ಬಗ್ಗೆ ಇವರಿಗೆ ಸಾಕಶ್ಟು ಅನು ಭವವಿರುತ್ತದೆ. ಅಲ್ಲದೇ ಇವರು ಚಿಕ್ಕ, ದೊಡ್ಡ ಬಗೆಬಗೆಯ ಕಾರುಗಳ ಬಗ್ಗೆ ಹೆಚ್ಚಿನ ಅರಿವು ಹೊಂದಿರುತ್ತಾರೆ. ನಾವು ಕೊಳ್ಳ ಬಯಸುವ ಬಂಡಿಯ ಆಯಸ್ಸು ಇನ್ನೆಷ್ಟು ದಿನ ಬಂಡಿಯ ತಾಳಿಕೆ-ಬಾಳಿಕೆ ಹೇಗೆ ಎಂಬೆಲ್ಲ ವಿವರಗಳನ್ನು ಸುಳುವಾಗಿ ಪತ್ತೆ ಹಚ್ಚಿ ನಮಗೆ ಆಯ್ಕೆ ಮಾಡಲು ನೆರವಾಗುತ್ತಾರೆ. ಒಂದೊಳ್ಳೆಯ ಬಳಸಿದ ಗಾಡಿಯ ಒಡೆಯರಾಗಲು ನಂಬಿಗಸ್ತ ಮೆಕ್ಯಾನಿಕ್ ‌ ಒಬ್ಬರನ್ನು ಜೊತೆಗೆ ಕೊಂಡೊಯ್ಯಿರಿ.
  3. ಹೆಚ್ಚಿನ ನಂಬುತನ (Extended Warranty) ಸಿಗುತ್ತಿದ್ದರೆ ಬಳಸಿಕೊಳ್ಳಿ:
    ಹೆಚ್ಚಿನ ನಂಬುತನವುಳ್ಳ (Extended Warranty) ಗಾಡಿಗಳು ಸಿಕ್ಕರೆ ಒಳ್ಳೆಯದು. ಕೆಲವೊಮ್ಮೆ ಅಗ್ಗದ ಬೆಲೆಗೆ ಬಂಡಿಗೆ ಹೆಚ್ಚಿನ ನಂಬುತನ(Warranty) ನೀಡುವ ಸೌಲಭ್ಯ ಸಿಗುತ್ತವೆ. ಹೊಸ ಗಾಡಿಕೊಂಡಾಗ ಕೆಲವರು ಕೊಂಚ ಬೆಲೆತೆತ್ತು ಹೆಚ್ಚಿನ ನಂಬುತನ ಪಡೆಯುತ್ತಾರೆ. ಅದೇ ಬಂಡಿಯನ್ನು ಮರು-ಮಾರಬೇಕಾದಾಗ ಈ ನಂಬುತನ ಕೊಳ್ಳುಗರಿಗೆ ಸುಲಭವಾಗಿ ಸಿಗುತ್ತದೆ.
  4. ಓಡಿಸಿ ಒರೆಗೆ ಹಚ್ಚಲು (Test Drive) ಮರೆಯದಿರಿ:
    ಗಾಡಿಯ ಒಡೆಯ ನಿಮಗೆ ಎಷ್ಟೇ ಪರಿಚಿತನಾಗಿರಲಿ ಇಲ್ಲವೇ ಪ್ರಾಮಾಣಿಕನೆನಿಸಲಿ, ಕೊಳ್ಳುವ ಗಾಡಿಯನ್ನು ಓಡಿಸಿ ಒರೆಗೆ ಹಚ್ಚಿದ ನಂತರವೇ ಅದರ ಮಯ್ಯೊಳಿತಿನ ಬಗ್ಗೆ ನೀವು ಖಾತರಿ ಪಡಿಸಿಕೊಳ್ಳಿ. ಓಡಿಸಿ ಒರೆಗೆ ಹಚ್ಚುವಾಗ ಯಾರೊಂದಿಗೂ ಮಾತನಾಡದೇ, ಗಾಡಿಯಲ್ಲಿ ಹಾಡು ಕೇಳದೇ ಓಡಿಸಿಕೊಂಡು ಸುತ್ತಾಡಿ. ಯಾವುದೇ ಬೇಡದ ಸದ್ದು ಬಂಡಿಯಿಂದ ಹೊರಬರುತ್ತಿದೆಯೇ ಇಲ್ಲವೇ ಎಂಬುದನ್ನು ಖಚಿತ ಪಡಿಸಿಕೊಳ್ಳಿ. ಕಾರಿನಿಂದ ಹೊರಬರುವ ಬೇಡದ ಕರ್ಕಶ ಸದ್ದು ನಿಮಗೆ ಕೇಳದಿರಲೆಂದೇ ಕೆಲವರು ನಿಮಗೆ ಮಾತನಾಡಿಸುತ್ತ, ಹಾಡು ಕೇಳಿಸುತ್ತ ಮೋಸ ಮಾಡಬಹುದು. ಹೀಗಾಗದಂತೆ ಎಚ್ಚರವಹಿಸಿ. ಒರೆಗೆ ಹಚ್ಚಿ ಓಡಿಸುವಾಗ ಕಾರಿನಲ್ಲಿ ನಿಮ್ಮ ಕಯ್, ಕಾಲು ಚಾಚಲು ಸಾಕಶ್ಟು ಜಾಗವಿದೆಯೋ ಇಲ್ಲವೋ ಎಂಬುದನ್ನೂ ತಿಳಿದುಕೊಳ್ಳಿ.

5.ಓಟಳಕವನ್ನು (Odometer) ನಂಬಬೇಡಿ:
ಕಾರು ಎಷ್ಟು ಕಿಲೋಮೀಟರ್ ಓಡಿದೆ ಅಂದರೆ ಎಶ್ಟು ಹಳೆಯದಾಗಿದೆ, ಎಂಬುದನ್ನು ಅರಿಯಲು ಓಟಳಕ(Odometer) ದಾಖಲಿಸಿಕೊಂಡಿರುವ ಕಿಲೋಮೀಟರ್‌ಗಳನ್ನು ನೋಡುವುದು ವಾಡಿಕೆ. ಕಾರು ಎಷ್ಟು ಕಿಲೋಮೀಟರ್ ಸಾಗಿದೆ ಎನ್ನುವ ಮಾಹಿತಿಯನ್ನು ಇದು ನೀಡಿದರೂ ಈ ಓಟಳಕವನ್ನು ಸುಳುವಾಗಿ ತಿದ್ದಬಹುದಾಗಿದೆ. ಹೀಗಾಗಿ ಓಟಳಕ ತಿದ್ದಿ ಕಡಿಮೆ ಕಿಲೋಮೀಟರ್ ಓಡಿದೆ ಎಂದು ಮಾಹಿತಿ ತಿರುಚಿ ತೋರಿಸಿ ಮೋಸ ಮಾಡುವವರು ಉಂಟು. ಗಾಡಿಯ ಆರೋಗ್ಯದ ಬಗ್ಗೆ ತಿಳಿಯಲು ಓಟಳಕವೊಂದನ್ನೇ ನಂಬಬೇಡಿ. ಬಂಡಿಗೆ ಸಂಬಂಧಿಸಿದ ಕಡತ, ಹಾಳೆಗಳನ್ನು ಸರಿಯಾಗಿ ನೋಡಿ, ನೆರವುದಾಣಗಳಿಗೆ (Service Centre) ಬಂಡಿಯನ್ನು ಕೊಂಡೊಯ್ದ ವಿವರಗಳನ್ನು ತಿಳಿದು ಬಂಡಿಯ ಮಯ್ಯೊಳಿತನ ಲೆಕ್ಕ ಹಾಕಬಹುದು. ಅನುಮಾನಗಳು ಕಂಡುಬಂದರೆ ಮೆಕ್ಯಾನಿಕ್‌ನ ನೆರವು ಪಡೆಯಬೇಕು.

