ವೈದ್ಯಕೀಯ ಕ್ಷೇತ್ರದಲ್ಲಾಗುತ್ತಿರುವ ಬದಲಾವಣೆಗಳು

(ಇಗೋ ವಿಜ್ಞಾನ – 2020 ಪೈಪೋಟಿಯಲ್ಲಿ 1 ನೇ ಬಹುಮಾನ ಪಡೆದ ಬರಹ)

ಡಾ.ಶಿಶಿರ ಎಸ್ ರಾನಡೆ.

ಪೀಠಿಕೆ:
​ಭಾರತೀಯ ವೈದ್ಯಶಾಸ್ತ್ರದ ಪಿತಾಮಹರಾದ ಸುಶ್ರುತ, ಚರಕ ಮುಂತಾದವರ ಕಾಲದಿಂದ ಇಂದಿನವರೆಗೂ ವೈದ್ಯಕೀಯ ಕ್ಷೇತ್ರದಲ್ಲಿ ಅಪಾರವಾದ ಬೆಳವಣಿಗೆಗಳು ಕಂಡುಬಂದಿವೆ.  ​ ನಾಡಿಶಾಸ್ತ್ರ, ವಾತ, ಪಿತ್ತ, ಕಫ ಈ ರೀತಿಯ ಪರಿಕಲ್ಪನೆಗಳ ಭದ್ರ ಬುನಾದಿಯ ಮೇಲೆ ಬೆಳೆದುನಿಂತ ವೈದ್ಯಶಾಸ್ತ್ರ ಇಂದು ಅತ್ಯಾಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ತರ್ಕಕ್ಕೂ  ಮೀರಿದ ಚಿಕಿತ್ಸೆಯನ್ನು  ರೋಗಿಗಳಿಗೆ ನೀಡುವಲ್ಲಿ ಯಶಸ್ವಿಯಾಗಿದೆ.  ಅಂದಿನ ಮತ್ತು ಇಂದಿನ ನಡುವೆ ಬಹಳಷ್ಟು ಬದಲಾವಣೆಗಳನ್ನು ಕಂಡಂತಹ ಈ ಕ್ಷೇತ್ರ ಎಲ್ಲಾ ರೀತಿಯ ಊಹಾಪೋಹಗಳು ಹಾಗೂ ತಪ್ಪು ಪರಿಕಲ್ಪನೆಗಳನ್ನು ಅಲ್ಲಗೊಳಿಸಿ ಇಂದು “ಸಾಕ್ಷ್ಯಾಧಾರಿತ ವೈದ್ಯಕೀಯ ವಿಜ್ಞಾನ” ಎನ್ನುವ ಹಂತಕ್ಕೆ ಬೆಳೆದು ನಿಂತಿದೆ.

​ವೈದ್ಯಕೀಯ ಕ್ಷೇತ್ರದಲ್ಲಿ ಪ್ರಸ್ತುತ ಪ್ರಚಲಿತವಿರುವ ತಂತ್ರಜ್ಞಾನದ ಮಾಹಿತಿ ಒಂದಲ್ಲಾ ಒಂದು ರೀತಿಯಲ್ಲಿ ಜನಸಾಮಾನ್ಯರಿಗೆ ಚಿರಪರಿಚಿತವಾಗಿರುತ್ತದೆ.  ಒತ್ತಡದ ಜೀವನ ಶೈಲಿ, ಅವಸರದ ಬದುಕು, ಪರಿಸರ ಹಾಗೂ  ಆಹಾರ ಕ್ರಮಗಳಲ್ಲಾದ ಬದಲಾವಣೆಗಳು ಇವೆಲ್ಲವೂ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ರೋಗಕಾರಕಗಳೇ ಆಗಿವೆ.  ಇಂದು ಇವೆಲ್ಲವನ್ನೂ ಮೀರಿ ಬದುಕಲು ವೈದ್ಯಕೀಯ ಕ್ಷೇತ್ರದಲ್ಲಿಯೂ ಅನೇಕ ಬದಲಾವಣೆಗಳಾಗುತ್ತಿವೆ  ಮತ್ತು ಅವುಗಳ ಬಗ್ಗೆ ತಿಳಿದುಕೊಳ್ಳುವ ಅನಿವಾರ್ಯತೆಯೂ ಇದೆ. ಅದರಲ್ಲಿ  ಕೆಲವನ್ನು ಇಲ್ಲಿ ವಿಮರ್ಶಿಸಲಾಗಿದೆ.

ಶ್ವಾಸಕೋಶದ ಕಾಯಿಲೆಯ ಔಷಧಿಗಳು – ಸ್ಮಾರ್ಟ್ ಇನ್‍ಹೇಲರ್ ಗಳು :
inhaler

(ಚಿತ್ರ: propellerhealth.com)

ಅಸ್ತಮಾ ಎನ್ನುವ ಕಾಯಿಲೆಗೆ ಉಸಿರಾಟದ ಪಂಪುಗಳ ಮೂಲಕ ಔಷಧಿಯನ್ನು ಒದಗಿಸಬಹುದು.  ಈ ರೀತಿ ಮಾಡುವುದರಿಂದ ಶೇಕಡ 90 ರಿಂದ 94.1 ರಷ್ಟು ಕಾಯಿಲೆಯನ್ನು ಗುಣಪಡಿಸಲು ಸಾಧ್ಯವಿದೆ.  ಆದರೆ ಔಷಧಿ ಪ್ರಮಾಣದ ವ್ಯತ್ಯಯ ಅಥವಾ ರೋಗಿಗಳು ಸರಿಯಾಗಿ ಔಷಧಿಗಳನ್ನು ಬಳಸದೇ ಇರುವ ಕಾರಣಗಳಿಂದ ಶೇಕಡ 50 ರಷ್ಟು ರೋಗನಿಯಂತ್ರಣದ ಸಮಸ್ಯೆ ಎದುರಾಗುತ್ತಿದೆ.  ಇಂತಹ ಸಂದರ್ಭದಲ್ಲಿ ಅತ್ಯಾಧುನಿಕ ಇನ್‍ಹೇಲರ್‍ಗಳು, ಬ್ಲೂಟೂತ್ ಸಂಪರ್ಕವನ್ನು ಹೊಂದಿದ್ದು ಅದನ್ನು ಮೊಬೈಲ್ ಫೋನ್‍ಗಳಿಗೆ ಅಳವಡಿಸಿ ಔಷಧಿಯ ಪ್ರಮಾಣ ಹಾಗೂ ಸಮಯಗಳನ್ನು ನಿಗಧಿಪಡಿಸಿ ರೋಗಿಯು ಸರಿಯಾದ ವಿಧಾನದಲ್ಲಿ ಔಷಧಿಗಳನ್ನು ತೆಗೆದುಕೊಳ್ಳುತ್ತಿರುವುದನ್ನು ಖಾತರಿಪಡಿಸಿಕೊಳ್ಳಬಹುದಾಗಿದೆ.

ರೋಬೋಟಿಕ್ ಸರ್ಜರಿ (ಯಂತ್ರಮಾನವನ ಸಹಾಯದ ಶಸ್ತ್ರ ಚಿಕಿತ್ಸೆ):
robotic surgery

 (ಚಿತ್ರ: uchealth.com)

ಈ ವಿಧಾನವನ್ನು ಅನುಸರಿಸಿ ಇಂದು ಶಸ್ತ್ರಚಿಕಿತ್ಸಕರು ಅತೀ ಕ್ಲಿಷ್ಟವಾದ ಅಥವಾ ಚಿಕಿತ್ಸೆ ನೀಡಲು ಸಾಧ್ಯವಾಗದ ಕಾಯಿಲೆಗಳಿಗೆ ಶ್ರಮವಿಲ್ಲದೆ ಚಿಕಿತ್ಸೆ ನೀಡಲು ಸಾಧ್ಯವಾಗಿದೆ.  ಆದರೆ ಇದು ಯಂತ್ರ ಮಾನವನೇ ಪೂರ್ತಿಯಾಗಿ ಮಾಡುವ ಶಸ್ತ್ರಚಿಕಿತ್ಸೆ ಹಾಗೂ ಇದಕ್ಕೆ ವೈದ್ಯರ ಅವಶ್ಯಕತೆ ಇರುವುದಿಲ್ಲ ಎನ್ನುವ ತಪ್ಪು ಕಲ್ಪನೆ ಜನರಲ್ಲಿ ಇದೆ.   ಇದು ಒಂದು ಶಸ್ತ್ರಚಿಕಿತ್ಸಾ ಸಾಧನವಾಗಿದ್ದು ವೈದ್ಯರೇ ಇದನ್ನು ಬಳಸಿ ದೂರದಲ್ಲಿ ಕುಳಿತು ಸಣ್ಣರಂದ್ರಗಳ ಮೂಲಕ ನೀಡುವ ಚಿಕಿತ್ಸೆಯಾಗಿದೆ.  ಮೊದಲು ಶಸ್ತ್ರಚಿಕಿತ್ಸೆ ನೀಡಬೇಕಾದ ರೋಗಿಗೆ ಅರವಳಿಕೆಯ ಔಷಧಿಗಳನ್ನು ನೀಡಲಾಗುತ್ತದೆ.

ನಂತರ ರೋಗಿಯ ನಿರ್ಧಿಷ್ಟವಾದ ದೇಹದ ಭಾಗದ ಮೇಲೆ ರೋಬೋ ಅಥವಾ ಯಂತ್ರಮಾನವನನ್ನು ಅಳವಡಿಸಲಾಗುತ್ತದೆ.  ಉದಾಹರಣೆ ಹೊಟ್ಟೆಯ ಭಾಗ, ಎದೆಯಭಾಗ, ಕುತ್ತಿಗೆ ಇತ್ಯಾದಿ.  ನಂತರ ಶಸ್ತ್ರಚಿಕಿತ್ಸಕನು ಇನ್ನೊಂದು ಕೋಣೆಯಲ್ಲಿ ಕುಳಿತು ಕಂಪ್ಯೂಟರ್ ಪರದೆಯ ಸಹಾಯದಿಂದ ಈ ಯಂತ್ರದ ಚಲನವಲನಗಳನ್ನು ನಿಯಂತ್ರಿಸುತ್ತಾನೆ.  ಈ ಯಂತ್ರಕ್ಕೆ ಸಾಮಾನ್ಯವಾಗಿ ಮೂರರಿಂದ ನಾಲ್ಕು ಕೈಗಳಿದ್ದು, ಅದರ ಕೆಲಸಗಳನ್ನು ನುರಿತ ವೈದ್ಯರು ಕೇವಲ ತಮ್ಮ ಕೈಬೆರಳುಗಳಲ್ಲಿ ಕಂಪ್ಯೂಟರ್‍ನ  ಜಾಯ್‍ಸ್ಟಿಕ್‍ನ ಸಹಾಯದಿಂದ ನಿಯಂತ್ರಿಸಬಹುದಾಗಿದೆ.  ರೋಗವಿರುವ ಅಂಗಾಂಗಗಳು ನಾಲ್ಕರಿಂದ ಹತ್ತು ಪಟ್ಟು ದೊಡ್ಡದಾಗಿ ಕಾಣುವ ಕಾರಣ ಅತೀ ಸೂಕ್ಷ್ಮವಾದ ಕಾಯಿಲೆಗಳ ಶಸ್ತ್ರಚಿಕಿತ್ಸೆಯನ್ನು ಸಲೀಸಾಗಿ ನಡೆಸಬಹುದು. ಇಂದು ಇಂಟರ್‍ನೆಟ್ ತಂತ್ರಜ್ಞಾನವನ್ನು ಬಳಸಿ, ಒಂದು ಊರಿನಲ್ಲಿದ್ದು ಇನ್ನೊಂದು ಊರಿನಲ್ಲಿರುವ ರೋಗಿಗಳಿಗೆ ರೋಬೊಟಿಕ್ ಸರ್ಜರಿ ನಡೆಸಬಹುದಾಗಿದೆ.  ಇದರಿಂದ ಸಾಮಾನ್ಯ ಜನರಿಗೂ ನುರಿತ ವೈದ್ಯರಿಂದ ಚಿಕಿತ್ಸೆ ಪಡೆಯಲು ಸಾಧ್ಯವಾಗುತ್ತಿದೆ.

