ನೆಲದಾಳದಲ್ಲಿ ಹೊಸ ನೀರು

ಪ್ರಶಾಂತ ಸೊರಟೂರ.

ಈಗ ಕಡಲಿನಲ್ಲಿರುವ ನೀರಿಗಿಂತ ಮೂರು ಪಟ್ಟು ಹೆಚ್ಚಿನ ನೀರು ನೆಲದಾಳದಲ್ಲಿ ದೊರೆತಿದೆ !

ಎಂಬಂತ ಬಿಸಿ ಸುದ್ದಿ ಹಲವು ವರ್ಷಗಳಿಂದ ಜಗತ್ತಿನೆಲ್ಲೆಡೆ ಪಸರಿಸಿತ್ತು. ಹನಿ ನೀರಿಗಾಗಿ ಪರದಾಡುತ್ತಿರುವ ಇಂದಿನ ದಿನಗಳಲ್ಲಿ ಹೊಸದಾಗಿ ದೊರೆತ ಹೇರಳವಾದ ನೀರಿನ ಸೆಲೆ ಎಲ್ಲರನ್ನೂ ಸೆಳೆದಿತ್ತು. ಆದರೆ ಹಾಗೆ ದೊರೆತ ಸೆಲೆಯ ಆಳಕ್ಕೆ ಹೋಗುವುದು ಮತ್ತು ಅಲ್ಲಿಂದ ನೀರೆತ್ತಿ ನೆಲದ ಮೇಲ್ಗಡೆ ತರುವುದು ಈ ಹೊತ್ತಿಗಂತೂ ಆಗದ ಮಾತು ಅನ್ನುವಂತ ವಿಷಯ ಹಲವು ಮಂದಿಯ ಗಮನಕ್ಕೆ ಬರಲಿಲ್ಲವೆನ್ನಬಹುದು.

ಹೊಸ ನೀರಿನ ಸೆಲೆ ಎಟುಕದ ಕನ್ನಡಿಯಲ್ಲಿರುವ ಗಂಟಿನಂತಾದರೂ, ಈ ಹೊಸ ಕಂಡುಹಿಡಿಯುವಿಕೆ ನೆಲದಲ್ಲಿ ಕಡಲುಗಳು ಹೇಗೆ ಉಂಟಾದವು ಅನ್ನುವಂತ ಸಿಕ್ಕಲಾದ ಪ್ರಶ್ನೆಗೆ ಸರಿಯಾದ ಉತ್ತರ ನೀಡಲಿದೆಯೆಂದು ಅರಿಮೆಗಾರರು ಅಂದುಕೊಂಡಿದ್ದಾರೆ. ನೀರಿನ ಈ ಹೊಸ ಸೆಲೆಯತ್ತ ಹೋಗುವ ಮುನ್ನ ನಮ್ಮ ನೆಲದ ಆಳಕ್ಕೆ ಮೊದಲು ಇಳಿಯೋಣ ಬನ್ನಿ.

ನೆಲದ ಮೇಲ್ಮಯಲ್ಲಿ ಕಡಲು, ಬೆಟ್ಟಗಳು ಇರುವುದು ಕಣ್ಣಿಗೆ ಕಾಣಿಸುವಂತದು. ನೆಲದಲ್ಲಿ ನೀರಿನ ಪಾಲು ಮೂರುಪಟ್ಟಿದೆ ಅನ್ನುವುದು ಅದರ ಮೇಲ್ಮಯನ್ನು ತೆಗೆದುಕೊಂಡಾಗಷ್ಟೇ ದಿಟ, ಆದರೆ ಅದರ ಒಡಲಾಳದ ರಚನೆಯನ್ನು ತಿಳಿದುಕೊಂಡಾಗ ಅದರ ಇಡಿಯಾದ ಕಟ್ಟಣೆ ನಮ್ಮ ಅರಿವಿಗೆ ಬರಬಲ್ಲದು. ನೆಲದ ಒಟ್ಟಾರೆ ತೂಕಕ್ಕೆ ಹೋಲಿಸಿದಾಗ ನೀರಿನ ತೂಕ, ಅದರ ಪ್ರಮಾಣ ತುಂಬಾನೇ ಕಡಿಮೆ. ನೆಲದಾಳವು ಮುಖ್ಯವಾಗಿ ಕಬ್ಬಿಣದಂತಹ ಜಲ್ಲಿಯ ವಸ್ತುಗಳಿಂದ ಕೂಡಿದೆ.

ಹಿಂದಿನ ಬರಹವೊಂದರಲ್ಲಿ ನೆಲದ ದುಂಡಗಲವು ಸುಮಾರು 12,756 ಕಿ.ಮೀ. ಮತ್ತು ಅದರ ರಾಶಿಯು (mass) ಸುಮಾರು 5.98 x1024 kg ಇರುವುದನ್ನು ತಿಳಿದುಕೊಂಡಿದ್ದೆವು. ನೆಲದ ಮೇಲ್ಮಯಿಂದ ನೆಲದ ನಡುವು (center) ಸುಮಾರು 12,756/ = 6378 ಕಿ.ಮೀ. ಆಳದಲ್ಲಿದೆ.

ಅದರ ಒಟ್ಟು ರಾಶಿಯಲ್ಲಿ ಕಬ್ಬಿಣವು ಸುಮಾರು 32.1%, ಆಕ್ಸಿಜನ್ 30.1%, ಸಿಲಿಕಾನ್ 15.1%, ಮ್ಯಾಗ್ನೇಸಿಯಂ 13.9%, ಗಂದಕ 2.9%, ನಿಕೆಲ್ 1.8%, ಕ್ಯಾಲ್ಸಿಯಂ 1.5% ಮತ್ತು ಅಲ್ಯುಮಿನಿಯಂ 1.4% ರಷ್ಟಿದೆ. ಕೆಳಗಿನ ತಿಟ್ಟದಲ್ಲಿ ನೆಲದ ಒಟ್ಟಾರೆ ಸೀಳುನೋಟವನ್ನು ತೋರಿಸಲಾಗಿದೆ.

ನೆಲದ ಇಟ್ಟಳವನ್ನು (structure) ತೊಗಟೆ (0-35 km), ಮೇಲ್ ಹೊದಿಕೆ (35-60 km), ಹೊದಿಕೆ (35-2890 km), ಹೊರತಿರುಳು (2890-5150) ಮತ್ತು ಒಳತಿರುಳು (5150-6378 km) ಅಂತಾ ಗುರುತಿಸಲಾಗಿದೆ. ನೆಲದ ಒಳತಿರುಳು ಮತ್ತು ಹೊರತಿರುಳಿನ ಭಾಗ ತುಂಬಾ ದಟ್ಟಣೆ ಹೊಂದಿದ್ದು ಮುಖ್ಯವಾಗಿ ಕರಗಿದ ಕಬ್ಬಿಣದಿಂದ ಕೂಡಿದೆ. ಹೊದಿಕೆಯ ಭಾಗವು ಸಿಲಿಕೇಟ್ ಕಲ್ಲುಗಳಿಂದ ಕೂಡಿದ್ದು ಕಬ್ಬಿಣ ಮತ್ತು ಮ್ಯಾಗ್ನೇಸಿಯಂ ಜಲ್ಲಿಗಳನ್ನು ಒಳಗೊಂಡಿದೆ. ತೊಗಟೆಯ ಭಾಗವು ಕಡಲಾಳ, ಕಲ್ಲುಗಳು, ಜಲ್ಲಿಗಳಿಂದ ಕೂಡಿದೆ.

ನೆಲದ ಆಳದಲ್ಲಿ ತುಂಬಾನೇ ಒತ್ತಡ ಮತ್ತು ಬಿಸುಪಿರುವುದರಿಂದ ಅದರ ಆಳಕ್ಕೆ ಕೆಲವು ಕಿ.ಮೀ. ಗಳಷ್ಟೇ ಮನುಷ್ಯರು ಮಾಡಿದ ಸಲಕರಣೆಗಗಳು ಇಳಿಯಬಲ್ಲವು. ಹಾಗೆ ನೋಡಿದರೆ ಇಲ್ಲಿಯವರೆಗೆ ನೆಲದ ಮೇಲ್ಮಯಿಂದ ಮನುಷ್ಯರಿಗೆ ಕೊರೆಯಲು ಆದ ತೂತಿನ ಆಳ ಬರೀ 12.3 ಕಿ.ಮೀ. (ರಷ್ಯಾ ಕೈಗೊಂಡ ತೂತು ಕೊರೆಯುವ ಹಮ್ಮುಗೆ, 1989). ನೆಲದಾಳದಲ್ಲಿ ಸಲಕರಣೆಗಳನ್ನು ಇಳಿಸಲು ಆಗದಿದ್ದರೂ, ನೆಲದ ಇಟ್ಟಳವನ್ನು ಅರಿಮೆಯ ಇತರ ಚಳಕಗಳನ್ನು ಬಳಸಿ ಅರಿತುಕೊಳ್ಳಲಾಗುತ್ತದೆ. ಅಂತಹ ಅರಿಮೆಯ ಚಳಕದಲ್ಲಿ ಮುಕ್ಯವಾದದ್ದು ನಡುಕದರಿಮೆ (Seismology).

ಮುಖ್ಯವಾಗಿ ನೆಲದ ತೊಗಟೆಯ ಭಾಗದಲ್ಲಿ ಬಿಡುಗಡೆಯಾಗುವ ಹೇರಳವಾದ ಕಸುವಿನಿಂದಾಗಿ ‘ನೆಲನಡುಕಗಳು’ (earthquakes) ಉಂಟಾಗುತ್ತವೆ. ಹೀಗೆ ಉಂಟಾದ ನೆಲನಡುಕಗಳು ಹೊಮ್ಮಿಸುವ ನಡುಕದ ಅಲೆಗಳು (seismic waves), ನೆಲದ ಮೇಲ್ಮಯಿಂದ ಹಿಡಿದು ಅದರ ತಿರುಳಿನ ಭಾಗದವರೆಗೆ ತೂರಬಲ್ಲವು. ನಡುಕದ ಅಲೆಗಳ ಹರಡುವ ಬಗೆ, ಅವುಗಳ ವೇಗ, ನೆಲದ ಇಟ್ಟಳವನ್ನು ಮೇಲೆ ತಿಳಿಸಿರುವಂತೆ ಗುರುತಿಸಲು ನೆರವಾಗಿವೆ. ನಡುಕದ ಅಲೆಗಳು ಬೇರೆ ಬೇರೆ ವಸ್ತುಗಳಲ್ಲಿ ಬೇರೆಯಾದ ವೇಗದಿಂದ ಹರಡುತ್ತವೆ. ಒಣಕಲ್ಲಿನಂತಹ ರಚನೆಯಲ್ಲಿ ಅವುಗಳ ವೇಗ ಬೇರೆಯಾಗಿದ್ದರೆ ನೀರಿನಿಂದ ಕೂಡಿದ ಹಸಿಕಲ್ಲಿನಲ್ಲಿ ವೇಗವು ಬೇರೆಯಾಗಿರುತ್ತದೆ.

ಮುಮ್ಮಲೆಗಳು (Primary/P Waves) ಎಂದು ಗುರುತಿಸಲಾಗುವ ನಡುಕದಲೆಗಳ ಒಂದು ಬಗೆ, ಗಟ್ಟಿಯಾದ ಮತ್ತು ನೀರಿನ ರೂಪದಲ್ಲಿರುವ ವಸ್ತಗಳೆರಡಲ್ಲೂ ಸಾಗಬಲ್ಲವು. ಅದೇ ಇಮ್ಮಲೆಗಳು (Secondary/S Waves) ಎಂಬ ನಡುಕದಲೆಗಳು ಗಟ್ಟಿಯಾದ ವಸ್ತುಗಳಲ್ಲಷ್ಟೇ ಸಾಗಬಲ್ಲವು.

Picture1

ಹಾಗೆನೇ ನೀರಿನ ರೂಪ ಇಲ್ಲವೇ ಅದರ ಅಂಶವನ್ನು ಹೊಂದಿದ ವಸ್ತುಗಳಲ್ಲಿ ಸಾಗುವಾಗ ಮುಮ್ಮಲೆಗಳ ವೇಗ ಬದಲಾಗುವುದು ಅರಕೆಯಿಂದ ತಿಳಿದುಬಂದಿದೆ. ಈ ಅರಿವನ್ನು ಬಳಸಿಕೊಂಡೇ ಇತ್ತೀಚಿಗೆ ನೆಲದಾಳದಲ್ಲಿ ’ನೀರಿದೆ’ ಎಂಬುದನ್ನು ಅಂದಾಜಿಸಲಾಗಿದೆ. ಈಗ ನಮ್ಮ ಈ ಬರಹದ ಮುಖ್ಯ  ವಿಷಯ’ನೆಲದಾಳ’ದಲ್ಲಿ ನೀರಿನತ್ತ ಬಂದಂತಾಯಿತು.

ಅಮೇರಿಕಾದ ನಾರ್ತ್ ವೆಸ್ಟರ್ನ್ ಯೂನಿವರ್ಸಿಟಿಯ ನೆಲದಿರುವರಿಗ (geophysicist) ಸ್ಟೀವ್ ಜಾಕಬ್ಸನ್ (Steve Jacobsen) ಮತ್ತು ನ್ಯೂ ಮೆಕ್ಸಿಕೋ ಯೂನಿವರ್ಸಿಟಿಯ ನಡುಕದಲೆಯರಿಗ (seismologist) ಬ್ರಾಂಡನ್ (Brandon Schmandt) ಅವರು ನಡುಕದರಿಮೆ ಬಳಸಿ, ನೆಲದ ಮೇಲ್ಮೈಯಿಂದ ಸುಮಾರು 660 ಕಿ.ಮೀ. ಆಳದಲ್ಲಿ ನೀರಿನ ಬಿಡಿಕಣಗಳಿದ್ದು, ಅವುಗಳು ರಿಂಗ್‍ವುಡಯ್ಟ್ (Ringwoodite) ಎಂಬ ಹರಳು ರೂಪದಲ್ಲಿರುವ ವಸ್ತುವಿಗೆ ಅಂಟಿಕೊಂಡಿರುವುದಾಗಿ ತಿಳಿಸಿದ್ದಾರೆ.

ರಿಂಗ್‍ವುಡಯ್ಟ್ (ಅದನ್ನು ಕಂಡುಹಿಡಿದ ಅರಿಮೆಗಾರರ ಹೆಸರಿನಿಂದ ಕರೆಯಲಾಗುತ್ತಿದೆ), ನೆಲದಾಳದ ಹೊದಿಕೆಯ ಭಾಗದಲ್ಲಿ ಹೇರಳವಾಗಿ ಇರುವ ವಸ್ತುವೆಂದು ನಡುಕದಲೆಗಳ ಮೂಲಕ ಈ ಮುಂಚೆ ಅರಿಯಲಾಗಿತ್ತು. ರಿಂಗ್‍ವುಡಯ್ಟ್ ಮುಖ್ಯವಾಗಿ  ಕಬ್ಬಿಣ ಮತ್ತು ಮ್ಯಾಗ್ನೇಸಿಯ್ಂ ನಿಂದ ಕೂಡಿದ್ದು, ತನ್ನ ತೂಕದ 2.1% ರಷ್ಟು ನೀರನ್ನು ಹಿಡಿದುಕೊಳ್ಳಬಲ್ಲದು ಅಂತಾನೂ ತಿಳಿಯಲಾಗಿತ್ತು. ಆದರೆ ಇಲ್ಲಿಯವರೆಗೆ ನೆಲದಾಳದ ರಿಂಗ್‍ವುಡಯ್ಟ್ ಹರಳಿನಲ್ಲಿ ನಿಜವಾಗಲೂ ನೀರಿದೆಯೇ ಎಂದು ಗೊತ್ತಾಗಿರಲಿಲ್ಲ.

BlueRingwoodite

(ನೆಲದ ಒಡಲಾಳದ ಹೊದಿಕೆಯ ಭಾಗದಲ್ಲಿ ಕಂಡುಬರುವ ರಿಂಗ್‍ವುಡಯ್ಟ್ ಹರಳು)

ಇಲ್ಲಿಯವರೆಗೆ ಉಂಟಾದ ಸುಮಾರು 500 ನೆಲನಡುಕಗಳ (earthquakes) ಮಾಹಿತಿಗಳನ್ನು ಸ್ಟೀವ್ ಜಾಕಬ್ಸನ್ ಅವರು ಒರೆಗೆಹಚ್ಚಿ ನೋಡಿದಾಗ, ನಡುಕದಲೆಗಳ (seismic waves) ವೇಗ ಸುಮಾರು 660 ಕಿ.ಮೀ. ನೆಲದಾಳಕ್ಕೆ ತಲುಪಿದಾಗಲೆಲ್ಲಾ ಬೇರೆಯಾಗಿರುವುದು ಮತ್ತು ಆ ವೇಗ ಹಸಿ ರೂಪದಲ್ಲಿರುವ ರಿಂಗ್‍ವುಡಯ್ಟ್ ಹರಳುಗಳಿಗೆ ತಾಗಿದಾಗ ಪಡೆಯುವ ವೇಗಕ್ಕೆ ಸಾಟಿಯಾಗಿದೆ ಎಂದು ತೋರಿಸಿದ್ದಾರೆ. ಇದಕ್ಕಾಗಿ ಅವರು ಮತ್ತು ಬ್ರಾಂಡನ್ ತಮ್ಮ ಅರಕೆಮನೆಯಲ್ಲಿ ಹಸಿ ಮತ್ತು ಒಣ ರಿಂಗ್‍ವುಡಯ್ಟ್ ಹರಳುಗಳಿಗೆ ನಡುಕದಲೆಗಳನ್ನು ತಾಗಿಸಿದಾಗ ದೊರೆತ ವೇಗ ಮತ್ತು ನೆಲನಡುಕಗಳು ನೀಡಿದ ಮಾಹಿತಿಯನ್ನು ತಾಳೆಹಾಕಿ ಈ ನಿಲುವಿಗೆ ಬಂದಿದ್ದಾರೆ.

ಹೀಗೆ ನೆಲದಾಳದಲ್ಲಿ ಇಳಿಯದೇ ಅರಿಮೆಯ ಚಳಕಗಳನ್ನು ಬಳಸಿ ನೆಲದ ಒಡಲಾಳದಲ್ಲಿ ನೀರಿರುವುದನ್ನು ಅರಿಮೆಗಾರರು ತೋರಿಸಿದಂತಾಗಿದೆ. ನಮಗೆ ಕಂಡಿರುವ ಈ ಹೊಸ ನೀರು ಬಳಕೆಗೆ ಎಟುಕದಂತಿದ್ದರೂ, ನಮ್ಮ ನೆಲದ ಮೇಲ್ಮೈಯಲ್ಲಿ ಉಂಟಾಗಿರುವ ಕಡಲುಗಳ ಹುಟ್ಟಿನ ಕತೆ ಮತ್ತು ಒಟ್ಟಾರೆಯಾಗಿ ನೆಲದ ರಚನೆಯ ಬಗ್ಗೆ ನಮಗೆ ಸಾಕಷ್ಟು ತಿಳುವಳಿಕೆಯನ್ನು ಮುಂದಿನ ದಿನಗಳಲ್ಲಿ ನೀಡಲಿದೆ.

(ಮಾಹಿತಿ ಮತ್ತು ತಿಟ್ಟ ಸೆಲೆಗಳು: www.usatoday.com, scitechdaily.comwikipedia.org)

E20 ವರವೋ ಇಲ್ಲ ಶಾಪವೋ?

ಜಯತೀರ್ಥ ನಾಡಗೌಡ

E20 ವಿಚಾರಗಳು ಎಲ್ಲೆಡೆ ಮಾತುಕತೆಯ ವಿಷಯವಾಗಿದೆ. ಫೇಸ್‍ಬುಕ್, ಎಕ್ಸ್, ಲಿಂಕ್ಡ್‌ಇನ್ ನಂತಹ ಸಾಮಾಜಿಕ ಜಾಲತಾಣಗಳಿಂದ ಹಿಡಿದು ರಾಜಕೀಯವಲಯಗಳಲ್ಲೂ ಇದೇ ಪ್ರಮುಖ ವಿಷಯ. ಈ ಹೊತ್ತಿನ ವಿಷಯ ವಸ್ತುವಾಗಿರುವ E20 ಬಗ್ಗೆ ತಿಳಿಯೋಣ ಬನ್ನಿ.

ಏನಿದು E20?

ಇಥೆನಾಲ್‌ನ 20% ಪ್ರಮಾಣದಲ್ಲಿ ಪೆಟ್ರೋಲ್ ಉರುವಲಿನೊಂದಿಗೆ ಬೆರೆಸಿದರೆ ಅದೇ E20. ವಾಹನಗಳಲ್ಲಿ E20 ಬಳಸಿದರೆ ಕಾರ್ಬನ್ ನಂತ ನಂಜಿನ ಹೊಗೆಯ ಪ್ರಮಾಣ ಕಡಿಮೆ ಮಾಡಿ, ಮುಗಿದುಹೋಗಬಲ್ಲ ಉರುವಲಾದ ಪೆಟ್ರೋಲ್ ಮೇಲಿನ ಅವಲಂಬನೆ ಕಡಿತಗೊಳಿಸಬಹುದು.

ಇಥೈಲ್ ಆಲ್ಕೋಹಾಲ್‍ನ ಕಿರಿದಾಗಿಸಿ ಇಥೆನಾಲ್ ಎಂದು ಕರೆಯುತ್ತಾರೆ. ಇಥೆನಾಲ್ ಒಂದು ನೀರಿನಂತೆ ತಿಳಿಯಾಗಿರುವ (ಯಾವುದೇ ಬಣ್ಣವಿರುವುದಿಲ್ಲ), ತನ್ನದೇ ವಿಶೇಷ ವಾಸನೆ ಮತ್ತು ರುಚಿ ಹೊಂದಿರುತ್ತದೆ. ಚೊಕ್ಕವಾಗಿರುವ ಇಥೆನಾಲ್ ವಿಷಕಾರಿಯಲ್ಲ ಹಾಗೂ ಜೈವಿಕ ಸರಪಣಿಯಲ್ಲಿ ಸುಲಭವಾಗಿ ಒಡೆದು ಸೇರಿಹೋಗಬಲ್ಲ (Biodegradable) ರಾಸಾಯನಿಕ. ರಾಸಾಯನಿಕವಾಗಿ ಇದನ್ನು C2H5OH ಎಂದು ಬರೆಯಬಹುದು. ಇದರಲ್ಲಿ ಕಾರ್ಬನ್, ಹೈಡ್ರೋಜನ್ ಮತ್ತು ಆಕ್ಸಿಜನ್ ಅಣುಗಳು ಸೇರಿರುತ್ತವೆ. ಇಥೆನಾಲ್ ವಾತಾವರಣದಲ್ಲಿ ಸೋರಿಕೆಯಾದರೆ ಯಾವುದೇ ಅಪಾಯವೂ ಇರುವುದಿಲ್ಲ. ಆದರೆ ಉರುವಲಿನ ರೂಪದಲ್ಲಿರುವ ಇಥೆನಾಲ್‍ಗೆ ಡಿನಾಚ್ಯುರಂಟ್‌(Denaturant) ರಾಸಾಯನಿಕ ಸೇರಿಸುತ್ತಾರೆ, ಆದುದ್ದರಿಂದ ಇದು ಕುಡಿಯಲು ತಕ್ಕುದಲ್ಲ.