  1. ತುಕ್ಕು ತೇಪೆಗಳ ಬಗ್ಗೆ ಎಚ್ಚರ:
    ಬಳಸಿದ ಬಂಡಿ ಮಾರುಗರ‍್ಯಾರು ತಮ್ಮ ಬಂಡಿಗೆ ಬಡಿದಿರುವ ತುಕ್ಕು, ತೇಪೆಗಳ ಬಗ್ಗೆ ಹೇಳಿಕೊಳ್ಳಲು ಬಯಸುವುದಿಲ್ಲ. ಗಾಡಿಗೆ ಹಿಡಿದಿರುವ ತುಕ್ಕನ್ನು, ಬಣ್ಣ ಮಾಸಿರುವೆಡೆ ಕಳಪೆ ಮಟ್ಟದ ಬಣ್ಣ ಬಳಿದು ತೇಪೆ ಹಾಕಿದ ಜಾಗಗಳನ್ನು ಮರೆ ಮಾಚುವ ಎಲ್ಲ ಪ್ರಯತ್ನಗಳನ್ನು ಮಾಡುತ್ತಾರೆ. ಇವುಗಳನ್ನೆಲ್ಲ ಗಮನದಲ್ಲಿಟ್ಟುಕೊಂಡು ಬಂಡಿಯ ಮೇಲೆ ವಿವರವಾಗಿ ಕಣ್ಣಾಡಿಸುವುದರಲ್ಲೇ ಕೊಳ್ಳುಗನ ಜಾಣತನ ಅಡಗಿದೆ.
  2. ಹೊಸ ಬಿಡಿಭಾಗಗಳು:
    ಕಾರೇನೋ ಹಳತಾಗಿದೆ. ಆದರೆ ಅದರಲ್ಲಿ ಕೆಲವು ಹೊಸ ಭಾಗಗಳನ್ನು ಜೋಡಿಸಿರುತ್ತಾರೆ. ಗಾಡಿಯ ಒಡೆಯ/ಮಾರುಗನನ್ನು ಹೊಸ ಭಾಗಗಳೇನಾದರೂ ಜೋಡಿಸಲಾಗಿದೆಯೇ ಎಂದು ಕೇಳಿ, ಜೋಡಿಸಿದ್ದರೆ ಯಾಕೆ ಜೋಡಿಸಲಾಗಿದೆ? ಗಾಡಿಯ ಒಡೆಯ/ಮಾರುಗ ಗುದ್ದಾಟದಂತ ಅವಘಡಗಳನ್ನು ಮಾಡಿಕೊಂಡಿದ್ದರೆ? ಹೊಸ ಬಿಡಿಭಾಗಗಳು ಹಳೆಯದಾದ ಬಂಡಿಯೊಂದಿಗೆ ಸರಿಯಾಗಿ ಬೆರೆತು ತಕ್ಕ ಕೆಲಸ ಮಾಡುತ್ತಿವೆಯೇ ಎಂಬುದರ ಬಗ್ಗೆಯೂ ವಿಚಾರಿಸಿ. ಇವುಗಳೂ ಸರಿಯಾಗಿ ಬೆರೆತು ಕೊಂಡಿಲ್ಲದಿದ್ದರೆ ಮುಂದೆ ಕೆಟ್ಟು ನಿಲ್ಲಬಹುದು ಮತ್ತು ಇದನ್ನು ಸರಿಪಡಿಸುವ ಖರ್ಚು-ವೆಚ್ಚ ಕೊಳ್ಳುಗನ ಜೇಬಿಗೆ ಕತ್ತರಿ.
  3. ಮಿಂಚಿನ ಬಿಡಿಭಾಗಗಳು ಕೆಲಸ ಮಾಡುತ್ತಿವೆಯೇ?
    ಕಿಡಿಬೆಣೆ (Spark plug), ಮಿಂಚಿನ ಸರಿಗೆಗಳು (Electrical wiring) ಎಲ್ಲವೂ ಸರಿಯಾಗಿದೆ ಎಂಬುದನ್ನು ಖಚಿತ ಪಡಿಸಿಕೊಳ್ಳಿ. ಅಲ್ಲದೇ ಬಂಡಿಯ ಅರಿವುಕಗಳು(Sensors), ಒರೆಸುಕಗಳ(Wipers) ಕೆಲಸದ ಬಗ್ಗೆ ಒಂದು ಒರೆ ನೋಟ ಬೀರಿ.
  4. ಗಾಡಿ ಸಾಲ:
    ಹೊಸ ಗಾಡಿಕೊಳ್ಳಲು ಕಾರು ಸಾಲ ಸಿಗುವುದು ನಮಲ್ಲಿ ಹಲವರಿಗೆ ಗೊತ್ತು. ಆದರೆ ಬಳಸಿದ ಗಾಡಿಗಳಿಗೂ ಸಾಲ ಸಿಗುತ್ತದೆ ಎನ್ನುವುದು ಕೆಲವರಿಗೆ ತಿಳಿದಿಲ್ಲ. ಹೌದು, ಬಳಸಿದ ಬಂಡಿಗಳಿಗೂ ಸಾಲದ ನೆರವು ಸಿಗುತ್ತದೆ. ಇದರ ಬಗ್ಗೆ ಬ್ಯಾಂಕು, ಹಣಕಾಸು ಸಂಘ ಸಂಸ್ಠೆಗಳಲ್ಲಿ ವಿಚಾರಿಸಬಹುದು. ಅಗತ್ಯವಿದ್ದರೆ ಇದರ ನೆರವು ಪಡೆದುಕೊಳ್ಳಬಹುದು.
  5. ಹೆಸರು ಬದಲಾವಣೆ (Transferable):
    ಗಾಡಿಗೆ ಸಂಬಂದಪಟ್ಟ ಮುಂಗಾಪು(Insurance), ಇತರೆ ಕಡತಗಳು(Files) ಸುಲಭವಾಗಿ ಕೊಳ್ಳುಗರ ಹೆಸರಿಗೆ ಬದಲಾವಣೆಯಾಗುವಂತಿರಲಿ(Transferable). ಗಾಡಿಗೆ ಈ ಹಿಂದೆ ಒಂದಕ್ಕಿಂತ ಹೆಚ್ಚಿನ ಯಜಮಾನರಿದ್ದಲ್ಲಿ ಎಲ್ಲವೂ ಸರಿಯಾಗಿ ಒಬ್ಬರಿಂದರೊಬ್ಬರಿಗೆ ಬದಲಾವಣೆಯಾಗಿದ್ದರೆ ಅದಕ್ಕೆ ಸಂಬಂದಿಸಿದ ಕಡತಗಳನ್ನು ಸರಿಯಾಗಿ ಓದಿಕೊಳ್ಳುವುದು ಒಳಿತು. ಬಂಡಿ ನೀವು ಕೊಳ್ಳುತ್ತಿದ್ದಂತೆ ಆದಷ್ಟು ಬೇಗ ನಿಮ್ಮ ಹೆಸರಿಗೆ ಅದನ್ನು ನೊಂದಾಯಿಸುವುದು ಅಗತ್ಯ.
  6. ರಿಯಾಯಿತಿ, ಅಗ್ಗದ ಬೆಲೆಯ ಆಮಿಷಗಳು:
    ಕೆಲವು ಗಾಡಿ ಮಾರುಗರು ತಮ್ಮ ಬಂಡಿಗೆ ಹೆಚ್ಚಿನ ರಿಯಾಯಿತಿ, ಅಗ್ಗದ ಬೆಲೆಯಲ್ಲಿ ಮಾರಲು ಕೆಲವು ಆಮಿಷಗಳನ್ನು ತೋರುವುದುಂಟು ಇವುಗಳಿಗೆ ಮಾರುಹೋಗಬೇಡಿ. ಹೆಚ್ಚು ಮಾರಾಟಗೊಳ್ಳದೇ ಸೋಲು ಕಂಡ ಕೆಲವು ಕಾರು ಮಾದರಿಗಳನ್ನು ಕೆಲವರು ಕೊಂಡಿರುತ್ತಾರೆ. ನಂತರ ಇವುಗಳನ್ನು ಮಾರಲು ಪರದಾಡುತ್ತ, ಇಂತ ಆಮಿಷಗಳನ್ನು ಒಡ್ಡುತ್ತಾರೆ. ಇಂತ ಮಾದರಿ ಕಾರುಗಳ ಬಿಡಿಭಾಗಗಳು ಮತ್ತು ಬಿಡಿಭಾಗ ಸರಿಪಡಿಸುವ ನುರಿತ ಮೆಕ್ಯಾನಿಕ್ ಸಿಗುವುದು ಬಲು ಕಷ್ಟ. ಇಂತ ಬಂಡಿಗಳಿಂದ, ಆಮಿಶಗಳಿಂದ ಆದಶ್ಟು ದೂರವಿರಿ.

ಕೊನೆಯದಾಗಿ ಹೇಳಬೇಕೆಂದರೆ, ಇತ್ತಿಚೀಗೆ ಸಾಕಷ್ಟು ಮಿಂದಾಣಗಳು ಬಳಸಿದ ಬಂಡಿಯನ್ನು ಆನ್ಲೈನ್(online) ಮೂಲಕವೇ ಮಾರತೊಡಗಿವೆ. ಈ ಮಿಂದಾಣಗಳು ಹಲವಾರು ಮಾಹಿತಿಗಳನ್ನು ಪುಕ್ಕಟೆಯಾಗಿ ಒದಗಿಸುತ್ತವೆ. ಈ ಮಾಹಿತಿಗಳನ್ನು ನಮ್ಮ ಅನುಕೂಲಕ್ಕೆ ತಕ್ಕಂತೆ ಕಲೆಹಾಕಿ “ಬಳಸಿದ ಕಾರ”ನ್ನು ಕೊಳ್ಳಲು ಸಿದ್ಧವಾಗಿಟ್ಟುಕೊಳ್ಳಬಹುದು.

ಮಾಹಿತಿ ಮತ್ತು ತಿಟ್ಟ ಸೆಲೆ: Cartoq.com   , istockphoto.com

 

ಕಾರುಗಳ ಬಳಕೆ ಕೈಪಿಡಿ

ಜಯತೀರ್ಥ ನಾಡಗೌಡ

ಪ್ರವಾಸಕ್ಕೆ ಅಥವಾ ಕೆಲಸದ ಮೇಲೆ ದೂರದೂರಿಗೆ ಹೋದಾಗ ಎಷ್ಟೋ ಸಲ ನಮ್ಮ ಗಾಡಿಗಳನ್ನು ಸುಮಾರು ದಿವಸ ಒಂದೇ ಕಡೆ ನಿಲ್ಲಿಸುವ ಸಂದರ್ಭ ಬರುತ್ತದೆ. ತುಂಬಾ ಹೊತ್ತು ಗಾಡಿಗಳನ್ನು ಮನೆಯ ಮುಂದೆ ಅಥವಾ ಒಂದೇ ಜಾಗದಲ್ಲಿ ಸುಮಾರು ದಿವಸ ನಿಲ್ಲಿಸಬೇಕಾಗಿ ಬಂದಾಗ ಗಾಡಿಗಳ ಆರೋಗ್ಯದ (health) ಮೇಲೆ ಅದು ಕೆಟ್ಟ ಪರಿಣಾಮ ಬೀರುತ್ತದೆ. ಈ ಹೊತ್ತಿನಲ್ಲಿ ನಮ್ಮ ಗಾಡಿಗಳನ್ನು ಹೇಗೆ ಕಾಪಾಡಿಕೊಳ್ಳಬೇಕು ಎಂಬುದನ್ನು ತಿಳಿಸುವುದು ಈ ಬರಹದ ಉದ್ದೇಶ.

ಬ್ಯಾಟರಿ ಉಳಿಸಿಕೊಳ್ಳಿ

ಸಾಮಾನ್ಯವಾಗಿ ಬಂಡಿಗಳನ್ನು ಹೆಚ್ಚು ದಿನ ಒಂದೇ ಜಾಗದಲ್ಲಿ ನಿಲ್ಲಿಸಿದರೆ, ಅವುಗಳ ಮಿಂಕಟ್ಟುಗಳು(Battery) ಮೊದಲು ಕೆಡುತ್ತವೆ. ದಿನದಿಂದ ದಿನಕ್ಕೆ ಬ್ಯಾಟರಿಗಳು ತಮ್ಮಲ್ಲಿನ ಮಿಂಚನ್ನು ಕಳೆದುಕೊಳ್ಳುತ್ತಾ ಹೋಗುತ್ತವೆ ಮತ್ತು ಬಂಡಿಯು ಶುರುವಾಗದೇ ಕೆಟ್ಟು ನಿಲ್ಲಬಹುದು.ಇದನ್ನು ತಡೆಯಲು, ದಿನಾಲೂ 10-15 ನಿಮಿ ನಿಮ್ಮ ಬಂಡಿಯನ್ನು ಶುರು(On) ಮಾಡಿ , ಸಾಧ್ಯವಾದರೆ ತುಸು ಹೊತ್ತು ಮನೆಯ ಸುತ್ತಮುತ್ತ ಓಡಿಸಿದರೆ ಒಳಿತು. ಇದರಿಂದ ಮಿಂಕಟ್ಟುಗಳು ಮತ್ತೆ ಕಸುವು ಪಡೆದು ಮುಂಚಿನಂತಿರುತ್ತವೆ. ಇದು ಸಾಧ್ಯವಾಗದೇ ಇದ್ದಲ್ಲಿ ಮಿಂಕಟ್ಟಿನ ಕಳೆತುದಿಯನ್ನು(Negative Terminal) ಬೇರ್ಪಡಿಸಿ (Disconnect) ಇಡುವುದು ಒಳ್ಳೆಯದು.

