ಮನುಷ್ಯರು ಸಸ್ಯಗಳಂತೆ ಆಗಬಹುದೇ?

(ಇಗೋ ವಿಜ್ಞಾನ 2020 ಪೈಪೋಟಿಯಲ್ಲಿ ಮೆಚ್ಚುಗೆ ಪಡೆದ ಬರಹ)

ಡಾ. ಎ. ಮಹಾದೇವ.
(ವಿಜ್ಞಾನಿ, ಕರ್ನಾಟಕ ರಾಜ್ಯ ರೇಷ್ಮೆ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ KSSRDI,
ತಲಘಟ್ಟಪುರ, ಬೆಂಗಳೂರು)

ಸಸ್ಯಗಳಿಗೂ ಹಾಗೂ ಪ್ರಾಣಿಗಳಿಗೂ ಇರುವ ವ್ಯತ್ಯಾಸವೇನು? ಎನ್ನುವ ಪ್ರಶ್ನೆಗೆ ಥಟ್ ಅಂತ ಬರುವ ಉತ್ತರ, ಸಸ್ಯಗಳಲ್ಲಿ ಪತ್ರಹರಿತ್ತಿನ (chlorophyll) ಸಹಾಯದಿಂದ ದ್ಯುತಿಸಂಶ್ಲೇಷಣೆ ಕ್ರಿಯೆ (photosynthesis) ನಡೆಯುತ್ತದೆ. ಇದರಿಂದ ಸಸ್ಯಗಳು ಸೂರ್ಯನ ಬೆಳಕಿನ ಸಹಾಯದಿಂದ ಗಾಳಿ ಮತ್ತು ನೀರನ್ನು ಬಳಸಿ ತಮ್ಮ ಆಹಾರವನ್ನು ತಾವೇ ಉತ್ಪಾದಿಸಿಕ್ಕೊಳ್ಳುತ್ತವೆ. ಪ್ರಾಣಿಗಳ್ಳಲ್ಲಿ ಪತ್ರಹರಿತ್ತು ಇಲ್ಲದೆ ಇರುವದರಿಂದ ಅವುಗಳು ದ್ವಿತಿಸಂಶ್ಲೇಷಣೆ ಕ್ರಿಯೆ ನಡಿಸಿ ತಮ್ಮ ಆಹಾರವನ್ನು ತಾವೇ ಉತ್ಪಾದಿಸಿಕ್ಕೊಳ್ಳಲಾರವು ಎಂಬುದಲ್ಲವೇ?. ಹೌದು, ಇದು ಅಕ್ಷರ ಸಹ ಸತ್ಯ.

ಸಮುದ್ರದಲ್ಲಿ ಇರುವ ಸೂಕ್ಶ್ಮಾಣುವಿನಿಂದ ಹಿಡಿದು ಅಮೆಜಾನ್ ನಲ್ಲಿನ ದೈತ್ಯಾಕಾರದ ಮರಗಳವರೆಗೂ ಪತ್ರಹರಿತ್ತು ಇರುವುದರಿಂದಲೇ ಅವುಗಳು ಸೂರ್ಯನ ಬೆಳಕು, ಇಂಗಾಲದ ಡೈಆಕ್ಸೈಡ್ ಹಾಗೂ ನೀರಿನ ಸಹಾಯದಿಂದ ತಮಗೆ ಬೇಕಾದ ಆಹಾರವನ್ನು ತಾವೇ ತಯಾರಿಸಿಕ್ಕೊಳ್ಳುತ್ತವೆ. ಇದೇ ಜೀವ ಸಂಕುಲ ಸೃಷ್ಟಿಯ ಮೂಲ ಹಾಗೂ ವ್ಯವಿಧ್ಯತೆಯ ಉಸಿರು.

ಮನುಷ್ಯರು ಸೇರಿದಂತೆ ಯಾವ ಜೀವಸಂಕುಲಗಳಲ್ಲಿ ಪತ್ರಹರಿತ್ತು ಇರುವುದಿಲ್ಲವೋ ಅವುಗಳು ತಮ್ಮ ಆಹಾರಕ್ಕಾಗಿ ಸಸ್ಯಗಳ ಮೇಲೆ ಅವಲಂಬಿತವಾಗಿವೆ. ಹಾಗಿದ್ದರೆ, ಜೀವಿಗಳ ವಿಕಸನದ ಹಾದಿಯಲ್ಲಿ ಸಸ್ಯಗಳ್ಳಲ್ಲಿ ಈ ಪತ್ರಹರಿತ್ತು ಹೇಗೆ ಬಂತು? ಇದು ಪ್ರಾಣಿಗಳಲ್ಲಿ ಯಾಕೆ ಇಲ್ಲ? ಎನ್ನುವ ವಾದಕ್ಕೆ, ಜೀವ ವಿಜ್ಞಾನಿಗಳು ಹೇಳುವ ಪ್ರಕಾರ ಸುಮಾರೂ 1000 ಮಿಲಿಯನ್ ವರ್ಷಗಳ ಹಿಂದೆ ಸೈನೋಬ್ಯಾಕ್ಟೀರಿಯಾ (Cyanobacteria) ಮೂಲತಃ ಪತ್ರಹರಿತ್ತು ಹೊಂದಿದ್ದ ಏಕಕೋಶಜೀವಿಗಳು.

ಇವುಗಳು ಮತ್ತೊಂದು ಏಕಕೋಶ ಜೀವಿಯೆಯೊಳಗೆ ಸೇರಿಕೊಂಡು ಪರಸ್ಪರ ಸಹಾಯದೊಂದಿಗೆ ಬದುಕಲು ಪ್ರಾರಂಭಿಸಿ ಕೊನೆಗೆ ಒಂದನ್ನು ಬಿಟ್ಟು ಇನ್ನೊಂದು ಬದುಕಲು ಅಸಾಧ್ಯವಾದ ಹಂತಕ್ಕೆ ತಲುಪಿದವು. ತದನಂತರ ನಡೆದ ವ್ಯವಿಧ್ಯತೆಯ ವಿಕಸನ ಹಾಗೂ ಅಭಿವೃದ್ಧಿಯ ಫಲವಾಗಿ ಇಂದು ಇಷ್ಟೊಂದು ಎಣಿಕೆಗೆ ಸಿಗದಷ್ಟು ವಿವಿಧ ಪ್ರಭೇಧಗಳನ್ನು ಕಾಣುತ್ತಿದ್ದೇವೆ. ಹಾಗಿದ್ದರೆ, ಈ ಸೈನೋಬ್ಯಾಕ್ಟೀರಿಯಾಗಳು ಪ್ರಾಣಿಗಳಲ್ಲಿ ವಿಕಸನದ ಹಾದಿಯಲ್ಲಿ ಯಾಕೆ ಸೇರಿಕೊಂಡಿಲ್ಲಾ? ಎನ್ನುವ ಮತ್ತ್ತೊಂದು ಪ್ರಶ್ನೆ ಎದುರಾಗಬಹುದು.

ಅದಕ್ಕೆ ಇತ್ತೀಚಿಗೆ ಅಮೇರಿಕಾದ ಮೈನೆ ವಿಶ್ವವಿದ್ಯಾಲಯದ ಮೇರಿ ರುಮ್ಫೋ (Mery Rumpho) ಅವರು ಅಮೇರಿಕಾದ ಪೂರ್ವ ಕಡಲಿನಲ್ಲಿ ವಾಸಿಸುವ ಎಲಿಸಿಯ ಕ್ಲೋರೊಟಿಕ (Elysia chlorotica) ಎನ್ನುವ ಎಳೆಯಾಕಾರದ ಮೊಲುಸ್ಕ್ಯಾ (Molusca) ಜಾತಿಗೆ ಸೇರಿದ ಸಣ್ಣ ಸಮುದ್ರ ಹುಳುವಿನಲ್ಲಿ (sea slug) (ಚಿತ್ರ – 1 & 2) ಒಂದು ವಿಚಿತ್ರವಾದ ಸ್ವಭಾವ ಗಮನಿಸಿದರು.

ಅದೇನೆಂದರೆ ಈ ಎಲಿಸಿಯ ಕ್ಲೋರೊಟಿಕಗೆ ಯಾವುದೇ ರೀತಿಯ ಆಹಾರ ಕೊಡದೆ ಇದ್ದರೂ ಸಹ ಅದು ಸುಮಾರು 9 ರಿಂದ 10 ತಿಂಗಳುಗಳ ಕಾಲ ಆರಾಮವಾಗಿ ಬದುಕುತ್ತಿತ್ತು. ಮೇರಿಯವರು ಇದನ್ನು ಇನ್ನಷ್ಟು ಸಂಶೋಧನೆಗೆ ಒಳಪಡಿಸಿದ ನಂತರ ಅವರಿಗೆ ವಿಸ್ಮಯವೊಂದು ಕಾದಿತ್ತು, ಎಲಿಸಿಯ ಕ್ಲೋರೊಟಿಕನ ಮುಖ್ಯ ಆಹಾರ ಸಮುದ್ರದ ಪಾಚಿ. ಈ ಪಾಚಿಯಲ್ಲಿ ಇರುವ ಪತ್ರಹರಿತ್ತನ್ನು ಎಲಿಸಿಯ ಕ್ಲೋರೊಟಿಕವೂ ಹೀರಿಕೊಂಡು ತನ್ನ ಜಠರದ ಜೀವಕೋಶಗಳಲ್ಲಿ ಅದಕ್ಕೆ ಯಾವುದೇ ಹಾನಿಯಾಗದಂತೆ ಶೇಖರಿಸಿ ಇಟ್ಟುಕೊಳ್ಳುತ್ತದೆ.

1(ಚಿತ್ರ – 1)

2(ಚಿತ್ರ – 2)

ಎಲಿಸಿಯ ಕ್ಲೋರೊಟಿಕದ ಜೀವಕೋಶ ಸೇರಿದ ಪಾಚಿಯ ಪತ್ರಹರಿತ್ತು ಯಾವುದೇ ಅಡೆತಡೆ ಇಲ್ಲದೆ ತನ್ನ ದ್ಯುತಿಸಂಶ್ಲೇಷಣೆ ಕ್ರಿಯೆಯನ್ನು ಮುಂದುವರಿಸುತ್ತದೆ. ಇದರಿಂದ ಉತ್ಪತಿಯಾಗುವ ಆಹಾರವನ್ನು ಎಲಿಸಿಯ ಕ್ಲೋರೊಟಿಕವು ಸಮರ್ಥವಾಗಿ ತನ್ನ ಉಳಿವಿಗಾಗಿ ಉಪಯೋಗಿಸಿಕೊಳ್ಳುತ್ತದೆ. ಅಂದರೆ ಪ್ರಾಣಿಯ ಉದರದಲ್ಲಿ ಪತ್ರಹರಿತ್ತು ಇರುವುದರಿಂದ ಪ್ರಾಣಿಯೂ ಸಹ ಸಸ್ಯಗಳಂತೆ ಜೀವಿಸುತ್ತಿದೆ. ಜೀವ ವಿಕಸನದ ಹಾದಿಯಲ್ಲಿ ಸಸ್ಯಗಳು ಮತ್ತು ಪ್ರಾಣಿಗಳು ಬೇರ್ಪಡುವ ಸಂದರ್ಭದಲ್ಲಿ ಈ ಮೊಲಾಸ್ಕಗಳು ಕೊಂಡಿಯೆಂದೇ ಹೇಳಬಹುದು. ಈ ರೀತಿಯ ಇನ್ನೂ ಅನೇಕ ಪ್ರಾಣಿಗಳು ಸಮುದ್ರದಲ್ಲಿ ಇರಬಹುದು ಎನ್ನುವುದನ್ನು ತಳ್ಳಿಹಾಕುವಂತಿಲ್ಲ.

ಎಲಿಸಿಯ ಕ್ಲೋರೊಟಿಕದ ಕಥೆ ಇದಾದರೇ, ಕೀಟ ಪ್ರಭೇಧದ ಹೇನು (ಏಫಿಡ್) (Pea aphid, Acyrthosiphon pisum) (ಚಿತ್ರ – 3) ಕೀಟದ್ದು ಬೇರೆಯೇ ವಿಚಿತ್ರವಾದ ಕಥೆ.‌ ಪ್ರೌಢಾವಸ್ಥೆಯ ಕೀಟವು ಕೇವಲ 4 ಮಿಮಿ ಇದ್ದು ಸಸ್ಯಗಳಿಂದ ರಸವನ್ನು ಹೀರುತ್ತ ತನ್ನ ಆಹಾರದ ಅವಶ್ಯಕತೆಯನ್ನು ಪೂರೈಸಿಕೊಳ್ಳುತ್ತದೆ. ಇದಲ್ಲದೆ ಕೀಟ ಜಾತಿಗಳಲ್ಲಿಯೇ ಈ ಏಫಿಡ್‌ಗಳದ್ದು ವಿಶಿಷ್ಟವಾದ ನಡವಳಿಕೆ. ಅದೇನೆಂದರೆ, ಸೂರ್ಯನ ಬೆಳಕಿನ ಶಕ್ತಿಯಿಂದ ತನ್ನ ಚಯಾಪಚಯ (metabolism) ಕ್ರಿಯೆಗೆ ಬೇಕಾಗುವ ಜೈವಿಕ ಶಕ್ತಿಯನ್ನು (ATP) ಉತ್ಪತ್ತಿ ಮಾಡಿಕ್ಕೊಳ್ಳುತ್ತದೆ. ಹೇನುಗಳಲ್ಲಿನ ವಿವಿಧ ಬಗೆಯ ಬಣ್ಣಗಳ ಮೂಲ ಹುಡುಕಲು ಹೊರಟ ಆರಿಝೊನಾ ವಿಶ್ವವಿದ್ಯಾಲಯದ ಮೋರಾನ್‌ ಮತ್ತು ಜೆರ್ವೀಕ್‌ ವಿಜ್ಞಾನಿಗಳಿಗೆ ಆಶ್ಚರ್ಯಕರ ರೀತಿಯಲ್ಲಿ ಕೆರಾಟಿನಾಯ್ಡ್ಸ್‌ಗಳು (caroteinoids) ಪತ್ತೆಯಾದವು.

3(ಚಿತ್ರ – 3)

ದ್ಯುತ್ತಿಸಂಷ್ಲೇಷಣೆಗೆ ಕಾರಣವಾದ ವಿವಿಧ ಬಗೆಯ ಪತ್ರಹರಿತ್ತಿನಲ್ಲಿ (chlorophyll) ಕೆರಾಟಿನಾಯ್ಡ್ಸ್‌ ಸಹ ಒಂದು ಬಗೆ. ಹಲವಾರು ಜೀವಿಗಳಲ್ಲಿನ ದ್ಯುತ್ತಿಸಂಷ್ಲೇಷಣೆ ಕ್ರಿಯೆಗೆ ಈ ಕೆರಾಟಿನಾಯ್ಡ್ಸ್‌ಗಳೇ ಮೂಲ. ಅದಲ್ಲದೆ, ಕೆರಾಟಿನಾಯ್ಡ್ಸ್‌ಗಳು ಪ್ರಾಣಿಗಳಲ್ಲಿನ ರೋಗ ನಿರೋಧಕ (immunity) ಶಕ್ತಿಯ ನಿರ್ವಹಣೆ, ಮೂಳೆಗಳ ಬೆಳವಣಿಗೆಗೆ ಮತ್ತು ವಿಟಿಮಿನ್‌ಗಳ ಉತ್ಪಾದನೆಗೆ ಮಹತ್ತರವಾದ ಕೊಡುಗೆ ನೀಡುತ್ತದೆ. ಆದರೇ, ಪ್ರಾಣಿಗಳು ತಮಗೆ ಅವಶ್ಯಕವಿರುವ ಕೆರಾಟಿನಾಯ್ಡ್ಸ್‌ಗಳನ್ನು ತಾವು ತೆಗೆದುಕೊಳ್ಳುವ ಆಹಾರದಿಂದ ಪಡೆಯುತ್ತವೆ. ಉದಾಹರಣೆಗೆ ಕ್ಯಾರೆಟ್‌ನಲ್ಲಿ ಬೀಟಾ-ಕೆರಾಟಿನಾಯ್ಡ್ಸ್‌ಗಳು ಯಥೇಚ್ಚವಾಗಿ ಇರುತ್ತದೆ. ಆದರೇ, ಹೇನು ಕೀಟ ಮಾತ್ರ ಈ ಕೆರಾಟಿನಾಯ್ಡ್ಸ್‌ಗಳನ್ನು ತಾನೇ ಉತ್ಪತ್ತಿ ಮಾಡಿಕೊಳ್ಳುತ್ತದೆ. ಅದಕ್ಕೆ ಬೇಕಾಗುವಂತಹ ಜೀನ್ಸ್ ಗಳನ್ನು ಜೀವ ವಿಕಸನದ ಕಾಲಘಟ್ಟದಲ್ಲಿ ಶೀಲಿಂದ್ರಗಳಿಂದ ಪಡೆದು ಅವುಗಳನ್ನು ಶಾಶ್ವತವಾಗಿ ತಮ್ಮ ಜೀನೋಮ್ ಗಳಲ್ಲಿ ಸೇರಿಸಿಕೊಂಡು ಕೆರಾಟಿನಾಯ್ಡ್ಸ್‌ಗಳನ್ನು ಉತ್ಪತ್ತಿ ಮಾಡಿಕೊಳ್ಳುತ್ತದೆ ಎಂದು ಮೋರಾನ್‌ ಮತ್ತು ಜೆರ್ವೀಕ್‌ ವಿಜ್ಞಾನಿಗಳ ಅಭಿಪ್ರಾಯ.

ಫ್ರಾನ್ಸಿನ ಸೋಫಿಯಾ ಅಗ್ರೊಬಯೋಟಿಕ್‌ ಇನ್ಸ್ಟಿಟ್ಯೂಟ್ ನ ಅಲೈನ್‌ ರಾಬಿಚೋನ್‌ ( Alain Robichon) ಅವರ ತಂಡ ಏಫಿಡ್ಸ್‌ಗಳಲ್ಲಿ ಇರುವ ಈ ಕೆರಾಟಿನಾಯ್ಡ್ಸ್‌ಗಳು ಸೂರ್ಯನ ಬೆಳಕನ್ನು ಉಪಯೊಗಿಸಿ ನೇರವಾಗಿ ಚಯಾಪಚಯ ಕ್ರಿಯೆಗೆ ಬೇಕಾದ ಜೈವಿಕ ಶಕ್ತಿಯನ್ನು ಉತ್ಪತ್ತಿ ಮಾಡುತ್ತದೆ ಎನ್ನುವುದನ್ನು ಕಂಡು ಹಿಡಿದಿದ್ದಾರೆ. ಹೇಗೆ ಸಸ್ಯಗಳು ತಮಗೆ ಬೇಕಾದ ಆಹಾರವನ್ನು ದ್ಯುತಿಸಂಶ್ಲೇಷಣೆ ಕ್ರಿಯೆಯಿಂದ ಉತ್ಪತ್ತಿ ಮಾಡಿಕೊಳ್ಳಲು ಅವಶ್ಯಕವಾದ ಜೈವಿಕ ರಚನೆಯನ್ನು ಹೊಂದಿರುವವೋ ಅದೇ ರೀತಿ ಪ್ರಾಣಿ ಸಂಕುಲಕ್ಕೆ ಸೇರಿದ ಹೇನು ಕೀಟವು ಸಹ ಪ್ರಾಥಮಿಕ ಹಂತದ ಜೈವಿಕ ರಚನೆಯನ್ನು ಹೊಂದಿದೆ. ಅಂದರೇ, ಪ್ರಾಣಿಗಳು ಸಹ ದ್ಯುತಿಸಂಶ್ಲೇಷಣೆಗೆ ಬೇಕಾದ ಪತ್ರಹರಿತ್ತು ಹಾಗೂ ಅದಕ್ಕೆ ಸಂಬಂಧಿಸಿದ ಜೈವಿಕ ರಚನೆಯನ್ನು ಹೊಂದಿದ್ದರೆ ಆಹಾರಕ್ಕಾಗಿ ಸಸ್ಯಗಳನ್ನು ಅವಲಂಬಿಸದೇ, ತಮಗೆ ಬೇಕಾದ ಆಹಾರವನ್ನು ದ್ಯುತಿಸಂಶ್ಲೇಷಣೆ ಕ್ರಿಯೆಯಿಂದ ಉತ್ಪತ್ತಿ ಮಾಡಿಕೊಳ್ಳಬಹುದು.

4(ಚಿತ್ರ – 4)

ಇದೇ ರೀತಿಯ ವಿಸ್ಮಯಕಾರಿಯಾದ ಚುಕ್ಕೆಗಳುಳ್ಳ ಸಾಲಾಮಂಡರ್‌ನ (ಚಿತ್ರ – 4) ಮೊಟ್ಟೆಗಳಲ್ಲಿನ (ಚಿತ್ರ – 5) ಜೀವಕೋಶಭೀತ್ತಿಗಳಲ್ಲಿ ಪತ್ರಹರಿತ್ತನ್ನು ಹೊಂದಿರುವ ಆಲ್ಗೆಗಳು ಕಂಡುಬಂದಿರುತ್ತದೆ. ಈ ಆಲ್ಗೆಗಳು ಮೊಟ್ಟೆಯ ಜೀವಕೋಶಗಳಿಗೆ ಗ್ಲುಕೋಸ್‌ ಅನ್ನು ಒದಗಿಸಬಲ್ಲವೇ ಎನ್ನುವ ಸಂಶೋಧನೆಗಳು ಪ್ರಗತಿಯ ಹಂತದಲ್ಲಿವೆ. ಶರವೇಗದಲ್ಲಿ ನಡೆಯುತ್ತಿರುವ ಸಂಶೋಧನೆಗಳಿಂದ ಪ್ರಕೃತಿ ತನ್ನ ಮಡಿಲಿನಲ್ಲಿ ಗುಪ್ತವಾಗಿ ಹುದುಗಿಸಿಟ್ಟಿರುವ ಇನ್ನೂ ಸಹಸ್ರಾರು ಉದಾಹರಣೆಗಳು ಮುಂದಿನ ದಿನಗಳಲ್ಲಿ ಅನಾವರಣಗೊಳ್ಳುವುದರಲ್ಲಿ ಯಾವುದೇ ಸಂದೇಹವಿಲ್ಲ.

5(ಚಿತ್ರ – 5)

ಹೀಗೆಯೇ, ಸಂಶೋಧನೆಗಳು ಪ್ರಾಣಿಗಳಲ್ಲಿ ಪತ್ರಹರಿತ್ತು ಇರುವುದನ್ನು ಧೃಢಪಡಿಸುತ್ತಾ ಹೋಗುತ್ತಿರುವ ಸಂದರ್ಭದಲ್ಲಿ, ಇದಕ್ಕೆ ಸಮನಾಂತರವಾಗಿ ಈಗಾಗಲೆ ಪ್ರಾಣಿಗಳ ಜೀವಕೋಶಗಳಲ್ಲಿ ಕೃತಕವಾಗಿ ಪತ್ರಹರಿತ್ತನ್ನು ಸೇರಿಸಬಹುದೇ? ಹಾಗೇ ಸೇರಿಸಿದ ಪತ್ರಹರಿತ್ತಿನ ಸಹಾಯದಿಂದ ಜೀವಕೋಶಗಳು ದ್ಯೂತ್ತಿಸಂಶ್ಲೇಷಣೆ ಕ್ರಿಯೆಯಿಂದ ಆಹಾರದ ಅವಶ್ಯಕತೆಯಲ್ಲಿ ಸ್ವಾವಲಂಬಿಗಳಾಗ ಬಲ್ಲವೇ? ಎನ್ನುವ ಚೀಂತನೆಗಳು ತಲೆ ಎತ್ತಿವೆ (ಚಿತ್ರ – 6). ಇದಕ್ಕೆ ಪ್ರಾಣಿಗಳನ್ನು ಹಸಿರುಪ್ರಾಣಿ (Planimal)ಗಳನ್ನಾಗಿಸಿ, ಅವುಗಳನ್ನು ಕೃತಕ ಉಸಿರಾಟಗಳಲ್ಲಿ ತೊಡಗಿಸಿ ಮುಂದಿನ ದಶಕದಲ್ಲಿ ವೈದ್ಯಕೀಯ ಕ್ಷೇತ್ರವು ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಮಹತ್ತರವಾದ ಪಾತ್ರವಹಿಸಲಿವೆ.

6ನಾವುಗಳೂ, ಪ್ರಕೃತಿಯು ಎಷ್ಟು ವಿಚಿತ್ರ ಅಲ್ಲವೇ? ಅಂತ ಹುಬ್ಬೇರಿಸಬಹುದು. ಆದರೆ, ಪ್ರಕೃತಿಯ ಒಳಹೊಕ್ಕಷ್ಟೂ ವಿಜ್ಞಾನ ಪ್ರಪಂಚದ ಬಾಗಿಲು ತೆರೆದುಕೊಳ್ಳುತ್ತಿರುವುದು ಮತ್ತೂ ವಿಸ್ಮಯಕಾರಕ. ನಿರಂತರವಾದ ಸಂಶೋಧನೆಗಳಿಂದ ಈ ಮೂಲ ಪ್ರಕ್ರಿಯೆಗಳನ್ನು ಅರ್ಥೈಸಿಕೊಳ್ಳುವುದರಿಂದ ಮುಂದೆ ಮಾನವ ತನ್ನ ಆಹಾರ ಸಮಸ್ಯೆಗೆ ಪರಿಹಾರವಾಗಿ ಬಳಸಿಕೊಳ್ಳುವ ಕಾಲ ದೂರವಿಲ್ಲ.

ಒಂದು ವೇಳೆ ಮನುಷ್ಯನಿಗೂ ಸಹ ಎಲಿಸಿಯ ಕ್ಲೋರೊಟಿಕಕ್ಕೆ ಪತ್ರಹರಿತ್ತನ್ನು ಇಟ್ಟುಕೊಂಡು ತನ್ನ ಆಹಾರ ತಾನೇ ತಯಾರಿಸಿಕೊಳ್ಳುವ ಸಾಮರ್ಥ್ಯ ಇದ್ದಿದ್ದರೇ? ಅದು ಊಹೆಗೂ ನಿಲುಕದ ಮಾತು! ಏನಿಲ್ಲಾ ಅಂದರೂ ಕೊನೆ ಪಕ್ಷ ಕೃಷಿಗಾಗಿ ಅರಣ್ಯವನ್ನು ನಾಶ ಮಾಡಿ ಕಾಂಕ್ರೀಟ್ ಕಾಡುಗಳು ನಿರ್ಮಾಣವಾಗದೆ,  ದಟ್ಟ ಅಡವಿಯಲ್ಲಿ ಮರಗಳು  ಸೂರ್ಯನ ಕಿರಣಗಳು ನೆಲಕ್ಕೆ ತಾಕದಂತೆ ಮುಗಿಲೆತ್ತರಕ್ಕೆ ಬೆಳೆವ ಹಾಗೆ , ಮನುಷ್ಯನು ಸಹ ಸೂರ್ಯನ ಬೆಳಕಿನಲ್ಲಿ ನಿಲ್ಲಲು ನಾ ಮುಂದು…! ತಾ ಮುಂದು…! ಎಂದು ಜಿದ್ದಾಜಿದ್ದಿನಲ್ಲಿ ಆಕಾಶದೆಡೆಗೆ ತಿರುಗುತ್ತಿದ್ದದ್ದಂತೂ ಕಟು ಸತ್ಯ.

ವೈದ್ಯಕೀಯ ಕ್ಷೇತ್ರದಲ್ಲಾಗುತ್ತಿರುವ ಬದಲಾವಣೆಗಳು

(ಇಗೋ ವಿಜ್ಞಾನ – 2020 ಪೈಪೋಟಿಯಲ್ಲಿ 1 ನೇ ಬಹುಮಾನ ಪಡೆದ ಬರಹ)

ಡಾ.ಶಿಶಿರ ಎಸ್ ರಾನಡೆ.

ಪೀಠಿಕೆ:
​ಭಾರತೀಯ ವೈದ್ಯಶಾಸ್ತ್ರದ ಪಿತಾಮಹರಾದ ಸುಶ್ರುತ, ಚರಕ ಮುಂತಾದವರ ಕಾಲದಿಂದ ಇಂದಿನವರೆಗೂ ವೈದ್ಯಕೀಯ ಕ್ಷೇತ್ರದಲ್ಲಿ ಅಪಾರವಾದ ಬೆಳವಣಿಗೆಗಳು ಕಂಡುಬಂದಿವೆ.  ​ ನಾಡಿಶಾಸ್ತ್ರ, ವಾತ, ಪಿತ್ತ, ಕಫ ಈ ರೀತಿಯ ಪರಿಕಲ್ಪನೆಗಳ ಭದ್ರ ಬುನಾದಿಯ ಮೇಲೆ ಬೆಳೆದುನಿಂತ ವೈದ್ಯಶಾಸ್ತ್ರ ಇಂದು ಅತ್ಯಾಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ತರ್ಕಕ್ಕೂ  ಮೀರಿದ ಚಿಕಿತ್ಸೆಯನ್ನು  ರೋಗಿಗಳಿಗೆ ನೀಡುವಲ್ಲಿ ಯಶಸ್ವಿಯಾಗಿದೆ.  ಅಂದಿನ ಮತ್ತು ಇಂದಿನ ನಡುವೆ ಬಹಳಷ್ಟು ಬದಲಾವಣೆಗಳನ್ನು ಕಂಡಂತಹ ಈ ಕ್ಷೇತ್ರ ಎಲ್ಲಾ ರೀತಿಯ ಊಹಾಪೋಹಗಳು ಹಾಗೂ ತಪ್ಪು ಪರಿಕಲ್ಪನೆಗಳನ್ನು ಅಲ್ಲಗೊಳಿಸಿ ಇಂದು “ಸಾಕ್ಷ್ಯಾಧಾರಿತ ವೈದ್ಯಕೀಯ ವಿಜ್ಞಾನ” ಎನ್ನುವ ಹಂತಕ್ಕೆ ಬೆಳೆದು ನಿಂತಿದೆ.