ದೂರಸಂವೇದಿ ವೈದ್ಯಶಾಸ್ರ್ತ(Tele-Medicine / Telehealth ) :
telehealth

(ಚಿತ್ರ: medcitynews.com)

ಇಂದು ಪ್ರಪಂಚದ ಒಂದು ಮೂಲೆಯಲ್ಲಿ ಕುಳಿತು ಇನ್ನೊಂದು ಮೂಲೆಯಲ್ಲಿರುವ ರೋಗಿಯೊಂದಿಗೆ ಸುಲಭವಾಗಿ ಸಂಪರ್ಕ ಬೆಳೆಸಿ, ರೋಗ ಪರೀಕ್ಷೆ ಹಾಗೂ ಸೂಕ್ತ ಚಿಕಿತ್ಸೆಗಳನ್ನು ನೀಡಲು ಸಾಧ್ಯವಾಗುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ಹಾಗೂ ತಾಲ್ಲೂಕು ಆಸ್ಪತ್ರೆಗಳಲ್ಲಿ ತಜ್ಞವೈದ್ಯರ ಕೊರತೆ ಇರುವುದು ಸಹಜ.  ಇಂತಹ ಸಂದರ್ಭಗಳಲ್ಲಿ ದೂರಸಂವೇದಿ ತಂತ್ರಜ್ಞಾನದ ಮೂಲಕ ರೋಗಿ ಇರುವಲ್ಲಿಂದಲೇ ಇನ್ನೊಂದು ಊರಿನಲ್ಲಿರುವ ನುರಿತ ವೈದ್ಯರನ್ನು ಸಂಪರ್ಕಿಸಿ ರೋಗನಿರ್ಣಯದ ಬಗ್ಗೆ ಚರ್ಚಿಸಿ, ಸೌಲಭ್ಯಗಳಿದ್ದಲ್ಲಿ ಅದೇ ಸ್ಥಳದಲ್ಲಿ ಚಿಕಿತ್ಸೆ ಒದಗಿಸಬಹುದು ಅಥವಾ ಸೌಲಭ್ಯದ ಕೊರತೆ ಇದ್ದಲ್ಲಿ ಉನ್ನತ ಚಿಕಿತ್ಸೆಗಾಗಿ ಇನ್ನೊಂದು ಆಸ್ಪತ್ರೆಗೆ ತಕ್ಷಣ ಕಳುಹಿಸಬಹುದು.  ಇದರಿಂದ ರೋಗ ಪರೀಕ್ಷಾ ವಿಳಂಬ ದೂರವಾಗಿ ರೋಗಿಗಳಿಗೆ ತಕ್ಕ ಸಮಯದಲ್ಲಿ ಸೂಕ್ತ ಸಲಹೆ ಹಾಗೂ ಚಿಕಿತ್ಸೆ ನೀಡಲು ಸಾಧ್ಯ. ಇದರಿಂದ ‘ ಪ್ರಪಂಚವೇ ಒಂದು ಪುಟ್ಟಗ್ರಾಮ ಎನ್ನುವ ತರ್ಕಕ್ಕೆ ಪುಷ್ಠಿ ನೀಡಿದಂತಾಗುತ್ತದೆ.

ಜೈವಿಕ ಅವನತಿ ಹೊಂದುವ ಮೆದುಳು ಸಂವೇದಕಗಳು:
thumb_dc4979f47dc6b47aea064c829ef589e4

(ಚಿತ್ರ: yonsei.ac.kr)

ದೇಹದಲ್ಲಿ ತಾನಾಗಿಯೇ ಕರಗುವ ಜೈವಿಕ ಅವನತಿ ಹೊಂದುವ ಮೆದುಳು ಸಂವೇದಕಗಳನ್ನು ತಲೆಬುರುಡೆಯು ಶಸ್ತ್ರಚಿಕಿತ್ಸೆ ನಡೆಸಿ ಮೆದುಳಿನ ಮೇಲೆ ಅಳವಡಿಸಬಹುದಾಗಿದೆ.  ಇವು ಅಪಸ್ಮಾರ, ಪಾರ್ಕಿನ್ ಸೋನಿಸಂ ನಂತಹ ರೋಗಗಳಿಗೆ ರಾಮಬಾಣವಾಗಿರುವುದಲ್ಲದೆ, ಈ ಚಿಕಿತ್ಸೆಯಿಂದ ಮೆದುಳಿನಲ್ಲಾಗುವ  ಉಷ್ಣತೆ ಮತ್ತು ಒತ್ತಡದ ಬದಲಾವಣೆಗಳನ್ನು ಅಳೆಯಬಹುದಾಗಿದೆ.  ಚಿಕಿತ್ಸೆಯ ನಂತರ ಅವಶ್ಯಕತೆ ಇಲ್ಲದಿರುವಾಗ ಈ ಉಪಕರಣಗಳು ತಾನಾಗಿಯೇ ದೇಹದಲ್ಲಿ ಕರಗಿಬಿಡುತ್ತವೆ ಮತ್ತು ಶಸ್ತ್ರಚಿಕಿತ್ಸೆ ಮತ್ತೊಮ್ಮೆ ನಡೆಸಿ ತೆಗೆಯುವ ಅವಶ್ಯಕತೆ ಇರುವುದಿಲ್ಲ.

3ಡಿ ಅಚ್ಚುಗಾರಿಕೆ (3D printing):

5647122840-prostetic-3D-printing(ಚಿತ್ರ: healthtechzone.com)

​ಇದೊಂದು, ವೈದ್ಯಕೀಯ ಹಾಗೂ ತಂತ್ರಜ್ಞಾನ ಕ್ಷೇತ್ರಗಳ ಸಹಯೋಗದ ಕೆಲಸಕ್ಕೆ ಉತ್ತಮ ನಿದರ್ಶನವಾಗಿದೆ.  ಈ ತಂತ್ರಜ್ಞಾನವನ್ನು ಬಳಸಿ ರೋಗಿಯ ದೇಹದ ಅಂಗಾಂಗಗಳ  ಕೃತಕ ಮಾದರಿಯನ್ನು ತಯಾರಿಸಬಹುದಾಗಿದೆ.  ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಅಥವಾ ನಂತರ ಈ ಅಂಗಾಂಗಗಳನ್ನು ಅಳವಡಿಸಬಹುದಾಗಿದೆ.  ಉದಾಹರಣೆ: ಕೃತಕ ಕಾಲುಗಳು, ಕೃತಕ ಕೈಗಳು ಇತ್ಯಾದಿ. 3ಡಿ ಅಚ್ಚುಗಾರಿಕೆಯ ಸೌಲಭ್ಯವನ್ನು ಮುಖದ ಅಸ್ತಿಪಂಜರದ ಅಚ್ಚು ತೆಗೆಯಲು ಹೆಚ್ಚಾಗಿ ಬಳಸುತ್ತಾರೆ.  ರಸ್ತೆ ಅಪಘಾತವೋ ಅಥವಾ ಕೆಳಗೆ ಬೀಳುವುದರಿಂದ ಆದ ಮುಖದ ಮೂಳೆಗಳು ಮುರಿತಗೊಂಡಾಗ 3ಡಿ ಅಚ್ಚುಗಾರಿಕೆಯ ತಂತ್ರಜ್ಞಾನವನ್ನು ಬಳಸಿ, ಮುಖ್ಯವಾಗಿ ಕಣ್ಣಿನ ಸುತ್ತಲಿರುವ ಮೇಲ್ದವಡೆಯ ಮೂಗಿನ ಅಥವಾ ಕೆಳದವಡೆಯ ಮೂಳೆಗಳ ಮಾದರಿಯನ್ನು ತಯಾರಿಸಬಹುದು.

ಮುಖದ ಒಂದು ಬದಿಯ ಭಾಗದ ರೀತಿಯಲ್ಲಿಯೇ ಇನ್ನೊಂದು ಬದಿಯ ಅಚ್ಚನ್ನು ತಯಾರಿಸಿ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಮುರಿದ ಮೂಳೆಗಳನ್ನು ಜೋಡಿಸುವಾಗ ಬಳಸಬಹುದು. ಆದ್ದರಿಂದಲೇ ಪ್ಲಾಸ್ಟಿಕ್ ಸರ್ಜರಿಯಲ್ಲಿ ಈ ತಂತ್ರಜ್ಞಾನವನ್ನು ಬಹಳಷ್ಟು ಬಳಸಲಾಗುತ್ತದೆ.  ಅಷ್ಟೇ ಅಲ್ಲದೆ 3ಡಿ ಅಚ್ಚುಗಾರಿಕೆಯನ್ನು ಬಳಸಿ ಔಷಧಿ ಉತ್ಪಾದನೆಯನ್ನು ಮಾಡಬಹುದಾಗಿದೆ.  ಒಂದಕ್ಕಿಂತ ಹೆಚ್ಚು ಔಷಧಿಗಳನ್ನು ರೋಗಿಗೆ ನೀಡುವ ಅವಶ್ಯಕತೆ ಇದ್ದಲ್ಲಿ ಅದನ್ನು ಪದರಗಳ ರೀತಿ ಕ್ರೂಢೀಕರಿಸಿ ಒದಗಿಸಬಹುದಾಗಿದೆ.

ಕೃತಕ ಅಂಗಾಂಗಗಳ ಜೈವಿಕ ಅಚ್ಚುಗಾರಿಕೆ:
3ಡಿ ಅಚ್ಚುಗಾರಿಕೆಯ ರೀತಿಯಲ್ಲಿಯೇ ಜೈವಿಕ ಅಚ್ಚುಗಾರಿಕೆ ತಂತ್ರಜ್ಞಾನವು ವೈದ್ಯಕೀಯ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸುವ ಸಾಧ್ಯತೆ ಇದೆ.  ಅಂಗಾಂಗ ಕಸಿ ತಂತ್ರಜ್ಞಾನವು ಎಲ್ಲರಿಗೂ ತಿಳಿದ ವಿಷಯ.  ಆದರೆ ಅದಕ್ಕೆ ತನ್ನದೇ ಆದ ನಿರ್ಬಂಧಗಳಿವೆ.  ಬೇರೆ ವ್ಯಕ್ತಿಯ ಅಂಗಾಂಗಗಳನ್ನು ದೇಹವು ತಿರಸ್ಕರಿಸುವ  ಸಾಧ್ಯತೆಯೇ ಹೆಚ್ಚು.  ಆದರೆ ಜೈವಿಕ ಅಚ್ಚುಗಾರಿಕೆಯ ತಂತ್ರಜ್ಞಾನದಿಂದ ರೋಗಿಯ ರಕ್ತನಾಳಗಳು, ಅಂಡಾಶಯಗಳು, ಮೇದೋಜೀರಕ ಗ್ರಂಥಿ ಮುಂತಾದ ಅಂಗಾಂಗಗಳನ್ನು ಬೆಳೆಸಬಹುದಾಗಿದೆ.  ಮೊದಲು ಕೇವಲ ಸುಟ್ಟಗಾಯಗಳಿಗೆ ಚಿಕಿತ್ಸೆ ನೀಡಲು ಬಳಸುವ ಚರ್ಮವನ್ನು ಬೆಳೆಸುವ ತಂತ್ರಜ್ಞಾನವು ಇಂದು ಮುಂದುವರಿದು  ಬೇರೆ ಅಂಗಾಂಗಗಳನ್ನು ಬೆಳೆಸುವಲ್ಲಿ ಕಾರ್ಯನಿರ್ವಹಿಸುತ್ತಿದೆ.