ಕೈ ತಡೆತವನ್ನು ಹಾಕಬೇಡಿ

ಹಲವಾರು ಬಂಡಿ ತಯಾರಕರು, ಬಂಡಿ ನಿಲ್ಲಿಸಿದಾಗ ಅದಕ್ಕೆ ಕೈ ತಡೆತವನ್ನು(Hand Brake) ಹಾಕಿ ನಿಲ್ಲಿಸಿ ಎನ್ನುತ್ತಾರೆ. ಇದು ಸರಿಯೇ, ಆದರೆ ಹೀಗೆ ಬಂಡಿಗಳನ್ನು ದಿನಗಟ್ಟಲೇ ಕೈ ತಡೆತ ಹಾಕಿ ನಿಲ್ಲಿಸಿದರೆ ಅದು ಸಿಲುಕಿ ಹಾಕಿಕೊಳ್ಳುವ(Jamming) ಸಾಧ್ಯತೆ ಉಂಟು. ಇದರಿಂದ ಹೊರಬರಲು ಹೀಗೆ ಮಾಡಿ. ಇಳಿಜಾರು ಜಾಗದಲ್ಲಿ ಬಂಡಿ ನಿಲ್ಲಿಸಬೇಕಾಗಿ ಬಂದರೆ ಹಿಂಬದಿ ಗೇರ್‌ನಲ್ಲಿ (Reverse Gear) ಬಂಡಿ ನಿಲ್ಲಿಸಿ, ಎತ್ತರದ ಜಾಗದಲ್ಲಿ ನಿಲ್ಲಿಸಬೇಕಾಗಿ ಬಂದರೆ ಮೊದಲನೇ ಗೇರ್‌ನಲ್ಲಿ(gear) ಏರಿಸಿ ನಿಲ್ಲಿಸಿ, ಇನ್ನೂ ಸಮತಟ್ಟಾದ ಜಾಗವಿದ್ದರೆ ಅಲ್ಲೂ ಕೂಡ ಮೊದಲನೇ ಗೇರ್‌ನಲ್ಲಿ ಏರಿಸಿ ನಿಲ್ಲಿಸಿ. ಬಂಡಿಗೆ ತಡೆತ(Brake) ಇಲ್ಲದೇ ಇರುವುದರಿಂದ ಅದು ಅತ್ತಿತ್ತ ಕದಲದಂತೆ ಗಾಲಿಗಳಿಗೆ ಅಡ್ಡಲಾಗಿ ಕಲ್ಲು/ಇಟ್ಟಿಗೆಗಳನ್ನು ನಿಲ್ಲಿಸಿದರೆ ಆಯಿತು.

ಬಂಡಿಯ ಕ್ಯಾಬಿನ್ ಹಸನು ಮಾಡಿ

ಹಲವಾರು ದಿನಗಳ ಕಾಲ ಬಂಡಿ ನಿಂತಲ್ಲಿಯೇ ನಿಂತಿದ್ದರೆ ಕಸ ಧೂಳು ಬಂಡಿಯ ಒಳಬಾಗದಲ್ಲಿ ಸೇರಿಕೊಂಡಿರುವ ಸಾಧ್ಯತೆ ಹೆಚ್ಚಿರುತ್ತದೆ. ಬಂಡಿಯ ಕ್ಯಾಬಿನ್ ಅನ್ನು ಕಸಕಡ್ದಿ, ಧೂಳುಗಳಿಂದ ದೂರವಾಗಿಸಿ ಚೆನ್ನಾಗಿ ಹಸನುಗೊಳಿಸಿ. ಒಳಗಡೆ ಮಣ್ಣು, ರಾಡಿ ತುಂಬಿದ್ದರೆ ಅದನ್ನು ಹಾಗೇ ಉಳಿಸದೇ ಹಸನು ಮಾಡಿ. ಒಳಗಡೆ ಕೆಟ್ಟ ವಾಸನೆ ಬರುತ್ತಿದ್ದರೆ, ಕಳೆಯೇರಿಸುಕ(Freshner) ಸಿಂಪಡಿಸಬಹುದು. ಹೀಗೆ ಹಸನು ಮಾಡುವಾಗ ಕೈಗವಸು(Gloves) ಬಳಸಿದರೆ ಒಳ್ಳೆಯದು. ಹಸನು ಮಾಡುವುದು ಮುಗಿದ ನಂತರ ಈ ಕೈಗವಸುಗಳನ್ನು ಬಿಸಾಡಿ ಚೆನ್ನಾಗಿ ಕೈ ತೊಳೆದುಕೊಳ್ಳಿ. ನಿಮ್ಮ ಬಳಿ ಸೋಂಕು ನಿವಾರಕಗಳಿದ್ದರೆ(Disinfectant) ಅದನ್ನು ಬಂಡಿಯ ಒಳಗೆ-ಸುತ್ತಲೂ ಸಿಂಪಡಿಸಬಹುದು.

ಕಾರಿನ ಹೊರಭಾಗವನ್ನೂ ಕಾಪಾಡಿಕೊಳ್ಳಿ

ದಿನಗಟ್ಟಲೇ ಕಾರನ್ನು ಹೊರಗೆ ನಿಲ್ಲಿಸಿದರೆ ಅದರ ಮೇಲೆ ಒಣಗಿದ ಎಲೆ, ಇತರೆ ಕಸ ಬಿದ್ದಿರುತ್ತದೆ. ಅದನ್ನು ತೆಗೆದುಹಾಕಿ ಸರಿಯಾಗಿ ನೀರು ಹಾಕಿ ಸೋಪಿನಿಂದ ಒರೆಸಿರಿ. ನಿಮ್ಮದೇ ಸ್ವಂತ ಗ್ಯಾರೇಜ್ ಇದ್ದರೆ ಕಾರನ್ನು ಅಲ್ಲಿ ನಿಲ್ಲಿಸಿ, ಇಲ್ಲವೇ ನೆರಳಿರುವ ಜಾಗದಲ್ಲಿ ನಿಲ್ಲಿಸಿ. ಒಂದು ವೇಳೆ ನೆರಳಿಲ್ಲದೇ ತೆರೆದ ವಾತಾವರಣದಲ್ಲಿ ನಿಲ್ಲಿಸಬೇಕಾಗಿ ಬಂದರೆ, ಬಂಡಿಯನ್ನು ಹೊದಿಕೆಯಿಂದ ಮುಚ್ಚಬೇಕು. ದಿನವಿಡೀ ಬಂಡಿ ಬಿಸಿಲಲ್ಲಿ ನಿಂತುಕೊಂಡರೆ ದಿನೇದಿನೇ ಅದರ ಬಣ್ಣ ಮಾಸಿಹೋಗುತ್ತದೆ.

ಕಾರು ಸಾಗಲಿ ಮುಂದೆ ಹೋಗಲಿ

ಕಡಲತೀರದಲ್ಲಿ ಕಾಣುವ ಹಡಗಿಗಿಂತ ಓಡಾಡುವ ಹಡಗೇ ಚೆಂದವಂತೆ, ಯಾಕೆಂದರೆ ಅದೇ ಹಡಗಿನ ಕೆಲಸ, ಮಂದಿ, ಸರಕು ಹೊತ್ತು ಸಾಗುವುದು. ನಮ್ಮ ಕಾರು ಬಂಡಿಗಳು ಇದಕ್ಕೆ ಹೊರತಾಗಿಲ್ಲ. ಕಾರನ್ನು ಒಂದೆಡೆ ಸುಮಾರು ದಿವಸ ನಿಲ್ಲಿಸಬೇಕಾಗಿ ಬಂದಾಗಲೂ, ಅದರ ಎಲ್ಲ ಏರ್ಪಾಟುಗಳು ಸರಿಯಾಗಿ ಇರುವಂತೆ ನೋಡಿಕೊಳ್ಳಲೇಬೇಕು. ದಿನವೊಮ್ಮೆ ಗಾಡಿಯನ್ನು ಶುರು ಮಾಡಿ, ಅದರ ಗಾಳಿಪಾಡುಕ(Air Conditioner) ಎಲ್ಲವೂ ಸರಿಯಾಗಿ ಕೆಲಸ ಮಾಡುತ್ತಿದೆಯೇ ಎಂದು ಚಿತಪಡಿಸಿಕೊಳ್ಳಿ. ಯಾವುದೇ ಏರ್ಪಾಟು, ಅನಗತ್ಯ ಸದ್ದುಗಳು ಬರುತ್ತಿದ್ದರೆ, ಯಾಕೆ-ಏನು ಎಂದು ಸ್ವಲ್ಪ ತಿಳಿದುಕೊಳ್ಳಿ. ನಿಂತ ಜಾಗದಲ್ಲೇ ಗಾಡಿಯನ್ನು ತುಸು ಹಿಂದೆ ಮುಂದೆ ಕದಲಿಸಿ, ಇದು ಟಯರ್ ಗಳು ಹಾಳಾಗದಂತೆ ತಡೆಯಬಲ್ಲುದು.

ಕೊನೆಯದಾಗಿ ಹೇಳಬೇಕೆಂದರೆ, ಸಾಧ್ಯವಾದರೆ ಗಾಡಿಯ ಉರುವಲು ಚೀಲವನ್ನು(Fuel Tank) ಪೂರ್ತಿಯಾಗಿ ತುಂಬಿಸಿಡಿ. ಅರೆತುಂಬಿದ ಉರುವಲು ಚೀಲದ ಒಳಗಿರುವ ಉರುವಲಿನ ಮೇಲೆ, ಗಾಳಿ ತುಂಬಿ, ಉರುವಲು ಇಂಗಿ ಹೋಗುವುದಲ್ಲದೇ ಒಳ ಭಾಗಗಳು ತುಕ್ಕು ಹಿಡಿಯಬಹುದು.

ತಿಟ್ಟ ಸೆಲೆ: dubizzle

 

ಜೇನುಹುಳ – ಕೆಲವು ಸೋಜಿಗದ ಸಂಗತಿಗಳು!

ರತೀಶ ರತ್ನಾಕರ.