​ವೈದ್ಯಕೀಯ ಕ್ಷೇತ್ರದಲ್ಲಿ ಪ್ರಸ್ತುತ ಪ್ರಚಲಿತವಿರುವ ತಂತ್ರಜ್ಞಾನದ ಮಾಹಿತಿ ಒಂದಲ್ಲಾ ಒಂದು ರೀತಿಯಲ್ಲಿ ಜನಸಾಮಾನ್ಯರಿಗೆ ಚಿರಪರಿಚಿತವಾಗಿರುತ್ತದೆ.  ಒತ್ತಡದ ಜೀವನ ಶೈಲಿ, ಅವಸರದ ಬದುಕು, ಪರಿಸರ ಹಾಗೂ  ಆಹಾರ ಕ್ರಮಗಳಲ್ಲಾದ ಬದಲಾವಣೆಗಳು ಇವೆಲ್ಲವೂ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ರೋಗಕಾರಕಗಳೇ ಆಗಿವೆ.  ಇಂದು ಇವೆಲ್ಲವನ್ನೂ ಮೀರಿ ಬದುಕಲು ವೈದ್ಯಕೀಯ ಕ್ಷೇತ್ರದಲ್ಲಿಯೂ ಅನೇಕ ಬದಲಾವಣೆಗಳಾಗುತ್ತಿವೆ  ಮತ್ತು ಅವುಗಳ ಬಗ್ಗೆ ತಿಳಿದುಕೊಳ್ಳುವ ಅನಿವಾರ್ಯತೆಯೂ ಇದೆ. ಅದರಲ್ಲಿ  ಕೆಲವನ್ನು ಇಲ್ಲಿ ವಿಮರ್ಶಿಸಲಾಗಿದೆ.

ಶ್ವಾಸಕೋಶದ ಕಾಯಿಲೆಯ ಔಷಧಿಗಳು – ಸ್ಮಾರ್ಟ್ ಇನ್‍ಹೇಲರ್ ಗಳು :
inhaler

(ಚಿತ್ರ: propellerhealth.com)

ಅಸ್ತಮಾ ಎನ್ನುವ ಕಾಯಿಲೆಗೆ ಉಸಿರಾಟದ ಪಂಪುಗಳ ಮೂಲಕ ಔಷಧಿಯನ್ನು ಒದಗಿಸಬಹುದು.  ಈ ರೀತಿ ಮಾಡುವುದರಿಂದ ಶೇಕಡ 90 ರಿಂದ 94.1 ರಷ್ಟು ಕಾಯಿಲೆಯನ್ನು ಗುಣಪಡಿಸಲು ಸಾಧ್ಯವಿದೆ.  ಆದರೆ ಔಷಧಿ ಪ್ರಮಾಣದ ವ್ಯತ್ಯಯ ಅಥವಾ ರೋಗಿಗಳು ಸರಿಯಾಗಿ ಔಷಧಿಗಳನ್ನು ಬಳಸದೇ ಇರುವ ಕಾರಣಗಳಿಂದ ಶೇಕಡ 50 ರಷ್ಟು ರೋಗನಿಯಂತ್ರಣದ ಸಮಸ್ಯೆ ಎದುರಾಗುತ್ತಿದೆ.  ಇಂತಹ ಸಂದರ್ಭದಲ್ಲಿ ಅತ್ಯಾಧುನಿಕ ಇನ್‍ಹೇಲರ್‍ಗಳು, ಬ್ಲೂಟೂತ್ ಸಂಪರ್ಕವನ್ನು ಹೊಂದಿದ್ದು ಅದನ್ನು ಮೊಬೈಲ್ ಫೋನ್‍ಗಳಿಗೆ ಅಳವಡಿಸಿ ಔಷಧಿಯ ಪ್ರಮಾಣ ಹಾಗೂ ಸಮಯಗಳನ್ನು ನಿಗಧಿಪಡಿಸಿ ರೋಗಿಯು ಸರಿಯಾದ ವಿಧಾನದಲ್ಲಿ ಔಷಧಿಗಳನ್ನು ತೆಗೆದುಕೊಳ್ಳುತ್ತಿರುವುದನ್ನು ಖಾತರಿಪಡಿಸಿಕೊಳ್ಳಬಹುದಾಗಿದೆ.

ರೋಬೋಟಿಕ್ ಸರ್ಜರಿ (ಯಂತ್ರಮಾನವನ ಸಹಾಯದ ಶಸ್ತ್ರ ಚಿಕಿತ್ಸೆ):
robotic surgery

 (ಚಿತ್ರ: uchealth.com)

ಈ ವಿಧಾನವನ್ನು ಅನುಸರಿಸಿ ಇಂದು ಶಸ್ತ್ರಚಿಕಿತ್ಸಕರು ಅತೀ ಕ್ಲಿಷ್ಟವಾದ ಅಥವಾ ಚಿಕಿತ್ಸೆ ನೀಡಲು ಸಾಧ್ಯವಾಗದ ಕಾಯಿಲೆಗಳಿಗೆ ಶ್ರಮವಿಲ್ಲದೆ ಚಿಕಿತ್ಸೆ ನೀಡಲು ಸಾಧ್ಯವಾಗಿದೆ.  ಆದರೆ ಇದು ಯಂತ್ರ ಮಾನವನೇ ಪೂರ್ತಿಯಾಗಿ ಮಾಡುವ ಶಸ್ತ್ರಚಿಕಿತ್ಸೆ ಹಾಗೂ ಇದಕ್ಕೆ ವೈದ್ಯರ ಅವಶ್ಯಕತೆ ಇರುವುದಿಲ್ಲ ಎನ್ನುವ ತಪ್ಪು ಕಲ್ಪನೆ ಜನರಲ್ಲಿ ಇದೆ.   ಇದು ಒಂದು ಶಸ್ತ್ರಚಿಕಿತ್ಸಾ ಸಾಧನವಾಗಿದ್ದು ವೈದ್ಯರೇ ಇದನ್ನು ಬಳಸಿ ದೂರದಲ್ಲಿ ಕುಳಿತು ಸಣ್ಣರಂದ್ರಗಳ ಮೂಲಕ ನೀಡುವ ಚಿಕಿತ್ಸೆಯಾಗಿದೆ.  ಮೊದಲು ಶಸ್ತ್ರಚಿಕಿತ್ಸೆ ನೀಡಬೇಕಾದ ರೋಗಿಗೆ ಅರವಳಿಕೆಯ ಔಷಧಿಗಳನ್ನು ನೀಡಲಾಗುತ್ತದೆ.

ನಂತರ ರೋಗಿಯ ನಿರ್ಧಿಷ್ಟವಾದ ದೇಹದ ಭಾಗದ ಮೇಲೆ ರೋಬೋ ಅಥವಾ ಯಂತ್ರಮಾನವನನ್ನು ಅಳವಡಿಸಲಾಗುತ್ತದೆ.  ಉದಾಹರಣೆ ಹೊಟ್ಟೆಯ ಭಾಗ, ಎದೆಯಭಾಗ, ಕುತ್ತಿಗೆ ಇತ್ಯಾದಿ.  ನಂತರ ಶಸ್ತ್ರಚಿಕಿತ್ಸಕನು ಇನ್ನೊಂದು ಕೋಣೆಯಲ್ಲಿ ಕುಳಿತು ಕಂಪ್ಯೂಟರ್ ಪರದೆಯ ಸಹಾಯದಿಂದ ಈ ಯಂತ್ರದ ಚಲನವಲನಗಳನ್ನು ನಿಯಂತ್ರಿಸುತ್ತಾನೆ.  ಈ ಯಂತ್ರಕ್ಕೆ ಸಾಮಾನ್ಯವಾಗಿ ಮೂರರಿಂದ ನಾಲ್ಕು ಕೈಗಳಿದ್ದು, ಅದರ ಕೆಲಸಗಳನ್ನು ನುರಿತ ವೈದ್ಯರು ಕೇವಲ ತಮ್ಮ ಕೈಬೆರಳುಗಳಲ್ಲಿ ಕಂಪ್ಯೂಟರ್‍ನ  ಜಾಯ್‍ಸ್ಟಿಕ್‍ನ ಸಹಾಯದಿಂದ ನಿಯಂತ್ರಿಸಬಹುದಾಗಿದೆ.  ರೋಗವಿರುವ ಅಂಗಾಂಗಗಳು ನಾಲ್ಕರಿಂದ ಹತ್ತು ಪಟ್ಟು ದೊಡ್ಡದಾಗಿ ಕಾಣುವ ಕಾರಣ ಅತೀ ಸೂಕ್ಷ್ಮವಾದ ಕಾಯಿಲೆಗಳ ಶಸ್ತ್ರಚಿಕಿತ್ಸೆಯನ್ನು ಸಲೀಸಾಗಿ ನಡೆಸಬಹುದು. ಇಂದು ಇಂಟರ್‍ನೆಟ್ ತಂತ್ರಜ್ಞಾನವನ್ನು ಬಳಸಿ, ಒಂದು ಊರಿನಲ್ಲಿದ್ದು ಇನ್ನೊಂದು ಊರಿನಲ್ಲಿರುವ ರೋಗಿಗಳಿಗೆ ರೋಬೊಟಿಕ್ ಸರ್ಜರಿ ನಡೆಸಬಹುದಾಗಿದೆ.  ಇದರಿಂದ ಸಾಮಾನ್ಯ ಜನರಿಗೂ ನುರಿತ ವೈದ್ಯರಿಂದ ಚಿಕಿತ್ಸೆ ಪಡೆಯಲು ಸಾಧ್ಯವಾಗುತ್ತಿದೆ.

ದೂರಸಂವೇದಿ ವೈದ್ಯಶಾಸ್ರ್ತ(Tele-Medicine / Telehealth ) :
telehealth

(ಚಿತ್ರ: medcitynews.com)

ಇಂದು ಪ್ರಪಂಚದ ಒಂದು ಮೂಲೆಯಲ್ಲಿ ಕುಳಿತು ಇನ್ನೊಂದು ಮೂಲೆಯಲ್ಲಿರುವ ರೋಗಿಯೊಂದಿಗೆ ಸುಲಭವಾಗಿ ಸಂಪರ್ಕ ಬೆಳೆಸಿ, ರೋಗ ಪರೀಕ್ಷೆ ಹಾಗೂ ಸೂಕ್ತ ಚಿಕಿತ್ಸೆಗಳನ್ನು ನೀಡಲು ಸಾಧ್ಯವಾಗುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ಹಾಗೂ ತಾಲ್ಲೂಕು ಆಸ್ಪತ್ರೆಗಳಲ್ಲಿ ತಜ್ಞವೈದ್ಯರ ಕೊರತೆ ಇರುವುದು ಸಹಜ.  ಇಂತಹ ಸಂದರ್ಭಗಳಲ್ಲಿ ದೂರಸಂವೇದಿ ತಂತ್ರಜ್ಞಾನದ ಮೂಲಕ ರೋಗಿ ಇರುವಲ್ಲಿಂದಲೇ ಇನ್ನೊಂದು ಊರಿನಲ್ಲಿರುವ ನುರಿತ ವೈದ್ಯರನ್ನು ಸಂಪರ್ಕಿಸಿ ರೋಗನಿರ್ಣಯದ ಬಗ್ಗೆ ಚರ್ಚಿಸಿ, ಸೌಲಭ್ಯಗಳಿದ್ದಲ್ಲಿ ಅದೇ ಸ್ಥಳದಲ್ಲಿ ಚಿಕಿತ್ಸೆ ಒದಗಿಸಬಹುದು ಅಥವಾ ಸೌಲಭ್ಯದ ಕೊರತೆ ಇದ್ದಲ್ಲಿ ಉನ್ನತ ಚಿಕಿತ್ಸೆಗಾಗಿ ಇನ್ನೊಂದು ಆಸ್ಪತ್ರೆಗೆ ತಕ್ಷಣ ಕಳುಹಿಸಬಹುದು.  ಇದರಿಂದ ರೋಗ ಪರೀಕ್ಷಾ ವಿಳಂಬ ದೂರವಾಗಿ ರೋಗಿಗಳಿಗೆ ತಕ್ಕ ಸಮಯದಲ್ಲಿ ಸೂಕ್ತ ಸಲಹೆ ಹಾಗೂ ಚಿಕಿತ್ಸೆ ನೀಡಲು ಸಾಧ್ಯ. ಇದರಿಂದ ‘ ಪ್ರಪಂಚವೇ ಒಂದು ಪುಟ್ಟಗ್ರಾಮ ಎನ್ನುವ ತರ್ಕಕ್ಕೆ ಪುಷ್ಠಿ ನೀಡಿದಂತಾಗುತ್ತದೆ.

ಜೈವಿಕ ಅವನತಿ ಹೊಂದುವ ಮೆದುಳು ಸಂವೇದಕಗಳು:
thumb_dc4979f47dc6b47aea064c829ef589e4

(ಚಿತ್ರ: yonsei.ac.kr)

ದೇಹದಲ್ಲಿ ತಾನಾಗಿಯೇ ಕರಗುವ ಜೈವಿಕ ಅವನತಿ ಹೊಂದುವ ಮೆದುಳು ಸಂವೇದಕಗಳನ್ನು ತಲೆಬುರುಡೆಯು ಶಸ್ತ್ರಚಿಕಿತ್ಸೆ ನಡೆಸಿ ಮೆದುಳಿನ ಮೇಲೆ ಅಳವಡಿಸಬಹುದಾಗಿದೆ.  ಇವು ಅಪಸ್ಮಾರ, ಪಾರ್ಕಿನ್ ಸೋನಿಸಂ ನಂತಹ ರೋಗಗಳಿಗೆ ರಾಮಬಾಣವಾಗಿರುವುದಲ್ಲದೆ, ಈ ಚಿಕಿತ್ಸೆಯಿಂದ ಮೆದುಳಿನಲ್ಲಾಗುವ  ಉಷ್ಣತೆ ಮತ್ತು ಒತ್ತಡದ ಬದಲಾವಣೆಗಳನ್ನು ಅಳೆಯಬಹುದಾಗಿದೆ.  ಚಿಕಿತ್ಸೆಯ ನಂತರ ಅವಶ್ಯಕತೆ ಇಲ್ಲದಿರುವಾಗ ಈ ಉಪಕರಣಗಳು ತಾನಾಗಿಯೇ ದೇಹದಲ್ಲಿ ಕರಗಿಬಿಡುತ್ತವೆ ಮತ್ತು ಶಸ್ತ್ರಚಿಕಿತ್ಸೆ ಮತ್ತೊಮ್ಮೆ ನಡೆಸಿ ತೆಗೆಯುವ ಅವಶ್ಯಕತೆ ಇರುವುದಿಲ್ಲ.

3ಡಿ ಅಚ್ಚುಗಾರಿಕೆ (3D printing):

5647122840-prostetic-3D-printing(ಚಿತ್ರ: healthtechzone.com)

​ಇದೊಂದು, ವೈದ್ಯಕೀಯ ಹಾಗೂ ತಂತ್ರಜ್ಞಾನ ಕ್ಷೇತ್ರಗಳ ಸಹಯೋಗದ ಕೆಲಸಕ್ಕೆ ಉತ್ತಮ ನಿದರ್ಶನವಾಗಿದೆ.  ಈ ತಂತ್ರಜ್ಞಾನವನ್ನು ಬಳಸಿ ರೋಗಿಯ ದೇಹದ ಅಂಗಾಂಗಗಳ  ಕೃತಕ ಮಾದರಿಯನ್ನು ತಯಾರಿಸಬಹುದಾಗಿದೆ.  ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಅಥವಾ ನಂತರ ಈ ಅಂಗಾಂಗಗಳನ್ನು ಅಳವಡಿಸಬಹುದಾಗಿದೆ.  ಉದಾಹರಣೆ: ಕೃತಕ ಕಾಲುಗಳು, ಕೃತಕ ಕೈಗಳು ಇತ್ಯಾದಿ. 3ಡಿ ಅಚ್ಚುಗಾರಿಕೆಯ ಸೌಲಭ್ಯವನ್ನು ಮುಖದ ಅಸ್ತಿಪಂಜರದ ಅಚ್ಚು ತೆಗೆಯಲು ಹೆಚ್ಚಾಗಿ ಬಳಸುತ್ತಾರೆ.  ರಸ್ತೆ ಅಪಘಾತವೋ ಅಥವಾ ಕೆಳಗೆ ಬೀಳುವುದರಿಂದ ಆದ ಮುಖದ ಮೂಳೆಗಳು ಮುರಿತಗೊಂಡಾಗ 3ಡಿ ಅಚ್ಚುಗಾರಿಕೆಯ ತಂತ್ರಜ್ಞಾನವನ್ನು ಬಳಸಿ, ಮುಖ್ಯವಾಗಿ ಕಣ್ಣಿನ ಸುತ್ತಲಿರುವ ಮೇಲ್ದವಡೆಯ ಮೂಗಿನ ಅಥವಾ ಕೆಳದವಡೆಯ ಮೂಳೆಗಳ ಮಾದರಿಯನ್ನು ತಯಾರಿಸಬಹುದು.

ಮುಖದ ಒಂದು ಬದಿಯ ಭಾಗದ ರೀತಿಯಲ್ಲಿಯೇ ಇನ್ನೊಂದು ಬದಿಯ ಅಚ್ಚನ್ನು ತಯಾರಿಸಿ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಮುರಿದ ಮೂಳೆಗಳನ್ನು ಜೋಡಿಸುವಾಗ ಬಳಸಬಹುದು. ಆದ್ದರಿಂದಲೇ ಪ್ಲಾಸ್ಟಿಕ್ ಸರ್ಜರಿಯಲ್ಲಿ ಈ ತಂತ್ರಜ್ಞಾನವನ್ನು ಬಹಳಷ್ಟು ಬಳಸಲಾಗುತ್ತದೆ.  ಅಷ್ಟೇ ಅಲ್ಲದೆ 3ಡಿ ಅಚ್ಚುಗಾರಿಕೆಯನ್ನು ಬಳಸಿ ಔಷಧಿ ಉತ್ಪಾದನೆಯನ್ನು ಮಾಡಬಹುದಾಗಿದೆ.  ಒಂದಕ್ಕಿಂತ ಹೆಚ್ಚು ಔಷಧಿಗಳನ್ನು ರೋಗಿಗೆ ನೀಡುವ ಅವಶ್ಯಕತೆ ಇದ್ದಲ್ಲಿ ಅದನ್ನು ಪದರಗಳ ರೀತಿ ಕ್ರೂಢೀಕರಿಸಿ ಒದಗಿಸಬಹುದಾಗಿದೆ.

ಕೃತಕ ಅಂಗಾಂಗಗಳ ಜೈವಿಕ ಅಚ್ಚುಗಾರಿಕೆ:
3ಡಿ ಅಚ್ಚುಗಾರಿಕೆಯ ರೀತಿಯಲ್ಲಿಯೇ ಜೈವಿಕ ಅಚ್ಚುಗಾರಿಕೆ ತಂತ್ರಜ್ಞಾನವು ವೈದ್ಯಕೀಯ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸುವ ಸಾಧ್ಯತೆ ಇದೆ.  ಅಂಗಾಂಗ ಕಸಿ ತಂತ್ರಜ್ಞಾನವು ಎಲ್ಲರಿಗೂ ತಿಳಿದ ವಿಷಯ.  ಆದರೆ ಅದಕ್ಕೆ ತನ್ನದೇ ಆದ ನಿರ್ಬಂಧಗಳಿವೆ.  ಬೇರೆ ವ್ಯಕ್ತಿಯ ಅಂಗಾಂಗಗಳನ್ನು ದೇಹವು ತಿರಸ್ಕರಿಸುವ  ಸಾಧ್ಯತೆಯೇ ಹೆಚ್ಚು.  ಆದರೆ ಜೈವಿಕ ಅಚ್ಚುಗಾರಿಕೆಯ ತಂತ್ರಜ್ಞಾನದಿಂದ ರೋಗಿಯ ರಕ್ತನಾಳಗಳು, ಅಂಡಾಶಯಗಳು, ಮೇದೋಜೀರಕ ಗ್ರಂಥಿ ಮುಂತಾದ ಅಂಗಾಂಗಗಳನ್ನು ಬೆಳೆಸಬಹುದಾಗಿದೆ.  ಮೊದಲು ಕೇವಲ ಸುಟ್ಟಗಾಯಗಳಿಗೆ ಚಿಕಿತ್ಸೆ ನೀಡಲು ಬಳಸುವ ಚರ್ಮವನ್ನು ಬೆಳೆಸುವ ತಂತ್ರಜ್ಞಾನವು ಇಂದು ಮುಂದುವರಿದು  ಬೇರೆ ಅಂಗಾಂಗಗಳನ್ನು ಬೆಳೆಸುವಲ್ಲಿ ಕಾರ್ಯನಿರ್ವಹಿಸುತ್ತಿದೆ.

ಮೊದಲು ಮೇಲೆ ತಿಳಿಸಿದ ಕೆಲವು ಅಂಗಾಂಗಗಳ ಮಾದರಿಗಳನ್ನು ತಯಾರಿಸಲಾಗುತ್ತದೆ.  ನಂತರ ಅವುಗಳನ್ನು ಅಗತ್ಯವಿರುವ ರೋಗಿಗಳಿಗೆ ಅಳವಡಿಸಲಾಗುತ್ತದೆ.  ದೇಹದಲ್ಲಿ ಹೊಸ ಅಂಗಾಂಗಗಳು ರೋಗಗ್ರಸ್ಥವಾದ ಹಳೆಯ ಅಂಗಾಂಗಗಳ ಕಾರ್ಯಗಳನ್ನು ಕ್ರಮೇಣ ವಹಿಸಿಕೊಳ್ಳಲು ಆರಂಭಿಸುತ್ತವೆ.  ಅಲ್ಲಿಯವರೆಗೂ ದೇಹದ ಒಳಭಾಗದಲ್ಲಿ ಈ ಕೃತಕ ಅಂಗಾಂಗಗಳು ಬೆಳೆಯುತ್ತಿರುತ್ತವೆ.  ದೇಹದ ಒಳಗೇ ಅಂಗಾಂಗಗಳು ಬೆಳೆಯುವ ಕಾರಣ, ತಿರಸ್ಕರಿಸುವ (ರಿಜೆಕ್ಷನ್) ಪ್ರಮೇಯ ಕಡಿಮೆಯಾಗಿ ಇದೊಂದು ಮನುಜ ಸಂಕುಲಕ್ಕೆ ವರವಾಗುವ ಸಾಧ್ಯತೆ ಇದೆ.

ನೈಜ ಚಿತ್ರಣ ತಂತ್ರಜ್ಞಾನ (ವರ್ಚುವಲ್ ರಿಯಾಲಿಟಿ):
virtual reality medical

(ಚಿತ್ರ: wear-studio.com)

ಈ ತಂತ್ರಜ್ಞಾನದಿಂದ, ಕಂಪ್ಯೂಟರ್ ಪರದೆಯ ಮೇಲೆಯೇ ಮಾನವನ ಅಂಗಶಾಸ್ತ್ರದ (ದೇಹ ರಚನೆ)  ಸಂಪೂರ್ಣ ಚಿತ್ರಣವನ್ನು ನೈಜ ರೀತಿಯಲ್ಲಿ ಮೂಡಿಸಬಹುದಾಗಿದೆ. ವೈದ್ಯಕೀಯ ವಿದ್ಯಾರ್ಥಿಗಳಿಗೆ  ಇದರ ಉಪಯೋಗ ಬಹಳಷ್ಟಿದೆ. ವೈದ್ಯಕೀಯ  ಕಾಲೇಜುಗಳಲ್ಲಿ ನೈಜ ಚಿತ್ರಣ ತಂತ್ರಜ್ಞಾನದ ಅಳವಡಿಕೆಯಿಂದ ವಿದ್ಯಾರ್ಥಿಗಳು ಮಾನವನ ದೇಹದ ಸಹಾಯವಿಲ್ಲದೇ ದೇಹರಚನಾ ಶಾಸ್ತ್ರವನ್ನು ಕಲಿಯಬಹುದಾಗಿದೆ.  ಅದಲ್ಲದೇ ಯಾವುದೇ ರೋಗಿಯ ಸಿ.ಟಿ. ಅಥವಾ ಎಂ.ಆರ್.ಐ. ಚಿತ್ರಗಳನ್ನು ನೈಜಚಿತ್ರಣ ಯಂತ್ರದಲ್ಲಿ ಅಳವಡಿಸಿ, ರೋಗಿಯ ಕೃತಕ ದೇಹದ ಮಾದರಿ ಹಾಗೂ ಅವನಿಗಿರುವ  ಕಾಯಿಲೆಗಳನ್ನು ಪರದೆಯ ಮೇಲೆ ಮೂಡಿಸಬಹುದು.

ಇದರಿಂದ ರೋಗಿಗೆ ಗಂಟು(ಗಡ್ಡೆ) ಯಾವ ಭಾಗದಲ್ಲಿದೆ,  ಅದರ ಸುತ್ತಲಿರುವ ಅಂಗಾಂಗಗಳು ಯಾವುವು? ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಎಷ್ಟು ಪ್ರಮಾಣದಲ್ಲಿ ಗಡ್ಡೆಯನ್ನು ತೆಗೆಯಬೇಕು ಹಾಗೂ ಆ ಸಮಯದಲ್ಲಿ ಎದುರಾಗುವ ತೊಂದರೆಗಳೇನು? ಯಾವ ದೊಡ್ಡ ರಕ್ತನಾಳಗಳು ಗಡ್ಡೆಯ ಸುತ್ತ ಇವೆ.  ಮುಂತಾದ ಅನೇಕ  ಮಾಹಿತಿಗಳನ್ನು ಶಸ್ತ್ರಚಕಿತ್ಸೆಯ ಮೊದಲೇ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ವೈದ್ಯರು ಕೃತಕ ಮಾದರಿಯ ಮೇಲೆ ಪ್ರಯೋಗಾತ್ಮಕ ಶಸ್ತ್ರಚಕಿತ್ಸೆಯನ್ನು ನಡೆಸಲು ಸಾಧ್ಯವಿದೆ.  ಇದರಿಂದಾಗಿ ರೋಗಿಗಳಿಗೆ ಶಸ್ತ್ರಚಿಕಿತ್ಸಾ ಸಮಯದಲ್ಲಿ ಆಗಬಹುದಾದ ತೊಂದರೆಗಳನ್ನು ನಿಯಂತ್ರಿಸಬಹುದಾಗಿದೆ.

ಕ್ಯಾಪ್ಸೂಲ್ ನೋಟ:

capsule-endoscopy1(ಚಿತ್ರ: medgadget.com)

ಹೊಟ್ಟೆ, ಕರುಳು, ಪಿತ್ತನಾಳ ಇವುಗಳ ರೋಗ ಪತ್ತೆ ಹಾಗು ಚಿಕಿತ್ಸೆಗೆ ಉದರದರ್ಶಕ ಉಪಕರಣಗಳನ್ನು ಬಳಸುತ್ತಿದ್ದುದು ಎಲ್ಲರಿಗೂ ತಿಳಿದ ವಿಷಯವೇ ಆಗಿದೆ. ಆದರೆ ಈಗ ಅದಕ್ಕೂ ಮೇಲಾಗಿ ಒಂದು ಸಣ್ಣ ನಳಿಕೆ ಗುಳಿಗೆಯನ್ನು ಬಳಸಿ ಜಠರ ಹಾಗು ಕರುಳಿನ ರೋಗಗಳನ್ನು ಸುಲಭವಾಗಿ ಪತ್ತೆಮಾಡಬಹುದು. ಈ ಸಣ್ಣ ನಳಿಕೆ ಗುಳಿಗೆಯು ಬ್ಲೂಟೂತ್ ಸಂಪರ್ಕವನ್ನು ಹೊಂದಿದ್ದು ಅದನ್ನು ಗಣಕಯಂತ್ರ ದೊಂದಿಗೆ ಸಂಪರ್ಕಿಸಲಾಗುತ್ತದೆ. ಈ ಗುಳಿಗೆಯ ಒಂದೊಂದು ತುದಿಗಳಲ್ಲಿಯೂ ಬೆಳಕಿನ ಒಂದು ಆಕರ ಮತ್ತು ಛಾಯಾಚಿತ್ರಗ್ರಾಹಕ ಒಂದನ್ನು ಅಳವಡಿಸಲಾಗಿರುತ್ತದೆ.capsule

(ಚಿತ್ರ: tgastro.com)

ರೋಗಿಯು ಈ ಗುಳಿಗೆಯನ್ನು ನುಂಗಿದ ನಂತರ 24 ರಿಂದ 48 ಗಂಟೆಗಳ ವರೆಗೂ ಹೊಟ್ಟೆ ಹಾಗೂ ಕರುಳಿನ ಚಿತ್ರಗಳನ್ನು ನಿರಂತರವಾಗಿ ತೆಗೆದು ಅದನ್ನು ಗಣಕಯಂತ್ರಕ್ಕೆ ರವಾನಿಸುವ ಕೆಲಸವನ್ನು ಮಾಡುತ್ತದೆ. ನಂತರ ಈ ಗುಳಿಗೆಯು ಮಲದೊಂದಿಗೆ ವಿಸರ್ಜಿಸಲ್ಪಡುವ ಕಾರಣ ರೋಗಿಯು ಆಸ್ಪತ್ರೆಯಲ್ಲಿ ಭರ್ತಿಯಾಗುವ ಅವಶ್ಯಕತೆ ಇರುವುದಿಲ್ಲ. ಅಲ್ಲದೆ ಈ ಗುಳಿಗೆಯ ಸಹಾಯದಿಂದ ಕರುಳಿನಲ್ಲಾಗುವ ರಕ್ತಸ್ರಾವ, ಹುಣ್ಣುಗಳು ಉರಿ ಊತ ಈರೀತಿ ಅನೇಕ ಕಾಯಿಲೆಗಳನ್ನು ಸುಲಭವಾಗಿ ಪತ್ತೆ ಹಚ್ಚಬಹುದು ಮತ್ತು ಇದರಿಂದ ಸೂಕ್ತವಾದ ಚಿಕಿತ್ಸೆಯನ್ನು ನೀಡಲು ಸಾಧ್ಯವಾಗುತ್ತದೆ.

ಕರುಳಿನ ಜೀವಕೋಶಗಳ ಹಾಗೂ ಕರುಳಿನ ಸೂಕ್ಷ್ಮಾಣುಜೀವಿಗಳ ಕಸಿ:
ದೇಹದ ಅನೇಕ ಸಮಸ್ಯೆಗಳಿಗೆ ದೊಡ್ಡಕರುಳಿನಲ್ಲೇ ಕಾರಣ ಅಡಗಿದೆ ಎಂಬುದನ್ನು ಬಹಳ ಹಿಂದೆಯೇ ಕಂಡುಹಿಡಿಯಲಾಗಿತ್ತು. ಪಚನಕ್ರಿಯೆ ಹಾಗು ಮಲ ವಿಸರ್ಜನೆ ಸರಿ ಇದ್ದರೆ ವ್ಯಕ್ತಿಯು ಸಾಮಾನ್ಯ ರೋಗಗಳಿಂದ ಮುಕ್ತವಾಗಿರುತ್ತಾನೆ ಎಂದೇ ಅರ್ಥ ಎಂದು, ಪುರಾತನ ಭಾರತೀಯ ವೈದ್ಯಶಾಸ್ತ್ರಗಳಲ್ಲಿ ಉಲ್ಲೇಖವಾಗಿದೆ. ಇಂದು ಅದರ ಆಧಾರದ ಮೇಲೆ ಸಂಶೋಧನೆಗಳು ನಡೆದಿವೆ.