ಮೊದಲು ಮೇಲೆ ತಿಳಿಸಿದ ಕೆಲವು ಅಂಗಾಂಗಗಳ ಮಾದರಿಗಳನ್ನು ತಯಾರಿಸಲಾಗುತ್ತದೆ.  ನಂತರ ಅವುಗಳನ್ನು ಅಗತ್ಯವಿರುವ ರೋಗಿಗಳಿಗೆ ಅಳವಡಿಸಲಾಗುತ್ತದೆ.  ದೇಹದಲ್ಲಿ ಹೊಸ ಅಂಗಾಂಗಗಳು ರೋಗಗ್ರಸ್ಥವಾದ ಹಳೆಯ ಅಂಗಾಂಗಗಳ ಕಾರ್ಯಗಳನ್ನು ಕ್ರಮೇಣ ವಹಿಸಿಕೊಳ್ಳಲು ಆರಂಭಿಸುತ್ತವೆ.  ಅಲ್ಲಿಯವರೆಗೂ ದೇಹದ ಒಳಭಾಗದಲ್ಲಿ ಈ ಕೃತಕ ಅಂಗಾಂಗಗಳು ಬೆಳೆಯುತ್ತಿರುತ್ತವೆ.  ದೇಹದ ಒಳಗೇ ಅಂಗಾಂಗಗಳು ಬೆಳೆಯುವ ಕಾರಣ, ತಿರಸ್ಕರಿಸುವ (ರಿಜೆಕ್ಷನ್) ಪ್ರಮೇಯ ಕಡಿಮೆಯಾಗಿ ಇದೊಂದು ಮನುಜ ಸಂಕುಲಕ್ಕೆ ವರವಾಗುವ ಸಾಧ್ಯತೆ ಇದೆ.

ನೈಜ ಚಿತ್ರಣ ತಂತ್ರಜ್ಞಾನ (ವರ್ಚುವಲ್ ರಿಯಾಲಿಟಿ):
virtual reality medical

(ಚಿತ್ರ: wear-studio.com)

ಈ ತಂತ್ರಜ್ಞಾನದಿಂದ, ಕಂಪ್ಯೂಟರ್ ಪರದೆಯ ಮೇಲೆಯೇ ಮಾನವನ ಅಂಗಶಾಸ್ತ್ರದ (ದೇಹ ರಚನೆ)  ಸಂಪೂರ್ಣ ಚಿತ್ರಣವನ್ನು ನೈಜ ರೀತಿಯಲ್ಲಿ ಮೂಡಿಸಬಹುದಾಗಿದೆ. ವೈದ್ಯಕೀಯ ವಿದ್ಯಾರ್ಥಿಗಳಿಗೆ  ಇದರ ಉಪಯೋಗ ಬಹಳಷ್ಟಿದೆ. ವೈದ್ಯಕೀಯ  ಕಾಲೇಜುಗಳಲ್ಲಿ ನೈಜ ಚಿತ್ರಣ ತಂತ್ರಜ್ಞಾನದ ಅಳವಡಿಕೆಯಿಂದ ವಿದ್ಯಾರ್ಥಿಗಳು ಮಾನವನ ದೇಹದ ಸಹಾಯವಿಲ್ಲದೇ ದೇಹರಚನಾ ಶಾಸ್ತ್ರವನ್ನು ಕಲಿಯಬಹುದಾಗಿದೆ.  ಅದಲ್ಲದೇ ಯಾವುದೇ ರೋಗಿಯ ಸಿ.ಟಿ. ಅಥವಾ ಎಂ.ಆರ್.ಐ. ಚಿತ್ರಗಳನ್ನು ನೈಜಚಿತ್ರಣ ಯಂತ್ರದಲ್ಲಿ ಅಳವಡಿಸಿ, ರೋಗಿಯ ಕೃತಕ ದೇಹದ ಮಾದರಿ ಹಾಗೂ ಅವನಿಗಿರುವ  ಕಾಯಿಲೆಗಳನ್ನು ಪರದೆಯ ಮೇಲೆ ಮೂಡಿಸಬಹುದು.

ಇದರಿಂದ ರೋಗಿಗೆ ಗಂಟು(ಗಡ್ಡೆ) ಯಾವ ಭಾಗದಲ್ಲಿದೆ,  ಅದರ ಸುತ್ತಲಿರುವ ಅಂಗಾಂಗಗಳು ಯಾವುವು? ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಎಷ್ಟು ಪ್ರಮಾಣದಲ್ಲಿ ಗಡ್ಡೆಯನ್ನು ತೆಗೆಯಬೇಕು ಹಾಗೂ ಆ ಸಮಯದಲ್ಲಿ ಎದುರಾಗುವ ತೊಂದರೆಗಳೇನು? ಯಾವ ದೊಡ್ಡ ರಕ್ತನಾಳಗಳು ಗಡ್ಡೆಯ ಸುತ್ತ ಇವೆ.  ಮುಂತಾದ ಅನೇಕ  ಮಾಹಿತಿಗಳನ್ನು ಶಸ್ತ್ರಚಕಿತ್ಸೆಯ ಮೊದಲೇ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ವೈದ್ಯರು ಕೃತಕ ಮಾದರಿಯ ಮೇಲೆ ಪ್ರಯೋಗಾತ್ಮಕ ಶಸ್ತ್ರಚಕಿತ್ಸೆಯನ್ನು ನಡೆಸಲು ಸಾಧ್ಯವಿದೆ.  ಇದರಿಂದಾಗಿ ರೋಗಿಗಳಿಗೆ ಶಸ್ತ್ರಚಿಕಿತ್ಸಾ ಸಮಯದಲ್ಲಿ ಆಗಬಹುದಾದ ತೊಂದರೆಗಳನ್ನು ನಿಯಂತ್ರಿಸಬಹುದಾಗಿದೆ.

ಕ್ಯಾಪ್ಸೂಲ್ ನೋಟ:

capsule-endoscopy1(ಚಿತ್ರ: medgadget.com)

ಹೊಟ್ಟೆ, ಕರುಳು, ಪಿತ್ತನಾಳ ಇವುಗಳ ರೋಗ ಪತ್ತೆ ಹಾಗು ಚಿಕಿತ್ಸೆಗೆ ಉದರದರ್ಶಕ ಉಪಕರಣಗಳನ್ನು ಬಳಸುತ್ತಿದ್ದುದು ಎಲ್ಲರಿಗೂ ತಿಳಿದ ವಿಷಯವೇ ಆಗಿದೆ. ಆದರೆ ಈಗ ಅದಕ್ಕೂ ಮೇಲಾಗಿ ಒಂದು ಸಣ್ಣ ನಳಿಕೆ ಗುಳಿಗೆಯನ್ನು ಬಳಸಿ ಜಠರ ಹಾಗು ಕರುಳಿನ ರೋಗಗಳನ್ನು ಸುಲಭವಾಗಿ ಪತ್ತೆಮಾಡಬಹುದು. ಈ ಸಣ್ಣ ನಳಿಕೆ ಗುಳಿಗೆಯು ಬ್ಲೂಟೂತ್ ಸಂಪರ್ಕವನ್ನು ಹೊಂದಿದ್ದು ಅದನ್ನು ಗಣಕಯಂತ್ರ ದೊಂದಿಗೆ ಸಂಪರ್ಕಿಸಲಾಗುತ್ತದೆ. ಈ ಗುಳಿಗೆಯ ಒಂದೊಂದು ತುದಿಗಳಲ್ಲಿಯೂ ಬೆಳಕಿನ ಒಂದು ಆಕರ ಮತ್ತು ಛಾಯಾಚಿತ್ರಗ್ರಾಹಕ ಒಂದನ್ನು ಅಳವಡಿಸಲಾಗಿರುತ್ತದೆ.capsule

(ಚಿತ್ರ: tgastro.com)

ರೋಗಿಯು ಈ ಗುಳಿಗೆಯನ್ನು ನುಂಗಿದ ನಂತರ 24 ರಿಂದ 48 ಗಂಟೆಗಳ ವರೆಗೂ ಹೊಟ್ಟೆ ಹಾಗೂ ಕರುಳಿನ ಚಿತ್ರಗಳನ್ನು ನಿರಂತರವಾಗಿ ತೆಗೆದು ಅದನ್ನು ಗಣಕಯಂತ್ರಕ್ಕೆ ರವಾನಿಸುವ ಕೆಲಸವನ್ನು ಮಾಡುತ್ತದೆ. ನಂತರ ಈ ಗುಳಿಗೆಯು ಮಲದೊಂದಿಗೆ ವಿಸರ್ಜಿಸಲ್ಪಡುವ ಕಾರಣ ರೋಗಿಯು ಆಸ್ಪತ್ರೆಯಲ್ಲಿ ಭರ್ತಿಯಾಗುವ ಅವಶ್ಯಕತೆ ಇರುವುದಿಲ್ಲ. ಅಲ್ಲದೆ ಈ ಗುಳಿಗೆಯ ಸಹಾಯದಿಂದ ಕರುಳಿನಲ್ಲಾಗುವ ರಕ್ತಸ್ರಾವ, ಹುಣ್ಣುಗಳು ಉರಿ ಊತ ಈರೀತಿ ಅನೇಕ ಕಾಯಿಲೆಗಳನ್ನು ಸುಲಭವಾಗಿ ಪತ್ತೆ ಹಚ್ಚಬಹುದು ಮತ್ತು ಇದರಿಂದ ಸೂಕ್ತವಾದ ಚಿಕಿತ್ಸೆಯನ್ನು ನೀಡಲು ಸಾಧ್ಯವಾಗುತ್ತದೆ.