The Honey Bee: Our Friend in Danger | Finger Lakes Land Trust

 

ಸಾಮಾನ್ಯ ಹುಳದಂತೆ ಕಾಣುವ ಜೇನುಹುಳದ ಬಾಳ್ಮೆ ಹಲವು ಸೋಜಿಗದಿಂದ ಕೂಡಿದೆ. ತನ್ನ ಪಾಡಿಗೆ ತಾನು ಗೂಡನ್ನು ಕಟ್ಟಿ, ಹೂವನ್ನು ಹುಡುಕಿ, ಸಿಹಿಯನ್ನು ಕೂಡಿ, ಒಗ್ಗಟ್ಟಿನ ಬಾಳ್ಮೆ ನಡೆಸುತ್ತಾ, ಬದುಕಿನ ಬಂಡಿಯ ಓಡಿಸುವ ಈ ಹುಳಗಳು ಬೆರಗಿನ ಗಣಿಗಳು. ಇವುಗಳ ಬದುಕಿನ ಬಗೆಯನ್ನು ಅರಿಯುವ ಪ್ರಯತ್ನ ಮಾಡುತ್ತಾ ಹಲವು ಬರಹಗಳು ಈಗಾಗಲೇ ಅರಿಮೆಯಲ್ಲಿ ಮೂಡಿಬಂದಿವೆ. ಬನ್ನಿ, ಇವುಗಳ ಬದುಕಿನ ಮತ್ತಷ್ಟು ಸೋಜಿಗದ ಸಂಗತಿಗಳನ್ನು ಚುಟುಕಾಗಿ ತಿಳಿಯೋಣ.

“ಹನಿಮೂನ್” (honeymoon) ಎಂಬ ಪದದ ಹುಟ್ಟು ಮತ್ತು ಆಚರಣೆ ಹೇಗಾಯಿತು ಗೊತ್ತೇ? – ಸುಮಾರು 8 ನೇ ಶತಮಾನದಲ್ಲಿ ಯುರೋಪಿನಲ್ಲಿದ್ದ ‘ನಾರ್ಸ್ ಮತ'(Norse religion)ದಲ್ಲಿ ಒಂದು ಕಟ್ಟುಪಾಡು ಇತ್ತು. ಅದರಲ್ಲಿ ಮದುವೆಯಾದ ಹೊಸ ಜೋಡಿಗಳಿಗೆ ಒಂದು ತಿಂಗಳ ಕಾಲ ‘ಜೇನು ಹೆಂಡ'(fermented honey) ಅಂದರೆ ಜೇನುತುಪ್ಪಕ್ಕೆ ನೀರನ್ನು ಸೇರಿಸಿ ಹುದುಗೆಬ್ಬಿಸಿ ಕೊಡಲಾಗುತ್ತಿತ್ತು. ಜೇನಿನಿಂದ ಮಾಡಿದ ಹೆಂಡವನ್ನು ಹೊಸ ಜೋಡಿಗಳಿಗೆ ಕೊಡುತ್ತಿದ್ದ ಒಂದು ತಿಂಗಳ ಕಾಲಕ್ಕೆ ‘ಹನಿಮೂನ್'(honey + moon [-means month]) (ಜೇನು ತಿಂಗಳು/ಸಿಹಿ ತಿಂಗಳು) ಎಂದು ಅವರು ಕರೆಯುತ್ತಿದ್ದರು. ಇದೇ ಜೇನಿಗೂ ‘ಹನಿಮೂನ್’ ಗೂ ಇರುವ ನಂಟು!

ಜೇನುತುಪ್ಪದಲ್ಲಿ ಯಾವುದೇ ಸೀರುಸಿರುಗಳು (micro organisms) ತನ್ನ ಬದುಕನ್ನು ನಡೆಸಲು ಆಗುವುದಿಲ್ಲ ಆದ್ದರಿಂದ ಅದನ್ನು ಕೊಳೆಯಳಿಕ(antiseptic)ವಾಗಿ ಬಳಸುತ್ತಾರೆ. ಇದಲ್ಲದೇ ಇದು ಹೈಡ್ರೋಜನ್ ಪೆರಾಕ್ಸೈಡ್ ಅನ್ನು ಹೊಂದಿರುವುದರಿಂದ ಹೆಣಗಳು ಕೊಳೆಯದಂತೆ ಕಾಪಾಡಲು ಬಳಸುವ ಅಡಕಗಳಲ್ಲಿ ಹಿಂದಿನ ಕಾಲದಲ್ಲಿ ಬಳಸಲಾಗುತ್ತಿತ್ತು. ‘ಅಲೆಕ್ಸಾಂಡರ‍್‘ ದೊರೆಯ ಹೆಣವನ್ನು ಕೊಳೆಯದಂತೆ ಕಾಪಾಡಲು ಕೂಡ ಜೇನುತುಪ್ಪವನ್ನು ಒಂದು ಅಡಕವನ್ನಾಗಿ ಬಳಸಲಾಗಿತ್ತು.

ಬನ್ನಿ, ಮತ್ತಷ್ಟು ಬೆರಗಿನ ತುಣುಕುಗಳನ್ನು ಸವಿಯೋಣ.

ಜೇನುಹುಳ:

  • ಇರುವೆ ಮತ್ತು ಕಡಜದ ಹುಳಗಳು ಆದಮೇಲೆ ಕೀಟಗಳ ಹೆಚ್ಚೆಣಿಕೆಯಲ್ಲಿ ಜೇನುಹುಳಗಳಿಗೆ ಮೂರನೇ ಜಾಗ
  • ಒಂದು ಗೂಡಿನಲ್ಲಿ ಒಡತಿ, ಗಂಡು ಮತ್ತು ದುಡಿಮೆಗಾರ ಹುಳಗಳೆಂಬ ಮೂರು ಬಗೆಯ ಹುಳಗಳಿರುತ್ತವೆ
  • ದುಡಿಮೆಗಾರ ಹುಳಗಳು 45 ದಿನಗಳು ಬದುಕಿದ್ದರೆ ಒಡತಿ ಜೇನುಹುಳವು 5 ವರುಶದವರೆಗೆ ಬದುಕಬಲ್ಲದು
  • ಒಡತಿ ಹುಳವು ಒಂದು ದಿನಕ್ಕೆ 1500 ಕ್ಕಿಂತ ಹೆಚ್ಚು ಮೊಟ್ಟೆಗಳನ್ನು ಇಡುತ್ತದೆ
  • ಜೇನುಹುಳಗಳು ಗಂಟೆಗೆ 15 ಮೈಲಿ ಉರುಬಿನಲ್ಲಿ ಹಾರಬಲ್ಲವು
  • ಜೇನುಹುಳದ ರೆಕ್ಕೆಗಳು ನಿಮಿಷಕ್ಕೆ 11, 400 ಸಲ ಬಡಿಯುತ್ತವೆ. ಹುಳಗಳ ‘ಜುಂಯ್’ ಎನ್ನುವ ಸದ್ದಿಗೆ ಈ ರೆಕ್ಕೆಯ ಬಡಿತವೇ ಕಾರಣ
  • ಇಡಿ ನೆಲದಲ್ಲಿರುವ ಕೀಟಗಳಲ್ಲಿ ಜೇನುಹುಳಗಳ ಊಟ(ಜೇನು)ವನ್ನು ಮಾತ್ರ ಮಾನವ ತನ್ನ ತಿನಿಸಾಗಿ ಬಳಸುತ್ತಾನೆ
  • ಜೇನುಹುಳಗಳು ಗೂಡಿನಿಂದ ಸಾಮಾನ್ಯವಾಗಿ ಸುಮಾರು 5 ಕಿ.ಮೀ ದೂರದವರೆಗೆ ಹಾರುತ್ತವೆ. ಮೇವಿಗಾಗಿ ಗೂಡಿನಿಂದ ಸುಮಾರು 10. ಕೀ. ಮೀ. ದೂರದವರೆಗೆ ಇವು ಹಾರಬಲ್ಲವು
  • ತನ್ನ ಗೂಡನ್ನು ಕಟ್ಟಲು ಬೇಕಾದ ಜೇನುಮೇಣವನ್ನು ತನ್ನ ಮೈಯಿಂದಲೇ ಹುಳವು ಉತ್ಪಾದಿಸುತ್ತದೆ
  • ಅರ್ಧ ಕೆ.ಜಿ. ಜೇನುಮೇಣವನ್ನು ಒಸರಲು (secrete) ಇವು 4 ಕೆ.ಜಿ ಸಿಹಿಯನ್ನು ತಿನ್ನಬೇಕು!
  • ತಮ್ಮನ್ನು ಕಾಪಾಡಿಕೊಳ್ಳಲು ಬೇರೊಂದು ಪ್ರಾಣಿಗೆ ಚುಚ್ಚಿ ಬಳಿಕ ತಾನು ಸಾಯುವ ಕೀಟವೆಂದರೆ ಜೇನುಹುಳ ಮಾತ್ರ
  • ಜೇನುಹುಳಗಳು ಕಡುನೇರಳೆ (ultravoilet) ಮತ್ತು ಪೊಲರೈಸ್ಡ್ (polarised) ಬೆಳಕನ್ನು ನೋಡಬಲ್ಲವು. ಹಾಗೆಯೇ ನಾವು ಕಾಣುವ ಕೆಂಪು ಬಣ್ಣವನ್ನು ಈ ಹುಳಗಳು ಕಾಣಲಾರವು
  • ಜೇನುಹುಳದ ಮಿದುಳು ಮಾನವನ ಮಿದುಳಿಗಿಂದ 20,000 ಪಟ್ಟು ಚಿಕ್ಕದು!
  • ಜೇನುಹುಳವು ಮಾನವನ ಮುಖವನ್ನು ಗುರುತಿಸಬಲ್ಲವು! 2 ಕೂಡುಗಣ್ಣು ಮತ್ತು 3 ಸುಳುಗಣ್ಣುಗಳು ಸೇರಿ ಒಟ್ಟು 5 ಕಣ್ಣುಗಳನ್ನು ಇವು ಹೊಂದಿವೆ
  • ಜೇನುಹುಳಗಳು ನಾಲ್ಕರವರೆಗೆ ಎಣಿಸಬಲ್ಲವು.