ಈ ಸಂಶೋಧನೆಗಳಿಂದ ಆರೋಗ್ಯವಂತ ವ್ಯಕ್ತಿಯ ದೊಡ್ಡಕರುಳಿನ ಜೀವಕೋಶಗಳು ಅಷ್ಟೇ ಅಲ್ಲದೆ, ಅದರಲ್ಲಿರುವ ಅನೇಕ ಉಪಕಾರಿ ಸೂಕ್ಷ್ಮಾಣು ಜೀವಿಗಳನ್ನು ಪ್ರತ್ಯೇಕಿಸಿ, ಅದನ್ನು ಕರುಳು ಸಂಬಂಧೀ ರೋಗಿಗಳಿಗೆ ಕಸಿಮಾಡಿ ರೋಗ ಮುಕ್ತರನ್ನಾಗಿಸಬಹುದು ಎನ್ನುವ ಸತ್ಯಾಂಶ ತಿಳಿದುಬಂದಿದೆ. ಆದರೆ ಈ ಚಿಕಿತ್ಸೆಗೆ ತನ್ನದೇ ಆದ ನಿರ್ಬಂಧಗಳಿದ್ದರೂ ಕರುಳಿನ ಹುಣ್ಣು, ಉರಿಯೂತ, ಕರುಳಿನ ಇತರ ಸೋಂಕು ನಿವಾರಣೆಗಾಗಿ ಬಳಸಬಹುದಲ್ಲದೇ, ಪಾರ್ಕಿಂಸೋನಿಸಂ, ಮಾನಸಿಕ ತೊಂದರೆಗಳು, ಬೊಜ್ಜುತನ, ಅರ್ಬುದ ರೋಗ ಈ ರೀತಿ ಅನೇಕ ರೋಗಗಳಿಗೆ ಚಿಕಿತ್ಸೆಗಾಗಿ ಪರೀಕ್ಷೆಗಳು ನಡೆದಿವೆ. ಇವುಗಳ ಪಲಿತಾಂಶದ ಮೇಲೆ ಬಹಳಷ್ಟು ರೋಗಗಳಿಗೆ ಮುಕ್ತಿ ಸಿಗಲಿದೆ.

ಕಣ್ಣಿನ ತೊಂದರೆಗಳಿಗೆ ಪರಿಹಾರಗಳು:

optometrist-giving-man-eye-drops(ಚಿತ್ರ: medicalnewstoday.com)

ಕಣ್ಣು ಪೊರೆ ಎಂಬುದು ಸಾಮಾನ್ಯವಾಗಿ ವಯಸ್ಸಾಗುತ್ತಿದ್ದಂತೆ ಬರುವ ಕಾಯಿಲೆ. ಅದಕ್ಕೆ ದೊಡ್ಡ ಗಾಯದ ಶಸ್ತ್ರಚಿಕಿತ್ಸೆಯಿಂದ ಹಿಡಿದು ಅತಿ ಸಣ್ಣ ರಂಧ್ರದ ಮೂಲಕ ನಡೆಸುವ ಚಿಕಿತ್ಸೆಯ ವರೆಗೂ ಅನೇಕ ರೀತಿಯ ಚಿಕಿತ್ಸೆಗಳು ಲಭ್ಯವಿದೆ. ಆದರೆ ಇತ್ತೀಚೆಗೆ ಪೊರೆ ಕರಗುವಂತಹ ಔಷಧಿಯ ಹನಿಗಳನ್ನು ಕಂಡುಹಿಡಿಯಲಾಗುತ್ತಿದೆ. ಅದು ಮಾರುಕಟ್ಟೆಗೆ ಬಂದರೆ ಕಣ್ಣಿನ ಶಸ್ತ್ರಚಿಕಿತ್ಸೆ ಹಾಗೂ ಅದರಿಂದ ಆಗಬಹುದಾದ ತೊಂದರೆಗಳಿಂದ ರೋಗಿಯು ದೂರವೇ ಉಳಿದುಬಿಡಬಹುದು.

ಜೈವಿಕ ಕಣ್ಣು (Bionic Eye):

r0_0_800_600_w1200_h678_fmax(ಚಿತ್ರ : northerndailyleader.com)

ಕಣ್ಣು ಕಾಣದ ವ್ಯಕ್ತಿಗಳ ನರಮಂಡಲ ವ್ಯವಸ್ಥೆ ಸರಿ ಇದ್ದರೆ ಅವರಿಗೆ ಕನ್ನಡಕದ ರೂಪದಲ್ಲಿ ಈ ಕಣ್ಣುಗಳನ್ನು ಬಳಸಬಹುದಾಗಿದೆ. ಇದರಲ್ಲಿ ಕೃತಕ ಕ್ಯಾಮರ ಒಂದನ್ನು ಕನ್ನಡಕದ ಮೇಲೆ ಅಳವಡಿಸಿ ತಂತು ರಹಿತ ಸಂದೇಶ ರವಾನಿಸುವ ಮಾಧ್ಯಮದ ಮೂಲಕ (ಬ್ಲೂಟೂತ್) ಕಣ್ಣಿನ ನರದ ಮೇಲೆ ಅಳವಡಿಸಲಾಗುವ ಸಂದೇಶ ಗ್ರಾಹಕಕ್ಕೆ ತಲುಪುವಂತೆ ಮಾಡಲಾಗುತ್ತದೆ .ಚಿತ್ರಗಳು ನೈಸರ್ಗಿಕ ಕಣ್ಣುಗಳಲ್ಲಿ ಮೂಡುವಂತೆ ಇರದಿದ್ದರೂ ವ್ಯಕ್ತಿಯು ಆ ಚಿತ್ರಗಳನ್ನು ಗ್ರಹಿಸಬಹುದಾಗಿದೆ. ಮೆದುಳು ಆ ಚಿತ್ರಗಳಿಗೆ ಹೊಂದಾಣಿಕೆ ಹೊಂದಿದ ನಂತರ ವ್ಯಕ್ತಿಯು ದೈನಂದಿಕ ಚಟುವಟಿಕೆಗಳನ್ನು ನಡೆಸಬಹುದೆಂದು ಊಹಿಸಲಾಗಿದೆ. ಈ ವಿಷಯದ ಮೇಲೆ ಇನ್ನಷ್ಟು ಪರೀಕ್ಷೆಗಳು ಜಾರಿಯಲ್ಲಿವೆ.

ನಿಖರ ಔಷಧಿಗಳು:
ರೋಗಿಯ ಜೀವ ಕೋಶದಲ್ಲಿರುವ ಅತೀ ಸೂಕ್ಷ್ಮವಾದ ಅನುವಂಶಿಕ ರೂಪವನ್ನು ಆಧರಿಸಿ ( ಜೆನೆಟಿಕ್ ಮೇಕಪ್) ಕ್ಯಾನ್ಸರ್ ರೋಗ, ಸಂದಿವಾತ ರೋಗ ಮೊದಲಾದವುಗಳಿಗೆ ನಿರ್ಧಿಷ್ಟವಾದ ಚಿಕಿತ್ಸೆ ನೀಡಲು ಸಾಧ್ಯವಾಗಲಿದೆ.  ಇಷ್ಟೇ ಅಲ್ಲದೆ ವೈದ್ಯಕೀಯ ಮತ್ತು ತಂತ್ರಜ್ಞಾನ ಇವೆರಡರ ಸಮ್ಮಿಲನದಿಂದ ಆರೋಗ್ಯ ಯಂತ್ರಗಳಲ್ಲಿ ಪ್ರಗತಿಯಾಗಲಿದೆ.  ಇಂದು ಪ್ರಸ್ತುತವಿರುವ ನಾಡಿ, ಎದೆಬಡಿತ ಮಾಪನಗಳಷ್ಟೇ ಅಲ್ಲದೆ ಮುಂದೆ ಇ.ಸಿ.ಜಿ. ಅಥವಾ ಎದೆಪಟ್ಟಿ, ಸಕ್ಕರೆ ಪ್ರಮಾಣ ನಿಯಂತ್ರಕಗಳು ರಕ್ತದ ಕೊಬ್ಬು ಯಂತ್ರಣಗಳು ಇತ್ಯಾದಿ ಮಾರುಕಟ್ಟೆಗೆ ಬರಲಿವೆ.

ಜೀನ್ ಥೆರಪಿ -ಅನುವಂಶೀಯ ಧಾತು ಚಿಕಿತ್ಸೆ:
ದೇಹದ ಒಂದು ಜೀವಕೋಶವೆಂದರೇ, ಅದು ಅತಿಸೂಕ್ಷ್ಮ. ಅದರೊಳಗೆ ಕೇಂದ್ರ ಭಾಗದಲ್ಲಿರುವ ನ್ಯೂಕ್ಲಿಯಸ್ ಅಥವಾ ಗರ್ಭವನ್ನು ವಿಭಜಿಸಿ ಅದರ ರಚನಾ ಭಾಗಗಳಾದ ಡಿ ಎನ್ ಎ ಮತ್ತು ಆರ್ ಎನ್ ಎ ಗಳನ್ನು ಬಹಳ ಹಿಂದೆಯೇ ಕಂಡುಹಿಡಿಯಲಾಗಿತ್ತು. ಅನುವಂಶೀಯವಾಗಿ ಬರುವ ಕಾಯಿಲೆಗಳು ಡಿಎನ್ಎ ಯ ಭಾಗಗಳಿಂದಲೇ ಬರುತ್ತವೆ ಎಂಬುದು ಕೂಡ ಹೊಸ ವಿಷಯವೇನಲ್ಲ. ಅಂದರೆ ಡಿಎನ್ಎ ಯನ್ನು ವಿಭಜಿಸಿ ಅದರ ಅಮೈನೋ ಆಸಿಡ್ ಗುಂಪುಗಳನ್ನು ಜೀನ್ ಗಳೆಂದು ಕರೆಯಲಾಯಿತು. ಈ ಜೀನ್‍ಗಳು ದೇಹದ ನಿರ್ದಿಷ್ಟ ಕಾರ್ಯ ವೈಖರಿಗಳನ್ನು ನಿರ್ಧರಿಸುತ್ತವೆ.

ಇದರ ಆಧಾರದ ಮೇಲೆ ಅನುವಂಶೀಯ ಕಾಯಿಲೆಗಳು ಪೋಷಕರಿಂದ ಅಥವಾ ಕುಟುಂಬದವರಿಂದ ಮಕ್ಕಳಿಗೆ ಬರುವ ವಿಧಾನ ಹಾಗೂ ಅವುಗಳನ್ನು ಗುರಿಯಿಟ್ಟುಕೊಂಡು ನೀಡಬಹುದಾದಂತಹ ಅನೇಕ ರೀತಿಯ ಚಿಕಿತ್ಸೆಗಳನ್ನು ಸಂಶೋಧಿಸಲಾಗಿದೆ, ಹಾಗೂ ಇಂದಿಗೂ ಅನೇಕ ಸಂಶೋಧನೆಗಳು ನಡೆಯುತ್ತಿವೆ. ಅರ್ಬುದ ರೋಗಕ್ಕೆ ಈ ಸಂಶೋಧನೆಗಳು ವರವಾಗಲಿವೆ. ಇದೇ ತತ್ವವನ್ನು ಬಳಸಿ ಅನುವಂಶೀಯ ಗುರುತು ತಿದ್ದುಪಡಿ ತಂತ್ರಜ್ಞಾನವನ್ನು ಬೆಳೆಸಲಾಗಿದೆ.

ಅನುವಂಶಿಕ ಗುರುತು ತಿದ್ದುಪಡಿ ತಂತ್ರಜ್ಞಾನ (Gene editing technology):
​ಈ ತಂತ್ರಜ್ಞಾನದಿಂದ ದೇಹದ ಮೇಲೆ ದುಷ್ಪರಿಣಾಮ ಬೀರುವ ಬ್ಯಾಕ್ಟೀರಿಯಾಗಳನ್ನು ಕೃತಕ ವೈರಸ್‍ಗಳ ಸಹಾಯದಿಂದ ನಾಶಪಡಿಸಬಹುದಾಗಿದೆ.  ಬ್ಯಾಕ್ಟೀರಿಯಾದ ಜೀವಕೋಶಗಳ ಒಳಗೆ ವೈರಸ್ ಜೀವಕೋಶಗಳನ್ನು ಕಳಿಸಿ, ಬ್ಯಾಕ್ಟೀರಿಯಾಗಳ ಮೂಲ ಅನುವಂಶಿಕ ರಚನೆಯನ್ನು ಬೇಧಿಸಿ (ಡಿಎನ್‍ಎ), ಬ್ಯಾಕ್ಟೀರಿಯಾಗಳನ್ನು ಕೊಲ್ಲುವ ತಂತ್ರಜ್ಞಾನವು ಹೊರಹೊಮ್ಮಲಿದೆ.  ಇದರಿಂದ ಮಾನವನ ಬದ್ಧವೈರಿಯಾಗಿರುವ ಕೆಲವು ಬ್ಯಾಕ್ಟೀರಿಯಾಗಳನ್ನು ಸುಲಭವಾಗಿ ನಾಶಪಡಿಸಬಹುದಾಗಿದೆ.

ಕ್ಯಾನ್ಸರ್ ರೋಗಕ್ಕೆ ಚಿಕಿತ್ಸೆಗಳು:
ಕ್ಯಾನ್ಸರ್ ಎಂದರೆ ಎಷ್ಟು ಭೀಕರ ಎಂಬುದರ ಅರಿವು ಎಲ್ಲರಿಗೂ ಇದೆ. ಆದರೆ ಈ ರೋಗದಿಂದ ವ್ಯಕ್ತಿ ಉಳಿಯಲು ಸಾಧ್ಯವೇ ಇಲ್ಲ ಎಂಬ ತಪ್ಪು ಪರಿಕಲ್ಪನೆಯೂ ಇದೆ. ಇಂದು ಅತ್ಯಾಧುನಿಕ ರೋಗಪತ್ತೆ ಮಾಡಬಹುದಾದಂತಹ ವಿಧಾನಗಳು ಹಾಗೂ ಅನೇಕ ರೀತಿಯ ಚಿಕಿತ್ಸೆಗಳು ಲಭ್ಯವಿದ್ದು, ಕ್ಯಾನ್ಸರ್ ರೋಗ ವನ್ನು ಮೊದಲನೇ ಹಂತದಲ್ಲೇ ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆ ನೀಡಲು ಸಾಧ್ಯವಿದೆ. ಹಿಂದೆಲ್ಲಾ ರೋಗ ನಿಯಂತ್ರಿಸಲಾಗದಂತಹ ಹಂತದಲ್ಲಿ ಬರುತ್ತಿದ್ದ ರೋಗಿಗಳಿಗೆ ಶಸ್ತ್ರಚಿಕಿತ್ಸೆಯೊಂದೇ ಉತ್ತರವಾಗಿತ್ತು.

ಆದರೆ ಇಂದು ವಿಕಿರಣ ಚಿಕಿತ್ಸೆ, ಜೀನ್ ಥೆರಪಿ ಅಥವಾ ಅನುವಂಶೀಯ ಧಾತು ಚಿಕಿತ್ಸೆ ಅಲ್ಲದೇ, ಅನೇಕ ರೀತಿಯ ಔಷಧಿಗಳು ಮಾರುಕಟ್ಟೆಯಲ್ಲಿ ಲಭ್ಯವಿರುವ ಕಾರಣ ಶಸ್ತ್ರಚಿಕಿತ್ಸೆ ಇಲ್ಲದೇ ರೋಗಿಯು ಗುಣಮುಖನಾಗುವ ಹಂತ ತಲುಪಿದೆ. ಅನೇಕ ವಿಧದ ಕ್ಯಾನ್ಸರ್ ರೋಗಗಳನ್ನು ಮೊದಲ ಹಂತದಲ್ಲೇ ಪತ್ತೆ ಹಚ್ಚಿ ಸೂಕ್ತವಾದಂತಹ ಚಿಕಿತ್ಸೆಯನ್ನು ನೀಡುವ ಮೂಲಕ ರೋಗವನ್ನು ಸಂಪೂರ್ಣವಾಗಿ ಇಲ್ಲವಾಗಿಸಲು ಸಾಧ್ಯವಾಗಿದೆ. ಇದು ಖಂಡಿತವಾಗಿಯೂ ಮಾನವ ಸಂಕುಲಕ್ಕೆ ಒಂದು ಹೊಸ ಆಶಾಕಿರಣ.

ಕೊನೆಯ ಮಾತು:
​ಮಾನವನು ದೇಹಶಾಸ್ತ್ರ, ಔಷಧಶಾಸ್ತ್ರ, ರೋಗಶಾಸ್ತ್ರಗಳ ಬಗ್ಗೆ ಎಷ್ಟು ತಿಳಿದುಕೊಂಡರೂ ನಮ್ಮ ಊಹೆಗೂ  ಮೀರಿದ ಬದಲಾವಣೆಗಳು ದೇಹದಲ್ಲೂ ಆಗುತ್ತಿರುತ್ತವೆ. ತರ್ಕಕ್ಕೂ ಸಿಗಲಾರದ ರೋಗಗಳು ದಿನೇ ದಿನೇ ಹುಟ್ಟಿಕೊಳ್ಳುತ್ತಿರುತ್ತವೆ.  ಅದರೊಂದಿಗೆ ವೈದ್ಯಕೀಯ ತಂತ್ರಜ್ಞಾನವೂ ಬೆಳೆದು ರೋಗಗಳನ್ನು  ಹೋಗಲಾಡಿಸುವ ಪ್ರಯತ್ನವೂ ನಿರಂತರವಾಗಿ ಮುಂದುವರೆಯುತ್ತದೆ.  ವೈದ್ಯಕೀಯ ಶಾಸ್ತ್ರದ ತರ್ಕ ಹಾಗೂ ತಂತ್ರಜ್ಞಾನದ ಕೊಡುಗೆಗಳು, ಮತ್ತು ಇವೆರಡರ ಸಮ್ಮಿಲನದಿಂದ ಮನುಕುಲಕ್ಕೆ ಉತ್ತಮವಾದ ಆರೋಗ್ಯ ಭಾಗ್ಯ ಸಿಗುವುದರಲ್ಲಿ ಸಂದೇಹವಿಲ್ಲ.

ಕೋವಿಡ್-19 ಕುರಿತು ವಿವರವಾದ ಮಾಹಿತಿ

ಧನುಜಾ ಜೆ.
(ಎಂ.ಎಸ್ಸಿ. ಸೂಕ್ಷ್ಮಾಣು ಜೀವಶಾಸ್ತ್ರ ವಿಭಾಗ, ಮೈಸೂರು)

ಮನುಜ ಕೇಂದ್ರಿತವಾದ ಈ ಭೂಮಿಯನ್ನು ಕೆಲವು ದಿನಗಳ ಕಾಲ ಸ್ಥಗಿತಗೊಳಿಸಿ ಜಗತ್ತಿನಾದ್ಯಂತ ಪಸರಿಸಿಕೊಂಡಿರುವ, ಜೀವಕೋಶವೇ ಇಲ್ಲದ ಒಂದು ಸಣ್ಣ ಸೂಕ್ಷ್ಮಾಣು ಎಂದರೆ ಕೊರೊನಾ ಎಂದು ಕರೆಯಲಾಗುತ್ತಿರುವ 2019-nCoV ಅಥವಾ SARS-CoV-2. ಎರಡು ಬಾರಿ ಘಟಿಸುವ ಎಲ್ಲವೂ ಮೂರನೇ ಬಾರಿಗೆ ಸಂಭವಿಸುತ್ತದೆ ಎನ್ನುವ ಮಾತಿನಂತೆ 2002-03ರಲ್ಲಿ ಮಾರಣಾಂತಿಕ ತೀವ್ರ ಉಸಿರಾಟದ ಸಿಂಡ್ರೋಮ್ (SARS) ಮತ್ತು 2012ರ ಮಧ್ಯ ಪೂರ್ವ ಉಸಿರಾಟದ ಸಿಂಡ್ರೋಮ್ (MERS)ಗಳು ಮರೆಯಾಗಿಲ್ಲ, ಮೂರನೆಯದು ಕೋವಿಡ್-19 ಇತ್ತೀಚೆಗಷ್ಟೇ ಡಿಸೆಂಬರಿನಲ್ಲಿ ಕಾಣಿಸಿಕೊಂಡು ಜಗತ್ತಿನಾದ್ಯಂತ ಸಾವು ನೋವುಗಳಿಗೆ ಕಾರಣವಾಗುತ್ತಿದೆ. ಇದರ ವಿವರವಾದ ಮಾಹಿತಿ ಇಲ್ಲಿದೆ.

ವಿಶೇಷವೆಂದರೆ ಈ ಮೂರೂ ಕಾಯಿಲೆಗಳ ವೈರಸ್ಗಳು ಒಂದೇ ಕುಟುಂಬಕ್ಕೆ ಸೇರಿದವು. ಅದುವೇ ಕೊರೊನಾವಿರಡೆ (Coronaviridae). ಈ ಕೊರೊನಾವೈರಸ್ಗಳಲ್ಲಿ ನಾಲ್ಕು ಪಂಗಡಗಳಿವೆ. ಅವುಗಳೆಂದರೆ α−/β−/γ−/δ-(ಆಲ್ಫಾ, ಬೀಟಾ, ಘಾಮಾ ಮತ್ತು ಡೆಲ್ಟಾ) ಕೊರೋನವೈರಸ್ಗಳು. ಇದರಲ್ಲಿ α- ಮತ್ತು β- ಕೊರೋನವೈರಸ್ಗಳು (CoV) ಸಸ್ತನಿಗಳಿಗೆ ಸೋಂಕು ತಗುಲಿಸಿದರೆ, γ- ಮತ್ತು δ-ಕೊರೋನವೈರಸ್ಗಳು ಪಕ್ಷಿಗಳಿಗೆ ಸೋಂಕು ತಗುಲಿಸುತ್ತವೆ.

ಆರು ಕೊರೋನವೈರಸ್‍ಗಳು ಮಾನವ-ಒಳಗಾಗುವ ವೈರಸ್‍ಗಳು ಎಂದು ಗುರುತಿಸಲಾಗಿದೆ. ಅವುಗಳಲ್ಲಿ ಎರಡು α- ಕೊರೋನವೈರಸ್‍ಗಳು, HCoV-229E, HCoV-NL63, ಎರಡು β- ಕೊರೋನವೈರಸ್‍ಗಳು HCoV- HkU1 ಮತ್ತು HCoV- OC43. ಇದರಲ್ಲಿ ಮೊದಲ ನಾಲ್ಕು ವೈರಸ್‍ಗಳು ಕಡಿಮೆ ರೋಗಕಾರಕ ಮತ್ತು ಸಾಮಾನ್ಯ ನೆಗಡಿಯಂತೆ ಕಡಿಮೆ ಪ್ರಮಾಣದ ಉಸಿರಾಟದ ತೊಂದರೆ ಲಕ್ಷಣಗಳನ್ನು ತೋರುತ್ತವೆ. ಇನ್ನುಳಿದ ಎರಡು ವೈರಸ್‍ಗಳು SARS ರೋಗಕ್ಕೆ ಕಾರಣವಾದ ತೀವ್ರವಾದ ಉಸಿರಾಟದ ಸಿಂಡ್ರೋಮ್ ಕೊರೋನವೈರಸ್ (SARS-CoV) ಮತ್ತು MERS ರೋಗಕ್ಕೆ ಕಾರಣವಾದ ಮಧ್ಯ ಪೂರ್ವ ಉಸಿರಾಟದ ಸಿಂಡ್ರೋಮ್ ಕೊರೋನವೈರಸ್ (MERS-CoV).

ಈ ಪಟ್ಟಿಗೆ ಏಳನೆಯದಾಗಿ ಸೇರ್ಪಡೆಗೊಳ್ಳುವುದು, ಈಗ ಕೋವಿಡ್-19 (ಕೊರೊನಾ ವೈರಸ್‍ನಿಂದ ಉಂಟಾದ ಕಾಯಿಲೆ-2019) ಕಾರಣವಾಗಿರುವ ತೀವ್ರವಾದ ಉಸಿರಾಟದ ಸಿಂಡ್ರೋಮ್ ಕೊರೋನವೈರಸ್- 2 (SARS-CoV-2) ಅಥವಾ 2019 ಹೊಸ ಕೊರೋನವೈರಸ್ (2019-nCoV).

ಮೂಲ:

ಮೂಲದಲ್ಲಿ SARS-CoV-2 ಪ್ರಾಣಿಗಳಲ್ಲಿ ಕಂಡುಬರುವ ವೈರಸ್. ಸ್ವಾಭಾವಿಕವಾಗಿ ಬಾವಲಿಗಳಲ್ಲಿ  ಮತ್ತು ಪ್ಯಾಂಗೋಲಿನ್ಗಳಲ್ಲಿ ಜೀವಂತವಾಗಿರುತ್ತದೆ. ಇವು ಚೀನಾದ ವುಹಾನ್ ಸಮುದ್ರ ಪ್ರಾಣಿಗಳ ಮಾರುಕಟ್ಟೆಯಲ್ಲಿ ಮಾರಾಟ ಮಾಡಿದಾಗ ಪ್ರಾಣಿಗಳಿಂದ ಈ ವೈರಸ್ ಮನುಷ್ಯರಿಗೆ ಹೊಕ್ಕಿರಬಹುದು ಎಂದು ಊಹಿಸಲಾಗಿದೆ (ಪುರಾವೆಗಳಿಲ್ಲದ್ದರಿಂದ).

ಮನುಷ್ಯರಿಗೆ ಹೊಕ್ಕಿದ ಮೇಲೆ ಒಬ್ಬರಿಂದ ಒಬ್ಬರಿಗೆ ಹರಡಿ ನ್ಯುಮೋನಿಯಾದಂತಹ ಪ್ರಕರಣಗಳು ಹೆಚ್ಚಾದವು. 31 ಡಿಸೆಂಬರ್ 2019ರಲ್ಲಿ ಒಂದು ರೋಗಾಣು ವರದಿಯಲ್ಲಿ ವೈರಸ್ ಅದರ ಸಂಬಂಧಿಸಿದ SARS-CoV ಗಳಿಗಿಂತ ಬೇರೆ ತರನಾಗಿದೆ ಇದನ್ನು ಹೊಸ ಕೊರೊನಾ ವೈರಸ್ (2019-nCoV) ಎಂದು ಗುರುತಿಸಬೇಕು ಎಂದು ತಿಳಿಸಿತು.

ಈಗಿನ SARS-CoV-2 ವೈರಸ್‍ನೊಳಗಿರುವ ಜೀವತಂತು (ಜೀನೋಮ್), ಬಾವಲಿಗಳ CoV RaTG13 ವೈರಸ್ಗಳಿಗೆ 96.2%ನಷ್ಟು ಹೋಲುತ್ತದೆ. ಆದರೆ ಇದರ ಹತ್ತಿರದ ಸಂಬಂಧಿ SARS-CoV ವೈರಸ್ಗೆ 79.5% ಹೋಲಿಕೆ ಅಷ್ಟೇ ಹಂಚಿಕೊಂಡಿದೆ. ವೈರಸ್ ಜೀವತಂತು ಮಾಹಿತಿ (genome sequencing) ಫಲಿತಾಂಶಗಳು ಮತ್ತು ಅದರ ಬೆಳವಣಿಗೆಯ ವಿಶ್ಲೇಷಣೆಯ ಆಧಾರದ ಮೇಲೆ ಬಾವಲಿಗಳು ಈ ವೈರಸ್‍ನ ನೈಸರ್ಗಿಕ ನೆಲೆಗಳು (Natural host) ಎಂದು ಅಂದಾಜಿಸಲಾಗಿದೆ.

ವೈರಸ್‍ ಹರಡಿಕೆ

spread

ಚೀನಾದ ವುಹಾನ್ ಮೂಲ ಕೇಂದ್ರವಾಗಿ ಹರಡಿದ SARS-CoV-2 ಈಗಾಗಲೇ ಜಗತ್ತಿನಾದ್ಯಂತ ಪಸರಿಸಿದೆ. ಏಪ್ರಿಲ್ 8ರವರೆಗೆ ಒಟ್ಟು  1,450,950   ದೃಢಪಟ್ಟ ಪ್ರಕರಣಗಳು,  83,512  ಸಾವುಗಳು ಮತ್ತು 309,605 ಚೇತರಿಸಿಕೊಂಡು ಪ್ರಕರಣಗಳು ವರದಿಯಾಗಿದೆ. ಚೀನಾ ಕೋವಿಡ್-19  ತಡೆಗಟ್ಟುವಲ್ಲಿ ಯಶಸ್ವಿಯಾಗಿದ್ದು, ಇಟಲಿಯಲ್ಲಿ ಪರಿಸ್ಥಿತಿ ಕೈಗೆ ನಿಲುಕದಂತಾಯಿತು. ಸೋಂಕು ಹೊಂದಿದ ದೇಶಗಳಲ್ಲಿ ಅಮೇರಿಕಾ ಮೊದಲಿದ್ದು ಸ್ಪೈನ್ ಎರಡನೇ ಸ್ಥಾನದಲ್ಲಿದೆ.

ವಿಶ್ವ ಆರೋಗ್ಯ ಸಂಸ್ಥೆ(WHO) ಚೀನಾ ಜಂಟಿ ಮಿಷನ್ ವರದಿ‌ ಮತ್ತು ಚೈನೀಸ್ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಆಂಡ್ ಪ್ರಿವೆಂಷನ್ ವರದಿ:

2020 ಫೆಬ್ರವರಿ 28 ಮತ್ತು 11ರ ಹೊತ್ತಿಗೆ ಪ್ರಕಟಿಸಲಾದ ಈ ವರದಿಯಿಂದ ರೋಗದ ಪ್ರಮುಖ ಅಂಶಗಳನ್ನು ತಿಳಿ ಪಡಿಸಿತು. ಕೋವಿಡ್-19 ಪ್ರಕರಣಗಳು, ಸಾವುಗಳ ವಯಸ್ಸು, ಲಿಂಗ ಅನುಪಾತ ಮತ್ತು  ರೋಗಿಯ ವೈದ್ಯಕೀಯ ಚಾರಿತ್ರಿಕ ಹಿನ್ನೆಲೆ ಮೇಲೆ ರೋಗದ ಪರಿಣಾಮಗಳನ್ನು ದಾಖಲೆಯಾಗಿ ಬಿಡುಗಡೆ ಮಾಡಿತು.

