ಹುದುಗುವಿಕೆಯ ಚಳಕ ಮತ್ತು ಅದರ ಬಳಕೆ

ನಮ್ಮ ನಮ್ಮ ಮನೆಗಳಲ್ಲಿ ಅಮ್ಮ ಮಾಡುವ ರುಚಿಯಾದ ಇಡ್ಲಿ ಅಥವಾ ದೋಸೆ ತಿನ್ನುತ್ತಾ ತಿಂಡಿಗಳು ಹೇಗೆ ಇಷ್ಟು ರುಚಿಯಾಗಿ, ಮೆದುವಾಗಿವೆ ಎಂದು ಯೋಚಿಸಿದ್ದೀರಾ? ಹಾಲು ಹೇಗೆ ತನ್ನಷ್ಟಕ್ಕೆ ತಾನೇ ಮೊಸರಾಗುತ್ತದೆ? ಹಾಗೆ ಅಜ್ಜಿ ಮಾಡಿಟ್ಟ ಉಪ್ಪಿನಕಾಯಿ ಹೇಗೆ ತಿಂಗಳುಗಟ್ಟಲೆ ಕೆಡದೆ ಅದರ ವಿಶಿಷ್ಟ ರುಚಿ ಉಳಿಯತ್ತೆ ಎಂದು ತಲೆ ಕೆಡಿಸಿಕೊಂಡಿದ್ದೀರಾ? ಇವುಗಳ ಹಿಂದಿರುವ ಚಳಕವೇ ಹುದುಗುವಿಕೆ ಅಥವಾ ಹುಳಿಯುವಿಕೆ (Fermentation). ಇದನ್ನು ಮನುಷ್ಯರು ನೂರಾರು ವರ್ಷಗಳಿಂದ ಬಳಸುತ್ತಿದ್ದಾರೆ. ಇಂದಿಗೂ ದಿನನಿತ್ಯದ ಬದುಕಿನಲ್ಲೂ ಇದರ ಬಳಕೆ ಬಹಳ ಸಾಮಾನ್ಯ.

 ಏನಿದು ಹುದುಗುವಿಕೆ ?

ಫಂಗೈ ಹಾಗು ಬ್ಯಾಕ್ಟೀರಿಯಾದಂತಹ ಕಿರುಜೀವಿಗಳು ನಮ್ಮ ಆಹಾರವನ್ನು ಗಾಳಿಯ ಆಮ್ಲಜನಕ ಇರುವೆಡೆ ಇಲ್ಲವೇ ಗಾಳಿಯಿಲ್ಲದೆಡೆ, ಸಕ್ಕರೆಯ ಅಂಶ (ಗ್ಲುಕೋಸ್) ಸೇವಿಸಿ ಬೇರೆ ಪದಾರ್ಥಗಳನ್ನು ತಯಾರಿಸುವ ಬಗೆಯೇ ಹುದುಗುವಿಕೆಗೆ ಕಾರಣ. ಸಾಮಾನ್ಯ ಪರಿಸ್ಥಿತಿಯಲ್ಲಿ ಗಾಳಿಯ ಕೊರತೆ ಇರುವುದಿಲ್ಲ, ಬಗೆಯ ಸೇವನೆಯನ್ನು ಏರೋಬಿಕ್ ಮೆಟಾಬೋಲಿಸಮ್ (Aerobic metabolism) ಎನ್ನುತ್ತಾರೆ. ಆಮ್ಲಜನಕದ ಕೊರತೆಯಿದ್ದಾಗ ಕಿರುಜೀವಿಗಳ ಸೇವನೆಯ ಬಗೆ ಬೇರೆಯಾಗಿರುತ್ತದೆ, ಅದನ್ನು ಅನ್ಯೆರೋಬಿಕ್ ಮೆಟಾಬೋಲಿಸಮ್ (Anaerobic Metabolism) ಎನ್ನುತ್ತಾರೆ. ಹೀಗೆ ಎರಡೂ ಬಗೆಯಲ್ಲಿ ಸೇವಿಸುವ ಜೊತೆಗೆ ಅವು ಆಲ್ಕೋಹಾಲ್ ಅಥವಾ ಇನ್ನಿತರ ರಾಸಾಯನಿಕ ಪದಾರ್ಥವನ್ನು ತಯಾರಿಸುತ್ತವೆ. ಫಂಗೈ ಹಾಗು ಬ್ಯಾಕ್ಟೀರಿಯಾಗಳ ಗುಣವನ್ನು ಜನರು ತಮ್ಮ ಅನುಕೂಲಕ್ಕೆ ಬಳಸುವ ಚಳಕವೇ ಹುದುಗುವಿಕೆ.

 36383574_1760910227333441_1638605155286908928_n

ಹುದುಗುವಿಕೆ ಚಳಕದ ಬಳಕೆ: 

ಸಾಮಾನ್ಯವಾಗಿ ಅಡುಗೆಯಲ್ಲಿ ಬ್ಯಾಕ್ಟೀರಿಯಾ ಅಥವಾ ಫಂಗೈನ ಕೆಲಸ ಇರುವುದಿಲ್ಲ, ಆದರೆ ಹುದುಗಿದ ತಿನಿಸು ಹಾಗು ಅಡಿಗೆಯಲ್ಲಿ ಬ್ಯಾಕ್ಟೀರಿಯಾ ಹಾಗು ಫಂಗೈನ ಕೆಲಸದಿಂದ ಅಡುಗೆಯ ರುಚಿ, ಪೌಷ್ಟಿಕತೆ, ಗುಣಗಳನ್ನು ಹೆಚ್ಚಿಸುತ್ತವೆ, ಕಾರಣಕ್ಕೆ ಹುದುಗಿದ ತಿನಿಸುಗಳಿಗೆ ಬೇಡಿಕೆ ಹೆಚ್ಚು. ಇಡ್ಲಿ, ದೋಸೆ, ಉಪ್ಪಿನಕಾಯಿ ಇವುಗಳ ರುಚಿ ಹೆಚ್ಚುವುದು ಹುದುಗುವಿಕೆಯಿಂದಲೇ. ಇಡ್ಲಿ ಹಾಗು ದೋಸೆ ಮಾಡವ ಹಿಂದಿನ ದಿನ ಹಿಟ್ಟನ್ನು ನೆನಸಿಟ್ಟಾಗ ಕಿರುಜೀವಿಗಳು ಅದನ್ನು ಅನ್ಯೆರೋಬಿಕ್ ಮೆಟಾಬೋಲಿಸಮ್ ಮೂಲಕ ಸೇವಿಸಿ ಲ್ಯಾಕ್ಟಿಕ್ ಆಸಿಡ್ ತಯಾರಿಸುತ್ತದೆ ಹಾಗೆಯೆ ಹಿಟ್ಟು ಮೆದುವಾಗುತ್ತದೆ.

ಉಪ್ಪಿನಕಾಯಿ ಮಾಡುವಾಗ ಕಾಯಿಯ ತುಂಡುಗಳನ್ನು ಉಪ್ಪಿನಲ್ಲಿ ಕಲಸಿ ಗಾಳಿಯಾಡದಂತೆ ಮುಚ್ಚಿಟ್ಟಾಗ ಕಾಯಿಯ ಸಿಪ್ಪೆಯಲ್ಲಿದ್ದ ಲ್ಯಾಕ್ಟೊಬಸಿಲ್ಲುಸ್ (Lactobacillus) ಎಂಬ ಬ್ಯಾಕ್ಟೀರಿಯಾ ಕಾಯಿಯನ್ನು ಸೇವಿಸಿ ಲ್ಯಾಕ್ಟಿಕ್ ಆಸಿಡ್ ತಯಾರಿಸುವುದರ ಪರಿಣಾಮ ಉಪ್ಪಿನಕಾಯಿಗೆ ತನ್ನದೇ ಆದ ರುಚಿ ಒದಗುತ್ತದೆ, ಅಲ್ಲದೇ ಉಪ್ಪಿನೊಂದಿಗೆ ಲ್ಯಾಕ್ಟಿಕ್ ಆಸಿಡ್ ಇರುವುದರಿಂದ ಅದು ಕೆಡದೆ ಬಹಳ ಕಾಲ ಇರುತ್ತದೆ. ಇದೇ ಬ್ಯಾಕ್ಟೀರಿಯಾದ ಇಂತಹದೇ ಕೈಚಳಕದಿಂದ ಹಾಲು ಮೊಸರಾಗುವುದು ಕೂಡ. ಅಲ್ಲದೆ ಎಲ್ಲಾ ತರಹದ ಹೆಂಡಗಳು (ರಮ್, ವೈನ್, ವಿಸ್ಕಿ, ಇತ್ಯಾದಿ) ಎಲ್ಲವೂ ತಯಾರಾಗುವುದು ಹುದುಗುವಿಕೆಯಿಂದಲೇ. ಬ್ಯಾಕ್ಟೀರಿಯಾಗಳು ಹಣ್ಣು ಹಾಗು ತರಕಾರಿಗಳ ರಸವನ್ನು ಗಾಳಿಯಿಲ್ಲದ ಸಂದರ್ಭದಲ್ಲಿ ಸೇವಿಸಿ ಆಲ್ಕೋಹಾಲ್ ತಯಾರಿಸುತ್ತದೆ. ಬಗೆ ಬಗೆಯ ಹಣ್ಣು ಹಾಗು ತರಕಾರಿಗಳನ್ನು ಬಳಸಿ ಬಗೆ ಬಗೆಯ ಹೆಂಡಗಳನ್ನು ತಯಾರಿಸುತ್ತಾರೆ.

 ಹುದುಗುವಿಕೆಯ ಇತಿಹಾಸ:

ಯಾವಾಗ ಜನರು ಹಾಲನ್ನು ಮೊಸರು ಮಾಡುವುದನ್ನು ಕಲಿತರೋ, ಇಡ್ಲಿ, ದೋಸೆ, ಉಪ್ಪಿನಕಾಯಿ ಮಾಡಲು ಶುರುಮಾಡಿದರೋ, ಹೆಂಡ ತಯಾರಿಸಲು ಕಲಿತುಕೊಂಡರೋ ಅಂದೇ ಹುದುಗುವಿಕೆಯ ಬಳಕೆ ಶುರುವಾಯಿತು. ಸರಿ ಸುಮಾರು 6000 B.C.E ಯಲ್ಲಿ ಚೀನಾದ ಒಂದು ಪ್ರಾಂತ್ಯದಲ್ಲಿ ಒಂದು ಬಗೆಯ ಮದ್ಯ ತಯಾರಿಸಿದ ಪುರಾವೆ ಸಿಕ್ಕಿದೆ. ಹೀಗೆ ಬಗೆ ಬಗೆಯ ಹುದುಗಿದ ತಿನಿಸುಗಳನ್ನು ಸಾವಿರಾರು ವರುಷಗಳಿಂದ ತಯಾರಿಸಿದ ಪುರಾವೆಗಳು ಬಹಳಷ್ಟು ಇವೆ. ಆದರೆ ಇದರ ವೈಜ್ಞಾನಿಕ ಹಿನ್ನಲೆ ಯಾರು ಅರಿತಿರಲಿಲ್ಲ.

ಹುದುಗುವಿಕೆ ಹಿಂದಿನ ವಿಜ್ಞಾನವನ್ನು ಮೊದಲು ಅರಕೆ ಮಾಡಿದ್ದು ಫ್ರಾನ್ಸ್ ಮೂಲದ ಹೆಸರಾಂತ ವಿಜ್ಞಾನಿ ಲೂಯಿಸ್ ಪಾಶ್ಚರ್ (Louis Pasteur). ಸುಮಾರು 18ನೇ ಶತಮಾನದಲ್ಲಿ ಹಲವಾರು ವಿಜ್ಞಾನಿಗಳು ಹುದುಗುವಿಕೆ ಒಂದು ರಾಸಾಯನಿಕ ಕ್ರಿಯೆ ಎಂದು ಭಾವಿಸಿದ್ದರು, ಆದರೆ 1856ರಲ್ಲಿ ಪಾಶ್ಚರ್ ಅವರನ್ನು ಅವರ ಶಿಷ್ಯರ ತಂದೆಯೊಬ್ಬರು ತಮ್ಮ ವೈನ್ ತಯಾರಿಕೆಯಲ್ಲಿ ಆಗುತ್ತಿರುವ ತೊಂದರೆಗೆ ಪರಿಹಾರ ಸೂಚಿಸಲು ಕೇಳಿಕೊಂಡರು. ಅವರ ತೊಂದರೆ ಏನೆಂದರೆ, ಇವರು ಸರಿ ತಿಳಿದ ದಾರಿಯಲ್ಲಿ ತಯಾರು ಮಾಡುತ್ತಿದ್ದ ವೈನ್ ರುಚಿ ಹಾಳಾಗುತ್ತಿತ್ತು. ಆಗ ತೊಂದರೆಯಿಂದ ಕುತೂಹಲಗೊಂಡ ಪಾಶ್ಚರ್ ಅವರು ವೈನ್ ಮಾಡುವ ಬಗೆಯ ಬಗ್ಗೆ ತನಿಕೆ ಮಾಡಿದಾಗ ಹೊಸ ವಿಷಯವೊಂದು ಇವರ ಗಮನಕ್ಕೆ ಬಂತು

ಹಣ್ಣಿನ ರಸವನ್ನು ವೈನ್ ಮಾಡಲು ಯೀಸ್ಟ್ ಅನ್ನು ಬಳಸುತ್ತಿದ್ದರು, ಇದು ಹಣ್ಣಿನ ಸಕ್ಕರೆ ಅಂಶವನ್ನು ಗಾಳಿಯಿಲ್ಲದ ಏರ್ಪಾಡಿನಲ್ಲಿ ಸೇವಿಸಿ ಆಲ್ಕೋಹಾಲ್ ತಯಾರಿಸುತ್ತಿತ್ತು, ಇದೆ ವೈನ್ ಆಗುವ ಬಗೆ ಎಂದು ತಿಳಿಯಿತು. ವೈನ್ ಕೆಡುವುದಕ್ಕೆ ಕಾರಣವು ಮತ್ತೊಂದು ಬಗೆಯ ಯೀಸ್ಟ್ ಎಂಬುದು ತಿಳಿಯಿತು. ಯೀಸ್ಟ್, ಫಂಗೈ ಇವುಗಳು ಕಿರುಜೀವಿಗಳ ಬಗೆಗಳಾಗಿವೆ, ಇವುಗಳಲ್ಲಿ ಬಗೆ ಬಗೆಯ ಜಾತಿಗಳಿರುತ್ತವೆ. ಹೇಗೆ ಒಂದು ಜಾತಿಯ ಯೀಸ್ಟ್ ಸಕ್ಕರೆ ಅಂಶವನ್ನು ಆಲ್ಕೋಹಾಲ್ ಬದಲಿಗೆ ಲ್ಯಾಕ್ಟಿಕ್ ಆಸಿಡ್ ಆಗಿ ಬದಲಿಸುತ್ತಿತ್ತು. ಹೆಚ್ಚಿನ ಅರಕೆ ನಡೆಸಿದಾಗ ವೈನ್ ತಯಾರಿಸಲು ಬಳಸುತ್ತಿದ್ದ ಯೀಸ್ಟ್ ಮಿಶ್ರಣದಲ್ಲಿ, ಬೇರೊಂದು ಜಾತಿಯ ಯೀಸ್ಟ್ ಸೇರಿಕೊಂಡಿದ್ದು ತಿಳಿಯಿತು. ವೈನ್‍ನ ರುಚಿ ಕೆಡಲು ಇದೇ ಕಾರಣ!.

36343675_1760912287333235_2991375452431450112_n

(ಹುದುಗುವಿಕೆಯ ಸಂಶೋಧನೆಯಲ್ಲಿ ಲೂಯಿಸ್ ಪಾಶ್ಚರ್)

ತನಿಕೆಯಿಂದ ಹುದುಗುವಿಕೆಯ ಕ್ರಿಯೆ ಕಿರುಜೀವಿಗಳ ಕೈಚಳಕ ಎಂದು ಸಾಬೀತಾಯಿತು. ಅಲ್ಲದೆ, ಬಗೆ ಬಗೆಯ ಬ್ಯಾಕ್ಟೀರಿಯಾಗಳು ಹಾಗು ಫಂಗೈಗಳು ತಮ್ಮದೇ ವಿಶಿಷ್ಟ ರೀತಿಯಲ್ಲಿ ಆಹಾರ ಸೇವಿಸಿ ಆಲ್ಕೋಹಾಲ್ ಅಥವಾ ಆಸಿಡ್‍ಗಳನ್ನು ತಯಾರಿಸುತ್ತದೆ ಎಂದು ತಿಳಿಯಿತು. ಪಾಶ್ಚರ್ ಅವರ ತನಿಕೆಯಿಂದ ಅವರಿಗೆ ಹುದುಗುವಿಕೆ ಚಳಕದ ತಂದೆ (Father of Fermentation Technology) ಎಂಬ ಪಟ್ಟ ಸಿಕ್ಕಿತು.

ಪಾಶ್ಚರ್ ಅವರ ಹೊಸ ಹುಡುಕಿನಿಂದ ಜನ ಕಿರುಜೀವಿಗಳನ್ನು ನೋಡುವ ಬಗೆಯೇ ಬದಲಾಯಿತು. ಬ್ಯಾಕ್ಟೀರಿಯಾ ಹಾಗು ಫಂಗೈ ಬರೀ ಮನುಷ್ಯರಿಗೆ ಹಾನಿ ಮಾಡುತ್ತದೆ, ಇವುಗಳಿಂದ ಯಾವುದೇ ಒಳಿತಿಲ್ಲ ಎಂಬ ನಂಬಿಕೆಗೆ ಬದಲಾಗಿ ಇವುಗಳು ನಮಗೆ ತಿಳಿಯದೆ ನಮಗೆ ಸಾವಿರಾರು ವರುಷಗಳಿಂದ ನಮಗೆ ಏನೆಲ್ಲಾ ಉಪಕಾರ ಮಾಡಿವೆ ಎಂಬ ಮನಸ್ಥಿತಿ ಹುಟ್ಟಿತು. ಪಾಶ್ಚರ್ ಅವರ ಸಂಶೋಧನೆಯ ನಂತರ ಹುದುಗುವಿಕೆಯ ಬಗ್ಗೆ ವಿಜ್ಞಾನಿಗಳಲ್ಲಿ ಹೆಚ್ಚು ಆಸಕ್ತಿ ಮೂಡಿತು

1897 ರಲ್ಲಿ ಎಡ್ವರ್ಡ್ ಬುಕ್ನೆರ್, ಜರ್ಮನಿಯ ವಿಜ್ಞಾನಿಯೊಬ್ಬರು ಕಿರುಜೀವಿಗಳು ಬದುಕಿಲ್ಲದಿದ್ದರೂ ಅವುಗಳಿಂದ ತೆಗೆದ ರಸದಿಂದಲೇ ಹುದುಗುವಿಕೆಯಾಗುತ್ತದೆ ಎಂದು ತೋರಿಸಿದರು. ಸತ್ತ ಯೀಸ್ಟ್ ಇಂದ ತೆಗೆದ ರಸದಿಂದ ಸಕ್ಕರೆ ಆಲ್ಕೋಹಾಲ್ ಆಗಿ ಬದಲಾಗಿದ್ದನ್ನು ಗಮನಿಸಿ ತನಿಕೆ ಮಾಡಿದಾಗ ಯೀಸ್ಟ್ ತಯಾರಿಸಿದ ಕಿಣ್ವವೊಂದು(Enzymes) ಕೆಲಸ ಮಾಡುತಿದ್ದನ್ನು ಕಂಡುಹಿಡಿದರು. ಅದಕ್ಕೆ ಜೈಮೇಸ್ಎಂದು ಹೆಸರಿಟ್ಟರು. ಇದರಿಂದ, ಹುದುಗುವಿಕೆ ಬ್ಯಾಕ್ಟೀರಿಯಾ ಹಾಗು ಫಂಗೈಗಳು ತಯಾರಿಸುವ ಕಿಣ್ವಗಳಿಂದ ಹುದುಗುವಿಕೆಯಾಗುತ್ತದೆ ಎಂದು ಸಾಬೀತಾಯಿತು. ಇದನ್ನು ಕಂಡುಹಿಡಿದಿದ್ದಕ್ಕೆ ಎಡ್ವರ್ಡ್ ಬುಕ್ನೆರ್ ಅವರಿಗೆ 1907 ರಲ್ಲಿ ರಸಾಯನಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ ದೊರಕಿತು.

20ನೇ ಶತಮಾನದ ಶುರುವಿನೊಂದಿಗೆ ಹುದುಗುವಿಕೆಯ ಚಳಕ ಬೆಳೆಯತೊಡಗಿತು. ಪಾಶ್ಚರ್ ಅವರು ಕಿರುಜೀವಿಗಳು ಹೇಗೆ ಹುದುಗುವಿಕೆ ಮಾಡುತ್ತದೆ ಎಂದು ತೋರಿಸಿಕೊಟ್ಟಿದ್ದರು. ಹಾಗೆ 19ನೇ ಶತಮಾನದಲ್ಲಿ ಶುರುವಾಗಿದ್ದ ಕಿಣ್ವಗಳ ಕುತೂಹಲಕ್ಕೆ ಎಡ್ವರ್ಡ್ ಬುಕ್ನೆರ್ ಅವರು ಕಂಡುಹಿಡಿದ ಹುದುಗುವಿಕೆಯಲ್ಲಿ ಕಿಣ್ವಗಳ ಪಾತ್ರದ ವಿಚಾರ ಚಳಕಕ್ಕೆ ನಾಂದಿ ಹಾಡಿತು. ಅಲ್ಲದೆ, 1930ರಲ್ಲಿ ಅಲೆಕ್ಸಾಂಡರ್ ಫ್ಲೆಮಿಂಗ್ ಅವರು ಪೆನಿಸಿಲಿಯಮ್ ಎಂಬ ಫಂಗೈಯಿಂದ ಮೊಟ್ಟಮೊದಲ ಆಂಟಿಬಯೋಟಿಕ್ (Anti-biotic), ಪೆನಿಸಿಲಿನ್ ಅನ್ನು ತಯಾರಿಸಬಹುದು ಎಂದು ಕಂಡುಕೊಟ್ಟರು, ಇದೇ ಆಂಟಿಬಯೋಟಿಕ್ ಗಳನ್ನು ಹುದುಗುವಿಕೆಯ ಚಳಕದಿಂದ ತಯಾರಿಸಬಹುದು ಎಂಬ ಸುದ್ದಿ ಉದ್ಯಮಿಗಳ ಹುಬ್ಬೇರಿಸಿತು. ಹೀಗೆ 20ನೇ ಶತಮಾನದುದ್ದಕ್ಕೂ ವಿಜ್ಞಾನಿಗಳು, ಉದ್ಯಮಿಗಳು ಹುದುಗುವಿಕೆಯ ಚಳಕದಿಂದ ಕಿರುಜೀವಿಗಳಿಂದ ಏನೆಲ್ಲಾ ತಯಾರಿಸಬಹುದೆಂದು ತಿಳಿಯುತ್ತಾಹೋದಂತೆ ಪ್ರಪಂಚದ ಗಮನ ಹುದುಗುವಿಕೆಯ ಚಳಕದ ಮೇಲೆ ಹೆಚ್ಚಾಯಿತು!