ಜೇನುತುಪ್ಪದ ಕುರಿತು ಕೆಲವು ಬೆರಗಿನ ಹನಿಗಳು:Honey-Dipper-The-Bee-Shop

  • ಇಡಿ ನೆಲದಲ್ಲಿ ಒಟ್ಟು 20 ಸಾವಿರ ಬಗೆಯ ಹುಳಗಳಿವೆ ಅದರಲ್ಲಿ 4 ಬಗೆಯ ಹುಳಗಳು ಮಾತ್ರ ಜೇನುತುಪ್ಪವನ್ನು ಮಾಡಬಲ್ಲವು
  • ಅರ್ಧ ಕೆ.ಜಿ ಜೇನುತುಪ್ಪವನ್ನು ಉತ್ಪಾದಿಸಲು ಜೇನುಹುಳಗಳು ಒಟ್ಟು 20 ಲಕ್ಶ ಹೂವುಗಳನ್ನು ಬೇಟಿ ಮಾಡಬೇಕು, ಹಾಗೆಯೇ 55, 000 ಮೈಲಿಗಳಷ್ಟು ಗೂಡಿನಿಂದ ಹೂವಿನ ಜಾಗಕ್ಕೆ ತಿರುಗಾಟ ನಡೆಸಬೇಕು!
  • ಒಂದು ಜೇನುಗೂಡಿನಲ್ಲಿ ದಿನಕ್ಕೆ 1 ಕೆ.ಜಿ.ಯಷ್ಟು ಜೇನುತುಪ್ಪ ಕೂಡಿಡಬಹುದು
  • ಒಂದು ಜೇನುಗೂಡಿನಲ್ಲಿ ವರುಶಕ್ಕೆ ಸುಮಾರು 200 ಕೆ.ಜಿ ಜೇನುತುಪ್ಪವನ್ನು ಹುಳಗಳು ಉತ್ಪಾದಿಸಬಲ್ಲವು
  • ಒಂದು ಜೇನುಹುಳವು ತನ್ನ ಇಡೀ ಬದುಕಿನಲ್ಲಿ 1/12 ಟೀ ಚಮಚದಷ್ಟು ಮಾತ್ರ ಜೇನುತುಪ್ಪವನ್ನು ಉತ್ಪಾದಿಸಬಲ್ಲದು
  • ಜೇನುತುಪ್ಪ ಎಂದಿಗೂ ಕೆಡುವುದಿಲ್ಲ
  • ಜೇನುಹುಳವೇನಾದರು ಇಡೀ ಭೂಮಿಯನ್ನು ಸುತ್ತಬೇಕು ಎಂದರೆ ಅದರ ಹಾರಾಟಕ್ಕೆ ಸುಮಾರು 28 ಗ್ರಾಂ ಜೇನುತುಪ್ಪ ಸಾಕಾಗುತ್ತದೆ. ಅಷ್ಟೊಂದು ಹುರುಪು ಜೇನುತುಪ್ಪದಲ್ಲಿದೆ.

ಎರಡು ಗೋದಿ ಕಾಳಿನನಷ್ಟು ದೊಡ್ಡದಿರುವ ಈ ಹುಳಗಳ ಬಾಳ್ಮೆಯ ಆಳಕ್ಕೆ ಇಳಿದರೆ ನಾವು ಹುಬ್ಬೇರಿಸುವಂತಹ ಅರಿಮೆ ಕಣ್ಣಿಗೆ ಕಾಣುತ್ತದೆ. ಇವುಗಳ ಬದುಕಿನ ಬಗ್ಗೆ ಜಗತ್ತಿನ ಮೂಲೆ ಮೂಲೆಗಳಲ್ಲಿ ಅರಕೆಗಳು ನಡೆಯುತ್ತಲೇ ಇವೆ. ಜೇನುಹುಳದ ಸಾಕಣೆಯು ಒಂದು ದೊಡ್ಡ ಉದ್ಯಮವಾಗಿ ಹೊರಹೊಮ್ಮುತ್ತಿದೆ. ಸಾಕಣೆಯಲ್ಲಿ ಬಗೆಬಗೆಯ ಚಳಕಗಳು ಹೊರಬರುತ್ತಿವೆ. ಜೇನು ಸಾಕಣೆಯ ಉದ್ಯಮವನ್ನು ಪರಿಣಾಮಕಾರಿಯಾಗಿ ನಡೆಸಲು ಹುಳದ ಬಗೆಗಿನ ಅರಕೆಗಳು ನೆರವನ್ನು ನೀಡುತ್ತಿವೆ. ನಮ್ಮಲ್ಲಿಯೂ ಇಂತಹ ಅರಕೆಗಳು ಹೆಚ್ಚಲಿ.

(ಮಾಹಿತಿ ಸೆಲೆ: westmtnapiary.com , pmc.ncbi , bbka.org.uk)

(ಚಿತ್ರ ಸೆಲೆ: thebeeshop.net, )

ಕಾರಿನ ಸಮಸ್ಯೆಗಳನ್ನು ಮನೆಯಲ್ಲೇ ಬಗೆಹರಿಸಿ (ಭಾಗ-2)

ಜಯತೀರ್ಥ ನಾಡಗೌಡ

  1. ಕಚ್ಚು, ಗೀರುಗಳಾದಾಗ:

ಬಂಡಿಗಳಿಗೆ ಕಚ್ಚು ಗೀರುಗಳಾಗುವುದು ಸಾಮಾನ್ಯ. ನಾವು ಕೊಂಡುಕೊಂಡ ಕಾರುಗಳು ನಮ್ಮ ಬದುಕಿನ ಭಾಗವಾಗಿರುವುದರಿಂದ ಅವುಗಳ ಮೇಲೆ ಒಂದು ಗೀರು ಮೂಡಿದರೂ ನಮಗೆ ಬೇಜಾರು. ಸಣ್ಣ ಪುಟ್ಟ ಗೀರು, ಪರಚಿದ ಕಚ್ಚುಗಳು ಉಂಟಾದಾಗ ಅವುಗಳನ್ನು ಮನೆಯಲ್ಲೇ ನಾವೇ ಸ್ವತಹ ಸರಿಪಡಿಸಿಕೊಳ್ಳಬಹುದು. ಇದಕ್ಕೆ ಬೇಕಿರುವುದು ಮರಳುಹಾಳೆ(Sand Paper), ತೊಳೆಯಲೊಂದು ಡಿಟರ್ಜಂಟ್ ಸಾಬೂನು ಮತ್ತು ಮೆರುಗಿನ ಬಟ್ಟೆ. ಸಣ್ಣ ಪುಟ್ಟ ಗೀರುಗಳಿದ್ದರೆ ,ಗೀರು ಮೂಡಿರುವ ಜಾಗವನ್ನು ಡಿಟರ್ಜಂಟ್ ಸಾಬೂನಿನಿಂದ ತೊಳೆಯಿರಿ. ದೊಡ್ಡ ಗೀರುಗಳಿದ್ದರೆ ಸುಮಾರು 3000 ಚೂರುಗಳಶ್ಟು(3000 grit) ತೆಳುವಾದ ಮರಳುಹಾಳೆಯನ್ನು ತೆಗೆದುಕೊಂಡು ಗೀರುಗಳಿರುವ ಜಾಗವನ್ನು ಉಜ್ಜಬೇಕು. ಹೀಗೆ ಉಜ್ಜುವಾಗ ಉಂಟಾಗುವ ತಿಕ್ಕಾಟದಿಂದ ಬಂಡಿಯ ಬಣ್ಣ ಕಳಚಿ ಬರದಿರಲೆಂದು ಇದರ ಮೇಲೆ ನೀರು ಸುರಿಯುತ್ತಿರಬೇಕು. ಇನ್ನೇನು ಗೀರು ಕಾಣದಂತಾಯಿತು ಎನ್ನುವಾಗ 5000 ಚೂರುಗಳಶ್ಟು(5000 grit) ತೆಳುವಾದ ಮರಳುಹಾಳೆಯನ್ನು ಬಳಸಿ ಉಜ್ಜಬೇಕು. ಮೆರಗಿನ ಬಟ್ಟೆಯಿಂದ ಈ ಜಾಗವನ್ನು ಒರೆಸಿ ಬಿಟ್ಟರೆ, ಗೀರು ಹೊರಟುಹೋಗಿ ಬಂಡಿ ಮೊದಲಿನ ಹೊಳಪು ಪಡೆದಿರುತ್ತದೆ.

  1. ಫ್ಯೂಸ್ (Fuse) ನೀವೇ ಬದಲಿಸಿ:

ಇಂದಿನ ಗಾಡಿಗಳಲ್ಲಿ ಹಲವಾರು ಇಲೆಕ್ಟ್ರಿಕ್ ಉಪಕರಣಗಳನ್ನು ಒದಗಿಸಲಾಗಿರುತ್ತದೆ. ವೋಲ್ಟೇಜ್ ಏರಿಳಿತದಿಂದ ಈ ಚೂಟಿಗಳನ್ನು ಕಾಪಾಡಲು ಕರಗುತಂತಿಗಳನ್ನು(Fuse) ಬಳಸಿರುತ್ತಾರೆ. ಈ ಕರಗುತಂತಿಗಳು ಕೆಲವೊಮ್ಮೆ ಸುಟ್ಟುಹೋಗುವುದುಂಟು. ಆಗ ಬಂಡಿಯೂ ಶುರುವಾಗದು. ಸುಟ್ಟುಹೋದ ಕರಗುತಂತಿಗಳನ್ನು ನಾವೇ ಬದಲಾಯಿಸಬಹುದಾಗಿರುತ್ತದೆ. ಎಲ್ಲ ಬಂಡಿಗಳಿಗೆ ಕರಗುತಂತಿ ಪೆಟ್ಟಿಗೆಯನ್ನು(Fuse Box) ನೀಡಿರುತ್ತಾರೆ. ಇದು ಬಂಡಿಯ ತೋರುಮಣೆಯ (Dashboard) ಕೆಳಗೆ ಇಲ್ಲವೇ ಅಕ್ಕಪಕ್ಕದಲ್ಲಿ ಕಾಣಸಿಗುತ್ತದೆ. ಪೆಟ್ಟಿಗೆಯನ್ನು ತೆರೆದಾಗ ಅದರ ಮುಚ್ಚಳದಲ್ಲಿ ಯಾವ ಕರಗುತಂತಿ ಹೇಗೆ ಜೋಡಿಸಬೇಕು ಮತ್ತು ಅವುಗಳ ಬಣ್ಣ ಹೀಗೆ ಎಲ್ಲ ವಿವರ ಮೂಡಿಸಿರುತ್ತಾರೆ. ಪೆಟ್ಟಿಗೆಯ ಒಂದು ಬದಿ, ಸಾಲಾಗಿ ಒಂದು ಜೊತೆ ಹೆಚ್ಚುವರಿ ಕರಗುತಂತಿಗಳನ್ನು ನೀಡಲಾಗಿರುತ್ತದೆ. ಸುಟ್ಟು ಹೋಗಿರುವ ಕರಗುತಂತಿಗಳನ್ನು ಒಂದೊಂದಾಗಿ ಹೊರತೆಗೆದು, ಅದರ ಜಾಗದಲ್ಲಿ ಹೊಸ ಕರಗುತಂತಿಗಳನ್ನು ಅವುಗಳ ಬಣ್ಣಕ್ಕೆ ಸರಿಯಾಗಿ ಪೆಟ್ಟಿಗೆಯ ಮುಚ್ಚಳದ ಮೇಲಿರುವ ವಿವರದಂತೆ ಜೋಡಿಸಬೇಕು. ಪೆಟ್ಟಿಗೆ ಹೊರ ತೆಗೆದಾಗ ಮೊಬೈಲ್ ಬಳಸಿ ಒಂದು ತಿಟ್ಟ ತೆಗೆದಿಟ್ಟುಕೊಂಡರೂ ಸಾಕು, ಹೊಸ ಕರಗುತಂತಿಗಳನ್ನು ಜೋಡಿಸಲು ಇದು ನೆರವಿಗೆ ಬರುವುದು.