ಕೋವಿಡ್-19 ದೃಢಪಡಿಸಿದ  ಪ್ರಕರಣಗಳು:

Picture1

ಕೋವಿಡ್-19 ಸಾವಿನ ಪ್ರಮಾಣ

ದೃಢಪಡಿಸಿದ ಪ್ರಕರಣಗಳಲ್ಲಿ ಸಾವಿನ ಪ್ರಮಾಣವು ಸಾಮಾನ್ಯವಾಗಿ ವಯಸ್ಸಾದವರಲ್ಲಿ ಹೆಚ್ಚು ಮತ್ತು ಮಕ್ಕಳಲ್ಲಿ ಕಡಿಮೆ ಪ್ರಕರಣಗಳು ಕಂಡು ಬಂದಿವೆ.

Picture2( ಕೃಪೆ: ಸಿಸಿಡಿಸಿ ವರದಿ ಫೆಬ್ರವರಿ 11 2020)

 

ಕೋವಿಡ್-19 ಸಾವಿನ ಲಿಂಗ ಅನುಪಾತದ ಪ್ರಮಾಣ:

ಪುರುಷರಲ್ಲಿ ಹೆಚ್ಚಾಗಿ ಕಂಡುಬಂದಿದ್ದು ಧೂಮಪಾನವು ಉಸಿರಾಟದ ತೊಂದರೆಗಳ ಅಪಾಯವನ್ನು ಹೆಚ್ಚಿಸುತ್ತದೆ.

Picture3( ಕೃಪೆ: ಸಿಸಿಡಿಸಿ ವರದಿ ಫೆಬ್ರವರಿ 11)

ರೋಗಿಯ ವೈದ್ಯಕೀಯ ಚಾರಿತ್ರಿಕ ಹಿನ್ನೆಲೆ:

ಇದನ್ನು ಕೊಮೊಬ್ರಿಡಿಟೀಸ್ ಎಂದು ಕರೆಯುತ್ತಾರೆ. ಹಿಂದೆಯೇ ಯಾವುದಾದರೂ ರೋಗದ ಇತಿಹಾಸ ಹೊಂದಿರುವ ರೋಗಿಗಳು ಕೋವಿಡ್-19 ಸೋಂಕಿಗೆ ಒಳಗಾಗಿದ್ದರೆ ಸಾಯುವ ಅಪಾಯ ಹೆಚ್ಚಿರುತ್ತದೆ.

Picture4(ಕೃಪೆ: ಸಿಸಿಡಿಸಿ ವರದಿ ಫೆಬ್ರವರಿ 11)

ವೈದ್ಯಕೀಯ ತೀವ್ರತೆಯ ಪ್ರಮಾಣ:

11 ಫೆಬ್ರವರಿಯಲ್ಲಿ ಚೈನೀಸ್ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಆಂಡ್ ಪ್ರಿವೆಂಷನ್ (ಸಿಸಿಡಿಸಿ) ಸಂಸ್ಥೆಯ ವರದಿ ಪ್ರಕಾರ ಒಟ್ಟಾರೆ 72,314 ಪ್ರಕರಣಗಳಲ್ಲಿ, ವರದಿಯಾದ 81% ಪ್ರಕರಣಗಳು ಸೌಮ್ಯ ರೋಗ ಲಕ್ಷಣ ತೋರಿದ್ದು ಇದರಲ್ಲಿ ನ್ಯುಮೋನಿಯಾ ಮತ್ತು ನ್ಯೂಮೋನಿಯಾವಲ್ಲದ ರೋಗಗಳು ಸೇರಿವೆ.  14% ಪ್ರಕರಣಗಳಲ್ಲಿ ರೋಗದ ತೀವ್ರತೆ ಹೊಂದಿದ್ದು ಡಿಸ್ಪ್ನಿಯಾ, ಮತ್ತು ಉಸಿರಾಟದ ತೊಂದರೆ ಸೇರಿದೆ. ಮತ್ತು 5% ಪ್ರಕರಣಗಳು ನಿರ್ಣಾಯಕ ಹಂತ ಹೊಂದಿದ್ದವು. ಈ ಹಂತದಲ್ಲಿ ಉಸಿರಾಟದ ವೈಫಲ್ಯ, ಸೆಪ್ಟಿಕ್ ಆಘಾತ ಮತ್ತು ಅಂಗಾಂಗ ವೈಫಲ್ಯ ತೊಂದರೆಗಳು ಕಂಡವು.

Picture8

(ಚಿತ್ರ2: ವೈದ್ಯಕೀಯ ತೀವ್ರತೆಯ ಪ್ರಮಾಣ)

ಜೀವತಂತುವಿನ (ಜೀನೋಮ್) ರಚನೆ ಮತ್ತು ಪ್ರಮುಖ ವೈರಲ್ ಅಂಶಗಳು:

Picture6(ಚಿತ್ರ 4: ವೈರಸ್ ರಚನೆ)

SARS-CoV-2 ಒಂದು ಕವಚ ಹೊಂದಿದ ಏಕೈಕ ಎಳೆಯ ಆರ್ ಎನ್ ಎ (RNA- ರೈಬೋ ನ್ಯೂಕ್ಲಿಕ್ ಆಮ್ಲ) ವೈರಸ್. ಇದು  29,900 ನ್ಯೂಕ್ಲಿಯೋಟೈಡ್ಸ್ಗಳಿಂದ ಮಾಡಲ್ಪಟ್ಟಿದ್ದು ಧನಾತ್ಮಕ (ಆರ್ ಎನ್ ಎ 5’-3’ ದಿಕ್ಕಿನಲ್ಲಿದ್ದು ನೇರವಾಗಿ ಪ್ರೋಟೀನನ್ನು ಅನುವಾದಿಸಬಲ್ಲದು) ಆರ್ ಎನ್ ಎ ಹೊಂದಿದೆ. ಇದು ಎಲೆಕ್ಟ್ರಾನ್ ಸೂಕ್ಷ್ಮದರ್ಶಕದಡಿಯಲ್ಲಿ ಕಿರೀಟದಂತಹ (crown) ಮೇಲ್ಮೈನ ಪ್ರೋಟೀನಗಳು ಕಂಡುಬಂದರಿಂದ ಕೊರೋನವೈರಸ್ ಎಂದು ಕರೆಯಲ್ಪಡುತ್ತದೆ.

ಇದರ ಜೀವತಂತು 6 ರಿಂದ 11 ಓಪನ್ ರೀಡಿಂಗ್ ಫ್ರೇಮ್ಗಳನ್ನು (ORF) [ಆರ್ ಎನ್ ಎಯಲ್ಲಿ ಅಮೈನೋ ಆಮ್ಲಗಳಿಂದ ಪ್ರೋಟೀನನ್ನು ಸಂಕೇತಿಸುವ ಕೋಡಾನುಗಳು ನಿರಂತರವಾಗಿದ್ದು, ನಿರಂತರವಾಗಿಯೇ ಪ್ರೋಟೀನ್ಗಳನ್ನು ಅನುವಾದಿಸುತ್ತದೆ. ಇದರಲ್ಲಿ ಆರಂಭಿಕ ಮತ್ತು ಕೊನೆಯ ಕೋಡಾನ್ಗಳು ಇರುತ್ತದೆ] ಹೊಂದಿದೆ. ಈ ವೈರಸ್ಸಿನ ಆರ್ ಎನ್ ಎಯಲ್ಲಿ ಮೊದಲನೆಯ ಓ ಆರ್ ಎಫ್ (ORF 1a/1b) ಬಹುತೇಕ ಭಾಗದಷ್ಟಿದೆ. ಇದು ಎರಡು ಪಾಲಿಪ್ರೋಟೀನ್ಗಳಾದ pp1a ಮತ್ತು pp1b ಸಂಕೇತಿಸುತ್ತದೆ, ಅವು ವೈರಸ್ಸಿನ ರಚನೆಗೆ ಒಳಪಡದ ರಚನಾತ್ಮಕವಲ್ಲದ (Non Structural Protein) 16 ಪ್ರೋಟೀನ್ಗಳನ್ನು  ಸಂಕೇತಿಸುತ್ತದೆ. ಈ ಪ್ರೋಟೀನ್ಗಳು ಜೀವತಂತುವಿನ ಪ್ರತಿಮಾಡುವ (Replication)  ಮೂಲಕ ಪ್ರತಿಕೃತಿಗಳನ್ನು ಹೆಚ್ಚಿಸುವಲ್ಲಿ ಕಾರ್ಯ ನಿರ್ವಹಿಸುತ್ತವೆ. ಜೀವತಂತುವಿನ ಇನ್ನುಳಿದ ಭಾಗ ವೈರಸ್ಸಿನ ರಚನೆಗೆ ಬೇಕಾದ ಅನೇಕ  ರಚನಾತ್ಮಕ ಪ್ರೋಟೀನ್ಗಳನ್ನು (Structural Protein) ಸಂಕೇತಿಸುತ್ತದೆ, ಇದರಲ್ಲಿ ಮುಖ್ಯವಾಗಿ ವೈರಸ್ಸಿನ ಹೊದಿಕೆ ಮುಳ್ಳು (S) ಗ್ಲೈಕೊಪ್ರೋಟೀನ್, ಹೊದಿಕೆ (E) ಪ್ರೋಟೀನ್, ಪದರ (M) ಪ್ರೋಟೀನ್ ಮತ್ತು ಕೋಶಕೇಂದ್ರದ ಕವಚ (N) ಪ್ರೋಟೀನ್ ಹೊಂದಿದೆ.

SARS-CoV-2ನ ವಿಶೇಷವಾದ ಒಂದು ಅಂಶವೆಂದರೆ ಇದರ ಹತ್ತಿರ ಸಂಬಂಧಿ SARS-CoV ನಂತೆ ಮನುಷ್ಯರ ನಿನ್ನ ಶ್ವಾಸನಾಳದ ಜೀವಕೋಶಗಳಿಗೆ ಸೋಂಕು ತಗುಲಿಸುವಲ್ಲಿ ಒಂದೇ ತೆರನಾದ ಆಂಜಿಯೋಟೆನ್ಸಿನ್- ಪರಿವರ್ತಿಸುವ ಕಿಣ್ವ 2 (ACE2) ಪಡೆಯುಕಗಳನ್ನು (receptor) ಉಪಯೋಗಿಸುತ್ತವೆ. ಆದರೆ SARS-CoV-2 ವೈರಸ್ಸಿನ ಹೊದಿಕೆ ಮುಳ್ಳು ಗ್ಲೈಕೊಪ್ರೋಟೀನಿನಲ್ಲಿ ಕೆಲವು ಪರಿವರ್ತನೆಗಳಾಗಿದ್ದು ಇದು ಸಾಂಕ್ರಾಮಿಕ ಸಾಮರ್ಥ್ಯವನ್ನು ಹೆಚ್ಚಿಸಿದೆ. ಇದು ಹಿಂದಿನ SARS-CoVಗಿಂತ ಬೇಗನೆ ಜನರಲ್ಲಿ ಹರಡಲು ಕಾರಣವಾಗಿದೆ.

ವೈದ್ಯಕೀಯ ಲಕ್ಷಣಗಳು:

ಪ್ರೊಫೆಸರ್ ವ್ಯಾನ್ ಶಾನ್ ಝಾಂಗ್ ತಂಡದ ಪ್ರಕಾರ, 1099 ಪ್ರಯೋಗಾಲಯ ದೃಢಪಡಿಸಿದ ಪ್ರಕರಣಗಳಲ್ಲಿ ಕೋವಿಡ್-19 ರೋಗ ಹೊಂದಿದ ಜನರಲ್ಲಿ ಜ್ವರ (88.7%), ಒಣಕೆಮ್ಮು (67.8%), ಆಯಾಸ (38.1%), ಕಫ ಉತ್ಪಾದನೆ (33.4%), ಉಸಿರಾಟದ ತೊಂದರೆ (18.6%), ಗಂಟಲು ಕೆರೆತ (13.9%), ಮತ್ತು ತಲೆನೋವು (13.6%) ರೋಗ ಲಕ್ಷಣಗಳು ಕಂಡುಬಂದಿದೆ. ಇದರ ಜೊತೆಗೆ ಕೆಲವು ರೋಗಿಗಳು ಜಠರಗರುಳಿನ ರೋಗಲಕ್ಷಣಗಳನ್ನು ವ್ಯಕ್ತಪಡಿಸಿದ್ದಾರೆ, ಇವುಗಳೆಂದರೆ ವಾಂತಿ (5%) ಮತ್ತು ಭೇದಿ (3.8%). ಇವೆರಡು ಸಾಮಾನ್ಯವಾಗಿಯೇ ಎಲ್ಲಾ ಕೊರೋನಾ ವೈರಸ್ಗಳಲ್ಲಿ ಕಂಡುಬರುವ ರೋಗಲಕ್ಷಣಗಳು.

ಇವುಗಳಲ್ಲಿ ಜ್ವರ, ಒಣಕೆಮ್ಮು ಮತ್ತು ಆಯಾಸದ ಲಕ್ಷಣಗಳು ಕೋವಿಡ್-19 ದೃಢಪಡಿಸಿದ ರೋಗಿಗಳಲ್ಲಿ ಕಂಡುಬಂದಿದೆ. ಗಂಟಲು ಕೆರೆತ ರೋಗದ ಮೊದಮೊದಲು ಕಂಡುಬರುತ್ತದೆ. ರೋಗ ತೀವ್ರತೆಗೆ ಬಂದಂತೆ ಉಸಿರಾಟದ ತೊಂದರೆ ಕಾಣಿಸುತ್ತದೆ. 60 ವರ್ಷ ಮೇಲ್ಪಟ್ಟ ವಯಸ್ಸಿನವರಲ್ಲಿ ಈ ರೋಗವು ತೀವ್ರವಾಗಿ ಭಾದಿಸುವ ಸಂಭಾವ್ಯತೆ ಜಾಸ್ತಿ ಇದ್ದು ಅದರಲ್ಲಿಯೂ ಕೆಲವು ರೋಗಗಳ ಹಿನ್ನೆಲೆ ಹೊಂದಿದ್ದರೆ ಉದಾಹರಣೆಗೆ ಹೃದ್ರೋಗ, ಸಕ್ಕರೆ ಕಾಯಿಲೆ, ದೀರ್ಘಕಾಲದ ಉಸಿರಾಟದ ಕಾಯಿಲೆ, ಅಧಿಕ ರಕ್ತದೊತ್ತಡ ಮತ್ತು ಕ್ಯಾನ್ಸರ್ ಇರುವರಲ್ಲಿ ರೋಗವು ತೀವ್ರತೆಗೆ ತಿರುಗುತ್ತದೆ.

Picture9ರೋಗಲಕ್ಷಣಗಳು ಕಾಣಿಸಲು ತೆಗೆದುಕೊಳ್ಳುವ ದಿನಗಳು:

ಸೋಂಕಿನ ಮೊದಲ ದಿನದಿಂದ ಹಿಡಿದು ಏಳನೇ ದಿನದವರೆಗೆ ಮೊದಲ ರೋಗದ ಲಕ್ಷಣವಾದ ಜ್ವರ ಕಾಣಿಸಿಕೊಳ್ಳುತ್ತದೆ, 3 ರಿಂದ 4 ದಿನಗಳ ಒಳಗೆ ಒಣಕೆಮ್ಮು ಬರುತ್ತದೆ, ಇಷ್ಟರೊಳಗೆ ವೈದ್ಯಕೀಯ ಚಿಕಿತ್ಸೆ ತೆಗೆದುಕೊಳ್ಳದೇ ನಿರ್ಲಕ್ಷಿಸಿದರೆ ಉಸಿರಾಟದ ತೊಂದರೆ 5 ನೇ ದಿನದಲ್ಲಿ ಕಾಣಿಸಿಕೊಳ್ಳುತ್ತದೆ. ಸೋಂಕಿನ ವ್ಯಕ್ತಿಗಳು ಹಿರಿಯ ವಯಸ್ಸಿನವರಾಗಿದ್ದರೆ ತೀವ್ರತೆ ಹೆಚ್ಚಾಗಿ 7 ರಿಂದ 8 ನೇ ದಿನಕ್ಕೆ ಆಸ್ಪತ್ರೆಗೆ ದಾಖಲಾಗುತ್ತಾರೆ. 6 ರಿಂದ 12 ದಿನಗಳಲ್ಲಿ ತೀವ್ರ ಉಸಿರಾಟದ ತೊಂದರೆ ಉಂಟಾಗಿ ವೆಂಟಿಲೇಟರ್ ನೆರವು ಪಡೆಯುತ್ತಾರೆ.

Picture10ರೋಗ ಹೊಮ್ಮುವ ಕಾಲಾವಧಿ:

ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗ (ಎನ್ ಎಚ್ ಸಿ) ಸೋಂಕಿನಿಂದ ಹಿಡಿದು ರೋಗ ಲಕ್ಷಣಗಳನ್ನು ತೋರಿಸುವ ಕಾಲಾವಧಿಯನ್ನು 10 ರಿಂದ 14 ದಿನಗಳು ಎಂದು ಅಂದಾಜಿಸಿದೆ. ಈ ಅವಧಿಯು ರೋಗಿಗಳ ಮೇಲೆ ಅವಲಂಬಿಸಿದ್ದು ದಿನಗಳ ಸಂಖ್ಯೆ ಬದಲಾಗಬಹುದು. ಒಟ್ಟು ಸರಾಸರಿ ರೋಗ ಹೊಮ್ಮುವ ಕಾಲ 5.2 ದಿನಗಳು ಎಂದು ಅಂದಾಜಿಸಿದೆ. ಅಂದರೆ 5 ರಿಂದ 7 ದಿನಗಳಲ್ಲಿ ತುತ್ತಾದ ಜನರು ರೋಗ ಲಕ್ಷಣಗಳನ್ನು ತೋರಿಸಬಹುದು.

ರೋಗ ಹೊಂದಿದ ಒಬ್ಬ ವ್ಯಕ್ತಿ ಇನ್ನೊಬ್ಬ ವ್ಯಕ್ತಿಗೆ ಸೋಂಕನ್ನು ಪಸರಿಸುವ Ro ಸಂಖ್ಯೆ 2.2 ನಿಂದ 4 ಹೊಂದಿದೆ. ಅಂದರೆ ಸಾಮಾನ್ಯವಾಗಿ ರೋಗ ಹೊಂದಿದ ಒಬ್ಬ ವ್ಯಕ್ತಿ 2 ರಿಂದ 4 ಜನರಿಗೆ ಸೋಂಕನ್ನು ಹರಡಬಹುದು. ಆದರೆ ಇದು ಕೆಲವೊಮ್ಮೆ ನೂರರಿಂದ ಸಾವಿರಾರು ಜನರಿಗೆ ಹರಡುವ ಸಾಧ್ಯತೆಯಿದ್ದು, ಇದು ಸೋಂಕಿತ ವ್ಯಕ್ತಿಯ ಕೆಲಸ ಮತ್ತು ವ್ಯಕ್ತಿಗಳ ದೈಹಿಕ ಸಂಪರ್ಕದ ಮೇಲೆ ಅವಲಂಬಿತವಾಗಿರುತ್ತದೆ.  ಸೋಂಕು ತಾಗಿದ ಸಾಧ್ಯತೆಯಿರುವ ವ್ಯಕ್ತಿಗಳನ್ನು (ಉದಾ: ಸೋಂಕು ಪೀಡಿತ ದೇಶಗಳಿಂದ ಬಂದವರು) 14 ದಿನಗಳ ಕಾಲ ವೈದ್ಯಕೀಯ ಮೇಲ್ವಿಚಾರಣೆಯಲ್ಲಿ ಇರಿಸುತ್ತಾರೆ.

 ಸೋಂಕಿನ ಹರಡುವಿಕೆ:

SARS-CoV-2 ಮುಖ್ಯವಾಗಿ ಹರಡುತ್ತಿರುವ ಮಾರ್ಗವೆಂದರೆ ರೋಗ ಹೊಂದಿದ ವ್ಯಕ್ತಿ ಸೀನಿದಾಗ ಬರುವ ಸೀನು ಹನಿಗಳಿಂದ, ಕೆಮ್ಮಿದಾಗ ಅಥವಾ ಮಾತನಾಡುವಾಗ ಹೊಮ್ಮುವ ಹನಿಗಳಿಂದ,  ಅವರ ಮುಕ್ತ ಸಂಪರ್ಕದಿಂದ ಅಂದರೆ ಸೋಂಕಿತ ವ್ಯಕ್ತಿಗಳ ಜೊತೆ ಒಂದು ಮೀಟರ್ ಒಳಗೆ ಇರುವರಿಗೆ ಹರಡುತ್ತದೆ.

ವ್ಯಕ್ತಿಗಳಿಂದ ವ್ಯಕ್ತಿಗಳಿಗೆ ಹರಡುತ್ತಿರುವುದು ಅವರ ನಿಕಟ ಸಂಪರ್ಕದಿಂದ, ಇದರಲ್ಲಿ ಬಹುತೇಕ ಅವರ ಕುಟುಂಬದ ಸದಸ್ಯರು ಮತ್ತು ರೋಗದ ಗುಣಲಕ್ಷಣಗಳೇ ತೋರದವರಲ್ಲಿ ಹರಡುವಿಕೆಯು ಸಹ ಕಂಡುಬಂದಿದೆ.

ರೋಗ ಹೊಂದಿದ ಒಬ್ಬ ವ್ಯಕ್ತಿ ಸೀನಿದಾಗ ಅಥವಾ ಕೆಮ್ಮಿದಾಗ (ಕೆಲವು ಬಾರಿ ಮಾತನಾಡುವಾಗಲೂ) ಲಕ್ಷಾಂತರ ಹನಿಗಳು ಚಿಮ್ಮುತ್ತವೆ. ಈ ಹನಿಗಳಲ್ಲಿ ಅವಿತುಕೊಂಡಿರುವ ವೈರಸ್ಗಳು ಇತರ ವ್ಯಕ್ತಿಗಳ ಸಂಪರ್ಕ ಬಂದರೆ, ಅಂದರೆ ಸೋಂಕಿನ ಹನಿಗಳಿರುವ ವಸ್ತುವನ್ನು ಮುಟ್ಟಿ ನಂತರ ತನ್ನ ಮೂಗು, ಬಾಯಿ ಮತ್ತು ಕಣ್ಣುಗಳನ್ನು ಮುಟ್ಟಿಕೊಂಡರೆ ವೈರಸ್ ದೇಹದ ಒಳಗೆ ಲೋಳೆ ಪದರಗಳನ್ನು ತಲುಪಬಹುದು, ಅದು ಸೋಂಕಿಗೆ ಕಾರಣವಾಗುತ್ತದೆ. ಹಾಗೂ ಸೀನು ಹನಿಗಳು ಒಣಗಿದ ಮೇಲೆ ಅವುಗಳನ್ನು ಕದಡಿದರೆ ಗಾಳಿಯಲ್ಲಿನ ಕಣಗಳಿಗೆ ಸೇರಿ ಉಸಿರಾಟದ ಮೂಲಕ ಶ್ವಾಸನಾಳದ ಒಳಗೆ ಪ್ರವೇಶ ಪಡೆಯುತ್ತವೆ.

ರೋಗಾಣು ಹಿಮ್ಮಡಿಕೆ ಮತ್ತು ರೋಗೋತ್ಪತ್ತಿ:

ಈ SARS-CoV-2 ಇಷ್ಟೊಂದು ಸಾಂಕ್ರಾಮಿಕವಾಗಿ ಹರಡುವುದಕ್ಕೆ ಮುಖ್ಯ ಕಾರಣವೆಂದರೆ ಅವುಗಳ ರೋಗೋತ್ಪತ್ತಿ. SARS-CoV2 ವೈರಸ್‍ಗಳು ಮಾನವ ಜೀವಕೋಶದ ACE2 ಪಡೆಯುಕಗಳನ್ನು (receptor) ಬಳಸಿಕೊಂಡು, ವೈರಸ್ಸಿನ ಹೊದಿಕೆ ಮುಳ್ಳು ಗ್ಲೈಕೊಪ್ರೋಟೀನ್ಗಳ ಮರುಸಂಯೋಜನೆಗಳಿಂದ ಬಹಳ ಅಚ್ಚರಿಗೊಳಿಸುವಂತೆ ಮಾನವ ಜೀವಕೋಶವನ್ನು ಸೇರಿಕೊಳ್ಳುತ್ತವೆ. ಇದು ಪ್ರಾಣಿಗಳಿಂದ ಮನುಷ್ಯರಿಗೆ ಮತ್ತು ಮನುಷ್ಯರಿಂದ ಮನುಷ್ಯರಿಗೆ ಬಹು ವೇಗವಾಗಿ ಹರಡಲು ಕಾರಣವಾಗುತ್ತಿರುವ ಅಂಶ.

SARS-CoV-2 ಕೆಳ ಮತ್ತು ಮೇಲಿನ ಎರಡೂ ಶ್ವಾಸನಾಳಕ್ಕೆ ಸೋಂಕು ತಗುಲಿಸುತ್ತದೆ. ಈ  ವೈರಸ್ಸಿನ ಹೊದಿಕೆ ಮುಳ್ಳು ಗ್ಲೈಕೊಪ್ರೋಟೀನ್ಗಳಲ್ಲಿ ಎರಡು ಉಪವಿಭಾಗಗಳಿರುತ್ತವೆ. S1 ಮತ್ತು S2. S1 ಉಪವಿಭಾಗಗಳು ಮಾನವ ಜೀವಕೋಶಗಳ ಪಡೆಯುಕಗಳಿಗೆ ಬಂಧಿಸುವ RBD ಅಂಶಗಳನ್ನು (RBD- Receptor Binding Domain)  ಹೊಂದಿದೆ. S2 ಉಪವಿಭಾಗಗಳು ವೈರಸ್ ಮತ್ತು ಮಾನವ ಜೀವಕೋಶಗಳ ಪದರಗಳನ್ನು ಕೂಡುವುದಕ್ಕೆ ಸಹಾಯ ಮಾಡುತ್ತದೆ. ಇದರ ಪರಿಣಾಮವಾಗಿ ವೈರಸ್ ಜೀವಕೋಶಗಳ ಒಳಗೆ ಒಂದು ಕೋಶಕದ ಮೂಲಕ ನುಗ್ಗುತ್ತದೆ ಇದನ್ನು ಎಂಡೋಸೈಟಾಸಿಸ್ ಎಂದು ಕರೆಯುತ್ತಾರೆ (ಆದರೆ ಈ ವೈರಸ್ಗಳಲ್ಲಿ ಈ ಕ್ರಿಯೆ ಮಾಡುವ ಪ್ರೋಟೀನ್ಗಳು ಬಗ್ಗೆ ಇನ್ನು ಹೆಚ್ಚು ಗೊತ್ತಿಲ್ಲ). ಬಳಿಕ ತನ್ನಲ್ಲಿರುವ ಜೀವತಂತು ಆರ್ ಎನ್ ಎ ಕೋಶ ದ್ರಾವ್ಯಕ್ಕೆ ಬಿಡುಗಡೆ ಮಾಡುತ್ತದೆ. ಈ ಕವಚವಿಲ್ಲದ ಆರ್ ಎನ್ ಎ ಎರಡು ಪಾಲಿಪ್ರೋಟೀನ್ಗಳನ್ನು ಅನುವಾದಿಸುತ್ತದೆ. ಇವು 16 ರಚನಾತ್ಮಕವಲ್ಲದ ಪ್ರೋಟೀನ್ಗಳನ್ನು ಸಂಕೇತಿಸುತ್ತದೆ.

ಈ ಪ್ರೋಟೀನ್ಗಳು ಒಳಬಂದ ಆರ್ ಎನ್ ಎ ಜೊತೆಗೂಡಿ, ಪ್ರತಿಮಾಡುವ-ಟ್ರಾನ್ಸ್ ಕ್ರಿಪ್ಷನ್ ಸಂಕೀರ್ಣವನ್ನು (Replication-Transcription Complex- RTC)  ಕೋಶಕ (vesicle)ದೊಳಗೆ ನಿರ್ಮಿಸುತ್ತವೆ. ಈ ಆರ್ ಟಿ ಸಿ ಸಂಕೀರ್ಣಗಳು ಜೀವತಂತು ಆರ್ ಎನ್ ಎ ಪ್ರತಿಕೃತಿಗಳನ್ನು ಹಾಗೂ ಅದರ ಕೆಲವು ಭಾಗಗಳನ್ನು ಹೆಚ್ಚಿಸುತ್ತವೆ. ಇವು ವೈರಸ್ಸಿಗೆ ಬೇಕಾದ ಸಹಾಯಕ ಮತ್ತು ರಚನಾತ್ಮಕ ಪ್ರೋಟೀನ್ಗಳನ್ನು ಆಧಾರಿತ ಜೀವಕೋಶದ ಅಂಗಗಳಾದ ಎಂಡೋಪ್ಲಾಸ್ಮಿಕ್ ರೆಟ್ಯಿಕುಲಮ್ ಮತ್ತು ಗಾಲ್ಗಿ ಬಾಡೀಸ್ಗಳಲ್ಲಿ (ಎರಡೂ, ಜೀವಕೋಶಗಳಲ್ಲಿ ಪ್ರೋಟೀನ್ ಉತ್ಪಾದನೆಯಲ್ಲಿ ತೊಡಗಿರುವ ಅಂಗ) ತನ್ನ ಎಲ್ಲಾ ಪ್ರೋಟೀನ್ಗಳನ್ನು ಸಂಶ್ಲೇಷಿಸಿಕೊಳ್ಳುತ್ತವೆ. ಈ ಎಲ್ಲಾ ಹೊಸದಾಗಿ ಪ್ರತಿಮಾಡಿದ ಜೀವತಂತು ಆರ್ ಎನ್ ಎ ಪ್ರತಿಕೃತಿಗಳನ್ನು, ಕೋಶಕೇಂದ್ರದ ಕವಚ ಪ್ರೋಟೀನ್ಗಳನ್ನು, ಹೊದಿಕೆ ಪ್ರೋಟೀನ್ಗಳನ್ನು ಮತ್ತು ಗ್ಲೈಕೋಪ್ರೋಟೀನ್ಗಳನ್ನು ಸೇರಿಸಿಕೊಂಡು ಹೊಸ ವೈರಸ್ಗಳಾಗಿ ಒಂದು ಕೋಶಕದೊಳಗೆ ಸೃಷ್ಟಿಸುತ್ತದೆ. ಅದು ಕೊನೆಗೆ ಪ್ಲಾಸ್ಮಾ ಹೊರಪದರದಲ್ಲಿ ಕೂಡಿಕೊಂಡು ಪದರ ಹರಿದ ನಂತರ ರೂಪಗೊಂಡ ಹೊಸ ವೈರಸ್ಗಳ ಬಿಡುಗಡೆ ಮಾಡುತ್ತದೆ. ಇದರಿಂದ ಆಧಾರಿತ ಜೀವಕೋಶಗಳು ನಾಶವಾಗುತ್ತವೆ. ಹೊರಬಂದ ವೈರಸ್ಸುಗಳು ಹೊಸ ಜೀವಕೋಶಗಳನ್ನು ಸೋಂಕಿಸುವುದಕ್ಕೆ ಹೊರಡುತ್ತವೆ.