ಪ್ರಪಂಚವನ್ನಾಳುತ್ತಿರುವ ಹುದುಗುವಿಕೆಯ ಚಳಕ:

ಇಂದು ಹುದುಗುವಿಕೆಯ ಚಳಕವೆಂದರೆ ಕಿರುಜೀವಿಗಳನ್ನು ಬಳಸಿ ಯಾವುದೋ ಒಂದು ಉಪಯುಕ್ತ ಪದಾರ್ಥವನ್ನು ತಯಾರಿಸುವ ಅಥವಾ ಒಂದು ಪದಾರ್ಥವನ್ನು ಕಿರುಜೀವಿಗಳ ಸಹಾಯದಿಂದ ಮತ್ತೊಂದು ಉಪಯುಕ್ತ ಪದಾರ್ಥವಾಗಿ ಮಾರ್ಪಾಟು ಮಾಡುವ ಚಳಕವಾಗಿ ಬೆಳೆದಿದೆ.

36343658_1760910237333440_4097575942015156224_n (1)

ಪಾಶ್ಚರ್ ಅವರು ಹುದುಗುವಿಕೆಯನ್ನು ಕಂಡುಹಿಡಿದ ನಂತರ, ವರುಷಗಳು ಕಳೆದಂತೆ ವಿಜ್ಞಾನಿಗಳು ಹೊಸ ಬಗೆಯ ಬ್ಯಾಕ್ಟೀರಿಯಾ ಹಾಗು ಫಂಗೈಗಳನ್ನು ಕಂಡುಹಿಡಿಯಲು ಶುರುಮಾಡಿದರು, ಹಾಗೆ ಇವುಗಳಿಂದ ತಯಾರಿಸಬಹುದಾದಂತ ಜನರಿಗೆ ಉಪಯೋಗವಾಗುವ ಪದಾರ್ಥಗಳನ್ನು ಕಂಡುಹಿಡಿಯಲು ಶುರುಮಾಡಿದರು. 1942ರಲ್ಲಿ ಫಂಗೈ ಬಳಸಿ ಪೆನಿಸಿಲಿನ್ಅನ್ನು ಹೆಚ್ಚು ಹೆಚ್ಚು ತಯಾರಿಸಲು ಶುರುವಾಯಿತು. ಹೀಗೆ ಪ್ರತಿಯೊಂದು ಆಂಟಿಬಯೋಟಿಕ್ ಗಳನ್ನು ಹುದುಗುವಿಕೆಯಿಂದ ತಯಾರಿಸಲು ಶುರುವಾಯಿತು. ಹುದುಗುವಿಕೆಯ ಚಳಕ ಬೆಳೆದಂತೆ ಅದರ ಬಳಕೆಯ ಬಗೆ ಬದಲಾಗತೊಡಗಿತು.

ಜೆನೆಟಿಕ್ ಇಂಜಿನಿಯರಿಂಗ್ (Genetic engineering) ಇಂದ ಜನರು ಬ್ಯಾಕ್ಟೀರಿಯಾ ಹಾಗು ಇತರೆ ಜೀವಿಗಳ ಜೀನ್ ಹಾಗು ಅವುಗಳ ಜಿನೊಮ್ ಅನ್ನು ನಮ್ಮ ಬಳಕೆಗೆ ಅನುಗುಣವಾಗಿ ಬದಲಾಯಿಸಬಲ್ಲ ಚಳಕದ ಬಗ್ಗೆ ಹೆಚ್ಚು ತಿಳಿಯುತ್ತ ಹೋದಂತೆ, ಹುದುಗುವಿಕೆಯಲ್ಲಿ ಬಳಸುವ ಜೀವಿಗಳ ಗುಣಗಳನ್ನು ನಮ್ಮ ಅನುಕೂಲಕ್ಕೆ ಸರಿಯಾಗಿ ಬದಲಾಯಿಸಲು ಶುರುಮಾಡಿದರು. ಮೈಕ್ರೋಬಯಾಲಜಿ (Microbiology) ಹಾಗು ಮೊಲಿಕ್ಯುಲರ್ ಬಯಾಲಜಿ(Molecular Biology)ಗಳಲ್ಲಿ ಜನರ ಅರಿವು ಹೆಚ್ಚಾದಂತೆ, ಬ್ಯಾಕ್ಟೀರಿಯಾ ಹಾಗು ಫಂಗೈಗಳನ್ನು ಬಳಸಿ ಯಾವುದೇ ಬಗೆಯ ಬಯೋಮಾಲಿಕ್ಯುಲನ್ನು (Biomolecule) ಹುದುಗುವಿಕೆಯ ಮೂಲಕ ಹೆಚ್ಚು ಹೆಚ್ಚು ತಯಾರಿಸಬಹುದು ಎಂದು ಅರಿತರು.

ಕಿಣ್ವಗಳ ಬಗ್ಗೆ ತಿಳಿವು ಹೆಚ್ಚಾದಂತೆ ಇವುಗಳ ಉಪಯೋಗಗಳು ಜನ ಜೀವನದಲ್ಲಿ ಬಹಳಷ್ಟಿದೆ ಎಂಬುದನ್ನು ಅರಿತುಕೊಂಡರು. ಕಿಣ್ವಗಳು ಪ್ರತಿ ಜೀವಿಯು ಬದುಕಿ ಬಾಳಲು ಅಗತ್ಯ, ಏಕೆಂದರೆ ಯಾವುದೇ ಜೀವಿಯು ಆಹಾರ ಸೇವಿಸಬೇಕಾದರೆ, ಅದನ್ನು ಜೀರ್ಣಿಸಲು ಹಾಗು ಅದರಿಂದ ಪೌಷ್ಟಿಕತೆ ಪಡೆದು ಎಲ್ಲಾ ಬಗೆಯ ಚಟುವಟಿಕೆಗೆ ಬಳಸಲು ಕಿಣ್ವಗಳು ಬೇಕೇ ಬೇಕು. ಹೇಗೆ ಕಿಣ್ವಗಳ ಕೆಲಸವನ್ನು ಜನರ ಬದುಕಿನ ಚಟುವಟಿಕೆಗಳಲ್ಲೂ ಬಳಸಬಹುದೆಂದು ತಿಳಿದಾಗ, ಇದನ್ನು ಹೆಚ್ಚು ಬಳಕೆ ಮಾಡಲು ಶುರುವಾಯಿತು. ಯಾವುದೇ ಬಗೆಯ ಕಿಣ್ವಗಳನ್ನು ಬ್ಯಾಕ್ಟೀರಿಯಾ ಅಥವಾ ಫಂಗೈಗಳಲ್ಲಿ ತಯಾರಿಸಬಹುದು ಎಂದು ತಿಳಿಯಿತು, ಹೀಗೆ ಹುದುಗುವಿಕೆಯ ಮೂಲಕ ಕಿಣ್ವಗಳನ್ನು ತಯಾರಿಸುವ ಬಗೆ ಬೆಳಕಿಗೆ ಬಂತು.

ರಾಸಾಯನಿಕ ಉತ್ಪನ್ನಗಳ ಕೆಟ್ಟ ಪರಿಣಾಮಗಳಿಂದ ಅದರ ಬದಲಿಗೆ ಜೈವಿಕ ಉತ್ಪನ್ನಗಳ ತಯಾರಿಕೆಯ ಬಗ್ಗೆ ಜನರ ಒಲವು ಹೆಚ್ಚಾದಾಗ ಹುದುಗುವಿಕೆಯ ಚಳಕದ ಮೂಲಕ ಬಗೆ ಬಗೆಯ ರಾಸಾಯನಿಕಗಳ ಬದಲಿ ಪದಾರ್ಥಗಳನ್ನು ತಯಾರಿಸಲು ಶುರುಮಾಡಿದರು. ಇಂದು ಕುಗ್ಗುತಿರುವ ಪೆಟ್ರೋಲ್ ಹಾಗು ಡೀಸೆಲ್ ಪ್ರಮಾಣದಿಂದ ಇಂಧನ ಬಳಕೆಗೆ ಬದಲಿ ಪದಾರ್ಥ ಕಂಡುಹಿಡಿಯ ಬೇಕಾದ ಅವಶ್ಯಕತೆ ಎದುರಾಗಿದೆ. ಇದಕ್ಕೆ ಕೂಡ ಅಲ್ಗೆಯನ್ನು (Algae) ಬಳಸಿ ಬಯೋಡೀಸೆಲ್ (Bio-Diesel) ಅನ್ನು ಹುದುಗುವಿಕೆಯ ಮೂಲಕ ತಯಾರಿಸುವ ಸಂಶೋಧನೆ ನಡೆಯುತ್ತಿದೆ. ಸಕ್ಕರೆ ತಯಾರಿಕೆಯಲ್ಲಿ ಬಾಕಿ ಉಳಿಯುವ ಕಾಕಂಬಿಯಿಂದ ಹಾಗು ಬೇಸಾಯದಿಂದ ಬಾಕಿ ಉಳಿಯುವ ತೆನೆಗಳಲ್ಲಿ ಇರುವ ಸೆಲ್ಯುಲೋಸ್ (Cellulose) ಅಂಶವನ್ನು ಬ್ಯಾಕ್ಟೀರಿಯಾ ಹಾಗು ಫಂಗೈ ಹುದುಗುವಿಕೆಯಿಂದ ಎಥನಾಲ್ (Ethanol) ಆಗಿ ಪರಿವರ್ತಿಸಿ ಅದನ್ನು ಪೆಟ್ರೋಲ್ ಬದಲು ಬಂಡಿಗಳಲ್ಲಿ ಬಳಸುವ ಉರುವಲುಗಳನ್ನಾಗಿ ತಯಾರಿಸುವ ಸೋಶೋಧನೆ ಕೂಡ ಇಂದು ಭರದಿಂದ ಸಾಗಿದೆ.

ಬಯೋ ಟೆಕ್ನಾಲಜಿಯಿಂದ ಯಾವುದೇ ಉತ್ಪನ್ನ ತಯಾರಿಕೆ ಆಗಬೇಕಾದರೆ ಅದನ್ನು ಹೆಚ್ಚಾಗಿ ಹುದುಗುವಿಕೆಯಿಂದಲೇ ತಯಾರಿಸಬೇಕಾಗುತ್ತದೆ. ಇಂದು ಹುದುಗುವಿಕೆ ಕೇವಲ ಬ್ಯಾಕ್ಟೀರಿಯಾ ಹಾಗು ಫಂಗೈ ಅಂತಹ ಕಿರುಜೀವಿಗಳಿಗೆ ಮೀಸಲಾಗಿಲ್ಲ, ಗಿಡಗಳ ಜೀವ ಕಣಗಳು, ಪ್ರಾಣಿಗಳ ಹಾಗು ಮನುಷ್ಯರ ಜೀವ ಕಣಗಳಿಂದಲೂ ಹುದುಗುವಿಕೆ ಮಾಡುತ್ತಾರೆ. ಉತ್ಪನ್ನದ ಗುಣ ಹಾಗು ಅದು ಯಾವ ಜಾತಿಯ ಜೀವಿಯಲ್ಲಿ ಹೆಚ್ಚು ತಯಾರಿಕೆಯಾಗುತ್ತದೆಯೋ ಅದೇ ಜೀವಿಯ ಕಣಗಳನ್ನು ಹುದುಗುವಿಕೆಯಲ್ಲಿ ಬಳಸಿ ಉತ್ಪನ್ನಗಳನ್ನು ತಯಾರಿಸುತ್ತಾರೆ. ಬಯೋ ಟೆಕ್ನಾಲಜಿಲ್ಲಿ ನಡಿಯುತ್ತಿರುವ ಸಂಶೋಧನೆಗಳು ಯಾರಲ್ಲಾದರೂ ಅಚ್ಚರಿ ಹಾಗು ಕುತೂಹಲ ಮೂಡಿಸದೇ ಇರದು.

ಹೀಗೆ ಹಲವು ಬಗೆಯ ಉತ್ಪನ್ನಗಳನ್ನು ಇಂದು ಹುದುಗುವಿಕೆಯಿಂದ ತಯಾರಿಸಲಾಗುತ್ತಿದೆ. ಇಂದು ತಯಾರಾಗುವ ಪ್ರತಿಯೊಂದು ಆಂಟಿಬಯೋಟಿಕ್ ಹುದುಗುವಿಕೆಯಿಂದಲೇ ತಯಾರಾಗುವುದು. ಹಲವು ರೋಗಗಳಿಗೆ ಮದ್ದಾಗಿ ಸಿಗುವ ಗಿಡಗಳ ಪದಾರ್ಥಗಳನ್ನು ಹೆಚ್ಚಾಗಿ ತಯಾರಿಸಲು ಮದ್ದಿನ ಅಂಶವನ್ನು ಜೆನೆಟಿಕ್ ಇಂಜಿನಿಯರಿಂಗ್ ಮೂಲಕ ಹುದುಗುವಿಕೆಯಿಂದ ಕಿರುಜೀವಿಗಳಲ್ಲಿ ತಯಾರಾಗುವಂತೆ ಮಾಡುತ್ತಿದ್ದಾರೆ. ಹುದುಗುವಿಕೆಯಿಂದ ಹೆಚ್ಚಾಗಿ ತಯಾರಿಸುತ್ತಿರುವ ಕಿಣ್ವಗಳು ಇಂದು ಜನರಿಗೆ ಅರಿವೇ ಇಲ್ಲದೆ ಎಲ್ಲೆಡೆ ಬಳಕೆಯಾಗುತ್ತಿದೆ. ಬಟ್ಟೆಗಳನ್ನು ತೊಳೆಯಲು ಬಳಸುವ ಸೋಪುಗಳಲ್ಲಿ, ಬಟ್ಟೆಗಳನ್ನು ನವಿರಾಗಿಸಲು, ನೂಲಿನ ತಯಾರಿಕೆಯಲ್ಲಿ, ಅಣಿಯಾಗಿರುವ ತಿನುಸುಗಳನ್ನು ತಯಾರಿಸಲು, ಹಣ್ಣುಗಳ ರಸದ ಉತ್ಪನ್ನಗಳಲ್ಲಿ, ಹೀಗೆ ದಿನ ನಿತ್ಯದ ಬಳಕೆಯಲ್ಲದೆ ಎಲ್ಲಾ ಬಗೆಯ ಕೈಗಾರಿಕೆಗಳಲ್ಲಿ ಕಿಣ್ವಗಳನ್ನು ಬಳಸುತಿದ್ದಾರೆ.

ಮುಂದಿನ ದಿನಗಳಲ್ಲಿ ನಮ್ಮ ಗಾಡಿಗಳೆಲ್ಲವೂ ಓಡುವುದು ಹುದುಗುವಿಕೆಯಿಂದ ಬಂದ ಬಯೋಡೀಸೆಲ್ ಹಾಗು ಬಯೋಎಥನಾಲ್ ಇಂದಲೇ ಎಂಬುವುದು ಒಂದು ವಾದ. ಇಷ್ಟಲ್ಲದೆ, ಇವತ್ತಿನ ಪರಿಸರ ಮಾಲಿನ್ಯದ ತೀವ್ರತೆಯಿಂದಾಗಿ ಎಲ್ಲಾ ಕೈಗಾರಿಕೆಗಳು ಪರಿಸರ ಸ್ನೇಹಿ ಚಳಕಗಳ ಹುಡುಕಿನಲ್ಲಿವೆ, ಇದುವರೆಗೂ ತಯಾರಿಕೆಯಲ್ಲಿದ್ದ ರೀತಿಯ ಬದಲಿಗೆ ಹುದುಗುವಿಕೆಯನ್ನು ಅಳವಡಿಸುವ ಪ್ರಯತ್ನಗಳು ಜಗತಿನ್ನೆಲ್ಲೆಡೆ ನಡೆಯುತ್ತಿದೆ. ಹೀಗೆ ವಿಜ್ಞಾನವು ಬ್ಯಾಕ್ಟೀರಿಯಾ, ಫಂಗೈ, ಅಲ್ಗೆ, ಗಿಡ ಹಾಗು ಪ್ರಾಣಿಗಳ ಜೀವಕಣಗಳ ಬಗ್ಗೆ ಹೆಚ್ಚು ಹೆಚ್ಚು ಕಂಡುಹಿಡಿಯುತ್ತಾ ಹೋದಂತೆ, ಅವುಗಳಿಂದ ಹೇಗೆ ಎಲ್ಲಾ ಬಗೆಯ ಪದಾರ್ಥಗಳನ್ನು ಹುದುಗುವಿಕೆಯ ಮೂಲಕ ತಯಾರಿಸಹಬಹುದು ಎಂದು ಚಳಕಗಾರರು ಕಂಡುಹಿಡಿಯಲು ಮಾಡುತ್ತಿದ್ದಾರೆ.

ಸಾವಿರಾರು ವರುಷಗಳಿಂದ ಕೇವಲ ಇಡ್ಲಿ, ದೋಸೆ, ಉಪ್ಪಿನಕಾಯಿ ಅಂತಹ ತಿನಿಸುಗಳಲ್ಲಿ ಅಡಗಿದ್ದ ಹುದುಗುವಿಕೆಯ ಚಳಕ, ಕಳೆದ ನೂರು ವರುಷಗಳಲ್ಲಿ ಜನರ ಬದುಕಿನ ಎಲ್ಲಾ ನಡೆಯಲ್ಲೂ ಅನುಕೂಲ ನೀಡುವ ದೊಡ್ಡ ಚಳಕವಾಗಿ ಬೆಳೆದು ನಿಂತಿರುವುದು ಅಚ್ಚರಿಯೇ ಸರಿ!.

(ಮಾಹಿತಿ ಮೂಲ: www.ncbi.nlm.nih.gov, www.libguides.lindahall.org, www.wikipedia.org)

 

 

ಇಂದು ಹಾರಲಿದೆ ಸೂರ್ಯನತ್ತ ಪಾರ್ಕರ್ ಬಾನಬಂಡಿ

ಅಮೆರಿಕಾದ ನಾಸಾ (NASA) ಕೂಟ ಸೂರ್ಯನ ಬಗ್ಗೆ ಅಧ್ಯಯನ ನಡೆಸಲು ಇಂದು ಪಾರ್ಕರ್ ಸೋಲಾರ್ ಪ್ರೋಬ್ ಎಂಬ ಬಾನಬಂಡಿಯನ್ನು ಹಾರಿಸಲಿದೆ. ಇನ್ನು ಎರಡು ಗಂಟೆಗಳಲ್ಲಿ ಅಂದರೆ ಭಾರತದ ಹೊತ್ತು ಮಧ್ಯಾಹ್ನ ಸುಮಾರು 1 ಗಂಟೆಗೆ ಈ ಬಾನಬಂಡಿ ಬಾನಿಗೆ ನೆಗೆಯಲಿದೆ. ಈ ಮೂಲಕ ವಿಜ್ಞಾನದ ಹೊಸದೊಂದು ಮೈಲಿಗಲ್ಲು ದಾಟಲು ಮನುಕುಲ ಎದುರುನೋಡುತ್ತಿದೆ.

260px-Parker_Solar_Probe

ಭೂಮಿಯ ವಾತಾವರಣ, ಜೀವಿಗಳು ಬೆಳೆಯಲು ಬೇಕಾದ ಶಕ್ತಿಮೂಲವಾದ ಸೂರ್ಯನ ಹತ್ತಿರಕ್ಕೆ ಹೋಗಲು ಇಲ್ಲಿಯವರಿಗೆ ಆಗಿಲ್ಲ ಏಕೆಂದರೆ ಸೂರ್ಯನ ಮೇಲ್ಮೈ ತುಂಬಾ ಬಿಸಿಯಾಗಿದ್ದು, ಆ ಬಿಸಿಯನ್ನು ತಡೆದುಕೊಳ್ಳುವ ಸಲಕರಣೆಗಳನ್ನು ಮಾಡುವುದು ತುಂಬಾ ಕಷ್ಟ. ಸೂರ್ಯನ ಮೇಲ್ಮೈಯ ಸುತ್ತಣದ ಭಾಗದಲ್ಲಿ ಕಾವಳತೆ ಸುಮಾರು 20,00,000 ಡಿಗ್ರಿ ಸೆಲ್ಸಿಯಸ್ ವರೆಗೆ ತಲುಪುತ್ತದೆ!

ಹಾಗೆನೇ ಭೂಮಿಯಿಂದ ಸೂರ್ಯನಿರುವ ದೂರ, ಸಲಕರಣೆಗಳನ್ನು ಕಳಿಸಲು ಇನ್ನೊಂದು ಸವಾಲು ಒಡ್ದುತ್ತದೆ. ಸೂರ್ಯ ಮತ್ತು ಭೂಮಿಯ ನಡುವಿನ ಸರಾಸರಿ ದೂರ ಸುಮಾರು 15 ಕೋಟಿ ಕಿಲೋ ಮೀಟರ್! ಪಾರ್ಕರ್ ಬಾನಬಂಡಿ ಸೂರ್ಯನ ಮೇಲ್ಮೈಯಿಂದ ಸುಮಾರು 60 ಲಕ್ಷ ಕಿ.ಮೀ. ನಷ್ಟು ಹತ್ತಿರ ಹೋಗಲಿದ್ದು, ಇಷ್ಟು ಹತ್ತಿರಕ್ಕೆ ಹೋಗುವ ಮೊದಲ ಸಲಕರಣೆ ಇದಾಗಲಿದೆ.

ನೇಸರ, ಸೂರ್ಯ, ರವಿ ಮುಂತಾದ ಹೆಸರುಗಳಿಂದ ಗುರುತಿಸಲ್ಪಡುವ ಈ ನಕ್ಷತ್ರ ನಮಗೆ ಶಕ್ತಿಯ ಮೂಲ. ಹೈಡ್ರೋಜನ್ ಅಣುಗಳ ಬೆಸುಗೆಯಿಂದಾಗಿ ಸೂರ್ಯನಲ್ಲಿ ಹೇರಳವಾದ ಶಕ್ತಿ ಬಿಡುಗಡೆಯಾಗುತ್ತದೆ. ಸುಮಾರು 4.57 ಬಿಲಿಯನ್ ವರುಷಗಳ ಹಿಂದೆ ಹೈಡ್ರೋಜನ್ ಮತ್ತು ಹೀಲಿಯಂ ಅಣುಗಳಿಂದ ಕೂಡಿದ್ದ ದೈತ್ಯ ಅಣುಮೋಡದ ಕುಸಿತದಿಂದ ಸೂರ್ಯ ಉಂಟಾಗಿದ್ದು, ತನ್ನ ಬದುಕಿನ ಅರ್ಧ ಆಯುಷ್ಯವನ್ನು ಸೂರ್ಯ ಈಗಾಗಲೇ ಕಳೆದಿದ್ದಾನೆ ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ.

ಸೂರ್ಯನಲ್ಲಿ ಮುಖ್ಯವಾಗಿ ತಿರುಳು (core), ಸೂಸಿಕೆಯ ಹರವು (radiative zone), ಒಯ್ಯಿಕೆಯ ಹರವು (convective zone), ಬೆಳಕುಗೋಳ (photosphere), ಬಣ್ಣಗೋಳ (chromosphere), ಹೊಳಪುಗೋಳ (corona) ಎಂಬ ಭಾಗಗಳನ್ನು ಗುರುತಿಸಲಾಗಿದೆ. ಈ ಭಾಗಗಳನ್ನು ಕೆಳಗಿನ ಚಿತ್ರದಲ್ಲಿ ತೋರಿಸಲಾಗಿದೆ.