E20 ತಯಾರಿಸುವ ಬಗೆ:

ಸ್ಟಾರ್ಚ್ ಮತ್ತು ಸಕ್ಕರೆ ಪ್ರಮಾಣ ಹೊಂದಿರುವ ಕಬ್ಬು, ಮೆಕ್ಕೆಜೋಳ, ಗೋಧಿ, ಬಾರ್ಲಿ ಮುಂತಾದ ಬೆಳೆಗಳಿಂದ ಇಥೆನಾಲ್ ಪಡೆಯಬಹುದು. ಬೆಳೆಗಳನ್ನು ಹುದುಗೆಬ್ಬಿಸುವ(Fermentation) ಮೂಲಕ ಇಥೆನಾಲ್ ಪಡೆಯಬಹುದು. ದನಕರು, ಆಡು ಮೇಕೆ ಮುಂತಾದ ಸಾಕುಪ್ರಾಣಿಗಳಿಗೆ ನೀಡಲಾಗುವ ಬಾರ್ಲಿಯಂತ ಬೇಳೆಕಾಳುಗಳಿಗೆ ಯೀಸ್ಟ್, ಬ್ಯಾಕ್ಟೇರಿಯಾಗಳನ್ನು ಸೇರಿಸಿದಾಗ ಅವುಗಳಿಂದ ಹೆಚ್ಚಿನ ಪ್ರಮಾಣದ ಸಕ್ಕರೆ, ಸ್ಟಾರ್ಚ್ ಕೊಬ್ಬನ್ನು ಪಡೆಯಬಹುದು ಇದರಿಂದಲೇ ಇಥೆನಾಲ್ ಪ್ರಮಾಣ ಹೆಚ್ಚಿಸಬಹುದು. ಹೀಗೆ ಹುದುಗೆಬ್ಬಿಸುವಿಕೆಯಿಂದ ಪಡೆದಂತಹ ಇಥೆನಾಲ್ ಜೊತೆಗೆ ನೀರು, ಇತರೆ ವಸ್ತುಗಳು ಸೇರಿರುತ್ತವೆ. ಇವುಗಳಿಂದ ಇಥೆನಾಲ್‌ಅನ್ನು ವಿಂಗಡಿಸಲು ಬಟ್ಟಿ ಇಳಿಸುವಿಕೆ(Distillation) ಮಾಡಲಾಗುತ್ತದೆ. ಇದರಿಂದಲೂ ಚೊಕ್ಕ ಇಥೆನಾಲ್ ಸಿಗದೇ ಇದ್ದಾಗ ನೀರಿಳಿತ(Dehydration) ಮಾಡಿ ಇಥೆನಾಲ್ ಅನ್ನು ಹೊರತೆಗೆಯಲಾಗುತ್ತದೆ. ಈ ರೀತಿ ಸಿಗುವ ಇಥೆನಾಲ್‌ಗೆ ಪೆಟ್ರೋಲ್ ಉರುವಲನ್ನು ಅಳತೆಗೆ ತಕ್ಕಂತೆ ಅಂದರೆ E10,E15 ಮತ್ತು E20 ಮಿಶ್ರಣ ಬೆರೆಸಿ ಉರುವಲನ್ನು ಬಳಕೆಗೆ ತಕ್ಕುದಾಗಿರುವಂತೆ ಮಾಡುತ್ತಾರೆ. 

E20 ವರವೋ ಇಲ್ಲ ಶಾಪವೋ?

ಈ20 ಪೆಟ್ರೋಲ್‌ದಿಂದ ಅನುಕೂಲವೋ ಇಲ್ಲವೇ ಅನಾನುಕೂಲವೋ ಎಂಬುದು ಹಲವರಿಗೆ ಪ್ರಶ್ನೆಯಾಗಿಯೇ ಉಳಿದಿದೆ. ಹಲವಾರು ಗಾಡಿ ಓಡಿಸುಗರು, ಮಾಲೀಕರು ಈ20 ಪೆಟ್ರೋಲ್ ಬಳಸಬೇಕೆ ಇಲ್ಲವೇ ಎಂಬ ಗೊಂದಲದಲ್ಲಿದ್ದಾರೆ. ಈ20 ಉರುವಲು ಬಳಸಿ ಓಡಾಡುತ್ತಿರುವ ಹಲವು ಕಾರುಗಳ ಮಾಲೀಕರು ಕಡಿಮೆ ಮೈಲಿಯೋಟ, ಬಿಣಿಗೆಯ(Engine) ಬಾಳಿಕೆ-ತಾಳಿಕೆ ಕುರಿತು ಅಸಮಾಧಾನವನ್ನು ಹೊರಹಾಕಿದ್ದಾರೆ. ಇದನ್ನು ಕೊಂಚ ಆಳಕ್ಕಿಳಿದು ನೋಡೋಣ.

ಏಪ್ರಿಲ್ 2023ರಲ್ಲಿ ಭಾರತದ ಆಯ್ದ ನಗರಗಳಲ್ಲಿ ಈ20 ಉರುವಲಿನ ಬಳಕೆಗೆ, ಭಾರತ ಸರಕಾರ ಶುರುಮಾಡಿತ್ತು. ಭಾರತದೆಲ್ಲೆಡೆ ಇದೇ ವರ್ಷದ ಏಪ್ರಿಲ್ ನಿಂದ ಈ20 ಉರುವಲಿನ ಬಳಕೆಯನ್ನು ಕಡ್ಡಾಯಗೊಳಿಸಲಾಗಿತ್ತು. ಬೇಗನೇ ಈ20 ಬಳಕೆಯನ್ನು ಅಳವಡಿಸಿಕೊಳ್ಳಲು ಮೊದ-ಮೊದಲು ವಾಹನ ಮತ್ತು ಬಿಡಿಭಾಗಗಳ ತಯಾರಕರು ಹಿಂದೇಟುಹಾಕಿದ್ದರು. ಕಾರಣ, ಕಡಿಮೆ ಹೊತ್ತಿನಲ್ಲಿ ಬಿಣಿಗೆ ಮತ್ತು ವಾಹನಗಳನ್ನು ಓರೆಗೆ ಹಚ್ಚಿ, ಬಿಡಿಭಾಗಗಳನ್ನು ಪರೀಕ್ಷಿಸಿ ಅವುಗಳ ತಾಳಿಕೆ ಬಾಳಿಕೆಯ ಬಗ್ಗೆ ಮಾಹಿತಿ ಕಲೆಹಾಕಲಾಗದೆಂದು ಒತ್ತಾಯಿಸಿದ್ದರು.

ಪೆಟ್ರೋಲ್‍ನೊಂದಿಗೆ ಇಥೆನಾಲ್ ಬೆರಸಿದಾಗ ಅಂದರೆ ಈ20 ಯಿಂದಾಗುವ ಅನುಕೂಲಗಳು:

  1. ಹೇರಳವಾದ ಆಕ್ಸಿಜನ್ ಹೊಂದಿರುವ ಇಥೆನಾಲ್ ಮಿಶ್ರಣ ಹೆಚ್ಚಿನ ಆಕ್ಟೇನ್ ನಂಬರ್ (Octane Number-RON) ಪಡೆದಿದೆ. ಇದರಿಂದ ಬಿಣಿಗೆಯೊಳಗೆ ಉರುವಲು ಚೆನ್ನಾಗಿ ಉರಿದು ಕಡಿಮೆ ಕಾರ್ಬನ್, ಇತರೆ ಹೊಗೆ ಹೊರಸೂಸುತ್ತದೆ. ಇದು ಪರಿಸರ ಹೆಚ್ಚು ಹಸನಾಗಿಡುತ್ತದೆ.
  2. ಹೆಚ್ಚಿನ ಆಕ್ಟೇನ್ ನಂಬರ್ ಹೊಂದಿರುವ ಈ20ಯಿಂದ, ಪೆಟ್ರೋಲ್ ಬಿಣಿಗೆಗಳಲ್ಲಿ ಕಂಡುಬರುವ ನಾಕಿಂಗ್(Knocking) ಸಮಸ್ಯೆಯನ್ನು ಕಡಿತಗೊಳಿಸುತ್ತದೆ. ಇದರಿಂದ ಬಿಣಿಗೆಯ ಬಾಳಿಕೆಯು ಹೆಚ್ಚಲಿದೆ.
  3. ಸಾಮಾನ್ಯ ಪೆಟ್ರೋಲ್ ಬದಲು 80% ಪೆಟ್ರೋಲ್ ಮತ್ತು 20% ಇಥೆನಾಲ್ ಬಳಕೆಯಿಂದ, ಹೆಚ್ಚಿನ ಪೆಟ್ರೋಲ್ ಮೇಲಿನ ಅವಲಂಬನೆ ಮತ್ತು ಪೆಟ್ರೋಲ್ ಆಮದಿನ ಮೇಲೆ ಭಾರತದ ಹೊರೆ ತಪ್ಪುತ್ತದೆ. ಇದರಿಂದ ಸರಕಾರಕ್ಕೆ ಕೋಟ್ಯಾಂತರ ಹಣದ ಉಳಿತಾಯವಾಗಲಿದೆ.
  4. ಇಥೆನಾಲ್ ದೇಶದಲ್ಲೇ ತಯಾರಿಸಬಹುದು, ಇದರಿಂದ ದೇಶದೊಳಗಿನ ಇಥೆನಾಲ್ ಕೈಗಾರಿಕೆಗೆ ಹುರುಪು ತುಂಬುವುದಲ್ಲದೇ ದೇಶದ ಹಣಕಾಸಿಗೆ ಲಾಭ ತರಲಿದೆ.
  5. ದೇಶೀಯ ಕೃಷಿ ಆಧಾರಿತ ಕೈಗಾರಿಕೆಗೆ ಬೆಂಬಲ ನೀಡುವುದರಿಂದ ಹೆಚ್ಚಿನ ಕೆಲಸಗಳು ಹುಟ್ಟುಕೊಳ್ಳುವುದಲ್ಲದೇ ಹಳ್ಳಿ-ಹೋಬಳಿ ಮಟ್ಟದ ಆರ್ಥಿಕತೆಯನ್ನು ಬಲಪಡಿಸಲಿದೆ.

ಅನಾನುಕೂಲಗಳು:

  1. ಈಗ ರಸ್ತೆಯಲ್ಲಿ ಓಡಾಡುವ ಎಲ್ಲ ಪೆಟ್ರೋಲ್ ಬಂಡಿಗಳು ಈ20 ಬಳಕೆಗೆ ತಕ್ಕುದಾಗಿಲ್ಲ. 2023ಕ್ಕಿಂತಲೂ ಹಳೆಯದಾದ ಗಾಡಿಗಳು ಸಾಕಷ್ಟಿವೆ. ಆದ್ದರಿಂದ ಎಲ್ಲ ಗಾಡಿಗಳಿಗೆ ಈ20 ಉರುವಲನ್ನು ಬಳಕೆ ಮಾಡಲಾಗದು. ಹಳೆಯ ಗಾಡಿಗಳು ಈ20 ಉರುವಲಿಗೆ ತಕ್ಕ ಬಿಡಿಭಾಗಗಳನ್ನು ಪಡೆದಿಲ್ಲ. ಹಳತಾದ ಗಾಡಿಗಳಿಗೆ ಈ20 ಉರುವಲು ಬಳಸುವುದು ಸರಿಯಲ್ಲ.
  2. ತುಕ್ಕು ಹಿಡಿಯುವಿಕೆಯ ಸಮಸ್ಯೆ: ಇಥೆನಾಲ್ ತನ್ನದೇಯಾದ ರಾಸಾಯನಿಕ ಗುಣಗಳನ್ನು ಹೊಂದಿದೆ, ಇದಕ್ಕೆ ತಕ್ಕಂತ ಉರುವಿಲಿನ ಕೊಳವೆ/ಕೊಳಾಯಿ (fuel tank/pipes) ಮುಂತಾದ ಬಿಡಿಭಾಗಗಳನ್ನು ಮಾರ್ಪಡಿಸಬೇಕು. ಇಲ್ಲದೇ ಹೋದಲ್ಲಿ ಬಿಡಿಭಾಗಗಳು ಬೇಗನೇ ಹಾಳಗುವ ಸಾಧ್ಯತೆಯಿರುತ್ತದೆ.
  3. ಇಥೆನಾಲ್ ಹೆಚ್ಚು ತೇವಾಂಶ ಹೀರಿಕೊಳ್ಳುವ ಗುಣಹೊಂದಿದೆ. ಇದೇ ಕಾರಣಕೆ, ಮೇಲೆ ಹೇಳಿದಂತೆ ಇದು ತುಕ್ಕು ಹಿಡಿಯಲು ನೆರವಾಗುತ್ತದೆ. ಇದರಿಂದ ಕೇವಲ ಲೋಹದ ಬಿಡಿಭಾಗಗಳಷ್ಟೇ ಅಲ್ಲದೇ, ಪ್ಲ್ಯಾಸ್ಟಿಕ್, ರಬ್ಬರ್ ಭಾಗಗಳು ಸವೆದು, ಬಿರುಕು ಮೂಡಲಾರಂಭಿಸಿ ಹಾಳಾಗುತ್ತವೆ.
  4. ಇಥೆನಾಲ್ ತಯಾರಿಸಲು ಕಬ್ಬು, ಮೆಕ್ಕೆಜೋಳದಂತ ಬೆಳೆಗಳು ಬೇಕು. ಹೆಚ್ಚಿನ ಇಳುವರಿ ಪಡೆಯಲು ರೈತರು  ಹೆಚ್ಚಿನ ರಸಗೊಬ್ಬರ, ಕೀಟನಾಶಕಗಳನ್ನು ಬಳಸಿ ಹೊಲಗದ್ದೆಗಳಿಗೆ ಹೆಚ್ಚಿನ ಹಾನಿ ಮಾಡುವುದಲ್ಲದೇ, ವಾತಾವರಣದ ಮಾಲಿನ್ಯಕ್ಕೆ ಕಾರಣವಾಗಬಹುದು. ಇದು ಮಣ್ಣಿನ ಸವಕಳಿಯನ್ನು ಇಮ್ಮಡಿಗೊಳಿಸುವ ಅಪಾಯ ತಂದೊಡ್ಡಲಿದೆ.
  5. ಇಥೆನಾಲ್ ಬಳಕೆಗೆ ತಕ್ಕಂತ ಸೌಲಭ್ಯಗಳನ್ನು ಬೆಳವಣಿಗೆಗೊಳಿಸುವುದು ಸುಲಭವಲ್ಲ. ಇಥೆನಾಲ್ ತಯಾರಿಸಿ, ಕೂಡಿಡಲು ಕೊಳಾಯಿಗಳು, ಅದನ್ನು ಸಾಗಿಸಲು ಹಳ್ಳಿಯಿಂದ ದಿಲ್ಲಿಯವರೆಗೆ ನಳಿಕೆ/ಕೊಳವೆಗಳ ಸಂಪರ್ಕ ಜಾಲವನ್ನು ಬೆಳವಣಿಗೆ ಮಾಡಲು ಸಾವಿರಾರು ಕೋಟಿ ಹಣಬೇಕು. ಇದು ದೇಶದ ಬೊಕ್ಕಸಕ್ಕೆ ಹೊರೆಯಾಗುವುದು.
  6. ಇನ್ನೊಂದು ಪ್ರಮುಖ ಅನಾನುಕೂಲವೆಂದರೆ, ಇಥೆನಾಲ್ ಒಳ್ಳೆಯ ಕರುಗುಕ(solvent). ಇದು ಉರುವಲು ಚೀಲದಲ್ಲಿರುವ ಕಸಕಡ್ಡಿಗಳನ್ನು ಕರಗಿಸಿಕೊಂಡಿರುತ್ತದೆ. ಇದು ಮುಂದೆ ಚಿಮ್ಮುಕ(Nozzle), ಸೋಸುಕಗಳನ್ನು(Filter) ಸೇರಿ, ಅವುಗಳಿಗೆ ಅಡ್ದಿಯಾಗುತ್ತದೆ. ಇದು ಗಾಡಿಯ ಮೈಲಿಯೋಟ ಮೇಲೆ ಪರಿಣಾಮ ಬೀರುವುದಲ್ಲದೇ, ಗಾಡಿಯನ್ನು ಪದೇ ಪದೇ ನೆರವುತಾಣಗಳಿಗೆ ಕೊಂಡೊಯ್ದು ಸೋಸುಕ ಮುಂತಾದವುಗಳನ್ನು ಸ್ವಚ್ಚಗೊಳಿಸಬೇಕಾಗುತ್ತದೆ.

ನಮ್ಮದು ಈಗಾಗಲೇ ಒಂದು ಬಂಡಿಯಿದ್ದರೆ ಏನು ಮಾಡಬೇಕು? ಈ20 ಉರುವಲು ಬಳಸಬೇಕೆ ಬೇಡವೇ?

  1. ನಮ್ಮ ಗಾಡಿಯ ಜೊತೆಗೆ ನೀಡಲಾಗಿರುವ ಕೈಪಿಡಿಯನ್ನು ಓದಿ, ಯಾವ ಉರುವಲು ಬಳಸಬೇಕು ಎಂಬುದನ್ನು ತಿಳಿದುಕೊಳ್ಳಿ. ಹೆಚ್ಚಿನ ಅನುಮಾನಗಳಿದ್ದಲ್ಲಿ, ಹತ್ತಿರದ ಮಾರಾಟ ಮಳಿಗೆಗೆ ಭೇಟಿ ನೀಡಿ ಪೂರ್ತಿ ವಿವರ ಪಡೆದು ಕೊಳ್ಳಬೇಕು.
  2. ಗಾಡಿಯು ಈ20 ಉರುವಲಿಗೆ ತಕ್ಕದಾಗಿಲ್ಲವಾದರೆ, ಈ ಉರುವಲನ್ನು ಬಳಸುವುದು ಬೇಡ. ಹಲವು ಗಾಡಿ ತಯಾರಕರು ಹಳೆಯ ಗಾಡಿಗಳನ್ನು ಈ20ಗೆ ತಕ್ಕಂತೆ ಮಾರ್ಪಾಡಿಸುವ ಕೆಲಸದಲ್ಲಿದ್ದಾರೆ. ಅವರನ್ನು ಸಂಪರ್ಕಿಸಿ, ಮಾಹಿತಿ ಪಡೆದು, ಮಾರ್ಪಡಿಸಿದ ನಂತರ, ತಯಾರಕರ ಸಲಹೆಯಂತೆ ಈ20 ಉರುವಲಿನ ಬಳಕೆ ಮಾಡಬಹುದು.

ಈ20ಗೆ ಮಾರ್ಪಾಡಿಸಲು ಬಂಡಿ ತಯಾರಕರು ಬಂಡಿಯಲ್ಲಿ ಯಾವ ರೀತಿಯ ಬದಲಾವಣೆಗಳು ಇರಲಿವೆ.

  1. ಮೊದಲನೇಯದಾಗಿ ಉರುವಲನ್ನು ಹೊತ್ತೊಯ್ಯುವ ಕೊಳವೆ, ಉರುವಲು ಚೀಲ(Fuel Tank), ಚಿಮ್ಮುಕ, ಬಿಣಿಗೆಯಲ್ಲಿ ಉರುವಲು ಏರ್ಪಾಟಿನ ವಿವಿಧ ಭಾಗಗಳು ಮಾರ್ಪಡಿಸಲಾಗುತ್ತದೆ.
  2. ಉರುವಲು ಏರ್ಪಾಟಿನಲ್ಲಿ ಬಳಸಲಾಗುವ ರಬ್ಬರ್, ಪ್ಲ್ಯಾಸ್ಟಿಕ್ ಮುಂತಾದ ಸವೆದು ಹೋಗುವ ಭಾಗಗಳು ಬದಲಾಯಿಸಿ ಈ20ಗೆ ತಕ್ಕಂತೆ ಮರು ಈಡುಗಾರಿಕೆ ಮಾಡುತ್ತಾರೆ.
  3. ಬಂಡಿಯಲ್ಲಿ ಬಳಸಲಾಗುವ ಆಕ್ಸಿಜನ್ ಅರಿವಿಕ(O2 Sensor), ಉರುವಲಿನ ಅರಿವಿಕಗಳನ್ನು(Fuel Sensor) ಮರು ಈಡುಗಾರಿಕೆ ಮಾಡಿಯೋ ಇಲ್ಲವೋ ಉರುವಲಿಗೆ ತಕ್ಕಂತೆ ಮರು ತಿಡಿ/ತಿದ್ದುಪಡಿ ಮಾಡಿ, ಬಿಣಿಗೆಯ ಗಣಕದೊಂದಿಗೆ ಸರಿಹೊಂದಿಸುತ್ತಾರೆ (Calibration).
  4. ಇವೆಲ್ಲ ಮುಗಿದ ಮೇಲೆ, ಮಾರ್ಪಾಡುಗೊಂಡ ಬಿಣಿಗೆ ಮತ್ತು ಬಂಡಿಗಳನ್ನು ವಿವಿಧ ರೀತಿಯಾಗಿ ನೂರಾರು ಗಂಟೆಗಳ ಕಾಲ ಓರೆಗೆ ಹಚ್ಚಿ ಎಲ್ಲವೂ ನೆಟ್ಟಗೆ ಕೆಲಸ ಮಾಡಲಾಗುತ್ತಿದೆಯೇ ಎನ್ನುವುದನ್ನು ತಿಳಿದುಕೊಳ್ಳುತ್ತಾರೆ.

 

ಈ20 ಉರುವಲನ್ನು ಬಳಸುವ ಮುನ್ನ, ನಿಮ್ಮ ಬಂಡಿ ತಯಾರಕರು ನೀಡಿರುವ ಬಳಕೆಯ ಸಲಹೆ-ಸೂಚನೆ ಗಳನ್ನು ತಿಳಿದುಕೊಂಡು ಮುಂದುವರೆಯುವುದು ಒಳ್ಳೆಯದು.

ಕರೆಂಟ್ ಶಾಕ್ – ಏನಿದರ ಹಿನ್ನೆಲೆ?

ಹರ್ಷಿತ್ ಮಂಜುನಾಥ್.

electric shock

ನೀವೊಂದು ಗಾದೆ ಕೇಳಿರಬಹುದು.

ಬಟ್ಟೆ ಮುಳ್ಳಿನ ಮೇಲೆ ಬಿದ್ದರು, ಮುಳ್ಳೇ ಬಟ್ಟೆಯ ಮೇಲೆ ಬಿದ್ದರೂ ಹರಿಯುವುದು ಬಟ್ಟೆಯೇ!

ಈ ಗಾದೆಗೂ ಮಾನವನಿಗೂ ಮಿಂಚುಹೊಡೆತಕ್ಕೂ (Electric shock) ತುಂಬಾ ಹೊಂದಾಣಿಕೆಯಿದೆ. ಅಂದರೆ ಮನುಷ್ಯನ ಮಯ್ಯಿಗೆ ಮಿಂಚು ತಗಲಿದರೂ, ಮಿಂಚಿಗೆ ಮಯ್ಯಿ ತಗುಲಿದರೂ ಮಿಂಚುಹೊಡೆತಗಳು ಅನುಭವವಾಗುವುದು ಮನುಷ್ಯನಿಗೆ.  ಮಯ್ ತೊಗಲು, ಹುರಿಕಟ್ಟು(Muscle), ಕೂದಲು ಸೇರಿದಂತೆ ಮನುಷ್ಯನ ಅಂಗಗಳು ಮಿಂಚಿನ ಹರಿವಿಗೆ ತಗಲುವುದರಿಂದ ಮಿಂಚುಹೊಡೆತಗಳು ಏರ್ಪಡುತ್ತವೆ.

ಸಾಮಾನ್ಯವಾಗಿ ಮನುಷ್ಯನ ಗಮನಕ್ಕೆ ಬರಬಲ್ಲ ಮಿಂಚು, ಮಿಂಚಿನ ನೇರ ಹರಿವು(Direct current) ಅತವಾ ಬದಲಿ ಹರಿವು (Alternate current) ಮತ್ತು ಸಲದೆಣಿಕೆ(Frequency)ಯನ್ನು ನೆಚ್ಚಿಕೊಂಡಿರುತ್ತದೆ. ಆದರೆ ಕೆಲವೊಮ್ಮೆ ಸಣ್ಣ ಪ್ರಮಾಣದ ಮಿಂಚು ಮನುಷ್ಯನ ಗಮನಕ್ಕೆ ಬಾರದೆಯೂ ಇರಬಹುದು. ಅಷ್ಟಕ್ಕೂ ಮಯ್ಯಿಗೆ ಮಿಂಚು ತಗುಲಿದೊಡನೆ ಮಯ್ಯಿ ಮಿಂಚನ್ನು ಏಕೆ ಸೆಳೆದುಕೊಳ್ಳುತ್ತದೆ? ಮಿಂಚು ಮನುಷ್ಯನ ಮಯ್ಯ ಮೇಲೆ ಹರಿದಾಡಲು ನೆರವಾಗಬಲ್ಲ ಅಂಶಗಳೇನು? ಮತ್ತು ಮಿಂಚೊಡೆತಗಳು ಮನುಷ್ಯನ ಬದುಕಿಗೆ ಹೇಗೆ ಕುತ್ತು ತರುತ್ತವೆ? ಎಂಬುದನ್ನು ಮುಂದೆ ತಿಳಿಯೋಣ.

ಮನುಷ್ಯನ ಮಯ್ಯಿಗೆ ಮಿಂಚು ತಗಲಿದೊಡನೆ ಮಯ್ಯಿ ಮಿಂಚನ್ನು ಸೆಳೆದುಕೊಳ್ಳಲು ಮುಕ್ಯ ಕಾರಣ ರಾಸಾಯನಿಕ ಕಸುವು (Chemical energy). ಇದು ಮಯ್ಯಿಯ ಒಳಗಡೆ ಏರ್ಪಡುವ ಸೀರಕೂಟಗಳು (Atoms)  ಮತ್ತು ಅಣುಕೂಟಗಳ (Molecules) ಪ್ರತಿಕ್ರಿಯೆಯಿಂದ (Reactions) ಏರ್ಪಡುತ್ತದೆ.