  1. ಹೊರಸೂಸುಕ(Radiator) ಕೈ ಕೊಟ್ಟಾಗ:

ಗಾಡಿಯಲ್ಲಿ ಹೊರಸೂಸುಕ, ಬಿಣಿಗೆಯ ಬಿಸುಪನ್ನು ಹಿಡಿತದಲ್ಲಿಡುತ್ತದೆ. ಬಿಣಿಗೆ ಹೆಚ್ಚು ಕಾದು ಬಿಸಿಯಾಗದಂತೆ ನೋಡಿಕೊಳ್ಳುವುದೇ ಇದರ ಕೆಲಸ. ಕೆಲವೊಮ್ಮೆ ಹೊರಸೂಸುಕ ಕೆಟ್ಟು ನಿಂತಾಗ, ಬಿಣಿಗೆ ಹೆಚ್ಚಿಗೆ ಕಾದು ತೊಂದರೆಯಾಗಬಹುದು. ಹೀಗಾಗಿ ಬಿಣಿಗೆಯ ಬಿಸುಪು ತೋರುವ ಅಳಕದ (Engine Temperature Gauge) ಮೇಲೆ ಯಾವಾಗಲೂ ಒಂದು ಕಣ್ಣಿಟ್ಟಿರಬೇಕು. ಒಂದೊಮ್ಮೆ ದಿಢೀರನೆ ಬಿಸುಪು ಹೆಚ್ಚಾದದ್ದು ಕಂಡುಬಂದರೆ ಒಬ್ಬ ಮೆಕ್ಯಾನಿಕ್ ಬಳಿ ಬಂಡಿಯನ್ನೊಯ್ದು ಹೊರಸೂಸುಕವನ್ನು ಸರಿಪಡಿಸಿಕೊಳ್ಳಬೇಕು. ಹೆದ್ದಾರಿಯಲ್ಲಿ ಹೋಗುವಾಗ ಹೊರಸೂಸುಕ ಕೈ ಕೊಟ್ಟರೆ ಹೇಗೆ? ಹೆದರದೇ, ಮೊದಲು ಹೆದ್ದಾರಿಯ ದಡದಲ್ಲಿ ಬಂಡಿಯನ್ನು ತಂದು ನಿಲ್ಲಿಸಬೇಕು. ಆಗ ಬಂಡಿಯ ಎಲ್ಲ ಕಿಟಕಿಗಳನ್ನು ತೆರೆದಿಟ್ಟು, ಬಂಡಿಯ ಬಿಸಿಕವನ್ನು (Heater) ಶುರು ಮಾಡಿ Fresh Air Mode ನಲ್ಲಿಡಿ. ಬಿಣಿಗೆಯ ಹೆಚ್ಚಿನ ಬಿಸುಪನ್ನು ಬಿಸಿಕ ಹೀರಿಕೊಳ್ಳುತ್ತ, ಬಿಸಿಗಾಳಿಯನ್ನು ಪಯಣಿಗರು ಕೂಡುವೆಡೆಯಲ್ಲಿ ಬಿಡುತ್ತ ಹೋಗುತ್ತದೆ. ಇದರಿಂದ ಬಿಣಿಗೆಯ ಬಿಸುಪು ಕಡಿಮೆಯಾಗಿ, ಕೆಲವು ಕಿಲೋಮೀಟರ್ ಬಂಡಿಯನ್ನು ಸಾಗಿಸಿ ಮೆಕ್ಯಾನಿಕ್ ಬಳಿ ಕೊಂಡೊಯ್ದು ಪೂರ್ತಿಯಾಗಿ ಪರೀಕ್ಷಿಸಿಕೊಳ್ಳಿ..

  1. ಇದ್ದಕ್ಕಿದಂತೆ ಟೈರ್ ನಲ್ಲಿ ಗಾಳಿ ಒತ್ತಡ ಕಡಿಮೆಯಾಗುತ್ತಿದೆಯೇ?

ಕೆಲವೊಮ್ಮೆ ಪಂಕ್ಚರ್ ಆಗದೇ ಇದ್ದರೂ ಟೈರಿನ ಗಾಳಿ ಒತ್ತಡ ಕಡಿಮೆಯಾಗುತ್ತಿರುತ್ತದೆ. ಟೈರುಗಳು ಸವೆದು ಹಳೆಯದಾಗಿದ್ದರೆ ಅದರಲ್ಲಿ ತೂತುಗಳಾಗಿ ಗಾಳಿ ಮೆಲ್ಲಗೆ ಸೋರಿಕೆಯಾಗುವುದು. ಇಂತ ಟೈರುಗಳನ್ನು ಬದಲಾಯಿಸುವುದು ಒಳ್ಳೆಯದು. ಕೂಡಲೇ ಟೈರುಗಳನ್ನು ಬದಲಾಯಿಸಲು ಆಗದಿದ್ದರೆ, ಟೈರುಗಳ ಟ್ಯೂಬ್ ಬದಲಾಯಿಸಿ ಕೆಲವು ದಿನಗಳವರೆಗೆ ನೆಮ್ಮದಿಯಿಂದ ಇರಬಹುದು.

  1. ಮಳೆಯಲ್ಲಿ ಬಂಡಿಯ ಒಳಮೈ ನೆನೆದಾಗ:

ಮಳೆಗಾಲದಲ್ಲಿ ಕೆಲವು ಸಾರಿ ಮೈ ಮರೆತು ಬಂಡಿಯ ಕಿಟಕಿ ಗಾಜು ತೆರೆದಿಟ್ಟು ಹೋಗಿರುತ್ತೇವೆ. ಆಗ ಜೋರು ಮಳೆಬಂದರೆ, ಬಂಡಿಯ ಒಳಮೈಯಲ್ಲಿ ನೀರು ತುಂಬಿ ತೊಯ್ದು ತೊಪ್ಪೆಯಾಗಿರುತ್ತದೆ. ಬಂಡಿಯನ್ನು ಪೂರ್ತಿಯಾಗಿ ಒಣಗಿಸಲು 2-3 ದಿನಗಳೇ ಬೇಕಾಗುತ್ತದೆ. ಬೇಗನೆ ಒಣಗಿಸಲು ಹೀಗೆ ಮಾಡಬೇಕು. ಬಂಡಿಯನ್ನು ಮೊದಲು ಬಟ್ಟೆ/ಹಾಳೆಯಿಂದ ಚೆನ್ನಾಗಿ ಒರೆಸಬೇಕು. ಸಾಧ್ಯವಾದಶ್ಟು ತೇವವನ್ನು ಇದರಿಂದ ಹೊರತೆಗೆಯಬಹುದು. ಈಗ,ಬಂಡಿಯ ಬಿಸಿಕವನ್ನು (Heater) ಕೂಡ ಶುರು ಮಾಡಿ, ಬಂಡಿ ಒಣಗಿಸಬಹುದು. ಆದರೆ ಬಿಸಿಕದ ಬಳಕೆಯಿಂದ ಹೆಚ್ಚಿನ ಉರುವಲು ಪೋಲಾಗುತ್ತದೆ. ಇದರ ಬದಲಾಗಿ, ತೇವಕಳೆಕದ (Dehumidifier) ನೆರವಿನಿಂದ ಬಂಡಿಯನ್ನು ಸುಲಭ ಹಾಗೂ ಬಲು ಬೇಗನೆ ಒಣಗಿಸಿಬಹುದು. ಬಂಡಿಯ ಒಳಮೈ ನೀರಿನಲ್ಲಿ ನೆನೆದು ಕೆಟ್ಟ ವಾಸನೆ ಬರುವುದು ಖಚಿತ, ಇದನ್ನು ದೂರವಾಗಿಸಲು ಮೇಲಿನ ಸಾಲುಗಳಲ್ಲಿ ತಿಳಿಸಿದಂತೆ ಅಡುಗೆ ಸೋಡಾ ಮತ್ತು ಕಲಿದ್ದಲು ಪುಡಿಯನ್ನು ಚಿಮುಕಿಸಿದರಾಯಿತು.