3

ತಿರುಳಿನ ಭಾಗದಲ್ಲಿ ಹೈಡ್ರೋಜನ್ ಅಣುಗಳ ಬೆಸುಗೆಯಿಂದ ಬಿಡುಗಡೆಯಾಗುವ ಶಕ್ತಿ ಉಳಿದ ಭಾಗಗಳನ್ನು ದಾಟಿ ಹೊರಸೂಸುತ್ತದೆ. ನಾಸಾ ಇಂದು ಹಾರಿಸಲಿರುವ ಬಾನಬಂಡಿ ಸುಮಾರು 88 ದಿನಗಳ ಪ್ರಯಾಣದ ಬಳಿಕ ಸೂರ್ಯನ ಸುತ್ತಣದ ಭಾಗವಾದ ಹೊಳಪುಗೋಳದ ಹತ್ತಿರಕ್ಕೆ ಮೊದಲ ಬಾರಿಗೆ ಹೋಗಲಿದೆ.

ಸೋಲಾರ್ ಪಾರ್ಕರ್ ಬಾನಬಂಡಿ ಸುಮಾರು ಏಳು ವರುಶಗಳ ಕಾಲ ಸೂರ್ಯನ ಸುತ್ತ ಅಧ್ಯಯನ ನಡೆಸಲಿದ್ದು, ಅದರ ಒಟ್ಟಾರೆ ಪ್ರಯಾಣವನ್ನು ದಿನಾಂಕಕ್ಕೆ ತಕ್ಕಂತೆ ಕೆಳಗಿನ ಓಡುಚಿತ್ರದಲ್ಲಿ ತೋರಿಸಲಾಗಿದೆ. (ಚಿತ್ರಸೆಲೆ: ವಿಕಿಪೀಡಿಯಾ)

Animation_of_Parker_Solar_Probe_trajectory

(ಚಿತ್ರದಲ್ಲಿನ ಬಣ್ಣಗಳ ವಿವರ – ಹಳದಿ: ಸೂರ್ಯ, ಹಸಿರು: ಬುಧ, ತಿಳಿನೀಲಿ: ಶುಕ್ರ, ಕಡುನೀಲಿ: ಭೂಮಿ, ನವಿರುಗೆಂಪು: ಪಾರ್ಕರ್ ಪ್ರೋಬ್)

ಬಾನಬಂಡಿಯ ಭಾಗಗಳು:

ಪಾರ್ಕರ್ ಸೋಲಾರ್ ಪ್ರೋಬ್ ಸೂರ್ಯನ ಸುತ್ತಣದಲ್ಲಿ ಎದುರಾಗುವ ಹೆಚ್ಚಿನ ಕಾವಳತೆಯನ್ನು ತಡೆದುಕೊಳ್ಳುವಂತೆ ಅಣಿಗೊಳಿಸಲಾಗಿದೆ. ಇದಕ್ಕಾಗಿ ಕಾರ್ಬನ್ ಎಳೆಗಳಿಂದ ಮಾಡಲ್ಪಟ್ಟ ಸಿ.ಎಫ್.ಆರ್.ಸಿ. ಎಂಬ ವಸ್ತುವನ್ನು ಬಳಸಲಾಗಿದೆ. ಇದು ಸುಮಾರು 1377 ಡಿಗ್ರಿ ಸೆಲ್ಸಿಯಸ್ ವರೆಗಿನ ಕಾವಳತೆಯನ್ನು ತಡೆದುಕೊಳ್ಳಬಲ್ಲದು.

parker_probe

(ಚಿತ್ರಸೆಲೆ: KnowledgeSuttra.com )

ಬಾನಬಂಡಿಗೆ ಏನಾದರೂ ತೊಂದರೆಯಾದರೆ ಭೂಮಿಗೆ ಮಾಹಿತಿಯನ್ನು ಕಳಿಸಲು ಸುಮಾರು 8 ನಿಮಿಶಗಳು ತಗಲುವುದರಿಂದ, ಈ ಹೊತ್ತಿನಲ್ಲಿ ತಂತಾನೇ ತೀರ್ಮಾನ ಕೈಗೊಳ್ಳುವಂತೆ ಬಾನಬಂಡಿಯನ್ನು ಸಜ್ಜುಗೊಳಿಸಲಾಗಿದೆ. ಸೂರ್ಯನ ಬಗ್ಗೆ ಅಧ್ಯಯನ ನಡೆಸಲು ಬೇಕಿರುವ ವೈಜ್ಞಾನಿಕ ಸಲಕರಣೆಗಳನ್ನು ಬಾನಬಂಡಿಯ ನಡುವಿನ ಭಾಗದಲ್ಲಿ ಇರಿಸಲಾಗಿದೆ. ಬಾನಬಂಡಿಯಲ್ಲಿ ಎರಡು ಸೋಲಾರ್ ಸಾಲುತಟ್ಟೆಗಳಿದ್ದು, ಅಧ್ಯಯನಕ್ಕೆ ಬೇಕಾದ ವಿದ್ಯುತ್ ಶಕ್ತಿಯನ್ನು ಒದಗಿಸುತ್ತವೆ.

ಬಾನಬಂಡಿಯ ಕೆಲಸಗಳು:

ಇಂದು ಬಾನಿಗೇರಿ 2025 ರವರೆಗೆ ಸೂರ್ಯನ ಸುತ್ತ ಅಧ್ಯಯನ ನಡೆಸುವ ಪಾರ್ಕರ್ ಬಾನಬಂಡಿ ಈ ಕೆಳಗಿನ ಮುಖ್ಯ ಅಧ್ಯಯನದ ಗುರಿಗಳನ್ನು ಹೊಂದಿದೆ,

1. ಹೊಳಪುಗೋಳದ (ಕರೋನಾ) ಕಾವು ಮತ್ತು ಆ ಮೂಲಕ ಸೂರ್ಯ ಅಲೆಗಳ ವೇಗಹೆಚ್ಚುವಿಕೆಗೆ ಕಾರಣವಾದ ಶಕ್ತಿ ಹರಿವಿನ ಮೂಲವನ್ನು ತಿಳಿದುಕೊಳ್ಳುವುದು.

2. ಸೂರ್ಯನ ಸುತ್ತಣದಲ್ಲಿ ಉಂಟಾಗುವ ಕಾಂತ ಬಯಲಿನ (magnetic filed) ರಚನೆ ಮತ್ತು ಅದರ ಏರಿಳಿತದ ಕುರಿತು ಅರಿತುಕೊಳ್ಳುವುದು.

3. ಸೂರ್ಯನ ಸುತ್ತಣದಿಂದ ಹೊಮ್ಮುವ ಶಕ್ತಿದುಂಬಿದ ಕಣಗಳು ಹೇಗೆ ವೇಗಹೆಚ್ಚಿಸಿಕೊಳ್ಳುತ್ತವೆ ಮತ್ತು ಅವುಗಳು ಹೇಗೆ ಸಾಗಣಿಕೆಗೊಳ್ಳುತ್ತವೆ ಎಂದು ಅರಿಯುವುದು.

ಈ ಮೇಲಿನ ಮೂರು ಮುಖ್ಯ ಗುರಿಗಳ ಜತೆಗೆ ಸೂರ್ಯನ ಕುರಿತು ಇನ್ನೂ ಹತ್ತು ಹಲವಾರು ಹೊಸ ವಿಷಯಗಳು ತಿಳಿಯಲಿವೆ ಎಂದು ವಿಜ್ಞಾನಿಗಳು ಅಂದುಕೊಂಡಿದ್ದಾರೆ.

ಸೂರ್ಯನ ಬಗ್ಗೆ ಹಲವಾರು ವರುಷಗಳಿಂದ ಅಧ್ಯಯನ ಕೈಗೊಳ್ಳುತ್ತಾ ಬಂದಿರುವ ವಿಜ್ಞಾನಿ ಯುಜೀನ್ ಪಾರ್ಕರ್ (Eugene Parker) ಅವರ ಹೆಸರಿನಲ್ಲಿ ಈ ಬಾನಬಂಡಿಯನ್ನು ಗುರುತಿಸಲಾಗಿದೆ. ವಿಜ್ಞಾನಿಯೊಬ್ಬ ಬದುಕಿರುವಾಗಲೇ ಅವರ ಹೆಸರನ್ನು ಬಾನಬಂಡಿಗೆ ಇಟ್ಟಿದ್ದು ಇದೇ ಮೊದಲ ಬಾರಿ.

ಬಾನಬಂಡಿಯನ್ನು ಹಾರಿಸಲು ಈ ಮುಂಚೆ ನಿಗದಿಪಡಿಸಿದ್ದ ದಿನಾಂಕಗಳನ್ನು ಹಲವು ಬಾರಿ ಮುಂದೂಡಲಾಗಿದ್ದು, ಇಂದು ಈ ಹಮ್ಮುಗೆ ನೆರವೇರಲಿ ಎಂದು ಹಾರೈಸೋಣ.

ಮಾಹಿತಿ: 11.08.2018 ರಂದು ಹಾರಿಕೆಗೆ 4 ನಿಮಿಷಗಳ ಮುಂಚೆ ಕೆಲವು ತೊಡಕುಗಳು ಕಂಡುಬಂದಿದ್ದರಿಂದ ಹಾರಿಕೆಯನ್ನು 1 ದಿನ ಮುಂದೂಡಲಾಯಿತು. ಇಂದು ಅಂದರೆ 12.08.2018 ರಂದು ಭಾರತದ ಹೊತ್ತು ಮಧ್ಯಾಹ್ನ ಸುಮಾರು 1 ಗಂಟೆಗೆ ಪಾರ್ಕರ್ ಸೋಲಾರ್ ಪ್ರೋಬ್ ಬಾನಿಗೇರಿತು.

ನೆಲದಿಂದ ನೆಗೆದ 45 ನಿಮಿಷಗಳ ಬಳಿಕ ಡೆಲ್ಟಾ 4 ಏರುಬಂಡಿಯಿಂದ(rocket) ಸೋಲಾರ್ ಪ್ರೋಬ್ ಬಾನಬಂಡಿ(spacecraft) ಬೇರ್ಪಟ್ಟು ಸೂರ್ಯನೆಡೆಗೆ ಪಯಣ ಬೆಳೆಸಿತು. ಇದೆ ವರುಷದ ಕೊನೆಗೆ ಅದು ಸೂರ್ಯನ ಹತ್ತಿರಕ್ಕೆ ತಲುಪುವ ನಿರೀಕ್ಷೆಯಿದೆ.

ಭೂಮಿಯನ್ನು ಅಳೆದವರಾರು?

ದುಂಡಾಕಾರವಾಗಿರುವ ಭೂಮಿಯ ದುಂಡಗಲ (diameter) 12,756 ಕಿಲೋ ಮೀಟರಗಳು ಮತ್ತು ಅದರ ತೂಕ 5.97219 × 10‌‍24 ಕಿಲೋ ಗ್ರಾಂ. ಇಂತಹ ಸಾಲುಗಳನ್ನು ಓದಿದೊಡನೆ ಮುಖ್ಯವಾಗಿ ಎರಡು ವಿಷಯಗಳು ಬೆರೆಗುಗೊಳಿಸುತ್ತವೆ. ಮೊದಲನೆಯದು ಇಷ್ಟೊಂದು  ದೊಡ್ಡದಾದ ಅಂಕಿಗಳು ಮತ್ತು ಎರಡನೆಯದು ಅವುಗಳನ್ನು ಅಳೆದುದು ಹೇಗೆ?.

Image EM1
ಇನ್ನೊಂದು ಅಚ್ಚರಿಯ ವಿಷಯವೆಂದರೆ ಭೂಮಿಯ ದುಂಡಗಲವನ್ನು ಮೊಟ್ಟಮೊದಲ ಬಾರಿಗೆ ಅಳೆದದ್ದು ಸರಿಸುಮಾರು 2200 ವರುಶಗಳ ಹಿಂದೆ! ಬನ್ನಿ, ಅವರಾರು? ಹೇಗೆ ಅಳೆದರು? ಎಂದು ತಿಳಿದುಕೊಳ್ಳೋಣ.
ಕ್ರಿ.ಪೂ. ಸುಮಾರು 200 ರಲ್ಲಿ ಈಜಿಪ್ಟಿನ ಎರತೊಸ್ತನೀಸ್ (Eratosthenes) ಎಂಬ ಗಣಿತದರಿಗ ಭೂಮಿಯ ದುಂಡಗಲವನ್ನು ಅಳೆದವರಲ್ಲಿ ಮೊದಲಿಗ. ಅದೂ ತನ್ನ ನಾಡಿನಲ್ಲೇ ಇದ್ದುಕೊಂಡು ಅರಿಮೆಯ ನೆರವಿನಿಂದ ಈ ಕೆಲಸವನ್ನು ಮಾಡಿ ತೋರಿಸಿದಾತ.

ಎರತೊಸ್ತನೀಸ್‍ರಿಗೆ ತನ್ನ ಸುತ್ತಮುತ್ತಲಿನ ಆಗುಹೋಗುಗಳು ತುಂಬಾ ಕುತೂಹಲ ಮೂಡಿಸಿದಂತವು. ಬೇಸಿಗೆಯ ಒಂದು ಗೊತ್ತುಪಡಿಸಿದ ಹೊತ್ತಿನಂದು ಸಿಯನ್ ಊರಿನ ಬಾವಿಯ ಮೇಲೆ ಹಾದುಹೋಗುವ ಸೂರ್ಯನ ಕಿರಣಗಳು, ಆ ಬಾವಿಯ ನಟ್ಟನಡುವೆ ಬೀಳುತ್ತಿದ್ದುದು ಮತ್ತು ಅದೇ ಹೊತ್ತಿಗೆ ಅಲ್ಲಿಂದ ಸುಮಾರು 750 ಕೀಲೋ ಮೀಟರಗಳಷ್ಟು ದೂರವಿರುವ ಅಲೆಕ್ಸಾಂಡ್ರಿಯಾದ ಕಂಬವೊಂದರ ಮೇಲೆ ಸೂರ್ಯನ ಬೆಳಕಿನಿಂದ ಉಂಟಾಗುವ ನೆರಳು ನೇರವಾಗಿರದೇ ಒಂದು ಕೋನದಲ್ಲಿ ಇರುತ್ತಿದ್ದುದು, ಎರತೋಸ್ತೇನಸ್ ರ ಕುತೂಹಲ ಕೆರಳಿಸಿದ್ದವು.

ಸೂರ್ಯನ ನೆಟ್ಟ ನೇರವಾದ ಕಿರಣಗಳು ಉಂಟುಮಾಡುವ ನೆರಳು ಸಿಯಾನ್ ಊರಿನಲ್ಲಿ ನೇರವಾಗಿ ಮತ್ತು ಅದೇ ಹೊತ್ತಿಗೆ ಅಲೆಕ್ಸಾಂಡ್ರಿಯಾದಲ್ಲಿ ಒಂದು ಕೋನದಲ್ಲಿದ್ದದ್ದು, ನಮ್ಮ ಭೂಮಿ ಚಪ್ಪಟೆಯಾಗಿರದೇ ದುಂಡಾಗಿದೆ ಅನ್ನುವಂತ ವಿಷಯವನ್ನು ಎರತೊಸ್ತನೀಸ್‍ರಿಗೆ ತೋರಿಸಿಕೊಟ್ಟಿದ್ದವು. ಗಣಿತವನ್ನರಿತಿದ್ದ ಎರತೊಸ್ತನೀಸ್‍ರಿಗೆ ಇದನ್ನು ಬಳಸಿಯೇ ಭೂಮಿಯ  ಸುತ್ತಳತೆಯನ್ನು ಅಳೆಯುವ ಹೊಳಹು ಹೊಮ್ಮಿತು.

Image EM2ಸಿಯಾನ್ ಊರಿನ ಬಾವಿಯ ಮೇಲೆ ಸೂರ್ಯನ ಕಿರಣಗಳು ನೇರವಾಗಿ ಬೀಳುತ್ತಿದ್ದ ಹೊತ್ತಿಗೆ ತನ್ನೂರು ಅಲೆಕ್ಸಾಂಡ್ರಿಯಾದಲ್ಲಿದ್ದ ಕಂಬದ ನೆರಳು ಬೀಳುತ್ತಿದ್ದ ಕೋನವನ್ನು ಎರತೋಸ್ತೇನಸ್ ಅಳೆದರು. ಕಂಬ ಉಂಟುಮಾಡುತ್ತಿದ್ದ ನೆರಳಿನ ಕೋನವು 7.2°  ಎಂದು ಗೊತ್ತಾಯಿತು.

ಅಲೆಕ್ಸಾಂಡ್ರಿಯಾ ಮತ್ತು ಸಿಯನ್ ಊರುಗಳ ದೂರ ತಿಳಿದಿದ್ದ ಎರತೋಸ್ತೇನಸ್ ಗಣಿತದ ನಂಟುಗಳನ್ನು ಬಳಸಿ ಭೂಮಿಯ ಸುತ್ತಳತೆ ಮತ್ತು ದುಂಡಗಲವನ್ನು ಈ ಕೆಳಗಿನಂತೆ ಎಣಿಕೆಹಾಕಿದರು.

Image EM3ಅಲೆಕ್ಸಾಂಡ್ರಿಯಾ ಕಂಬದ ನೆರಳಿನ ಕೋನ = 7.2°

ಒಂದು ಸುತ್ತಿನಲ್ಲಿ ಇರುವ ಕೋನಗಳು = 360°

ಅಂದರೆ, ದುಂಡಾಗಿರುವ ಭೂಮಿಯ ಸುತ್ತಳತೆ ಅಲೆಕ್ಸಾಂಡ್ರಿಯಾ ಮತ್ತು ಸಿಯಾನ್ ಊರುಗಳ ದೂರದ 360/7.2 = 50 ರಷ್ಟು ಇರಬೇಕು.

ಇನ್ನು, ಅಲೆಕ್ಸಾಂಡ್ರಿಯಾ ಮತ್ತು ಸಿಯನ್ ಊರುಗಳ ನಡುವಿನ ದೂರ = 5000 ಸ್ಟೇಡಿಯಾ
(ಸ್ಟೇಡಿಯಾ/Stadia – ದೂರವನ್ನು ಅಳೆಯಲು ಎರತೊಸ್ತನೀಸ್ ಬಳಸಿದ ಅಳತೆಗೋಲು)

ಹಾಗಾಗಿ,  ಭೂಮಿಯ ಸುತ್ತಳತೆ = 50 x 5000 = 250000 ಸ್ಟೇಡಿಯಾ = 40,000 ಕಿಲೋ ಮೀಟರಗಳು
(1 ಸ್ಟೇಡಿಯಾ = 0.15 ಕಿ.ಮೀ.)

ನಮಗೆ ಗೊತ್ತಿರುವಂತೆ, ಸುತ್ತಳತೆ = 3.142 x ದುಂಡಗಲ (Circumference = 3.142 x diameter)

ಹಾಗಾಗಿ, ಎರತೊಸ್ತನೀಸ್ ಎಣಿಕೆ ಹಾಕಿದ ಭೂಮಿಯ ದುಂಡಗಲ (diameter) = 40000/3.142 = 12730.7 ಕಿ.ಮೀ.

ಹೀಗೆ ಸುಮಾರು 2200 ವರುಶಗಳ ಹಿಂದೆ ಕೋನಗಳನ್ನು  ಬಳಸಿ ಎರತೋಸ್ತೇನಸ್ ಅಳೆದದ್ದು, ಹೊಸಜಗತ್ತಿನಲ್ಲಿ ಉಪಗ್ರಹಗಳನ್ನು ಬಳಸಿ ಕರಾರುವಕ್ಕಾಗಿ ಅಳೆಯಲಾದ ಭೂಮಿಯ ದುಂಡಗಲ 12,756 ಕಿಲೋ ಮೀಟರಗಳಿಗೆ ತುಂಬಾ ಹತ್ತಿರವಾಗಿದೆ ಎಂಬುದನ್ನು ನೋಡಿದರೆ ಅರಿಮೆಯ ’ಹಿರಿಮೆ’  ಮನದಟ್ಟಾಗುತ್ತದೆ.

(ಸೆಲೆ: heasarc.nasa.govhte.si.edu, en.wikipedia.org, emaze.com)

ಆಸ್ಪ್ರಿನ್ ಮಾತ್ರೆಯ ಇತಿಹಾಸ

ನೋವು ಎಂಬುದು ಯಾರಿಗಾದರೂ ಆಗುವಂತದ್ದು. ಆರಂಭದಿಂದಲೂ ಮನುಷ್ಯ ನೋವಿನಿಂದ ತಪ್ಪಿಸಿಕೊಳ್ಳಲು ಹಲವಾರು ದಾರಿಗಳನ್ನು ಕಂಡುಕೊಳ್ಳುತ್ತಲೇ ಬಂದಿದ್ದಾನೆ. ಮೊದಲಿಗೆಲ್ಲ ಮತ್ತೇರಿಸುವ ವಸ್ತುಗಳೇ ನೋವಳಿಸುವ ಮದ್ದುಗಳಾಗಿ ಬಳಕೆಯಲ್ಲಿದ್ದವು. ರಸಾಯನಶಾಸ್ತ್ರ ಮುಂದುವರೆದಂತೆಲ್ಲ ಹೊಸ ಹೊಸ ಮದ್ದುಗಳು ಬೆಳಕಿಗೆ ಬರಲು ಆರಂಭಿಸಿದವು. ಜಗತ್ತಿನ ಅತಿ ಹೆಚ್ಚು ಬಳಕೆಯಲ್ಲಿರುವ ನೋವಳಿಕಗಳಲ್ಲಿ ಅಸಿಟೈಲ್ ಸ್ಯಾಲಿಸಿಲಿಕ್ ಆ್ಯಸಿಡ್ (ಆಸ್ಪ್ರಿನ್ – Aspirin) ಕೂಡ ಒಂದು. ಇದನ್ನು ಕಂಡು ಹಿಡಿದದ್ದು ಜರ್ಮನಿಯ ಫೆಲಿಕ್ಸ್ ಹಾಫಮನ್ ಎಂಬುವವರು.