  • ನಾವು ಸೇವಿಸುವ ಕೆಲವು ಆಹಾರ ಹೊಟ್ಟೆಯೊಳಗೆ ಕರಗುವ ಹೊತ್ತಿನಲ್ಲಿ ಆಹಾರಗಳಲ್ಲಿರುವ ಅಣುಕೂಟಗಳು ಚಿಕ್ಕ ಚಿಕ್ಕ ಅಣುಕೂಟಗಳಾಗಿ ಬೇರ್ಪಡುತ್ತವೆ. ಈ ಅಣುಕೂಟಗಳು ಮನುಷ್ಯನ  ಮಯ್ಯೊಳಗೆ ಉಸಿರುಗಾಳಿ(O2-Oxygen), ಸೋಡಿಯಂ (Na-Sodium), ಪೊಟ್ಯಾಶಿಯಂ  (K-Potassium), ಮತ್ತು ಬೇರುಸುಣ್ಣ(Ca-Calcium) ನಂತಹ ಬೇರಡಕಗಳನ್ನು (Elements) ಕಟ್ಟಿಕೊಡುತ್ತದೆ.
  • ಅಲ್ಲದೇ ಇವೆಲ್ಲಕ್ಕೂ ಅದರದ್ದೇ ಆದ ಮಿಂಚಿನ ಹುರುಪು (Electrical charge) ಇರುತ್ತದೆ. ಅಂದರೆ ಇವುಗಳಲ್ಲಿ ಗೊತ್ತುಮಾಡಿದ ಎಣಿಕೆಯ ಕೊಡುವಣಿಗಳು (Protons), ನೆಲೆವಣಿಗಳು (Neutrons) ಮತ್ತು ಕಳೆವಣಿಗಳು (Electrons) ಇರುತ್ತವೆ. ಇಂತಹ ಮಿಂಚಿನ ಹುರುಪುಗಳು ಕೂಡು-ಹುರುಪು (Positive charge) ಆಗಿರಲೂಬಹುದು ಅತವಾ ಕಳೆ-ಹುರುಪು(Negative charge) ಆಗಿರಲೂಬಹುದು, ಒಟ್ಟಿನಲ್ಲಿ ಇವು ಅಣುಕೂಟಗಳೊಂದಿಗೆ ಪ್ರತಿಕ್ರಿಯಿಸುತ್ತದೆ.
  • ಇಂತಹ ಕ್ರಿಯೆಯನ್ನು ಅಣು ಕೂಡಿಕೆ (Nuclear fusion) ಎನ್ನುವರು, ಮತ್ತು ಈ ಪ್ರಕ್ರಿಯೆಗಳು ಮಿಂಚು ಹರಿಯಲು ಬೇಕಾದ ಕಸುವನ್ನು ಹುಟ್ಟುಹಾಕುತ್ತದೆ.

ಹೀಗೆ ಮಿಂಚು ಮಯ್ಯ ಒಳಗಡೆಗೆ ಹರಿಯಲು ಬೇಕಾದ ಅಂಶಗಳು ಮಯ್ಯಲ್ಲಿರುವುದರಿಂದ ಮಿಂಚು ಮಯ್ಯೊಳಗೆ ಹರಿದು ಮಿಂಚೊಡೆತದ ಅರಿವು ನಮಗಾಗುತ್ತದೆ. ಇಂತಹ ಮಿಂಚುಹೊಡೆತಗಳು ಸಾವು ತರಲೂಬಹುದು. ಹೀಗೆ ಮಿಂಚಿನಿಂದಾಗುವ ಸಾವನ್ನು ಮಿಂಮಡಿತ (Electrocution) ಎನ್ನುವರು. ಆದರೆ ನಿಮಗೆ ತಿಳಿದಿರಲಿ, ಹೆಚ್ಚಿನ ಮಿಂಚೊಡೆತದ ಸಾವುಗಳು ಮಿಂಚಿನ ಬದಲಿ ಹರಿವಿನಿಂದ ಆಗುತ್ತದೆ. ಮತ್ತು ಹೆಚ್ಚಾಗಿ 500 ವೋಲ್ಟ್ ಗಿಂತಲೂ ಕಡಿಮೆ ಹರಿವಿನಿಂದ ಆಗುತ್ತದೆ. ಅಂದ ಮಾತ್ರಕ್ಕೆ ಹೆಚ್ಚು ವೋಲ್ಟ್ ಇರುವ ಮಿಂಚೊಡೆತ ಅಪಾಯಕಾರಿಯಲ್ಲ ಎಂದಲ್ಲ. ಇಲ್ಲಿ ಮನುಷ್ಯನ ಮಯ್ಯಲ್ಲಿರುವ ತಡೆತ(Resistance) ಹೆಚ್ಚಿನ ಪಾತ್ರವಹಿಸುತ್ತದೆ.

ಅಂದರೆ ಮಯ್ಯ ಒಣಬಾಗಕ್ಕೆ ಮಿಂಚು ತಗುಲಿದರೆ ಮಯ್ಯೊಳಗೆ ಹರಿಯಬಲ್ಲ ಮಿಂಚಿನ ಸಾಧ್ಯತೆಗಿಂತ, ತಂಪಿನ ಭಾಗಕ್ಕೆ ಮಿಂಚು ತಗುಲಿದರೆ ಮಿಂಚೊಡೆತ ಆಗುವ ಸಾಧ್ಯತೆ ಹೆಚ್ಚಿರುತ್ತದೆ. ಕಾರಣ ಒಣಭಾಗಕ್ಕೆ ಹೆಚ್ಚಿನ ತಡೆತವಿರುತ್ತದೆ. ಹಾಗಾಗಿ ಇದು ಅಷ್ಟು  ಬೇಗನೆ ಮಿಂಚನ್ನು ತನ್ನೊಳಗೆ ಬಿಟ್ಟುಕೊಳ್ಳುವುದಿಲ್ಲ. ಆದರೆ ತಂಪಿರುವ ಭಾಗಕ್ಕೆ ತಡೆತ ಕಡಿಮೆ ಇರುವುದರಿಂದ ಬೇಗನೆ ಮಿಂಚು ಮಯ್ಯೊಳಗೆ ಹರಿಯುತ್ತದೆ. ಮಿಂಚು ಮನುಷ್ಯನ ಮಯ್ಯ ಯಾವುದೇ ಬಾಗಕ್ಕೆ ತಾಕಿದರೂ ಆ ಭಾಗವನ್ನು ಹಾನಿಗೊಳಿಸುತ್ತದೆ. ಹಾಗಾಗಿ ಮಿಂಚೊಡೆತದಿಂದ ಗಾಯಗಳಾಗುವುದು ಸಹಜ.

ಆದರೆ ಇಲ್ಲಿ ನಾವು ಕೆಲವು ವಿಷಯಗಳನ್ನು ಗಮನಿಸಬೇಕು.

  • ಮಿಂಚೊಡೆತ ನಡೆದಾಗ ಎಷ್ಟು ಆಂಪ್ (Amp) ಮಿಂಚು ಒಳಹರಿವಾಗಿದೆ.
  • ಮಯ್ಯಲ್ಲಿ ಮಿಂಚು ಹರಿದಾಡುವ ದಾರಿ
  • ಮಯ್ಯಿ ಮಿಂಚಿಗೆ ಸೋಕಿರುವ ಒಟ್ಟು ಹೊತ್ತು.

ಮಿಂಚೊಡೆತದಿಂದ ಮಯ್ಯಲ್ಲಿ ಆಗಬಹುದಾದ ಅರಿದಾದ (important) ತೊಂದರೆಗಳೆಂದರೆ,
i. ಮಯ್ ಸುಡುವಿಕೆ (burns): ಮಿಂಚಿನ ಹರಿವಿಗೆ  ಮಯ್ ಒಡ್ಡುವ ತಡೆತದಿಂದಾಗಿ (resistance) ಹೊಮ್ಮುವ ಬಿಸುಪು (heat) ಗೂಡುಕಟ್ಟುಗಳನ್ನು (tissues) ಸುಡುತ್ತದೆ.
ii. ಗುಂಡಿಗೆಯ ತೊರೆಗೋಣೆಗಳಏರ್ಪಡಿತವನ್ನು ಉಂಟುಮಾಡುತ್ತದೆ (ventricular fibrillation).
iii. ಮಿಂಚು ತನ್ನ ಹರಿವಿನ ಹಾದಿಯಲ್ಲಿ ಬರುವು ನರಗಳಿಗೂ ಹಾನಿಯನ್ನುಂಟು ಮಾಡುವ ಅಳವನ್ನು ಹೊಂದಿದೆ.

ಮಿಂಚೊಡೆತದಿಂದ ಮಯ್ಯಲ್ಲಿ ಉಂಟಾಗುವ ಏರು-ಪೇರುಗಳು ಮನುಷ್ಯರನ್ನು ಸಾವಿನ ದವಡಿಗೂ ನೂಕಬಹುದು. ಹೀಗೆ ಮಿಂಚೊಡೆತದಿಂದ  ಆಗುವು ಸಾವನ್ನು ‘ಎಲೆಕ್ಟ್ರಿಕ್ಯೂಶನ್’ ಎಂದು ಹೇಳಲಾಗುತ್ತದೆ. ಕನ್ನಡದಲ್ಲಿ ಇದನ್ನು ‘ಮಿಂಮಡಿತ’ ಎಂದು ಹೇಳಬಹುದು. ‘ಎಲೆಕ್ಟ್ರಿಕ್ಯೂಶನ್’ ಪದವನ್ನು 1890 ರಲ್ಲಿ ಮೊದಲಸಲ ಬಳಸಲಾಯಿತು. ಆ ಹೊತ್ತಿನಲ್ಲಿ ಮಿಂಚನ್ನು ಬಳಸಿ ಕೈದಿಗಳನ್ನು ಕೊಲ್ಲುತ್ತಿದ್ದ ಬಗೆಯನ್ನಷ್ಟೇ ‘ಎಲೆಕ್ಟ್ರಿಕ್ಯೂಶನ್’ ಎಂದು ಕರೆಯುತ್ತಿದ್ದರು. ಮುಂದೆ ಮಿಂಚಿನ ಕೆಟ್ಟಾಗುಹಗಳಿಂದ (accident) ಉಂಟಾಗುವ ಸಾವುಗಳಿಗೂ ‘ಎಲೆಕ್ಟ್ರಿಕ್ಯೂಶನ್’ ಪದವನ್ನು ಬಳಸಲಾರಂಬಿಸಿದರು.

(ತಿಟ್ಟಸೆಲೆ: dawsonpower.com)

ಕರೆಂಟ್ ಹುಟ್ಟುವ ಬಗೆ

ಪ್ರಶಾಂತ ಸೊರಟೂರ.

ಕಳೆದ ಬರಹದಲ್ಲಿ ಕರೆಂಟ್ ಎಂದರೆ ಮುಖ್ಯವಾಗಿ ವಸ್ತುಗಳಲ್ಲಿರುವ ಕಳೆವಣಿಗಳ (electrons) ಹರಿವು ಮತ್ತು ಮಿನ್ಸೆಳೆತನ (electromagnetism) ಎಂದು ಕರೆಯಲಾಗುವ ಮಿಂಚು-ಸೆಳೆಗಲ್ಲುಗಳ (magnets) ನಂಟಿನ ಕುರಿತು ತಿಳಿದುಕೊಂಡೆವು. ಮಿನ್ಸೆಳೆತನವನ್ನು ಬಳಸಿಕೊಂಡು ಕರೆಂಟ್ ಉಂಟುಮಾಡುವ ಬಗೆಯನ್ನು ಈಗ ನೋಡೋಣ.

ಕರೆಂಟ್ ಉಂಟುಮಾಡಲು ಅಂದರೆ ವಸ್ತುಗಳಲ್ಲಿರುವ ಕಳೆವಣಿಗಳನ್ನು (electrons) ಹರಿಸಲು ಬೇಕಾದ ಕಸುವು ಪಡೆಯಲು ಮುಖ್ಯವಾಗಿ ಈ ಕೆಳಗಿನವುಗಳು ಬೇಕಾಗುತ್ತವೆ,

1)      ಸೆಳೆಗಲ್ಲ ಬಯಲು (magnetic field)

2)      ತಾಮ್ರದಂತಹ ಬಿಡುವೆ (conductor)

3)      ಬಿಡುವೆಯನ್ನು ತಿರುಗಿಸುವ ಕಸುವು

4)      ಉಂಟಾದ ಕರೆಂಟನ್ನು ಸಾಗಿಸುವ ಮಿನ್ಸುತ್ತು (electric circuit)

minchuttuka_electric generator

(ಕರೆಂಟ್ ಹುಟ್ಟುವ ಭಾಗಗಳನ್ನು ತೋರಿಸುತ್ತಿರುವ ಚಿತ್ರ)

ಎರಡು ಸೆಳೆಗಲ್ಲುಗಳ (magnets) ಎದುರು ತುದಿಗಳನ್ನು ಅಂದರೆ ಬಡಗಣ (north) ಮತ್ತು ತೆಂಕಣ (south) ತುದಿಗಳನ್ನು ಒಂದರ ಮುಂದೊಂದು ತಂದಾಗ ಅವೆರಡಗಳ ನಡುವೆ ಸೆಳೆತ ಉಂಟಾಗುತ್ತದೆ. ಹೀಗೆ ಉಂಟಾದ ‘ಸೆಳೆತದ’ ಬಯಲಿನಲ್ಲಿ ತಾಮ್ರದ ತಂತಿಯ ಕಟ್ಟನ್ನು ಹೊತ್ತ ತಿರುಗುಣಿಯನ್ನು (rotor/turbine) ತಿರುಗಿಸಿದರೆ, ತಾಮ್ರದ ತಂತಿಯಲ್ಲಿ ಕಳೆವಣಿಗಳು (electrons) ಅಂದರೆ ಕರೆಂಟ್ ಹರಿಯತೊಡಗುತ್ತದೆ.

ಈ ಬಗೆಯಲ್ಲಿ ತಿರುಗುವ ಕಸುವಿನಿಂದ ಮಿಂಚಿನ (ಕರೆಂಟ್) ಕಸುವು ಉಂಟುಮಾಡುವ ಸಲಕರಣೆಯನ್ನು ‘ಮಿಂಚುಟ್ಟುಕ’ (electric generator) ಅಂತಾ ಕರೆಯುತ್ತಾರೆ.ಇಲ್ಲಿ ಗಮನಿಸಬೇಕಾದ ಮುಖ್ಯಸಂಗತಿ ಎಂದರೆ,

ತಾಮ್ರದಂತಹ ಬಿಡುವೆ (conductor) ಅಳವಡಿಸಿದ ತಿರುಗುಣಿಯನ್ನು ತಿರುಗಿಸಲು ‘ಕಸುವು’ ದೊರೆತರೆ ಕರೆಂಟನ್ನು ಸುಲಭವಾಗಿ ಉಂಟುಮಾಡಬಹುದು.

ಈ ತಿರುಗಿಸುವ ಕಸುವನ್ನು ಹಲವಾರು ಬಗೆಗಳಲ್ಲಿ ಪಡೆಯಬಹುದು. ಅವುಗಳಲ್ಲಿ ಮುಖ್ಯ ಬಗೆಗಳು ಹೀಗಿವೆ,

  • ನೀರಿನ ಬಳಕೆ: ಮೇಲಿನಿಂದ ದುಮ್ಮಿಕ್ಕುವ ನೀರನ್ನು ಕೆಳಗಿರುವ ತಿರುಗಣಿಯ ಮೇಲೆ ಹಾಯಿಸಿ ಅದು ತಿರುಗುವಂತೆ ಮಾಡಲಾಗುತ್ತದೆ. ಹೀಗೆ ನೀರಿನ ಬೀಳುವಿಕೆಯಿಂದ ಮಿಂಚು (ಕರೆಂಟ್) ಪಡೆಯುವ ತಾಣಕ್ಕೆ ‘ನೀರ‍್ಮಿಂಚು ನೆಲೆಗಳು’ (hydro-electric power station) ಅನ್ನುತ್ತಾರೆ. ಜೋಗ, ಶಿವನಸಮುದ್ರ ಮುಂತಾದ ಕಡೆ ಈ ಬಗೆಯಲ್ಲಿ ಕರೆಂಟ್ ಉಂಟುಮಾಡಲಾಗುತ್ತದೆ.
  • ಕಾವು ಬಳಸಿ ಕರೆಂಟ್: ಈ ಬಗೆಯಲ್ಲಿ ಕಲ್ಲಿದ್ದಲಿನಂತಹ ಉರುವಲನ್ನು ಬಳಸಿ ನೀರನ್ನು ಕಾಯಿಸಲಾಗುತ್ತದೆ. ಕಾದ ನೀರು ಆವಿಯ ರೂಪ ಪಡೆದಾಗ ಅದನ್ನು ತಿರುಗುಣಿಯನ್ನು ತಿರುಗಿಸಲು ಬಳಸಲಾಗುತ್ತದೆ. ಹೀಗೆ ಕರೆಂಟ್ ಉಂಟುಮಾಡುವ ತಾಣಗಳಿಗೆ ‘ಕಾವ್ಮಿಂಚು ನೆಲೆಗಳು’ (thermal power station) ಅನ್ನುತ್ತಾರೆ. ರಾಯಚೂರಿನಲ್ಲಿರುವ ಮಿಂಚಿನ-ನೆಲೆಯಲ್ಲಿ ಹೀಗೆಯೇ ಕರೆಂಟ್ ಉಂಟುಮಾಡಲಾಗುತ್ತದೆ.
  • ಅಣುಗಳ ಒಡೆತ:  ಇದೂ ಕಾವಿನಿಂದ ಕರೆಂಟ್ ಪಡೆಯುವ ಬಗೆಗಳಲ್ಲಿ ಒಂದು ಆದರೆ ಇಲ್ಲಿ ಕಲ್ಲಿದ್ದಲಿನ ಬದಲಾಗಿ ಅಣುಗಳ ಒಡೆತದಿಂದ ಉಂಟಾಗುವ ಕಾವನ್ನು ನೀರು ಕಾಯಿಸಲು ಬಳಸಲಾಗುತ್ತದೆ. ಯುರೇನಿಯಂ ನಂತಹ ಅಣುಗಳ ನಡುವಣಕ್ಕೆ (nucleus) ನೆಲೆವಣಿಗಳನ್ನು (neutrons) ಗುದ್ದಿಸಿ, ನಡುವಣ ಒಡೆಯುವಂತಾದರೆ ಅದರಿಂದ ತುಂಬಾ ಕಸುವು ಬಿಡುಗಡೆಯಾಗುತ್ತದೆ. ಈ ಕಸುವು ಬಳಸಿ ನೀರಾವಿಯನ್ನು ಉಂಟಮಾಡಿ, ಎಂದಿನ ಬಗೆಯಂತೆ ತಿರುಗುಣಿಯನ್ನು ತಿರುಗಿಸಿ ಕರೆಂಟ್ ಪಡೆಯಲಾಗುತ್ತದೆ. ಉತ್ತರ ಕನ್ನಡ ಜಿಲ್ಲೆಯ ‘ಕೈಗಾ’ ದಲ್ಲಿ ಇಂತ ’ನಡುವಣ-ಮಿಂಚಿನ’ (nuclear power) ನೆಲೆಯಿದೆ.
  • ಗಾಳಿಯ ಬಳಕೆ: ಬೆಟ್ಟ-ಗುಡ್ಡಗಳ ಮೇಲೆ ಬೀಸುವ ಗಾಳಿಯನ್ನು ಬಳಸಿ ತಿರುಗುಣಿಯನ್ನು ತಿರುಗಿಸುವ ಕಸುವು ಪಡೆಯಲಾಗುತ್ತದೆ. ಗದುಗಿನ ಕಪ್ಪತ್ತಗುಡ್ಡ, ಚಿತ್ರದುರ್ಗದ ಬೆಟ್ಟಗಳಲ್ಲಿ ಇಂತಹ ಗಾಳಿ ಮಿಂಚಿನ ನೆಲೆಗಳನ್ನು ಕಾಣಬಹುದು.
  • ಕಡಲ ಅಲೆಗಳ ಬಳಕೆ: ಕಡಲ ದಂಡೆಯಲ್ಲಿ ಹೊಯ್ದಾಡುವ ತೆರೆಗಳನ್ನು ಬಳಸಿ ತಿರುಗುಣಿಯನ್ನು ತಿರುಗಿಸುವ ಕಸುವು ಪಡೆಯಲಾಗುತ್ತದೆ. ಈ ಬಗೆ ಇತ್ತೀಚಿಗೆ ಕಂಡುಹಿಡಿಯಲಾಗಿದ್ದು ಇನ್ನೂ ಹೆಚ್ಚಾಗಿ ಬಳಕೆಗೆ ಬರಬೇಕಾಗಿದೆ.

minchumane

(ನಡುವಣ (nucleus) ಒಡೆತದಿಂದ ಉಂಟಾದ ಕಸುವು ಬಳಸಿ ಕರೆಂಟ್ ಉಂಟುಮಾಡುತ್ತಿರುವ ಬಗೆಯನ್ನು ತೋರಿಸುವ ಚಿತ್ರ)

ಹೀಗೆ ಯಾವುದಾದರೊಂದು ಕಸುವಿನ ಸೆಲೆಯಿಂದ ತಿರುಗುಣಿ ತಿರುಗಿಸಿ ಮಿಂಚುಟ್ಟುಕದ (generator) ನೆರವಿನಿಂದ  ಕರೆಂಟ್ ಉಂಟುಮಾಡಲಾಗುತ್ತದೆ.

ಚಿತ್ರ : ವಿಕಿಪೀಡಿಯಾ , ಸೆಲೆ: iaea ,rite.or.jp

ಮೆಣಸಿನಕಾಯಿ ‘ಅದೆಷ್ಟು’ ಖಾರ?

Free A close-up shot of numerous fresh red chili peppers creating a vivid and spicy visual texture. Stock Photo
ಮೆಣಸಿನಕಾಯಿ ತಿಂದೊಡನೆ ಕಣ್ಣಲ್ಲಿ ನೀರು, ಖಾರದ  ಉರಿಗೆ ಇಡೀ ಮಯ್ಯಿ ತತ್ತರಿಸಿದಾಗ ಮೆಣಸಿನಕಾಯಿ ಖಾರ-ಬೆಂಕಿ, ‘ಇಷ್ಟು’ ಖಾರ ಯಾರಾದರೂ ತಿನ್ನುತ್ತಾರಾ ಅನ್ನುವ ಮಾತುಗಳು ಹೊರಬರುತ್ತವೆ.’ತುಂಬಾ’ ಖಾರ, ‘ಕಡಿಮೆ’ ಖಾರ ಅನ್ನುವ ಅನಿಸಿಕೆ ಒಬ್ಬರಿಂದ ಇನ್ನೊಬ್ಬರಿಗೆ ಬೇರೆ ಬೇರೆಯಾಗಿರುತ್ತದೆ. ಅನಿಸಿಕೆಯ ಈ ಬೇರೆತನವನ್ನು ಹೋಗಲಾಡಿಸಲು ಒಂದೇ ತರನಾಗಿರುವ ‘ಅಳತೆಗೋಲು’ ಬೇಕಲ್ಲವೇ ? ಆ ಅಳತೆಗೋಲಿನ ಬಗ್ಗೆ ಈಗ ತಿಳಿದುಕೊಳ್ಳೋಣ.

ಸ್ಕಾವಿಲ್ (Scoville) ಎಂಬ ಅಳತೆಗೋಲು ಬಳಸಿ, ಮಸಾಲೆಯೊಂದು ‘ಎಷ್ಟು’ ಖಾರವಾಗಿದೆ ಅನ್ನುವುದನ್ನು ಅಳೆಯಲಾಗುತ್ತದೆ.

ಈ ಅಳತೆಗೋಲು ಕಂಡುಹಿಡಿದ ವಿಲ್ಬರ್ ಸ್ಕಾವಿಲ್ (Wilbur Scoville) ಅವರ ಹೆಸರಿನಿಂದಲೇ ಇದನ್ನು ಗುರುತಿಸಲಾಗುತ್ತದೆ. ಮೆಣಸಿನಕಾಯಿ, ಮೆಣಸು ಮುಂತಾದ ಮಸಾಲೆಗಳ ಖಾರದ ಚುರುಕಿನ ಮಟ್ಟ ಆ ವಸ್ತುಗಳಲ್ಲಿ ಕಾಪಾಸಿಸಿಯನ್ (capsaicin) ಎಂಬ ವಸ್ತು ಎಷ್ಟಿದೆ ಅನ್ನುವುದರ ಮೇಲೆ ತೀರ್ಮಾನವಾಗುತ್ತದೆ.

ಕಾಪಾಸಿಸಿಯನ್ (capsaicin) ತೊಗಲಿನಲ್ಲಿರುವ ನರಗಳಿಗೆ ಖಾರದ ಚುರುಕು ತಾಕಿಸುವಂತ ಅಡಕವಾಗಿರುವ ವಸ್ತು (chemical compound), ಇದರಿಂದಾಗಿಯೇ ನಮಗೆ ಖಾರದ ಅನುಭವವಾಗುತ್ತದೆ.