ತಿಟ್ಟ ಸೆಲೆ: wikihow

ಕಾರಿನ ಸಮಸ್ಯೆಗಳನ್ನು ಮನೆಯಲ್ಲೇ ಬಗೆಹರಿಸಿ (ಭಾಗ-1)

ಜಯತೀರ್ಥ ನಾಡಗೌಡ

ನಮ್ಮ ದೇಶದಲ್ಲಿ ದಿನದಿಂದ ದಿನಕ್ಕೆ ಕಾರು ಬಳಕೆದಾರರು ಹೆಚ್ಚುತ್ತಿದ್ದಾರೆ. ಎಷ್ಟೋ ಮಂದಿಯ ದಿನದ ಓಡಾಟಕ್ಕೆ ಕಾರುಗಳೇ ಬೇಕೆಬೇಕು. ಹಗಲಿರುಳು ಓಡಾಟಕ್ಕೆ ಬಳಸಲ್ಪಡುವ ಕಾರುಗಾಡಿಗಳು ಕೆಲವೊಮ್ಮೆ ದಿಢೀರನೆ ಕೆಟ್ಟು ನಿಲ್ಲುವುದುಂಟು. ಕೆಲವೊಮ್ಮೆ ನೆರವುದಾಣಕ್ಕೆ (Service Centre) ಅಂದರೆ ಸರ್ವೀಸ್ ಸೆಂಟರ್‌ಗಳಿಗೆ ಕರೆದೊಯ್ದು ರಿಪೇರಿ ಮಾಡಿಸಬಹುದು, ಆದರೆ ಪ್ರತಿಸಲವೂ ಚಿಕ್ಕ ಪುಟ್ಟ ರಿಪೇರಿಗಳಿಗೆ ನೆರವುದಾಣಕ್ಕೆ ಬಂಡಿಯನ್ನು ಕರೆದೊಯ್ಯಲು ಸಾಕಷ್ಟು ಹೊತ್ತು ಮತ್ತು ದುಡ್ಡು ನೀಡಬೇಕಾಗಿ ಬರಬಹುದು. ಪ್ರತಿ ಬಾರಿ ನೆರವುದಾಣಕ್ಕೆ ಕರೆದೊಯ್ದು ರಿಪೇರಿ ಮಾಡಿಸುವ ಬದಲು ಮನೆಯಲ್ಲೇ ಸರಿಪಡಿಸಿದರೆ ಸಮಯ ಮತ್ತು ಹಣ, ಎರಡನ್ನು ಉಳಿಸಬಹುದು. ಕಾರುಗಾಡಿಗಳ ಹತ್ತಾರು ಚಿಕ್ಕ ಪುಟ್ಟ ಸಮಸ್ಯೆಗಳನ್ನು ಮನೆಯಲ್ಲೇ ಸರಿಪಡಿಸಬಹುದಾಗಿದ್ದು, ಅವುಗಳ ಬಗ್ಗೆ ತಿಳಿಯೋಣ ಬನ್ನಿ.

  1.   ಮಂಜುಗಟ್ಟಿದ ಗಾಳಿತಡೆ (Wind shield):

ಚಳಿಗಾಲ ಹೆಚ್ಚುತ್ತಿದ್ದಂತೆ ಎಲ್ಲೆಡೆ ಇಬ್ಬನಿ, ಮಂಜುಗಟ್ಟುವುದು ಸಾಮಾನ್ಯ. ರಾತ್ರಿ ಹೊತ್ತಿನಲಿ, ಬಂಡಿಗಳನ್ನು ಚಳಿ, ಗಾಳಿಗೆ ಮಯ್ಯೊಡ್ಡಿ ನಿಲ್ಲಿಸಿರುತ್ತೇವೆ. ಬೆಳಿಗ್ಗೆ ಎದ್ದು ನೋಡಿದರೆ ವಿಂಡ್‌ಶೀಲ್ಡ್ ಗಾಜು ಮಂಜಿನಿಂದ ಹೆಪ್ಪುಗಟ್ಟಿರುತ್ತದೆ. ಕೆಲವೊಂದು ಬಂಡಿಗಳಲ್ಲಿ ಮಂಜಿಳಕ (Defogger) ಎಂಬ ಮಂಜನ್ನು ಕರಗಿಸುವ ಏರ್ಪಾಟು ಅಳವಡಿಸಿರುತ್ತಾರೆ. ಅದು ಕಾರು ಮಾಲೀಕರ ಕೆಲಸವನ್ನು ಹಗುರ ಮಾಡುತ್ತದೆ. ಆದರೆ ಆದರೆ ಕೆಲವು ಹಳೆಯ ಮಾದರಿ ಗಾಡಿಗಳಲ್ಲಿ ಈ ಏರ್ಪಾಟು ಕಂಡುಬರುವುದಿಲ್ಲ. ಆದ್ದರಿಂದ ಡಿಫಾಗರ್ ಹೊಂದಿಲ್ಲದ ಕಾರು ಹೊಂದಿರುವವರು ಅಥವಾ ಡಿಫಾಗರ್ ಕೆಲಸ ಮಾಡದ ಸಂದರ್ಭಗಳಲ್ಲಿ ಈ ರೀತಿ ಮಾಡಬಹುದು: ಗಾಳಿತಡೆಯ ಮೇಲಿನ ಧೂಳು, ಕಸ ಕಡ್ಡಿಗಳಿದ್ದರೆ ಒರೆಸಿ ತೆಗೆಯಿರಿ. ಟೂತ್ ಪೇಸ್ಟ್ ತೆಗೆದುಕೊಂಡು ಒಂಚೂರು ಗಾಳಿತಡೆಯ (Windshield) ಗಾಜಿಗೆ ಹಚ್ಚಿ. ಮೆತ್ತನೆಯ ಬಟ್ಟೆಯೊಂದನ್ನು ತೆಗೆದುಕೊಂಡು, ಗಾಜನ್ನು ಪೂರ್ತಿಯಾಗಿ ಒರೆಸಿಬಿಡಿ. ನೀರಾವಿ, ನೀರಿನ ಹನಿಗಳು ಇಂಗಿ ಮಂಜುಗಟ್ಟುವುದನ್ನು ಟೂತ್ ಪೇಸ್ಟ್ ತಡೆಯುತ್ತದೆ.

  1. ಬಂಡಿ ಘಮಘಮಿಸುವಂತೆ ಹೀಗೆ ಮಾಡಿ:

ದೂರದ ಊರುಗಳಿಗೆ ಪಯಣಿಸುವಾಗ ಬಂಡಿಯಲ್ಲೇ ಕುಳಿತು ತಿಂಡಿ ತಿನಿಸುಗಳನ್ನು ತಿನ್ನಬೇಕಾಗಿ ಬರುತ್ತದೆ. ಕೆಲವೊಮ್ಮೆ ತಿನಿಸಿನ ಸಾಮಾನುಗಳನ್ನು ಬಂಡಿಯಲ್ಲಿಟ್ಟು ಹಬ್ಬ ಹರಿದಿನಗಳಂದು ಸಾಗಿಸುವುದು ಉಂಟು. ಇಂತ ಸಂದರ್ಭಗಳಲ್ಲಿ ತಿಂಡಿ ತಿನಿಸಿನ ವಾಸನೆ ಒಂದೆರಡು ದಿನಗಳವರೆಗೆ ಬಂಡಿಗಳಲ್ಲಿಯೇ ಉಳಿದು . ಕೆಟ್ಟ ವಾಸನೆ ಬರುವುದುಂಟು. ಕಳೆಯೇರಿಸುಕಗಳಿದ್ದರೆ (Air Freshener) ಅವುಗಳನ್ನು ಬಳಸಿ ಈ ಕೆಟ್ಟ ವಾಸನೆಗೆ ತಡೆ ಹಾಕಬಹುದು. ಬಂಡಿಯೊಳಗಿನ ಎರ್ ಫ್ರೆಶ್ನರ್ ಖಾಲಿಯಾಗಿದ್ದರೆ ಅಥವಾ ಎರ್ ಫ್ರೆಶ್ನರ್‌ಗಳಿಂದ ಅಲರ್ಜಿಯಿದ್ದರೆ, ಚಿಂತೆಬೇಡ. ಇದಕ್ಕೊಂದು ಮನೆ ಮದ್ದು ಉಂಟು. ಕಲ್ಲಿದ್ದಿಲು ತೆಗೆದುಕೊಂಡು ಕಲ್ಲಿದ್ದಲನ್ನು ಪುಡಿಯಾಗಿಸಿ, ಅದರೊಂದಿಗೆ ಅಡುಗೆ ಸೋಡಾ ಬೆರೆಸಬೇಕು. ಈ ಬೆರಕೆಯನ್ನು ಕಾರಿನ ಒಳಭಾಗದಲ್ಲೆಲ್ಲ ಚಿಮುಕಿಸಿ ಸ್ವಲ್ಪ ಹೊತ್ತು ಬಿಡಬೇಕು. ಸುಮಾರು ಒಂದು ಗಂಟೆಯ ನಂತರ ಈ ಪುಡಿಯನ್ನು ಗುಡಿಸಿ , ಬಂಡಿಯನ್ನು ಹಸನಾಗಿಸಿ. ಗಾಡಿಯಲ್ಲಿ ಬರುತ್ತಿದ್ದ ಕೆಟ್ಟ ವಾಸನೆ ಮಂಗ ಮಾಯವಾಗಿರುತ್ತದೆ.

  1. ಕೊಳೆಯಾದ ಕೂರುಮಣೆ ಸುಚಿಯಾಗಿಸಿ:

ಗಾಡಿಯಲ್ಲಿ ಕುಳಿತು ತಿಂಡಿ ತಿಂದಾಗ ಕೆಲವೊಮ್ಮೆ ಚಹಾ, ಕಾಪಿ ಬಿದ್ದು ಕೂರುಮಣೆಯ (Seat) ಮೇಲೆ ಜಿಡ್ಡಿನ ಕಲೆಗಳಾಗಿ ಬಿಡಬಹುದು. ಈ ಕಲೆಗಳನ್ನು ತೆಗೆಯಲು ಸರ್ವೀಸ್ ಸೆಂಟ ರ್‌ಗಳಿಗೆ ಹೋದರೆ ಅಲ್ಲಿ ದುಬಾರಿ ಹಣನೀಡಬೇಕಾಗುವುದು. ಇದರ ಬದಲಾಗಿ ಮನೆಯಲ್ಲಿ ಇದನ್ನು ಸುಳುವಾಗಿ ಹಸನಾಗಿಸಬಹುದು. ಮನೆಯಲ್ಲಿ ಗಾಜು ಒರೆಸಲು ಬಳಸುವ ಎಣ್ಣೆಯನ್ನು ತೆಗೆದುಕೊಂಡು, ಮೆತ್ತನೆಯ ಹಾಳೆ ಇಲ್ಲವೇ ಬಟ್ಟೆಗೆ ಸಿಂಪಡಿಸಬೇಕು. ಹೀಗೆ ಒದ್ದೆಯಾದ ಬಟ್ಟೆ/ಹಾಳೆಯನ್ನು ಕಲೆಯಾದ ಜಾಗದಲ್ಲಿ 5 ನಿಮಿಷಗಳವರೆಗೆ ಇಡಬೇಕು. ನೋಡು ನೋಡುತ್ತಿದ್ದಂತೆ ಕಲೆ ಹೊರಟು ಹೋಗಿರುತ್ತದೆ. ಬಟ್ಟೆ/ಹಾಳೆಯನ್ನು ಕಲೆಯಿರುವ ಜಾಗದಲ್ಲಿ ತಿಕ್ಕಿದರೆ, ಕಲೆ ಎಲ್ಲೆಡೆ ಹರಡುವ ಸಾಧ್ಯತೆ ಇರುವುದರಿಂದ ಎಚ್ಚರವಹಿಸಬೇಕು. ಕೀಲೆಣ್ಣೆ (Grease) ಜಿಡ್ಡಿನ ಕಲೆಗಳಿದ್ದರೆ ಹೀಗೆ ಮಾಡಿ. ಬಟ್ಟೆ ಒಗೆಯಲು ಬಳಸುವ ಲಿಕ್ವಿಡ್ ಡಿಟರ್ಜಂಟ್ ಅನ್ನು ನೀರಿನೊಂದಿಗೆ ಬೆರೆಸಿ, ಜಿಡ್ಡು ಇರುವ ಜಾಗದ ಮೇಲೆ ಚೆನ್ನಾಗಿ ತಿಕ್ಕಬೇಕು. ಬಂಡಿಯಲ್ಲಿ ಹೆಚ್ಚು ಹೊತ್ತು ಪಯಣಿಸುವಾಗ ಕೆಲವರಿಗೆ ವಾಂತಿಯಾಗುವುದು ಸಹಜ. ಇಂತಹ ವಾಂತಿ ಕಲೆಗಳೇನಾದರೂ ಇದ್ದರೆ, ಆ ಜಾಗವನ್ನು ಸಾಬೂನಿನಿಂದ ತೊಳೆಯಬೇಕು. ನಂತರ ಅಡುಗೆ ಸೋಡಾವನ್ನು ನೀರಿನೊಂದಿಗೆ ಬೆರೆಸಿ ಕಲೆಯಿರುವ ಜಾಗಕ್ಕೆ ಒರೆಸಿದರೆ, ಅಡುಗೆ ಸೋಡಾ ಕೆಟ್ಟ ವಾಸನೆ ಬರುವುದನ್ನು ತಡೆಯುತ್ತದೆ. ನೀರು ಬಳಸಿ ತೊಳೆಯುವುದರಿಂದ, ಜಾಗ ಹಸಿಯಾಗಿರುತ್ತದೆ. ಇದನ್ನು ಬೇಗನೆ ಒಣಗಿಸಲು, ಕೂದಲು ಒಣಗಿಸಲು ಬಳಸುವ ಹೇರ್ ಡ್ರೈಯರ್ (Hair Dryer) ಉಪಯೋಗಿಸಬಹುದು.