Picture5ಇನ್ನು ಈ ವೈರಸ್ಗಳು ಜೀವಕೋಶಗಳ ACE2 ಪಡೆಯುಕಗಳಿಗೆ ಬಂಧಿಸುವ ಮೂಲಕ ಜೀವಕೋಶಗಳ ಒಳಗೆ ಪ್ರವೇಶ ಪಡೆಯುತ್ತವೆ. ಈ ಹಂತವು ನಿರ್ಣಾಯಕವಾಗಿದ್ದು ಇದನ್ನು ತಡೆಗಟ್ಟಿದರೆ ವೈರಸ್ ಸೋಂಕಿಸಲು ಸಾಧ್ಯವಿಲ್ಲ ಆದ್ದರಿಂದ ವಿಜ್ಞಾನಿಗಳು ಈ ಹಂತದಲ್ಲಿ ಪ್ರತಿಬಂಧ ಒಡ್ಡಲು ದಾರಿಗಳನ್ನು ಹುಡುಕುತ್ತಿದ್ದಾರೆ. ಈ ಪಡೆಯುಕ ಬಂಧಿಯು ಪ್ರಬಲವಾಗಿರುವುದರಿಂದ SARS-CoVಗಿಂತ ಹೆಚ್ಚಾಗಿ ಹರಡುವಲ್ಲಿ ಕಾರಣವಾಗಿದೆ.

ವೈರಸ್ಸಿನ ಹೊದಿಕೆ ಮುಳ್ಳು (S) ಗ್ಲೈಕೋಪ್ರೋಟೀನ್ಗಳು ACE2 ಪಡೆಯುಕಗಳ ಮೇಲೆ ಬಂದು ಕೂತಾಗ ಜೀವಕೋಶಗಳ  ಪದರಗಳಲ್ಲಿ ಒಳಹೊಕ್ಕಿರುವ ಪ್ರೋಟೀಏಸ್ (ಪ್ರೋಟೀನ್ಗಳನ್ನು ಕತ್ತರಿಸುವ) ಪ್ರೋಟೀನ್ಗಳು ಇವುಗಳಲ್ಲಿ ಸಾಮಾನ್ಯವಾಗಿ ಸೆರೀನ್ 2 (ಫ್ಯುರಿನ್) ಪ್ರೋಟೀಏಸ್ ಮತ್ತು ಕ್ಯಾಥೆಸ್ಪಿನ್ ಪ್ರೋಟೀಏಸ್ಗಳು S ಪ್ರೋಟೀನ್ನನ್ನು S1 ಮತ್ತು S2 ಉಪವಿಭಾಗವಾಗಿ ತುಂಡಾಗಿಸುತ್ತದೆ. ಇದು S2 ಉಪವಿಭಾಗವನ್ನು ಬಿಡುಗಡೆ ಮಾಡುತ್ತದೆ. ನಂತರ ಇದು ವೈರಸ್ಸನ್ನು ಮತ್ತು ಜೀವಕೋಶಗಳ ಪದರಕ್ಕೆ ಸೇರುವಂತೆ ಮಾಡಿ ಜೀವಕೋಶದ ಒಳಗೆ ವೈರಸ್ಸನ್ನು ನುಗ್ಗುವುದಕ್ಕೆ ಸಹಾಯ ಮಾಡಿಕೊಡುತ್ತದೆ. ಇನ್ನು ಈ ವೈರಸ್ಸಿನ ಹೊದಿಕೆ ಮುಳ್ಳು ಗ್ಲೈಕೊಪ್ರೋಟೀನ್ಗಳ ರಚನೆಗಳ ಅಧ್ಯಯನದಿಂದ ಕಂಡುಬಂದ ಅಂಶವೆಂದರೆ S1 ಉಪವಿಭಾಗದ ಆರ್ ಬಿ ಡಿಗಳು ಸ್ವಾತಂತ್ರವಾಗಿ ಪಡೆಯುಕಗಳಿಗೆ ಬಂಧಿಸುವಂತೆ ಮಡಚಿಕೊಳ್ಳುವ ಸಾಮಥ್ರ್ಯ ಹೊಂದಿದೆ ಎಂದು ತಿಳಿದುಬಂದಿದೆ.

Picture7ರೋಗದ ಚಿಕಿತ್ಸೆ:

ಕೋವಿಡ್-19ಗೆ ಪ್ರಸ್ತುತ ಯಾವುದೇ ಚಿಕಿತ್ಸೆ ಇಲ್ಲ. ಈ ಸಂದರ್ಭದಲ್ಲಿ ಸೋಂಕನ್ನು ಹರಡದಂತೆ ತಡೆಗಟ್ಟುವುದೇ ನಮ್ಮ ಅತ್ಯುತ್ತಮ ಅಸ್ತ್ರವಾಗಿದೆ. WHO ಈಗ ಎರಡು ತಂತ್ರಗಳನ್ನು ಬಳಸಿಕೊಳ್ಳಲು ಸೂಚಿಸಿದೆ, ಎಕ್ಸಾಕಾರ್ಪೊರಿಯಲ್ ಮೆಂಬ್ರೇನ್ ಆಮ್ಲಜನಕೀಕರಣ (ECMO) ಎಂದು ಹೇಳಲಾದ ಇದು ಹೃದಯ-ಶ್ವಾಸಕೋಶದ ಯಂತ್ರ ಇದ್ದಂತೆ ಆಮ್ಲಜನಕೀಕರಣದ ಮೂಲಕ ರಕ್ತವನ್ನು ಪರಿಚಲನೆ ಮಾಡುವ ಜೀವ ಬೆಂಬಲ ವ್ಯವಸ್ಥೆ, ಇದನ್ನು ಹೈಪೋಕ್ಸಿಮಿಯಾ ಇರುವವರಿಗೆ ನೀಡಲಾಗುತ್ತದೆ ಮತ್ತು ಗುಣಪಡಿಸಿದ ರಕ್ತದ ಪ್ಲಾಸ್ಮಾ ಮತ್ತು ಇಮ್ಯುನೊಗ್ಲಾಬ್ಯುಲಿನ್-ಜಿ (Ig-G) ಪ್ರತಿಕಾಯಗಳನ್ನು ಕೆಲವು ನಿರ್ಣಾಯಕ ಪ್ರಕರಣಗಳಿಗೆ ಕೊಡುವುದಕ್ಕೆ ತಿಳಿಸಿದೆ.

ವೈರಸ್ ವಿರೋಧಿ (anti-viral) ಚಿಕಿತ್ಸೆಗಳು:

ಹಿಂದೆ ಕಂಡ SARS ಮತ್ತು MERS ರೋಗಗಳಿಗೆ ವೈರಸ್ ವಿರೋಧಿ ‌ ಔಷಧಿಗಳನ್ನು ಕೊಟ್ರಿಕೊಸ್ಟೀರಾಯ್ಡ್ಸ್ ಗಳ ಜೊತೆ ಕೊಡುತ್ತಿದ್ದರು ಇವು ಈಗ ಕೋವಿಡ್-19ಗೆ ಬಳಸುತ್ತಿಲ್ಲ. ರೆಮ್ಡೆಸಿವಿರ್ (ಜಿ ಎಸ್- 5734) ಒಂದು ನ್ಯೂಕ್ಲಿಯೋಟೈಡ್ ಹೋಲಿಕೆಯುಳ್ಳ ಔಷಧಿಯಾಗಿದ್ದು ಇದನ್ನು ಸಾಕಷ್ಟು ಆರ್ ಎನ್ ಎ ವೈರಸ್ಗಳಿಗೆ ವ್ಯಾಪಕವಾದ ಔಷಧಿಯಾಗಿ ನೀಡಲಾಗುತ್ತದೆ. ಇದನ್ನು ಬಳಸಿಕೊಂಡು ಅಮೇರಿಕಾದಲ್ಲಿ ಕೋವಿಡ್-19ನಿಂದ ಯಶಸ್ವಿಯಾಗಿ ಚಿಕಿತ್ಸೆ ಫಲಕಾರಿಯಾದ ಮೊದಲ ಪ್ರಕರಣ ದಾಖಲಾಗಿದೆ. ಇನ್ನೊಂದು ಮಲೇರಿಯಾದ ಚಿಕಿತ್ಸೆಗಾಗಿ ಬಳಸುವ ಹೈಡ್ರಾಕ್ಸಿಕ್ಲೋರೊಕ್ವೀನ್ ಕೋವಿಡ್-19ಗೆ ಹೆಚ್ಚಿನ ಸಾಮರ್ಥ್ಯ ಹೊಂದಿರುವ ಪುನರಾವರ್ತಿತ ಔಷಧವಾಗಿದೆ.  ಹಾಗೂ ಲೊಪಿನವಿರ್ ಮತ್ತು ರಿಟೋನವಿರ್ ಎರಡರ ಸಂಯೋಜನೆ ಔಷಧಗಳು ಪರಿಣಾಮಕಾರಿಯಾಗಿ ಕೆಲಸ ಮಾಡಿದೆ.

ಇನ್ನು ಈ ವೈರಸ್ವಿಗೆ ಲಸಿಕೆ ನೀಡುವ ವಿಷಯಕ್ಕೆ ಬಂದರೆ ಅದು ಒಂದು ವರ್ಷದಿಂದ ಹದಿನೆಂಟು ತಿಂಗಳ ದೂರದಲ್ಲಿದೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಹೊಸ ಲಸಿಕೆಗಳನ್ನು ಅಭಿವೃದ್ಧಿ ಪಡಿಸಲು ಸಮಯ ತೆಗೆದುಕೊಳ್ಳುತ್ತದೆ. ಅವುಗಳನ್ನು ಮಾನವರಲ್ಲಿ ಬಳಸಲು ವಾಡಿಕೆಯಂತೆ ಮೊದಲು ಕಠಿಣವಾಗಿ ಪರೀಕ್ಷಿಸಬೇಕು ಮತ್ತು ವೈದ್ಯಕೀಯ ಪ್ರಯೋಗಗಳ ಮೂಲಕ ಸುರಕ್ಷಿತವಾಗಿದೆ ಎಂದು ದೃಢೀಕರಿಸಬೇಕು.

ಅನೇಕ ನ್ಯೂಕ್ಲಿಕ್ ಆಮ್ಲಗಳ ಲಸಿಕೆಗಳು (ಸಣ್ಣ ಮೂಲಭೂತವಾದ ಅನುವಂಶಿಕವನ್ನು ನ್ಯೂಕ್ಲಿಯೋಟೈಡ್ಸ್ಗಳಾಗಿ ಹೊಂದಿರುತ್ತದೆ) ಅನೇಕ ಬಯೋಟೆಕ್ ಕಂಪನಿಗಳು ಇದರಲ್ಲಿ ಮಾಡರ್ನಾ ಎಂಬುದು S ಪ್ರೋಟೀನ್ ಅನುವಂಶಿಕ ಸಂಕೇತದ ಒಂದು ಭಾಗವನ್ನು ಇಟ್ಟುಕೊಂಡು ದೇಹಕ್ಕೆ ಚುಚ್ಚಬಹುದಾದ ಕೊಬ್ಬಿನ ನ್ಯಾನೋಪಾಟ್ರಿಕಲ್ನೊಂದಿಗೆ ಬೆಸೆಯುವ ಮೂಲಕ ಲಸಿಕೆ ವಿನ್ಯಾಸ ಮಾಡಿದ್ದಾರೆ. ಪಿನ್ಸಿಲ್ವೇನಿಯಾ ಬಯೋಟೆಕ್ ಕಂಪನಿ ಇನೋವಿಯಾ, ಡಿ ಎನ್ ಎ (DNA) ಎಳೆಗಳನ್ನು ಉತ್ಪಾದಿಸುತ್ತಿದ್ದು ಅದು ಪ್ರತಿರಕ್ಷಣಾ ಪ್ರತಿಕ್ರಿಯೆಯನ್ನು ಉತ್ತೇಜಿಸುತ್ತದೆ ಎಂದು ಹೇಳುತ್ತಾರೆ. ಈ ರೀತಿಯ ಲಸಿಕೆಗಳನ್ನು ತ್ವರಿತವಾಗಿ ರಚಿಸಬಹುದಾದರೂ ಯಾವುದೂ ಮಾರುಕಟ್ಟೆಗೆ ಬಂದಿಲ್ಲ.

ಆದರೆ ನ್ಯಾಶನಲ್ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ (NIH) ಸಂಸ್ಥೆಯು ಲಸಿಕೆಯನ್ನು ಕಂಡುಹಿಡಿದಿದ್ದು ಆ ತನಿಖಾ ಲಸಿಕೆಯ ಸುರಕ್ಷತೆಯನ್ನು ಪರೀಕ್ಷಿಸಲು 45 ಆರೋಗ್ಯವಂತ ವಯಸ್ಕ ಸ್ವಯಂಸೇವಕರಲ್ಲಿ ಮೊದಲನೇ ಹಂತದ ವೈದ್ಯಕೀಯ ಪ್ರಯೋಗವನ್ನು ಈಗಾಗಲೇ ಸಿಯಾಟಲನಲ್ಲಿ ಪ್ರಾರಂಭಿಸಿದೆ.

ರೋಗ ತಪಾಸಣೆಯ ವಿಧಾನಗಳು:

ರೋಗಿಗಳ ಕಫಗಳನ್ನು, ಮೂಗಿನ ಮತ್ತು ಗಂಟಲಿನ‌  ಸ್ವಾಬ್ಸ್ ತೆಗೆದುಕೊಂಡು ಅದನ್ನು ವೈರಸ್ಸಿನ ಅನುವಂಶಿಕಗಾಗಿ ಹುಡುಕುತ್ತಾರೆ. ಇದನ್ನು ರಿಯಲ್-ಟೈಮ್ ಪಿ ಸಿ ಆರ್ (RT-PCR) ಮೂಲಕ ವೈರಸ್ಸಿನ ಹೊದಿಕೆ E ಜೀನ್ ಆರ್ ಎನ್ ಎ ಅನ್ನು ಮೊದಲು ಹುಡುಕುತ್ತಾರೆ ಇದು ಎಲ್ಲಾ β-ಕೊರೋನಾ ವೈರಸ್ಗಳಿಗೆ ಸಾಮಾನ್ಯವಾಗಿರುತ್ತದೆ. ಇದು  ದೃಢಪಡಿಸಿದರೆ, ಖಚಿತಪಡಿಕೊಳ್ಳಲು ORF1 ಜೀನ್ ಮತ್ತು RdRp (ಆರ್ ಎನ್ ಎ ಡಿಪೆಂಡೆಂಟ್ ಆರ್ ಎನ್ ಎ ಪಾಲಿಮರೇಸ್) ಜೀನ್ ಅನ್ನು ಬಳಸಿಕೊಳ್ಳುತ್ತಾರೆ. ಇದು 2019-nCoVಗೆ ನಿರ್ದಿಷ್ಟವಾಗಿರುತ್ತದೆ. ಈ ಆರ್ ಟಿ- ಪಿ ಸಿ ಆರ್ ವಿಧಾನವು ಪ್ರಸ್ತುತ ಚಾಲ್ತಿಯಲ್ಲಿರುವುದು,  ದೃಢೀಕೃತವು ಮತ್ತು ನಿಖರವಾಗಿರುತ್ತದೆ.

ರೋಗ ತಡೆಗಟ್ಟುವ ವಿಧಾನಗಳು:

ಪ್ರಸ್ತುತ ಯಾವುದೇ ಲಸಿಕೆಗಳಾಗಲಿ ಚಿಕಿತ್ಸೆಗಳಾಗಲಿ ಕೋವಿಡ್-19ಗೆ ಇಲ್ಲ. ಆದ್ದರಿಂದ ಸೋಂಕಿನ ಹರಡುವಿಕೆಯನ್ನು ತಡೆಯುವುದೇ ಈಗಿನ ಪರಿಸ್ಥಿತಿಯ ಮೊದಲ ಗುರಿಯಾಗಿದೆ. SARS-CoV-2 ಬಹುಮುಖ್ಯವಾಗಿ ಪ್ರಸರಣಗೊಳ್ಳುತ್ತಿರುವುದು ಒಬ್ಬ ವ್ಯಕ್ತಿಗಳಿಂದ ಮತ್ತೊಬ್ಬರಿಗೆ, ಇದನ್ನು ತಡೆಗಟ್ಟಲು ಸರ್ಕಾರವು ಎಲ್ಲಾ ಜನ ಸಾಂದ್ರತೆ ಹೊಂದುವ ಕಾರ್ಯಕ್ರಮಗಳು, ಪ್ರದೇಶಗಳು, ಸರ್ಕಾರೀ ಕೃತ, ಅನುದಾನಿತ ಕಛೇರಿ ಸಂಸ್ಥೆಗಳು, ಸಂಪೂರ್ಣವಾಗಿ ದೇಶಕ್ಕೆ ದೇಶವೇ ಮನೇಲಿರುವಂತೆ ಜನರಿಗೆ ಹೇಳಿ ಬಂಧಿಸಿದೆ.

ಹರಡುವಿಕೆ ತಡೆಯಲು ಜನರು ವೈಯಕ್ತಿಕ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕಿದೆ. ಆಗಾಗ ತಮ್ಮ ಕೆಲಸದ ಜಾಗ ವಸ್ತುಗಳನ್ನು ಸ್ಯಾನಿಟೈಜರ್ ಅಥವಾ 70% ಆಲ್ಕೊಹಾಲ್ ಬಳಸಿ ಸ್ವಚ್ಛಗೊಳಿಸುತ್ತಿರಬೇಕು. ಸಂಚರಿಸಬೇಕಾದ ಸಂದರ್ಭದಲ್ಲಿ ಮೂಗು ಬಾಯಿಗಳನ್ನು ಮುಖಗವುಸುಗಳಿಂದ ಮುಚ್ಚಿಕೊಂಡು ಓಡಾಡುವುದು ಆಕಸ್ಮಿಕ ವೈರಸ್ ದಾಳಿಯನ್ನು ತಡೆಯಬಹುದು ಆದರೆ ಯಾವುದೇ ಕಾರಣಕ್ಕೂ ಬೆವರು ಎಂದು ಬರಿಕೈಯಿಂದ ಮುಸುಕನ್ನು ಮುಟ್ಟುವುದು ವೈರಸ್ಗೆ ಒಳಗೆ ಬರಲು ದಾರಿ ಕೊಟ್ಟಂತೆ. ಇನ್ನು WHO ಐದು ಕ್ರಮಗಳನ್ನು ಪ್ರತಿಯೊಬ್ಬರು ಅನುಸರಿಸಲು ಹೇಳಿದೆ. ಅವುಗಳೆಂದರೆ, 1. ಕೈಗಳನ್ನು ಆಗಾಗ್ಗೆ 20 ಸೆಕೆಂಡ್ಗಳ ಕಾಲ ಸೋಪು ಮತ್ತು ನೀರಿನಿಂದ ಅಥವಾ ಆಲ್ಕೋಹಾಲ್ನಿಂದ ತೊಳೆಯುವುದು. 2. ಕೆಮ್ಮುವಾಗ ಮತ್ತು ಸೀನುವಾಗ ಟಿಶ್ಯೂ ಪೇಪರನಲ್ಲಿ ಅಥವಾ ಮೊಣಕೈ ಅಡ್ಡವಾಗಿಟ್ಟುಕೊಳ್ಳುವುದು. 3. ಮೂಗು, ಬಾಯಿ, ಕಣ್ಣು ಮತ್ತು ಮುಖವನ್ನು ಆಗಾಗ್ಗೆ ಮುಟ್ಟಿಕೊಳ್ಳದಿರುವುದು. 4. ಜನರಿಂದ ಕನಿಷ್ಠ ಒಂದು ಮೀಟರ್ ದೂರದಲ್ಲಿರುವುದು. 5. ಮನೆಯಲ್ಲಿಯೇ ಉಳಿಯುವುದು ಮತ್ತು ಎಲ್ಲರಿಂದ ಪ್ರತ್ಯೇಕವಾಗಿರುವುದು.

ಸ್ಥಳೀಯ ಹರಡುವಿಕೆ ತಡೆಯಲು ಹೊರದೇಶಗಳಿಂದ ಬಂದ ಜನರನ್ನು ಪರೀಕ್ಷೆಗೆ ಒಳಪಡಿಸಿ ಅವರು ರೋಗ ಲಕ್ಷಣಗಳಿಗೆ ಮತ್ತು ರೋಗತಪಾಸಣೆಯಿಂದ ದೃಢಪಡಿಸಿದರೆ ಪ್ರತ್ಯೇಕಿಸಿ ನಿಗಾ ಘಟಕದಲ್ಲಿಡುವುದು. ಅನುಮಾನ ಬಂದ ಪ್ರಕರಣಗಳನ್ನು 14 ದಿನಗಳ ವೈದ್ಯಕೀಯ ವೀಕ್ಷಣೆಯಲ್ಲಿಟ್ಟು ಮನೆಯಲ್ಲಿ ಪ್ರತ್ಯೇಕವಾಗಿರಲು ಹೇಳಿ, ರೋಗ ಲಕ್ಷಣಗಳು ಕಂಡುಬಂದರೆ ತಕ್ಷಣ ಸಹಾಯವಾಣಿ 104 (ರಾಜ್ಯದ) ಮತ್ತು 91-11-23978046 (ಕೇಂದ್ರದ) ಕರೆಮಾಡಿ ಚಿಕಿತ್ಸೆ ತೆಗೆದುಕೊಳ್ಳುವುದು. ಸಾಮಾಜಿಕವಾಗಿ ಜನರಿಂದ ಕೋವಿಡ್-19ಗೆ ಬಂದ ಪ್ರತಿಕ್ರಿಯೆಗಳು ಎಂದರೆ ಸಾಮಾಜಿಕ ದೂರೀಕರಿಸುವಿಕೆ (social distancing), ಪ್ರತ್ಯೇಕೀಕರಣ, ಸಮುದಾಯದಿಂದ ದೂರ ಉಳಿಯುವುದು (community containment).

ಈ ಎಲ್ಲಾ ಪ್ರಯತ್ನಗಳು ಹರಡುವಿಕೆಯನ್ನು ತಡೆಗಟ್ಟುವಿಕೆಗಾಗಿ ನಡೆಯುತ್ತಿದ್ದು ಇನ್ನೂ ವೈರಸ್ಸನ್ನು ಹಾಗೆಯೇ ಇಟ್ಟುಕೊಂಡಿರುವುದು ವಾಸ್ತವ. ಹೀಗಾಗಿ ನಿರ್ಲಕ್ಷ್ಯತೋರದೆ ಜನರ ಹಿತಕ್ಕಾಗಿ ಸರ್ಕಾರ ತರುತ್ತಿರುವ ನೀತಿಗಳನ್ನು ಪಾಲಿಸಿ SARS-CoV-2 ಎದುರು ಹೋರಾಡಬೇಕಿದೆ.

ಜೀನ್ ಮತ್ತು ಜೀನ್ ಎಡಿಟಿಂಗ್

dna640

ಗ್ರೆಗರ್ ಮೆಂಡೆಲ್ ಬಟಾಣಿ ಗಿಡದ ಗುಣಗಳನ್ನು ಅರಿಯಲು ನಡೆಸಿದ ಸಂಶೋಧನೆ ಮುಂದೆ ಜೆನೆಟಿಕ್ಸ್ ಅನ್ನುವ ಅರಿವಿನ ಕವಲು ಹೊರಹೊಮ್ಮಲು ಕಾರಣವಾಯಿತು. ಎತ್ತರ, ಬಣ್ಣ ರೋಗತಡೆಯುವ ಗುಣ ಜಾಣತನದ ಮಟ್ಟ ಹೀಗೆ ನಮ್ಮ ಹಲವು ಗುಣಗಳ ಮೂಲದಲ್ಲಿರುವುದು ಜೀನ್ಸ್ . ಇತ್ತೀಚಿನ ದಿನಗಳಲ್ಲಿ ಜೀನ್ ಮಾರ್ಪಾಟು ಮಾಡುವ ಸಂಶೋಧನೆಗಳು ಮುನ್ನೆಲೆಯಲ್ಲಿದ್ದು ಇದನ್ನು ತಕ್ಕಮಟ್ಟಿಗೆ ಅರ್ಥಮಾಡಿಕೊಳ್ಳುವುದು ಅಗತ್ಯವಾಗಿದೆ.

ಜೀನ್ ಮಾರ್ಪಾಟು ಎಂದಕೂಡಲೆ ಸಾಮಾನ್ಯ ಜನರಲ್ಲಿ ಗಾಬರಿ ಅಚ್ಚರಿ ಎಲ್ಲವೂ ಒಮ್ಮೆಲೇ ಆಗುವುದು ಅತೀ ಸಹಜ. ಸಿನಿಮಾಗಳಲ್ಲಿ ನೋಡಿರುವಂತೆ ಡಿಎನ್ಎಯಲ್ಲಿ ಬದಲಾವಣೆ ಆದ ಕಾರಣ ಒಬ್ಬ ಸಾಮಾನ್ಯ ಮನುಷ್ಯ ಸ್ಪೈಡರ್-ಮ್ಯಾನ್ ಆಗಿ ರೂಪ ಪಡೆಯುತ್ತಾನೆ. ಹಾಗಾದರೆ ಇದು ಸಾಧ್ಯನಾ ? ಹೌದು ಎಂದರೆ ತಪ್ಪೇನು ಇಲ್ಲ. ಪ್ರಕೃತಿಯಲ್ಲಿ ಇದು ದಿನನಿತ್ಯವೂ ನಡೆಯುವ ಕ್ರಿಯೆ ಆದರೆ, ಪ್ರಕೃತಿ ಒಮ್ಮೆಲೆಗೆ ಸ್ಪೈಡರ್ ಮ್ಯಾನನ್ನು ಹುಟ್ಟುಹಾಕಿಲ್ಲ ! ಬದಲಾಗಿ ಭೂಮಿಯಲ್ಲಿ ಜೀವಿಗಳ ಬೆಳವಣಿಗೆ ನಿಧಾನವಾಗಿ ನಡೆಯುತ್ತಲಿದ್ದು ಮುಂದೊಂದು ದಿನ ಸ್ಪೈಡರ್ ಮ್ಯಾನ್ ಆಗಲು ಬಹುದು!

ಹಾಗಾದರೆ ಜೀವಿಗಳ ಬೆಳವಣಿಗೆಗೆ ಕಾರಣವಾದ ಅಂಶ ಯಾವುದು? ಮಾನವಕುಲದ ಒಳಿತಿನೆಡೆ ಮನುಷ್ಯ ಪ್ರಯೋಗಾಲಯದಲ್ಲಿ ಮಾಡಿರುವ, ಮಾಡುತ್ತಿರುವ ಹಾಗು ಮಾಡಬಹುದಾದ ಜೆನೆಟಿಕ್ ಇಂಜಿನಿಯರಿಂಗ್ ಸಂಶೋಧನೆಗಳು ಏನು ? ಇದರ ಬಗ್ಗೆ ಒಂದು ಚಿಕ್ಕ ಪರಿಚಯ.

gene

ಜೀವಿಗಳ ಲಕ್ಷಣಗಳು ಅದರ ಅನುವಂಶಿಕ ವಸ್ತುವಿನಲ್ಲಿ (nucleic acid) ಅಡಗಿರುತ್ತದೆ. ಈ ವಸ್ತುವು DNA ಅಥವಾ RNA ಆಗಿರುತ್ತದೆ. ಮಾನವ, ಪ್ರಾಣಿ, ಸಸ್ಯ, ಬ್ಯಾಕ್ಟೀರಿಯ, ವೈರಸ್ ಹೀಗೆ ಎಲ್ಲಾ ಜೀವಿಗಳ ಜೀವಕೋಶಗಳು DNA ಯನ್ನು ಹೊಂದಿರುತ್ತವೆ. ಸಂತಾನೋತ್ಪತ್ತಿ ಸಮಯದಲ್ಲಿ ಡಿಎನ್ಎ ಒಂದು ತಲೆಮಾರಿನಿಂದ ಮತ್ತೊಂದಕ್ಕೆ ವರ್ಗಾಯಿಸಲ್ಪಡುತ್ತದೆ. ‘ಜೀನೋಮ್’ ಎಂಬ ಪದವು ಸಾಮಾನ್ಯವಾಗಿ ಜೀವಿಗಳ ಸಂಪೂರ್ಣ ಡಿಎನ್ಎ ಅನುಕ್ರಮವನ್ನು ಸೂಚಿಸುತ್ತದೆ, ಜಿನೊಮ್ ಜೀನ್ಸ್ ಒಳಗೊಂಡಿರುತ್ತದೆ.

ಜೀನ್ ಎಂದರೆ ನಿರ್ದಿಷ್ಟ ಕಾರ್ಯನಿರ್ವಹಣೆಯಲ್ಲಿ ತೊಡಗಿರುವ, ಪ್ರೋಟೀನ್ ತಯಾರಿಕೆಯ ಮಾಹಿತಿ ಹೊಂದಿರುವ ಡಿಎನ್ಎ ಸರಣಿಗಳು. ಜೀನೋಮಿನಲ್ಲಿ ಜೀನ್ ಗಳ ಜೊತೆ ಜೀನ್ ಚಟುವಟಿಕೆಗಳನ್ನು ಹೆಚ್ಚಿಸುವ ಅಥವಾ ತಡೆಯುವ ಡಿಎನ್ಎ ಸರಣಿಗಳೂ ಇರುತ್ತವೆ. ಸರಳವಾಗಿ ಹೇಳುವುದಾದರೆ ಡಿಎನ್ಎ ಯ ಉದ್ದೇಶಪೂರ್ವಕ ಬದಲಾವಣೆಯ ತಂತ್ರವನ್ನು ಜೀನ್ ಎಡಿಟಿಂಗ್ ಎನ್ನಲಾಗುತ್ತದೆ.