‘ವಿಲ್’  ಅಳತೆಯಂತೆ ಬೇರೆ-ಬೇರೆ ಮಸಾಲೆಗಳ ‘ಖಾರದ ಮಟ್ಟ’  ಹೀಗಿದೆ:

scovelli_unit

ಬ್ಯಾಡಗಿ ಮೆಣಸಿನಕಾಯಿ ‘ಎಷ್ಟು’ ಖಾರ ಅಂತಾ ಈಗ ಗೊತ್ತಾಯಿತಲ್ಲ! ಇನ್ನು ಜಗತ್ತಿನಲ್ಲಿಯೇ ಎಲ್ಲಕ್ಕಿಂತ ಖಾರವಾದ ‘ ಟ್ರೆನಿಡಾಡ್ ಮೊರುಗಾ ಸ್ಕಾರ್ಪಿಯನ್’ ಮೆಣಸಿನ ತಂಟೆಗೆ ಹೋಗದಿರುವುದೇ ವಾಸಿ ಅನಿಸುತ್ತದೆ!

(ತಿಳಿವಿನ ಸೆಲೆvox,downtoearth,pixels.com)

ಕಾಫಿ ಒಣಗಿಸಲೊಂದು ಚುರುಕಿನ ಚಳಕ

ರತೀಶ ರತ್ನಾಕರ.

ಕರ್ನಾಟಕದ ಹಲವು ಮುಖ್ಯ ಬೆಳೆಗಳಲ್ಲಿ ಕಾಫಿಯೂ ಒಂದು. ಪಡುವಣ ಬೆಟ್ಟದ ಸಾಲುಗಳಲ್ಲಿ ಹೆಚ್ಚಾಗಿ ಬೆಳೆಯುವ ಬೆಳೆಯಾಗಿದ್ದು ವರುಶಕ್ಕೆ ಒಂದು ಬಾರಿ ಮಾತ್ರ ಕುಯ್ಲಿಗೆ ಬರುವ ಬೆಳೆ. ಮಳೆಯ ಆಧಾರದ ಮೇಲೆ ಕೆಲವು ಕಡೆ ನವೆಂಬರ್ ಕೊನೆಯ ವಾರಕ್ಕೆ ಕುಯ್ಲಿಗೆ ಬಂದರೆ ಇನ್ನು ಕೆಲವು ಕಡೆ ಡಿಸೆಂಬರ್ ಕೊನೆಯ ವಾರಕ್ಕೆ ಕಾಫಿ ಹಣ್ಣು ಕುಯ್ಲಿಗೆ ಬರುತ್ತದೆ. ಹಾಗಾಗಿ ನವೆಂಬರ್ ಕೊನೆಯ ವಾರದಿಂದ ಜನವರಿಯ ಸುಗ್ಗಿ ಹಬ್ಬದವರೆಗೂ ಕಾಫಿ ಕುಯ್ಲಿನ ಕಾಲ ಎಂದು ಹೇಳಬಹುದು. ಹೀಗೆ ಕುಯ್ದ ಕಾಫಿಯನ್ನು ಮಾರುಕಟ್ಟೆಗೆ ಸಾಗಿಸುವ ಮೊದಲು ಅದನ್ನು ಒಣಗಿಸಲಾಗುತ್ತದೆ.

ಸದ್ಯಕ್ಕೆ ಕಾಫಿ ಬೆಳೆಗಾರರ ಮನೆಗಳ ಅಂಗಳದಲ್ಲಿ ನೇಸರನ ಬಿಸಿಲಿಗೆ ಹರಡಿ ಕಾಫಿಯನ್ನು ಹಲವು ದಿನಗಳ ಕಾಲ ಒಣಗಿಸಲಾಗುತ್ತದೆ. ಹೀಗೆ ಒಣಗಿಸುವುದಕ್ಕೆ, ಸಾಕಷ್ಟು ಜಾಗ ಹಾಗು ಮಯ್ಗೆಲಸದ ಅವಶ್ಯಕತೆ ಇದೆ. ಆದರೆ ಇತ್ತೀಚಿನ ದಿನಗಳಲ್ಲಿ ಹೊಸ ಚಳಕಗಳನ್ನು ಬಳಸಿ ಕಾಫಿಯನ್ನು ಅತಿ ಕಡಿಮೆ ಜಾಗದಲ್ಲಿ, ಕಡಿಮೆ ಮೈಗೆಲಸದಲ್ಲಿ, ಆದಷ್ಟು ಬೇಗ ಒಣಗಿಸುವ ವಿಧಾನಗಳನ್ನು ಕಂಡುಕೊಂಡಿದ್ದಾರೆ. ಅಂತಹ ಒಂದು ವಿಧಾನವನ್ನು ಇಲ್ಲಿ ನೋಡೋಣ ಬನ್ನಿ.

ಕಾಫಿ ಕುಯ್ಲು ಮುಗಿದ ಮೇಲೆ ಕೆಲವರು ಇಡೀ ಕಾಫಿಯನ್ನು ಸಿಪ್ಪೆಯ ಜೊತೆಗೆ ಒಣಗಿಸಿ ಮಾರುಕಟ್ಟೆಗೆ ಸಾಗಿಸಿದರೆ ಇನ್ನು ಕೆಲವರು ಹಸಿಯಾಗಿರುವ ಕಾಫಿ ಹಣ್ಣಿನ ಸಿಪ್ಪೆಯನ್ನು ಒಂದು ಬಿಣಿಗೆಯ ನೆರವಿನಿಂದ ಸಿಪ್ಪೆಯನ್ನು ತೆಗೆದು ಬಳಿಕ ಒಳಗಿನ ಕಾಳುಗಳನ್ನು ಒಣಗಿಸಿ ಮಾರುತ್ತಾರೆ. ಎರಡಕ್ಕೂ ಅವುಗಳದ್ದೇ ಆದ ಬೆಲೆಗಳಿವೆ. ಹೀಗೆ ಇಡಿಯಾಗಿ ಒಣಗಿಸಿದ ಕಾಫಿಯನ್ನು ಚೆರ‍್ರಿ ಎಂದು ಸಿಪ್ಪೆ ತೆಗೆದ ಕಾಫಿಯನ್ನು ಪಾರ‍್ಚ್ ಮೆಂಟ್ ಎಂದು ಕರೆಯುತ್ತಾರೆ.

Coffee cherry and parchment

ಹಸಿಯಾಗಿರುವ ಕಾಫಿಯಲ್ಲಿ ಸುಮಾರು 50% ನಿಂದ 70% ನಷ್ಟು ನೀರಿನ ಪಸೆ (moisture) ಇರುತ್ತದೆ. ಕಾಫಿಯು ಚೆನ್ನಾಗಿ ಒಣಗಿ ಮಾರುಕಟ್ಟೆಗೆ ಸಾಗಿಸಲು ಯೋಗ್ಯ ಎಂದು ಕರೆಸಿಕೊಳ್ಳಲು ಅದರ ಪಸೆ ಸುಮಾರು 10% ನಿಂದ 12% ಮಾತ್ರ ಇರಬೇಕು. ಕಾಫಿಯನ್ನು ಒಣಗಿಸುವುದರಲ್ಲಿ ಅದರ ಪಸೆಯನ್ನು 70% ನಿಂದ 10% ಗೆ ಇಳಿಸುವುದಾಗಿರುತ್ತದೆ.

ಒಂದು ಕಾಫಿಬೀಜದ ಪಸೆಯ ಆರುವಿಕೆ ಎರಡು ಹಂತದಲ್ಲಿ ನಡೆಯುತ್ತದೆ. ಮೊದಲು ಸಿಪ್ಪೆಯ ಒಳಗಿನ ಭಾಗದ ಪಸೆಯು ಆರಿ ಹೊರಭಾಗಕ್ಕೆ ಬರುತ್ತದೆ, ಬಳಿಕ ಹೊರಭಾಗದ ಪದರದಲ್ಲಿರುವ ಪಸೆಯು ಆರಿ ಸುತ್ತಲಿನ ಗಾಳಿಗೆ ಸೇರಿಕೊಳ್ಳುತ್ತದೆ. ಹೀಗೆ ಎರೆಡು ಹಂತಗಳಲ್ಲಿ ಕಾಫಿಯು ಒಣಗಬೇಕಾದರೆ ಅದಕ್ಕೆ ಬಿಸಿಗಾಳಿಯನ್ನು ಹರಿಸುವುದರ ಮೂಲಕ ಪಸೆಯನ್ನು ಆರಿಸಿ ಒಣಗಿಸಬಹುದು ಎಂದು ಕಂಡುಕೊಂಡಿದ್ದಾರೆ.

ಯಾವುದೇ ಕಾಳುಗಳನ್ನು ಚೆನ್ನಾಗಿ ಒಣಗಿಸಲು ಗಾಳಿಯು ಈ ಮೂರು ಗುಣಗಳನ್ನು ಹೊಂದಿರಬೇಕು. ಅವು ಗಾಳಿಯು ಒಣಗಿರಬೇಕು (ಯಾವುದೇ ಪಸೆ ಗಾಳಿಯಲ್ಲಿ ಇರಬಾರದು), ಬಿಸಿಯಾಗಿರಬೇಕು ಮತ್ತು ಹರಿಯುತ್ತಿರಬೇಕು (ಒಂದೇ ಕಡೆ ನಿಂತಿರುವ ಗಾಳಿ ಕಾಳುಗಳ ಪಸೆಯನ್ನು ಹೊರಗಿನ ತಣ್ಣನೆಯ ಗಾಳಿಗೆ ಸಾಗಿಸಲಾಗದು). ಈ ಎಲ್ಲಾ ವಿವರಗಳನ್ನು ಕಲೆ ಹಾಕಿದಾಗ, ಕಾಫಿಯ ಪಸೆಯನ್ನು 10% ರಿಂದ 12% ಗೆ ಇಳಿಸಬೇಕಾದರೆ ಗಾಳಿಯನ್ನು 40 ಡಿಗ್ರಿ ಯಿಂದ 60 ಡಿಗ್ರಿಯಷ್ಟು ಬಿಸಿಯಾಗಿ ಹಾಯಿಸಿದಾಗ ಅದು ಆದಷ್ಟು ಬೇಗ ಮತ್ತು ಚೆನ್ನಾಗಿ ಒಣಗುತ್ತದೆ. (ಎಷ್ಟು ಹೊತ್ತು ಈ ಬಿಸಿಗಾಳಿಯನ್ನು ಹಾಯಿಸಬೇಕು ಎಂಬುದನ್ನು ಮುಂದೆ ತಿಳಿಯೋಣ)

ಈಗ, ಕಾಳಿನ ಒಣಗುವಿಕೆಯ ಹಂತಗಳು ಮತ್ತು ಗಾಳಿಗೆ ಇರಬೇಕಾದ ಬಿಸುಪಿನ ಬಗ್ಗೆ ತಿಳಿದೆವು. ಇನ್ನು ನೇಸರನ ಬೆಳಕು ಇಲ್ಲವೇ ಇತರ ಉರುವಲಿನ ನೆರವನಿಂದ ಬಿಸಿಗಾಳಿಯನ್ನು ಕಾಫಿಯ ಮೇಲೆ ಹಾಯಿಸಿ ಅದನ್ನು ಒಣಗಿಸುವ ಬಗೆಯನ್ನು ಅರಿಯೋಣ.

ಹೊಸಬಗೆಯ ಒಣಗಿಸುವಿಕೆಯಲ್ಲಿ ಎರೆಡು ಬಗೆಗಳಲ್ಲಿ ಬಿಸಿಗಾಳಿಯನ್ನು ಹಾಯಿಸಬಹುದು, ಒಂದು ನೇಸರನ ಬೆಳಕಿನಿಂದ ಮತ್ತೊಂದು ಉರುವಲುಗಳಿಂದ (ಬಯೋಮಾಸ್, ಸವ್ದೆ ಮತ್ತಿತರೆ ಉರುವಲು). ಚಿತ್ರ 1 ರಲ್ಲಿ ಇದರ ಮಾದರಿಯನ್ನು ನೀಡಲಾಗಿದೆ. ಅದರ ಒಂದೊಂದು ಭಾಗಗಳು ಮತ್ತು ಒಣಗಿಸುವುದರಲ್ಲಿ ಅವುಗಳ ಕೆಲಸವನ್ನು ತಿಳಿಯೋಣ.

Coffee Drying 1

(ಕಾಫಿಯನ್ನು ಒಣಗಿಸುವ ಮಾದರಿ)

ಒಣಗಿಸುವ ಕೋಣೆ: ಒಣಗಿಸುವ ಕೋಣಯು ಬೇಕಾದಷ್ಟು (ಎತ್ತುಗೆಗಾಗಿ 20×30 (ಉದ್ದ x ಅಗಲ)ರಷ್ಟು) ಜಾಗದಲ್ಲಿ ಕಟ್ಟಿರಬೇಕು. ಕೋಣೆಯ ಒಳಗಿನ ಗೋಡೆಗಳಿಗೆ ಮರದ ಹಲಗೆ (ಪ್ಲಯ್ ವುಡ್) ಹೊಡೆದಿರಬೇಕು, ಇದು ಬಿಸಿಗಾಳಿಯನ್ನು ಹೊರಗೆ ಹೋಗದಂತೆ ತಡೆಯುತ್ತದೆ. ಕೋಣೆಯ ಮಾಡು (ಸೂರು) ಮೂಡಣ ಮತ್ತು ಪಡುವಣ ದಿಕ್ಕುಗಳಿಗೆ ಮುಖ ಮಾಡಿರಬೇಕು, ಇದರಿಂದ ಹೆಚ್ಚು ಹೊತ್ತು ನೇಸರನ ಬೆಳಕು ಮಾಡಿನ ಮೇಲೆ ಬೀಳುವಂತಾಗುತ್ತದೆ. (ಚಿತ್ರ 2 ನ್ನು ನೋಡಿ)

Coffee Drying 2

(ನೇಸರ ಪಟ್ಟಿ, ಬಿಸಿಗಾಳಿ ಕೊಳವೆಯ ಸೀಳುನೋಟ)

ನೇಸರ ಪಟ್ಟಿ: ಕೋಣೆಯ ಮಾಡಿನ ಮೇಲೆ ಮರದ ಹಲಗೆಗಳನ್ನು (ಪ್ಲಯ್ ವುಡ್) ಹೊಡೆದು ಅದರ ಮೇಲೆ ಮರದ ಪಟ್ಟಿಯನ್ನು ಮಾಡಿನ ಇಳಿಜಾರಿಗೆ ಅಡ್ಡಲಾಗಿ ಹೊಡೆದಿರಬೇಕು (ಎತ್ತುಗೆಗೆ ಸುಮಾರು 3 ಇಂಚುಗಳಷ್ಟು ದಪ್ಪದ ಮರದ ಪಟ್ಟಿ). ಈ ಮರದ ಪಟ್ಟಿಗಳ ಮೇಲೆ ನೇಸರ ಪಟ್ಟಿಗಳನ್ನು ಹೊಡೆಯಬೇಕು (ಸಾಮಾನ್ಯವಾಗಿ ಕಪ್ಪು ಬಣ್ಣದ ತಗಡಿನ ಪಟ್ಟಿಗಳನ್ನು ಬಳಸಲಾಗುವುದು). ಈಗ ನೇಸರ ಪಟ್ಟಿ ಮತ್ತು ಮಾಡಿನ ಹಲಗೆಯ ನಡುವೆ ಸಣ್ಣ ಜಾಗ ಇರುತ್ತದೆ. ಈ ಜಾಗದಲ್ಲಿ ಗಾಳಿಯು ಸುಳಿದಾಡುತ್ತದೆ. ಗಾಳಿಯು ತೆಂಕಣ/ಬಡಗಣ ದಿಕ್ಕಿನಿಂದ ಬಡಗಣ ಇಲ್ಲವೇ ತೆಂಕಣ ದಿಕ್ಕಿನ ಮೂಲಗ ಈ ಜಾಗದ ಒಳಗೆ ಬರುತ್ತಿರುತ್ತದೆ. (ಚಿತ್ರ 2 ನ್ನು ನೋಡಿ)

ಬಿಸಿಗಾಳಿ ಕೊಳವೆ: ನೇಸರ ಪಟ್ಟಿ ಮತ್ತು ಮಾಡಿನ ನಡುವೆ ಉಂಟಾಗುವ ಬಿಸಿಗಾಳಿಯನ್ನು ಕೋಣೆಯ ಒಳಗೆ ಸಾಗಿಸಲು ದೊಡ್ಡದ್ದಾದ ಒಂದು ಕೊಳವೆಯನ್ನು ಚಿತ್ರದಲ್ಲಿ ತೋರಿಸಿದಂತೆ ಮಾಡಿಗೆ ಸೇರಿಸಬೇಕು. ಈ ಕೊಳವೆಯು ಬಿಸಿಯನ್ನು ಹೊರಹಾಕದಿರುವ ವಸ್ತುವಿನಿಂದ ಮಾಡಿರಬೇಕು.

ಬಲೆ/ಬುಟ್ಟಿ: ಇದರಲ್ಲಿ ಕಾಫಿ ಬೀಜಗಳನ್ನು ಒಣಗಿಸಲು ಹಾಕಲಾಗುವುದು. ಬಿಸಿಯನ್ನು ತಡೆದುಕೊಳ್ಳುವ ವಸ್ತುವಿನಿಂದ ಇದನ್ನು ಮಾಡಿರಬೇಕು. ಇದರ ಬುಡದಲ್ಲಿ ಸಣ್ಣ ಕಿಂಡಿಗಳಿದ್ದು, ಗಾಳಿಯ ಒಳಬರುವಂತಿರಬೇಕು (ಬಲೆಯ ಹಾಗೆ ಸಣ್ಣ ಸಣ್ಣ ಕಿಂಡಿಗಳಿರಬೇಕು)

ಬೀಸಣಿಕೆ: ಕೊಳವೆಯಿಂದ ಬಂದ ಬಿಸಿಗಾಳಿಯನ್ನು ಒಣಗಲು ಹಾಕಿರುವ ಕಾಫಿ ಬೀಜದ ಬುಟ್ಟಿಯ ಕಡೆ ಜೋರಾಗಿ ಹಾಯಿಸಲು ಮತ್ತು ಗಾಳಿಯ ಬಿಸುಪನ್ನು ಆದಷ್ಟು ಹೆಚ್ಚಿನ ಬಿಸುಪಿನಲ್ಲಿ ಕಾದಿಡಲು ಇದು ನೆರವಾಗುತ್ತದೆ.

ಬಯೋಮಾಸ್/ಉರುವಲಿನ ಒಲೆ: ಬಯೋಮಾಸ್/ಉರುವಲಿನ ಒಲೆಯಿಂದ ಹೊರಗಿನ ಗಾಳಿಯನ್ನು ಬಿಸಿಮಾಡಿ ಹಾಯಿಸ ಬಹುದಾಗಿದೆ. ಬಗೆಬಗೆಯ ಉರುವಲಿನ/ಬಯೋಮಾಸ್ ಒಲೆಗಳು ಮಾರುಕಟ್ಟೆಯಲ್ಲಿ ಸಿಗಲಿದ್ದು, ಗಾಳಿಯನ್ನು 40 ಡಿಗ್ರಿಯಿಂದ 60 ಡಿಗ್ರಿಯವರೆಗೆ ಕಾಯಿಸುವ ಸಾಮರ್‍ತ್ಯವುಳ್ಳ ಒಲೆಗಳನ್ನು ಬಳಸಬೇಕಾಗುತ್ತದೆ.

ಇದು ಹೇಗೆ ಕೆಲಸ ಮಾಡುತ್ತದೆ:

ಮೊದಲು ನೇಸರನಿಂದ ಬಿಸಿಗಾಳಿಯನ್ನು ಪಡೆದು ಒಣಗಿಸುವ ಬಗೆಯನ್ನು ನೋಡೋಣ. ನೇಸರನ ಬೆಳಕು ಪಟ್ಟಿಯ ಮೇಲೆ ಬಿದ್ದೊಡನೆ ಪಟ್ಟಿಯ ಮೇಲ್ಬಾಗ ಮತ್ತು ಕೆಳಭಾಗದಲ್ಲಿರುವ ಗಾಳಿಯು ಬಿಸಿಯಾಗುತ್ತದೆ. ನೇಸರನ ಪಟ್ಟಿಯ ಸುತ್ತ ಗಾಳಿಯ ಬಿಸುಪು ಹೆಚ್ಚಿದಂತೆ ಗಾಳಿಯು ಕಡಿಮೆ ಬಿಸುಪಿನ ಕಡೆಗೆ ನಡೆಯುತ್ತದೆ. ಬಿಸಿಗಾಳಿಯ ಕೊಳವೆಯಲ್ಲಿ ಪಟ್ಟಿಯ ಬಳಿಗಿಂತ ಕಡಿಮೆ ಬಿಸುಪು ಇರುತ್ತದೆ, ಅಲ್ಲದೇ ಬೀಸಣಿಕೆಯು ಗಾಳಿಯನ್ನು ಕೊಳವೆಯಿಂದ ಸೆಳೆದು ಕಾಫಿ ಬುಟ್ಟಿಯ ತಳಕ್ಕೆ ಸಾಗಿಸುತ್ತಿರುತ್ತದೆ.

ಇದರಿಂದ ಬೀಸಣಿಕೆಯಿರುವ ಕೊಳವೆಯ ಭಾಗದ ಗಾಳಿಯ ಒತ್ತಡವು ನೇಸರನ ಪಟ್ಟಿಯ ಕೆಳಗಿನ ಗಾಳಿಯ ಒತ್ತಡಕ್ಕಿಂತ ಕಡಿಮೆಯಾಗುತ್ತದೆ. ಹಾಗಾಗಿ ನೇಸರನ ಪಟ್ಟಿಯ ಸುತ್ತಲಿರುವ ಬಿಸಿಗಾಳಿಯು ಕೊಳವೆಯಲ್ಲಿ ಸಾಗಿ ಬೀಸಣಿಕೆಯ ಬಳಿ ಬರುತ್ತದೆ. ಈ ಬೀಸಣಿಕೆಯು ದೊಡ್ಡ ಕೊಳವೆಯಿಂದ ಬಂದ ಬಿಸಿಗಾಳಿಯನ್ನು ತನ್ನ ಮುಂದಿನ ಸಣ್ಣಕೊಳವೆಗೆ ಜೋರಾಗಿ ಸಾಗಿಸುತ್ತದೆ. ಈ ಗಾಳಿಯು ಬುಟ್ಟಿಯಲ್ಲಿರುವ ಕಾಫಿ ಬೀಜಗಳ ನಡುವೆ ಸಾಗಿ ಅದರ ಪಸೆಯನ್ನು ಆರಿಸತೊಡಗುತ್ತದೆ. ಮೇಲೆ ಬಂದ ಪಸೆ(Moisture)ಯು ಕೋಣೆಯ ಗಾಳಿಗೆ ಸೇರಿಹೋಗುತ್ತದೆ.

ಕಾಫಿ ಒಣಗಿಸುವ ಹಂತಗಳು:
ಕಾಫಿಯನ್ನು ಎರಡು ಹಂತಗಳಲ್ಲಿ ಒಣಗಿಸಲಾಗುತ್ತದೆ.
1. ಮೊದಲು ಹಸಿಯಾದ ಕಾಫಿಯಲ್ಲಿರುವ ನೀರಿನ ಅಂಶವನ್ನು ತೆಗೆಯಬೇಕಾಗುತ್ತದೆ ಅದಕ್ಕಾಗಿ ಕಾಫಿಯನ್ನು ಒಂದು ಬುಟ್ಟಿಗೆ ಹಾಕಿ ಬುಟ್ಟಿಯ ಮೇಲಿನಿಂದ ಸಾಮಾನ್ಯಗಾಳಿ ಇಲ್ಲವೇ ಕೊಂಚ ಬಿಸಿ ಇರುವ ಗಾಳಿ(40 ಡಿಗ್ರಿಗಿಂತ ಕಡಿಮೆ)ಯನ್ನು ಹಾಯಿಸಲಾಗುತ್ತದೆ. ನೀರಿನಿಂದ ಕೂಡಿರುವ ಕಾಫಿಯ ಮೇಲೆ 40 ಡಿಗ್ರಿಗಿಂತ ಬಿಸಿ ಇರುವ ಗಾಳಿಯನ್ನು ಹಾಯಿಸಿದರೆ ಅದು ಕಾಫಿಯ ಬಣ್ಣ ಮತ್ತು ಪರಿಮಳದ ಮೇಲೆ ಕೆಟ್ಟ ಪರಿಣಾಮ ಬೀರುವ ಸಾದ್ಯತೆಗಳಿವೆ. ಹೀಗೆ ಕಾಫಿಯ ಬುಟ್ಟಿಯ ಮೇಲಿನಿಂದ ಗಾಳಿಯನ್ನು ಹಾಯಿಸಿದಾಗ ಅದರ ಮೇಲಿರುವ ನೀರಿನಂಶವು ಬುಟ್ಟಿಯ ಕೆಳಗಿಳಿದು ಬುಟ್ಟಿಯ ತೂತುಗಳಲ್ಲಿ ಹರಿದು ಹೊರಹೋಗುತ್ತದೆ.