1024px-Aspirine_macro_shot

ಹಾಫಮನ್ ಹುಟ್ಟಿದ್ದು 1878ರಲ್ಲಿ ಜರ್ಮನಿಯ ಸ್ವಾಬಿಯಾ ಪ್ರಾಂತ್ಯದ ಲುಡ್ವಿಗ್ ಎಂಬಲ್ಲಿ. ಮೊದಲು ಬೇರೆ ಬೇರೆ ಫಾರ್ಮಸಿಗಳಲ್ಲಿ ಕೆಲಸ ಮಾಡಿದ ನಂತರ ಮ್ಯೂನಿಕ್ ಯುನಿವರ್ಸಿಟಿಯಲ್ಲಿ ರಸಾಯನಶಾಸ್ತ್ರದ ಪದವಿಯನ್ನು 1893ರಲ್ಲಿ ಪಡೆದರು. ಆಮೇಲೆ ಅವರ ಗುರುಗಳಾದ ನೊಬೆಲ್ ಪ್ರಶಸ್ತಿ ವಿಜೇತ ಅಡಾಲ್ಫ್ ವಾನ್ ಬೇಯರ್ ಅವರ ಶಿಫಾರಸ್ಸಿನಿಂದ ಬಾಯರ್ (Bayer) ಕಂಪನಿಯಲ್ಲಿ ಹೊಸದಾಗಿ ಹುಟ್ಟುಹಾಕಲಾಗಿದ್ದ ಫಾರ್ಮಸಿ ಅರಕೆ ವಿಭಾಗದಲ್ಲಿ ಕೆಲಸ ದೊರೆಯಿತು.

1280px-Bayer_Aspirin_Pills
1897ರಲ್ಲಿ ಹಾಫಮನ್ ಅವರು ಬೇರೆ ಬೇರೆ ಅಣುಕೂಟಗಳನ್ನು (molecule) ಅಸಿಟೈಲ್(acetyl) ಗುಂಪಿನೊಂದಿಗೆ ಸೇರಿಸಿ ಅವುಗಳ ಬಲಪಡಿಸುವಿಕೆ ಇಲ್ಲವೇ ನಂಜು ಕುಗ್ಗಿಸುವಿಕೆಯನ್ನು ಮಾಡಲು ಪ್ರಯತ್ನಿಸುತ್ತಿದ್ದರು. ಬಾಯರ್ ಕಂಪನಿಯು ಈ ಬಗೆಯಲ್ಲಿ ಪ್ರಯತ್ನಿಸಿ ಅದಾಗಲೇ ಜ್ವರಕ್ಕಾಗಿ ಫೆನಾಸಿಟಿನ್ (Phenacetin) (1888) ಮತ್ತು ಭೇದಿ ಚಿಕಿತ್ಸೆಗಾಗಿ ಟ್ಯಾನಿಗ್ (Tannig) (1894) ಎಂಬ ಅಸಿಟೈಲ್ಗೊಳಿಸಲಾದ ದ್ರವ್ಯಗಳನ್ನು ಬಳಕೆಗೆ ತಂದಿತ್ತು. ಇದೇ ಹಾದಿಯಲ್ಲಿ ಹಾಫಮನ್ ಕೂಡ ಪ್ರಯತ್ನಿಸುತ್ತಿದ್ದರು. ಇನ್ನೊಂದು ಮೂಲದ ಪ್ರಕಾರ ಹಾಫಮನ್ ತಮ್ಮ ತಂದೆಯ ಕೀಲು ನೋವು ಬೇನೆಗೆ ಈ ಅರಕೆ ನಡೆಸುತ್ತಿದ್ದರು ಅನ್ನಲಾಗುತ್ತದೆ. ಶತಮಾನಗಳಿಂದ ಬೈಚೆ ಮರದ ತೊಗಟೆಯು (willow bark) ನೋವಳಿಸುವ ಒಂದು ಔಷಧಿಯಾಗಿ ಬಳಕೆಯಲ್ಲಿತ್ತು. ಹತ್ತೊಂಬತ್ತನೇ ಶತಮಾನದ ಆರಂಭದಲ್ಲಿ ಹಲವಾರು ಅರಕೆಗಾರರು ಬೈಚೆಮರದ ತೊಗಟೆಯಿಂದ ಸ್ಯಾಲಿಸಿಲಿಕ್ ಆ್ಯಸಿಡ್ ಅನ್ನು ಬೇರ್ಪಡಿಸಿ ಬಳಕೆಗೆ ತಂದಿದ್ದರು. 1874ರಲ್ಲಿ ಹೇಡನ್ ಕಂಪನಿಯು ಸ್ಯಾಲಿಸಿಲಿಕ್ ಆ್ಯಸಿಡ್ ಅನ್ನು ಮಾರುಕಟ್ಟೆಗೆ ತಂದಿತ್ತು ಆದರೆ ಬಳಸಿದ ರೋಗಿಗಳಿಗೆ ಹಲವಾರು ಅಡ್ಡ ಪರಿಣಾಮಗಳನ್ನು ಉಂಟುಮಾಡಿತ್ತು. ಈ ಬೆಳವಣಿಗೆಗಳನ್ನು ಕಂಡು ಹಾಫಮನ್ ಅವರು ಸ್ಯಾಲಿಸಿಲಿಕ್ ಆ್ಯಸಿಡ್ ಅನ್ನು ಅಸಿಟೈಲ್ಗೊಳಿಸಲು ಆರಂಭಿಸಿ ಗೆಲವು ಕಂಡರು.

ಈ ವಿಷಯ ತಿಳಿಯುತ್ತಿದ್ದಂತೆ ವಿಭಾಗದ ಮುಖ್ಯಸ್ಥರಾದ ಹೆನ್ರಿಚ್ ಡ್ರೆಸರ್ ಅವರು ಮೊದಲು ತಮ್ಮ ಮೇಲೆಯೇ ಪ್ರಯೋಗಿಸಿ ನಂತರ ಹಲವಾರು ಪ್ರಾಣಿ ಪ್ರಯೋಗಗಳನ್ನು ಮಾಡಿ ಆಮೇಲೆ ರೋಗಿಗಳ ಮೇಲೆ ಪ್ರಯೋಗಿಸಿದರು. ಎಲ್ಲವೂ ಯಶಸ್ವಿಯಾದ ಮೇಲೆ 1899ರಲ್ಲಿ ಬಾಯರ್ ಕಂಪನಿಯು ಈ ಅಸಿಟೈಲ್ ಸ್ಯಾಲಿಸಿಲಿಕ್ ಆ್ಯಸಿಡ್ ಅನ್ನು ಆಸ್ಪ್ರಿನ್ (Asprin) ಎಂಬ ಹೆಸರಿನಲ್ಲಿ ಮಾರುಕಟ್ಟೆಗೆ ತಂದಿತು. ಮಾರುಕಟ್ಟೆಗೆ ಅಡಿಯಿಟ್ಟ ಕೆಲವೇ ದಿನಗಳಲ್ಲಿ ತುಂಬ ಮಂದಿಮೆಚ್ಚುಗೆ ಪಡೆಯಿತು. ಮೊದಲು ಪುಡಿಯ ರೂಪದಲ್ಲಿ ಇದ್ದದ್ದು ಕೆಲವು ವರುಶಗಳಲ್ಲಿ ಮಾತ್ರೆಯ ರೂಪವನ್ನು ಪಡೆಯಿತು. ಕಂಡುಹಿಡಿದು 100 ವರುಶಕ್ಕಿಂತ ಹೆಚ್ಚಾದರೂ ಇದರ ಮಂದಿಮೆಚ್ಚುಗೆಯಲ್ಲಿ ಯಾವುದೇ ಕೊರತೆಯಾಗಿಲ್ಲ. ಜಗತ್ತಿನಲ್ಲಿ ಈಗಲೂ ಅತಿ ಹೆಚ್ಚು ಪ್ರಮಾಣದಲ್ಲಿ ಬಳಕೆಯಲ್ಲಿದೆ. ಇಂತ ದ್ರವ್ಯವನ್ನು ಕಂಡುಹಿಡಿದಾಗ ಹಾಫಮನ್ ರಿಗೆ ಬರೀ 29 ವರುಶ.

ಬಾಯರ್ ಕಂಪನಿಯು ಇದರ ಪೇಟೆಂಟ್‍ಗಾಗಿ ಪ್ರಯತ್ನಿಸಿದರೂ ಅದಾಗಲೇ ಬೇರೆಯವರು ಇದನ್ನು ಸಾಧಿಸಿದ್ದಾರೆ ಎಂಬ ಕಾರಣದಿಂದ ಜರ್ಮನಿಯಲ್ಲಿ ನಿರಾಕರಿಸಲಾಯಿತು. ಆದರೆ ಬೇರೆಯವರು ಸಿದ್ಧಪಡಿಸಿದ್ದ ಮಾದರಿಯು ಹಾಫಮನ್ ಸಿದ್ಧಪಡಿಸಿದ್ದ ಹಾಗೆ ಶುದ್ಧ ಮತ್ತು ಪರಿಣಾಮಕಾರಿಯಾಗಿರಲಿಲ್ಲ. ಇಷ್ಟಾದರೂ ಕಂಪನಿಯು ತಲೆಕೆಡಿಸಿಕೊಳ್ಳದೇ ಇದರ ವ್ಯಾವಹಾರಿಕ ಲಾಭವನ್ನು ಅರಿತು ಅಮೆರಿಕ ಮತ್ತು ಜಗತ್ತಿನಾದ್ಯಂತ ದೊಡ್ಡ ಪ್ರಮಾಣದಲ್ಲಿ ಲಗ್ಗೆಯಿಟ್ಟಿತು. ಅಂದುಕೊಂಡಂತೆ ಅದಕ್ಕೆ ಲಾಭವಾಗುವುದರ ಜೊತೆಗೆ ಅಮೆರಿಕದಲ್ಲಿ ಪೇಟೆಂಟ್ ಕೂಡ ದೊರೆಯಿತು ಮತ್ತು 1900 ರಿಂದ 1917ವರೆಗೆ ತಯಾರಿಕೆಯ ಏಕಸ್ವಾಮ್ಯವನ್ನೂ ಪಡೆಯಿತು. ಆಸ್ಪ್ರಿನ್ ಮಾತ್ರೆಯು ಬಾಯರ್ ಕಂಪನಿಯನ್ನು ಜಗತ್ತಿನಾದ್ಯಂತ ಮನೆಮಾತಾಯಿಸಿತು.

1948ರಲ್ಲಿ ಕ್ಯಾಲಿಫೋರ್ನಿಯಾದ ವೈದ್ಯ ಡಾ.ಲಾರೆನ್ಸ ಕ್ರಾವನ್ ಅವರು ಆಸ್ಪ್ರಿನ್ ಮಾತ್ರೆಯು ಹೃದಯಾಘಾತವನ್ನು ತಡೆಯುವ ಸಾಮರ್ಥ್ಯವನ್ನು ಹೊಂದಿದೆಯೆಂದೂ ಜಗತ್ತಿಗೆ  ತೋರಿಸಿಕೊಟ್ಟರು. ಆಗ ಅದರ ಬಳಕೆ ಇನ್ನೂ ಹೆಚ್ಚತೊಡಗಿತು. ಪಾಶ್ಚಿಮಾತ್ಯ ದೇಶಗಳಲ್ಲಿ ಇದು ನೋವಳಿಕವಾಗಿಯೇ ಹೆಚ್ಚು ಬಳಕೆಯಿದ್ದರೂ ಇಂಡಿಯಾದಲ್ಲಿ ಹೃದಯಾಘಾತ ಮತ್ತು ಪಕ್ಷಾಘಾತ (stroke) ತಡೆಯಲು ಹೆಚ್ಚು ಬಳಸಲಾಗುತ್ತದೆ.

1949ರಲ್ಲಿ ಬಾಯರ್ ಕಂಪನಿಯ ಮಾಜಿ ಕೆಲಸಗಾರನಾದ ಅರ್ಥರ್ ಐಶನ್ಗ್ರನ್ ಅವರು ಅಸಿಟೈಲ್ ಸ್ಯಾಲಿಸಿಲಿಕ್ ಆ್ಯಸಿಡ್ ನ ನಿಜವಾದ ತಯಾರಕ ತಾನಾಗಿದ್ದು ಹಾಫಮನ್ ಅಲ್ಲ ಎಂಬ ವಾದ ಇಟ್ಟರು. ಎಲ್ಲ ಯೋಜನೆ ಮತ್ತು ನಿರ್ದೆಶನ ಮಾಡಿದ್ದು ತಾವು ಮತ್ತು ಹಾಫಮನ್ ಬರೀ ಪ್ರಾಥಮಿಕ ಹಂತದ ತಯಾರಿಕೆಯಲ್ಲಿ ಮಾತ್ರ ತೊಡಗಿಕೊಂಡಿದ್ದರು ಅಂತ ತಮ್ಮ ವಾದದಲ್ಲಿ ಹೇಳಿದರು. ಆದರೆ ಯಾರೂ ಈ ಬಗ್ಗೆ ಗಮನ ಕೊಡಲಿಲ್ಲ. ಮುಂದೆ 1999 ಮತ್ತೆ ಈ ವಿವಾದ ಬುಗಿಲೆದ್ದಾಗ ಬಾಯರ್ ಕಂಪನಿಯು ಸ್ಪಷ್ಟೀಕರಣ ನೀಡಿ ಫೆಲಿಕ್ಸ ಹಾಫಮನ್ ಅವರೇ ಆಸ್ಪ್ರಿನ್ ಮಾಡುಗರು ಎಂದು ಈ ವಿವಾದಕ್ಕೆ ಕೊನೆ ಹಾಡಿದರು. ಈಗಲೂ ಕೆಲವರು ಅರ್ಥರ್ ಐಶನ್ಗ್ರನ್ ಅವರು ಯಹೂದಿಯಾದ್ದರಿಂದ ಬೇಕಂತಲೇ ಅವರ ಹೆಸರನ್ನು 1930 ರ ಈಚೆಗೆ ಕೈಬಿಡಲಾಗಿದೆ ಎಂದು ಹೇಳುತ್ತಾರೆ.

ಇನ್ನೊಂದು ಮುಖ್ಯವಾದ ದ್ರವ್ಯವೊಂದನ್ನು ಹಾಫಮನ್ ಅವರು ಅಸಿಟೈಲ್ ಸ್ಯಾಲಿಸಿಲಿಕ್ ಆ್ಯಸಿಡ್ ನ ಜೊತೆ ಜೊತೆಗೆ ಕಂಡುಹಿಡಿದಿದ್ದರು. ಅದುವೇ ಡೈಅಸಿಟೈಲ್ ಮಾರ‌್ಫಿನ್ (Diacetyl morphine). ಮಂದಿಯ ಬಾಯಲ್ಲಿ ಹೆರಾಯಿನ್ (Heroin) ಅಂತಲೇ ಚಿರಪರಿಚಿತ. ಜಗತ್ತು ಕಂಡ ಕಡು ಅಪಾಯಕಾರಿ ಮಾದಕ ದ್ರವ್ಯ. ವಿಭಾಗದ ಮುಖ್ಯಸ್ಥರಾದ ಹೆನ್ರಿಚ್ ಡ್ರೆಸರ್ ಅವರು ಇದೇ ಹೊತ್ತಲ್ಲಿ ಹಾಫಮನ್ ರಿಗೆ ಇನ್ನೊಂದು ಕೆಲಸ ಕೊಟ್ಟಿದ್ದರು. ಡ್ರೆಸರ್ ಅವರು ಗಸಗಸೆ ಬೀಜದಿಂದ ಹೊರತೆಗೆದ ಕೋಡೀನ್ (Codeine) ಎಂಬ ದ್ರವ್ಯದ ಪರಿಣಾಮ ಅರಿತಿದ್ದರು. ಅದು ಗಸಗಸೆ ಬೀಜದಿಂದಲೇ ಹೊರತೆಗೆದ ಮಾರ್ಫಿನ್ (Morphine) ಗಿಂತ ಅಶಕ್ತವಾಗಿತ್ತು. ಆದ್ದರಿಂದ ಒಂದು ಒಳ್ಳೆ ಬಗೆಯ ಔಷಧಿ ದ್ರವ್ಯ ಮಾಡಲು ಈ ಮಾರ್ಫಿನ್ ಅನ್ನು ಅಸಿಟೈಲ್ಗೊಳಿಸಲು ಹೇಳಿದ್ದರು. ಅಂತೆಯೇ ಹಾಫಮನ್ ಈ ಕೆಲಸದಲ್ಲಿ ತೊಡಗಿಕೊಂಡು ಮುಗಿಸಿದಾಗ ಹುಟ್ಟಿದ್ದೇ ಹೆರಾಯಿನ್. ಆವಾಗ ಯಾರಿಗೂ ಕೂಡ ಇದರ ಬಗ್ಗೆ ಮಾಹಿತಿ ಇರಲಿಲ್ಲ. ಆದರೆ ಇದರ ಕೆಟ್ಟ ಪರಿಣಾಮಗಳ ಬಗ್ಗೆ ಎಲ್ಲರಿಗೂ ತಿಳುವಳಿಕೆ ಮೂಡವಷ್ಟರಲ್ಲಿ ಬಾಯರ್ ಕಂಪನಿಯು ಅದಾಗಲೇ ಸಾಕಷ್ಟು ಪ್ರಮಾಣದ ಹೆರಾಯಿನ್ ಅನ್ನು ಕೆಮ್ಮಿನ ಔಷಧಿ ರೂಪದಲ್ಲಿ ಮಾರಾಟ ಮಾಡಿಯಾಗಿತ್ತು. ನಂತರ ಜಗತ್ತಿನಲ್ಲೆಡೆ ಈ ದ್ರವ್ಯವನ್ನು ನಿರ್ಬಂಧಿಸಲಾಯಿತು.

ಹೀಗೆ ಈ ಎರಡು ಬಗೆಯ ದ್ರವ್ಯಗಳು ಒಂದು ಆಸ್ಪ್ರಿನ್ ಮತ್ತೊಂದು ಹೆರಾಯಿನ್ ಒಬ್ಬ ವ್ಯಕ್ತಿಯಿಂದಲೇ ಹುಟ್ಟಿಕೊಂಡವು. ಒಂದು ಜಗತ್ತನ್ನು ನೋವಿನಿಂದ ದೂರವಿಟ್ಟರೆ ಮತ್ತೊಂದು ಜಗತ್ತನ್ನು ನೋವಿನ ಕೂಪಕ್ಕೆ ತಳ್ಳಿತು.

1928ರಲ್ಲಿ ಹಾಫಮನ್ ನಿವೃತ್ತಿ ಹೊಂದಿದಾಗ ಆಸ್ಪ್ರಿನ್ ಜಗತ್ತಿನೆಲ್ಲೆಡೆ ಪ್ರಸಿದ್ಧಿಯಾಗಿತ್ತು, ಫೆಲಿಕ್ಸ್ ಹಾಫಮನ್ ರನ್ನು ಹೊರತುಪಡಿಸಿ! ಹೌದು! ಆ ಕಾಲದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಅವರ ಹೆಸರು ಬೆಳಗಲೇ ಇಲ್ಲವಂತೆ. ಮುಂದೆ ಸಾರ್ವಜನಿಕ ಬದುಕಿನಿಂದ ದೂರವೇ ಉಳಿದಿದ್ದ ಹಾಫಮನ್ ಕೊನೆಯವರೆಗೂ ಮದುವೆ ಆಗಲೇ ಇಲ್ಲ.  1946ರ ಪೆಬ್ರವರಿ 8ರಂದು ಸ್ವಿಜರ್ಲೆಂಡ್ ನಲ್ಲಿ ಅವರು ಕೊನೆಯುಸಿರೆಳೆದರು.

(ಸೆಲೆ: www.sciencehistory.org, www.ideafinder.com, www.wikipedia.org)

ಇನ್ಸುಲಿನ್

ಇನ್ಸುಲಿನ್ ಎಂಬುದು ಅರಗುಸುರಿಗೆಯಲ್ಲಿರುವ (Pancreas) ಲ್ಯಾಂಗರಹೆನ್ಸ ಗೂಡುಕಟ್ಟಿನ (islets of Langerhans) ಕೋಶಗಳು ಸುರಿಸುವ ಒಂದು ಸುರಿವೊಯ್ಯುಕ (hormone). ಇನ್ಸುಲಿನ್, ರಕ್ತದಲ್ಲಿ ಸಕ್ಕರೆ (Glucose) ಪ್ರಮಾಣವನ್ನು ಹತೋಟಿಯಲ್ಲಿಡುತ್ತದೆ. ಏನಾದರು ತಿಂದ ಮೇಲೆ ಇಲ್ಲವೇ ಊಟವಾದ ಮೇಲೆ ರಕ್ತದಲ್ಲಿ ಸಕ್ಕರೆ ಪ್ರಮಾಣ ಹೆಚ್ಚುವುದರಿಂದ ಇನ್ಸುಲಿನ್ ಬಿಡುಗಡೆಗೊಳ್ಳುತ್ತದೆ. ಸಕ್ಕರೆ‌ ಪ್ರಮಾಣ ತಗ್ಗಿದಾಗ ಇನ್ಸುಲಿನ್ ಸುರಿಗೆ ನಿಲ್ಲುತ್ತದೆ. ಈ ಬಗೆಯಲ್ಲಿ ಇನ್ಸುಲಿನ್ ರಕ್ತದಲ್ಲಿ ಸಕ್ಕರೆಯ ಪ್ರಮಾಣವನ್ನು ಸರಿದೂಗಿಸಿಕೊಂಡು ಇರುತ್ತದೆ.

ಒಂದು ವೇಳೆ ಇನ್ಸುಲಿನ್ ಸರಿಯಾದ ಪ್ರಮಾಣದಲ್ಲಿ ಸುರಿಯದೇ ಹೋದರೆ ಅದು ಸಕ್ಕರೆ ಕಾಯಿಲೆಗೆ (Diabetes mellitus) ಎಡೆ ಮಾಡಿಕೊಡುತ್ತದೆ. ತೀವ್ರವಾಗಿ ಈ ಕಾಯಿಲೆಯಿಂದ ಬಳಲುತ್ತಿರುವವರಿಗೆ ಚುಚ್ಚುಮದ್ದು ರೂಪದಲ್ಲಿ ಇನ್ಸುಲಿನ್ ನೀಡಬೇಕಾಗುತ್ತದೆ.

insulin mage2(ನಮ್ಮ ಮಯ್ಯಲ್ಲಿರುವ ಇನ್ಸುಲಿನ್ ರಾಸಾಯನಿಕ ಏರ್ಪಾಟು)

ಇನ್ಸುಲಿನ್ ಮೊದಲ ಬಾರಿ ಬೆಳಕಿಗೆ ಬಂದದ್ದು 1921 ರಲ್ಲಿ ಕೆನಡಾ ವಿಜ್ಞಾನಿಗಳಾದ ಫ್ರೆಡರಿಕ್ ಬ್ಯಾಂಟಿಂಗ್ ಮತ್ತು ಚಾರ್ಲ್ಸ್ ಬೆಸ್ಟ್‌ ಅವರುಗಳಿಂದ.