ಕರುಳಿನ ಜೀವಕೋಶಗಳ ಹಾಗೂ ಕರುಳಿನ ಸೂಕ್ಷ್ಮಾಣುಜೀವಿಗಳ ಕಸಿ:
ದೇಹದ ಅನೇಕ ಸಮಸ್ಯೆಗಳಿಗೆ ದೊಡ್ಡಕರುಳಿನಲ್ಲೇ ಕಾರಣ ಅಡಗಿದೆ ಎಂಬುದನ್ನು ಬಹಳ ಹಿಂದೆಯೇ ಕಂಡುಹಿಡಿಯಲಾಗಿತ್ತು. ಪಚನಕ್ರಿಯೆ ಹಾಗು ಮಲ ವಿಸರ್ಜನೆ ಸರಿ ಇದ್ದರೆ ವ್ಯಕ್ತಿಯು ಸಾಮಾನ್ಯ ರೋಗಗಳಿಂದ ಮುಕ್ತವಾಗಿರುತ್ತಾನೆ ಎಂದೇ ಅರ್ಥ ಎಂದು, ಪುರಾತನ ಭಾರತೀಯ ವೈದ್ಯಶಾಸ್ತ್ರಗಳಲ್ಲಿ ಉಲ್ಲೇಖವಾಗಿದೆ. ಇಂದು ಅದರ ಆಧಾರದ ಮೇಲೆ ಸಂಶೋಧನೆಗಳು ನಡೆದಿವೆ.

ಈ ಸಂಶೋಧನೆಗಳಿಂದ ಆರೋಗ್ಯವಂತ ವ್ಯಕ್ತಿಯ ದೊಡ್ಡಕರುಳಿನ ಜೀವಕೋಶಗಳು ಅಷ್ಟೇ ಅಲ್ಲದೆ, ಅದರಲ್ಲಿರುವ ಅನೇಕ ಉಪಕಾರಿ ಸೂಕ್ಷ್ಮಾಣು ಜೀವಿಗಳನ್ನು ಪ್ರತ್ಯೇಕಿಸಿ, ಅದನ್ನು ಕರುಳು ಸಂಬಂಧೀ ರೋಗಿಗಳಿಗೆ ಕಸಿಮಾಡಿ ರೋಗ ಮುಕ್ತರನ್ನಾಗಿಸಬಹುದು ಎನ್ನುವ ಸತ್ಯಾಂಶ ತಿಳಿದುಬಂದಿದೆ. ಆದರೆ ಈ ಚಿಕಿತ್ಸೆಗೆ ತನ್ನದೇ ಆದ ನಿರ್ಬಂಧಗಳಿದ್ದರೂ ಕರುಳಿನ ಹುಣ್ಣು, ಉರಿಯೂತ, ಕರುಳಿನ ಇತರ ಸೋಂಕು ನಿವಾರಣೆಗಾಗಿ ಬಳಸಬಹುದಲ್ಲದೇ, ಪಾರ್ಕಿಂಸೋನಿಸಂ, ಮಾನಸಿಕ ತೊಂದರೆಗಳು, ಬೊಜ್ಜುತನ, ಅರ್ಬುದ ರೋಗ ಈ ರೀತಿ ಅನೇಕ ರೋಗಗಳಿಗೆ ಚಿಕಿತ್ಸೆಗಾಗಿ ಪರೀಕ್ಷೆಗಳು ನಡೆದಿವೆ. ಇವುಗಳ ಪಲಿತಾಂಶದ ಮೇಲೆ ಬಹಳಷ್ಟು ರೋಗಗಳಿಗೆ ಮುಕ್ತಿ ಸಿಗಲಿದೆ.

ಕಣ್ಣಿನ ತೊಂದರೆಗಳಿಗೆ ಪರಿಹಾರಗಳು:

optometrist-giving-man-eye-drops(ಚಿತ್ರ: medicalnewstoday.com)

ಕಣ್ಣು ಪೊರೆ ಎಂಬುದು ಸಾಮಾನ್ಯವಾಗಿ ವಯಸ್ಸಾಗುತ್ತಿದ್ದಂತೆ ಬರುವ ಕಾಯಿಲೆ. ಅದಕ್ಕೆ ದೊಡ್ಡ ಗಾಯದ ಶಸ್ತ್ರಚಿಕಿತ್ಸೆಯಿಂದ ಹಿಡಿದು ಅತಿ ಸಣ್ಣ ರಂಧ್ರದ ಮೂಲಕ ನಡೆಸುವ ಚಿಕಿತ್ಸೆಯ ವರೆಗೂ ಅನೇಕ ರೀತಿಯ ಚಿಕಿತ್ಸೆಗಳು ಲಭ್ಯವಿದೆ. ಆದರೆ ಇತ್ತೀಚೆಗೆ ಪೊರೆ ಕರಗುವಂತಹ ಔಷಧಿಯ ಹನಿಗಳನ್ನು ಕಂಡುಹಿಡಿಯಲಾಗುತ್ತಿದೆ. ಅದು ಮಾರುಕಟ್ಟೆಗೆ ಬಂದರೆ ಕಣ್ಣಿನ ಶಸ್ತ್ರಚಿಕಿತ್ಸೆ ಹಾಗೂ ಅದರಿಂದ ಆಗಬಹುದಾದ ತೊಂದರೆಗಳಿಂದ ರೋಗಿಯು ದೂರವೇ ಉಳಿದುಬಿಡಬಹುದು.

ಜೈವಿಕ ಕಣ್ಣು (Bionic Eye):

r0_0_800_600_w1200_h678_fmax(ಚಿತ್ರ : northerndailyleader.com)

ಕಣ್ಣು ಕಾಣದ ವ್ಯಕ್ತಿಗಳ ನರಮಂಡಲ ವ್ಯವಸ್ಥೆ ಸರಿ ಇದ್ದರೆ ಅವರಿಗೆ ಕನ್ನಡಕದ ರೂಪದಲ್ಲಿ ಈ ಕಣ್ಣುಗಳನ್ನು ಬಳಸಬಹುದಾಗಿದೆ. ಇದರಲ್ಲಿ ಕೃತಕ ಕ್ಯಾಮರ ಒಂದನ್ನು ಕನ್ನಡಕದ ಮೇಲೆ ಅಳವಡಿಸಿ ತಂತು ರಹಿತ ಸಂದೇಶ ರವಾನಿಸುವ ಮಾಧ್ಯಮದ ಮೂಲಕ (ಬ್ಲೂಟೂತ್) ಕಣ್ಣಿನ ನರದ ಮೇಲೆ ಅಳವಡಿಸಲಾಗುವ ಸಂದೇಶ ಗ್ರಾಹಕಕ್ಕೆ ತಲುಪುವಂತೆ ಮಾಡಲಾಗುತ್ತದೆ .ಚಿತ್ರಗಳು ನೈಸರ್ಗಿಕ ಕಣ್ಣುಗಳಲ್ಲಿ ಮೂಡುವಂತೆ ಇರದಿದ್ದರೂ ವ್ಯಕ್ತಿಯು ಆ ಚಿತ್ರಗಳನ್ನು ಗ್ರಹಿಸಬಹುದಾಗಿದೆ. ಮೆದುಳು ಆ ಚಿತ್ರಗಳಿಗೆ ಹೊಂದಾಣಿಕೆ ಹೊಂದಿದ ನಂತರ ವ್ಯಕ್ತಿಯು ದೈನಂದಿಕ ಚಟುವಟಿಕೆಗಳನ್ನು ನಡೆಸಬಹುದೆಂದು ಊಹಿಸಲಾಗಿದೆ. ಈ ವಿಷಯದ ಮೇಲೆ ಇನ್ನಷ್ಟು ಪರೀಕ್ಷೆಗಳು ಜಾರಿಯಲ್ಲಿವೆ.

ನಿಖರ ಔಷಧಿಗಳು:
ರೋಗಿಯ ಜೀವ ಕೋಶದಲ್ಲಿರುವ ಅತೀ ಸೂಕ್ಷ್ಮವಾದ ಅನುವಂಶಿಕ ರೂಪವನ್ನು ಆಧರಿಸಿ ( ಜೆನೆಟಿಕ್ ಮೇಕಪ್) ಕ್ಯಾನ್ಸರ್ ರೋಗ, ಸಂದಿವಾತ ರೋಗ ಮೊದಲಾದವುಗಳಿಗೆ ನಿರ್ಧಿಷ್ಟವಾದ ಚಿಕಿತ್ಸೆ ನೀಡಲು ಸಾಧ್ಯವಾಗಲಿದೆ.  ಇಷ್ಟೇ ಅಲ್ಲದೆ ವೈದ್ಯಕೀಯ ಮತ್ತು ತಂತ್ರಜ್ಞಾನ ಇವೆರಡರ ಸಮ್ಮಿಲನದಿಂದ ಆರೋಗ್ಯ ಯಂತ್ರಗಳಲ್ಲಿ ಪ್ರಗತಿಯಾಗಲಿದೆ.  ಇಂದು ಪ್ರಸ್ತುತವಿರುವ ನಾಡಿ, ಎದೆಬಡಿತ ಮಾಪನಗಳಷ್ಟೇ ಅಲ್ಲದೆ ಮುಂದೆ ಇ.ಸಿ.ಜಿ. ಅಥವಾ ಎದೆಪಟ್ಟಿ, ಸಕ್ಕರೆ ಪ್ರಮಾಣ ನಿಯಂತ್ರಕಗಳು ರಕ್ತದ ಕೊಬ್ಬು ಯಂತ್ರಣಗಳು ಇತ್ಯಾದಿ ಮಾರುಕಟ್ಟೆಗೆ ಬರಲಿವೆ.

ಜೀನ್ ಥೆರಪಿ -ಅನುವಂಶೀಯ ಧಾತು ಚಿಕಿತ್ಸೆ:
ದೇಹದ ಒಂದು ಜೀವಕೋಶವೆಂದರೇ, ಅದು ಅತಿಸೂಕ್ಷ್ಮ. ಅದರೊಳಗೆ ಕೇಂದ್ರ ಭಾಗದಲ್ಲಿರುವ ನ್ಯೂಕ್ಲಿಯಸ್ ಅಥವಾ ಗರ್ಭವನ್ನು ವಿಭಜಿಸಿ ಅದರ ರಚನಾ ಭಾಗಗಳಾದ ಡಿ ಎನ್ ಎ ಮತ್ತು ಆರ್ ಎನ್ ಎ ಗಳನ್ನು ಬಹಳ ಹಿಂದೆಯೇ ಕಂಡುಹಿಡಿಯಲಾಗಿತ್ತು. ಅನುವಂಶೀಯವಾಗಿ ಬರುವ ಕಾಯಿಲೆಗಳು ಡಿಎನ್ಎ ಯ ಭಾಗಗಳಿಂದಲೇ ಬರುತ್ತವೆ ಎಂಬುದು ಕೂಡ ಹೊಸ ವಿಷಯವೇನಲ್ಲ. ಅಂದರೆ ಡಿಎನ್ಎ ಯನ್ನು ವಿಭಜಿಸಿ ಅದರ ಅಮೈನೋ ಆಸಿಡ್ ಗುಂಪುಗಳನ್ನು ಜೀನ್ ಗಳೆಂದು ಕರೆಯಲಾಯಿತು. ಈ ಜೀನ್‍ಗಳು ದೇಹದ ನಿರ್ದಿಷ್ಟ ಕಾರ್ಯ ವೈಖರಿಗಳನ್ನು ನಿರ್ಧರಿಸುತ್ತವೆ.