ಸುಮಾರು ಎರಡರಿಂದ ಮೂರು ಗಂಟೆಗಳ ಕಾಲ ಹೀಗೆ ಗಾಳಿಯನ್ನು ಹಾಯಿಸಿ ನೀರನ್ನು ಹೊರತೆಗೆಯಬೇಕಾಗುತ್ತದೆ. ಈ ಬಗೆಯನ್ನು ಮುನ್ನಾರಿಕೆ(ಪ್ರೀ-ಡ್ರಯಿಂಗ್) ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ 6×6 ಅಡಿಗಳಷ್ಟು ದೊಡ್ಡದಿರುವ ಕಾಫಿ ಬುಟ್ಟಿಯಲ್ಲಿ ಒಂದು ಅಡಿಗಳಷ್ಟು ದಪ್ಪನಾಗಿ ಕಾಫಿಯನ್ನು ಹರಡಿ ನೀರನ್ನು ತೆಗೆಯಲು 1.5 ಹಾರ‍್ಸ್ ಪವರ್ ಸಾಮರ್ಥ್ಯ ಹೊಂದಿರುವ ಮತ್ತು 18 ಇಂಚು ದುಂಡಳತೆ ಇರುವ ಬೀಸಣಿಕೆಯನ್ನು ಬಳಸಲಾಗುತ್ತದೆ.

2. ಎರಡನೆಯ ಹಂತದಲ್ಲಿ ನೀರನ್ನು ಆರಿಸಿದ ಕಾಫಿಯನ್ನು ಬಿಸಿಗಾಳಿ ಬರುವ ಬುಟ್ಟಿಗೆ ಹಾಕಿ ಒಣಗಿಸಲಾಗುತ್ತದೆ. ಈ ಬುಟ್ಟಿಯೂ ಕೂಡ ಮುನ್ನಾರಿಕೆಯಲ್ಲಿ ಬಳಸಿದಷ್ಟು ದೊಡ್ಡದಾಗಿಯೇ ಇದ್ದು, 40-60 ಡಿಗ್ರಿ ಬಿಸುಪಿರುವ ಗಾಳಿಯನ್ನು ಮಾತ್ರ ಬುಟ್ಟಿಯ ತಳಭಾಗದಿಂದ ಹಾಯಿಸಲಾಗುತ್ತದೆ. ಇದರಲ್ಲೂ ಕೂಡ ಬೀಸಣಿಕೆಯ ಸಾಮರ್ಥ್ಯವು 1.5 ಹಾರ‍್ಸ್ ಪವರ್ ಇದ್ದು 18 ಇಂಚು ದುಂಡಳತೆ ಹೊಂದಿರುತ್ತದೆ.

Coffee Drying 3

(ಕಾಫಿ ಒಣಗುವ ಪಟ್ಟಿಗಳು)

ಕಾಫಿ ಒಣಗುವುದು ಒಣಗಿಸುವ ಬುಟ್ಟಿ ಇಲ್ಲವೇ ಬಲೆಯ ಆದರಾದ ಮೇಲೆ ಬೇರೆ ಬೇರೆ ಪಟ್ಟಿಗಳಲ್ಲಿ ಒಣಗುತ್ತಾ ಬರುತ್ತದೆ. ಚಿತ್ರ 3ಅ ನಲ್ಲಿ ತೋರಿಸುರುವಂತೆ ಬುಟ್ಟಿಯಲ್ಲಿ ಕಾಫಿಯನ್ನು ದಪ್ಪನಾಗಿ ಹಾಕಿದ್ದಾಗ, ಬಿಸಿಗಾಳಿಯು ಕೆಳಗಿನಿಂದ ಮೇಲಕ್ಕೆ ಹರಿಯುತ್ತಿರುತ್ತದೆ. ಬಿಸಿಗಾಳಿಯು ಮೊದಲು ಬುಡದಲ್ಲಿರುವ ಕಾಫಿಯ ಪಸೆ (moisture)ಯನ್ನು ಹೀರುಕೊಳ್ಳುತ್ತಾ ಬರುತ್ತದೆ, ಹೀಗೆ ಹೀರಿಕೊಳ್ಳುವ ಗಾಳಿಯು ಬುಟ್ಟಿಯಲ್ಲಿ, ಕಾಳುಗಳ ನಡುವೆ ಮೇಲೆ ಸರಿದಂತೆ ತನ್ನ ಬಿಸುಪನ್ನು ಕಳೆದುಕೊಳ್ಳುತ್ತಾ ಹೋಗುತ್ತದೆ. ಹಾಗಾಗಿ, ಮೇಲಿನ ಭಾಗದಲ್ಲಿರುವ ಕಾಫಿಯೂ ಕೆಳಗಿನ ಭಾಗದ ಕಾಫಿಗಿಂತ ಬೇಗ ಒಣಗುವುದಿಲ್ಲ.

ಹೀಗೆ ಬುಟ್ಟಿಯಲ್ಲಿ ದಪ್ಪನಾಗಿ ಹಾಸಿ ಒಣಗಿಸುವ ಬಗೆಯಲ್ಲಿ ಮೊದಲಿಗೆ ಮೂರು ಪಟ್ಟಿಗಳು ಮೂಡುತ್ತವೆ ಅವು ಒಣಗಿದ ಪಟ್ಟಿ, ಒಣಗುತ್ತಿರುವ ಪಟ್ಟಿ ಮತ್ತು ಒಣಗಿರದ ಪಟ್ಟಿಗಳು. ಈ ಪಟ್ಟಿಗಳ ಅಗಲವು ಕಾಫಿಯಲ್ಲಿರುವ ಪಸೆ, ಹರಿಯುತ್ತಿರುವ ಗಾಳಿಯ ಬಿಸುಪು ಮತ್ತು ಗಾಳಿಯ ವೇಗಕ್ಕೆ ತಕ್ಕಂತೆ ಬೇರೆ ಬೇರೆಯಾಗಿರುತ್ತದೆ. ಹಾಗಾಗಿ ಕಾಫಿಯ ಸರಿಯಾದ ಒಣಗುವಿಕೆಗೆ ಬುಟ್ಟಿಯಲ್ಲಿರುವ ಕಾಳುಗಳನ್ನು ಕೆಲವು ಗಂಟೆಗಳ ಅಂತರದಲ್ಲಿ ಮಗುಚುತ್ತಿರಬೇಕು. ಆಗ ಒಣಗಿದ ಕಾಫಿ ಮೇಲೆ ಬಂದು ಒಣಗಿರದ ಕಾಫಿ ತಳಕ್ಕೆ ಹೋಗಿ ಒಣಗಲಾರಂಬಿಸುತ್ತದೆ.

ಇನ್ನು ತೆಳುವಾಗಿ ಹಾಸಿ ಒಣಗಿಸುವ ಬಗೆಯಲ್ಲಿ ಚಿತ್ರ 3ಇ ನಲ್ಲಿ ತೋರಿಸುರುವಂತೆ ಕೇವಲ ಒಂದೇ ಪಟ್ಟಿ ಇದ್ದು ಅದು ಒಣಗುತ್ತಿರುವ ಪಟ್ಟಿಯಾಗಿರುತ್ತದೆ. ಗಾಳಿಗೆ ಕಾಳುಗಳ ನಡುವೆ ಸಾಗಲು ಸಾಕಷ್ಟು ಜಾಗ ಇರುವುದರಿಂದ ಇದು ಬಲೆ/ಬುಟ್ಟಿಯಲ್ಲಿ ಹರಡಿರುವ ಎಲ್ಲಾ ಕಾಳುಗಳನ್ನು ಒಂದೇ ಬಗೆಯಲ್ಲಿ ಒಣಗಿಸುತ್ತದೆ.

ಕಾಫಿಯನ್ನು ಒಣಗಿಸುವ ಬುಟ್ಟಿಯ ಅಳತೆ, ಬೀಸಣಿಕೆಯ ಸಾಮರ‍್ತ್ಯ ಎಲ್ಲವೂ ಮತ್ತು ಒಣಗಿಸಲು ಬೇಕಾದ ಜಾಗವು ಬೆಳೆಗಾರರು ವರುಶಕ್ಕೆ ಎಷ್ಟು ಬೆಳೆ ಬೆಳೆಯುತ್ತಾರೆ ಎಂಬುದರ ಮೇಲೆ ತೀರ‍್ಮಾನಿಸಬೇಕಾಗುತ್ತದೆ. ಹಲವು ಅರಕೆಗಳ ಮೂಲಕ ಈ ಕೆಳಗಿನ ಸಲಹೆಗಳನ್ನು ನೀಡಲಾಗಿದೆ.

  1. ವರುಶಕ್ಕೆ ಒಬ್ಬ ಬೆಳೆಗಾರ 200 ಮೂಟೆ (10000 ಕಿಲೋ) ಕಾಫಿ ಬೆಳೆಯುತ್ತಿದ್ದರೆ, ಆತ 10×10 ಆಡಿಗಳಷ್ಟು ದೊಡ್ಡ ಬುಟ್ಟಿಗಳಲ್ಲಿ ಒಣಗಿಸಬೇಕಾಗುತ್ತದೆ (ಇದರಲ್ಲಿ ಸುಮಾರು 250 ಕಿಲೋ ಕಾಫಿ ಹಿಡಿಯುತ್ತದೆ).
  2. ಬೀಸಣಿಕೆಯ ಸಾಮರ‍್ತ್ಯವು 100 ಸಿ. ಎಪ್. ಎಮ್ (ಕ್ಯುಬಿಕ್ ಪೀಟ್ ಪರ್‍ ಮಿನಿಟ್) ಪರ್ ಸ್ಕ್ವಯರ್ ಪರ್ ಡ್ರಯಿಂಗ್ ಏರಿಯಾ. ಅಂದರೆ 10×10 ಅಡಿಗಳಷ್ಟು ದೊಡ್ಡದಾದ ಬುಟ್ಟಿಯಲ್ಲಿ ಒಂದು ಅಡಿಗಳಷ್ಟು ದಪ್ಪನಾಗಿ ಹರಡಿರುವ ಕಾಫಿಗೆ ಒಂದು ಇಂಚಿನಷ್ಟು ಒತ್ತಡದಲ್ಲಿ ಗಾಳಿಯನ್ನು ಹಾಯಿಸಲು 1000 ಸಿ.ಎಪ್.ಎಮ್ ಸಾಮರ್ಥ್ಯ ಹೊಂದಿರುವ ಬೀಸಣಿಕೆ ಬಳಸಬೇಕಾಗುತ್ತದೆ.
  3. ಗಾಳಿಯನ್ನು 10 ರಿಂದ 60 ಡಿಗ್ರೀ ಬಿಸುಪಿನಲ್ಲಿ ತಡೆಯಿಲ್ಲದೇ ಹರಿಸಿದರೆ, 10×10 ಬುಟ್ಟಿಯಲ್ಲಿ ಒಂದು ಅಡಿ 24 ಗಂಟೆಗಳಲ್ಲಿ ಕಾಫಿಯ ಪಸೆಯು 10% ರಿಂದ 12%ಗೆ ಇಳಿದು, ಕಾಫಿಯು ಒಣಗಿ ಸಿದ್ದವಾಗುತ್ತದೆ. ಇಶ್ಟೇ ಕಾಫಿಯನ್ನು ಅಂಗಳದಲ್ಲಿ ನೇರವಾದ ನೇಸರನ ಬಿಸಿಲಿನಲ್ಲಿ ಒಣಗಿಸಲು ಸುಮಾರು 4 ರಿಂದ 5 ದಿನಗಳು ತಗಲುತ್ತವೆ. ಮತ್ತು ಅದಕ್ಕೆ ಹೆಚ್ಚಿನ ಮಯ್ಗೆಲಸದ ಅವಶ್ಯಕತೆ ಇದೆ. ಅಲ್ಲದೇ ಪಡುವಣ ಬೆಟ್ಟದ ಸಾಲಿನಲ್ಲಿ ಡಿಸೆಂಬರ್‍ ಹಾಗು ಜನವರಿ ಮೊದಲವಾರ ಕೆಲವೊಮ್ಮೆ ಮಳೆಯಾಗುವ ಸಾದ್ಯತೆಗಳು ಇರುವುದರಿಂದ ಕಾಫಿ ಯನ್ನು ಒಣಗಿಸಲು ಹರಸಾಹಸ ಪಡಬೇಕಾಗುತ್ತದೆ.

ಕಾಫಿ ಬೆಳೆಯುವ ಜಾಗದಲ್ಲಿ ಎಲ್ಲಾ ದಿನಗಳೂ ಒಂದೇ ಬಗೆಯ ಬಿಸಿಲು ಇರುವುದಿಲ್ಲ, ಹಾಗಾಗಿ 40 ರಿಂದ 60 ಡಿಗ್ರಿ ಬಿಸುಪಿನಲ್ಲಿ ಯಾವಗಲೂ ಗಾಳಿಯನ್ನು ಹಾಯಿಸಲು ಆಗುವುದಿಲ್ಲ ಇದಕ್ಕಾಗಿ ಬಯೋಮಾಸ್/ಉರುವಲಿನ ಒಲೆಯ ನೆರವನ್ನು ಪಡೆಯಬಹುದು. ಇರುಳಿನಲ್ಲಿ ನೇಸರ ಬಿಸಿಲು ಸಿಗದೇ ಇರುವುದರಿಂದ ಈ ಒಲೆಗಳ ನೆರವಿನಿಂದ ಬಿಸಿಗಾಳಿಯನ್ನು ಹಾಯಿಸಿ ಒಣಗಿಸಬಹುದು. ಹೀಗೆ ಬಿಟ್ಟಿಯಾಗಿ ಸಿಗುವ ನೇಸರನ ಬಿಸಿಲು ಮತ್ತು ಕಡಿಮೆ ಬೆಲೆಯಲ್ಲಿ ಸಿಗುವ ಉರುವಲುಗಳನ್ನು ಬಳಸಿ ಬಿಸಿಗಾಳಿಯನ್ನು ಒದಗಿಸಿ ಕಾಫಿಯನ್ನು ಕಡಿಮೆ ಮಯ್ಗೆಲಸ ಮತ್ತು ಹೆಚ್ಚಿನ ಗುಣಮಟ್ಟದಲ್ಲಿ ಒಣಗಿಸಬಹುದು.

ಬೆಳೆಗಾರರು ವರುಶಕ್ಕೆ ಬೆಳೆಯುವ ಕಾಫಿಯ ಅಳತೆ, ಆ ಜಾಗದಲ್ಲಿನ ಬಿಸುಪು ಮತ್ತು ಹಣಕಾಸಿನ ವಿವರಗಳನ್ನು ಕಲೆಹಾಕಿ ಪರಿಣಾಮಕಾರಿಯಾದ ಒಣಗಿಸುವ ಬಗೆಗಳನ್ನು ಕಟ್ಟಿಕೊಳ್ಳಬಹುದು. ಹಾಗೆಯೇ ಈ ಬಗೆಯಿಂದ ಕಾಫಿ ಒಂದೇ ಅಲ್ಲ ಬೇರೆ ಬೇರೆ ಕಾಳುಗಾಳನ್ನು ಒಣಗಿಸುವ ಬಗೆಗಳನ್ನು ಕಟ್ಟಿಕೊಳ್ಳಬಹುದು.

 

(ಮಾಹಿತಿಸೆಲೆ: academic.uprm.eduaee-intec.at)

ಕಡಲಾಳದಲ್ಲಿ ಮುತ್ತುಗಳು ಹೇಗೆ ಮೂಡುತ್ತವೆ?

ರತೀಶ ರತ್ನಾಕರ.

pearls-in-oyster-shell

‘ನುಡಿದರೆ ಮುತ್ತಿನ ಹಾರದಂತಿರಬೇಕು…’ ಹನ್ನೆರಡನೇ ಶತಮಾನದಲ್ಲಿ ಹುಟ್ಟಿದ ವಚನಗಳನ್ನು ಕೇಳಿದರೆ ಮುತ್ತು-ರತ್ನಗಳ ಪರಿಚಯ ನಮಗೆ ತುಂಬಾ ಹಿಂದಿನಿಂದ ಇರುವುದು ತಿಳಿಯುತ್ತದೆ. ಕಡಲ ತೀರದಲ್ಲಿ ಮಾನವನು  ಊಟಕ್ಕಾಗಿ ಹುಡುಕಾಟ ನಡೆಸುತ್ತಿದ್ದಾಗ ಮುತ್ತುಗಳು ಕಣ್ಣಿಗೆ ಬಿದ್ದವು, ಬಳಿಕ ಅವು ಒಡವೆಗಳಾಗಿ ನಮ್ಮ ಬದುಕಿನಲ್ಲಿ ಬಳಕೆಗೆ ಬಂದವು. ಚೀನಾದ ಹಳಮೆಯ ಪ್ರಕಾರ ಸುಮಾರು  2300 BCE ಯಲ್ಲಿ ಮುತ್ತುಗಳ ಪರಿಚಯವಿತ್ತೆಂದು ಹೇಳಲಾಗುತ್ತದೆ. ಇಂಡಿಯಾದ ಹಳಮೆಯಲ್ಲಿ ಮುತ್ತುಗಳ ಬಗ್ಗೆ ದೊರೆತಿರುವ ಮೊದಲ ಗುರುತು ಎಂದರೆ,  600 BCE ಯಲ್ಲಿ ತೆಂಕಣ ಇಂಡಿಯಾವನ್ನು ಆಳುತ್ತಿದ್ದ ಪಾಂಡ್ಯರು ಮುತ್ತುಗಳ ವ್ಯಾಪಾರ ಮಾಡುತ್ತಿದ್ದರು ಎಂಬುದು. ಒಟ್ಟಾರೆಯಾಗಿ ಸುಮಾರು 4000 ವರುಶಗಳ ಹಿಂದಿನಿಂದ ಮುತ್ತುಗಳು ಬಳಕೆಯಲ್ಲಿರುವುದನ್ನು ನಾವು ಕಾಣಬಹುದು.

ತನ್ನದೇ ಆದ ನೋಟ, ಹೊಳಪು ಹಾಗು ಎಣೆಯಿಲ್ಲದ ಚೆಲುವಿನಿಂದ ಮುತ್ತುಗಳು ಬೆಲೆಬಾಳುವ ಒಡವೆಗಳಾಗಿವೆ. ಹಳಮೆಯ ಹಲವಾರು ದೊರೆಗಳ, ಒಡತಿಯರ ಕಿರೀಟದಲ್ಲಿ ಇವು ಮಿನುಗಿವೆ. ಕಡಲ ಆಳದಲ್ಲಿರುವ ಚಿಪ್ಪಿನಲ್ಲಿ ಮುತ್ತುಗಳು ಹೇಗೆ ಮೂಡುವುದು ಎಂಬುವುದಕ್ಕೆ ಹಲವಾರು ಕಟ್ಟುಕತೆಗಳೂ ಇವೆ. ಅವುಗಳಲ್ಲಿ ಒಂದು ಕತೆಯೆಂದರೆ ‘ಸ್ವಾತಿಮಳೆಯ ಹನಿಗಳು ಕಡಲಿಗೆ ಬಿದ್ದು ಆ ಹನಿಗಳು ಚಿಪ್ಪಿನಲ್ಲಿ ಕೂತು ಮುತ್ತುಗಳಾಗುತ್ತವೆ’ ಎಂಬುದು. ಮೊದಲೇ ಹೇಳಿದಂತೆ ಇದೊಂದು ಕತೆ ಆದರೆ ದಿಟವಾಗಿಯು ಮುತ್ತುಗಳು ಆಗುವುದು ಬೇರೆಯ ಬಗೆಯಲ್ಲಿ. ಸ್ವಾತಿಮಳೆಗೂ ಮುತ್ತಿಗೂ ಯಾವ ನಂಟು ಇಲ್ಲ!

ಕಡಲಿನಲ್ಲಿರುವ ಕೆಲವು ಬಗೆಯ ಮುತ್ತಿನ ಚಿಪ್ಪುಸಿರಿ(pearl oyster)ಯ ಚಿಪ್ಪಿನ ಒಳಗೆ ಮರಳಿನ ಕಣ ಇಲ್ಲವೇ ಚಿಕ್ಕ ಹೊರಕುಳಿ(parasite)ಗಳು ಹೊಕ್ಕುತ್ತವೆ. ಆ ಹೊರಕುಳಿಗಳು ಚಿಪ್ಪುಸಿರಿಯ ಮೈಯೊಳಗೆ ಬಂದು ತೊಂದರೆಯನ್ನು ನೀಡುವ ಸಾಧ್ಯತೆಗಳಿರುತ್ತವೆ. ಈ ತೊಂದರೆಯಿಂದ ತಪ್ಪಿಸಿಕೊಂಡು ತನ್ನ ಮೈಯನ್ನು ಕಾಪಾಡಿಕೊಳ್ಳಲು ಚಿಪ್ಪುಸಿರಿಯು ಮರಳಿನಕಣ/ಹೊರಕುಳಿಯನ್ನು, ಕ್ಯಾಲ್ಸಿಯಂ ಕಾರ‍್ಬೊನೇಟ್‍ನಿಂದಾದ ಮಡಿಕೆ(layer)ಗಳಿಂದ ಸುತ್ತುವರೆಯುತ್ತದೆ. ಹೀಗೆ ಹಲವಾರು ಮಡಿಕೆಗಳಿಂದ ಸುತ್ತುವರೆದಿರುವ ಹೊರಕುಳಿಯು ಚಿಪ್ಪುಸಿರಿಯ ಮಯ್ಯಿಗೆ ಯಾವುದೇ ತೊಂದರೆಯನ್ನು ನೀಡಲು ಆಗುವುದಿಲ್ಲ. ಹೀಗೆ ಹೊರಕುಳಿ ಮತ್ತು ಅದನ್ನು ಸುತ್ತುವರೆದಿರುವ ಕ್ಯಾಲ್ಸಿಯಂ ಕಾರ‍್ಬೊನೇಟ್ ನ ಮಡಿಕೆಗಳು ಗಟ್ಟಿಯಾಗಿ ‘ಮುತ್ತು’ಗಳಾಗಿ ಮಾರ್ಪಾಡುಗೊಳ್ಳುತ್ತವೆ.

ಮುತ್ತುಗಳನ್ನು ಮೂಡಿಸುವ ಚಿಪ್ಪುಸಿರಿಗಳು:
ಎಲ್ಲಾ ಬಗೆಯ ಚಿಪ್ಪುಸಿರಿಗಳಲ್ಲಿ ಮುತ್ತುಗಳು ಸಿಗುವುದಿಲ್ಲ. ಮುತ್ತುಗಳನ್ನು ಕೊಡುವ ಚಿಪ್ಪಿನ ಕೆಲವು ಪಂಗಡಗಳೆಂದರೆ;
-ಪಿಂಕ್ಟಡ ವುಲ್ಗರಿಸ್ (Pinctada vulgaris)
-ಪಿಂಕ್ಟಡ ಮಾರ‍್ಗರಿಟಿಪೆರಾ (Pinctada margaritifera)
-ಪಿಂಕ್ಟಡ ಕೆಮ್ನಿಟ್ಜಿ (Pinctada chemnitzi)

ಪಿಂಕ್ಟಡ ತಳಿಯಲ್ಲಿ ಇರುವ ಎಲ್ಲಾ ಪಂಗಡಗಳು(species) ಮುತ್ತುಗಳನ್ನು ಮೂಡಿಸುತ್ತವೆ.

ಮುತ್ತುಗಳನ್ನು ಮೂಡಿಸುವ ಚಿಪ್ಪುಸಿರಿಯ ಮೈ ಭಾಗಗಳು:

Thitta 2ಚಿಪ್ಪುಸಿರಿಯ ಹೊರ ಪದರವು ಗಟ್ಟಿಯಾದ ಚಿಪ್ಪಿನಿಂದ ಕೂಡಿರುತ್ತದೆ. ಈ ಚಿಪ್ಪಿನ ಪದರದ ಕೆಳಗೆ ತೆಳುವಾದ ಹೊದಿಕೆ(mantle) ಇರುತ್ತದೆ, ಚಿಪ್ಪು ಹಾಗು ಹೊದಿಕೆಯ ನಡುವೆ ಮುತ್ತುಗಳು ಮೂಡುತ್ತವೆ.