Insulin image3(ಫ್ರೆಡರಿಕ್ ಬ್ಯಾಂಟಿಂಗ್ (ಬಲಗಡೆ ಇರುವವರು) ಮತ್ತು ಚಾರ್ಲ್ಸ್ ಬೆಸ್ಟ್‌)

 ಆದರೆ ಇದಕ್ಕೂ ಮೊದಲೇ 1916 ರಲ್ಲಿ ರೊಮೇನಿಯಾದ ವೈದ್ಯ ನಿಕೊಲೈ ಪೌಲೆಸ್ಕು ಅವರು ಪ್ರತ್ಯೇಕವಾಗಿಯೇ ಒಂದು ಅರಕೆ ನಡೆಸುತ್ತಿದ್ದರು. ಅರಗುಸುರಿಗೆಯ ಪ್ಯಾಂಕ್ರಿನ್ ಎಂಬ ಸಾರ ಸತ್ವದ ಅರಕೆಯನ್ನು ಒಂದು ನಾಯಿಯ ಮೇಲೆ ಮಾಡುತ್ತಿರುವಾಗ ಅದು ರಕ್ತದಲ್ಲಿರುವ ಸಕ್ಕರೆ ಪ್ರಮಾಣವನ್ನು ಕಡಿಮೆ ಮಾಡಬಲ್ಲದು ಎಂದು ಕಂಡುಕೊಂಡರು. ಇದೇ ಹೊತ್ತಲ್ಲಿ ಮೊದಲ ಮಹಾಯುದ್ದ ಶುರುವಾಗಿ ಅವರು ಅದರಲ್ಲಿ ಪಾಲ್ಗೊಳ್ಳಲು ತೆರಳಿದ್ದರು. ಆದರೆ ಯುದ್ದ ಮುಗಿದ ಮೇಲೆ ಅವರು ಮರಳಿಬಂದು ಅರಕೆಯಲ್ಲಿ ತೊಡಗಿಕೊಳ್ಳುವಶ್ಟರಲ್ಲಿ ಬ್ಯಾಂಟಿಂಗ್ ಮತ್ತು ಬೆಸ್ಟ ಅವರು ಇನ್ಸುಲಿನ್ ಅನ್ನು ಬೇರ‌್ಪಡಿಸಿ ಹಸನುಗೊಳಿಸಿದ್ದರು. ಇದಕ್ಕೆಲ್ಲ ಹಣಕಾಸು ಮತ್ತು ಪ್ರಯೋಗಾಲಯದ ನೆರವು ನೀಡಿ ದಾರಿತೋರುಕರಾಗಿ ನಿಂತವರು ಸ್ಕಾಟ್ಲೆಂಡ್ ನ ವೈದ್ಯ ಜೆ.ಜೆ.ಆರ್. ಮೆಕ್ಲೊಯ್ಡ. ಇನ್ಸುಲಿನ್ ಅನ್ನು ಅಣಿಗೊಳಿಸಿ ಬಳಕೆಗೆ ತಂದವರು ಕೆನಡಾದ ಕೆಮಿಸ್ಟ ಜೇಮ್ಸ್ ಕೊಲ್ಲಿಪ್.

ಇನ್ಸುಲಿನ್ ಸಕ್ಕರೆ ಕಾಯಿಲೆಯನ್ನು ವಾಸಿಗೊಳಿಸದೇ ಇದ್ದರೂ ಸಾವಿನಂಚಿನಲ್ಲಿದ್ದ ಎಶ್ಟೋ ಮಂದಿಯನ್ನು ಕಾಪಾಡಿ ಹೊಸ ಬದುಕು ನೀಡಿತು. ಮೊದಲೆಲ್ಲಾ ಹಂದಿ, ಕುರಿ, ದನಗಳ ಸುರಿವೊಯ್ಯುಕಗಳಿಂದ ಇನ್ಸುಲಿನ್ ಹೊರತೆಗೆದು ಚುಚ್ಚುಮದ್ದುಗಳನ್ನು ಮಾಡುತ್ತಿದ್ದರು ಆದರೆ 1980ರ ದಶಕದ ಶುರುವಿನಲ್ಲಿ ಕೆಲವೊಂದು ಬಗೆ ಬ್ಯಾಕ್ಟೀರಿಯಾಗಳು ಪೀಳಿಯಲ್ಲಿ ಮಾರ್ಪಾಟು ಹೊಂದಿ ಮನುಷ್ಯರಂತಹ ಇನ್ಸುಲಿನ್ ಅನ್ನು ಉತ್ಪಾದಿಸ ತೊಡಗಿದವು. ಇಂದಿನ ದಿನಗಳಲ್ಲಿ ಸಕ್ಕರೆ ಕಾಯಿಲೆ ಚಿಕಿತ್ಸೆಯಲ್ಲಿ ಚುಚ್ಚುಮದ್ದಿನ ಮೂಲಕ ಇನ್ಸುಲಿನ್‌ನ ಬಳಕೆ ತುಂಬಾನೇ ಸಾಮಾನ್ಯವಾಗಿ ನಡೆಯುತ್ತಿದೆ.

1923ರಲ್ಲಿ ಫ್ರೆಡರಿಕ್ ಬ್ಯಾಂಟಿಂಗ್ ಮತ್ತು ಜೆ.ಜೆ.ಆರ್. ಮೆಕ್ಲೊಯ್ಡ ಅವರಿಗೆ ವೈದ್ಯಕೀಯ ಕ್ಷೇತ್ರದಲ್ಲಿ ನೊಬೆಲ್ ಪ್ರಶಸ್ತಿ ಕೊಡಲಾಯಿತು. ಮೆಕ್ಲೊಯ್ಡ ಅವರನ್ನು ಹೆಸರಿಸಿದ್ದಕ್ಕೆ ಮೊದಲು ಬ್ಯಾಂಟಿಂಗ್ ಅವರಿಂದನೇ ವಿರೋಧ ವ್ಯಕ್ತವಾಯಿತು. ತಮ್ಮ ಜೊತೆ ಅರಕೆಯಲ್ಲಿ ತೊಡಗಿಕೊಂಡಿದ್ದ ಚಾರ್ಲ್ಸ್ ಬೆಸ್ಟ್ ಅವರನ್ನು ಸೇರಿಸಬೇಕೆಂದು ಅವರ ವಾದವಾಗಿತ್ತು. ಕಡೆಗೆ ಅವರಿಗೆ ಗೌರವ ಸಲ್ಲಿಸಲು ಪ್ರಶಸ್ತಿಯ ಹಣವನ್ನು ಬ್ಯಾಂಟಿಂಗ್ ಅವರು ಬೆಸ್ಟ್ ಅವರೊಂದಿಗೆ ಹಂಚಿಕೊಂಡರು. ಅದರಂತೆ ಮೆಕ್ಲೊಯ್ಡ ಅವರು ಪ್ರಶಸ್ತಿ ಹಣವನ್ನು ಕೊಲ್ಲಿಪ್ ಅವರೊಂದಿಗೆ ಹಂಚಿಕೊಂಡರು. ಇದೆಲ್ಲದರ ನಡುವೆ ನಿಕೊಲೈ ಪೌಲೆಸ್ಕು ಅವರು ನೊಬೆಲ್ ಕಮಿಟಿಗೆ ಬರೆದು ತಾವು ಮೊದಲೇ ಮಾಡಿದ್ದ ಅರಕೆಯ ಬಗ್ಗೆ ತಿಳಿಸಿ ತಮ್ಮನ್ನು ಪ್ರಶಸ್ತಿಗೆ ಪರಿಗಣಿಸಬೇಕೆಂದು ಕೋರಿಕೊಂಡರೂ ಕಮಿಟಿಯ ಅದನ್ನು ತಿರಸ್ಕರಿಸಿತ್ತು.

(ಮಾಹಿತಿ ಸೆಲೆ: brittannica.com, diabetes.co.uk, nobelprize.org) (ಚಿತ್ರ ಸೆಲೆ: diabetes.co.uk , thoughtco.com, shutterstock.com)

ಪೆನಿಸಿಲಿನ್

ಪೆನಿಸಿಲಿನ್ (Penicillin) ಎಂಬುದು ಜಗತ್ತಿನ ಮೊದಲ ಮತ್ತು ಈಗಲೂ ಹೆಚ್ಚು ಬಳಕೆಯಲ್ಲಿರುವ ಎದುರುಜೀವಕ (Antibiotic). ಪೆನಿಸಿಲಿನ್ ದೊರಕಿದ್ದು ಪೆನಿಸಿಲಿಯಮ್ ಎಂಬ ಬೂಸ್ಟಿನಿಂದ (Mold). 1928 ರಲ್ಲಿ ಸ್ಕಾಟ್ಲೆಂಡಿನ ವೈದ್ಯ ಮತ್ತು ಅರಕೆಗಾರ ಅಲೆಕ್ಸಾಂಡರ್ ಪ್ಲೆಮಿಂಗ್  ಬ್ಯಾಕ್ಟೀರಿಯಾದ ಅರಕೆ ಮಾಡುವಾಗ ಸ್ಟೆಪಯ್ಲೊಕಾಕಸ್ ಆರಿಯಸ್ (Staphylococcus aureus) ಎಂಬ ಬ್ಯಾಕ್ಟೀರಿಯಾ ಕೆಲವು ಕಡೆ ಬೆಳೆಯದಿರುವುದನ್ನು ಗಮನಿಸಿದರು.

aleander fleming(ಅಲೆಕ್ಸಾಂಡರ್ ಪ್ಲೆಮಿಂಗ್)

ಹೀಗೇಕೆ ಎಂದು ಹೆಚ್ಚು ಗಮನಿಸಿ ನೋಡಿದಾಗ ಆ ಬಾಗವೆಲ್ಲವೂ ಆಕಸ್ಮಿಕವಾಗಿ ಪೆನಿಸಿಲಿಯಮ್ ನೊಟೆಟಮ್ (Penicillium Notatum) ಎಂಬ ಬೂಸ್ಟಿನಿಂದ ಸೊಂಕಿತವಾಗಿದೆ ಎಂದು ತಿಳಿದು ಬಂತು. ಆಮೇಲೆ ಆ ಬೂಸ್ಟನ್ನು ಬೇರ್ಪಡಿಸಿ ನೀರಿನ ಮಾದ್ಯಮದಲ್ಲಿ ಬೆಳೆಸಿದಾಗ ಅದು ಮಂದಿಯನ್ನು ಕಾಡುವ ಅನೇಕ ಬ್ಯಾಕ್ಟೀರಿಯಗಳನ್ನು ಕೊಲ್ಲುವ ಒಂದು ಬಗೆಯ ಸತ್ವವನ್ನು ಬಿಡುಗಡೆಗೊಳಿಸುತ್ತದೆಂದು ಗೊತ್ತಾಯಿತು.

Penicillin(ಪೆನಿಸಿಲಿಯಮ್ ನೊಟೆಟಮ್)

ಮುಂದೆ 1930ರ ದಶಕದ ಕೊನೆಯಲ್ಲಿ ಆಸ್ಟ್ರೇಲಿಯಾದ ಬೇನೆಯರಿಗ ಹೊವಾರ್ಡ್ ಫ್ಲೋರೆ ಮತ್ತು ಬ್ರಿಟನ್ನ ಬಯೋಕೆಮಿಸ್ಟ್ ಅರ್ನಸ್ಟ್ ಬೋರಿಸ್ ಚೈನ್ ಎಂಬುವವರು ಆ ಸತ್ವವನ್ನು ಬೇರ್ಪಡಿಸಿ ಹಸನುಗೊಳಿಸಿದರು. ಬ್ಯಾಕ್ಟೀರಿಯಾದಿಂದ ಉಂಟಾಗುವ ಹಲವಾರು ರೋಗಗಳಿಗೆ ಮುಂದಿನ ವರುಶಗಳಲ್ಲಿ ಪೆನ್ಸಿಲಿನ್ ಬಳಕೆ ಸಾಮಾನ್ಯವಾಯಿತು. ಬರಬರುತ್ತಾ ಬ್ಯಾಕ್ಟೀರಿಯಾಗಳು ಪೆನ್ಸಿಲನ್‍ಗೆ ಎದುರು ಶಕ್ತಿಯನ್ನು ಬೆಳೆಸಿಕೊಂಡವಾದರೂ ಇಂದಿಗೂ ಪೆನ್ಸಿಲನ್ ತಕ್ಕಮಟ್ಟಿಗೆ ಬ್ಯಾಕ್ಟೀರಿಯಾಗಳನ್ನು ಹತೋಟಿಯಲ್ಲಿಡಲು ನೆರವಾಗುತ್ತಲೇ ಇದೆ.

1941 ರಲ್ಲಿ ಪೆನಿಸಿಲಿನ್ ಚುಚ್ಚುಮದ್ದು ರೂಪದಲ್ಲಿ ಬಳಕೆಗೆ ಬಂತು. ಪೆನಿಸಿಲಿನ್ ಮೇಲೆ ಮಾಡಿದ ಅರಕೆಗಾಗಿ 1945 ರಲ್ಲಿ ಅಲೆಕ್ಸಾಂಡರ್ ಪ್ಲೆಮಿಂಗ್, ಹೊವಾರ್ಡ್ ಫ್ಲೋರೆ  ಮತ್ತು  ಅರ್ನಸ್ಟ್ ಬೋರಿಸ್ ಚೈನ್ ಈ ಮೂವರಿಗೂ ನೊಬೆಲ್ ಪ್ರಶಸ್ತಿಯನ್ನು ಕೊಡಲಾಯಿತು.

Penicillin chemical structure   (ಪೆನ್ಸಿಲಿನ್ ರಾಸಾಯನಿಕ ಏರ್ಪಾಟು)

(ಸೆಲೆ: www.britannica.com, www.nobelprize.org, ಚಿತ್ರಸೆಲೆ: edukalife.blogspot.com, wikipedia)

ನೆಲದಾಳದ ಕೊರೆತ

ವೋಯೇಜರ್-1 ಎಂಬ ಬಾನಬಂಡಿ (spacecraft) ನಮ್ಮ ನೆಲದಿಂದ ಸರಿಸುಮಾರು 141 ಬಾನಳತೆಯ (Astronomical Unit-AU) ದೂರದಲ್ಲಿ ಅಂದರೆ ಸುಮಾರು 2.11 x 1010 km ದೂರದಲ್ಲಿ ಸಾಗುತ್ತಿದೆ. ಇಷ್ಟು ದೂರದವರೆಗೆ ವಸ್ತುವೊಂದನ್ನು ಸಾಗಿಸಿ ಅದನ್ನು ತನ್ನ ಹಿಡಿತದಲ್ಲಿಟ್ಟುಕೊಳ್ಳುವಲ್ಲಿ ಮನುಷ್ಯರ ಅರಿವಿನ ಎಲ್ಲೆ ಚಾಚಿಕೊಂಡಿದೆ. ಆದರೆ ಈ ಬರಹದಲ್ಲಿ  ಹೇಳಹೊರಟಿರುವುದು ವೋಯೇಜರ್ ಬಗ್ಗೆ ಅಲ್ಲ. ಬಾನಾಳದಲ್ಲಿ ಇಷ್ಟು ದೂರ ಸಾಗಬಲ್ಲೆವಾದರೂ ನಾವು ನೆಲೆ ನಿಂತಿರುವ ನೆಲದಲ್ಲಿ ಎಷ್ಟು ಆಳವನ್ನು ತಲುಪಲು ಇಲ್ಲಿಯವರೆಗೆ ಆಗಿದೆ ಅನ್ನುವುದರ ಕುರಿತು.

ನಿಮಗೆ ಬೆರಗಾಗಬಹುದು, ಮೇಲ್ಮೈಯಿಂದ ಅದರ ನಡುವಿನವರೆಗೆ ಸುಮಾರು 6378 ಕಿ.ಮೀ. ಆಳವಿರುವ ನೆಲದಲ್ಲಿ ಇಲ್ಲಿಯವರೆಗೆ ಮನುಷ್ಯರಿಗೆ ತಮ್ಮ ಸಲಕರಣೆಗಳನ್ನು ತೂರಲು ಆಗಿರುವುದು 12.26 ಕಿ.ಮೀ. ಅಷ್ಟೇ! ಅಂದರೆ ನೆಲದಾಳದ ಬರೀ 0.2%! ನೆಲದಾಳದಲ್ಲಿರುವ ಕಾವಳತೆ (temperature), ಒತ್ತಡ ಮನುಷ್ಯರು ಮಾಡಿದ ಸಲಕರಣೆಗಳು ತೂರಲಾಗದ ಮಟ್ಟದಲ್ಲಿದ್ದು, ಬಾನಾಳವನ್ನು ಗೆಲ್ಲುವಷ್ಟು ಸುಲಭವಲ್ಲ. ಆದರೆ ಎಂದಿನಂತೆ ಮನುಷ್ಯರು ಈ ನಿಟ್ಟಿನಲ್ಲಿ ಸಾಹಸವನ್ನಂತೂ ಮಾಡುತ್ತಲೇ ಬಂದಿದ್ದಾರೆ.

ನೆಲದ ಆಳಕ್ಕೆ ತೂರುವ ಕೋಲಾ ಕಡು ಆಳದ ಕೊರೆತ (Kola Super-deep Borehole) ಎನ್ನುವ ಯೋಜನೆಯನ್ನು ರಷ್ಯಾ 24.05.1970 ರಲ್ಲಿ ಆರಂಭಿಸಿತು. ಈ ಯೋಜನೆಯನ್ನು ಶುರು ಮಾಡುವಾಗ ಸುಮಾರು 15 ಕಿ.ಮೀ. ಆಳಕ್ಕೆ ತೂತು ಕೊರೆಯುವ ಗುರಿಯನ್ನು ಇಟ್ಟುಕೊಂಡಿದ್ದ ರಷ್ಯಾ, 19 ವರುಶಗಳ ಬಳಿಕ 1989 ರಲ್ಲಿ 12.26 ಕಿ.ಮೀ. ಆಳ ತಲುಪಿ ಅಲ್ಲಿಂದ ಇನ್ನೂ ಆಳಕ್ಕೆ ಇಳಿಯಲು ತನ್ನ ಸಲಕರಣೆಗಳಿಂದ ಆಗದು ಎನ್ನುವ ತೀರ್ಮಾನವನ್ನು ಕೈಗೊಂಡು ಯೋಜನೆಯನ್ನು ಕೊನೆಗೊಳಿಸಿತು.

1                          (ರಷ್ಯಾದ ತೂತು ಕೊರೆಯುವ ಯೋಜನೆಯ ತಾಣ)

ಅಮೇರಿಕಾ ಅದಕ್ಕೂ ಮುಂಚೆ ಇಂತಹ ಆಳದ ತೂತು ಕೊರೆಯುವ ಕೆಲಸಕ್ಕೆ ಕೈಹಾಕಿ 9.583 ಕೀ.ಮೀ. ಆಳಕ್ಕೆ ಇಳಿಯಿತಾದರೂ, ರಷ್ಯಾ ತಲುಪಿದ ಆಳವನ್ನು ತಲುಪಲು ಅದಕ್ಕೆ ಆಗಲಿಲ್ಲ. ರಷ್ಯಾ ಕೊರೆದ ತೂತು ಮನುಷ್ಯರು ಮಾಡಿದ ಎಲ್ಲಕ್ಕಿಂತ ನೆಲದಾಳದ ತೂತು ಎಂಬ ತನ್ನ ಹಿರಿಮೆಯನ್ನು ಇಂದು ಕೂಡ ಕಾಯ್ದುಕೊಂಡಿದೆ.

ರಷ್ಯಾ ಕೈಗೊಂಡಿದ್ದ ಯೋಜನೆಯಲ್ಲಿ ಅಂದುಕೊಂಡಿದ್ದಕ್ಕಿಂತ ಹೆಚ್ಚಿನ ತೊಡಕುಗಳು ಅದಕ್ಕೆ ಎದುರಾದವು. 1984 ರಲ್ಲಿ ಸುಮಾರು 12000 ಮೀ (12 ಕಿ.ಮೀ.) ಆಳ ತಲುಪಿದಾಗ ಕೊರೆತದ ಸಲಕರಣೆಯ ಸುಮಾರು 5000 ಮೀ ಉದ್ದದ ಎಳೆ ನೆಲದೊಳಗೆ ಮುರಿದುಹೋಯಿತು. ಆಗ ಆ ಆಳವನ್ನು ಬಿಟ್ಟು ಸುಮಾರು 7000 ಮೀ ಆಳದಿಂದ ಬೇರೆ ದಾರಿಯಲ್ಲಿ ತೂತು ಕೊರೆಯುವ ಕೆಲಸವನ್ನು ಮುಂದುವರೆಸಬೇಕಾಯಿತು. ಮುಂದೆ 1989 ರಲ್ಲಿ 12262 ಮೀ. ತಲುಪಿದ ಕೊರೆತ ಅದೇ ವರುಶ 13500 ಮೀ ಮತ್ತು 1990 ರಲ್ಲಿ 15000 ಮೀ ತಲುಪಲಿದೆಯೆಂದು ರಷ್ಯಾ ಅಂದುಕೊಂಡಿತ್ತು.

ಆದರೆ 12262 ಮೀ. ಆಳ ತಲುಪುತ್ತಿದ್ದಂತೆ ನೆಲದಾಳದ ಕಾವು ಸುಮಾರು 180 ಡಿಗ್ರಿ ಸೆಲ್ಸಿಯಸ್ ಇರುವುದು ಗೊತ್ತಾಯಿತು. ಈ ಮಟ್ಟದ ಕಾವು (temperature) ಮುಂದುವರೆದರೆ 15000 ಮೀ ಆಳದಲ್ಲಿ ಕಾವು ಸುಮಾರು 300 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಅಷ್ಟು ಬಿಸುಪನ್ನು ತಡೆದುಕೊಳ್ಳಲು ಕೊರೆತದ ಸಲಕರಣೆಗೆ ಆಗದೆನ್ನುವ ತೀರ್ಮಾನಕ್ಕೆ ರಷ್ಯಾ ಬಂದಿತು. ಹಾಗಾಗಿ 12262 ಮೀ. ಆಳವೇ ಆ ಯೋಜನೆಯ ಕೊನೆಯಾಯಿತು.

2(ತೂತು ಕೊರೆಯುವ ಯೋಜನೆಯ ಚಿತ್ರ)

3 (ತೂತು ಕೊರೆಯಲು ಬಳಸಿದ ಸಲಕರಣೆ)

            ತಾನು ಅಂದುಕೊಂಡಿದ್ದ ಆಳವನ್ನು ತಲುಪಲು ಆಗದಿದ್ದರೂ, ರಷ್ಯಾ ಕೈಗೊಂಡ ಈ ಯೋಜನೆಯಲ್ಲಿ ಹಲವಾರು ಹೊಸದಾದ ವಿಷಯಗಳು ತಿಳಿದುಬಂದವು. ನೆಲದ ತೊಗಟೆಯ ಕಟ್ಟಣೆಯ ಬಗ್ಗೆ ಹಲವು ವಿಷಯಗಳು ಗೊತ್ತಾದವು. ಈ ಯೋಜನೆಯಲ್ಲಿ  ಕಂಡುಕೊಂಡ ಬೆರಗುಗೊಳಿಸಿದ ವಿಷಯಗಳೆಂದರೆ,

  1. ಸುಮಾರು 7 ಕಿ.ಮೀ. ಆಳದಲ್ಲಿ ಪೆಡಸುಕಲ್ಲುಗಳ(granite) ಮೇರೆ ಕೊನೆಯಾಗಿ ಕಪ್ಪುಗಲ್ಲುಗಳ (basalt) ಹರವು ಶುರುವಾಗದಿರುವುದು. ಈ ಆಳದ ಬಳಿಕ ಪೆಡಸುಕಲ್ಲುಗಳ ಮಾರ್ಪಟ್ಟ ರೂಪದ ಕಲ್ಲುಗಳೇ ಮುಂದುವರೆದಿರುವುದು ಈ ಯೋಜನೆಯಲ್ಲಿ ಕಂಡುಬಂದಿತು. ಅಷ್ಟೇ ಅಲ್ಲದೆ ಮಾರ್ಪಟ್ಟ ಈ ಪೆಡಸುಕಲ್ಲುಗಳಲ್ಲಿ ಬಿರುಕುಗಳಿದ್ದು, ಅಲ್ಲಿ ನೀರು ತುಂಬಿಕೊಂಡಿರುವುದು ಅರಿಮೆಗಾರರನ್ನು ಬೆರಗುಗೊಳಿಸಿತು. ಈ ನೀರು ನೆಲದ ಮೇಲ್ಮೈಯಿಂದ ಬರದೇ ನೆಲದ ಆಳದಿಂದ ಬಂದಿದ್ದೆಂದು ಅರಿಗರು ಎಣಿಸಿದ್ದಾರೆ.
  1. ನೆಲದಾಳದಲ್ಲಿ ಅಂದುಕೊಂಡಿದ್ದಕ್ಕಿಂತ ಹೆಚ್ಚಿನ ಮಟ್ಟದಲ್ಲಿ ಹೈಡ್ರೋಜನ್ ಆವಿ ಕಂಡುಬಂದಿದ್ದು. ಯೋಜನೆಯಲ್ಲಿ ಪಾಲ್ಗೊಂಡಿದ್ದ ಅರಿಗರು ಹೇಳುವಂತೆ ಆಳದ ಕೊಳವೆಯಿಂದ ಹೊಮ್ಮುತ್ತಿದ್ದ ಮಣ್ಣು ಹೈಡ್ರೋಜನ್ ಆವಿಯಿಂದ ಕುದಿಯುತ್ತಿರುವಂತೆ ಕಂಡುಬಂದಿತಂತೆ.