ಇದರ ಆಧಾರದ ಮೇಲೆ ಅನುವಂಶೀಯ ಕಾಯಿಲೆಗಳು ಪೋಷಕರಿಂದ ಅಥವಾ ಕುಟುಂಬದವರಿಂದ ಮಕ್ಕಳಿಗೆ ಬರುವ ವಿಧಾನ ಹಾಗೂ ಅವುಗಳನ್ನು ಗುರಿಯಿಟ್ಟುಕೊಂಡು ನೀಡಬಹುದಾದಂತಹ ಅನೇಕ ರೀತಿಯ ಚಿಕಿತ್ಸೆಗಳನ್ನು ಸಂಶೋಧಿಸಲಾಗಿದೆ, ಹಾಗೂ ಇಂದಿಗೂ ಅನೇಕ ಸಂಶೋಧನೆಗಳು ನಡೆಯುತ್ತಿವೆ. ಅರ್ಬುದ ರೋಗಕ್ಕೆ ಈ ಸಂಶೋಧನೆಗಳು ವರವಾಗಲಿವೆ. ಇದೇ ತತ್ವವನ್ನು ಬಳಸಿ ಅನುವಂಶೀಯ ಗುರುತು ತಿದ್ದುಪಡಿ ತಂತ್ರಜ್ಞಾನವನ್ನು ಬೆಳೆಸಲಾಗಿದೆ.

ಅನುವಂಶಿಕ ಗುರುತು ತಿದ್ದುಪಡಿ ತಂತ್ರಜ್ಞಾನ (Gene editing technology):
​ಈ ತಂತ್ರಜ್ಞಾನದಿಂದ ದೇಹದ ಮೇಲೆ ದುಷ್ಪರಿಣಾಮ ಬೀರುವ ಬ್ಯಾಕ್ಟೀರಿಯಾಗಳನ್ನು ಕೃತಕ ವೈರಸ್‍ಗಳ ಸಹಾಯದಿಂದ ನಾಶಪಡಿಸಬಹುದಾಗಿದೆ.  ಬ್ಯಾಕ್ಟೀರಿಯಾದ ಜೀವಕೋಶಗಳ ಒಳಗೆ ವೈರಸ್ ಜೀವಕೋಶಗಳನ್ನು ಕಳಿಸಿ, ಬ್ಯಾಕ್ಟೀರಿಯಾಗಳ ಮೂಲ ಅನುವಂಶಿಕ ರಚನೆಯನ್ನು ಬೇಧಿಸಿ (ಡಿಎನ್‍ಎ), ಬ್ಯಾಕ್ಟೀರಿಯಾಗಳನ್ನು ಕೊಲ್ಲುವ ತಂತ್ರಜ್ಞಾನವು ಹೊರಹೊಮ್ಮಲಿದೆ.  ಇದರಿಂದ ಮಾನವನ ಬದ್ಧವೈರಿಯಾಗಿರುವ ಕೆಲವು ಬ್ಯಾಕ್ಟೀರಿಯಾಗಳನ್ನು ಸುಲಭವಾಗಿ ನಾಶಪಡಿಸಬಹುದಾಗಿದೆ.

ಕ್ಯಾನ್ಸರ್ ರೋಗಕ್ಕೆ ಚಿಕಿತ್ಸೆಗಳು:
ಕ್ಯಾನ್ಸರ್ ಎಂದರೆ ಎಷ್ಟು ಭೀಕರ ಎಂಬುದರ ಅರಿವು ಎಲ್ಲರಿಗೂ ಇದೆ. ಆದರೆ ಈ ರೋಗದಿಂದ ವ್ಯಕ್ತಿ ಉಳಿಯಲು ಸಾಧ್ಯವೇ ಇಲ್ಲ ಎಂಬ ತಪ್ಪು ಪರಿಕಲ್ಪನೆಯೂ ಇದೆ. ಇಂದು ಅತ್ಯಾಧುನಿಕ ರೋಗಪತ್ತೆ ಮಾಡಬಹುದಾದಂತಹ ವಿಧಾನಗಳು ಹಾಗೂ ಅನೇಕ ರೀತಿಯ ಚಿಕಿತ್ಸೆಗಳು ಲಭ್ಯವಿದ್ದು, ಕ್ಯಾನ್ಸರ್ ರೋಗ ವನ್ನು ಮೊದಲನೇ ಹಂತದಲ್ಲೇ ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆ ನೀಡಲು ಸಾಧ್ಯವಿದೆ. ಹಿಂದೆಲ್ಲಾ ರೋಗ ನಿಯಂತ್ರಿಸಲಾಗದಂತಹ ಹಂತದಲ್ಲಿ ಬರುತ್ತಿದ್ದ ರೋಗಿಗಳಿಗೆ ಶಸ್ತ್ರಚಿಕಿತ್ಸೆಯೊಂದೇ ಉತ್ತರವಾಗಿತ್ತು.

ಆದರೆ ಇಂದು ವಿಕಿರಣ ಚಿಕಿತ್ಸೆ, ಜೀನ್ ಥೆರಪಿ ಅಥವಾ ಅನುವಂಶೀಯ ಧಾತು ಚಿಕಿತ್ಸೆ ಅಲ್ಲದೇ, ಅನೇಕ ರೀತಿಯ ಔಷಧಿಗಳು ಮಾರುಕಟ್ಟೆಯಲ್ಲಿ ಲಭ್ಯವಿರುವ ಕಾರಣ ಶಸ್ತ್ರಚಿಕಿತ್ಸೆ ಇಲ್ಲದೇ ರೋಗಿಯು ಗುಣಮುಖನಾಗುವ ಹಂತ ತಲುಪಿದೆ. ಅನೇಕ ವಿಧದ ಕ್ಯಾನ್ಸರ್ ರೋಗಗಳನ್ನು ಮೊದಲ ಹಂತದಲ್ಲೇ ಪತ್ತೆ ಹಚ್ಚಿ ಸೂಕ್ತವಾದಂತಹ ಚಿಕಿತ್ಸೆಯನ್ನು ನೀಡುವ ಮೂಲಕ ರೋಗವನ್ನು ಸಂಪೂರ್ಣವಾಗಿ ಇಲ್ಲವಾಗಿಸಲು ಸಾಧ್ಯವಾಗಿದೆ. ಇದು ಖಂಡಿತವಾಗಿಯೂ ಮಾನವ ಸಂಕುಲಕ್ಕೆ ಒಂದು ಹೊಸ ಆಶಾಕಿರಣ.

ಕೊನೆಯ ಮಾತು:
​ಮಾನವನು ದೇಹಶಾಸ್ತ್ರ, ಔಷಧಶಾಸ್ತ್ರ, ರೋಗಶಾಸ್ತ್ರಗಳ ಬಗ್ಗೆ ಎಷ್ಟು ತಿಳಿದುಕೊಂಡರೂ ನಮ್ಮ ಊಹೆಗೂ  ಮೀರಿದ ಬದಲಾವಣೆಗಳು ದೇಹದಲ್ಲೂ ಆಗುತ್ತಿರುತ್ತವೆ. ತರ್ಕಕ್ಕೂ ಸಿಗಲಾರದ ರೋಗಗಳು ದಿನೇ ದಿನೇ ಹುಟ್ಟಿಕೊಳ್ಳುತ್ತಿರುತ್ತವೆ.  ಅದರೊಂದಿಗೆ ವೈದ್ಯಕೀಯ ತಂತ್ರಜ್ಞಾನವೂ ಬೆಳೆದು ರೋಗಗಳನ್ನು  ಹೋಗಲಾಡಿಸುವ ಪ್ರಯತ್ನವೂ ನಿರಂತರವಾಗಿ ಮುಂದುವರೆಯುತ್ತದೆ.  ವೈದ್ಯಕೀಯ ಶಾಸ್ತ್ರದ ತರ್ಕ ಹಾಗೂ ತಂತ್ರಜ್ಞಾನದ ಕೊಡುಗೆಗಳು, ಮತ್ತು ಇವೆರಡರ ಸಮ್ಮಿಲನದಿಂದ ಮನುಕುಲಕ್ಕೆ ಉತ್ತಮವಾದ ಆರೋಗ್ಯ ಭಾಗ್ಯ ಸಿಗುವುದರಲ್ಲಿ ಸಂದೇಹವಿಲ್ಲ.

ಮಂಗಳ ಗ್ರಹವನ್ನು ಭೂಮಿಯನ್ನಾಗಿಸಬಲ್ಲ ಜೀವಿಗಳಿವು!

(ಇಗೋ ವಿಜ್ಞಾನ – 2020 ಪೈಪೋಟಿಯಲ್ಲಿ ಎರಡನೆ ಬಹುಮಾನ ಪಡೆದ ಬರಹ)

ಧನುಜಾ ಜೆ

ಬಾನಂಗಳವೆಂದರೆ ಅದೇನೋ ಕುತೂಹಲ, ಕೌತುಕತೆ ಮತ್ತು ಅಚ್ಚರಿಗಳ ಅನಂತ. ವಿಸ್ಮಯನೊಳಗೊಂಡ ಈ ಜಗತ್ತಿನಲ್ಲೆಲ್ಲಾ ಹೊಳೆವ ನಯವಾದ ಬಿಸಿ ಅನಿಲದ ನಕ್ಷತ್ರಗಳು. ಇಂತಹ ಜಗತ್ತಿನಲ್ಲಿ ಮತ್ತೊಂದು ಭೂಮಿ ಇರಬಹುದೇ? ಅಲ್ಲಿಯೂ ಜೀವಿಗಳಿರಬಹುದೇ? ಭೂಮಿಯಲ್ಲಿನ ಜೀವಿಗಳು ಅಲ್ಲಿ ವಾಸಿಸಬಹುದೇ? ಎಂಬ ಹಲವಾರು ಪ್ರಶ್ನೆಗಳು ಉದ್ಭವಿಸಬಹುದು. ಇದಕ್ಕೆ ವಿಜ್ಞಾನಿಗಳು ಹೇಳುವುದು ಯಾಕಾಗಬಾರದು ಎಂದೇ!

ಭೂಮಿಗೆ ಹೋಲುವ ಅನೇಕ ಗ್ರಹಗಳು ಬಾಹ್ಯಾಕಾಶದಲ್ಲಿವೆ. ನಮ್ಮ ಸೌರಮಂಡಲ ಸೇರಿದಂತೆ ಇನ್ನು ಅನೇಕ ಎಷ್ಟೋ ಸೌರಾತೀತ ಗ್ರಹಗಳಲ್ಲಿ ಭೂಮಿಯಂತಹ ವಾತಾವರಣವಿರಬಹುದಾದ ಗ್ರಹಗಳು ಪತ್ತೆಯಾಗಿವೆ. ನಮ್ಮದೇ ಸೌರಮಂಡಲದಲ್ಲಿ ಇರುವ ಮಂಗಳ ಗ್ರಹ ಕೂಡ ಭೂಮಿಗೆ ಒಂದರ್ಥದಲ್ಲಿ ಹೋಲುವ ಗ್ರಹ. ಕೆಂಪು ಗ್ರಹ, ರೆಡ್ ಪ್ಲಾನೆಟ್ ಎಂದು ಕರೆಯಲ್ಪಡುವ ಇದು ಜೀವಿಗಳ ಉಗಮಕ್ಕೆ ಬೇಕಾದ ಅತ್ಯಮೂಲ್ಯ ವಸ್ತು ನೀರನ್ನು ಮಂಜುಗಡ್ಡೆಯಾಗಿ ಐಸ್ ಕ್ಯಾಪ್‍ಗಳಲ್ಲಿ ಹುದುಗಿಸಿಕೊಂಡಿದೆ. ಸರಿ ಹಾಗಾದರೆ, ನಾವು ಅಲ್ಲಿ ಹೋಗಿ ವಾಸಿಸಬಹುದೇ ಎಂದು ನೀವು ಕೇಳಬಹುದು. ಇದಕ್ಕೆ ಉತ್ತರ, ವರ್ತಮಾನದ ತಂತ್ರಜ್ಞಾನದಲ್ಲಿ ಅದು ಬಲು ಕಷ್ಟವೆಂದು ನಾಸಾದ ವಿಜ್ಞಾನಿಗಳು ನಡೆಸಿದ 20 ವರ್ಷಕ್ಕೂ ಹೆಚ್ಚಿನ ಅಧ್ಯಯನದ ಆಧಾರದ ಮೇಲೆ ತಿಳಿಸಿದ್ದಾರೆ.