ಗಟ್ಟಿಯಾದ ಚಿಪ್ಪಿನ ಸೀಳುನೋಟದಲ್ಲಿ ಮೂರು ಮಡಿಕೆಗಳನ್ನು ನೋಡಬಹುದು;
1. ಚಿಪ್ಪುಸಿಪ್ಪೆ (Periostracum): ಇದು ಚಿಪ್ಪಿನ ಮೇಲ್ಪರೆ. ಕಾನ್ಕಿಯೋಲಿನ್ (Conchiolin) ಎನ್ನುವ ತಿರುಳಿನಿಂದ ಮಾಡಲ್ಪಟ್ಟಿರುತ್ತದೆ.
2. ಒಡೆಕದ ಮಡಿಕೆ(Prismatic layer): ಈ ಮಡಿಕೆಯು ಕ್ಯಾಲ್ಸಿಯಂ ಕಾರ‍್ಬೊನೇಟ್ ನ ಸಣ್ಣ ಸಣ್ಣ ಹರುಳಗಳಿಂದ ಆಗಿದೆ. ಈ ಹರಳುಗಳು ಒಂದರ ಮೇಲೊಂದು ನೆಟ್ಟಗೆ ಕಂಬದಂತೆ ಜೋಡಿಸಲ್ಪಟ್ಟ್ರಿರುತ್ತವೆ. ಒಂದೊಂದು ಕಂಬಗಳು ಕಾನ್ಕಿಯೋಲಿನ್ ತಿರುಳಿನಿಂದ ಬೇರ‍್ಪಟ್ಟಿರುತ್ತವೆ. ಈ ಮಡಿಕೆಯು ಚಿಪ್ಪಿಗೆ ಬೇಕಾದ ಗಟ್ಟಿತನವನ್ನು ಒದಗಿಸುತ್ತವೆ.
3. ಮುತ್ತೊಡಲ ಮಡಿಕೆ (Nacreous Layer): ಚಿಪ್ಪಿನ ಒಳಗಿನ ಮಡಿಕೆ ಇದು. ಇದನ್ನು ಮುತ್ತಿನ ತಾಯಿ (mother of pearl) ಇಲ್ಲವೇ ಮುತ್ತಿನ ಒಡಲು ಎಂದು ಕರೆಯುತ್ತಾರೆ. ಈ ಮಡಿಕೆಯೇ ಮುತ್ತನ್ನು ಮೂಡಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಕ್ಯಾಲ್ಸಿಯಂ ಕಾರ‍್ಬೊನೇಟ್ ಮತ್ತು ಕಾನ್ಕಿಯೋಲಿನ್ ನ ಸಣ್ಣ ಮಡಿಕೆಗಳು ಒಂದರ ಮೇಲೆ ಒಂದರಂತೆ ಇದರಲ್ಲಿರುತ್ತವೆ.

thitta 1

ಹೊದಿಕೆ(Mantle)ಯ ಭಾಗಗಳು: ಹೊದಿಕೆಯು ಕೂಡ ಮೂರು ಮಡಿಕೆಗಳನ್ನು ಹೊಂದಿದೆ.
1. ಕಂಬದಂತಿರುವ ಮೇಲ್ಪರೆ (Columnar epithelium): ಮುತ್ತೊಡಲನ್ನು (Nacre) ಒಸರುವ ಸುರಿಗೆಗಳನ್ನು ಇದು ಹೊಂದಿದೆ.
2. ಕೂಡಿಸುವ ಗೂಡುಕಟ್ಟಿನ ಮಡಿಕೆ (Connective tissue layer:): ಕೂಡಿಸುವ ಗೂಡುಕಟ್ಟುಗಳನ್ನು ಹೊಂದಿರುವ ಮಡಿಕೆ.
3. ಮುಂಚಾಚಿನ ಮೇಲ್ಪರೆ (Ciliated epithelium): ಲೋಳೆಯನ್ನು ಒಸರುವ ಸೂಲುಗೂಡನ್ನು ಇದು ಹೊಂದಿದೆ.

ಮುತ್ತು ಮೂಡುವ ಹಂತಗಳು:

Thitta 31. ಮರಳಿನ ಕಣ ಇಲ್ಲವೇ ಹೊರಕುಳಿಯೊಂದು ಚಿಪ್ಪಿನ ಗಟ್ಟಿಯಾದ ಮೇಲ್ಪರೆಯನ್ನು ಕೊರೆದುಕೊಂಡು ಒಳಗೆ ಬರುತ್ತದೆ.
2. ಇಂತಹ ಹೊರಕುಳಿಯು ಚಿಪ್ಪಿನ ಒಳಭಾಗ ಮತ್ತು ಹೊದಿಕೆಯ ನಡುವೆ ಸಿಕ್ಕಿಹಾಕಿಕೊಳ್ಳುತ್ತದೆ.
3. ಎರಡು ಮಡಿಕೆಗಳ ನಡುವೆ ಇರುವ ಕಣವು ಮೈಯಲ್ಲಿ ಕಿರಿಕಿರಿಯನ್ನು ಉಂಟುಮಾಡುತ್ತದೆ ಇದರಿಂದ ಕಾಪಾಡಿಕೊಳ್ಳಲು ಹೊದಿಕೆಯ ಕಂಬದಂತಿರುವ ಮೇಲ್ಪರೆಯು (Columnar epithelium) ಹೆಚ್ಚು ಹೆಚ್ಚು ಮುತ್ತೊಡಲನ್ನು(Nacre) ಮುತ್ತೊಡಲ ಮಡಿಕೆಗೆ ಒಸರುತ್ತದೆ.
4. ಮುತ್ತೊಡಲು ಹಲವು ಚಿಕ್ಕ ಚಿಕ್ಕ ಮಡಿಕೆಗಳಾಗಿ ಕಣವನ್ನು ಸುತ್ತುವರಿಯುತ್ತವೆ. ಹೊದಿಕೆಯ ಮೇಲ್ಪರೆಯು ಮುತ್ತೊಡಲು ಸುತ್ತುವರೆದಿರುವ ಕಣವನ್ನು ಮೇಲಿನ ಚಿತ್ರದಲ್ಲಿ ತೋರಿಸಿದಂತೆ ಸುತ್ತುವರೆದು ಹೊದಿಕೆಯತ್ತ ಎಳೆದುಕೊಳ್ಳುತ್ತದೆ.
5. ಕೊನೆಗೆ ಮುತ್ತೊಡಲ ಪದರಗಳು ಗಟ್ಟಿಯಾಗಿ ‘ಮುತ್ತು’ ಮೂಡುತ್ತದೆ.
6. ಸುಮಾರು 90% ನಷ್ಟು ಮುತ್ತು ಕ್ಯಾಲ್ಸಿಯಂ ಕಾರ‍್ಬೋನೇಟ್, 5% ಕಾನ್ಕಿಯೋಲಿನ್ ಮತ್ತು 5% ನೀರನ್ನು ಹೊಂದಿರುತ್ತದೆ.

ಮುತ್ತು ಎಷ್ಟು ದೊಡ್ಡದಿಂದೆ ಎಂಬುದು ಹೊರಕುಳಿಯು ಎಷ್ಟು ಕಿರಿಕಿರಿ ಉಂಟುಮಾಡುತ್ತದೆ ಎಂಬುದನ್ನು ಅವಲಂಬಿಸಿರುತ್ತದೆ. ಹೆಚ್ಚು ಕಿರಿಕಿರಿಯಾದರೆ ಹೆಚ್ಚು ಹೆಚ್ಚು ಮುತ್ತೊಡಲನ್ನು ಒಸರಿ, ಹಲವು ಮಡಿಕೆಗಳಿಂದ ಕಣವನ್ನು ಸುತ್ತುವರೆದು ದೊಡ್ಡದಾದ ಮುತ್ತನ್ನು ಮೂಡಿಸುತ್ತದೆ. ಒಂದು ಸಾಮಾನ್ಯ ಮುತ್ತು ಮೂಡಲು ಸುಮಾರು 3-5 ವರುಶ ತಗುಲುತ್ತದೆ.

ಕಡಲಿನಲ್ಲಿ ಸಿಗುವ ಎಲ್ಲಾ ಮುತ್ತುಗಳು ದುಂಡಗಿರುವುದಿಲ್ಲ, ಮರಳಿನ ಕಣ/ಹೊರಕುಳಿಯ ಆಕಾರ ಮತ್ತು ಚಿಪ್ಪಿನೊಳಗೆ ಮೂಡುವ ಮುತ್ತೊಡಲ ಮಡಿಕೆಗಳ ಆದಾರದ ಮೇಲೆ ಮುತ್ತುಗಳು ಬೇರೆ ಬೇರೆ ಆಕಾರದಲ್ಲಿ ಇರುತ್ತವೆ. ದುಂಡಾಗಿರುವ ಮುತ್ತಿಗೆ ಎಲ್ಲಿಲ್ಲದ ಬೇಡಿಕೆ ಇದೆ. ಹಲವಾರು ವರುಶಗಳಿಂದ ಮುತ್ತಿನ ಉದ್ದಿಮೆ ಬೆಳೆಯುತ್ತಿರುವುದರಿಂದ, ಚಿಪ್ಪುಸಿರಿಗಳ ಸಾಕಣೆಯನ್ನು ಮಾಡಿ ಮುತ್ತುಗಳನ್ನು ಪಡೆಯುತ್ತಾರೆ. ಇದರಲ್ಲಿ ಸಾಕಿದ ಚಿಪ್ಪುಸಿರಿಗಳ ಚಿಪ್ಪಿಗೆ ಹೊರಕುಳಿಗಳು ಹೊಕ್ಕುವಂತೆ ಮಾಡಿ ಮುತ್ತುಗಳನ್ನು ಮೂಡಿಸುವಂತೆ ಮಾಡಲಾಗುತ್ತದೆ. ಉದ್ದಿಮೆಯ ಗುರಿಯಿಂದ ಬೆಳೆಯುವ ಮುತ್ತುಗಳು ಕಡಲಿನಲ್ಲಿ ತಾನಾಗಿಯೇ ಸಿಗುವ ಮುತ್ತುಗಳಿಗಿಂತ ಕಡಿಮೆ ಗುಣಮಟ್ಟದಲ್ಲಿರುತ್ತವೆ.

(ಮಾಹಿತಿ ಸೆಲೆ: yourarticlelibrary.comwikipedia)
(ಚಿತ್ರ ಸೆಲೆ: yourarticlelibrary.comsaffronart.com)

ಜೇನುಹುಳ – ಕೆಲವು ಸೋಜಿಗದ ಸಂಗತಿಗಳು!

ರತೀಶ ರತ್ನಾಕರ.

The Honey Bee: Our Friend in Danger | Finger Lakes Land Trust

 

ಸಾಮಾನ್ಯ ಹುಳದಂತೆ ಕಾಣುವ ಜೇನುಹುಳದ ಬಾಳ್ಮೆ ಹಲವು ಸೋಜಿಗದಿಂದ ಕೂಡಿದೆ. ತನ್ನ ಪಾಡಿಗೆ ತಾನು ಗೂಡನ್ನು ಕಟ್ಟಿ, ಹೂವನ್ನು ಹುಡುಕಿ, ಸಿಹಿಯನ್ನು ಕೂಡಿ, ಒಗ್ಗಟ್ಟಿನ ಬಾಳ್ಮೆ ನಡೆಸುತ್ತಾ, ಬದುಕಿನ ಬಂಡಿಯ ಓಡಿಸುವ ಈ ಹುಳಗಳು ಬೆರಗಿನ ಗಣಿಗಳು. ಇವುಗಳ ಬದುಕಿನ ಬಗೆಯನ್ನು ಅರಿಯುವ ಪ್ರಯತ್ನ ಮಾಡುತ್ತಾ ಹಲವು ಬರಹಗಳು ಈಗಾಗಲೇ ಅರಿಮೆಯಲ್ಲಿ ಮೂಡಿಬಂದಿವೆ. ಬನ್ನಿ, ಇವುಗಳ ಬದುಕಿನ ಮತ್ತಷ್ಟು ಸೋಜಿಗದ ಸಂಗತಿಗಳನ್ನು ಚುಟುಕಾಗಿ ತಿಳಿಯೋಣ.

“ಹನಿಮೂನ್” (honeymoon) ಎಂಬ ಪದದ ಹುಟ್ಟು ಮತ್ತು ಆಚರಣೆ ಹೇಗಾಯಿತು ಗೊತ್ತೇ? – ಸುಮಾರು 8 ನೇ ಶತಮಾನದಲ್ಲಿ ಯುರೋಪಿನಲ್ಲಿದ್ದ ‘ನಾರ್ಸ್ ಮತ'(Norse religion)ದಲ್ಲಿ ಒಂದು ಕಟ್ಟುಪಾಡು ಇತ್ತು. ಅದರಲ್ಲಿ ಮದುವೆಯಾದ ಹೊಸ ಜೋಡಿಗಳಿಗೆ ಒಂದು ತಿಂಗಳ ಕಾಲ ‘ಜೇನು ಹೆಂಡ'(fermented honey) ಅಂದರೆ ಜೇನುತುಪ್ಪಕ್ಕೆ ನೀರನ್ನು ಸೇರಿಸಿ ಹುದುಗೆಬ್ಬಿಸಿ ಕೊಡಲಾಗುತ್ತಿತ್ತು. ಜೇನಿನಿಂದ ಮಾಡಿದ ಹೆಂಡವನ್ನು ಹೊಸ ಜೋಡಿಗಳಿಗೆ ಕೊಡುತ್ತಿದ್ದ ಒಂದು ತಿಂಗಳ ಕಾಲಕ್ಕೆ ‘ಹನಿಮೂನ್'(honey + moon [-means month]) (ಜೇನು ತಿಂಗಳು/ಸಿಹಿ ತಿಂಗಳು) ಎಂದು ಅವರು ಕರೆಯುತ್ತಿದ್ದರು. ಇದೇ ಜೇನಿಗೂ ‘ಹನಿಮೂನ್’ ಗೂ ಇರುವ ನಂಟು!

ಜೇನುತುಪ್ಪದಲ್ಲಿ ಯಾವುದೇ ಸೀರುಸಿರುಗಳು (micro organisms) ತನ್ನ ಬದುಕನ್ನು ನಡೆಸಲು ಆಗುವುದಿಲ್ಲ ಆದ್ದರಿಂದ ಅದನ್ನು ಕೊಳೆಯಳಿಕ(antiseptic)ವಾಗಿ ಬಳಸುತ್ತಾರೆ. ಇದಲ್ಲದೇ ಇದು ಹೈಡ್ರೋಜನ್ ಪೆರಾಕ್ಸೈಡ್ ಅನ್ನು ಹೊಂದಿರುವುದರಿಂದ ಹೆಣಗಳು ಕೊಳೆಯದಂತೆ ಕಾಪಾಡಲು ಬಳಸುವ ಅಡಕಗಳಲ್ಲಿ ಹಿಂದಿನ ಕಾಲದಲ್ಲಿ ಬಳಸಲಾಗುತ್ತಿತ್ತು. ‘ಅಲೆಕ್ಸಾಂಡರ‍್‘ ದೊರೆಯ ಹೆಣವನ್ನು ಕೊಳೆಯದಂತೆ ಕಾಪಾಡಲು ಕೂಡ ಜೇನುತುಪ್ಪವನ್ನು ಒಂದು ಅಡಕವನ್ನಾಗಿ ಬಳಸಲಾಗಿತ್ತು.

ಬನ್ನಿ, ಮತ್ತಷ್ಟು ಬೆರಗಿನ ತುಣುಕುಗಳನ್ನು ಸವಿಯೋಣ.

ಜೇನುಹುಳ:

  • ಇರುವೆ ಮತ್ತು ಕಡಜದ ಹುಳಗಳು ಆದಮೇಲೆ ಕೀಟಗಳ ಹೆಚ್ಚೆಣಿಕೆಯಲ್ಲಿ ಜೇನುಹುಳಗಳಿಗೆ ಮೂರನೇ ಜಾಗ
  • ಒಂದು ಗೂಡಿನಲ್ಲಿ ಒಡತಿ, ಗಂಡು ಮತ್ತು ದುಡಿಮೆಗಾರ ಹುಳಗಳೆಂಬ ಮೂರು ಬಗೆಯ ಹುಳಗಳಿರುತ್ತವೆ
  • ದುಡಿಮೆಗಾರ ಹುಳಗಳು 45 ದಿನಗಳು ಬದುಕಿದ್ದರೆ ಒಡತಿ ಜೇನುಹುಳವು 5 ವರುಶದವರೆಗೆ ಬದುಕಬಲ್ಲದು
  • ಒಡತಿ ಹುಳವು ಒಂದು ದಿನಕ್ಕೆ 1500 ಕ್ಕಿಂತ ಹೆಚ್ಚು ಮೊಟ್ಟೆಗಳನ್ನು ಇಡುತ್ತದೆ
  • ಜೇನುಹುಳಗಳು ಗಂಟೆಗೆ 15 ಮೈಲಿ ಉರುಬಿನಲ್ಲಿ ಹಾರಬಲ್ಲವು
  • ಜೇನುಹುಳದ ರೆಕ್ಕೆಗಳು ನಿಮಿಷಕ್ಕೆ 11, 400 ಸಲ ಬಡಿಯುತ್ತವೆ. ಹುಳಗಳ ‘ಜುಂಯ್’ ಎನ್ನುವ ಸದ್ದಿಗೆ ಈ ರೆಕ್ಕೆಯ ಬಡಿತವೇ ಕಾರಣ
  • ಇಡಿ ನೆಲದಲ್ಲಿರುವ ಕೀಟಗಳಲ್ಲಿ ಜೇನುಹುಳಗಳ ಊಟ(ಜೇನು)ವನ್ನು ಮಾತ್ರ ಮಾನವ ತನ್ನ ತಿನಿಸಾಗಿ ಬಳಸುತ್ತಾನೆ
  • ಜೇನುಹುಳಗಳು ಗೂಡಿನಿಂದ ಸಾಮಾನ್ಯವಾಗಿ ಸುಮಾರು 5 ಕಿ.ಮೀ ದೂರದವರೆಗೆ ಹಾರುತ್ತವೆ. ಮೇವಿಗಾಗಿ ಗೂಡಿನಿಂದ ಸುಮಾರು 10. ಕೀ. ಮೀ. ದೂರದವರೆಗೆ ಇವು ಹಾರಬಲ್ಲವು
  • ತನ್ನ ಗೂಡನ್ನು ಕಟ್ಟಲು ಬೇಕಾದ ಜೇನುಮೇಣವನ್ನು ತನ್ನ ಮೈಯಿಂದಲೇ ಹುಳವು ಉತ್ಪಾದಿಸುತ್ತದೆ
  • ಅರ್ಧ ಕೆ.ಜಿ. ಜೇನುಮೇಣವನ್ನು ಒಸರಲು (secrete) ಇವು 4 ಕೆ.ಜಿ ಸಿಹಿಯನ್ನು ತಿನ್ನಬೇಕು!
  • ತಮ್ಮನ್ನು ಕಾಪಾಡಿಕೊಳ್ಳಲು ಬೇರೊಂದು ಪ್ರಾಣಿಗೆ ಚುಚ್ಚಿ ಬಳಿಕ ತಾನು ಸಾಯುವ ಕೀಟವೆಂದರೆ ಜೇನುಹುಳ ಮಾತ್ರ
  • ಜೇನುಹುಳಗಳು ಕಡುನೇರಳೆ (ultravoilet) ಮತ್ತು ಪೊಲರೈಸ್ಡ್ (polarised) ಬೆಳಕನ್ನು ನೋಡಬಲ್ಲವು. ಹಾಗೆಯೇ ನಾವು ಕಾಣುವ ಕೆಂಪು ಬಣ್ಣವನ್ನು ಈ ಹುಳಗಳು ಕಾಣಲಾರವು
  • ಜೇನುಹುಳದ ಮಿದುಳು ಮಾನವನ ಮಿದುಳಿಗಿಂದ 20,000 ಪಟ್ಟು ಚಿಕ್ಕದು!
  • ಜೇನುಹುಳವು ಮಾನವನ ಮುಖವನ್ನು ಗುರುತಿಸಬಲ್ಲವು! 2 ಕೂಡುಗಣ್ಣು ಮತ್ತು 3 ಸುಳುಗಣ್ಣುಗಳು ಸೇರಿ ಒಟ್ಟು 5 ಕಣ್ಣುಗಳನ್ನು ಇವು ಹೊಂದಿವೆ
  • ಜೇನುಹುಳಗಳು ನಾಲ್ಕರವರೆಗೆ ಎಣಿಸಬಲ್ಲವು.

ಜೇನುತುಪ್ಪದ ಕುರಿತು ಕೆಲವು ಬೆರಗಿನ ಹನಿಗಳು:Honey-Dipper-The-Bee-Shop

  • ಇಡಿ ನೆಲದಲ್ಲಿ ಒಟ್ಟು 20 ಸಾವಿರ ಬಗೆಯ ಹುಳಗಳಿವೆ ಅದರಲ್ಲಿ 4 ಬಗೆಯ ಹುಳಗಳು ಮಾತ್ರ ಜೇನುತುಪ್ಪವನ್ನು ಮಾಡಬಲ್ಲವು
  • ಅರ್ಧ ಕೆ.ಜಿ ಜೇನುತುಪ್ಪವನ್ನು ಉತ್ಪಾದಿಸಲು ಜೇನುಹುಳಗಳು ಒಟ್ಟು 20 ಲಕ್ಶ ಹೂವುಗಳನ್ನು ಬೇಟಿ ಮಾಡಬೇಕು, ಹಾಗೆಯೇ 55, 000 ಮೈಲಿಗಳಷ್ಟು ಗೂಡಿನಿಂದ ಹೂವಿನ ಜಾಗಕ್ಕೆ ತಿರುಗಾಟ ನಡೆಸಬೇಕು!
  • ಒಂದು ಜೇನುಗೂಡಿನಲ್ಲಿ ದಿನಕ್ಕೆ 1 ಕೆ.ಜಿ.ಯಷ್ಟು ಜೇನುತುಪ್ಪ ಕೂಡಿಡಬಹುದು
  • ಒಂದು ಜೇನುಗೂಡಿನಲ್ಲಿ ವರುಶಕ್ಕೆ ಸುಮಾರು 200 ಕೆ.ಜಿ ಜೇನುತುಪ್ಪವನ್ನು ಹುಳಗಳು ಉತ್ಪಾದಿಸಬಲ್ಲವು
  • ಒಂದು ಜೇನುಹುಳವು ತನ್ನ ಇಡೀ ಬದುಕಿನಲ್ಲಿ 1/12 ಟೀ ಚಮಚದಷ್ಟು ಮಾತ್ರ ಜೇನುತುಪ್ಪವನ್ನು ಉತ್ಪಾದಿಸಬಲ್ಲದು
  • ಜೇನುತುಪ್ಪ ಎಂದಿಗೂ ಕೆಡುವುದಿಲ್ಲ
  • ಜೇನುಹುಳವೇನಾದರು ಇಡೀ ಭೂಮಿಯನ್ನು ಸುತ್ತಬೇಕು ಎಂದರೆ ಅದರ ಹಾರಾಟಕ್ಕೆ ಸುಮಾರು 28 ಗ್ರಾಂ ಜೇನುತುಪ್ಪ ಸಾಕಾಗುತ್ತದೆ. ಅಷ್ಟೊಂದು ಹುರುಪು ಜೇನುತುಪ್ಪದಲ್ಲಿದೆ.

ಎರಡು ಗೋದಿ ಕಾಳಿನನಷ್ಟು ದೊಡ್ಡದಿರುವ ಈ ಹುಳಗಳ ಬಾಳ್ಮೆಯ ಆಳಕ್ಕೆ ಇಳಿದರೆ ನಾವು ಹುಬ್ಬೇರಿಸುವಂತಹ ಅರಿಮೆ ಕಣ್ಣಿಗೆ ಕಾಣುತ್ತದೆ. ಇವುಗಳ ಬದುಕಿನ ಬಗ್ಗೆ ಜಗತ್ತಿನ ಮೂಲೆ ಮೂಲೆಗಳಲ್ಲಿ ಅರಕೆಗಳು ನಡೆಯುತ್ತಲೇ ಇವೆ. ಜೇನುಹುಳದ ಸಾಕಣೆಯು ಒಂದು ದೊಡ್ಡ ಉದ್ಯಮವಾಗಿ ಹೊರಹೊಮ್ಮುತ್ತಿದೆ. ಸಾಕಣೆಯಲ್ಲಿ ಬಗೆಬಗೆಯ ಚಳಕಗಳು ಹೊರಬರುತ್ತಿವೆ. ಜೇನು ಸಾಕಣೆಯ ಉದ್ಯಮವನ್ನು ಪರಿಣಾಮಕಾರಿಯಾಗಿ ನಡೆಸಲು ಹುಳದ ಬಗೆಗಿನ ಅರಕೆಗಳು ನೆರವನ್ನು ನೀಡುತ್ತಿವೆ. ನಮ್ಮಲ್ಲಿಯೂ ಇಂತಹ ಅರಕೆಗಳು ಹೆಚ್ಚಲಿ.

(ಮಾಹಿತಿ ಸೆಲೆ: westmtnapiary.com , pmc.ncbi , bbka.org.uk)

(ಚಿತ್ರ ಸೆಲೆ: thebeeshop.net, )

ಜೇನುಹುಳವು ಹೂವಿನ ಸಿಹಿ ಕದಿಯುವುದು ಹೇಗೆ?

ರತೀಶ ರತ್ನಾಕರ.