ಜೀವವಿಜ್ಞಾನದ ಈ ವಿಭಾಗವು ಬೆಳೆದು ಬಂದ ದಾರಿಯು ಒಂದು ಸೋಜಿಗ! ಜೆನೆಟಿಕ್ ಎಂಜಿನಿಯರಿಂಗ್ ಕ್ಷೇತ್ರದ ಈಗಿನ ಆಳ, ಹರಿವುಗಳನ್ನು ಅರ್ಥಮಾಡಿಕೊಳ್ಳಲು ಅದರ ಹುಟ್ಟಿನ ಮತ್ತು ಪ್ರಗತಿಯ ಇತಿಹಾಸವನ್ನು ಅತಿ ಮುಖ್ಯವಾಗಿ ಅರಿತುಕೊಳ್ಳಬೇಕಾಗುತ್ತದೆ. 1953 ಜೇಮ್ಸ್ ವಾಟ್ಸನ್, ಫ್ರಾನ್ಸಿಸ್ ಕ್ರಿಕ್ ಮತ್ತು ರೋಸಲಿಂಡ್ ಫ್ರಾಂಕ್ಲಿನ್ರವರು ಡಿಎನ್ಎ ರಚನೆಯ ಡಬಲ್ ಹೆಲಿಕ್ಸ್ ರಚನೆಯನ್ನು ಪ್ರಕಟಿಸಿದ್ದು ಬಹುಮುಖ್ಯ ಆಯಾಮವಾಯಿತು. 1958 ರಲ್ಲಿ ಮೊದಲ ಸಲ ಡಿಎನ್ಎ ಟೆಸ್ಟ್ ಟ್ಯೂಬಿನಲ್ಲಿ ತಯಾರಿಸಲ್ಪಟ್ಟಿತು (ಆರ್ಥರ್ ಕೊರ್ನ್ಬರ್ಗ್ ). ನಂತರದ ದಿನಗಳಲ್ಲಿ ವೆರ್ನೆರ್ ಆರ್ಬರ್ ರವರು ನಿರ್ಬಂಧಿತ ಕಿಣ್ವಗಳನ್ನು (Restriction enzymes) ಹಾಗು ಗೆಲ್ಲೆರ್ಟ್ಲೆ, ಲೆಹ್ಮಾನ್, ರಿಚರ್ಡಸನ್ ಮತ್ತು ಹರವಿಟ್ಜ್ ಲಾಬೊರೇಟರೀಸ್, ಲೈಗೇಸ್ ಕಿಣ್ವದ ಸಹಾಯದಿಂದ ಡಿಎನ್ಎ ತುಂಡುಗಳ ಜೋಡಣೆಮಾಡಲು ಸಾಧ್ಯ ಎನ್ನುವುದನ್ನು ಪ್ರಕಟಿಸಿದರು. ಹರ್ ಗೋವಿಂದ ಖೋರಾನಾರವರು ನ್ಯೂಕ್ಲಿಕ್ ಅಸಿಡ್ ಮತ್ತು ನ್ಯೂಕ್ಲಿಯೊಟೈಡ್ಸ್ ನಿಂದ (Adenine, Thymine, Guanidine and Cytosine) ಮಾಡಲಾಗಿದೆಯೆಂಬುದನ್ನು ತೋರಿಸಿದರು, ಅದು ಜೀವಕೋಶದ ಆನುವಂಶಿಕ ಸಂಕೇತವನ್ನು ಸಾಗಿಸುತ್ತದೆ ಮತ್ತು ಪ್ರೋಟೀನ್ಗಳು ಕೋಶದ ಸಂಶ್ಲೇಷಣೆಯನ್ನು ನಿಯಂತ್ರಿಸುತ್ತದೆ ಎಂಬುದನ್ನು ಪ್ರಕಟಿಸಿದರು. ಇನ್ನು ಹತ್ತು ಹಲವು ಬಗೆಯ ಸಂಶೋಧನೆಗಳ ಆಧಾರದ ಮೇಲೆ ಮಂದಗತಿಯಲ್ಲಿ ನಡೆದು ಬಂದು ಈಗ ವಿಜ್ಞಾನದ ಒಂದು ಪ್ರಮುಖ ಹಾಗು ಅತೀ ಅಗತ್ಯವಾದ ವಿಭಾಗವಾಗಿ ಹೊಮ್ಮಿದೆ.

ಎಲ್ಲಾ ಜೆನೆಟಿಕ್ ಬದಲಾವಣೆಗಳು ಪ್ರೋಟೀನ್ ತಯಾರಿಕೆಯ ಮೇಲೆ ಪ್ರಭಾವ ಹೊಂದಿದ್ದು ಪ್ರೋಟೀನ್ ತಯಾರಿಕೆಯ ಬದಲಾವಣೆಗಳು ಜೀವಿಯ ಗುಣಗಳಲ್ಲಿ ಬದಲಾವಣೆ ತರುತ್ತವೆ. ಜೀನ್ ಎಡಿಟಿಂಗ್ ಬೇರೆ ಬೇರೆ ರೀತಿಯಲ್ಲಿ ಮಾಡಬಹುದು. ಹೊಸ ಜೀನ್‍ಗಳ ಜೋಡಣೆ, ಇರುವ ಜೀನ್‍ಗಳ ಬದಲಾವಣೆ, ಬೇಡದೆ ಇರುವ ಜೀನ್‍ಗಳನ್ನು ತೆಗೆಯುವುದು, ತಪ್ಪು ಪ್ರೋಟೀನ್ ತಯಾರಿಕೆಯಲ್ಲಿ ತೊಡಗಿರುವ ಜೀನ್‍ಗಳನ್ನು ಸರಿಪಡಿಸುವುದು. ಇದನ್ನು ಸಾಧಿಸಲು ಬೇಕಾಗುವ ಮುಖ್ಯ ಸಾಧನಗಳೆಂದರೆ ವೆಕ್ಟರ್ (ಹೊತ್ತೊಯ್ಯುಕ), ನಿರ್ಬಂಧಿತ ಕಿಣ್ವಗಳು, ಡಿಎನ್ಎ ಲೈ ಗೇಸ್ (ಜೋಡಕ ಕಿಣ್ವ ) ಮತ್ತು ಡಿಎನ್ಎ ಪಾಲಿಮರೇಸ್ (ನ್ಯೂಕ್ಲಿಯೋಟೈದೆ ಜೋಡಣೆ ಮಾಡುವ ಕಿಣ್ವ ). ಈ ಎಲ್ಲ ಸಾಧನಗಳ ಬಳಕೆ ಇಂದ ಕ್ಲೋನಿನ್ ಸಾಧ್ಯ.

ಜೆನೆಟಿಕ್ ಎಂಜಿನಿಯರಿಂಗ್ ತಂತ್ರಜ್ಞಾನದ ಉಪಯೋಗಗಳು ಬಹಳ. ವೈದ್ಯಕೀಯ ಕ್ಷೇತ್ರದಲ್ಲಿ ಅತಿ ಸುಲಭ ರೀತಿಯಲ್ಲಿ ರೋಗನಿರೋಧಕಗಳ ತಯಾರಿಸುವಿಕೆ, ಇನ್ಸುಲಿನ್ ತಯಾರಿಸುವಿಕೆ. ಕ್ಯಾನ್ಸರಿನಂತಹ ಮಾರಕ ರೋಗಗಳನ್ನು ಗುಣಪಡಿಸುವಲ್ಲಿ ಕ್ರಿಸ್ಪರ್ (CRISPR) ಎಂಬ ಜೆನೆಟಿಕ್ ತಂತ್ರಜ್ಞಾನ ಹೊಮ್ಮುತ್ತಿದೆ. ಕೃಷಿ ಕ್ಷೇತ್ರದಲ್ಲಿ ಕೀಟ ತಡೆ, ಹೆಚ್ಚು ಇಳುವರಿ ಕೊಡುವ ತಳಿಗಳನ್ನು ತಯಾರಿಸುವುದು ಮತ್ತು ಅದರ ಬಳಕೆ. ಉದಾಹರಣೆಗೆ, ಬಿಟಿ ಹತ್ತಿ, ಬಿಟಿ ಬದನೆಕಾಯಿ, ಬಿಟಿ ಮೆಕ್ಕೆಜೋಳ. ಹಾಗೆನೇ ಕಸ ಹಾಗು ಕೊಳಚೆ ನಿರ್ಮೂಲನೆ ನಿಟ್ಟಿನಲ್ಲಿ ಕೆಲಸ ನೆಡೆದಿದ್ದು ಪ್ಲಾಸ್ಟಿಕ್ ಕೊಳೆಸುವಿಕೆ, ಇಂಧನ ತಯಾರಿಸುವ ಸೂಕ್ಷ್ಮಜೀವಿಗಳನ್ನು ಕಂಡುಹಿಡಿಯುವ ಸಂಶೋಧನೆ ನಡೆಯುತ್ತಿದೆ.

ಯಾವುದೇ ವೈಜ್ಞಾನಿಕ ಕ್ಷೇತ್ರದಲ್ಲಿಕಂಡುಬರುವ ಹಾಗೆ ಇದರಲ್ಲೂ ಪರ ಮತ್ತು ವಿರೋಧದ ಚರ್ಚೆಗಳು ಬಿರುಸಾಗಿವೆ. ಜೆನೆಟಿಕ್ ಇಂಜಿನಿಯರಿಂಗ್ ನ ಪರಿಣಾಮಗಳನ್ನು ವೈಜ್ಞಾನಿಕ ನೆಲೆಯಲ್ಲಿ ಪೂರ್ತಿಯಾಗಿ ತಿಳಿಯದೆ ಮುನ್ನಡೆದರೆ ದುಶ್ಪರಿಣಾಮಗಳು ಸಂಭವಿಸುತ್ತವೆ ಎನ್ನುವುದು ಕೆಲ ವಿಜ್ಞಾನಿಗಳ ಅಭಿಪ್ರಾಯ. ಉದಾಹರಣೆಗೆಇದರದುರ್ಬಳಕೆಯಿಂದಜೈವಿಕ ಯುದ್ಧಗಳು ನಡೆಯಬಹುದು.

ಈ ಇಬ್ಬರು ಮಹನೀಯರು ಹೇಳಿರುವ ಹಾಗೆ, ಇದೊಂದು ವಿಸ್ಮಯ ಜಗತ್ತು, ಪ್ರಕೃತಿಯಲ್ಲಿ ಈ ಎಲ್ಲಾ ಕ್ರಿಯೆಗಳು ದಿನ ನಿತ್ಯ ನಡೆಯುತ್ತಲಿವೆ ಅದನ್ನು ಮನುಷ್ಯ ಅರ್ಥ ಮಾಡಿಕೊಂಡು ಒಳ್ಳೆಯ ರೀತಿಯಲ್ಲಿ ಅದನ್ನು ಬಳಸಿದರೆ ಒಳಿತು…

ಪ್ರಕೃತಿಯೊಳಗೆ ಆಳವಾಗಿ ಇಳಿದಷ್ಟು ಎಲ್ಲವನ್ನೂಇನ್ನಷ್ಟುಚೆನ್ನಾಗಿಅರಿತುಕೊಳ್ಳಬಹುದು

– ಅಲ್ಬರ್ಟ್ ಐನ್ಸ್ಟೀನ್

ವಿಜ್ಞಾನ ಮಾನವೀಯತೆಗೆ ಒಂದು ಸುಂದರ ಕೊಡುಗೆಯಾಗಿದೆ; ನಾವು ಅದನ್ನು ವಿರೂಪಗೊಳಿಸಬಾರದು.

– ಎ. ಪಿ. ಜೆ. ಅಬ್ದುಲ್ ಕಲಾಂ

 

(ಚಿತ್ರಸೆಲೆಗಳು: the anatomy of evolution, Northwestern Now – Northwestern University)

ಹುದುಗುವಿಕೆಯ ಚಳಕ ಮತ್ತು ಅದರ ಬಳಕೆ

ನಮ್ಮ ನಮ್ಮ ಮನೆಗಳಲ್ಲಿ ಅಮ್ಮ ಮಾಡುವ ರುಚಿಯಾದ ಇಡ್ಲಿ ಅಥವಾ ದೋಸೆ ತಿನ್ನುತ್ತಾ ತಿಂಡಿಗಳು ಹೇಗೆ ಇಷ್ಟು ರುಚಿಯಾಗಿ, ಮೆದುವಾಗಿವೆ ಎಂದು ಯೋಚಿಸಿದ್ದೀರಾ? ಹಾಲು ಹೇಗೆ ತನ್ನಷ್ಟಕ್ಕೆ ತಾನೇ ಮೊಸರಾಗುತ್ತದೆ? ಹಾಗೆ ಅಜ್ಜಿ ಮಾಡಿಟ್ಟ ಉಪ್ಪಿನಕಾಯಿ ಹೇಗೆ ತಿಂಗಳುಗಟ್ಟಲೆ ಕೆಡದೆ ಅದರ ವಿಶಿಷ್ಟ ರುಚಿ ಉಳಿಯತ್ತೆ ಎಂದು ತಲೆ ಕೆಡಿಸಿಕೊಂಡಿದ್ದೀರಾ? ಇವುಗಳ ಹಿಂದಿರುವ ಚಳಕವೇ ಹುದುಗುವಿಕೆ ಅಥವಾ ಹುಳಿಯುವಿಕೆ (Fermentation). ಇದನ್ನು ಮನುಷ್ಯರು ನೂರಾರು ವರ್ಷಗಳಿಂದ ಬಳಸುತ್ತಿದ್ದಾರೆ. ಇಂದಿಗೂ ದಿನನಿತ್ಯದ ಬದುಕಿನಲ್ಲೂ ಇದರ ಬಳಕೆ ಬಹಳ ಸಾಮಾನ್ಯ.

 ಏನಿದು ಹುದುಗುವಿಕೆ ?

ಫಂಗೈ ಹಾಗು ಬ್ಯಾಕ್ಟೀರಿಯಾದಂತಹ ಕಿರುಜೀವಿಗಳು ನಮ್ಮ ಆಹಾರವನ್ನು ಗಾಳಿಯ ಆಮ್ಲಜನಕ ಇರುವೆಡೆ ಇಲ್ಲವೇ ಗಾಳಿಯಿಲ್ಲದೆಡೆ, ಸಕ್ಕರೆಯ ಅಂಶ (ಗ್ಲುಕೋಸ್) ಸೇವಿಸಿ ಬೇರೆ ಪದಾರ್ಥಗಳನ್ನು ತಯಾರಿಸುವ ಬಗೆಯೇ ಹುದುಗುವಿಕೆಗೆ ಕಾರಣ. ಸಾಮಾನ್ಯ ಪರಿಸ್ಥಿತಿಯಲ್ಲಿ ಗಾಳಿಯ ಕೊರತೆ ಇರುವುದಿಲ್ಲ, ಬಗೆಯ ಸೇವನೆಯನ್ನು ಏರೋಬಿಕ್ ಮೆಟಾಬೋಲಿಸಮ್ (Aerobic metabolism) ಎನ್ನುತ್ತಾರೆ. ಆಮ್ಲಜನಕದ ಕೊರತೆಯಿದ್ದಾಗ ಕಿರುಜೀವಿಗಳ ಸೇವನೆಯ ಬಗೆ ಬೇರೆಯಾಗಿರುತ್ತದೆ, ಅದನ್ನು ಅನ್ಯೆರೋಬಿಕ್ ಮೆಟಾಬೋಲಿಸಮ್ (Anaerobic Metabolism) ಎನ್ನುತ್ತಾರೆ. ಹೀಗೆ ಎರಡೂ ಬಗೆಯಲ್ಲಿ ಸೇವಿಸುವ ಜೊತೆಗೆ ಅವು ಆಲ್ಕೋಹಾಲ್ ಅಥವಾ ಇನ್ನಿತರ ರಾಸಾಯನಿಕ ಪದಾರ್ಥವನ್ನು ತಯಾರಿಸುತ್ತವೆ. ಫಂಗೈ ಹಾಗು ಬ್ಯಾಕ್ಟೀರಿಯಾಗಳ ಗುಣವನ್ನು ಜನರು ತಮ್ಮ ಅನುಕೂಲಕ್ಕೆ ಬಳಸುವ ಚಳಕವೇ ಹುದುಗುವಿಕೆ.

 36383574_1760910227333441_1638605155286908928_n

ಹುದುಗುವಿಕೆ ಚಳಕದ ಬಳಕೆ: 

ಸಾಮಾನ್ಯವಾಗಿ ಅಡುಗೆಯಲ್ಲಿ ಬ್ಯಾಕ್ಟೀರಿಯಾ ಅಥವಾ ಫಂಗೈನ ಕೆಲಸ ಇರುವುದಿಲ್ಲ, ಆದರೆ ಹುದುಗಿದ ತಿನಿಸು ಹಾಗು ಅಡಿಗೆಯಲ್ಲಿ ಬ್ಯಾಕ್ಟೀರಿಯಾ ಹಾಗು ಫಂಗೈನ ಕೆಲಸದಿಂದ ಅಡುಗೆಯ ರುಚಿ, ಪೌಷ್ಟಿಕತೆ, ಗುಣಗಳನ್ನು ಹೆಚ್ಚಿಸುತ್ತವೆ, ಕಾರಣಕ್ಕೆ ಹುದುಗಿದ ತಿನಿಸುಗಳಿಗೆ ಬೇಡಿಕೆ ಹೆಚ್ಚು. ಇಡ್ಲಿ, ದೋಸೆ, ಉಪ್ಪಿನಕಾಯಿ ಇವುಗಳ ರುಚಿ ಹೆಚ್ಚುವುದು ಹುದುಗುವಿಕೆಯಿಂದಲೇ. ಇಡ್ಲಿ ಹಾಗು ದೋಸೆ ಮಾಡವ ಹಿಂದಿನ ದಿನ ಹಿಟ್ಟನ್ನು ನೆನಸಿಟ್ಟಾಗ ಕಿರುಜೀವಿಗಳು ಅದನ್ನು ಅನ್ಯೆರೋಬಿಕ್ ಮೆಟಾಬೋಲಿಸಮ್ ಮೂಲಕ ಸೇವಿಸಿ ಲ್ಯಾಕ್ಟಿಕ್ ಆಸಿಡ್ ತಯಾರಿಸುತ್ತದೆ ಹಾಗೆಯೆ ಹಿಟ್ಟು ಮೆದುವಾಗುತ್ತದೆ.

ಉಪ್ಪಿನಕಾಯಿ ಮಾಡುವಾಗ ಕಾಯಿಯ ತುಂಡುಗಳನ್ನು ಉಪ್ಪಿನಲ್ಲಿ ಕಲಸಿ ಗಾಳಿಯಾಡದಂತೆ ಮುಚ್ಚಿಟ್ಟಾಗ ಕಾಯಿಯ ಸಿಪ್ಪೆಯಲ್ಲಿದ್ದ ಲ್ಯಾಕ್ಟೊಬಸಿಲ್ಲುಸ್ (Lactobacillus) ಎಂಬ ಬ್ಯಾಕ್ಟೀರಿಯಾ ಕಾಯಿಯನ್ನು ಸೇವಿಸಿ ಲ್ಯಾಕ್ಟಿಕ್ ಆಸಿಡ್ ತಯಾರಿಸುವುದರ ಪರಿಣಾಮ ಉಪ್ಪಿನಕಾಯಿಗೆ ತನ್ನದೇ ಆದ ರುಚಿ ಒದಗುತ್ತದೆ, ಅಲ್ಲದೇ ಉಪ್ಪಿನೊಂದಿಗೆ ಲ್ಯಾಕ್ಟಿಕ್ ಆಸಿಡ್ ಇರುವುದರಿಂದ ಅದು ಕೆಡದೆ ಬಹಳ ಕಾಲ ಇರುತ್ತದೆ. ಇದೇ ಬ್ಯಾಕ್ಟೀರಿಯಾದ ಇಂತಹದೇ ಕೈಚಳಕದಿಂದ ಹಾಲು ಮೊಸರಾಗುವುದು ಕೂಡ. ಅಲ್ಲದೆ ಎಲ್ಲಾ ತರಹದ ಹೆಂಡಗಳು (ರಮ್, ವೈನ್, ವಿಸ್ಕಿ, ಇತ್ಯಾದಿ) ಎಲ್ಲವೂ ತಯಾರಾಗುವುದು ಹುದುಗುವಿಕೆಯಿಂದಲೇ. ಬ್ಯಾಕ್ಟೀರಿಯಾಗಳು ಹಣ್ಣು ಹಾಗು ತರಕಾರಿಗಳ ರಸವನ್ನು ಗಾಳಿಯಿಲ್ಲದ ಸಂದರ್ಭದಲ್ಲಿ ಸೇವಿಸಿ ಆಲ್ಕೋಹಾಲ್ ತಯಾರಿಸುತ್ತದೆ. ಬಗೆ ಬಗೆಯ ಹಣ್ಣು ಹಾಗು ತರಕಾರಿಗಳನ್ನು ಬಳಸಿ ಬಗೆ ಬಗೆಯ ಹೆಂಡಗಳನ್ನು ತಯಾರಿಸುತ್ತಾರೆ.

 ಹುದುಗುವಿಕೆಯ ಇತಿಹಾಸ:

ಯಾವಾಗ ಜನರು ಹಾಲನ್ನು ಮೊಸರು ಮಾಡುವುದನ್ನು ಕಲಿತರೋ, ಇಡ್ಲಿ, ದೋಸೆ, ಉಪ್ಪಿನಕಾಯಿ ಮಾಡಲು ಶುರುಮಾಡಿದರೋ, ಹೆಂಡ ತಯಾರಿಸಲು ಕಲಿತುಕೊಂಡರೋ ಅಂದೇ ಹುದುಗುವಿಕೆಯ ಬಳಕೆ ಶುರುವಾಯಿತು. ಸರಿ ಸುಮಾರು 6000 B.C.E ಯಲ್ಲಿ ಚೀನಾದ ಒಂದು ಪ್ರಾಂತ್ಯದಲ್ಲಿ ಒಂದು ಬಗೆಯ ಮದ್ಯ ತಯಾರಿಸಿದ ಪುರಾವೆ ಸಿಕ್ಕಿದೆ. ಹೀಗೆ ಬಗೆ ಬಗೆಯ ಹುದುಗಿದ ತಿನಿಸುಗಳನ್ನು ಸಾವಿರಾರು ವರುಷಗಳಿಂದ ತಯಾರಿಸಿದ ಪುರಾವೆಗಳು ಬಹಳಷ್ಟು ಇವೆ. ಆದರೆ ಇದರ ವೈಜ್ಞಾನಿಕ ಹಿನ್ನಲೆ ಯಾರು ಅರಿತಿರಲಿಲ್ಲ.

ಹುದುಗುವಿಕೆ ಹಿಂದಿನ ವಿಜ್ಞಾನವನ್ನು ಮೊದಲು ಅರಕೆ ಮಾಡಿದ್ದು ಫ್ರಾನ್ಸ್ ಮೂಲದ ಹೆಸರಾಂತ ವಿಜ್ಞಾನಿ ಲೂಯಿಸ್ ಪಾಶ್ಚರ್ (Louis Pasteur). ಸುಮಾರು 18ನೇ ಶತಮಾನದಲ್ಲಿ ಹಲವಾರು ವಿಜ್ಞಾನಿಗಳು ಹುದುಗುವಿಕೆ ಒಂದು ರಾಸಾಯನಿಕ ಕ್ರಿಯೆ ಎಂದು ಭಾವಿಸಿದ್ದರು, ಆದರೆ 1856ರಲ್ಲಿ ಪಾಶ್ಚರ್ ಅವರನ್ನು ಅವರ ಶಿಷ್ಯರ ತಂದೆಯೊಬ್ಬರು ತಮ್ಮ ವೈನ್ ತಯಾರಿಕೆಯಲ್ಲಿ ಆಗುತ್ತಿರುವ ತೊಂದರೆಗೆ ಪರಿಹಾರ ಸೂಚಿಸಲು ಕೇಳಿಕೊಂಡರು. ಅವರ ತೊಂದರೆ ಏನೆಂದರೆ, ಇವರು ಸರಿ ತಿಳಿದ ದಾರಿಯಲ್ಲಿ ತಯಾರು ಮಾಡುತ್ತಿದ್ದ ವೈನ್ ರುಚಿ ಹಾಳಾಗುತ್ತಿತ್ತು. ಆಗ ತೊಂದರೆಯಿಂದ ಕುತೂಹಲಗೊಂಡ ಪಾಶ್ಚರ್ ಅವರು ವೈನ್ ಮಾಡುವ ಬಗೆಯ ಬಗ್ಗೆ ತನಿಕೆ ಮಾಡಿದಾಗ ಹೊಸ ವಿಷಯವೊಂದು ಇವರ ಗಮನಕ್ಕೆ ಬಂತು

ಹಣ್ಣಿನ ರಸವನ್ನು ವೈನ್ ಮಾಡಲು ಯೀಸ್ಟ್ ಅನ್ನು ಬಳಸುತ್ತಿದ್ದರು, ಇದು ಹಣ್ಣಿನ ಸಕ್ಕರೆ ಅಂಶವನ್ನು ಗಾಳಿಯಿಲ್ಲದ ಏರ್ಪಾಡಿನಲ್ಲಿ ಸೇವಿಸಿ ಆಲ್ಕೋಹಾಲ್ ತಯಾರಿಸುತ್ತಿತ್ತು, ಇದೆ ವೈನ್ ಆಗುವ ಬಗೆ ಎಂದು ತಿಳಿಯಿತು. ವೈನ್ ಕೆಡುವುದಕ್ಕೆ ಕಾರಣವು ಮತ್ತೊಂದು ಬಗೆಯ ಯೀಸ್ಟ್ ಎಂಬುದು ತಿಳಿಯಿತು. ಯೀಸ್ಟ್, ಫಂಗೈ ಇವುಗಳು ಕಿರುಜೀವಿಗಳ ಬಗೆಗಳಾಗಿವೆ, ಇವುಗಳಲ್ಲಿ ಬಗೆ ಬಗೆಯ ಜಾತಿಗಳಿರುತ್ತವೆ. ಹೇಗೆ ಒಂದು ಜಾತಿಯ ಯೀಸ್ಟ್ ಸಕ್ಕರೆ ಅಂಶವನ್ನು ಆಲ್ಕೋಹಾಲ್ ಬದಲಿಗೆ ಲ್ಯಾಕ್ಟಿಕ್ ಆಸಿಡ್ ಆಗಿ ಬದಲಿಸುತ್ತಿತ್ತು. ಹೆಚ್ಚಿನ ಅರಕೆ ನಡೆಸಿದಾಗ ವೈನ್ ತಯಾರಿಸಲು ಬಳಸುತ್ತಿದ್ದ ಯೀಸ್ಟ್ ಮಿಶ್ರಣದಲ್ಲಿ, ಬೇರೊಂದು ಜಾತಿಯ ಯೀಸ್ಟ್ ಸೇರಿಕೊಂಡಿದ್ದು ತಿಳಿಯಿತು. ವೈನ್‍ನ ರುಚಿ ಕೆಡಲು ಇದೇ ಕಾರಣ!.

36343675_1760912287333235_2991375452431450112_n

(ಹುದುಗುವಿಕೆಯ ಸಂಶೋಧನೆಯಲ್ಲಿ ಲೂಯಿಸ್ ಪಾಶ್ಚರ್)

ತನಿಕೆಯಿಂದ ಹುದುಗುವಿಕೆಯ ಕ್ರಿಯೆ ಕಿರುಜೀವಿಗಳ ಕೈಚಳಕ ಎಂದು ಸಾಬೀತಾಯಿತು. ಅಲ್ಲದೆ, ಬಗೆ ಬಗೆಯ ಬ್ಯಾಕ್ಟೀರಿಯಾಗಳು ಹಾಗು ಫಂಗೈಗಳು ತಮ್ಮದೇ ವಿಶಿಷ್ಟ ರೀತಿಯಲ್ಲಿ ಆಹಾರ ಸೇವಿಸಿ ಆಲ್ಕೋಹಾಲ್ ಅಥವಾ ಆಸಿಡ್‍ಗಳನ್ನು ತಯಾರಿಸುತ್ತದೆ ಎಂದು ತಿಳಿಯಿತು. ಪಾಶ್ಚರ್ ಅವರ ತನಿಕೆಯಿಂದ ಅವರಿಗೆ ಹುದುಗುವಿಕೆ ಚಳಕದ ತಂದೆ (Father of Fermentation Technology) ಎಂಬ ಪಟ್ಟ ಸಿಕ್ಕಿತು.