ಇದರ ಹಿಂದಿರುವ ಕಾರಣ ಎಂದರೆ ಭೂಮಿಗೆ ಹೋಲಿಸಿದರೆ ಬರೀ ಶೇಕಡಾ 0.6% ರಷ್ಟಿರುವ ಮಂಗಳದ ಮೇಲ್ಮೈನ ಒತ್ತಡ ಮತ್ತು ಬೇಕಾದ ಪೋಷಕಾಂಶಗಳು ಸಮತೋಲನೆಯಲ್ಲಿ ಇಲ್ಲದಿರುವುದು. ಭೂಮಿಗಿಂತ ತುಸು ದೂರದ ಕಕ್ಷೆಯಲ್ಲಿರುವುದರಿಂದ ತಾಪಮಾನವು -60°C  ರಷ್ಟು ತಂಪಾಗಿದೆ. ಅತಿ ಕಡಿಮೆ ಒತ್ತಡ ಹಾಗೂ ತಂಪಾದ ವಾತಾವರಣ ನೀರನ್ನು ಸ್ಥಿರ ದ್ರವ ರೂಪಕ್ಕೆ ಬರಲು ಅನುವು ಮಾಡಿಕೊಡಲಾರದು. ಆದರೆ ಜೀವಿಗಳ ಉಗಮಕ್ಕೆ ನೀರು ದ್ರವ ಸ್ವರೂಪದಲ್ಲಿರುವುದು ಅತ್ಯಮೂಲ್ಯವಾಗಿದೆ ಮತ್ತು ಜೀವ ಸಂಕುಲದ ಉಗಮಕ್ಕೆ ಬೆಂಬಲಿಸಲು ಬೇಕಾದ ಪೋಷಕಾಂಶಗಳು ಸಮತೋಲನದಲ್ಲಿರುವುದು ಅವಶ್ಯಕ.

ಈ ಸಮಸ್ಯೆ ಬಗೆಹರಿಯಬೇಕೆಂದರೆ ಮಂಗಳದ ಮೇಲ್ಮೈ ತಾಪಮಾನವನ್ನು ಭೂಮಿಯಂತಹ ವಾತಾವರಣದ ಒತ್ತಡಕ್ಕೆ ತರಬೇಕಾಗುತ್ತದೆ. ಬಾಹ್ಯಾಕಾಶ ವಿಜ್ಞಾನಿಗಳು ಇದಕ್ಕೆ ಮಂಗಳದ ಮಂಜುಗಡ್ಡೆಗಳಲ್ಲಿ, ಐಸ್ ಕ್ಯಾಪ್ಗಳಲ್ಲಿ, ಧೂಳಿನ ಕಣಗಳಲ್ಲಿ ಮತ್ತು ಖನಿಜ ನಿಕ್ಷೇಪಗಳಲ್ಲಿ ಅಡಗಿರುವ ಇಂಗಾಲದ ಡೈ ಆಕ್ಸೈಡ್ (CO2) ಅನ್ನು ಆವಿಪಡಿಸುವುದರಿಂದ ವಾತಾವರಣ ಒಂದು ಸಾಂದ್ರತೆಗೆ ಬರಲು ಸಾಧ್ಯವಾಗಬಹುದೆಂದು ಹೇಳುತ್ತಾರೆ. ಆದರೆ ಅಷ್ಟು ಪ್ರಮಾಣದ ಶಾಖವನ್ನು ಮಂಗಳವು ಹೊಂದಿಲ್ಲದ್ದರಿಂದ ಕೃತಕವಾಗಿ ಗಣಿಗಾರಿಕೆಯಿಂದಲೋ ಅಥವಾ ಕ್ಲೋರೋ ಫ್ಲೋರೋ ಕಾಬ್ರನ್ಸ್ (CFCs) ಮತ್ತು ಫ್ಲೊರಿನ್ಸ್ (F) ಆಧಾರಿತ ಸಂಯುಕ್ತಗಳನ್ನು ಪರಿಚಯಿಸಬೇಕಾಗುತ್ತದೆ. ಆದರೆ ಈ ಪ್ರಯತ್ನ ತಾತ್ಕಾಲಿಕ.

ಮತ್ತೆ ಇನ್ಯಾವ ದಾರಿಯಿಂದ ಮಂಗಳದ ಮೇಲಿನ ಒತ್ತಡವನ್ನು ಭೂಮಿಯಂತೆ ಬದಲಿಸಲು ಸಾಧ್ಯ ಎಂದು ಯೋಚಿಸಿದರೆ ಇದಕ್ಕೆ ಉತ್ತರ ಹೇಳುವುದು ಕಣ್ಣಿಗೆ ಕಾಣಿಸದ ಸರ್ವವ್ಯಾಪಿಗಳೂ ಆದ ಒಂದು ಕೋಶದ ಸೂಕ್ಷ್ಮಜೀವಿಗಳು. ಅಚ್ಚರಿ ಎನಿಸಿದರೂ ಇವು ಅತಿ ವಿಪರೀತ ಪರಿಸರ ಹಾಗೂ ವಾತಾವರಣಗಳಿಗೆ ಹೊಂದಿಕೊಂಡು ಬದುಕುತ್ತವೆ. ಈ ಜೀವಿಗಳನ್ನು ಎಕ್ಸ್ ಸ್ಟ್ರೀಮೋಫೈಲ್ಸ್ (Extremophile) ಎಂದು ಹೇಳುತ್ತಾರೆ. ಕನ್ನಡದಲ್ಲಿಇವುಗಳನ್ನು ಕಡುಜೀವಿಗಳು ಅನ್ನಬಹುದೆನೋ.

ಅದೇನೋ ಸರಿ ಆದರೆ ಇಂತಹ ಜೀವಿಗಳಿಂದ ಹೇಗೆ, ಯಾವ ರೀತಿಯಲ್ಲಿ ಮಂಗಳನನ್ನು ಟೆರಫಾರ್ಮಿಂಗ್ ಅಂದರೆ ಭೂಮಿಯಂತೆ ಬದಲಿಸಲು ಸಾಧ್ಯ ಎಂದು ಕೇಳಿದರೆ, ಖಗೋಳ ಸೂಕ್ಷ್ಮಜೀವ ವಿಜ್ಞಾನಿಗಳು ಹೇಳುವುದು ಹೀಗೆ

ಮಂಗಳನನ್ನು ಭೂಮಿಯಂತೆ ಟೆರಾಫಾರ್ಮಿಂಗ್ ಮಾಡಲು ಕೃತಕವಾಗಿ ಗಣಿಗಾರಿಕೆಯಿಂದಲೋ, ಸಂಯುಕ್ತಗಳ ಪರಿಚಯದಿಂದಲೋ ಅಥವಾ ಮತ್ಯಾವ ದಾರಿಯಿಂದ ಸಾಧ್ಯವಿಲ್ಲ. ಜೈವಿಕವಾಗಿ ಮಂಗಳದಂತಹ ಅತಿ ಕ್ಲಿಷ್ಟಕರ ವಾತಾವರಣದಲ್ಲಿಯೂ ಬೆಳೆಯುವ ಎಕ್ಸ್ ಸ್ಟ್ರೀಮೋಫೈಲ್ಸ್ ನಿಂದ ಭರವಸೆ ಮೂಡಿಸಿವೆ

ಇಂತಹ ಸೂಕ್ಷ್ಮಜೀವಿಗಳನಿಟ್ಟುಕೊಂಡು ಮಂಗಳದ ಕಡಿಮೆ ಒತ್ತಡ (0.6% KPa) ಇರುವ ವಾತಾವರಣವನ್ನು ಭೂಮಿಯಂತೆ (101.3% KPa)  ಮಾರ್ಪಾಡು ಮಾಡಬಹುದು.

table1
ಮಂಗಳದಂತಹ 95% CO2 (<1 K Pa), ಅತಿ ಕಡಿಮೆ ನೀರು ಮತ್ತು ಸೂರ್ಯನ ಶಾಖ, ತೀವ್ರವಾದ ಸೌರ ಯುವಿ ಕಿರಣಗಳು, ಓಝೋನ್ ಪದರ ಇಲ್ಲದಿರುವುದು ಮತ್ತು -60°C ಉಷ್ಣತೆಯಲ್ಲಿಯೂ ಈ ಸೂಕ್ಷ್ಮಜೀವಿಗಳು ಖನಿಜ ನಿಕ್ಷೇಪಗಳಲ್ಲಿ ಬೆಳೆದು ಅವುಗಳನ್ನು ಅರಗಿಸಿಕೊಂಡು ಅವಶ್ಯಕ ಪೋಷಕಾಂಶಗಳನ್ನು ಬಿಡುಗಡೆ ಮಾಡುತ್ತವೆ. ಇದು ಮಂಗಳವನ್ನು ಭೂಮಿಯಂತೆ ಪರಿವರ್ತಿಸುವ ವಾತಾವರಣ ಮಾರ್ಪಾಟು (Ecopoiesis) ಪ್ರಕ್ರಿಯೆ ಕಾರಣವಾಗುತ್ತದೆ.

ಪ್ರಾಯೋಗಿಕ ಪುರಾವೆಗಳಿಗಾಗಿ ಎಕ್ಸ್ ಸ್ಟ್ರೀಮೋಫೈಲ್ಸ್ ಬಳಸಿಕೊಂಡು ಮಂಗಳದ ವಾತಾವರಣವನ್ನು ಮಾರ್ಪಾಡು ಮಾಡಬಹುದೇ ಎಂದು ನಾಸಾ ಸಂಸ್ಥೆ ಪ್ರಯೋಗ ನಡೆಸಿತು. ಮಂಗಳದಂತಹ ಕೃತಕ ವಾತಾವರಣ ರಚಿಸಿ “ಮಾರ್ಸ್ ಇಕೋಪೊಯಸಿಸ್ ಟೆಸ್ಟ್ ಬೆಡ್” ಎಂಬ ಅಧ್ಯಯನವನ್ನು ನಡೆಸಿತು. ಬಹುಮುಖ ಉದ್ದೇಶಗಳನ್ನೊಳಗೊಂಡ ಈ ಅಧ್ಯಯನ, ಮಂಗಳದ ಮೇಲ್ಮೈ ಆಳವಿಲ್ಲದ ಪೆನೆಟ್ರೇಟರ್ ಅನ್ನು ಉಪಯೋಗಿಸಿ ಮುಖ್ಯವಾದ ನಾಲ್ಕು ಧ್ಯೇಯೋದ್ದೇಶಗಳೊಂದಿಗೆ ಪರೀಕ್ಷಿಸಿತು.