 

Honeybee_landing_on_milkthistle02

ಗೂಡಿನಿಂದ ಹೂವಿನತ್ತ ಹಾರಿ, ಹೂವಿನ ಜೇನನ್ನು ಹೀರಿ, ಗೂಡಿಗೆ ಹಿಂದಿರುಗಿ ಸಿಹಿಯನ್ನು ಕೂಡಿಡುವ ಜೇನುಹುಳಗಳ ಕೆಲಸ ನಾವಂದು ಕೊಂಡಷ್ಟು ಸುಲಭವಿಲ್ಲ! ಹೌದು, ಸಿಹಿಯಾದ ಜೇನು ಈ ಜೇನುಹುಳಗಳ ಮೇವು. ತಮ್ಮ ಎಂದಿನ ಕೆಲಸಗಳಿಗೆ ಹುರುಪನ್ನು ಪಡೆದುಕೊಳ್ಳಲು ಹೂವಿನ ಜೇನನ್ನು ಸವಿಯುತ್ತವೆ. ಚಳಿಗಾಲ ಇಲ್ಲವೇ ಮೇವು ಸಿಗದ ಹೊತ್ತಿನಲ್ಲಿ ತಮ್ಮ ಹೊಟ್ಟೆ ತುಂಬಿಸಿಕೊಳ್ಳಲು ಇರಲೆಂದು ಜೇನನ್ನು ಗೂಡಿನಲ್ಲಿ ಕೂಡಿಟ್ಟು ಕಾಪಾಡುತ್ತವೆ.

ಮೊದಲಿಗೆ ಬೇಹುಗಾರ ಹುಳಗಳು ಮೇವು ಸಿಗುವ ಜಾಗವನ್ನು ಹುಡುಕಿ ಹೂವಿನ ಬಂಡು(pollen) ಮತ್ತು ಸಿಹಿಯನ್ನು ಹೊತ್ತು ಗೂಡಿಗೆ ಹಿಂದಿರುಗುತ್ತವೆ. ಗೂಡಿನಲ್ಲಿ ಉಳಿದ ಜೇನುಹುಳಗಳಿಗೆ ‘ಜೇನುಹುಳದ ಕುಣಿತ‘ದ ಮೂಲಕ ಮೇವು ಸಿಗುವ ಜಾಗವನ್ನು ತಿಳಿಸುತ್ತವೆ. ಬಳಿಕ ಉಳಿದ ದುಡಿಮೆಗಾರ ಜೇನುಹುಳಗಳು ಮೇವನ್ನು ಹೊತ್ತು ತರಲು ಹೊರಡುತ್ತವೆ. ಒಂದು ಜೇನುಹುಳವು ಗೂಡಿನಿಂದ ಸುಮಾರು 4 ಕಿಲೋಮೀಟರ್ ದೂರದವರೆಗೂ ಮೇವನ್ನು ಅರಸುತ್ತಾ ಸಾಗುತ್ತದೆ. ಹುಳುವೊಂದು ಒಂದು ಬಾರಿಗೆ ಸುಮಾರು 35-40 ನಿಮಿಷಗಳವರೆಗೆ ಹಾರಾಟವನ್ನು ನಡೆಸಬಲ್ಲದು. ಒಂದೇ ಬಗೆಯ ಸುಮಾರು 200-300 ಹೂವುಗಳಿಂದ 0.05 ಗ್ರಾಂ ನಷ್ಟು ಸಿಹಿಯನ್ನು ಜೇನುಹುಳುವೊಂದು ತನ್ನ ಒಂದು ಹಾರಾಟದಲ್ಲಿ ಹೊತ್ತುತರಬಲ್ಲದು. 0.05 ಗ್ರಾಂ ಸಿಹಿಯು ಜೇನುಹುಳದ ತೂಕದ ಅರ್ಧದಷ್ಟಾಗಿದೆ. ಒಂದು ದಿನದಲ್ಲಿ ಒಂದು ಹುಳವು ಇಂತಹ 10 ಹಾರಾಟಗಳನ್ನು ನಡೆಸಿ 0.5 ಗ್ರಾಂ ನಷ್ಟು ಸಿಹಿಯನ್ನು ಗೂಡಿಗೆ ಸಾಗಿಸಬಲ್ಲದು. ಒಟ್ಟಾರೆಯಾಗಿ ಸುಮಾರು 10,000 ಹುಳಗಳಿರುವ ಒಂದು ಗೂಡಿನಲ್ಲಿ ಒಂದು ದಿನಕ್ಕೆ ಸುಮಾರು 5 ಕಿಲೋ.ಗ್ರಾಂ ಬಂಡನ್ನು ಕೂಡಿಡಲಾಗುತ್ತದೆ. ಈ 5 ಕಿಲೋ.ಗ್ರಾಂ ಬಂಡು ಬಳಿಕ 1.50 ಕಿ.ಗ್ರಾಂ ಜೇನಾಗಿ ಗೂಡಿನಲ್ಲಿ ಮಾರ್ಪಾಡಗುತ್ತದೆ.

ಮೇವಿಗಾಗಿ ಹಾರಾಟ ನಡೆಸುವ ಮುನ್ನ ಹೊರಗಿನ ಗಾಳಿಪಾಡು, ಮೇವಿನ ಗುಣಮಟ್ಟ, ಸಿಗುವ ದೂರ ಮತ್ತು ಮೇವಿನ ಅಳವಿ(quantity)ಯ ಲೆಕ್ಕಾಚಾರವನ್ನು ಹಾಕುತ್ತವೆ. ಮೇವಿನ ವಿವರವನ್ನು ಹುಳಗಳು ಬೇಹುಗಾರ ಹುಳಗಳಿಂದ ಪಡೆಯುತ್ತವೆ. ಬಿಸುಪು (temperature) ನೋಡಿಕೊಂಡು ಜೇನುಹುಳಗಳು ನಡೆಸುವ ಕೆಲಸಗಳು ಹೀಗಿವೆ;

  • < 8 ಡಿಗ್ರಿ ಸೆ. – ಮೇವಿಗಾಗಿ ಹಾರಾಟ ನಡೆಸುವುದಿಲ್ಲ. ಗೂಡನ್ನು ಸುತ್ತುವರಿದು ಗೂಡಿನ ಬಿಸುಪನ್ನು ಹೆಚ್ಚಿಸುವ ಕೆಲಸದಲ್ಲಿ ತೊಡಗುತ್ತವೆ
  • 8 – 16 ಡಿಗ್ರಿ ಸೆ. – ಮೇವಿಗಾಗಿ ಹಾರಾಟ ನಡೆಸುತ್ತವೆ ಆದರೆ ತುಂಬಾ ಹೆಚ್ಚಿನ ಹಾರಾಟ ನಡೆಸುವುದಿಲ್ಲ
  • 16 – 32 ಡಿಗ್ರಿ ಸೆ. – ಮೇವಿಗಾಗಿ ಹಾರಾಟ ನಡೆಸಲು ಸರಿಯಾದ ಬಿಸುಪು. ಹೆಚ್ಚಿನ ಹಾರಾಟ ನಡೆಯುತ್ತದೆ
  • 32 ಡಿಗ್ರಿ ಸೆ. ಗಿಂತ ಹೆಚ್ಚು – ಮೇವಿಗಾಗಿ ಹಾರಾಟ ನಡೆಸುವುದಿಲ್ಲ ಬದಲಾಗಿ ನೀರಿಗಾಗಿ ಹೆಚ್ಚಿನ ಹಾರಾಟ ನಡೆಸುತ್ತವೆ

ಮೇವಿಗಾಗಿ ಹಾರುವ ಮುನ್ನ ಗೂಡಿನಲ್ಲಿರುವ ಜೇನನ್ನು ಸವಿದು ಹಾರುತ್ತವೆ. ಇದರಿಂದ ಅವು ಕೆಲವು ಹೊತ್ತುಗಳ ಕಾಲ ಹಾರಟವನ್ನು ನಡೆಸಬಹುದು. ಜೇನುಹುಳದ ಜಾಡುಹಿಡಿದು ಬರಹದಲ್ಲಿ ನೋಡಿದಂತೆ, ಜೇನುಹುಳದ ಕಣ್ಣು, ಕಾಲು, ರೆಕ್ಕೆ ಒಟ್ಟಾರೆಯಾಗಿ ಜೇನು ಹುಳದ ಮೈ ಅದಕ್ಕೆ ಮೇವು ಹುಡುಕಲು ನೆರವಾಗುವಂತಿದೆ. ಅದರ ಮೈ ಅಂಗಗಳು ಮೇವನ್ನು ಹುಡುಕಲು ಹೇಗೆ ನೆರವಾಗುತ್ತವೆ ಎಂಬುದನ್ನು ನೋಡೋಣ.

ರೆಕ್ಕೆಗಳು:
ಜೇನುಹುಳಕ್ಕೆ ಮುಂಬಾಗದ ರೆಕ್ಕೆ ಮತ್ತು ಹಿಂಬಾಗದ ರೆಕ್ಕೆ ಎಂಬ ಎರಡು ಜೋಡಿ ರೆಕ್ಕೆಗಳಿವೆ. ಸಾಮಾನ್ಯವಾಗಿ ಇತರೆ ಹುಳಗಳು ತಮ್ಮ ರೆಕ್ಕೆಗಳನ್ನು ಹೆಚ್ಚು ಬೀಸಿ ಬಡಿಯುತ್ತವೆ, ಆದರೆ ಜೇನುಹುಳಗಳು ರೆಕ್ಕೆಗಳನ್ನು ಹೆಚ್ಚು ಬೀಸುವ ಬದಲಾಗಿ ಹೆಚ್ಚು ಬಾರಿ ಪಟಪಟನೆ ಬಡಿಯುತ್ತವೆ. ಇತರೆ ಹುಳಗಳು ಸೆಕೆಂಡಿಗೆ 200 ಬಾರಿ ರೆಕ್ಕೆಯನ್ನು ಬಡಿದರೆ ಜೇನುಹುಳಗಳು 240 ಬಾರಿ ರೆಕ್ಕೆಯನ್ನು ಬಡಿಯುತ್ತವೆ. ಈ ರೆಕ್ಕೆ ಬಡಿತದಿಂದಲೇ ಜೇನುಹುಳಗಳು ‘ಜುಂಯ್’ ಎಂಬ ಸದ್ದನ್ನು ಮಾಡುವುದು. ಸಾಮಾನ್ಯ ಹುಳದ ರೆಕ್ಕೆ ಬಡಿತದ ಕೋನವು 145-165 ಡಿಗ್ರಿ ಇದ್ದರೆ ಜೇನುಹುಳದ ರೆಕ್ಕೆ ಬಡಿತದ ಕೋನ ಕೇವಲ 90 ಡಿಗ್ರಿ ಇರುತ್ತದೆ (ಕೆಳಗಿನ ಚಿತ್ರವನ್ನು ಗಮನಿಸಿ).Jenu haarata

ಜೇನುಹುಳದ ಮೈಗೆ ಹೋಲಿಸಿದರೆ ಅದರ ರೆಕ್ಕೆ ಚಿಕ್ಕದಾಗಿದೆ ಹಾಗಾಗಿ ಅದು ಬಡಿತವನ್ನು ಹೆಚ್ಚು ಮಾಡಿ ಹಾರಾಟ ನಡೆಸಬೇಕಾಗುತ್ತದೆ. ಹಾಗಿದ್ದರೂ ಜೇನುಹುಳವು ದೂರಕ್ಕೆ ಹಾರಬಲ್ಲದು, ತನ್ನ ತೂಕದ ಅರ್ಧದಷ್ಟು ತೂಕವಿರುವ ಹೂವಿನ ಬಂಡನ್ನು ಹೊತ್ತು ತರಬಲ್ಲದು!.

ಕಣ್ಣುಗಳು:
ಜೇನುಹುಳಕ್ಕಿರುವ ಸುಳುಗಣ್ಣು(Simple eyes) ಮತ್ತು ಕೂಡುಗಣ್ಣು(compound eyes)ಗಳು ಮರ-ಗಿಡ-ಬಳ್ಳಿಗಳ ನಡುವೆ ಇರುವ ಹೂವುಗಳನ್ನು ಗುರುತಿಸಲು ನೆರವಾಗುವಂತಿವೆ. ಕಣ್ಣುಗಳು ಗುಂಡಾಗಿರುವುದರಿಂದ ತಾನು ಸಾಗುತ್ತಿರುವ ದಾರಿ ಮತ್ತು ನೇಸರನ ನಡುವಿರುವ ಕೋನವನ್ನು ತಿಳಿದುಕೊಳ್ಳಲು ಇವುಗಳಿಗೆ ನೆರವಾಗಿವೆ. ಈ ಹುಳಗಳ ಕಣ್ಣುಗಳು ಕಡುನೇರಳೆ ಬಣ್ಣಗಳನ್ನು ನೋಡುವ ಕಸುವನ್ನು ಹೊಂದಿವೆ. ಜೇನುಹುಳಗಳು ಯಾವ ಯಾವ ಬಣ್ಣಗಳನ್ನು ಗುರುತಿಸುತ್ತವೆ ಎಂದು ತಿಳಿಯುವ ಮೊದಲು ಬಣ್ಣಗಳ ಬಗ್ಗೆ ಕೆಲವು ವಿವರಗಳನ್ನು ನಾವು ಅರಿಯಬೇಕಿದೆ. ಅವುಗಳನ್ನು ಈ ಕೆಳಗೆ ನೀಡಲಾಗಿದೆ.
ಕೆಳಗಿನ ಚಿತ್ರದಲ್ಲಿ ಮನುಷ್ಯರ ಕಣ್ಣಿಗೆ ಕಾಣುವ ಮತ್ತು ಕಣ್ಣಿಗೆ ಕಾಣದ ಬಣ್ಣಗಳ ಪಟ್ಟಿಯನ್ನು ನೀಡಲಾಗಿದೆ. ನೇಸರನಿಂದ ಬರುವ ಬೆಳಕಿನಲ್ಲಿ ಸುಮಾರು 700 ನ್ಯಾನೋ ಮೀಟರ್ ನಿಂದ 400 ನ್ಯಾನೋ ಮೀಟರ್ ಅಲೆಯಗಲ (Wave length) ಇರುವ ಬೆಳಕು ಬೇರೆ ಬೇರೆ ಬಣ್ಣಗಳಾಗಿ (ಕೆಂಕಿಹಹನೀನೇ) ನಮ್ಮ ಕಣ್ಣಿಗೆ ಕಾಣುವಂತಹವು. 400 ನ್ಯಾನೋ ಮೀ. ಗಿಂತ ಕಡಿಮೆ ಇರುವ ಇಲ್ಲವೇ 700 ನ್ಯಾನೋ ಮೀ. ಗಿಂತ ಹೆಚ್ಚು ಅಲೆಯಗಲ ಹೊಂದಿರುವ ಬಣ್ಣಗಳನ್ನು ನಮ್ಮ ಕಣ್ಣು ನೋಡಲಾರದು.Light Spectrum

ಇನ್ನು ಜೇನುಹುಳಗಳ ವಿಷಯಕ್ಕೆ ಬಂದರೆ ಅವು ಸುಮಾರು 600 ರಿಂದ 300 ನ್ಯಾನೋ ಮೀ. ಅಲೆಯಗಲ ಹೊಂದಿರುವ ಬಣ್ಣಗಳನ್ನು ಕಾಣಬಲ್ಲವು. ಅಂದರೆ ಮನುಷ್ಯನಿಗೆ ಹೋಲಿಸಿದರೆ ಜೇನುಹುಳಗಳು ಕಡುನೇರಳೆ ಬಣ್ಣವನ್ನು ಕಾಣಬಲ್ಲವು ಆದರೆ ಕೆಂಪು ಬಣ್ಣವನ್ನು ಕಾಣಲಾರವು! ಉಳಿದಂತೆ ಕಿತ್ತಳೆ, ಹಳದಿ, ಹಸಿರು, ನೀಲಿ ಮತ್ತು ನೇರಳೆ ಬಣ್ಣಗಳನ್ನು ಜೇನುಹುಳದ ಕಣ್ಣು ಗುರುತಿಸಬಲ್ಲದು. ಹಸಿರು ಹಾಸಿನ ಮೇಲೆ ಕೆಂಪು ಹೂವುಗಳಿದ್ದರೆ ಜೇನುಹುಳಗಳು ಅದನ್ನು ಗುರುತಿಸದೇ ಹೋಗಬಹುದು ಆದರೆ ಆ ಕೆಂಪು ಬಣ್ಣದ ಹೂವುಗಳು ಅವುಗಳಿಗೆ ಕಿತ್ತಳೆ ಇಲ್ಲವೇ ಕಂದು ಬಣ್ಣದಲ್ಲಿ ಕಾಣವುದು.Jenu kannu

ಜೇನುಹುಳಗಳು ಕಡುನೇರಳೆ ಬಣ್ಣಗಳನ್ನು ನೋಡಬಹುದಾಗಿರುವುದರಿಂದ ಹೂವಿನ ಆಳದಲ್ಲಿ ಹುದುಗಿರುವ ಬಂಡನ್ನು ಸುಲಭವಾಗಿ ಗುರುತಿಸಬಲ್ಲವು. ಸಾಮಾನ್ಯ ಕಣ್ಣಿಗೆ ಹಾಗು ಕಡುನೇರಳೆ ಬೆಳಕಿನಲ್ಲಿ ಕಾಣಬಹುದಾದ ಹೂವುಗಳ ಚಿತ್ರವನ್ನು ಈ ಕೆಳಗೆ ನೀಡಲಾಗಿದೆ. ಕಡುನೇರಳೆ ಬೆಳಕಿನಲ್ಲಿ ಕಾಣುವ ಹೂವಿನ ಎಸಳುಗಳು ಜೇನುಹುಳಗಳಿಗೆ ತುಂಬಾ ಸುಲಭವಾಗಿ ಕಾಣುವುದನ್ನು ನಾವು ಗಮನಿಸಬಹುದು.ultra - hoovuಹೂವಿನ ದಳಗಳ ಮೇಲೆ ಹೋಗಿ ಕೂರುವ ಹುಳವು ಮೊದಲು ತನ್ನ ಉದ್ದವಾದ ನಾಲಗೆಯನ್ನು ಬಳಸಿ ಹೂವಿನ ಬುಡದಲ್ಲಿರುವ ಸಿಹಿಯನ್ನು ಹೀರುತ್ತವೆ. ಹೂವಿನ ಜೇನು ಇಲ್ಲವೇ ಸಿಹಿಯು ನೀರಿನ ರೂಪದಲ್ಲಿದ್ದು ಸುಕ್ರೋಸ್, ಪ್ರುಕ್ಟೋಸ್ ಮತ್ತು ಗ್ಲೂಕೋಸ್ ಸಕ್ಕರೆಯ ಅಂಶಗಳನ್ನು ಹೊಂದಿರುತ್ತದೆ. ಇದಲ್ಲದೇ ಈ ಸಿಹಿಯಲ್ಲಿ, ಮುನ್ನು (protein), ಉಪ್ಪು, ಹುಳಿ ಮತ್ತು ಕೆಲವು ಎಣ್ಣೆಯ ಅಂಶಗಳನ್ನು ಒಳಗೊಂಡಿರುತ್ತದೆ. ಹೂವಿನ ತಳಿ ಹಾಗು ಪಂಗಡದ ಆಧಾರದ ಮೇಲೆ ಅವುಗಳ ಸಿಹಿಯಲ್ಲಿನ ಸಕ್ಕರೆಯ ಅಂಶವು ಸುಮಾರು 3 ರಿಂದ 80 % ವರೆಗೂ ಬೇರೆ ಬೇರೆಯಾಗಿರುತ್ತದೆ. ಹೂವಿನ ಸಿಹಿಯಲ್ಲಿನ ಸಕ್ಕರೆಯು 30% ಗಿಂತ ಕಡಿಮೆಯಿದ್ದರೆ ಅದನ್ನು ಜೇನುಹುಳಗಳು ಹೀರಿಕೊಳ್ಳುವುದಿಲ್ಲ. ಜೇನುಹುಳದ ನಾಲಗೆಯು ಮಾನವನ ನಾಲಗೆಯಷ್ಟು ಬಗೆ ಬಗೆಯ ರುಚಿಗಳನ್ನು ಗುರುತಿಸುವ ಕಸುವನ್ನು ಹೊಂದಿಲ್ಲ ಆದರೆ ಸಿಹಿಯನ್ನು ಗುರುತಿಸುವ ಕಸುವು ತುಂಬಾ ಚೆನ್ನಾಗಿ ರೂಪುಗೊಂಡಿದೆ. ಚಿಕ್ಕ ಚಿಕ್ಕ ಕೂದಲುಗಳಿರುವ ಉದ್ದವಾದ ನಾಲಗೆಯು ಹೂವಿನಲ್ಲಿರುವ ಸಿಹಿಯು ಎಷ್ಟರ ಮಟ್ಟಿಗೆ ಸಕ್ಕರೆಯನ್ನು ಹೊಂದಿದೆ ಎಂದು ಚೆನ್ನಾಗಿ ಗುರುತಿಸಬಲ್ಲದು.

ಹೂವಿನಿಂದ ಹೀರಿಕೊಂಡ ಸಿಹಿಯನ್ನು ಜೇನುಹುಳವು ತನ್ನ ಹೊಟ್ಟೆಯಲ್ಲಿ ತುಂಬಿಕೊಳ್ಳುತ್ತದೆ. ಜೇನುಹುಳದ ಹೊಟ್ಟೆಯ ಸುಮಾರು 90% ಭಾಗದಷ್ಟು ಜಾಗವನ್ನು ಇವು ಸಿಹಿಯನ್ನು ತುಂಬಿಕೊಳ್ಳಲು ಬಳಸುತ್ತವೆ. ಮೊದಲೇ ತಿಳಿಸಿದಂತೆ ಹೊಟ್ಟೆಯಲ್ಲಿ ಸುಮಾರು 0.05 ಗ್ರಾಂ ನಷ್ಟು ಸಿಹಿಯನ್ನು ತುಂಬಿಕೊಳ್ಳಬಹುದು. ಹೊಟ್ಟೆಯಲ್ಲಿರುವ ಸಿಹಿಚೀಲ(nectar sac) ಸಿಹಿಯನ್ನು ತುಂಬಿಕೊಳ್ಳಲು ನೆರವಾಗುತ್ತದೆ. ನಾಲಗೆಯಿಂದ ಹೀರಿಕೊಳ್ಳುವ ಸಿಹಿಯು ತಿನಿಸುಗೊಳವೆಯ (esophagus) ಮೂಲಕ ನೇರವಾಗಿ ಸಿಹಿಚೀಲಕ್ಕೆ ಬರುತ್ತದೆ. ಈ ಸಿಹಿ ಚೀಲಕ್ಕೆ ಒಂದು ತೆರ್ಪು (valve) ಇರುತ್ತದೆ ಇದು ಬಂಡು ಚೀಲವನ್ನು ಹೊಟ್ಟೆಯ ಅರಗಿಸುವ ಭಾಗಗಳಿಂದ (ventriculus) ಬೇರ್ಪಡಿಸುತ್ತವೆ. ಹುಳಗಳು ಗೂಡಿಗೆ ಹಿಂದಿರುಗಿ ಹಾರುವಾಗ ಹೊಟ್ಟೆಯಲ್ಲಿರುವ ಸ್ವಲ್ಪ ಸಿಹಿಯನ್ನು ಅರಗಿಸಿಕೊಂಡು ಹಾರಲು ಹುರುಪನ್ನು ಪಡೆದುಕೊಳ್ಳುತ್ತವೆ. ಆಗ ಸಿಹಿಚೀಲದ ತೆರ್ಪು ತೆರೆದುಕೊಂಡು ಬೇಕಾದಷ್ಟು ಸಿಹಿಯು ಅರಗಿಸುವ ಭಾಗಗಳಿಗೆ ಹರಿಯುತ್ತದೆ. ಹಾಗಾಗಿ ಹೂವಿನಿಂದ ಹೊಟ್ಟೆ ಬಿರಿಯುವಷ್ಟು ಸಿಹಿಯನ್ನು ಹೀರಿಕೊಳ್ಳುವ ಹುಳಗಳು ಗೂಡನ್ನು ತಲುಪುವಾಗ ಅರೆಹೊಟ್ಟೆಯಾಗಿರುವ ಸಾಧ್ಯತೆಗಳು ಇರುತ್ತವೆ. ಹೂವಿನಿಂದ ಸಿಹಿಯನ್ನು ಹೀರಲು ನೆರವಾಗುವ ನಾಲಗೆ ಹಾಗು ಸಿಹಿಯನ್ನು ತುಂಬಿಕೊಳ್ಳುವ ಹೊಟ್ಟೆಯ ಚಿತ್ರಗಳನ್ನು ಈ ಕೆಳಗೆ ನೋಡಬಹುದು.anatomyಹೂವಿನಿಂದ ಸಿಹಿಯನ್ನಷ್ಟೆ ಅಲ್ಲದೇ ಹೂವಿನ ಬಂಡನ್ನು(pollen) ಕೂಡ ಹುಳಗಳು ತುಂಬಿಸಿಕೊಳ್ಳುತ್ತವೆ. ಜೇನುಹುಳದ ಹಿಂಗಾಲುಗಳಲ್ಲಿರುವ ಬಂಡಿನ ಬುಟ್ಟಿ (Pollen Basket)ವನ್ನು ಬಳಸುತ್ತವೆ. ಬಂಡು ಚೀಲವು ಚಿಕ್ಕ ಚಿಕ್ಕ ಕೂದಲುಗಳಿಂದ ಕೂಡಿ ಆಗಿರುತ್ತದೆ. ಹೂವಿನ ಬಂಡನ್ನು ಗೂಡಿನಲ್ಲಿರುವ ಮರಿಹುಳ(larvae)ಗಳಿಗೆ ತಿನಿಸಲು ಬಳಸುತ್ತವೆ. ಗೂಡಿನ ಮರಿಹುಳಗಳಿಗೆ ಇದೇ ಊಟವಾಗಿರುತ್ತದೆ. ಆದರೆ ದುಡಿಮೆಗಾರ ಜೇನುಹುಳಗಳು ಬಂಡನ್ನು ತಿನ್ನುವುದಿಲ್ಲ. ಹೂವಿನಿಂದ ಹೂವಿಗೆ ಹಾರಿ ಬಂಡನ್ನು ಹಾಗು ಸಿಹಿಯನ್ನು ಪಡೆಯುವುದರಿಂದ ಒಂದು ಹೂವಿನ ಬಂಡು ಇನ್ನೊಂದು ಹೂವಿಗೆ ಸೇರಿ ಹೂದುಂಬುಗೆ(fertilization) ನಡೆಯುತ್ತದೆ. ಹೆಚ್ಚಾಗಿ ಜೇನುಹುಳಗಳು ಒಂದು ಬಾರಿಗೆ ಒಂದೇ ಬಗೆಯ ಹೂವುಗಳಿಂದ ಮೇವನ್ನು ಪಡೆಯುತ್ತಿರುತ್ತವೆ ಇದರಿಂದ ಹೂದುಂಬುಗೆ ಚೆನ್ನಾಗಿ ನಡೆಯುತ್ತದೆ. ಹೂವು ಹಾಗು ಜೇನುಹುಳಗಳು ಒಂದಕ್ಕೊಂದು ಹೀಗೆ ನೆರವಾಗುತ್ತವೆ.