ನೇಸರನ ಕುಟುಂಬದಲ್ಲೇ ವಿಶೇಷವಾದ ಸುತ್ತಣವನ್ನು ಹೊಂದಿರುವ ನಮ್ಮ ನೆಲದ ಒಳರಚನೆಯನ್ನು ತಿಳಿದುಕೊಳ್ಳುವ, ಅದರ ರಚನೆಯ ಏರ್ಪಾಟನ್ನು ಅರಿತುಕೊಳ್ಳುವ ಇಂತಹ ಕುತೂಹಲ ಮನುಷ್ಯರಿಗೆ ಹಿಂದಿನಿಂದಲೂ ಇರುವಂತದು. ನೆಲದ ಮೇಲ್ಮೈಯಲ್ಲಿ ಕಡಲುಗಳು ಹೇಗೆ ಉಂಟಾದವು? ಅದರ ಆಳದಲ್ಲೂ ನೀರಿದೆಯೆ? ಅದರ ಆಳದಲ್ಲಿ ಅದಿರುಗಳು, ಜಲ್ಲಿಗಳು ಯಾವ ರೂಪದಲ್ಲಿವೆ? ನೆಲದ ಒಳಪದರುಗಳ ಹಂಚಿಕೆ ಹೇಗಿದೆ? ಹೀಗೆ ಹತ್ತಾರು ಪ್ರಶ್ನೆಗಳು ಮಂದಿಯ ತಲೆಯನ್ನು ಕೊರೆಯುತ್ತ ಬಂದಿವೆ. ಆದರೆ ನೆಲದಾಳಕ್ಕೆ ತೂರಿ ಇವುಗಳನ್ನು ತಿಳಿದುಕೊಳ್ಳುವಂತಹ ಅಳವು ದಕ್ಕಿಸಿಕೊಳ್ಳಲು ಮಾತ್ರ ಇಲ್ಲಿಯವರೆಗೆ ಮನುಷ್ಯರಿಗೆ ಆಗಿಲ್ಲ.

ನೇರವಾಗಿ ಆಳಕ್ಕೆ ತೂರಿ ತಿಳಿದುಕೊಳ್ಳಲು ಆಗದಿದ್ದರೂ, ಎಂದಿನಂತೆ ಅರಿಮೆಯ ಚಳಕವನ್ನು ಬಳಸಿ ನೇರವಲ್ಲದ ದಾರಿಯಲ್ಲೇ ನೆಲದ ರಚನೆಯನ್ನು ತಕ್ಕಮಟ್ಟಿಗೆ ಕಂಡುಕೊಳ್ಳುವಲ್ಲಿ  ಮುಂದಡಿಯಿಡಬೇಕಾಯಿತು. ಅದರಂತೆ ನೆಲನಡುಕದ ಅಲೆಗಳು (seismic waves) ಸಾಗುವ ಬಗೆಯನ್ನು ಅರಿತುಕೊಂಡು ನೆಲದ ರಚನೆಯನ್ನು ಕೆಳಗಿನಂತೆ ಗುರುತಿಸಲಾಗಿದೆ.

4

ಹೀಗೆ ಗುರುತಿಸಿದ ಇಟ್ಟಳವು (structure) ತಕ್ಕಮಟ್ಟಿಗೆ ಸರಿಯಿದೆಯೆಂದು ಅರಿಮೆಗಾರರು ಒಪ್ಪಿದ್ದರೂ ಆಗಾಗ ಇದರಲ್ಲಿ ಹೊಸ ಕಂಡುಕೊಳ್ಳುವಿಕೆಗಳು ಹೊರಹೊಮ್ಮುತ್ತಲಿವೆ. ಮೇಲ್ಮೈಯಲ್ಲಿರುವ ಕಡಲ ನೀರಿಗಿಂತ ಹಲವು ಪಟ್ಟು ಹೆಚ್ಚಿನ ನೀರು ನೆಲದಾಳದಲ್ಲಿದೆ ಎಂಬಂತಹ ಸುದ್ದಿಯನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ಏನೇ ಆಗಲಿ, ಮನುಷ್ಯರ ಮೈ ಶಕ್ತಿಗಿಂತ ಅವರ ಅರಿವಿನ ಹಿರಿಮೆ ಹೆಚ್ಚಿನದು. ನಮ್ಮ ನೆಲದಾಳಕ್ಕೆ ಇನ್ನೂ ಆಳದ ’ಅರಿವಿನ ತೂತು’ ಕೊರೆದು, ಒಡಲಾಳದ ತಿಳುವಳಿಕೆಯನ್ನು ತನ್ನದಾಗಿಸಿಕೊಳ್ಳುವಲ್ಲಿ  ಮುಂದಿನ ದಿನಗಳಲ್ಲಿ ಇನ್ನಷ್ಟು ಗೆಲುವು ಸಿಗಬಹುದು.

 (ಮಾಹಿತಿಯ ಮೂಲ: https://en.wikipedia.org/wiki/Kola_Superdeep_Borehole, http://www.autoorb.com)

ಸೂರ್ಯನ ಬಗ್ಗೆ ಗೊತ್ತೇ?

ತೇರಾ ಏರಿ ಅಂಬರದಾಗೆ ನೇಸರ ನಗುತಾನೆ

1

ನೇಸರ, ಸೂರ್ಯ ಹೀಗೆ ಹಲವು ಹೆಸರುಗಳನ್ನು ಹೊತ್ತ ಬಾನಂಗಳದ ಬೆರಗು, ನಮ್ಮ ಇರುವಿಕೆಗೆ, ಬಾಳಿಗೆ ಮುಖ್ಯ  ಕಾರಣಗಳಲ್ಲೊಂದು. ನೇಸರನಿಂದ ದೊರೆಯುವ ಶಕ್ತಿಯನ್ನು ಬಳಸಿಕೊಂಡೇ ನೆಲದಲ್ಲಿರುವ ಕೋಟಿಗಟ್ಟಲೆ ಜೀವಿಗಳು ತಮ್ಮ ಬದುಕನ್ನು ಸಾಗಿಸುತ್ತಿವೆ. ಕಬ್ಬಿಗರ ಕವಿತೆಗಳಿಗೆ ನೇಸರನ ಚೆಲುವು ಹೇಗೆ ಹುರುಪು ತುಂಬತ್ತದೋ ಅಂತದೇ ಅಚ್ಚರಿಯ ವಿಷಯಗಳನ್ನು ಅರಿಮೆಯ ನೆಲೆಯಲ್ಲಿ ತನ್ನ ಒಡಲೊಳಗೆ ನೇಸರ ಅಡಗಿಸಿಕೊಂಡಿದ್ದಾನೆ. ಈ ಅಚ್ಚರಿಯ ವಿಷಯಗಳನ್ನು ತಿಳಿದುಕೊಳ್ಳೋಣ ಬನ್ನಿ.

ಸೂರ್ಯ ಭೂಮಿಯಿಂದ ಸುಮಾರು 15,00,00,000 ಕಿ.ಮೀ. ದೂರದಲ್ಲಿದ್ದಾನೆ. ಪ್ರತಿ ಸೆಕೆಂಡಿಗೆ ಸುಮಾರು 3,00,000 ಕಿ.ಮೀ. ವೇಗದಲ್ಲಿ ಸಾಗುವ ಬೆಳಕಿಗೆ ಸೂರ್ಯನಿಂದ ಹೊರಟು ನೆಲವನ್ನು ತಲುಪಲು ಸರಿಸುಮಾರು 8 ನಿಮಿಷ, 19 ಸೆಕೆಂಡುಗಳು ಬೇಕಾಗುತ್ತವೆ. ಸೂರ್ಯನ ದುಂಡಗಲ (diameter) ಸುಮಾರು 13,92,684 ಕಿ.ಮೀ. ಅಂದರೆ ಇದು ನಮ್ಮ ಭೂಮಿಯ ಸುಮಾರು 109 ಪಟ್ಟು! ಸೂರ್ಯನ ಅಳವಿ (volume) 1.41×1018 ಕಿ.ಮೀ. ಇದು ಭೂಮಿಯ ಅಳವಿಯ ಸುಮಾರು 13,00,000 ಪಟ್ಟು! ಸೂರ್ಯನ ರಾಶಿ (mass) 1.98855×1030 ಕೆ.ಜಿ.ಗಳು, ಈ ರಾಶಿ ಭೂಮಿ ರಾಶಿಯ ಸುಮಾರು 3,33,000 ಪಟ್ಟು!.

ಬುಧ, ಮಂಗಳ, ಭೂಮಿ, ಶುಕ್ರ, ಶನಿ, ಗುರು ಹೀಗೆ ಹಲವು ಬಾನಕಾಯಗಳನ್ನು ತನ್ನ ಹಿಡಿತದಲ್ಲಿ ಇಟ್ಟುಕೊಂಡಿರುವ ನೇಸರನ ಹೇರಳತೆಯ ಬಗ್ಗೆ ನಿಮಗೀಗ ಅರಿವಾಗಿರಬಹುದು. ಇತರ ಬಾನಕಾಯಗಳೊಂದಿಗೆ ಹೋಲಿಸುವ ಈ ಕೆಳಗಿನ ಚಿತ್ರವನ್ನು ನೋಡಿದರೆ ನಿಮಗೆ ಇನ್ನಷ್ಟು ಅಚ್ಚರಿಯಾಗಬಹುದು.

2

ಸೂರ್ಯ ಹುಟ್ಟು:

ಬಾನಂಗಳದಲ್ಲಿ ಇಷ್ಟೊಂದು ಕರಾರುವಕ್ಕಾಗಿ ಏರ್ಪಟ್ಟಿರುವ  ‘ಸೂರ್ಯ’ (Sun) ಎಂಬ ಬಾನಕಾಯದ ಹುಟ್ಟು, ಇತರ ನಕ್ಷತ್ರಗಳ ಹುಟ್ಟಿನಂತೆಯೇ ಆಗಿದೆ ಎಂದು ಅರಿಮೆಯ ನೆಲೆಯಲ್ಲಿ ಊಹಿಸಲಾಗಿದೆ. ಸುಮಾರು 4.57 ಬಿಲಿಯನ್ ವರುಷಗಳ ಹಿಂದೆ ಹೈಡ್ರೋಜನ್ ಮತ್ತು ಹೀಲಿಯಂ ಅಣುಗಳಿಂದ ಕೂಡಿದ್ದ ದೈತ್ಯ ಅಣುಮೋಡದ ಕುಸಿತದಿಂದ ಸೂರ್ಯ ಉಂಟಾಗಿದೆಯೆಂದು ಅರಿಗರು ಅಂದಾಜಿಸಿದ್ದಾರೆ. ಈ ಕುಸಿತ ಉಂಟಾದಾಗ ಹೇರಳವಾದ ಶಕ್ತಿ ಸೂರ್ಯನ ನಡುವಿನಲ್ಲಿ ಅಡಕಗೊಂಡು, ಅಳಿದುಳಿದ ಶಕ್ತಿಯು ತಟ್ಟೆಯ ಆಕಾರದಲ್ಲಿ ಹಲವು ಲಕ್ಷ ಕಿ.ಲೋ.ಗಳಷ್ಟು ದೂರ ಚದುರಿ, ಭೂಮಿಯೂ ಸೇರಿದಂತೆ ಸೂರ್ಯ ಏರ್ಪಾಟಿನಲ್ಲಿರುವ (Solar system) ಇತರ ಬಾನಕಾಯಗಳು ಉಂಟಾಗಿವೆ ಎಂಬುದು ಬಾನರಿಗರ ಅನಿಸಿಕೆ.

ಈ ಮುಂಚೆ ಸೂರ್ಯನಷ್ಟು ಹೊಳಪಿರುವ ಲೆಕ್ಕವಿಲ್ಲದಷ್ಟು ನಕ್ಶತ್ರಗಳು ಬಾನಂಗಳದಲ್ಲಿ ಇವೆಯೆಂದು ನಂಬಲಾಗಿತ್ತು ಆದರೆ ಇತ್ತೀಚಿನ ಅರಕೆಯಲ್ಲಿ ಕಂಡುಬಂದಿರುವುದೇನೆಂದರೆ ಸೂರ್ಯನ ಹೊಳಪು (brightness), ಹಾಲುಹಾದಿ  (milkyway) ಗ್ಯಾಲಕ್ಸಿಯಲ್ಲಿರುವ ಸುಮಾರು 85% ನಕ್ಶತ್ರಗಳಿಗಿಂತ ಹೆಚ್ಚಿನದಂತೆ. ಹೊಳಪಿನ ಪ್ರಮಾಣದಲ್ಲಿ ಎರಡನೇ ಸ್ಥಾನದಲ್ಲಿರುವ ಸಿರಿಯುಸ್ (Sirius) ನಕ್ಷತ್ರದ ಹೊಳಪಿಗಿಂತ ನೇಸರನ ಹೊಳಪು ಸುಮಾರು 13 ಬಿಲಿಯನ್ ಪಟ್ಟು ಹೆಚ್ಚಾಗಿದೆ!.

ಸೂರ್ಯನ ಏರ್ಪಾಡು:

ಬೆಂಕಿಯನ್ನು ಉಗುಳುವ ಬಾನುಂಡೆಯಂತೆ ಕಾಣುವ ಸೂರ್ಯನಲ್ಲಿ ಮುಖ್ಯವಾಗಿ ತಿರುಳು (core), ಸೂಸಿಕೆಯ ಹರವು (radiative zone), ಒಯ್ಯಿಕೆಯ ಹರವು (convective zone), ಬೆಳಕುಗೋಳ (photosphere), ಬಣ್ಣಗೋಳ (chromosphere), ಹೊಳಪುಗೋಳ (corona) ಎಂಬ ಭಾಗಗಳನ್ನು ಗುರುತಿಸಲಾಗಿದೆ.

3

ತಿರುಳು (core): ಇದು ಸೂರ್ಯನ ನಟ್ಟನಡುವಿನ ಭಾಗ. ಈ ಒಳಭಾಗ ಸೂರ್ಯನ ಒಟ್ಟು ಅಳತೆಯ ಸುಮಾರು 20-25% ನಷ್ಟಿದೆ. ನೇಸರನಲ್ಲಿ ಉಂಟಾಗುವ ಶಕ್ತಿಯ ಪ್ರಮಾಣದಲ್ಲಿ ಸುಮಾರು 99% ಶಕ್ತಿಯು ಈ ಭಾಗದಲ್ಲಿಯೇ ಉಂಟಾಗುತ್ತದೆ. ಹೇರಳವಾದ ಶಕ್ತಿ ಬಿಡುಗಡೆಯಾಗುವ ಈ ಭಾಗದಲ್ಲಿರುವ ಬಿಸುಪು (temperature) ಸುಮಾರು 1,50,00,000 ಡಿಗ್ರಿ ಸೆಲ್ಸಿಯಸ್ ಎಂದು ಅಂದಾಜಿಸಲಾಗಿದೆ! ಹೈಡ್ರೋಜನ್ ಅಣುಗಳ ಬೆಸುಗೆಯಿಂದಾಗಿ (nuclear fusion) ತಿರುಳಿನ ಭಾಗದಲ್ಲಿ ಹೇರಳವಾದ ಶಕ್ತಿ ಬಿಡುಗಡೆಯಾಗುತ್ತದೆ. ಹೈಡ್ರೋಜನ್ ಅಣುಗಳ ಬೆಸುಗೆಯ ಬಳಿಕ ಅವುಗಳು ಹೀಲಿಯಂ ಅಣುಗಳಾಗಿ ಬದಲಾಗುತ್ತವೆ. ಈ ಬೆಸುಗೆಯಲ್ಲಿ ಅಣುಗಳ ರಾಶಿಯ ಕೊಂಚ ಪಾಲು ಶಕ್ತಿಯಾಗಿ ಮಾರ್ಪಡುತ್ತದೆ.

ಸೂಸಿಕೆಯ ಹರವು (radiative zone): ತಿರುಳಿನಲ್ಲಿ ಉಂಟಾಗುವ ಶಕ್ತಿ ನೇಸರನ ಮೇಲ್ಮೈವರೆಗೆ ತಲುಪಿಸುವಲ್ಲಿ ಇದು ಮೊದಲ ಹಂತ. ಇಲ್ಲಿ ಹೈಡ್ರೋಜನ್ ಮತ್ತು ಹೀಲಿಯಂ ಅಣುಗಳು ಬೆಳಕಿಗಳ (photon) ರೂಪದಲ್ಲಿ ಕಾವನ್ನು ಸೂಸಿ ಇತರ ಭಾಗಗಳಿಗೆ ಶಕ್ತಿಯನ್ನು ಸಾಗಿಸುತ್ತವೆ.

 ಒಯ್ಯಿಕೆಯ ಹರವು (convective zone): ಸೂಸಿಕೆಯ ಹರವಿನ ಬಳಿಕ ಬರುವ ಈ ಭಾಗದಲ್ಲಿ ಅಣುಗಳು ತಮ್ಮ ಸಾಗಾಟಾದ ಮೂಲಕ ಕಾವನ್ನು (heat) ಇತರ ಭಾಗಗಳಿಗೆ ಒಯ್ಯುತ್ತವೆ. ತಿರುಳು ಮತ್ತು ಸೂಸಿಕೆಯ ಹರವಿಗೆ ಹೋಲಿಸಿದರೆ ಈ ಭಾಗದಲ್ಲಿ ಬಿಸುಪು ತುಂಬಾ ಕಡಿಮೆ ಇರುತ್ತದೆ. 1.5 ಕೋಟಿ ಡಿಗ್ರಿ ಸೆಲ್ಸಿಯಸ್ ಇದ್ದ ಬಿಸುಪು, ಈ ಭಾಗದಲ್ಲಿ ಸುಮಾರು 5700 ಡಿಗ್ರಿ ಸೆಲ್ಸಿಯಸ್‍ಗೆ ಇಳಿಯುತ್ತದೆ.

ಬೆಳಕುಗೋಳ (photosphere): ಹೆಸರೇ ಸೂಚಿಸುವಂತೆ ಸೂರ್ಯನಲ್ಲಿ ಉಂಟಾಗುವ ಶಕ್ತಿ ಬೆಳಕಿನ ರೂಪದಲ್ಲಿ ನಮಗೆ ಕಾಣುವುದು ಈ ಭಾಗದಿಂದಾಗಿಯೇ. ಅಚ್ಚರಿಯ ವಿಷಯವೆಂದರೆ ಇಲ್ಲಿ ಉಂಟಾಗುವ ಶಕ್ತಿಯ ರೂಪವಾದ ’ಬೆಳಕು’ ಸೂರ್ಯನ ಮೇಲ್ಮೈ ಕಡೆಗೆ ಮತ್ತು ಅದರಾಚೆಗೆ ತೆರುವಿನಲ್ಲಿ (space) ಸಾಗಬಲ್ಲದು ಆದರೆ ಅದು ಸೂರ್ಯನ ಒಳಭಾಗಕ್ಕೆ ಸಾಗಲಾರದು.

ಬೆಳಕುಗೋಳದ ಬಳಿಕ ಸುಮಾರು 500 ಕಿ.ಮೀ. ವರೆಗೆ ಬಿಸುಪು (temperature) ತುಂಬಾ ಕಡಿಮೆಯಾಗುತ್ತದೆ. ಒಂದು ಹಂತದಲ್ಲಿ ಬಿಸುಪು ಸೂರ್ಯನ ಇತರೆಡೆಗಳಿಗಿಂತ ಎಲ್ಲಕ್ಕಿಂತ ಕಡಿಮೆ ಎನ್ನಬಹುದಾದ 4700 ಡಿಗ್ರಿ ಸೆಲ್ಸಿಯಸ್ ಮಟ್ಟವನ್ನು ತಲಪುತ್ತದೆ. ಬೆಳಕುಗೋಳವಾದ ಮೇಲೆ ಕಾಣುವ ಬಣ್ಣಗೋಳ, ಹೊಳಪುಗೋಳ ಮುಂತಾದ ನೇಸರನ ಇತರೆ ಭಾಗಗಳನ್ನು ಒಟ್ಟಾರೆಯಾಗಿ ಸೂರ್ಯನ ಸುತ್ತಣ (Sun’s atmosphere) ಎಂದು ಗುರುತಿಸಲಾಗುತ್ತದೆ.

ಬಣ್ಣಗೋಳ (chromosphere): ಕಡಿಮೆ ಬಿಸುಪು ಹೊಂದಿರುವ ಭಾಗದ ಬಳಿಕ ಇರುವುದೇ ಬಣ್ಣಗೋಳ. ಸುಮಾರು 2000 ಕಿ.ಮೀ. ಆಳದಷ್ಟು ಹರಡಿಕೊಂಡಿರುವ ಈ ಭಾಗದಲ್ಲಿ ಬಿಸುಪು ಮತ್ತೇ ಏರತೊಡಗುತ್ತದೆ. ಈ ಭಾಗದ ಹೊರಮೈಯಲ್ಲಿ ಸರಿಸುಮಾರು 20,000 ಡಿಗ್ರಿ ಸೆಲ್ಸಿಯಸ್ ಬಿಸುಪಿರುತ್ತದೆ. ಗ್ರಹಣ (Solar eclipse) ಉಂಟಾದಾಗ ಈ ಭಾಗ ಬಣ್ಣದ ಮಿಂಚಿನಂತೆ ಹೊಳೆಯುವುದರಿಂದ ಇದನ್ನು ಬಣ್ಣಗೋಳ ಅಂತಾ ಕರೆಯಲಾಗುತ್ತದೆ.