1.    ಮಂಗಳದ ಧೂಳು ಮತ್ತು ಮಣ್ಣಿನಿಂದ ಕೂಡಿದ ಮೇಲ್ಪದರದಲ್ಲಿ ತೇವಾಂಶವನ್ನು ಮತ್ತು ಖನಿಜಗಳ     ಆವಿಯಾಗುವಿಕೆಯನ್ನು ಕಂಡುಹಿಡಿಯುವುದು.
2.    ಎಕ್ಸ್ ಸ್ಟ್ರೀಮೋಫೈಲ್ಸ್ ಪ್ರವರ್ತಕಗಳನ್ನು ಆಯ್ದು, ಅವುಗಳನ್ನು ಪರೀಕ್ಷೆಗೆ ಉಪಯೋಗಿಸುವುದು
3.    ಮಂಗಳದಲ್ಲಿ ಮೇಲ್ಮೈ ಆಳವಿಲ್ಲದ ಕಡೆ ನುಗ್ಗುವ ಯಂತ್ರವನ್ನು ಮತ್ತು ಎಲೆಕ್ಟ್ರಾನಿಕ್ ವಿನ್ಯಾಸಗೊಳಿಸುವುದು.
4.    ಎಲೆಕ್ಟ್ರಾನಿಕ್ ಜೈವಿಕ ಚಟುವಟಿಕೆ ಪರೀಕ್ಷೆಗಳನ್ನು ಗುರುತಿಸುವುದು (ಉದಾಹರಣೆಗೆ ಆಮ್ಲಜನಕದ ಸೆನ್ಸಾರ್)

ಪ್ರಾಯೋಗಿಕವಾಗಿ ಹಾಗೂ ಸೈದ್ಧಾಂತಿಕವಾಗಿ ಟೆರಾಫಾರ್ಮಿಂಗ್ ಅನ್ನು ಎರಡು ಬಗೆಯ ಎಕ್ಸ್ ಸ್ಟ್ರೀಮೋಫೈಲ್ಸ್ ಗಳಾದ ಹೆಟಿರೊಟ್ರೋಫ್ಸ್ ಮತ್ತು ಸೈನೋಬ್ಯಾಕ್ಟೀರಿಯಾಗಳಿಂದ ಸಾಧ್ಯವಾಗಿಸಬಹುದು.

ಇಂದಿಗೂ ಭೂಮಿಯಲ್ಲಿ ದ್ಯುತಿಸಂಶ್ಲೇಷಣೆಯ (photosynthesis 1&2) ಮೂಲಕ ಅತಿಹೆಚ್ಚು ಶೇಕಡಾ 80%ರಷ್ಟು ಆಮ್ಲಜನಕವನ್ನು ಭೂಮಿಗೆ ಧಾರೆ ಎರೆಯುತ್ತಿರುವುದು ನೀಲಿ-ಹಸಿರು ಪಾಚಿ, ಸೈನೋಬ್ಯಾಕ್ಟೀರಿಯಾಗಳು. ಜೀವಿಗಳ ಉಗಮದಲ್ಲಿ ಇವು  ಆಮ್ಲಜನಕ ಇಲ್ಲದ (ರೆಡ್ಯೂಸಿಂಗ್ ಅಟ್ಮಾಸ್ಫಿಯರ್) ವಾತಾವರಣದಿಂದ ಆಮ್ಲಜನಕ ಇರುವ ವಾತಾವರಣದ ರೂಪಾಂತರಕ್ಕೆ ಕಾರಣವಾದವುಗಳು. ದೊಡ್ಡ ಆಮ್ಲಜನಕ ಘಟನೆಗೆ (Great Oxygen Event) ಕಾರಣಕರ್ತರಾದ ಇವುಗಳು ಆಮ್ಲಜನಕ ಒದಗಿಸುವುದರಲ್ಲಿ ಮೊದಲಿಗರಾಗಿ ಸಸ್ಯವರ್ಗ ಮತ್ತು ಪ್ರಾಣಿವರ್ಗಗಳ ಹುಟ್ಟಿಗೆ ಎಣೆಮಾಡಿಕೊಟ್ಪವು.

ಹೆಟಿರೋಟ್ರೋಪ್ಸ್ ಗಳು ಅದರಲ್ಲೂ ವಿಶೇಷವಾಗಿ ಕೀಮೋಲಿಥೊಆಟೋಟ್ರೋಫ್ಸ್ ಅಥವಾ ಲಿಥೋಆಟೋಟ್ರೋಪ್ಸ್ ಗಳು ಅಜೈವಿಕ ಶಕ್ತಿ ಮೂಲಗಳ ಆಕ್ಸಿಡೀಕರಣದಿಂದ ಶಕ್ತಿ ಪಡೆದು ಜೀವನ ಸಾಗಿಸುವವು. ಈ ವಿಧದ ಅನೇಕ ಸೂಕ್ಷ್ಮಜೀವಿಗಳು ಮಂಗಳದಂತಹ ತೀವ್ರ ಪರಿಸ್ಥಿತಿಯಲ್ಲೂ ಬದುಕಬಲ್ಲವು.

ಸೈನೋಬ್ಯಾಕ್ಟೀರಿಯಾದಲ್ಲಿ ಮುಖ್ಯವಾಗಿ ಅನಾಬೆನಾ ಎಸ್ಪಿ. ಮತ್ತು ಕ್ರೂಕೊಕಿಯೊಪ್ಸಿಸ್ ಎಸ್ಪಿ. CCMEE171 ಮಂಗಳದ ವಿಪರೀತ ವಾತಾವರಣದಲ್ಲಿ ಬೆಳೆದು ದ್ಯುತಿಸಂಶ್ಲೇಷಣೆಯ ಮೂಲಕ ಅಲ್ಲಿಯ ಆಮ್ಲಜನಕ ಪ್ರಮಾಣ ಹೆಚ್ಚಿಸುತ್ತವೆ. ಮಂಗಳದಲ್ಲಿಯೂ ಇವು ತಮ್ಮ ಹುಟ್ಟುಗುಣವನ್ನೇ ತೋರಿಸಿದರೆ ಇದನ್ನು ಎರಡನೇ ದೊಡ್ಡ ಆಮ್ಲಜನಕ ಘಟನೆ ಎನ್ನಬಹುದು! ಇದು ತಾಪಮಾನ ಏರಿಕೆಗೂ ಸಹಾಯ ಮಾಡಬಹುದು. ಆಗ ನೀರು ಸ್ಥಿರ ದ್ರವ ರೂಪಕ್ಕೆ ಬರಲು ಅನುವು ಮಾಡಿಕೊಡುತ್ತದೆ ಮತ್ತು CO2 ಕೂಡ ಆವಿಯಾಗಿ ವಾತಾವರಣ ಸೇರುತ್ತದೆ. ಈ ಘಟನೆಗಳು ಮಂಗಳದ ಮೇಲ್ಮೈನ ಒತ್ತಡವನ್ನು ಹೆಚ್ಚಿಸುತ್ತವೆ.

Cyanobacteria_guerrero_negro( ಮೈಕ್ರೊಸ್ಕೋಪ್ ನಲ್ಲಿ ಸೈನೊಬ್ಯಾಕ್ಟೀರಿಯಾಗಳ ನೋಟ)

ನೀರು ಸ್ಥಿರ ದ್ರವ ರೂಪಕ್ಕೆ ಬಂದು ಜೀವಿಗಳನ್ನು ಬೆಂಬಲಿಸಿದರೂ ಅದು ಮುಂದುವರಿಯಲು ಅತ್ಯವಶ್ಯಕ ಪೋಷಕಾಂಶಗಳು ಬದುಕನ್ನು ಉಳಿಸಿಕೊಳ್ಳಲು ಅಗತ್ಯ. ಅದರಲ್ಲಿ ಒಂದಾದ ಸಾರಜನಕವು ನ್ಯೂಕ್ಲಿಕ್ ಆಸಿಡ್ ಮತ್ತು ಪ್ರೋಟೀನ್ನ ಬಹುಪಾಲು ಅಂಗ. ಇದನ್ನು ಹೆಟಿರೋಟ್ರೋಪ್ಸ್ ಗಳಾದ ಡಿನೈಟ್ರಿಫಿಕೇಶನ್ (denitrification) ಮಾಡುವ ಬ್ಯಾಕ್ಟೀರಿಯಾಗಳು, ಬ್ಯಾಸಿಲಸ್ ಸಬ್ಟಿಲಿಸ್ ಮತ್ತು ಸ್ಯೂಡೋಮೊನಸ್ ಎರುಗಿನೋಸಾಗಳು ಸೈನೋಬ್ಯಾಕ್ಟೀರಿಯಾದ ಜೊತೆಗೂಡಿ ಪೋಷಕಾಂಶಗಳ ಸಮತೋಲನೆ ಮಾಡುತ್ತವೆ.

ಮಾರ್ಸ್ ಸಿಮ್ಯುಲೇಟರಲ್ಲಿ ಸ್ಯೂಡೋಮೊನಸ್ ಎರುಗಿನೋಸಾಗಳು ಡಿನೈಟ್ರಿಫಿಕೇಶನ್ ಪ್ರಕ್ರಿಯೆ ಮೂಲಕ ನೈಟ್ರೇಟ್ (NO3-) ಅನ್ನು ನೈಟ್ರೈಟ್ಗೆ (NO2-) ಮತ್ತು ಬ್ಯಾಸಿಲಸ್ ಸಬ್ಟಿಲಿಸ್ NO2 ಗೆ ಪರಿವರ್ತಿಸಿದವು. ಇಂತಹ ಪ್ರಕ್ರಿಯೆಗಳು ಖನಿಜ ನಿಕ್ಷೇಪಗಳನ್ನು ಮಣ್ಣಿನ ಕಣಗಳಾಗಿ ಮಾರ್ಪಡಿಸಬಹುದು ಮತ್ತು ಸೈಯನೋಬ್ಯಾಕ್ಟೀರಿಯಾಗಳು, ಮರಳಿ ಸಾರಜನಕ ಸ್ಥಿರೀಕರಣದಿಂದ ಅದು ಜೀವಿಗಳ ಬದುಕಿಗೆ ಪೋಷಕಾಂಶಗಳನ್ನು ಒದಗಿಸಬಹುದು. ಅಂತಿಮವಾಗಿ ಈ ಎಲ್ಲಾ ಘಟನೆಗಳು ಬಹುಕೋಶೀಯ ಜೀವಿಗಳಾದ ಸಸ್ಯಗಳು ಹಾಗೂ ಪ್ರಾಣಿಗಳ ಜೀವನಕ್ಕೆ ದಾರಿದೀಪವಾಗಿರುತ್ತವೆ.