  1. ಡಿಕ್ಕಿಕಾಪನ್ನು(Bumper) ಹೀಗೆ ಸರಿಪಡಿಸಿ:

ಇಂದಿನ ದಿನಗಳಲ್ಲಿ ಸಂಚಾರಿ ದಟ್ಟಣೆಗೆ (Traffic Jam) ಹಲವು ಊರುಗಳು ನಲಗುತ್ತಿವೆ. ಎಶ್ಟೋ ಸಾರಿ, ಎರಡು ಗಾಡಿಗಳ ಮಧ್ಯೆ ಎಳ್ಳಷ್ಟೂ ಜಾಗವಿರದಷ್ಟು ದಟ್ಟಣೆ. ಈ ವಾಹನಗಳ ದಟ್ಟಣೆಯಲ್ಲಿ ಆಮೆ ವೇಗದಲ್ಲಿ ಸಾಗುವ ಕಾರುಗಳು ಒಮ್ಮೊಮ್ಮೆ ಗುದ್ದಿಕೊಳ್ಳುವುದುಂಟು. ಮೆಲ್ಲಗೆ ಸಾಗುತ್ತಿರುವ ಗಾಡಿಗಳ ಗುದ್ದುವಿಕೆಯಿಂದ ದೊಡ್ಡ ಅನಾಹುತ ಆಗದೇ ಹೋದರು, ಬಂಡಿಗಳ ಡಿಕ್ಕಿಕಾಪು (Bumper) ಸುಲಭವಾಗಿ ನೆಗ್ಗಿ ಬಿಡುತ್ತವೆ. ನೆಗ್ಗಿದ ಬಂಡಿಯ ಡಿಕ್ಕಿಕಾಪಿನ ಭಾಗವನ್ನು ಸುಳುವಾಗಿ ಮನೆಯಲ್ಲೇ ಸರಿಪಡಿಸಬಹುದು. ಅದಕ್ಕಾಗಿ ಒಂದರ್ಧ ಬಕೆಟ್‌ನಶ್ಟು ಬಿಸಿ ನೀರು ತೆಗೆದುಕೊಳ್ಳಬೇಕು. ಈ ಬಿಸಿ ನೀರನ್ನು ನೆಗ್ಗಿದ ಭಾಗದಲ್ಲಿ ಸುರಿಯಬೇಕು. ಬಿಸಿ ನೀರು ಬೀಳುವುದರಿಂದ ಡಿಕ್ಕಿ ಕಾಪು ಹಿಗ್ಗಿ ತನ್ನ ಮೊದಲಿನ ಆಕಾರಕ್ಕೆ ಹೊಂದಿಕೊಳ್ಳುತ್ತದೆ. ಮೊದಲಿನ ಆಕಾರಕ್ಕೆ ಹೊಂದಿಕೊಳ್ಳದೇ ಹೋದರೆ, ಒಳಗಡೆಯಿಂದ ಮೆಲ್ಲನೆ ದೂಡಿದರೆ ಸಾಕು, ಅದು ಮೊದಲಿನಂತಾಗಿರುತ್ತದೆ. ಇದನ್ನು ಮಾಡುವಾಗ ಸ್ವಲ್ಪ ಎಚ್ಚರಿಕೆವಹಿಸಿ ಮಾಡಬೇಕು.

  1. ಮಿಂಕಟ್ಟು(Battery) ಕೆಲಸ ಮಾಡದೇ ಹೋದಾಗ?:

ಎಷ್ಟೋ ಸಾರಿ ಗಾಡಿ ಶುರು ಮಾಡಲು ಹೋದಾಗ, ಬಿಣಿಗೆ(Engine) ಶುರು ಆಗುವುದೇ ಇಲ್ಲ. ಕಾರಿನ ಮಿಂಕಟ್ಟು ಸರಿಯಾಗಿ ಮಿಂಚಿನ ಪೂರೈಕೆ ಮಾಡದೇ ಇರುವುದರಿಂದ ಹೀಗಾಗುತ್ತದೆ. ಬ್ಯಾಟರಿ ಚಾರ್ಜ್ ಕಳೆದುಕೊಂಡು ಬಾಳಿಕೆ ಕಡಿಮೆಯಾಗುತ್ತಿದೆ ಎಂದೇ ಇದರರ್ಥ. ಆದರೂ ಚಿಂತಿಸಬೇಕಿಲ್ಲ, ಈ ಗಾಡಿಯನ್ನು ಇನ್ನೊಂದು ಬಂಡಿಯ ಬ್ಯಾಟರಿ ಮೂಲಕ ಶುರು ಮಾಡಬಹುದು. ಇದಕ್ಕೆ ಜಂಪರ್ ತಂತಿಗಳ(Jumper Cable) ಅಗತ್ಯವಿದೆ. ಹೀಗೆ ಜಂಪರ್ ತಂತಿ ಬಳಸಿ ಗಾಡಿಯನ್ನು ಶುರು ಮಾಡುವುದನ್ನು ಜಂಪ್ ಸ್ಟಾರ‍್ಟ್(Jump Start) ಎಂದೇ ಕರೆಯುತ್ತಾರೆ. ಇದನ್ನು ಸುಳುವಾಗಿ ಅರಿಯಲು, ಶುರುವಾಗದೇ ಇರುವ ಗಾಡಿಯನ್ನು ಗಾಡಿ-1 ಮತ್ತು ಅದಕ್ಕೆ ಚಾರ್ಜ್ ಒದಗಿಸಲಿರುವ ಗಾಡಿಯನ್ನು ಗಾಡಿ-2 ಎಂದುಕೊಳ್ಳಿ. ಎರಡು ಗಾಡಿಗಳ ಬಿಣಿಗವಸು(Bonnet/Hood) ಮೇಲೆತ್ತಿ ಮಿಂಕಟ್ಟಿನ ಕೂಡು ತುದಿ(Positive Terminal) ಪತ್ತೆ ಹಚ್ಚಿಕೊಳ್ಳಿ. ಹೆಚ್ಚಿನ ಬ್ಯಾಟರಿಗಳಲ್ಲಿ ಕೂಡು ತುದಿಯನ್ನು ಕೆಂಪನೆ ಬಣ್ಣದ ಮುಚ್ಚಳದಿಂದ ಮುಚ್ಚಿರುತ್ತಾರೆ ಮತ್ತು ಅದು ಕಳೆ ತುದಿಗಿಂತ(Negative Terminal) ಕೊಂಚ ದೊಡ್ಡದಾಗಿರುತ್ತದೆ. ಕೆಂಪು ಬಣ್ಣದ ಜಂಪರ್ ತಂತಿ ಮೂಲಕ ಎರಡು ಕಾರುಗಳ ಮಿಂಕಟ್ಟಿನ ಕೂಡು ತುದಿಗಳನ್ನು ಸೇರಿಸಿ. ಗಾಡಿ-2 ರ ಕಳೆ ತುದಿಗೆ ಕಪ್ಪು ಬಣ್ಣದ ಜಂಪರ್ ಸಿಕ್ಕಿಸಿ ಅದನ್ನು ಗಾಡಿ-1ರ ಲೋಹದ ಭಾಗಕ್ಕೆ(Metal Surface) ಮುಟ್ಟಿಸಿ. ಗಾಡಿಗಳ ಮಿಂಕಟ್ಟಿನ ಎರಡು ತುದಿಗಳು ಒಂದಕ್ಕೊಂದು ತಾಗದಂತೆ ಎಚ್ಚರವಹಿಸಿ. ಈಗ ಗಾಡಿ-2 ನ್ನು ಶುರು ಮಾಡಿ 10ನಿಮಿಷಗಳವರೆಗೆ ಹಾಗೇ ಬಿಡಿ. 10 ನಿಮಿಷಗಳಲ್ಲಿ ಗಾಡಿ-2ರ ಮಿಂಕಟ್ಟಿನಿಂದ ಸಾಕಶ್ಟು ಮಿಂಚು ಗಾಡಿ-1ರ ಮಿಂಕಟ್ಟಿಗೆ ಪೂರೈಕೆಯಾಗಿ, ಅದರಲ್ಲಿ ಮಿಂಚಿನ ಹುರುಪು (Electric Charge) ತುಂಬಿಕೊಂಡಿರುತ್ತದೆ. ಈಗ ಗಾಡಿ-1 ನ್ನು ಶುರು ಮಾಡಿ, ಯಾವುದೇ ತೊಂದರೆಯಿಲ್ಲದೇ ಬಂಡಿ ಶುರುವಾಗುತ್ತದೆ.