ಹೊಳಪುಗೋಳ (corona): ಇದು ಬಣ್ಣಗೋಳದ ಬಳಿಕ ಬರುವ ನೇಸರನ ಸುತ್ತಣದ ಭಾಗ. ಈ ಭಾಗದಲ್ಲಿ ಬಿಸುಪು ಹೆಚ್ಚಾಗುತ್ತಾ ಹೋಗುತ್ತದೆ. ಒಂದು ಹಂತದಲ್ಲಿ ಬಿಸುಪು ಸುಮಾರು 20,00,000 ಡಿಗ್ರಿ ಸೆಲ್ಸಿಯಸ್ ವರೆಗೆ ತಲುಪುತ್ತದೆ. ಬಣ್ಣಗೋಳ ಮತ್ತು ಹೊಳಪುಗೋಳದಲ್ಲಿ ಬಿಸುಪು ಹೆಚ್ಚಿರಲು ಕಾರಣವೇನೆಂದು ಇನ್ನೂ ಸರಿಯಾಗಿ ತಿಳಿದಿಲ್ಲವಾದರೂ, ಇದಕ್ಕೆ ಆಲ್ಪವಿನ್ ಅಲೆಗಳು (Alfvén waves) ಎಂದು ಕರೆಯಲಾಗುವ ಕಾವಿನ ಅಲೆಗಳು ಕಾರಣವೆಂದು ಊಹಿಸಲಾಗಿದೆ. ಗ್ರಹಣದ ಹೊತ್ತಿನಲ್ಲಿ ಈ ಭಾಗ ಸೂರ್ಯನ ಸುತ್ತ ಉಂಗುರದಂತೆ ಹೊಳೆಯುತ್ತದೆ.

ಹೊಳಪುಗೋಳವು ಸೂರ್ಯನ ಹೊರಭಾಗವಾಗಿದ್ದರೂ ಅದಾದ ಮೇಲೆಯೂ ಹಲವು ಲಕ್ಷ ಕಿ.ಮೀ.ಗಳಷ್ಟು ದೂರದವರೆಗೆ ಸೂರ್ಯನಲ್ಲಿ ಉಂಟಾಗುವ ಕಾವಿನ ಅಲೆಗಳು ಹಬ್ಬುತ್ತವೆ. ಒಟ್ಟಾರೆಯಾಗಿ ಈ ಅಲೆಗಳನ್ನು ಸೂರ್ಯನ ಗಾಳಿ (Solar wind) ಎಂದು ಕರೆಯಲಾಗುತ್ತದೆ.

ಸೂರ್ಯನಲ್ಲಿರುವ ಅಡಕಗಳು:

ಸೂರ್ಯನಲ್ಲಿ ಶಕ್ತಿ ಉಂಟಾಗಲು ಕಾರಣವಾದ ಹೈಡ್ರೋಜನ್ ಹೆಚ್ಚಿನ ಪ್ರಮಾಣದಲ್ಲಿದೆ. ಸೂರ್ಯನಲ್ಲಿರುವ ಅಡಕಗಳ ಪ್ರಮಾಣವನ್ನು ಈ ಕೆಳಗಿನ ಪಟ್ಟಿಯಲ್ಲಿ ಕಾಣಬಹುದು.

4

ಸೂರ್ಯನ ಸಾವು:

ಹುಟ್ಟಿದ ಎಲ್ಲವೂ ಒಂದು ದಿನ ಸಾವಿಗೆ ಶರಣಾಗಬೇಕು ಅನ್ನುವ ಮಾತು ಅರಿಮೆಯ ನೆಲೆಯಲ್ಲಿ ಸೂರ್ಯನಿಗೂ ತಪ್ಪಿದ್ದಲ್ಲ. ಸೂರ್ಯನಲ್ಲಿ ಶಕ್ತಿ ಉಂಟಾಗಲು ಕಾರಣವಾದ ಹೈಡ್ರೋಜನ್ ಅಣುಗಳು ತೀರಿದ ಮೇಲೆ, ಸೂರ್ಯ ಸಾವಿನಂಚಿಗೆ ತಲುಪಲಿದ್ದಾನೆ. ಈ ಹಂತದಲ್ಲಿ ಸೂರ್ಯನ ಗಾತ್ರ ದೊಡ್ದದಾಗುತ್ತ ಹೋಗಿ ಬುಧ, ಶುಕ್ರ ಮತ್ತು ಭೂಮಿಯ ದೂರವನ್ನು ನುಂಗಿಹಾಕುವಷ್ಟು ಅಗಲವಾಗಿ ಬೆಳೆಯುತ್ತಾನೆ. ಹಾ! ಈಗಲೇ ಚಿಂತಿಸಬೇಡಿ ಅದಕ್ಕಿನ್ನೂ 5.7 ಬಿಲಿಯನ್ ವರ್ಷಗಳು ಬೇಕು.

(ಮಾಹಿತಿ ಸೆಲೆಗಳು: http://www.dirish.com/http://en.wikipedia.org/wiki/Sunhttp://www.thunderbolts.info/)

ಬೀಳುವಿಕೆಯ ಬೆರಗು

ಹೀಗೊಂದು ಪ್ರಶ್ನೆ,

ಎತ್ತರದಿಂದ ಒಂದು ಕಬ್ಬಿಣದ ಗುಂಡು ಮತ್ತು ಹಕ್ಕಿಯ ಗರಿಯೊಂದನ್ನು ಕೆಳಗೆ ಬಿಟ್ಟರೆ ಯಾವುದು ಮೊದಲು ನೆಲವನ್ನು ತಲುಪುತ್ತೆ?

ಅದರಲ್ಲೇನಿದೆ? ಕಬ್ಬಿಣದ ಗುಂಡು ಹಕ್ಕಿಯ ಗರಿಗಿಂತ ತೂಕವಾಗಿರುವುದರಿಂದ ಗುಂಡು ಮೊದಲು ನೆಲವನ್ನು ತಲುಪುತ್ತದೆ ಅಂತಾ ನೀವನ್ನಬಹುದು. ಉತ್ತರ ಸರಿಯಾಗಿಯೇ ಇದೆ.

ವಸ್ತುವೊಂದು ನೆಲದೆಡೆಗೆ ಬೀಳಲು ನೆಲಸೆಳೆತ (earth’s gravity) ಕಾರಣ ಮತ್ತು ಈ ಸೆಳೆತವು ವಸ್ತುವಿನ ರಾಶಿಗೆ (mass) ತಕ್ಕಂತೆ ಇರುತ್ತದೆ ಅಂದರೆ ಹೆಚ್ಚಿನ ರಾಶಿವುಳ್ಳ ವಸ್ತುವು ಹೆಚ್ಚಿನ ನೆಲಸೆಳೆತಕ್ಕೆ ಒಳಗಾಗಿ ಬೇಗನೇ ನೆಲಕ್ಕೆ ಬೀಳುತ್ತದೆ ಅನ್ನುವ ಹೆಚ್ಚಿನ ವಿಷಯವನ್ನೂ ನೀವು ಮೇಲಿನ ಪ್ರಶ್ನೆಗೆ ಉತ್ತರವಾಗಿ ನೀಡಬಹುದು.

ಈಗ ಮೇಲಿನ ಪ್ರಶ್ನೆಗೆ ತುಸು ಕಟ್ಟುಪಾಡು ಹಾಕೋಣ,

ಅದೇ ಎತ್ತರದಿಂದ ಗಾಳಿಯಿರದ ಬರಿದುದಾಣದಲ್ಲಿ (vacuum chamber) ಅದೇ ಕಬ್ಬಿಣದ ಗುಂಡು ಮತ್ತು ಹಕ್ಕಿಯ ಗರಿಯನ್ನು ನೆಲದೆಡೆಗೆ ಬಿಟ್ಟರೆ ಯಾವುದು ಮೊದಲು ನೆಲವನ್ನು ತಲುಪುತ್ತದೆ?

ಎರಡೂ ಒಂದೇ ಹೊತ್ತಿಗೆ ನೆಲವನ್ನು ತಲಪುತ್ತವೆ.

ಅನ್ನುವ ಉತ್ತರವನ್ನು ಕೇಳಿದರೆ ಅಚ್ಚರಿಯಾಗಬಹುದು.

ಗಾಳಿಯನ್ನಷ್ಟೇ  ತೆಗೆದು ತಾಣವನ್ನು ಬರಿದಾಗಿಸಿದಾಗ ವಸ್ತುಗಳ ರಾಶಿಯಂತೂ ಬದಲಾಗುವುದಿಲ್ಲ ಹಾಗಾಗಿ ನೆಲಸೆಳೆತವು ಬದಲಾಗದು ಆದರೂ ತೂಕದ ಗುಂಡು ಮತ್ತು ಹಗುರವಾದ ಗರಿ ನೆಲವನ್ನು ಸೇರಲು ಅಷ್ಟೇ ಹೊತ್ತನ್ನು ಹೇಗೆ ತೆಗೆದುಕೊಂಡವು? ಉತ್ತರವನ್ನು ಕಂಡುಕೊಳ್ಳುವ ಮುನ್ನ, ಅಮೇರಿಕಾದ ನಾಸಾ ಬರಿದುದಾಣದಲ್ಲಿ (vacuum chamber) ನಡೆಸಿದ ಈ ಮೇಲಿನ ಎರಡೂ ಪ್ರಯೋಗಗಳನ್ನು ಕೆಳಗಿನ ವಿಡಿಯೋದಲ್ಲಿ  ನೋಡೋಣ

  1. ಗಾಳಿ ಇರುವಾಗ ವಸ್ತುಗಳ ಬೀಳುವಿಕೆ:

  1. ಗಾಳಿ ಬರಿದಾಗಿಸಿದಾಗ ವಸ್ತುಗಳ ಬೀಳುವಿಕೆ:

ಬೀಳುವಿಕೆಯ ಈ ಹಿನ್ನೆಲೆಯನ್ನು ತಿಳಿದುಕೊಳ್ಳೊಲು ಮೊದಲು ’ವೇಗಮಾರ್ಪು’ ಅನ್ನುವುದನ್ನು ಅರಿಯೋಣ. ವೇಗ (velocity) ಮಾರ್ಪಡುವ ಮಟ್ಟವನ್ನು ವೇಗಮಾರ್ಪು (acceleration) ಅನ್ನುತ್ತಾರೆ. ಉದಾಹರಣೆಗೆ: ಕಾರೊಂದನ್ನು 50 km/h ಅಷ್ಟು ವೇಗದಲ್ಲಿ ಓಡಿಸುತ್ತಿದ್ದೀರಿ ಅಂದುಕೊಳ್ಳೋಣ. ಈ ವೇಗ ಬದಲಾಗದೇ ಅಷ್ಟೇ ಇದ್ದರೆ ಅದರ ವೇಗಮಾರ್ಪು ಸೊನ್ನೆಯಾಗಿರುತ್ತದೆ. ಏಕೆಂದರೆ ಕಾರಿನ ವೇಗ ಮಾರ್ಪಡದೆ ಅಷ್ಟೇ ಇದೆ. ಈಗ ಕಾರಿನ ವೇಗ ಸೆಕೆಂಡಿಗೆ 1 km ನಷ್ಟು ಬದಲಾಗುತ್ತಾ ಹೊರಟರೆ ಅದರ ವೇಗಮಾರ್ಪು 1 km/s2  ಆಗಿರುತ್ತದೆ.

ವಸ್ತುವೊಂದು ನೆಲಸೆಳೆತಕ್ಕೆ ಒಳಗಾದಾಗ ಅದರ ವೇಗಮಾರ್ಪು 9.81 m/s2  ನಷ್ಟಿರುವುದು ಪ್ರಯೋಗಗಳಿಂದ ತಿಳಿದುಬಂದಿದೆ. ಇದನ್ನು ನೆಲಸೆಳೆತದಿಂದಾದ ವೇಗಮಾರ್ಪು (acceleration due to gravity) ಎಂದು ಕರೆಯುತ್ತಾರೆ. ಇದನ್ನು ‘g’ ಗುರುತಿನಿಂದ ಗುರುತಿಸಲಾಗುತ್ತದೆ. ನೆಲದ ಮೇಲ್ಮೈಯ ಎತ್ತರಕ್ಕೆ ಅನುಗುಣವಾಗಿ ಇದರ ಬೆಲೆ ತುಸು ಬದಲಾದರೂ ಸರಾಸರಿಯಾಗಿ 9.81 m/s2  ಅಂತಾ ಬಳಸುವುದರಿಂದಲೆಕ್ಕಾಚಾರದಲ್ಲಿ ಹೆಚ್ಚಿನ ವ್ಯತ್ಯಾಸವೇನೂ ಆಗುವುದಿಲ್ಲ.

ಕೆಳಗಿನ ಚಿತ್ರದಲ್ಲಿ ನೆಲಸೆಳೆತದಿಂದಾಗುವ ವೇಗದ ಬದಲಾವಣೆಯನ್ನು ಅಂದರೆ ವೇಗಮಾರ್ಪನ್ನು  ತೋರಿಸಲಾಗಿದೆ. ವಸ್ತುವೊಂದನ್ನು ಕೈಯಲ್ಲಿ ಹಿಡಿದಿರುವಾಗ ಅದರ ವೇಗ ’0’ ಆಗಿರುತ್ತದೆ ಅದೇ ನೆಲದೆಡೆಗೆ ಅದನ್ನು ಬಿಟ್ಟರೆ ಅದರ ವೇಗ ಪ್ರತಿ ಸೆಕೆಂಡಿಗೆ 9.81 ಮೀಟರ್‍ ನಷ್ಟು ಬದಲಾಗುತ್ತಾ ಹೋಗುತ್ತದೆ. ಕೈಬಿಟ್ಟ ಮೊದಲ ಸೆಕೆಂಡಿಗೆ ಅದರ ವೇಗ 9.81 m/s ಆಗಿದ್ದರೆ, ಎರಡನೇ ಸೆಕೆಂಡಿಗೆ ಅದು 9.81 X 2 = 19.6 m/s, ಮೂರನೇ ಸೆಕೆಂಡಿಗೆ 9.81 X 3 = 29.4 m/s ಆಗಿರುತ್ತದೆ. ಹೀಗೆ ನೆಲ ತಲುಪುವವರೆಗೂ ಅದರ ವೇಗ ಒಂದೇ ಮಟ್ಟದಲ್ಲಿ ಬದಲಾಗುತ್ತಾ ಹೋಗುತ್ತದೆ.

acceleration-gravity

ವಸ್ತುವೊಂದರ ವೇಗವು ಯಾವ ಮಟ್ಟದಲ್ಲಿರುತ್ತದೆ ಮತ್ತು ಆ ವೇಗ ಯಾವ ಮಟ್ಟದಲ್ಲಿ ಮಾರ್ಪಡುತ್ತದೆ ಅನ್ನುವುದರ ಮೇಲೆ, ಆ ವಸ್ತುವು ಎಷ್ಟು ಬೇಗ ಸಾಗುತ್ತದೆ ಅನ್ನುವುದು ತೀರ್ಮಾನವಾಗುತ್ತದೆ. ಬೇರಾವುದೇ ಬಲಕ್ಕೆ ಒಳಪಡದೆ ಬರೀ ನೆಲಸೆಳತದ ಬಲಕ್ಕೆ ಒಳಪಟ್ಟ ವಸ್ತುಗಳ ವೇಗಮಾರ್ಪಿನ ಮಟ್ಟ ಒಂದೇ ಆಗಿರುತ್ತದೆ. ಅಂದರೆ ಅದಾವುದೇ ವಸ್ತುವಿದ್ದರೂ ಅದರ ವೇಗ ಪ್ರತಿ ಸೆಕೆಂಡಿಗೆ 9.81 m/s ನಷ್ಟು ಬದಲಾಗುತ್ತದೆ.

ಈಗ ಈ ಬರಹದ ಮೊದಲ ಭಾಗದಲ್ಲಿರುವ ಪ್ರಶ್ನೆಗಳು ಮತ್ತು ವೇಗಮಾರ್ಪಿನ ಮೇಲಿನ ತಿಳುವಳಿಕೆಯನ್ನು ತಳಕುಹಾಕಿದರೆ, ಬರಿದುದಾಣದಲ್ಲಿ (vaccum) ವಸ್ತುಗಳು ನೆಲವನ್ನು ಸೇರಲು ತೆಗೆದುಕೊಳ್ಳವ ಹೊತ್ತು ’ವೇಗಮಾರ್ಪಿನ’ ಮೇಲೆ ನಿಂತಿದೆ ಹೊರತು ಅವುಗಳ ’ರಾಶಿಯ’ (mass) ಮೇಲಲ್ಲ ಅನ್ನುವುದು ತಿಳಿದುಬರುತ್ತದೆ. ನೆಲಸೆಳೆತದಿಂದಾಗುವ ವೇಗಮಾರ್ಪು ಬದಲಾಗದಿರುವುದರಿಂದ ತೂಕದ ಮತ್ತು ಹಗುರವಾದ ಎರಡೂ ವಸ್ತುಗಳೂ ಒಂದೇ ಹೊತ್ತಿಗೆ ನೆಲವನ್ನು ಸೇರುತ್ತವೆ.

ಈ ತಿಳುವಳಿಕೆಯನ್ನು ನ್ಯೂಟನ್‍ರ ಎರಡನೇ ಕಟ್ಟಲೆಯಿಂದಲೂ ಕೆಳಗಿನಂತೆ ತೋರಿಸಬಹುದು.  ಈ ಕಟ್ಟಲೆಯ ಪ್ರಕಾರ,

            ಬಲ = ರಾಶಿ X ವೇಗಮಾರ್ಪು

           >> F = m X a

        ಇಲ್ಲಿ, ವೇಗಮಾರ್ಪು ‘ನೆಲಸೆಳೆತದಿಂದಾದ ವೇಗಮಾರ್ಪು’ ಆಗಿರುವುದರಿಂದ a = g = 9.81 m/s2  ಆಗಿರುತ್ತದೆ.

         ಈಗ ತೂಕದ ವಸ್ತುವನ್ನು 1 ರಿಂದ ಮತ್ತು ಹಗುರವಾದ ವಸ್ತುವನ್ನು 2 ರಿಂದ ಸೂಚಿಸೋಣ.

         ತೂಕದ ವಸ್ತು       : F1 = m1 X g
         ಹಗರುವಾದ ವಸ್ತು : F2 = m2 X g

              >> F1/m1 = F2/m2

ಮೇಲಿನ ನಂಟಿನಿಂದ ತಿಳಿದುಬರುವುದೇನೆಂದರೆ, ತೂಕದ ಮತ್ತು ಹಗುರವಾದ ವಸ್ತುಗಳ ನೆಲಸೆಳೆತದ ಬಲ ಮತ್ತು ರಾಶಿಗಳ ಅನುಪಾತ ಒಂದೇ ಆಗಿರುತ್ತದೆ. ಅಂದರೆ ತೂಕದ ವಸ್ತುವು ಹೆಚ್ಚಿನ ನೆಲಸೆಳೆತದ ಬಲಕ್ಕೆ ಒಳಪಟ್ಟರೂ ಅದರ ಹೆಚ್ಚಿನ ರಾಶಿ ಅದರ ಪರಿಣಾಮವನ್ನು ಕಡಿಮೆ ಮಾಡುತ್ತದೆ.

 

ಸರಿ. ಬರಿದುದಾಣದಲ್ಲಿ ತೂಕದ ಮತ್ತು ಹಗುರವಾದ ವಸ್ತುಗಳು ನೆಲ ತಲುಪಲು ಅಷ್ಟೇ ಹೊತ್ತನ್ನು ತೆಗೆದುಕೊಳ್ಳುವುದೇಕೆ ಎಂದು ತಿಳಿದೆವು. ಆದರೆ ಗಾಳಿಯ ಸುತ್ತಣ ಇದ್ದಾಗ ಏನಾಗುತ್ತದೆ? ನಮ್ಮ ದಿನದ ಬದುಕಿನಲ್ಲಿ ಕಾಣುವಂತೆ ತೂಕದ ವಸ್ತುವೇಕೆ ಮೊದಲು ನೆಲವನ್ನು ತಲಪುತ್ತದೆ? ಅನ್ನುವ ಪ್ರಶ್ನೆ ಹಾಗೇ ಉಳಿಯುತ್ತದೆ ಅಲ್ಲವೇ.

 

ಗಾಳಿಯ ಸುತ್ತಣದಲ್ಲಿ ವಸ್ತುಗಳನ್ನು ಬಿಟ್ಟಾಗ ನೆಲಸೆಳೆತದ ಜತೆಗೆ ಇನ್ನೊಂದು ಬಲವು ವಸ್ತುಗಳ ಮೇಲೆ ಎರಗುತ್ತದೆ. ಅದೇ ಎಳೆತದ ಬಲ (drag force) ಇಲ್ಲವೇ ಗಾಳಿತಡೆ (air resistance). ಈ ಬಲವು ವಸ್ತುಗಳ ಸಾಗಾಣೆಯ ಎದುರಾಗಿ ಕೆಲಸ ಮಾಡುತ್ತದೆ ಅಂದರೆ ನೆಲಸೆಳೆತದಿಂದಾಗಿ ಕೆಳಗೆ ಸಾಗುತ್ತಿರುವ ವಸ್ತುವಿನ ಮೇಲೆ ಗಾಳಿಯ ಎಳೆತದ ಬಲವು ಮೇಲ್ಮುಖವಾಗಿರುತ್ತದೆ.

 

ಗಾಳಿಯ ಸುತ್ತಣದಿಂದಾಗುವ ಈ ಎಳೆತ ಬಲದ ಮಟ್ಟವು ವಸ್ತುವಿನ ದಟ್ಟಣೆ (density), ವೇಗ (velocity), ಹರವಿಗೆ (area) ತಕ್ಕಂತೆ ಇರುತ್ತದೆ. ಒಂದೇ ಹರವಿನ ಆದರೆ ಎರಡು ಬೇರೆ ತೂಕವುಳ್ಳ ವಸ್ತುಗಳನ್ನು ಹೋಲಿಸಿದರೆ, ತೂಕದ ವಸ್ತುವಿನ ಮೇಲೆ ಈ ಎಳೆತ ಬಲದ ಪರಿಣಾಮ ಕಡಿಮೆ ಇರುತ್ತದೆ. ಇದನ್ನು ಗಣಿತದ ನಂಟುಗಳಿಂದ ಈ ಕೆಳಗಿನಂತೆ ತೋರಿಸಬಹುದು.

ತೂಕದ ವಸ್ತುವಿನ ಮೇಲೆ ಎರಗುವ,

ಒಟ್ಟು ಬಲ = ನೆಲಸೆಳೆತದ ಬಲ (gravitational force) – ಎಳೆತದ ಬಲ (drag force),

Fn = F1 – Fd

ಇಲ್ಲಿ, F1 = ನೆಲಸೆಳೆತದ ಬಲ, Fd = ಎಳೆತದ ಬಲ.
ಎಳೆತದ ಬಲವು ಸಾಗಾಟದ ಎದುರಾಗಿ ಕೆಲಸ ಮಾಡುವುದರಿಂದ ಕಳೆ ಗುರುತನ್ನು ಬಳಸಲಾಗಿದೆ.