picutre2
ಮಾರ್ಸ್ ಸಿಮ್ಯುಲೇಟರ್- “ಮಾರ್ಸ್ ಇಕೋಪೊಯಸಿಸ್ ಟೆಸ್ಟ್ ಬೆಡ್” ಅಲ್ಲಿ ಅನಾಬೆನಾ ಎಸ್ಪಿ, ಕ್ರೂಕೊಕಿಯೊಪ್ಸಿಸ್ ಎಸ್ಪಿ CCMEE171, ಕ್ಲೋರೆಲ್ಲಾ ಎಲಿಪ್ಸೋಡಿಯಾ, ಪ್ಲೆಕ್ಟೊನೆಮಾ ಬೋರಿಯಾನಮ್, ಬ್ಯಾಸಿಲಸ್ ಸಬ್ಟಿಲಿಸ್ ಮತ್ತು ಸ್ಯೂಡೋಮೊನಸ್ ಎರುಗಿನೋಸಾಗಳನ್ನು ಐದು ವಾರಗಳವರೆಗೆ 3-10 ಮಿಲಿ ಬಾರ್ ಗಳಲ್ಲಿ 100% CO2 ಮತ್ತು ನೀರಿನ ಪೂರೈಕೆಯಲ್ಲಿ (ಮಂಗಳದ ಹೋಲಿಕೆಯಂತೆ) ನಾಲ್ಕು ಪರಿಸ್ಥಿತಿಗಳಿಗೆ ಒಳಪಡಿಸಲಾಯಿತು: ಮಂಗಳ ಸಿಮ್ಯುಲೇಟರ್, ಕತ್ತಲೆಯಲ್ಲಿ -80°C, ಕತ್ತಲೆಯಲ್ಲಿ +4° C  ಮತ್ತು ದೈನಂದಿನ ಬೆಳಕಿನಲ್ಲಿ 25°C ಮತ್ತು ಫ್ಲೋರೊಸೀನ್ ಡಯಾ ಅಸಿಟೀಟ್ (ಎಫ್ ಡಿ ಎ) ಪರೀಕ್ಷೆ ಬಳಸಿಕೊಂಡು ಎಸ್ಟರೇಸ್‍ಗಳನ್ನು ಹೊಂದಿರುವ ಅಖಂಡ ಕೋಶಗಳ ಉಪಸ್ಥಿತಿ ತಿಳಿಯಲು ಬಳಸಲಾಯಿತು.

table2
ಮಾರ್ಸ್ ಸಿಮ್ಯುಲೇಟರ್ ನಲ್ಲಿ ಪರೀಕ್ಷಿಸಿದ ಬಳಿಕ ಎಫ್ ಡಿ ಎ ಮತ್ತು ಕ್ಲೋರೋಫಿಲ್ ಅಂಶಗಳನ್ನು ವಿಶ್ಲೇಷಣೆಗೆ ಒಳಪಡಿಸಿ, ಪೋಷಕಾಂಶ ಅಗರ್ ಮೇಲೆ ನೇರವಾಗಿ ಹಾಕಿ ಈ ಸೂಕ್ಷ್ಮಜೀವಿಗಳನ್ನು ವಿಶ್ಲೇಷಣೆ ಮಾಡಲಾಯಿತು. ಅನುಕರಿಸಿದ ಮಂಗಳ ಪರಿಸ್ಥಿತಿಗಳಿಗೆ ಒಡ್ಡಿಕೊಂಡು ನಂತರ ಸಂತಾನೋತ್ಪತ್ತಿ (ಬೈನರಿ ವಿದಳನ) ನಡೆಸಿದ ಕೋಶಗಳು ಉಳಿದುಕೊಂಡವು.

ಕೆಲವು ಸೀಮಿತ ಸ್ಥಿತಿಗತಿಗಳು ಈ ಎಕ್ಸ್ ಸ್ಟ್ರೀಮೋಫೈಲ್ಸ್ ಸೂಕ್ಷ್ಮಜೀವಿಗಳ ಜೀವಮಾನವನ್ನು ಅವಲಂಬಿಸಿರುತ್ತವೆ. ಅತಿ ತೀವ್ರವಾದ ಯುವಿ ಕಿರಣಗಳು, ಮೇಲ್ಮೈನ ಸಾರಜನಕದ ಕೊರತೆ, ಸೂರ್ಯನ ಬೆಳಕು ಹಾಗೂ ಅತಿ ತಂಪಾದ ವಾತಾವರಣಗಳು ಈ ಸೂಕ್ಷ್ಮಜೀವಿಗಳ ಬದುಕನ್ನು ನಿರ್ಧರಿಸುತ್ತವೆ. ಇದಾಗಿಯೂ ಛಲಬಿಡದ ಈ ಜೀವಿಗಳು ಬದುಕುಳಿಯುತ್ತವೆ. ಸಾಕಷ್ಟು ಹಾನಿಗಳ ಕಂಡು ತಮ್ಮ ಕೋಶದ ಕಾರ್ಯಕ್ಷಮತೆ ಕಡಿಮೆಯಾದರೂ, ಕ್ರೂಕೊಸಿಡಿಯೋಪ್ಸಿಸ್  ಡಿ ಎನ್ ಎ ಮತ್ತು ಕಿಣ್ವಗಳನ್ನು ಸರಿಪಡಿಸಿಕೊಂಡು ಯುವಿಯಿಂದ ರಕ್ಷಿಸಿಕೊಳ್ಳುತ್ತವೆ. ಹೈಪೋಲಿಥಿಕ್ ಬೆಳವಣಿಗೆ ಅಳವಡಿಸಿಕೊಂಡು ಬಂಡೆಗಳ ಅಡಿಯಲ್ಲಿ ಬೆಳೆಯುತ್ತವೆ. ನಿರ್ವಾತದಲ್ಲಿಯೂ ಬೆಳೆಯುವ ಇವು ಮಂಗಳದಂತಹ ಅತಿ ಕಡಿಮೆ ಒತ್ತಡದಲ್ಲಿ ಸುಲಲಿತವಾಗಿ ಜೀವಿಸಬಲ್ಲವು.

ಇದಾಗಿಯೂ ಎಕ್ಸ್ ಸ್ಟ್ರೀಮೋಫೈಲ್ಸ್ ಗಳನ್ನು ಬಳಸಿಕೊಂಡು ಮಂಗಳವನ್ನು ಟೆರಫಾರ್ಮಿಂಗ್ ಮಾಡಲು ಇನ್ನೂ ಆಳವಾದ ಸಂಶೋಧನೆಯನ್ನು ನಡೆಸಬೇಕಾಗಿದೆ. ಈ ಸೂಕ್ಷ್ಮಜೀವಿಗಳ ಸಾಮರ್ಥ್ಯ ತಿಳಿಯಲು ಮತ್ತು ಮಂಗಳನಲ್ಲಿ ಟೆರಫಾರ್ಮಿಂಗ್‍ಗೆ  ಸಾಧಿಸಬೇಕಾದ ಕನಿಷ್ಠ ಗುಣಗಳನ್ನು ನಿರ್ಧರಿಸಲು, ಭೂಮಿಯಲ್ಲಿ ಸಂಶೋಧನೆ ನಡೆಸಿ ಹೇಳುವಷ್ಟು ಸಾಧ್ಯವಾಗದೇ ಇರಬಹುದು. ಇನ್ನು ಅನೇಕ ಭೌತಿಕ ಮಿತಿಗಳನ್ನೊಳಗೊಂಡಿರುವುದರಿಂದ ಅದಕ್ಕಿರುವ ಪರಿಹಾರಗಳನ್ನು ಸ್ವಾಭಾವಿಕವಾಗಿ ಮಾಡಲು ಪ್ರಯತ್ನಿಸಬೇಕಾಗಿದೆ. ಇತ್ತೀಚೆಗೆ ಬೆಳೆಯುತ್ತಿರುವ ಸಂಶ್ಲೇಷಿತ ಜೀವಶಾಸ್ತ್ರ ಮತ್ತು ತಳೀಯ ಎಂಜಿನಿಯರಿಂಗ್, ಜೆನೆಟಿಕ್ ಮ್ಯಾನಿಪ್ಯುಲೇಷನ್‍ಗಳ ಮೂಲಕ ಮಂಗಳದ ವಾತಾವರಣಕ್ಕೆ ಹೊಂದುವ ಜೀವಕೋಶಗಳನ್ನು ನಿರ್ಮಿಸಿ ಭೂಮಿಯ ಜೀವಿಗಳು ಅಲ್ಲಿ ನೆಲೆಸಲು ಬೇಕಾದಂತೆ ಮಾರ್ಪಾಟಿಗೂ ಕೈಚಾಚಬಹುದು. ಇವೆಲ್ಲಾ ಹಗಲು ಕನಸಿನಂತೆ ಕಂಡರೂ, ಮುಂದೊಂದು ದಿನ ಕಣ್ಣ ಮುಂದೆ ನಿಂತರೂ ಅಚ್ಚರಿ ಏನಲ್ಲ.

ಅಂದಹಾಗೆ ಭೂಮಿಯಂತೆ ಬೇರೆ ಗ್ರಹಗಳನ್ನು ಟೆರಾಫಾರ್ಮಿಂಗ್‍ಗೆ ಬಳಸಲು ಹಲವಾರು ವಾದ ವಿವಾದಗಳು  ಮತ್ತು ಸಮಸ್ಯೆಗಳಿವೆ. ಸ್ವಇಚ್ಛೆಯಿಂದ ಇರುವ ಗ್ರಹಗಳನ್ನು ಮಾನವನು ತನ್ನ ಜೀವನಕ್ಕೆ ಬೆಂಬಲಿಸಲು ಬೇಕಾದಂತೆ ಮಾರ್ಪಾಡು ಮಾಡುವುದು ಎಷ್ಟು ಸರಿ ಮತ್ತು ಆಯಾ ಗ್ರಹಗಳು ತನ್ನದೇ ಆದ ಪ್ರಕೃತಿಯಲ್ಲಿ ತನ್ನದೇ ಹಾದಿಯನ್ನು ಹಿಡಿದಿರುತ್ತವೆ. ಇದನ್ನು ಬದಲಿಸುವುದು ನ್ಯಾಯವೇ?ಎಂಬ ತಾತ್ವಿಕ ಚರ್ಚೆ ಬರುತ್ತದೆ. ಇನ್ನು ಟೆರಫಾರ್ಮಿಂಗ್ ಎನ್ನುವುದು ಹತ್ತು ಅಥವಾ ಇಪ್ಪತ್ತು ವರ್ಷಗಳ ಮಾತಲ್ಲ ಅದು ನೂರರಿಂದ ಹಿಡಿದು ಅದೆಷ್ಟು ವರ್ಷಗಳು ತೆಗೆದುಕೊಂಡೀತೋ ಹೇಳತೀರದು. ಅಂತಹ ಕ್ರಿಯೆಗೆ ಆರ್ಥಿಕ ಸಮಸ್ಯೆಗಳು ಎದುರಾಗುತ್ತವೆ ಮತ್ತು ಅಂತಹ  ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲು ವೆಚ್ಚವು ಹೆಚ್ಚಾಗಿದ್ದೂ ಅದನ್ನು ಬೆಂಬಲಿಸಲು ವರ್ತಮಾನದಲ್ಲಿ ಸಾಧ್ಯವಿಲ್ಲ.

ಆದರೂ ಮುಂದೊಂದು ದಿನ ಭೂಮಿಗೆ ವಿನಾಶ ಬರಬಹುದೆಂದು, ಅದರ ಆಯಸ್ಸು ಮುಗಿಯಿತೆಂದು ತಿಳಿದರೆ ಮನುಷ್ಯ ಅನಿವಾರ್ಯವಾಗಿ ಬಾನಾಚೆಗೆ ತನ್ನನ್ನು, ತನ್ನವರನ್ನು ಮತ್ತು ಮನುಕುಲವನ್ನು ಉಳಿಸಿಕೊಳ್ಳಲು ಬೇರೊಂದು ಭೂಮಿಯನ್ನು ಮಾಡಲು ಪ್ರಯತ್ನಿಸುವುದು ಅಚ್ಚರಿಯೇನಲ್ಲ.