ಪಾಶ್ಚರ್ ಅವರ ಹೊಸ ಹುಡುಕಿನಿಂದ ಜನ ಕಿರುಜೀವಿಗಳನ್ನು ನೋಡುವ ಬಗೆಯೇ ಬದಲಾಯಿತು. ಬ್ಯಾಕ್ಟೀರಿಯಾ ಹಾಗು ಫಂಗೈ ಬರೀ ಮನುಷ್ಯರಿಗೆ ಹಾನಿ ಮಾಡುತ್ತದೆ, ಇವುಗಳಿಂದ ಯಾವುದೇ ಒಳಿತಿಲ್ಲ ಎಂಬ ನಂಬಿಕೆಗೆ ಬದಲಾಗಿ ಇವುಗಳು ನಮಗೆ ತಿಳಿಯದೆ ನಮಗೆ ಸಾವಿರಾರು ವರುಷಗಳಿಂದ ನಮಗೆ ಏನೆಲ್ಲಾ ಉಪಕಾರ ಮಾಡಿವೆ ಎಂಬ ಮನಸ್ಥಿತಿ ಹುಟ್ಟಿತು. ಪಾಶ್ಚರ್ ಅವರ ಸಂಶೋಧನೆಯ ನಂತರ ಹುದುಗುವಿಕೆಯ ಬಗ್ಗೆ ವಿಜ್ಞಾನಿಗಳಲ್ಲಿ ಹೆಚ್ಚು ಆಸಕ್ತಿ ಮೂಡಿತು

1897 ರಲ್ಲಿ ಎಡ್ವರ್ಡ್ ಬುಕ್ನೆರ್, ಜರ್ಮನಿಯ ವಿಜ್ಞಾನಿಯೊಬ್ಬರು ಕಿರುಜೀವಿಗಳು ಬದುಕಿಲ್ಲದಿದ್ದರೂ ಅವುಗಳಿಂದ ತೆಗೆದ ರಸದಿಂದಲೇ ಹುದುಗುವಿಕೆಯಾಗುತ್ತದೆ ಎಂದು ತೋರಿಸಿದರು. ಸತ್ತ ಯೀಸ್ಟ್ ಇಂದ ತೆಗೆದ ರಸದಿಂದ ಸಕ್ಕರೆ ಆಲ್ಕೋಹಾಲ್ ಆಗಿ ಬದಲಾಗಿದ್ದನ್ನು ಗಮನಿಸಿ ತನಿಕೆ ಮಾಡಿದಾಗ ಯೀಸ್ಟ್ ತಯಾರಿಸಿದ ಕಿಣ್ವವೊಂದು(Enzymes) ಕೆಲಸ ಮಾಡುತಿದ್ದನ್ನು ಕಂಡುಹಿಡಿದರು. ಅದಕ್ಕೆ ಜೈಮೇಸ್ಎಂದು ಹೆಸರಿಟ್ಟರು. ಇದರಿಂದ, ಹುದುಗುವಿಕೆ ಬ್ಯಾಕ್ಟೀರಿಯಾ ಹಾಗು ಫಂಗೈಗಳು ತಯಾರಿಸುವ ಕಿಣ್ವಗಳಿಂದ ಹುದುಗುವಿಕೆಯಾಗುತ್ತದೆ ಎಂದು ಸಾಬೀತಾಯಿತು. ಇದನ್ನು ಕಂಡುಹಿಡಿದಿದ್ದಕ್ಕೆ ಎಡ್ವರ್ಡ್ ಬುಕ್ನೆರ್ ಅವರಿಗೆ 1907 ರಲ್ಲಿ ರಸಾಯನಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ ದೊರಕಿತು.

20ನೇ ಶತಮಾನದ ಶುರುವಿನೊಂದಿಗೆ ಹುದುಗುವಿಕೆಯ ಚಳಕ ಬೆಳೆಯತೊಡಗಿತು. ಪಾಶ್ಚರ್ ಅವರು ಕಿರುಜೀವಿಗಳು ಹೇಗೆ ಹುದುಗುವಿಕೆ ಮಾಡುತ್ತದೆ ಎಂದು ತೋರಿಸಿಕೊಟ್ಟಿದ್ದರು. ಹಾಗೆ 19ನೇ ಶತಮಾನದಲ್ಲಿ ಶುರುವಾಗಿದ್ದ ಕಿಣ್ವಗಳ ಕುತೂಹಲಕ್ಕೆ ಎಡ್ವರ್ಡ್ ಬುಕ್ನೆರ್ ಅವರು ಕಂಡುಹಿಡಿದ ಹುದುಗುವಿಕೆಯಲ್ಲಿ ಕಿಣ್ವಗಳ ಪಾತ್ರದ ವಿಚಾರ ಚಳಕಕ್ಕೆ ನಾಂದಿ ಹಾಡಿತು. ಅಲ್ಲದೆ, 1930ರಲ್ಲಿ ಅಲೆಕ್ಸಾಂಡರ್ ಫ್ಲೆಮಿಂಗ್ ಅವರು ಪೆನಿಸಿಲಿಯಮ್ ಎಂಬ ಫಂಗೈಯಿಂದ ಮೊಟ್ಟಮೊದಲ ಆಂಟಿಬಯೋಟಿಕ್ (Anti-biotic), ಪೆನಿಸಿಲಿನ್ ಅನ್ನು ತಯಾರಿಸಬಹುದು ಎಂದು ಕಂಡುಕೊಟ್ಟರು, ಇದೇ ಆಂಟಿಬಯೋಟಿಕ್ ಗಳನ್ನು ಹುದುಗುವಿಕೆಯ ಚಳಕದಿಂದ ತಯಾರಿಸಬಹುದು ಎಂಬ ಸುದ್ದಿ ಉದ್ಯಮಿಗಳ ಹುಬ್ಬೇರಿಸಿತು. ಹೀಗೆ 20ನೇ ಶತಮಾನದುದ್ದಕ್ಕೂ ವಿಜ್ಞಾನಿಗಳು, ಉದ್ಯಮಿಗಳು ಹುದುಗುವಿಕೆಯ ಚಳಕದಿಂದ ಕಿರುಜೀವಿಗಳಿಂದ ಏನೆಲ್ಲಾ ತಯಾರಿಸಬಹುದೆಂದು ತಿಳಿಯುತ್ತಾಹೋದಂತೆ ಪ್ರಪಂಚದ ಗಮನ ಹುದುಗುವಿಕೆಯ ಚಳಕದ ಮೇಲೆ ಹೆಚ್ಚಾಯಿತು!

ಪ್ರಪಂಚವನ್ನಾಳುತ್ತಿರುವ ಹುದುಗುವಿಕೆಯ ಚಳಕ:

ಇಂದು ಹುದುಗುವಿಕೆಯ ಚಳಕವೆಂದರೆ ಕಿರುಜೀವಿಗಳನ್ನು ಬಳಸಿ ಯಾವುದೋ ಒಂದು ಉಪಯುಕ್ತ ಪದಾರ್ಥವನ್ನು ತಯಾರಿಸುವ ಅಥವಾ ಒಂದು ಪದಾರ್ಥವನ್ನು ಕಿರುಜೀವಿಗಳ ಸಹಾಯದಿಂದ ಮತ್ತೊಂದು ಉಪಯುಕ್ತ ಪದಾರ್ಥವಾಗಿ ಮಾರ್ಪಾಟು ಮಾಡುವ ಚಳಕವಾಗಿ ಬೆಳೆದಿದೆ.

36343658_1760910237333440_4097575942015156224_n (1)

ಪಾಶ್ಚರ್ ಅವರು ಹುದುಗುವಿಕೆಯನ್ನು ಕಂಡುಹಿಡಿದ ನಂತರ, ವರುಷಗಳು ಕಳೆದಂತೆ ವಿಜ್ಞಾನಿಗಳು ಹೊಸ ಬಗೆಯ ಬ್ಯಾಕ್ಟೀರಿಯಾ ಹಾಗು ಫಂಗೈಗಳನ್ನು ಕಂಡುಹಿಡಿಯಲು ಶುರುಮಾಡಿದರು, ಹಾಗೆ ಇವುಗಳಿಂದ ತಯಾರಿಸಬಹುದಾದಂತ ಜನರಿಗೆ ಉಪಯೋಗವಾಗುವ ಪದಾರ್ಥಗಳನ್ನು ಕಂಡುಹಿಡಿಯಲು ಶುರುಮಾಡಿದರು. 1942ರಲ್ಲಿ ಫಂಗೈ ಬಳಸಿ ಪೆನಿಸಿಲಿನ್ಅನ್ನು ಹೆಚ್ಚು ಹೆಚ್ಚು ತಯಾರಿಸಲು ಶುರುವಾಯಿತು. ಹೀಗೆ ಪ್ರತಿಯೊಂದು ಆಂಟಿಬಯೋಟಿಕ್ ಗಳನ್ನು ಹುದುಗುವಿಕೆಯಿಂದ ತಯಾರಿಸಲು ಶುರುವಾಯಿತು. ಹುದುಗುವಿಕೆಯ ಚಳಕ ಬೆಳೆದಂತೆ ಅದರ ಬಳಕೆಯ ಬಗೆ ಬದಲಾಗತೊಡಗಿತು.

ಜೆನೆಟಿಕ್ ಇಂಜಿನಿಯರಿಂಗ್ (Genetic engineering) ಇಂದ ಜನರು ಬ್ಯಾಕ್ಟೀರಿಯಾ ಹಾಗು ಇತರೆ ಜೀವಿಗಳ ಜೀನ್ ಹಾಗು ಅವುಗಳ ಜಿನೊಮ್ ಅನ್ನು ನಮ್ಮ ಬಳಕೆಗೆ ಅನುಗುಣವಾಗಿ ಬದಲಾಯಿಸಬಲ್ಲ ಚಳಕದ ಬಗ್ಗೆ ಹೆಚ್ಚು ತಿಳಿಯುತ್ತ ಹೋದಂತೆ, ಹುದುಗುವಿಕೆಯಲ್ಲಿ ಬಳಸುವ ಜೀವಿಗಳ ಗುಣಗಳನ್ನು ನಮ್ಮ ಅನುಕೂಲಕ್ಕೆ ಸರಿಯಾಗಿ ಬದಲಾಯಿಸಲು ಶುರುಮಾಡಿದರು. ಮೈಕ್ರೋಬಯಾಲಜಿ (Microbiology) ಹಾಗು ಮೊಲಿಕ್ಯುಲರ್ ಬಯಾಲಜಿ(Molecular Biology)ಗಳಲ್ಲಿ ಜನರ ಅರಿವು ಹೆಚ್ಚಾದಂತೆ, ಬ್ಯಾಕ್ಟೀರಿಯಾ ಹಾಗು ಫಂಗೈಗಳನ್ನು ಬಳಸಿ ಯಾವುದೇ ಬಗೆಯ ಬಯೋಮಾಲಿಕ್ಯುಲನ್ನು (Biomolecule) ಹುದುಗುವಿಕೆಯ ಮೂಲಕ ಹೆಚ್ಚು ಹೆಚ್ಚು ತಯಾರಿಸಬಹುದು ಎಂದು ಅರಿತರು.

ಕಿಣ್ವಗಳ ಬಗ್ಗೆ ತಿಳಿವು ಹೆಚ್ಚಾದಂತೆ ಇವುಗಳ ಉಪಯೋಗಗಳು ಜನ ಜೀವನದಲ್ಲಿ ಬಹಳಷ್ಟಿದೆ ಎಂಬುದನ್ನು ಅರಿತುಕೊಂಡರು. ಕಿಣ್ವಗಳು ಪ್ರತಿ ಜೀವಿಯು ಬದುಕಿ ಬಾಳಲು ಅಗತ್ಯ, ಏಕೆಂದರೆ ಯಾವುದೇ ಜೀವಿಯು ಆಹಾರ ಸೇವಿಸಬೇಕಾದರೆ, ಅದನ್ನು ಜೀರ್ಣಿಸಲು ಹಾಗು ಅದರಿಂದ ಪೌಷ್ಟಿಕತೆ ಪಡೆದು ಎಲ್ಲಾ ಬಗೆಯ ಚಟುವಟಿಕೆಗೆ ಬಳಸಲು ಕಿಣ್ವಗಳು ಬೇಕೇ ಬೇಕು. ಹೇಗೆ ಕಿಣ್ವಗಳ ಕೆಲಸವನ್ನು ಜನರ ಬದುಕಿನ ಚಟುವಟಿಕೆಗಳಲ್ಲೂ ಬಳಸಬಹುದೆಂದು ತಿಳಿದಾಗ, ಇದನ್ನು ಹೆಚ್ಚು ಬಳಕೆ ಮಾಡಲು ಶುರುವಾಯಿತು. ಯಾವುದೇ ಬಗೆಯ ಕಿಣ್ವಗಳನ್ನು ಬ್ಯಾಕ್ಟೀರಿಯಾ ಅಥವಾ ಫಂಗೈಗಳಲ್ಲಿ ತಯಾರಿಸಬಹುದು ಎಂದು ತಿಳಿಯಿತು, ಹೀಗೆ ಹುದುಗುವಿಕೆಯ ಮೂಲಕ ಕಿಣ್ವಗಳನ್ನು ತಯಾರಿಸುವ ಬಗೆ ಬೆಳಕಿಗೆ ಬಂತು.

ರಾಸಾಯನಿಕ ಉತ್ಪನ್ನಗಳ ಕೆಟ್ಟ ಪರಿಣಾಮಗಳಿಂದ ಅದರ ಬದಲಿಗೆ ಜೈವಿಕ ಉತ್ಪನ್ನಗಳ ತಯಾರಿಕೆಯ ಬಗ್ಗೆ ಜನರ ಒಲವು ಹೆಚ್ಚಾದಾಗ ಹುದುಗುವಿಕೆಯ ಚಳಕದ ಮೂಲಕ ಬಗೆ ಬಗೆಯ ರಾಸಾಯನಿಕಗಳ ಬದಲಿ ಪದಾರ್ಥಗಳನ್ನು ತಯಾರಿಸಲು ಶುರುಮಾಡಿದರು. ಇಂದು ಕುಗ್ಗುತಿರುವ ಪೆಟ್ರೋಲ್ ಹಾಗು ಡೀಸೆಲ್ ಪ್ರಮಾಣದಿಂದ ಇಂಧನ ಬಳಕೆಗೆ ಬದಲಿ ಪದಾರ್ಥ ಕಂಡುಹಿಡಿಯ ಬೇಕಾದ ಅವಶ್ಯಕತೆ ಎದುರಾಗಿದೆ. ಇದಕ್ಕೆ ಕೂಡ ಅಲ್ಗೆಯನ್ನು (Algae) ಬಳಸಿ ಬಯೋಡೀಸೆಲ್ (Bio-Diesel) ಅನ್ನು ಹುದುಗುವಿಕೆಯ ಮೂಲಕ ತಯಾರಿಸುವ ಸಂಶೋಧನೆ ನಡೆಯುತ್ತಿದೆ. ಸಕ್ಕರೆ ತಯಾರಿಕೆಯಲ್ಲಿ ಬಾಕಿ ಉಳಿಯುವ ಕಾಕಂಬಿಯಿಂದ ಹಾಗು ಬೇಸಾಯದಿಂದ ಬಾಕಿ ಉಳಿಯುವ ತೆನೆಗಳಲ್ಲಿ ಇರುವ ಸೆಲ್ಯುಲೋಸ್ (Cellulose) ಅಂಶವನ್ನು ಬ್ಯಾಕ್ಟೀರಿಯಾ ಹಾಗು ಫಂಗೈ ಹುದುಗುವಿಕೆಯಿಂದ ಎಥನಾಲ್ (Ethanol) ಆಗಿ ಪರಿವರ್ತಿಸಿ ಅದನ್ನು ಪೆಟ್ರೋಲ್ ಬದಲು ಬಂಡಿಗಳಲ್ಲಿ ಬಳಸುವ ಉರುವಲುಗಳನ್ನಾಗಿ ತಯಾರಿಸುವ ಸೋಶೋಧನೆ ಕೂಡ ಇಂದು ಭರದಿಂದ ಸಾಗಿದೆ.

ಬಯೋ ಟೆಕ್ನಾಲಜಿಯಿಂದ ಯಾವುದೇ ಉತ್ಪನ್ನ ತಯಾರಿಕೆ ಆಗಬೇಕಾದರೆ ಅದನ್ನು ಹೆಚ್ಚಾಗಿ ಹುದುಗುವಿಕೆಯಿಂದಲೇ ತಯಾರಿಸಬೇಕಾಗುತ್ತದೆ. ಇಂದು ಹುದುಗುವಿಕೆ ಕೇವಲ ಬ್ಯಾಕ್ಟೀರಿಯಾ ಹಾಗು ಫಂಗೈ ಅಂತಹ ಕಿರುಜೀವಿಗಳಿಗೆ ಮೀಸಲಾಗಿಲ್ಲ, ಗಿಡಗಳ ಜೀವ ಕಣಗಳು, ಪ್ರಾಣಿಗಳ ಹಾಗು ಮನುಷ್ಯರ ಜೀವ ಕಣಗಳಿಂದಲೂ ಹುದುಗುವಿಕೆ ಮಾಡುತ್ತಾರೆ. ಉತ್ಪನ್ನದ ಗುಣ ಹಾಗು ಅದು ಯಾವ ಜಾತಿಯ ಜೀವಿಯಲ್ಲಿ ಹೆಚ್ಚು ತಯಾರಿಕೆಯಾಗುತ್ತದೆಯೋ ಅದೇ ಜೀವಿಯ ಕಣಗಳನ್ನು ಹುದುಗುವಿಕೆಯಲ್ಲಿ ಬಳಸಿ ಉತ್ಪನ್ನಗಳನ್ನು ತಯಾರಿಸುತ್ತಾರೆ. ಬಯೋ ಟೆಕ್ನಾಲಜಿಲ್ಲಿ ನಡಿಯುತ್ತಿರುವ ಸಂಶೋಧನೆಗಳು ಯಾರಲ್ಲಾದರೂ ಅಚ್ಚರಿ ಹಾಗು ಕುತೂಹಲ ಮೂಡಿಸದೇ ಇರದು.

ಹೀಗೆ ಹಲವು ಬಗೆಯ ಉತ್ಪನ್ನಗಳನ್ನು ಇಂದು ಹುದುಗುವಿಕೆಯಿಂದ ತಯಾರಿಸಲಾಗುತ್ತಿದೆ. ಇಂದು ತಯಾರಾಗುವ ಪ್ರತಿಯೊಂದು ಆಂಟಿಬಯೋಟಿಕ್ ಹುದುಗುವಿಕೆಯಿಂದಲೇ ತಯಾರಾಗುವುದು. ಹಲವು ರೋಗಗಳಿಗೆ ಮದ್ದಾಗಿ ಸಿಗುವ ಗಿಡಗಳ ಪದಾರ್ಥಗಳನ್ನು ಹೆಚ್ಚಾಗಿ ತಯಾರಿಸಲು ಮದ್ದಿನ ಅಂಶವನ್ನು ಜೆನೆಟಿಕ್ ಇಂಜಿನಿಯರಿಂಗ್ ಮೂಲಕ ಹುದುಗುವಿಕೆಯಿಂದ ಕಿರುಜೀವಿಗಳಲ್ಲಿ ತಯಾರಾಗುವಂತೆ ಮಾಡುತ್ತಿದ್ದಾರೆ. ಹುದುಗುವಿಕೆಯಿಂದ ಹೆಚ್ಚಾಗಿ ತಯಾರಿಸುತ್ತಿರುವ ಕಿಣ್ವಗಳು ಇಂದು ಜನರಿಗೆ ಅರಿವೇ ಇಲ್ಲದೆ ಎಲ್ಲೆಡೆ ಬಳಕೆಯಾಗುತ್ತಿದೆ. ಬಟ್ಟೆಗಳನ್ನು ತೊಳೆಯಲು ಬಳಸುವ ಸೋಪುಗಳಲ್ಲಿ, ಬಟ್ಟೆಗಳನ್ನು ನವಿರಾಗಿಸಲು, ನೂಲಿನ ತಯಾರಿಕೆಯಲ್ಲಿ, ಅಣಿಯಾಗಿರುವ ತಿನುಸುಗಳನ್ನು ತಯಾರಿಸಲು, ಹಣ್ಣುಗಳ ರಸದ ಉತ್ಪನ್ನಗಳಲ್ಲಿ, ಹೀಗೆ ದಿನ ನಿತ್ಯದ ಬಳಕೆಯಲ್ಲದೆ ಎಲ್ಲಾ ಬಗೆಯ ಕೈಗಾರಿಕೆಗಳಲ್ಲಿ ಕಿಣ್ವಗಳನ್ನು ಬಳಸುತಿದ್ದಾರೆ.

ಮುಂದಿನ ದಿನಗಳಲ್ಲಿ ನಮ್ಮ ಗಾಡಿಗಳೆಲ್ಲವೂ ಓಡುವುದು ಹುದುಗುವಿಕೆಯಿಂದ ಬಂದ ಬಯೋಡೀಸೆಲ್ ಹಾಗು ಬಯೋಎಥನಾಲ್ ಇಂದಲೇ ಎಂಬುವುದು ಒಂದು ವಾದ. ಇಷ್ಟಲ್ಲದೆ, ಇವತ್ತಿನ ಪರಿಸರ ಮಾಲಿನ್ಯದ ತೀವ್ರತೆಯಿಂದಾಗಿ ಎಲ್ಲಾ ಕೈಗಾರಿಕೆಗಳು ಪರಿಸರ ಸ್ನೇಹಿ ಚಳಕಗಳ ಹುಡುಕಿನಲ್ಲಿವೆ, ಇದುವರೆಗೂ ತಯಾರಿಕೆಯಲ್ಲಿದ್ದ ರೀತಿಯ ಬದಲಿಗೆ ಹುದುಗುವಿಕೆಯನ್ನು ಅಳವಡಿಸುವ ಪ್ರಯತ್ನಗಳು ಜಗತಿನ್ನೆಲ್ಲೆಡೆ ನಡೆಯುತ್ತಿದೆ. ಹೀಗೆ ವಿಜ್ಞಾನವು ಬ್ಯಾಕ್ಟೀರಿಯಾ, ಫಂಗೈ, ಅಲ್ಗೆ, ಗಿಡ ಹಾಗು ಪ್ರಾಣಿಗಳ ಜೀವಕಣಗಳ ಬಗ್ಗೆ ಹೆಚ್ಚು ಹೆಚ್ಚು ಕಂಡುಹಿಡಿಯುತ್ತಾ ಹೋದಂತೆ, ಅವುಗಳಿಂದ ಹೇಗೆ ಎಲ್ಲಾ ಬಗೆಯ ಪದಾರ್ಥಗಳನ್ನು ಹುದುಗುವಿಕೆಯ ಮೂಲಕ ತಯಾರಿಸಹಬಹುದು ಎಂದು ಚಳಕಗಾರರು ಕಂಡುಹಿಡಿಯಲು ಮಾಡುತ್ತಿದ್ದಾರೆ.

ಸಾವಿರಾರು ವರುಷಗಳಿಂದ ಕೇವಲ ಇಡ್ಲಿ, ದೋಸೆ, ಉಪ್ಪಿನಕಾಯಿ ಅಂತಹ ತಿನಿಸುಗಳಲ್ಲಿ ಅಡಗಿದ್ದ ಹುದುಗುವಿಕೆಯ ಚಳಕ, ಕಳೆದ ನೂರು ವರುಷಗಳಲ್ಲಿ ಜನರ ಬದುಕಿನ ಎಲ್ಲಾ ನಡೆಯಲ್ಲೂ ಅನುಕೂಲ ನೀಡುವ ದೊಡ್ಡ ಚಳಕವಾಗಿ ಬೆಳೆದು ನಿಂತಿರುವುದು ಅಚ್ಚರಿಯೇ ಸರಿ!.

(ಮಾಹಿತಿ ಮೂಲ: www.ncbi.nlm.nih.gov, www.libguides.lindahall.org, www.wikipedia.org)

 

 

ಆಸ್ಪ್ರಿನ್ ಮಾತ್ರೆಯ ಇತಿಹಾಸ

ನೋವು ಎಂಬುದು ಯಾರಿಗಾದರೂ ಆಗುವಂತದ್ದು. ಆರಂಭದಿಂದಲೂ ಮನುಷ್ಯ ನೋವಿನಿಂದ ತಪ್ಪಿಸಿಕೊಳ್ಳಲು ಹಲವಾರು ದಾರಿಗಳನ್ನು ಕಂಡುಕೊಳ್ಳುತ್ತಲೇ ಬಂದಿದ್ದಾನೆ. ಮೊದಲಿಗೆಲ್ಲ ಮತ್ತೇರಿಸುವ ವಸ್ತುಗಳೇ ನೋವಳಿಸುವ ಮದ್ದುಗಳಾಗಿ ಬಳಕೆಯಲ್ಲಿದ್ದವು. ರಸಾಯನಶಾಸ್ತ್ರ ಮುಂದುವರೆದಂತೆಲ್ಲ ಹೊಸ ಹೊಸ ಮದ್ದುಗಳು ಬೆಳಕಿಗೆ ಬರಲು ಆರಂಭಿಸಿದವು. ಜಗತ್ತಿನ ಅತಿ ಹೆಚ್ಚು ಬಳಕೆಯಲ್ಲಿರುವ ನೋವಳಿಕಗಳಲ್ಲಿ ಅಸಿಟೈಲ್ ಸ್ಯಾಲಿಸಿಲಿಕ್ ಆ್ಯಸಿಡ್ (ಆಸ್ಪ್ರಿನ್ – Aspirin) ಕೂಡ ಒಂದು. ಇದನ್ನು ಕಂಡು ಹಿಡಿದದ್ದು ಜರ್ಮನಿಯ ಫೆಲಿಕ್ಸ್ ಹಾಫಮನ್ ಎಂಬುವವರು.

1024px-Aspirine_macro_shot

ಹಾಫಮನ್ ಹುಟ್ಟಿದ್ದು 1878ರಲ್ಲಿ ಜರ್ಮನಿಯ ಸ್ವಾಬಿಯಾ ಪ್ರಾಂತ್ಯದ ಲುಡ್ವಿಗ್ ಎಂಬಲ್ಲಿ. ಮೊದಲು ಬೇರೆ ಬೇರೆ ಫಾರ್ಮಸಿಗಳಲ್ಲಿ ಕೆಲಸ ಮಾಡಿದ ನಂತರ ಮ್ಯೂನಿಕ್ ಯುನಿವರ್ಸಿಟಿಯಲ್ಲಿ ರಸಾಯನಶಾಸ್ತ್ರದ ಪದವಿಯನ್ನು 1893ರಲ್ಲಿ ಪಡೆದರು. ಆಮೇಲೆ ಅವರ ಗುರುಗಳಾದ ನೊಬೆಲ್ ಪ್ರಶಸ್ತಿ ವಿಜೇತ ಅಡಾಲ್ಫ್ ವಾನ್ ಬೇಯರ್ ಅವರ ಶಿಫಾರಸ್ಸಿನಿಂದ ಬಾಯರ್ (Bayer) ಕಂಪನಿಯಲ್ಲಿ ಹೊಸದಾಗಿ ಹುಟ್ಟುಹಾಕಲಾಗಿದ್ದ ಫಾರ್ಮಸಿ ಅರಕೆ ವಿಭಾಗದಲ್ಲಿ ಕೆಲಸ ದೊರೆಯಿತು.

1280px-Bayer_Aspirin_Pills
1897ರಲ್ಲಿ ಹಾಫಮನ್ ಅವರು ಬೇರೆ ಬೇರೆ ಅಣುಕೂಟಗಳನ್ನು (molecule) ಅಸಿಟೈಲ್(acetyl) ಗುಂಪಿನೊಂದಿಗೆ ಸೇರಿಸಿ ಅವುಗಳ ಬಲಪಡಿಸುವಿಕೆ ಇಲ್ಲವೇ ನಂಜು ಕುಗ್ಗಿಸುವಿಕೆಯನ್ನು ಮಾಡಲು ಪ್ರಯತ್ನಿಸುತ್ತಿದ್ದರು. ಬಾಯರ್ ಕಂಪನಿಯು ಈ ಬಗೆಯಲ್ಲಿ ಪ್ರಯತ್ನಿಸಿ ಅದಾಗಲೇ ಜ್ವರಕ್ಕಾಗಿ ಫೆನಾಸಿಟಿನ್ (Phenacetin) (1888) ಮತ್ತು ಭೇದಿ ಚಿಕಿತ್ಸೆಗಾಗಿ ಟ್ಯಾನಿಗ್ (Tannig) (1894) ಎಂಬ ಅಸಿಟೈಲ್ಗೊಳಿಸಲಾದ ದ್ರವ್ಯಗಳನ್ನು ಬಳಕೆಗೆ ತಂದಿತ್ತು. ಇದೇ ಹಾದಿಯಲ್ಲಿ ಹಾಫಮನ್ ಕೂಡ ಪ್ರಯತ್ನಿಸುತ್ತಿದ್ದರು. ಇನ್ನೊಂದು ಮೂಲದ ಪ್ರಕಾರ ಹಾಫಮನ್ ತಮ್ಮ ತಂದೆಯ ಕೀಲು ನೋವು ಬೇನೆಗೆ ಈ ಅರಕೆ ನಡೆಸುತ್ತಿದ್ದರು ಅನ್ನಲಾಗುತ್ತದೆ. ಶತಮಾನಗಳಿಂದ ಬೈಚೆ ಮರದ ತೊಗಟೆಯು (willow bark) ನೋವಳಿಸುವ ಒಂದು ಔಷಧಿಯಾಗಿ ಬಳಕೆಯಲ್ಲಿತ್ತು. ಹತ್ತೊಂಬತ್ತನೇ ಶತಮಾನದ ಆರಂಭದಲ್ಲಿ ಹಲವಾರು ಅರಕೆಗಾರರು ಬೈಚೆಮರದ ತೊಗಟೆಯಿಂದ ಸ್ಯಾಲಿಸಿಲಿಕ್ ಆ್ಯಸಿಡ್ ಅನ್ನು ಬೇರ್ಪಡಿಸಿ ಬಳಕೆಗೆ ತಂದಿದ್ದರು. 1874ರಲ್ಲಿ ಹೇಡನ್ ಕಂಪನಿಯು ಸ್ಯಾಲಿಸಿಲಿಕ್ ಆ್ಯಸಿಡ್ ಅನ್ನು ಮಾರುಕಟ್ಟೆಗೆ ತಂದಿತ್ತು ಆದರೆ ಬಳಸಿದ ರೋಗಿಗಳಿಗೆ ಹಲವಾರು ಅಡ್ಡ ಪರಿಣಾಮಗಳನ್ನು ಉಂಟುಮಾಡಿತ್ತು. ಈ ಬೆಳವಣಿಗೆಗಳನ್ನು ಕಂಡು ಹಾಫಮನ್ ಅವರು ಸ್ಯಾಲಿಸಿಲಿಕ್ ಆ್ಯಸಿಡ್ ಅನ್ನು ಅಸಿಟೈಲ್ಗೊಳಿಸಲು ಆರಂಭಿಸಿ ಗೆಲವು ಕಂಡರು.