>> Fn = F1 – Fd ನಂಟಿಗೆ ತೂಕದ ವಸ್ತುವಿನ ರಾಶಿ ’m1′ ನಿಂದ ಬಾಗಿಸಿದಾಗ (divide),

>> Fn/m1 = F1/m1 – Fd/m1

>> a1 = g – Fd/m1

ಇಲ್ಲಿ, a1 = ತೂಕದ ವಸ್ತುವಿನ ಒಟ್ಟಾರೆ ವೇಗಮಾರ್ಪು, g = ನೆಲಸೆಳೆತದಿಂದಾದ ವೇಗಮಾರ್ಪು

ಈ ಮೇಲಿನ ನಂಟು ನಾವು ಈ ಮೊದಲು ಕಂಡುಕೊಂಡ ವಿಷಯವನ್ನೇ ಹೇಳುತ್ತದೆ. ರಾಶಿ ಹೆಚ್ಚಿರುವ ವಸ್ತುವಿನ ಮೇಲೆ ಗಾಳಿ ಎಳೆತದ ಪರಿಣಾಮ ಕಡಿಮೆ ಇರುತ್ತದೆ ಏಕೆಂದರೆ ರಾಶಿ ಹೆಚ್ಚಿದಂತೆ ‘Fd/m1’ ನ ಬೆಲೆ ಕಡಿಮೆಯಾಗುತ್ತದೆ ಮತ್ತು ಆ ಮೂಲಕ ವಸ್ತುವಿನ ಒಟ್ಟು ವೇಗಮಾರ್ಪು ‘a1’ ಹೆಚ್ಚುತ್ತದೆ.

ಹಾಗಾಗಿ ಗಾಳಿಯ ಸುತ್ತಣವಿರುವಾಗ ತೂಕದ ವಸ್ತುವು ಹಗುರವಾದ ವಸ್ತುವಿಗಿಂತ ಬೇಗನೆ ನೆಲವನ್ನು ತಲಪುತ್ತದೆ ಮತ್ತು ಬರಿದಿನಲ್ಲಿ (vacuum) ಗಾಳಿ ಎಳೆತದ ಬಲ ಇಲ್ಲದಿರುವುದರಿಂದ, ನೆಲಸೆಳೆತದ ವೇಗಮಾರ್ಪು ಬದಲಾಗದಿರುವುದರಿಂದ ತೂಕ ಮತ್ತು ಹಗುರವಾದ ಎರಡೂ ವಸ್ತುಗಳು ಒಂದೇ ಹೊತ್ತಿಗೆ ನೆಲವನ್ನು ತಲಪುತ್ತವೆ.

ಮೊದಲ ಹಂತದ ಲೆಕ್ಕಾಚಾರಗಳ ತಿರುಳುಗಳು

ನಮಗೆ ಗೊತ್ತಿರುವಂತೆ ಕೂಡುವುದು, ಕಳೆಯುವುದು, ಗುಣಿಸುವುದು, ಭಾಗಿಸುವುದು ಮೊದಲ ಹಂತದ ಲೆಕ್ಕಾಚಾರಗಳಾಗಿವೆ (Basic Operations). ಮೊದಲ ಹಂತದ ಲೆಕ್ಕಾಚಾರ ಮಾಡುವ ಮುನ್ನ ಕೆಲವು ತಿರುಳುಗಳನ್ನು (Properties) ತಿಳಿದುಕೊಂಡರೆ ಲೆಕ್ಕ ಬಿಡಿಸುವುದು ಸುಲಭವಾಗುತ್ತದೆ. ಈ ಕೆಳಗಿನ ತಿರುಳುಗಳನ್ನು ಎಣಿಯರಿಮೆ/ಅಂಕಗಣಿತ (Arithmetic), ಬರಿಗೆಯೆಣಿಕೆಯರಿಮೆ (Algebra), ಗೆರೆಯರಿಮೆ (Geometry) ಮತ್ತು ಹಲವಾರು ಕವಲುಗಳಲ್ಲಿ ಬಳಸಬಹುದು.

1. ನೆಲೆ ಮಾರ್ಪಾಡಬಲ್ಲತನ (Commutative Property) .

ನೆಲೆ (Position/commute) ಮಾರ್ಪಾಡಬಲ್ಲತನ ಎಂದರೆ ಯಾವುದೇ ಎರಡು ಬೆಲೆಗಳನ್ನು ಕೂಡುವಾಗ ಮತ್ತು ಗುಣಿಸುವಾಗ ಅದರ ನೆಲೆ ಮಾರ್ಪಾಟು ಮಾಡಿದರೆ ದೊರೆಯುವ ಮೊತ್ತವು ಒಂದೇ ಆಗಿರುತ್ತವೆ.

Image1 MP

ಇಲ್ಲಿ a ಮತ್ತು b ಮಾರ್ಪುಕಗಳು (Variables) ಹಾಗು ಅವುಗಳು ಯಾವುದೇ ಬೆಲೆಗಳನ್ನು ಹೊಂದಿರಬಹುದು, ಅಂದರೆ ಅವುಗಳು ಇಡಿ ಅಂಕೆಗಳಾಗಿರಬಹುದು (Whole number) ಅಥವಾ ಪಾಲುಗಳಾಗಿರಬಹುದು (Fraction).

ಉದಾಹರಣೆ 1: 7 ಮತ್ತು 11 ಎಂಬ ಎರಡು ಬೆಲೆಗೆಳನ್ನು ತೆಗೆದುಕೊಳ್ಳೋಣ,

  • ಈ ಬೆಲೆಗಳನ್ನು ಒಂದಕ್ಕೊಂದು ಕೂಡಿಸಿದಾಗ 7 + 11 = 18 ಎಂಬ ಮೊತ್ತವು ದೊರೆಕಿತು.
  • ಈ ಬೆಲೆಗಳನ್ನು ನೆಲೆಮಾರ್ಪಾಟು ಮಾಡಿ ಕೂಡೋಣ 11 + 7 = 18 ಎಂಬ ಮೊತ್ತವು ದೊರೆಕಿತು, ಮೊದಲು ದೊರೆತ ಮೊತ್ತ ಮತ್ತು ನೆಲೆಮಾರ್ಪಾಟು ಮಾಡಿ ಕೂಡಿದ ಮೊತ್ತ ಒಂದೇ ಆಗಿದೆ.

7 + 11 = 11 + 7 = 18

ಉದಾಹರಣೆ 2:  ಕೆಳಗಿನ ಚಿತ್ರದಲ್ಲಿ ಹಸಿರು ಚೆಂಡುಗಳನ್ನು ಮತ್ತು ಕೆಂಪು ಚೆಂಡುಗಳನ್ನು ಹಾಕಲಾಗಿದೆ, ಮೊದಲು ಹಸಿರು ಚೆಂಡುಗಳನ್ನು ಹಾಕಿ ನಂತರದಲ್ಲಿ ಕೆಂಪು ಚೆಂಡುಗಳನ್ನು ಹಾಕಿದಾಗ ಮತ್ತು ಮೊದಲು ಹಾಕಿದ ಚೆಂಡುಗಳನ್ನೆಲ್ಲಾ ತೆಗೆದು ಎರಡನೇ ಸಲ ಕೆಂಪು ಚೆಂಡುಗಳನ್ನು ಹಾಕಿ ನಂತರದಲ್ಲಿ ಹಸಿರು ಚೆಂಡುಗಳನ್ನು ಹಾಕಿದಾಗ ದೊರೆತ ಮೊತ್ತ ಒಂದೇ ಎಂದು ನೆಲೆ ಮಾರ್ಪಾಡಬಲ್ಲತನವನ್ನು ಬಳಸಿ ತೋರಿಸಿ.

Image3 MP

  • ಮೊದಲು ಕೆಂಪು ಚೆಂಡುಗಳನ್ನು ಹಾಕಿ ನಂತರದಲ್ಲಿ ಹಸಿರು ಚೆಂಡುಗಳನ್ನು ಹಾಕಿದಾಗ:

ಕೆಂಪು ಚೆಂಡುಗಳು(3) + ಹಸಿರು ಚೆಂಡುಗಳು(16) = ಚೀಲದಲ್ಲಿರುವ ಒಟ್ಟು ಚೆಂಡುಗಳು(19).

  • ಮೊದಲು ಹಾಕಿದ ಚೆಂಡುಗಳನ್ನೆಲ್ಲಾ ತೆಗೆದು ಎರಡನೇ ಸಲ ಕೆಂಪು ಚೆಂಡುಗಳನ್ನು ಹಾಕಿದಾಗ;

ಹಸಿರು ಚೆಂಡುಗಳು(16) +  ಕೆಂಪು ಚೆಂಡುಗಳು(3) = ಚೀಲದಲ್ಲಿರುವ ಒಟ್ಟು ಚೆಂಡುಗಳು(19).

  • ಮೇಲೆ ತೋರಿಸಿದಂತೆ ಮೊದಲನೇ ಸಲ ಮತ್ತು ಎರಡನೇ ಸಲ ಚೆಂಡುಗಳನ್ನು ಹಾಕಿದಾಗ ದೊರೆತ ಮೊತ್ತ ಒಂದೇ ಹಾಗಾಗಿ ಇದು ನೆಲೆ ಮಾರ್ಪಾಡಬಬಲ್ಲತನವನ್ನು ಹೊಂದಿದೆ.

3 + 16 = 16 + 3 = 19

ಉದಾಹರಣೆ 3: 15 ಮತ್ತು 5 ಎಂಬ ಎರಡು ಬೆಲೆಗೆಳನ್ನು ತೆಗೆದುಕೊಳ್ಳೋಣ,

  • ಈ ಬೆಲೆಗಳನ್ನು ಒಂದಕ್ಕೊಂದು ಗುಣಿಸಿದಾಗ 15 x 5 = 75 ಎಂಬ ಮೊತ್ತವು ದೊರೆಕಿತು.
  • ಈ ಬೆಲೆಗಳನ್ನು ನೆಲೆಮಾರ್ಪಾಟು ಮಾಡಿ ಗುಣಿಸೋಣ 5 x 15 = 75 ಎಂಬ ಮೊತ್ತವು ದೊರೆಕಿತು, ಮೊದಲು ದೊರೆತ ಮೊತ್ತ ಮತ್ತು ನೆಲೆಮಾರ್ಪಾಟು ಮಾಡಿ ಗುಣಿಸಿದ ಮೊತ್ತ ಒಂದೇ ಆಗಿವೆ.

15 x 5 = 5 x 15 = 75

 

ನೆಲೆ ಮಾರ್ಪಾಡಬಲ್ಲತನ ಕಳೆಯುವುದಕ್ಕೆ ಮತ್ತು ಭಾಗಿಸುವುದಕ್ಕೆ ಹೊಂದುವುದಿಲ್ಲ, ಆದರೆ ಕೂಡುವುದಕ್ಕೆ ಮತ್ತು ಗುಣಿಸುವುದಕ್ಕೆ ಸರಿಹೊಂದುತ್ತದೆ

 

Image2 MP

ಉದಾಹರಣೆ 4: 20 ಮತ್ತು 6 ಎಂಬ ಎರಡು ಬೆಲೆಗೆಳನ್ನು ತೆಗೆದುಕೊಳ್ಳೋಣ,

  • ಈ ಬೆಲೆಗಳನ್ನು ಒಂದಕ್ಕೊಂದು ಕಳೆದಾಗ 20 – 6 = 14 ಎಂಬ ಮೊತ್ತವು ದೊರೆಕಿತು.
  • ಈ ಬೆಲೆಗಳನ್ನು ನೆಲೆಮಾರ್ಪಾಟು ಮಾಡಿ ಕಳೆಯೋಣ 6 – 20 = -14 ಎಂಬ ಮೊತ್ತವು ದೊರೆಕಿತು, ಮೊದಲು ದೊರೆತ ಮೊತ್ತ ಮತ್ತು ನೆಲೆಮಾರ್ಪಾಟು ಮಾಡಿ ಕಳೆದ ಮೊತ್ತ ಬೇರೆ ಬೇರೆ ಆಗಿವೆ.

20 – 6 6 – 20

ಉದಾಹರಣೆ 5: 20 ಮತ್ತು 4 ಎಂಬ ಎರಡು ಬೆಲೆಗೆಳನ್ನು ತೆಗೆದುಕೊಳ್ಳೋಣ,

  • ಈ ಬೆಲೆಗಳನ್ನು ಒಂದಕ್ಕೊಂದು ಭಾಗಿಸಿದಾಗ 20/4 = 5 ಎಂಬ ಮೊತ್ತವು ದೊರೆಕಿತು.
  • ಈ ಬೆಲೆಗಳನ್ನು ನೆಲೆಮಾರ್ಪಾಟು ಮಾಡಿ ಭಾಗಿಸಿದಾಗ 4/20 = 1/5 = 0.2 ಎಂಬ ಮೊತ್ತವು ದೊರೆಕಿತು, ಮೊದಲು ದೊರೆತ ಮೊತ್ತ ಮತ್ತು ನೆಲೆಮಾರ್ಪಾಟು ಮಾಡಿ ಭಾಗಿಸಿದ ಮೊತ್ತ ಬೇರೆ ಬೇರೆ ಆಗಿವೆ,

20 /4 4/20

  1. ಗುಂಪು ಮಾರ್ಪಾಡಬಲ್ಲತನ (Associative property).

ಗುಂಪು ಮಾರ್ಪಾಡಬಲ್ಲತನ ಎಂದರೆ ಯಾವುದೇ ಒಂದಿಷ್ಟು ಬೆಲೆಗಳನ್ನು ಕೂಡುವಾಗ ಮತ್ತು ಗುಣಿಸುವಾಗ ಅದರ

ಗುಂಪು ಮಾರ್ಪಾಟು ಮಾಡಿದರೆ ದೊರೆಯುವ ಮೊತ್ತವು ಒಂದೇ ಆಗಿರುತ್ತವೆ.

Image4 MP

ಇಲ್ಲಿ a, b ಮತ್ತು c ಮಾರ್ಪುಕಗಳು (Variables) ಹಾಗು ಅವುಗಳು ಯಾವುದೇ ಬೆಲೆಗಳನ್ನು ಹೊಂದಿರಬಹುದು.

ಅಂದರೆ ಅವುಗಳು ಇಡಿ ಅಂಕೆಗಳಾಗಿರಬಹುದು (Whole numbers) ಅಥವಾ ಪಾಲುಗಳಾಗಿರಬಹುದು (Fractions).

ಉದಾಹರಣೆ 1: 8, 7 ಮತ್ತು 4 ಎಂಬ ಬೆಲೆಗೆಳನ್ನು ತೆಗೆದುಕೊಳ್ಳೋಣ,

  • ಮೊದಲ ಎರಡು ಬೆಲೆಗಳನ್ನು ಗುಂಪಾಗಿಸೋಣ ನಂತರದಲ್ಲಿ ಗುಂಪಿಗೆ ಮೂರನೇ ಬೆಲೆಯನ್ನು ಕೂಡೋಣ.

(8 + 7) + 4 = 15 + 4 = 19

  • ಮೊದಲ ಬೆಲೆಗೆ ಕೊನೆಯ ಎರಡು ಬೆಲೆಗಳನ್ನು ಗುಂಪಾಗಿಸಿ ಕೊಡೋಣ.

8 + (7 + 4) = 8 + 11 = 19

  • ಮೊದಲು ದೊರೆತ ಮೊತ್ತ ಮತ್ತು ಗುಂಪು ಮಾರ್ಪಾಟು ಮಾಡಿ ಕೂಡಿದ ಮೊತ್ತ ಒಂದೇ ಆಗಿದೆ.

(8 + 7) + 4 = 8 + (7 + 4) = 19

ಉದಾಹರಣೆ 2: 2.2, 5.5 ಮತ್ತು 6.6 ಎಂಬ ಬೆಲೆಗೆಳನ್ನು ತೆಗೆದುಕೊಳ್ಳೋಣ,

  • ಮೊದಲ ಎರಡು ಬೆಲೆಗಳನ್ನು ಗುಂಪಾಗಿಸೋಣ ನಂತರದಲ್ಲಿ ಗುಂಪಿಗೆ ಮೂರನೇ ಬೆಲೆಯನ್ನು ಗುಣಿಸೋಣ.

(2.2 x 5.5)  x 6.6 = 12.1 x 6.6 = 79.86

  • ಮೊದಲ ಬೆಲೆಗೆ ಕೊನೆಯ ಎರಡು ಬೆಲೆಗಳನ್ನು ಗುಂಪಾಗಿಸಿ ಗುಣಿಸೋಣ

2.2 x (5.5 x 6.6) = 2.2 x 36.3  = 79.86

  • ಮೊದಲು ದೊರೆತ ಮೊತ್ತ ಮತ್ತು ಗುಂಪು ಮಾರ್ಪಾಟು ಮಾಡಿ ಗುಣಿಸಿದ ಮೊತ್ತ ಒಂದೇ ಆಗಿದೆ.

(2.2 x 5.5)  x 6.6 = 2.2 x (5.5 x 6.6) = 79.86

 ಗುಂಪು ಮಾರ್ಪಾಡಬಲ್ಲತನ ಕಳೆಯುವುದಕ್ಕೆ ಮತ್ತು ಭಾಗಿಸುವುದಕ್ಕೆ ಹೊಂದುವುದಿಲ್ಲ, ಆದರೆ ಕೂಡುವುದಕ್ಕೆ ಮತ್ತು ಗುಣಿಸುವುದಕ್ಕೆ ಸರಿಹೊಂದುತ್ತದೆ

 

Image5 MP

ಉದಾಹರಣೆ 3:4 2 1 ಎಂಬ ಲೆಕ್ಕವನ್ನು ತೆಗೆದುಕೊಳ್ಳೋಣ,

  • ಲೆಕ್ಕದ ಮೊದಲ ಎರಡು ಬೆಲೆಗಳನ್ನು ಗುಂಪಾಗಿಸೋಣ ನಂತರದಲ್ಲಿ ಗುಂಪಿಗೆ ಮೂರನೇ ಬೆಲೆಯನ್ನು ಕಳೆಯೋಣ.

(4 – 2 ) – 1 = 2 – 1 = 1

  • ಲೆಕ್ಕದ ಮೊದಲ ಬೆಲೆಗೆ ಕೊನೆಯ ಎರಡು ಬೆಲೆಗಳನ್ನು ಒಡ ಗುಂಪು ಮಾರ್ಪಾಟು ಮಾಡಿ ಕೆಳೆಯೋಣ.

4 – (2 – 1) = 4 – 1 = 3

  • ಮೊದಲು ದೊರೆತ ಮೊತ್ತ ಮತ್ತು ಗುಂಪು ಮಾರ್ಪಾಟು ಮಾಡಿದ ನಂತರದ ಮೊತ್ತ ಬೇರೆ ಬೇರೆ ಆಗಿವೆ.

(4 – 2 ) – 1 4 – (2 – 1),

ಉದಾಹರಣೆ 4: 9, 6 ಮತ್ತು 12 ಎಂಬ ಬೆಲೆಗೆಳನ್ನು ತೆಗೆದುಕೊಳ್ಳೋಣ,

  • ಮೊದಲ ಎರಡು ಬೆಲೆಗಳನ್ನು ಗುಂಪಾಗಿಸೋಣ ನಂತರದಲ್ಲಿ ಗುಂಪಿಗೆ ಮೂರನೇ ಬೆಲೆಯನ್ನು ಭಾಗಿಸೋಣ.

(9/6)/12 = (3/2)/12 = 3/24

  • ಮೊದಲ ಬೆಲೆಗೆ ಕೊನೆಯ ಎರಡು ಬೆಲೆಗಳನ್ನು ಗುಂಪಾಗಿಸಿ ಭಾಗಿಸೋಣ.

9/(6/12) = 9/(1/2) = 18

  • ಮೊದಲು ದೊರೆತ ಮೊತ್ತ ಮತ್ತು ಗುಂಪು ಮಾರ್ಪಾಟು ಮಾಡಿ ಗುಣಿಸಿದ ಮೊತ್ತ ಬೇರೆ ಬೇರೆ ಆಗಿದೆ.

(9/6)/12  9/(6/12)

3. ಹಂಚಬಲ್ಲ ಕಟ್ಟಳೆ (Distributive property)

ಒಂದು ಗುಂಪಿನಲ್ಲಿರುವ ಬೆಲೆಗಳಿಗೆ ಇನ್ನೊಂದು ಬೆಲೆಯಿಂದ ಗುಣಿಸಿ ಹಂಚಬಹುದು.

Image6 MP

ಇಲ್ಲಿ a, b, c ಮತ್ತು d ಮಾರ್ಪುಕಗಳು (Variables) ಹಾಗು ಅವುಗಳು ಯಾವುದೇ ಬೆಲೆಗಳನ್ನು ಹೊಂದಿರಬಹುದು.

ಉದಾಹರಣೆ 1:  ‘2 x (4 + 8 + 16)’  ಇದನ್ನು ಹಂಚಬಲ್ಲ ಕಟ್ಟಳೆಯಲ್ಲಿ ಬಿಡಿಸಿರಿ.

ಇದನ್ನು ಹಂಚಬಲ್ಲ ಕಟ್ಟಳೆಯಲ್ಲಿ ಬಿಡಿಸಿ ಬರೆದಾಗ

 2 x (4 + 8 + 16) = 2 x 4 + 2 x 8 + 2 x 16 =8 + 16 + 32 =56

ಉದಾಹರಣೆ2 : (10 6 + 2 3) x 5 ಇದನ್ನು ಹಂಚಬಲ್ಲ ಕಟ್ಟಳೆಯಲ್ಲಿ ಬಿಡಿಸಿರಿ.

ಇದನ್ನು ಹಂಚಬಲ್ಲ ಕಟ್ಟಳೆಯಲ್ಲಿ ಬಿಡಿಸಿ ಬರೆದಾಗ

(10 6 + 2 3) x 5 = 10 x 5 6 x 5 + 2 x 5 3 x 5 = 50 30 + 10 15 = 15

ನಿಮ್ಮ ಅರಿವಿಗೆ: ಗುಂಪಿನ ಒಳಗೆ ಯಾವ ಗುರುತುಗಳಿವೆಯೋ ( – , +, x, / ) ಅದೇ ಗುರುತನ್ನು ಹಂಚಿ ಗುಣಿಸುವಾಗ ಉಳಿಸಿಕೊಳ್ಳಬೇಕು.

ಮೇಲೆ ಹೇಳಿದ ಮೂರು ಕಟ್ಟಳೆಗಳನ್ನು ಕೆಳಗಿನ ಚಿತ್ರದಂತೆ ತೋರಿಸೋಣ

  • ಹಂಚಬಲ್ಲ ಕಟ್ಟಳೆಯನ್ನು ಹೀಗೆ ತೋರಿಸಬಹುದು (Distributive Property)

 Image7 MP

  • ಗುಂಪು ಮಾರ್ಪಾಡಬಲ್ಲತನವನ್ನು ಹೀಗೆ ತೋರಿಸಬಹುದು (Associative Property)

Image8 MP

  • ನೆಲೆ ಮಾರ್ಪಾಡಬಲ್ಲತನವನ್ನು ಹೀಗೆ ತೋರಿಸಬಹುದು (Commutative Property)

Image9 MP

(ಸೆಲೆಗಳು: www.mathsisfun.com, wikipedia)