ಈ ವಿಷಯ ತಿಳಿಯುತ್ತಿದ್ದಂತೆ ವಿಭಾಗದ ಮುಖ್ಯಸ್ಥರಾದ ಹೆನ್ರಿಚ್ ಡ್ರೆಸರ್ ಅವರು ಮೊದಲು ತಮ್ಮ ಮೇಲೆಯೇ ಪ್ರಯೋಗಿಸಿ ನಂತರ ಹಲವಾರು ಪ್ರಾಣಿ ಪ್ರಯೋಗಗಳನ್ನು ಮಾಡಿ ಆಮೇಲೆ ರೋಗಿಗಳ ಮೇಲೆ ಪ್ರಯೋಗಿಸಿದರು. ಎಲ್ಲವೂ ಯಶಸ್ವಿಯಾದ ಮೇಲೆ 1899ರಲ್ಲಿ ಬಾಯರ್ ಕಂಪನಿಯು ಈ ಅಸಿಟೈಲ್ ಸ್ಯಾಲಿಸಿಲಿಕ್ ಆ್ಯಸಿಡ್ ಅನ್ನು ಆಸ್ಪ್ರಿನ್ (Asprin) ಎಂಬ ಹೆಸರಿನಲ್ಲಿ ಮಾರುಕಟ್ಟೆಗೆ ತಂದಿತು. ಮಾರುಕಟ್ಟೆಗೆ ಅಡಿಯಿಟ್ಟ ಕೆಲವೇ ದಿನಗಳಲ್ಲಿ ತುಂಬ ಮಂದಿಮೆಚ್ಚುಗೆ ಪಡೆಯಿತು. ಮೊದಲು ಪುಡಿಯ ರೂಪದಲ್ಲಿ ಇದ್ದದ್ದು ಕೆಲವು ವರುಶಗಳಲ್ಲಿ ಮಾತ್ರೆಯ ರೂಪವನ್ನು ಪಡೆಯಿತು. ಕಂಡುಹಿಡಿದು 100 ವರುಶಕ್ಕಿಂತ ಹೆಚ್ಚಾದರೂ ಇದರ ಮಂದಿಮೆಚ್ಚುಗೆಯಲ್ಲಿ ಯಾವುದೇ ಕೊರತೆಯಾಗಿಲ್ಲ. ಜಗತ್ತಿನಲ್ಲಿ ಈಗಲೂ ಅತಿ ಹೆಚ್ಚು ಪ್ರಮಾಣದಲ್ಲಿ ಬಳಕೆಯಲ್ಲಿದೆ. ಇಂತ ದ್ರವ್ಯವನ್ನು ಕಂಡುಹಿಡಿದಾಗ ಹಾಫಮನ್ ರಿಗೆ ಬರೀ 29 ವರುಶ.

ಬಾಯರ್ ಕಂಪನಿಯು ಇದರ ಪೇಟೆಂಟ್‍ಗಾಗಿ ಪ್ರಯತ್ನಿಸಿದರೂ ಅದಾಗಲೇ ಬೇರೆಯವರು ಇದನ್ನು ಸಾಧಿಸಿದ್ದಾರೆ ಎಂಬ ಕಾರಣದಿಂದ ಜರ್ಮನಿಯಲ್ಲಿ ನಿರಾಕರಿಸಲಾಯಿತು. ಆದರೆ ಬೇರೆಯವರು ಸಿದ್ಧಪಡಿಸಿದ್ದ ಮಾದರಿಯು ಹಾಫಮನ್ ಸಿದ್ಧಪಡಿಸಿದ್ದ ಹಾಗೆ ಶುದ್ಧ ಮತ್ತು ಪರಿಣಾಮಕಾರಿಯಾಗಿರಲಿಲ್ಲ. ಇಷ್ಟಾದರೂ ಕಂಪನಿಯು ತಲೆಕೆಡಿಸಿಕೊಳ್ಳದೇ ಇದರ ವ್ಯಾವಹಾರಿಕ ಲಾಭವನ್ನು ಅರಿತು ಅಮೆರಿಕ ಮತ್ತು ಜಗತ್ತಿನಾದ್ಯಂತ ದೊಡ್ಡ ಪ್ರಮಾಣದಲ್ಲಿ ಲಗ್ಗೆಯಿಟ್ಟಿತು. ಅಂದುಕೊಂಡಂತೆ ಅದಕ್ಕೆ ಲಾಭವಾಗುವುದರ ಜೊತೆಗೆ ಅಮೆರಿಕದಲ್ಲಿ ಪೇಟೆಂಟ್ ಕೂಡ ದೊರೆಯಿತು ಮತ್ತು 1900 ರಿಂದ 1917ವರೆಗೆ ತಯಾರಿಕೆಯ ಏಕಸ್ವಾಮ್ಯವನ್ನೂ ಪಡೆಯಿತು. ಆಸ್ಪ್ರಿನ್ ಮಾತ್ರೆಯು ಬಾಯರ್ ಕಂಪನಿಯನ್ನು ಜಗತ್ತಿನಾದ್ಯಂತ ಮನೆಮಾತಾಯಿಸಿತು.

1948ರಲ್ಲಿ ಕ್ಯಾಲಿಫೋರ್ನಿಯಾದ ವೈದ್ಯ ಡಾ.ಲಾರೆನ್ಸ ಕ್ರಾವನ್ ಅವರು ಆಸ್ಪ್ರಿನ್ ಮಾತ್ರೆಯು ಹೃದಯಾಘಾತವನ್ನು ತಡೆಯುವ ಸಾಮರ್ಥ್ಯವನ್ನು ಹೊಂದಿದೆಯೆಂದೂ ಜಗತ್ತಿಗೆ  ತೋರಿಸಿಕೊಟ್ಟರು. ಆಗ ಅದರ ಬಳಕೆ ಇನ್ನೂ ಹೆಚ್ಚತೊಡಗಿತು. ಪಾಶ್ಚಿಮಾತ್ಯ ದೇಶಗಳಲ್ಲಿ ಇದು ನೋವಳಿಕವಾಗಿಯೇ ಹೆಚ್ಚು ಬಳಕೆಯಿದ್ದರೂ ಇಂಡಿಯಾದಲ್ಲಿ ಹೃದಯಾಘಾತ ಮತ್ತು ಪಕ್ಷಾಘಾತ (stroke) ತಡೆಯಲು ಹೆಚ್ಚು ಬಳಸಲಾಗುತ್ತದೆ.

1949ರಲ್ಲಿ ಬಾಯರ್ ಕಂಪನಿಯ ಮಾಜಿ ಕೆಲಸಗಾರನಾದ ಅರ್ಥರ್ ಐಶನ್ಗ್ರನ್ ಅವರು ಅಸಿಟೈಲ್ ಸ್ಯಾಲಿಸಿಲಿಕ್ ಆ್ಯಸಿಡ್ ನ ನಿಜವಾದ ತಯಾರಕ ತಾನಾಗಿದ್ದು ಹಾಫಮನ್ ಅಲ್ಲ ಎಂಬ ವಾದ ಇಟ್ಟರು. ಎಲ್ಲ ಯೋಜನೆ ಮತ್ತು ನಿರ್ದೆಶನ ಮಾಡಿದ್ದು ತಾವು ಮತ್ತು ಹಾಫಮನ್ ಬರೀ ಪ್ರಾಥಮಿಕ ಹಂತದ ತಯಾರಿಕೆಯಲ್ಲಿ ಮಾತ್ರ ತೊಡಗಿಕೊಂಡಿದ್ದರು ಅಂತ ತಮ್ಮ ವಾದದಲ್ಲಿ ಹೇಳಿದರು. ಆದರೆ ಯಾರೂ ಈ ಬಗ್ಗೆ ಗಮನ ಕೊಡಲಿಲ್ಲ. ಮುಂದೆ 1999 ಮತ್ತೆ ಈ ವಿವಾದ ಬುಗಿಲೆದ್ದಾಗ ಬಾಯರ್ ಕಂಪನಿಯು ಸ್ಪಷ್ಟೀಕರಣ ನೀಡಿ ಫೆಲಿಕ್ಸ ಹಾಫಮನ್ ಅವರೇ ಆಸ್ಪ್ರಿನ್ ಮಾಡುಗರು ಎಂದು ಈ ವಿವಾದಕ್ಕೆ ಕೊನೆ ಹಾಡಿದರು. ಈಗಲೂ ಕೆಲವರು ಅರ್ಥರ್ ಐಶನ್ಗ್ರನ್ ಅವರು ಯಹೂದಿಯಾದ್ದರಿಂದ ಬೇಕಂತಲೇ ಅವರ ಹೆಸರನ್ನು 1930 ರ ಈಚೆಗೆ ಕೈಬಿಡಲಾಗಿದೆ ಎಂದು ಹೇಳುತ್ತಾರೆ.

ಇನ್ನೊಂದು ಮುಖ್ಯವಾದ ದ್ರವ್ಯವೊಂದನ್ನು ಹಾಫಮನ್ ಅವರು ಅಸಿಟೈಲ್ ಸ್ಯಾಲಿಸಿಲಿಕ್ ಆ್ಯಸಿಡ್ ನ ಜೊತೆ ಜೊತೆಗೆ ಕಂಡುಹಿಡಿದಿದ್ದರು. ಅದುವೇ ಡೈಅಸಿಟೈಲ್ ಮಾರ‌್ಫಿನ್ (Diacetyl morphine). ಮಂದಿಯ ಬಾಯಲ್ಲಿ ಹೆರಾಯಿನ್ (Heroin) ಅಂತಲೇ ಚಿರಪರಿಚಿತ. ಜಗತ್ತು ಕಂಡ ಕಡು ಅಪಾಯಕಾರಿ ಮಾದಕ ದ್ರವ್ಯ. ವಿಭಾಗದ ಮುಖ್ಯಸ್ಥರಾದ ಹೆನ್ರಿಚ್ ಡ್ರೆಸರ್ ಅವರು ಇದೇ ಹೊತ್ತಲ್ಲಿ ಹಾಫಮನ್ ರಿಗೆ ಇನ್ನೊಂದು ಕೆಲಸ ಕೊಟ್ಟಿದ್ದರು. ಡ್ರೆಸರ್ ಅವರು ಗಸಗಸೆ ಬೀಜದಿಂದ ಹೊರತೆಗೆದ ಕೋಡೀನ್ (Codeine) ಎಂಬ ದ್ರವ್ಯದ ಪರಿಣಾಮ ಅರಿತಿದ್ದರು. ಅದು ಗಸಗಸೆ ಬೀಜದಿಂದಲೇ ಹೊರತೆಗೆದ ಮಾರ್ಫಿನ್ (Morphine) ಗಿಂತ ಅಶಕ್ತವಾಗಿತ್ತು. ಆದ್ದರಿಂದ ಒಂದು ಒಳ್ಳೆ ಬಗೆಯ ಔಷಧಿ ದ್ರವ್ಯ ಮಾಡಲು ಈ ಮಾರ್ಫಿನ್ ಅನ್ನು ಅಸಿಟೈಲ್ಗೊಳಿಸಲು ಹೇಳಿದ್ದರು. ಅಂತೆಯೇ ಹಾಫಮನ್ ಈ ಕೆಲಸದಲ್ಲಿ ತೊಡಗಿಕೊಂಡು ಮುಗಿಸಿದಾಗ ಹುಟ್ಟಿದ್ದೇ ಹೆರಾಯಿನ್. ಆವಾಗ ಯಾರಿಗೂ ಕೂಡ ಇದರ ಬಗ್ಗೆ ಮಾಹಿತಿ ಇರಲಿಲ್ಲ. ಆದರೆ ಇದರ ಕೆಟ್ಟ ಪರಿಣಾಮಗಳ ಬಗ್ಗೆ ಎಲ್ಲರಿಗೂ ತಿಳುವಳಿಕೆ ಮೂಡವಷ್ಟರಲ್ಲಿ ಬಾಯರ್ ಕಂಪನಿಯು ಅದಾಗಲೇ ಸಾಕಷ್ಟು ಪ್ರಮಾಣದ ಹೆರಾಯಿನ್ ಅನ್ನು ಕೆಮ್ಮಿನ ಔಷಧಿ ರೂಪದಲ್ಲಿ ಮಾರಾಟ ಮಾಡಿಯಾಗಿತ್ತು. ನಂತರ ಜಗತ್ತಿನಲ್ಲೆಡೆ ಈ ದ್ರವ್ಯವನ್ನು ನಿರ್ಬಂಧಿಸಲಾಯಿತು.

ಹೀಗೆ ಈ ಎರಡು ಬಗೆಯ ದ್ರವ್ಯಗಳು ಒಂದು ಆಸ್ಪ್ರಿನ್ ಮತ್ತೊಂದು ಹೆರಾಯಿನ್ ಒಬ್ಬ ವ್ಯಕ್ತಿಯಿಂದಲೇ ಹುಟ್ಟಿಕೊಂಡವು. ಒಂದು ಜಗತ್ತನ್ನು ನೋವಿನಿಂದ ದೂರವಿಟ್ಟರೆ ಮತ್ತೊಂದು ಜಗತ್ತನ್ನು ನೋವಿನ ಕೂಪಕ್ಕೆ ತಳ್ಳಿತು.

1928ರಲ್ಲಿ ಹಾಫಮನ್ ನಿವೃತ್ತಿ ಹೊಂದಿದಾಗ ಆಸ್ಪ್ರಿನ್ ಜಗತ್ತಿನೆಲ್ಲೆಡೆ ಪ್ರಸಿದ್ಧಿಯಾಗಿತ್ತು, ಫೆಲಿಕ್ಸ್ ಹಾಫಮನ್ ರನ್ನು ಹೊರತುಪಡಿಸಿ! ಹೌದು! ಆ ಕಾಲದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಅವರ ಹೆಸರು ಬೆಳಗಲೇ ಇಲ್ಲವಂತೆ. ಮುಂದೆ ಸಾರ್ವಜನಿಕ ಬದುಕಿನಿಂದ ದೂರವೇ ಉಳಿದಿದ್ದ ಹಾಫಮನ್ ಕೊನೆಯವರೆಗೂ ಮದುವೆ ಆಗಲೇ ಇಲ್ಲ.  1946ರ ಪೆಬ್ರವರಿ 8ರಂದು ಸ್ವಿಜರ್ಲೆಂಡ್ ನಲ್ಲಿ ಅವರು ಕೊನೆಯುಸಿರೆಳೆದರು.

(ಸೆಲೆ: www.sciencehistory.org, www.ideafinder.com, www.wikipedia.org)

ಇನ್ಸುಲಿನ್

ಇನ್ಸುಲಿನ್ ಎಂಬುದು ಅರಗುಸುರಿಗೆಯಲ್ಲಿರುವ (Pancreas) ಲ್ಯಾಂಗರಹೆನ್ಸ ಗೂಡುಕಟ್ಟಿನ (islets of Langerhans) ಕೋಶಗಳು ಸುರಿಸುವ ಒಂದು ಸುರಿವೊಯ್ಯುಕ (hormone). ಇನ್ಸುಲಿನ್, ರಕ್ತದಲ್ಲಿ ಸಕ್ಕರೆ (Glucose) ಪ್ರಮಾಣವನ್ನು ಹತೋಟಿಯಲ್ಲಿಡುತ್ತದೆ. ಏನಾದರು ತಿಂದ ಮೇಲೆ ಇಲ್ಲವೇ ಊಟವಾದ ಮೇಲೆ ರಕ್ತದಲ್ಲಿ ಸಕ್ಕರೆ ಪ್ರಮಾಣ ಹೆಚ್ಚುವುದರಿಂದ ಇನ್ಸುಲಿನ್ ಬಿಡುಗಡೆಗೊಳ್ಳುತ್ತದೆ. ಸಕ್ಕರೆ‌ ಪ್ರಮಾಣ ತಗ್ಗಿದಾಗ ಇನ್ಸುಲಿನ್ ಸುರಿಗೆ ನಿಲ್ಲುತ್ತದೆ. ಈ ಬಗೆಯಲ್ಲಿ ಇನ್ಸುಲಿನ್ ರಕ್ತದಲ್ಲಿ ಸಕ್ಕರೆಯ ಪ್ರಮಾಣವನ್ನು ಸರಿದೂಗಿಸಿಕೊಂಡು ಇರುತ್ತದೆ.

ಒಂದು ವೇಳೆ ಇನ್ಸುಲಿನ್ ಸರಿಯಾದ ಪ್ರಮಾಣದಲ್ಲಿ ಸುರಿಯದೇ ಹೋದರೆ ಅದು ಸಕ್ಕರೆ ಕಾಯಿಲೆಗೆ (Diabetes mellitus) ಎಡೆ ಮಾಡಿಕೊಡುತ್ತದೆ. ತೀವ್ರವಾಗಿ ಈ ಕಾಯಿಲೆಯಿಂದ ಬಳಲುತ್ತಿರುವವರಿಗೆ ಚುಚ್ಚುಮದ್ದು ರೂಪದಲ್ಲಿ ಇನ್ಸುಲಿನ್ ನೀಡಬೇಕಾಗುತ್ತದೆ.

insulin mage2(ನಮ್ಮ ಮಯ್ಯಲ್ಲಿರುವ ಇನ್ಸುಲಿನ್ ರಾಸಾಯನಿಕ ಏರ್ಪಾಟು)

ಇನ್ಸುಲಿನ್ ಮೊದಲ ಬಾರಿ ಬೆಳಕಿಗೆ ಬಂದದ್ದು 1921 ರಲ್ಲಿ ಕೆನಡಾ ವಿಜ್ಞಾನಿಗಳಾದ ಫ್ರೆಡರಿಕ್ ಬ್ಯಾಂಟಿಂಗ್ ಮತ್ತು ಚಾರ್ಲ್ಸ್ ಬೆಸ್ಟ್‌ ಅವರುಗಳಿಂದ.

Insulin image3(ಫ್ರೆಡರಿಕ್ ಬ್ಯಾಂಟಿಂಗ್ (ಬಲಗಡೆ ಇರುವವರು) ಮತ್ತು ಚಾರ್ಲ್ಸ್ ಬೆಸ್ಟ್‌)

 ಆದರೆ ಇದಕ್ಕೂ ಮೊದಲೇ 1916 ರಲ್ಲಿ ರೊಮೇನಿಯಾದ ವೈದ್ಯ ನಿಕೊಲೈ ಪೌಲೆಸ್ಕು ಅವರು ಪ್ರತ್ಯೇಕವಾಗಿಯೇ ಒಂದು ಅರಕೆ ನಡೆಸುತ್ತಿದ್ದರು. ಅರಗುಸುರಿಗೆಯ ಪ್ಯಾಂಕ್ರಿನ್ ಎಂಬ ಸಾರ ಸತ್ವದ ಅರಕೆಯನ್ನು ಒಂದು ನಾಯಿಯ ಮೇಲೆ ಮಾಡುತ್ತಿರುವಾಗ ಅದು ರಕ್ತದಲ್ಲಿರುವ ಸಕ್ಕರೆ ಪ್ರಮಾಣವನ್ನು ಕಡಿಮೆ ಮಾಡಬಲ್ಲದು ಎಂದು ಕಂಡುಕೊಂಡರು. ಇದೇ ಹೊತ್ತಲ್ಲಿ ಮೊದಲ ಮಹಾಯುದ್ದ ಶುರುವಾಗಿ ಅವರು ಅದರಲ್ಲಿ ಪಾಲ್ಗೊಳ್ಳಲು ತೆರಳಿದ್ದರು. ಆದರೆ ಯುದ್ದ ಮುಗಿದ ಮೇಲೆ ಅವರು ಮರಳಿಬಂದು ಅರಕೆಯಲ್ಲಿ ತೊಡಗಿಕೊಳ್ಳುವಶ್ಟರಲ್ಲಿ ಬ್ಯಾಂಟಿಂಗ್ ಮತ್ತು ಬೆಸ್ಟ ಅವರು ಇನ್ಸುಲಿನ್ ಅನ್ನು ಬೇರ‌್ಪಡಿಸಿ ಹಸನುಗೊಳಿಸಿದ್ದರು. ಇದಕ್ಕೆಲ್ಲ ಹಣಕಾಸು ಮತ್ತು ಪ್ರಯೋಗಾಲಯದ ನೆರವು ನೀಡಿ ದಾರಿತೋರುಕರಾಗಿ ನಿಂತವರು ಸ್ಕಾಟ್ಲೆಂಡ್ ನ ವೈದ್ಯ ಜೆ.ಜೆ.ಆರ್. ಮೆಕ್ಲೊಯ್ಡ. ಇನ್ಸುಲಿನ್ ಅನ್ನು ಅಣಿಗೊಳಿಸಿ ಬಳಕೆಗೆ ತಂದವರು ಕೆನಡಾದ ಕೆಮಿಸ್ಟ ಜೇಮ್ಸ್ ಕೊಲ್ಲಿಪ್.

ಇನ್ಸುಲಿನ್ ಸಕ್ಕರೆ ಕಾಯಿಲೆಯನ್ನು ವಾಸಿಗೊಳಿಸದೇ ಇದ್ದರೂ ಸಾವಿನಂಚಿನಲ್ಲಿದ್ದ ಎಶ್ಟೋ ಮಂದಿಯನ್ನು ಕಾಪಾಡಿ ಹೊಸ ಬದುಕು ನೀಡಿತು. ಮೊದಲೆಲ್ಲಾ ಹಂದಿ, ಕುರಿ, ದನಗಳ ಸುರಿವೊಯ್ಯುಕಗಳಿಂದ ಇನ್ಸುಲಿನ್ ಹೊರತೆಗೆದು ಚುಚ್ಚುಮದ್ದುಗಳನ್ನು ಮಾಡುತ್ತಿದ್ದರು ಆದರೆ 1980ರ ದಶಕದ ಶುರುವಿನಲ್ಲಿ ಕೆಲವೊಂದು ಬಗೆ ಬ್ಯಾಕ್ಟೀರಿಯಾಗಳು ಪೀಳಿಯಲ್ಲಿ ಮಾರ್ಪಾಟು ಹೊಂದಿ ಮನುಷ್ಯರಂತಹ ಇನ್ಸುಲಿನ್ ಅನ್ನು ಉತ್ಪಾದಿಸ ತೊಡಗಿದವು. ಇಂದಿನ ದಿನಗಳಲ್ಲಿ ಸಕ್ಕರೆ ಕಾಯಿಲೆ ಚಿಕಿತ್ಸೆಯಲ್ಲಿ ಚುಚ್ಚುಮದ್ದಿನ ಮೂಲಕ ಇನ್ಸುಲಿನ್‌ನ ಬಳಕೆ ತುಂಬಾನೇ ಸಾಮಾನ್ಯವಾಗಿ ನಡೆಯುತ್ತಿದೆ.

1923ರಲ್ಲಿ ಫ್ರೆಡರಿಕ್ ಬ್ಯಾಂಟಿಂಗ್ ಮತ್ತು ಜೆ.ಜೆ.ಆರ್. ಮೆಕ್ಲೊಯ್ಡ ಅವರಿಗೆ ವೈದ್ಯಕೀಯ ಕ್ಷೇತ್ರದಲ್ಲಿ ನೊಬೆಲ್ ಪ್ರಶಸ್ತಿ ಕೊಡಲಾಯಿತು. ಮೆಕ್ಲೊಯ್ಡ ಅವರನ್ನು ಹೆಸರಿಸಿದ್ದಕ್ಕೆ ಮೊದಲು ಬ್ಯಾಂಟಿಂಗ್ ಅವರಿಂದನೇ ವಿರೋಧ ವ್ಯಕ್ತವಾಯಿತು. ತಮ್ಮ ಜೊತೆ ಅರಕೆಯಲ್ಲಿ ತೊಡಗಿಕೊಂಡಿದ್ದ ಚಾರ್ಲ್ಸ್ ಬೆಸ್ಟ್ ಅವರನ್ನು ಸೇರಿಸಬೇಕೆಂದು ಅವರ ವಾದವಾಗಿತ್ತು. ಕಡೆಗೆ ಅವರಿಗೆ ಗೌರವ ಸಲ್ಲಿಸಲು ಪ್ರಶಸ್ತಿಯ ಹಣವನ್ನು ಬ್ಯಾಂಟಿಂಗ್ ಅವರು ಬೆಸ್ಟ್ ಅವರೊಂದಿಗೆ ಹಂಚಿಕೊಂಡರು. ಅದರಂತೆ ಮೆಕ್ಲೊಯ್ಡ ಅವರು ಪ್ರಶಸ್ತಿ ಹಣವನ್ನು ಕೊಲ್ಲಿಪ್ ಅವರೊಂದಿಗೆ ಹಂಚಿಕೊಂಡರು. ಇದೆಲ್ಲದರ ನಡುವೆ ನಿಕೊಲೈ ಪೌಲೆಸ್ಕು ಅವರು ನೊಬೆಲ್ ಕಮಿಟಿಗೆ ಬರೆದು ತಾವು ಮೊದಲೇ ಮಾಡಿದ್ದ ಅರಕೆಯ ಬಗ್ಗೆ ತಿಳಿಸಿ ತಮ್ಮನ್ನು ಪ್ರಶಸ್ತಿಗೆ ಪರಿಗಣಿಸಬೇಕೆಂದು ಕೋರಿಕೊಂಡರೂ ಕಮಿಟಿಯ ಅದನ್ನು ತಿರಸ್ಕರಿಸಿತ್ತು.

(ಮಾಹಿತಿ ಸೆಲೆ: brittannica.com, diabetes.co.uk, nobelprize.org) (ಚಿತ್ರ ಸೆಲೆ: diabetes.co.uk , thoughtco.com, shutterstock.com)

ಪೆನಿಸಿಲಿನ್

ಪೆನಿಸಿಲಿನ್ (Penicillin) ಎಂಬುದು ಜಗತ್ತಿನ ಮೊದಲ ಮತ್ತು ಈಗಲೂ ಹೆಚ್ಚು ಬಳಕೆಯಲ್ಲಿರುವ ಎದುರುಜೀವಕ (Antibiotic). ಪೆನಿಸಿಲಿನ್ ದೊರಕಿದ್ದು ಪೆನಿಸಿಲಿಯಮ್ ಎಂಬ ಬೂಸ್ಟಿನಿಂದ (Mold). 1928 ರಲ್ಲಿ ಸ್ಕಾಟ್ಲೆಂಡಿನ ವೈದ್ಯ ಮತ್ತು ಅರಕೆಗಾರ ಅಲೆಕ್ಸಾಂಡರ್ ಪ್ಲೆಮಿಂಗ್  ಬ್ಯಾಕ್ಟೀರಿಯಾದ ಅರಕೆ ಮಾಡುವಾಗ ಸ್ಟೆಪಯ್ಲೊಕಾಕಸ್ ಆರಿಯಸ್ (Staphylococcus aureus) ಎಂಬ ಬ್ಯಾಕ್ಟೀರಿಯಾ ಕೆಲವು ಕಡೆ ಬೆಳೆಯದಿರುವುದನ್ನು ಗಮನಿಸಿದರು.

aleander fleming(ಅಲೆಕ್ಸಾಂಡರ್ ಪ್ಲೆಮಿಂಗ್)

ಹೀಗೇಕೆ ಎಂದು ಹೆಚ್ಚು ಗಮನಿಸಿ ನೋಡಿದಾಗ ಆ ಬಾಗವೆಲ್ಲವೂ ಆಕಸ್ಮಿಕವಾಗಿ ಪೆನಿಸಿಲಿಯಮ್ ನೊಟೆಟಮ್ (Penicillium Notatum) ಎಂಬ ಬೂಸ್ಟಿನಿಂದ ಸೊಂಕಿತವಾಗಿದೆ ಎಂದು ತಿಳಿದು ಬಂತು. ಆಮೇಲೆ ಆ ಬೂಸ್ಟನ್ನು ಬೇರ್ಪಡಿಸಿ ನೀರಿನ ಮಾದ್ಯಮದಲ್ಲಿ ಬೆಳೆಸಿದಾಗ ಅದು ಮಂದಿಯನ್ನು ಕಾಡುವ ಅನೇಕ ಬ್ಯಾಕ್ಟೀರಿಯಗಳನ್ನು ಕೊಲ್ಲುವ ಒಂದು ಬಗೆಯ ಸತ್ವವನ್ನು ಬಿಡುಗಡೆಗೊಳಿಸುತ್ತದೆಂದು ಗೊತ್ತಾಯಿತು.

Penicillin(ಪೆನಿಸಿಲಿಯಮ್ ನೊಟೆಟಮ್)

ಮುಂದೆ 1930ರ ದಶಕದ ಕೊನೆಯಲ್ಲಿ ಆಸ್ಟ್ರೇಲಿಯಾದ ಬೇನೆಯರಿಗ ಹೊವಾರ್ಡ್ ಫ್ಲೋರೆ ಮತ್ತು ಬ್ರಿಟನ್ನ ಬಯೋಕೆಮಿಸ್ಟ್ ಅರ್ನಸ್ಟ್ ಬೋರಿಸ್ ಚೈನ್ ಎಂಬುವವರು ಆ ಸತ್ವವನ್ನು ಬೇರ್ಪಡಿಸಿ ಹಸನುಗೊಳಿಸಿದರು. ಬ್ಯಾಕ್ಟೀರಿಯಾದಿಂದ ಉಂಟಾಗುವ ಹಲವಾರು ರೋಗಗಳಿಗೆ ಮುಂದಿನ ವರುಶಗಳಲ್ಲಿ ಪೆನ್ಸಿಲಿನ್ ಬಳಕೆ ಸಾಮಾನ್ಯವಾಯಿತು. ಬರಬರುತ್ತಾ ಬ್ಯಾಕ್ಟೀರಿಯಾಗಳು ಪೆನ್ಸಿಲನ್‍ಗೆ ಎದುರು ಶಕ್ತಿಯನ್ನು ಬೆಳೆಸಿಕೊಂಡವಾದರೂ ಇಂದಿಗೂ ಪೆನ್ಸಿಲನ್ ತಕ್ಕಮಟ್ಟಿಗೆ ಬ್ಯಾಕ್ಟೀರಿಯಾಗಳನ್ನು ಹತೋಟಿಯಲ್ಲಿಡಲು ನೆರವಾಗುತ್ತಲೇ ಇದೆ.

1941 ರಲ್ಲಿ ಪೆನಿಸಿಲಿನ್ ಚುಚ್ಚುಮದ್ದು ರೂಪದಲ್ಲಿ ಬಳಕೆಗೆ ಬಂತು. ಪೆನಿಸಿಲಿನ್ ಮೇಲೆ ಮಾಡಿದ ಅರಕೆಗಾಗಿ 1945 ರಲ್ಲಿ ಅಲೆಕ್ಸಾಂಡರ್ ಪ್ಲೆಮಿಂಗ್, ಹೊವಾರ್ಡ್ ಫ್ಲೋರೆ  ಮತ್ತು  ಅರ್ನಸ್ಟ್ ಬೋರಿಸ್ ಚೈನ್ ಈ ಮೂವರಿಗೂ ನೊಬೆಲ್ ಪ್ರಶಸ್ತಿಯನ್ನು ಕೊಡಲಾಯಿತು.

Penicillin chemical structure   (ಪೆನ್ಸಿಲಿನ್ ರಾಸಾಯನಿಕ ಏರ್ಪಾಟು)

(ಸೆಲೆ: www.britannica.com, www.nobelprize.org, ಚಿತ್ರಸೆಲೆ: edukalife.blogspot.com, wikipedia)