Apis.mellifera.-.lindsey

ಜೇನುಹುಳದ ಅರಿಗೊಂಬುಗಳು (Antennea) ಮನುಷ್ಯನಿಗಿಂತ 40 ಪಟ್ಟು ಹೆಚ್ಚು ಕಂಪನ್ನು ಗುರುತಿಸುವ ಕಸುವನ್ನು ಹೊಂದಿವೆ. ಬಗೆ ಬಗೆಯ ಹೂವುಗಳನ್ನು ಅವುಗಳ ಕಂಪಿನ ಮೂಲಕ ಗುರುತಿಸಲು ಇದು ನೆರವಾಗುತ್ತದೆ. ಇದಲ್ಲದೇ ಜೇನುಹುಳಗಳಿಗೆ ಹೊತ್ತಿನ ಬಗ್ಗೆ ಹೆಚ್ಚಿನ ಅರಿವು ಇರುತ್ತದೆ. ಗೂಡಿನಿಂದ ಮೇವಿಗಾಗಿ ಹಾರುವಾಗ ನೇಸರನ ದಿಕ್ಕು ಮತ್ತು ಹೂವಿನ ದಿಕ್ಕನ್ನು ಕಂಡು ಹಿಡಿದಿರುತ್ತವೆ (ಜೇನುಹುಳದ ಕುಣಿತ ಬರಹದಲ್ಲಿ ಹೆಚ್ಚಿನ ವಿವರವಿದೆ). ಸುಮಾರು ಒಂದು ಗಂಟೆಯ ಹಾರಾಟ ನಡೆಸಿ ಗೂಡಿಗೆ ಹಿಂದಿರುಗುವಾಗ ಗೂಡಿನ ದಾರಿಯನ್ನು ನೇಸರ ಇರುವ ದಿಕ್ಕಿನ ನೆರವಿನಿಂದ ಪಡೆಯ ಬೇಕಾಗುತ್ತದೆ. ಆದರೆ ನೇಸರನ ಜಾಗ ಬದಲಾಗಿರುತ್ತದೆ ಮತ್ತು ಹುಳಗಳು ತಮ್ಮ ಗೂಡಿನ ದಾರಿ ಕಂಡುಕೊಳ್ಳುವಾಗ ನೇಸರನ ಜಾಗವನ್ನು ಕೂಡ ಲೆಕ್ಕಕ್ಕೆ ತೆಗೆದುಕೊಳ್ಳಬೇಕು. ಹಾಗಾಗಿ ಇವುಗಳಿಗೆ ಹೊತ್ತಿನ ಅರಿವು ಚೆನ್ನಾಗಿರಬೇಕಾಗುತ್ತದೆ.

ಮೇವಿಗಾಗಿ ಹಾರಾಟ ನಡೆಸಿ ಹೂವಿನಿಂದ ಸಿಹಿ ಹಾಗು ಬಂಡನ್ನು ಹೊತ್ತು ತರುವ ಜೇನುಹುಳಗಳು ಸಿಹಿಯನ್ನು ಜೇನಾಗಿ ಹೇಗೆ ಮಾರ‍್ಪಾಡುಗೊಳಿಸುತ್ತವೆ? ಜೇನಿನ ಹಿಂದಿರುವ ತಿರುಳೇನು? ಜೇನನ್ನು ಹೇಗೆ ಕಾಪಾಡುತ್ತವೆ? ಈ ಎಲ್ಲಾ ವಿವರಗಳನ್ನು ಮುಂದಿನ ಬರಹಗಳಲ್ಲಿ ತಿಳಿಯೋಣ.

(ಮಾಹಿತಿ ಮತ್ತು ಚಿತ್ರ ಸೆಲೆ: wikipedia, , insect.tamu.eduiflscience.com)

ಹೂವಿನ ಸಿಹಿ ಜೇನಾಗುವುದು ಹೇಗೆ?

ರತೀಶ ರತ್ನಾಕರ.

Jenu

ಹೂವಿನಿಂದ ಸಿಹಿಯನ್ನು ಕದಿಯುವ ಜೇನುಹುಳವು ತನ್ನ ಗೂಡಿಗೆ ಹಿಂದಿರುಗಿ, ಆ ಸಿಹಿಯನ್ನು ಕೂಡಿಟ್ಟು ಜೇನನ್ನಾಗಿ ಮಾರ್ಪಾಡುಗೊಳಿಸುತ್ತದೆ. ಹಾಗಾದರೆ, ಜೇನುಹುಳವು ತರುವ ಹೂವಿನ ಸಿಹಿ(nectar) ಮತ್ತು ಜೇನುಗೂಡಿನಲ್ಲಿ ಸಿಗುವ ಜೇನುತುಪ್ಪ ಬೇರೆ ಬೇರೆಯೇ? ಹೂವಿನ ಸಿಹಿ ಜೇನುತುಪ್ಪವಾಗಿ ಮಾರ್ಪಾಡಾಗುವ ಬಗೆ ಹೇಗೆ? ಈ ವಿಷಯಗಳ ಸುತ್ತ ಬೆಳಕು ಚೆಲ್ಲುವ ಪ್ರಯತ್ನವೇ ಈ ಬರಹ.

ಜೇನುಹುಳಗಳಿಗೆ ಎರಡು ಹೊಟ್ಟೆಯಿರುತ್ತವೆ. ಒಂದರಲ್ಲಿ ಊಟವನ್ನು ತಿಂದು ಅರಗಿಸಿಕೊಂಡು ಮೈಗೆ ಬೇಕಾದ ಹುರುಪನ್ನು ಪಡೆದರೆ, ಇನ್ನೊಂದು ಹೊಟ್ಟೆಯಲ್ಲಿ ಹೂವಿನಿಂದ ಹೀರಿದ ಸಿಹಿಯನ್ನು ತುಂಬಿಕೊಳ್ಳುತ್ತವೆ. ಸಿಹಿ ತುಂಬಿಕೊಂಡಿರುವ ಹೊಟ್ಟೆಯನ್ನು ಸಿಹಿಚೀಲ (nectar sac) ಎಂದು ಕರೆಯುತ್ತಾರೆ. ಸಿಹಿಚೀಲದಲ್ಲಿ ಒಮ್ಮೆಗೆ ಸುಮಾರು 70 ಮಿ.ಗ್ರಾಂ ನಷ್ಟು ಸಿಹಿಯನ್ನು ಹುಳಗಳು ತುಂಬಿಕೊಳ್ಳಬಲ್ಲವು. ಇದನ್ನು ತುಂಬಿಸಿಕೊಳ್ಳಲು ಜೇನುಹುಳಗಳು ಸುಮಾರು 100 ರಿಂದ 1500 ಹೂವುಗಳನ್ನು ಬೇಟಿ ಮಾಡಬೇಕು! ತುಂಬಿದ ಸಿಹಿಚೀಲ ಮತ್ತು ಜೇನುಹುಳ ಹೆಚ್ಚುಕಡಿಮೆ ಒಂದೇ ತೂಕವಿರುತ್ತವೆ.anatomy

ಹೂವಿನಿಂದ ಸಿಹಿಯನ್ನು ಗೂಡಿಗೆ ತರುವ ಜೇನುಹುಳವು ತಿರುಗಿ ಅದೇ ಜಾಗಕ್ಕೆ ಸಿಹಿಯನ್ನು ತರಲು ಹೋಗುತ್ತದೆ. ಮೊದಲ ಬಾರಿ ಹೂವಿನ ಜಾಗವನ್ನು ತಿಳಿಯಲು ಅದು ಬೇಹುಗಾರ ಹುಳದ ‘ಕುಣಿತ’ದ ಮೂಲಕ ಮೇವಿನ ಜಾಗವನ್ನು ಅರಿಯುತ್ತದೆ. ಬಳಿಕ ಹೂವಿನ ಜಾಗದಿಂದ ಜೇನುಗೂಡಿಗೆ ಹುಳವು ಹಲವಾರು ಬಾರಿ ತಿರುಗುತ್ತದೆ. ಹಾಗಾದರೆ ಹುಳವು ಈ ಹೂವಿನ ಜಾಗವನ್ನು ಹೇಗೆ ನೆನಪಿಟ್ಟುಕೊಳ್ಳುತ್ತದೆ ಎಂಬುದರ ಮೇಲೆ ಸಾಕಷ್ಟು ಅರಕೆಗಳು ನಡೆದಿವೆ, ನಡೆಯುತ್ತಿವೆ. ಹೂವಿರುವ ಜಾಗದಲ್ಲಿ ಸಿಹಿಚೀಲವನ್ನು ತುಂಬಿಸಿಕೊಳ್ಳುವ ಹುಳವು, ಆ ಜಾಗದ ಎದುರು ಇಲ್ಲವೇ ಹತ್ತಿರದಲ್ಲಿ ಎಲ್ಲಾದರು ಗುರುತಿಟ್ಟುಕೊಳ್ಳಬಹುದಾದ ಒಂದು ನೆಲಗುರುತನ್ನು (landmark), ತನ್ನ ಕೂಡುಗಣ್ಣಿನ (compound eyes) ಮೂಲಕ ಚಿತ್ರ ತೆಗೆದುಕೊಂಡು ನೆನಪಿಟ್ಟುಕೊಳ್ಳುತ್ತದೆ. ಸಿಹಿಯನ್ನು ಗೂಡಿಗೆ ಸಾಗಿಸಿ ಹೂವಿನ ಜಾಗಕ್ಕೆ ಹಿಂದಿರುಗುವಾಗ ಮೊದಲು ತೆಗೆದುಕೊಂಡ ನೆಲಗುರುತಿನ ಚಿತ್ರವನ್ನು ದಾರಿದೀಪವಾಗಿ ಬಳಸುತ್ತದೆ ಎಂದು ಹಲವು ಅರಿಗರು ಅಭಿಪ್ರಾಯಪಟ್ಟಿದ್ದಾರೆ.

ಹೂವಿನ ಸಿಹಿಯು ಸುಮಾರು 80% ನಷ್ಟು ನೀರು ಮತ್ತು ಸಿಕ್ಕಲು ಸಕ್ಕರೆ(Complex Sugars)ಯಾದ ‘ಸುಕ್ರೋಸ್’ ಅನ್ನು ಹೊಂದಿರುತ್ತದೆ ಅಲ್ಲದೇ ರುಚಿಯಲ್ಲಿ ಸಿಹಿಯಾಗಿದ್ದು, ಮಂದ(viscous)ವಾಗಿರುತ್ತದೆ. ಹೂವಿನ ಸಿಹಿಯು ಹುಳದ ಸಿಹಿಚೀಲವನ್ನು ತಲುಪುವಾಗ ಹುಳದ ಜೊಲ್ಲುಸುರಿಗೆಯಿಂದ (salaivary gland) ಹೊರಬರುವ ‘ಇನ್ವರ‍್ಟೇಸ್ ದೊಳೆ‘(invertase enzyme) ಮತ್ತು ಅರಗಿಸುವ ಹುಳಿ(Digestive acid)ಯೊಡೆನೆ ಬೆರೆಯುತ್ತದೆ. ಈ ದೊಳೆ ಮತ್ತು ಹುಳಿಯು ಸಿಹಿಯಲ್ಲಿರುವ ಸುಕ್ರೋಸ್ ಅನ್ನು ಒಡೆದು ಸಡಿಲ ಸಕ್ಕರೆ(Simple Sugars)ಗಳಾದ ಪ್ರುಕ್ಟೋಸ್ (fructose) ಮತ್ತು ಗ್ಲೂಕೋಸ್(glucose)ಗಳಾಗಿ ಮಾರ್ಪಾಡುಗೊಳ್ಳಲು ನೆರವು ನೀಡುತ್ತವೆ. ಇದಲ್ಲದೇ, ಹುಳದ ಜೊಲ್ಲಿನಲ್ಲಿರುವ ಪಾರ‍್ಮಿಕ್ ಆಸಿಡ್ (formic acid) ಸಿಹಿಯ ಜೊತೆ ಬೆರೆಯುತ್ತದೆ, ಇದರಿಂದ ಜೇನುತುಪ್ಪವು ಕೊಳೆಯುವುದಿಲ್ಲ ಮತ್ತು ಜೇನು ಕೊಳೆಯಳಿಕ (antiseptic) ಗುಣವನ್ನು ಪಡೆದುಕೊಳ್ಳುತ್ತದೆ.

Honey

ಸಿಹಿಯನ್ನು ತುಂಬಿಕೊಂಡು ಗೂಡಿನತ್ತ ಬರುವ ಹುಳವು ಗೂಡಿಗೆ ಬಂದೊಡನೆ ಸಿಹಿಯನ್ನು ಗೂಡಿನ ಕೋಣೆಗಳಲ್ಲಿ ನೇರವಾಗಿ ಇರಿಸುವುದಿಲ್ಲ. ತಾನು ಹೊತ್ತು ತಂದ ಸಿಹಿಯನ್ನು ಗೂಡಿನಲ್ಲಿರುವ ಇನ್ನೊಂದು ದುಡಿಮೆಗಾರ ಹುಳಕ್ಕೆ ಸಾಗಿಸುತ್ತದೆ. ಸಿಹಿಯನ್ನು ಹೊತ್ತುತಂದ ಹುಳವು ತನ್ನ ಸಿಹಿಚೀಲದಲ್ಲಿರುವ ಸಿಹಿಯನ್ನು ಎಳೆದು, ತನ್ನ ನಾಲಗೆಯ ಬುಡದಲ್ಲಿ ಹನಿಯ ರೂಪದಲ್ಲಿ ಹೊರತರುತ್ತದೆ. ಮತ್ತೊಂದು ದುಡಿಮೆಗಾರ ಹುಳವು ತನ್ನ ಉದ್ದ ನಾಲಗೆಯನ್ನು ಬಳಸಿ ಸಿಹಿಯ ಹನಿಯನ್ನು ಹೀರಿ, ಕೆಲವು ಹೊತ್ತು ಅದನ್ನು ಬಾಯಿಯಲ್ಲಿಯೇ ಅಗಿಯುತ್ತದೆ. ಇದರಿಂದ ಸಿಹಿಯಲ್ಲಿರುವ ಸುಕ್ರೋಸ್ ಮತ್ತಷ್ಟು ಒಡೆದು ಪ್ರುಕ್ಟೋಸ್ ಮತ್ತು ಗ್ಲೂಕೋಸ್ ಗಳಾಗುತ್ತಾ ಹೋಗುತ್ತದೆ. ಹೀಗೆ ಸಿಹಿಯನ್ನು ಸಾಗಿಸುವಾಗ ಗೂಡಿನ ಬಿಸುಪಿಗೆ ಸಿಹಿಯಲ್ಲಿನ ನೀರಿನ ಅಂಶವು ಕಡಿಮೆಯಾಗುತ್ತಾ ಹೋಗುತ್ತದೆ. ಒಟ್ಟಿನಲ್ಲಿ, ಸಿಹಿಯಲ್ಲಿರುವ ಸಿಕ್ಕಲು ಸಕ್ಕರೆಗಳು ಒಡೆದು ಸಡಿಲ ಸಕ್ಕರೆಗಳಾಗುವುದು ಮತ್ತು ಅದರಲ್ಲಿರುವ ನೀರು ಆರಿದರೆ ಅದು ಜೇನಾದಂತೆ.

ಸಿಹಿಯಲ್ಲಿರುವ ಹೆಚ್ಚಿನ ಸುಕ್ರೋಸ್ ಒಡೆದು ಗ್ಲುಕೋಸ್ ಮತ್ತು ಪ್ರುಕ್ಟೋಸ್‍ಗಳಾಗಿ, ಅದು ಜೇನಾಗಿದೆ ಎಂದು ಹುಳಗಳಿಗೆ ಅನಿಸಿದ ಮೇಲೆ ಸಿಹಿಯನ್ನು ಗೂಡಿನ ಕೋಣೆಯಲ್ಲಿರಿಸುತ್ತವೆ. ಆದರೆ ಇದೇ ಪೂರ್ತಿಯಾದ ಜೇನಲ್ಲ! ಗೂಡಿನಲ್ಲಿರುವ ಜೇನಿನಲ್ಲಿ ಇನ್ನೂ 40-50% ನೀರಿನ ಅಂಶ ಇರುತ್ತದೆ. ಆಗ ಗೂಡಿನ ಹುಳಗಳು ತನ್ನ ರೆಕ್ಕೆಯನ್ನು ಬಡಿದು, ಗಾಳಿಯನ್ನು ಬೀಸಿ ನೀರು ಆರುವಂತೆ ಮಾಡುತ್ತವೆ. ರೆಕ್ಕೆ ಬಡಿತದ ಗಾಳಿ ಮತ್ತು ಗೂಡಿನ ಬಿಸುಪಿಗೆ ಜೇನಿನಲ್ಲಿರುವ ನೀರು ಆರಿಹೋಗಿ ನೀರಿನಂಶವು 20% ಗಿಂತ ಕಡಿಮೆಯಾಗುತ್ತದೆ. ಆಗ ಇದು ಹುಳಗಳ ಊಟಕ್ಕೆ ತಕ್ಕುದಾದ ಜೇನಾದಂತೆ. ಹೂವಿನಿಂದ ಹೊತ್ತು ತರುವ ಸಿಹಿಯನ್ನು ಅಗಿದು, ಹುಳದಿಂದ ಹುಳಕ್ಕೆ ಸಾಗಿಸಿ, ಬಳಿಕ ಕೋಣೆಯಲ್ಲಿರಿಸಿ, ಗಾಳಿ ಬೀಸಿ ಗುಣಮಟ್ಟದ ಜೇನಾಗಿಸಲು ಸುಮಾರು 4 ದಿನಗಳು ಬೇಕಾಗುತ್ತವೆ.

ಸ್ಪೇನಿನಲ್ಲಿರುವ 8000 ವರುಶಗಳಶ್ಟು ಹಳೆಯದಾದ, ಅರನ್ಯ ಹೆಸರಿನ ಕಲ್ಲುಗುಹೆಗಳಲ್ಲಿ ಕಂಡುಬಂದ ಜೇನುಕೀಳುವ ಕೆತ್ತನೆ. (ಅದರ ಚಿತ್ರರೂಪವಿದು)

ಸ್ಪೇನಿನಲ್ಲಿರುವ 8000 ವರುಶಗಳಶ್ಟು ಹಳೆಯದಾದ, ಅರನ್ಯ ಹೆಸರಿನ ಕಲ್ಲುಗುಹೆಗಳಲ್ಲಿ ಕಂಡುಬಂದ ಜೇನುಕೀಳುವ ಕೆತ್ತನೆ. (ಅದರ ಚಿತ್ರರೂಪವಿದು)

ಸಿಹಿಯಲ್ಲಿರುವ ನೀರನ್ನು ಗೂಡಿನ ಕೋಣೆಯಲ್ಲಿಟ್ಟು ಆರಿಸುವಾಗ ಹುಳಗಳು ತಮ್ಮ ಜಾಣತನವನ್ನು ತೋರುತ್ತವೆ. ಮೊದಲು ಬರಿದಾಗಿರುವ ಕೋಣೆಯ ಕಾಲುಬಾಗದಷ್ಟು ಮಾತ್ರ ಸಿಹಿಯನ್ನು ತುಂಬಿಸುತ್ತವೆ. ಆಗ ಆ ಸಿಹಿಯು ಗಾಳಿ ಮತ್ತು ಬಿಸುಪಿಗೆ ಬೇಗ ಆರುತ್ತದೆ. ಸಿಹಿಯಲ್ಲಿರುವ ನೀರು ಆರಿದ ಮೇಲೆ ಆ ಕೋಣೆಯಲ್ಲಿ ಅರ್ಧಬಾಗದಷ್ಟು ಸಿಹಿಯನ್ನು ತುಂಬಿಸುತ್ತವೆ. ಅದೂ ಆರಿದ ಮೇಲೆ ಮತ್ತಷ್ಟು ಸಿಹಿಯನ್ನು ತುಂಬಿಸುತ್ತವೆ. ಹೀಗೆ ಹಂತ ಹಂತವಾಗಿ ಕೋಣೆಯಲ್ಲಿ ಸಿಹಿಯನ್ನಿರಿಸಿ ಅದರ ನೀರನ್ನು ಆರಿಸಿ ಜೇನಾಗಿಸುತ್ತದೆ. ಒಂದು ಕೋಣೆಯಲ್ಲಿರುವ ಸಿಹಿಯು ಪೂರ್ತಿಯಾಗಿ ಜೇನಾದ ಮೇಲೆ ಹುಳವು ಕೊಣೆಯ ಬಾಯನ್ನು ತೆಳುವಾದ ಮೇಣದ ಪದರವನ್ನು ಬಳಸಿ ಮುಚ್ಚುತ್ತವೆ. ಇದು ಜೇನು ಹಾಳಾಗದಂತೆ ಕಾಪಾಡುತ್ತದೆ.

ಜೇನಿನಲ್ಲಿ ನೀರಿನಂಶವಿದ್ದರೆ ಏನಾಗುತ್ತೆ?
ಹೂವಿನ ಸಿಹಿಯಲ್ಲಿ ಸುಮಾರು 80% ನೀರಿನಂಶ ಇರುತ್ತದೆ. ಸಿಹಿಯು ಒಡೆದು ಜೇನಾದ ಮೇಲೆ ಹುಳವು ಅದರಲ್ಲಿರುವ ನೀರನ್ನು ಆರಿಸಲು ದುಡಿಯುತ್ತದೆ. ಒಂದು ವೇಳೆ ಆ ಜೇನಿನಲ್ಲಿ ನೀರಿನಂಶ 20% ಗಿಂತ ಹೆಚ್ಚಿದ್ದರೆ ಮತ್ತು ಸುತ್ತಲಿನ ಬಿಸುಪು 25 ಡಿಗ್ರಿ ಸೆಲ್ಶಿಯಸ್ ಗಿಂತ ಹೆಚ್ಚಿದ್ದರೆ, ಜೇನಿನಲ್ಲಿರುವ ಹುದುಗೆಬ್ಬಿಸುವ ಅಣಬೆ(Yeast)ಗಳು ತಮ್ಮ ಕೆಲಸ ಮಾಡಲು ಹುರುಪನ್ನು ಪಡೆಯುತ್ತವೆ. ಇವು ಜೇನಿನ ಸಕ್ಕರೆಯನ್ನು ಹುದುಗೆಬ್ಬಿಸಿ ಹೆಂಡವಾಗಿ (alcohol) ಮಾರ್ಪಾಟುಗೊಳಿಸುತ್ತವೆ. ಜೇನನ್ನು ಹೆಚ್ಚು ದಿನಗಳ ಕಾಲ ಕಾಪಿಡಬೇಕಾದರೆ ಅದರ ನೀರಿನಂಶವು 20% ಗಿಂತ ಮೇಲಿರಬಾರದು ಮತ್ತು ಬಿಸುಪು 25 ಡಿಗ್ರಿಗಿಂತ ಹೆಚ್ಚಿರಬಾರದು, ಇವೆರಡೂ ಅಂಶಗಳನ್ನು ಜೇನುಹುಳಗಳು ಗೂಡಿನಲ್ಲಿ ಕಾದುಕೊಳ್ಳುತ್ತವೆ.

ಜೇನಿನಲ್ಲಿ ಏನಿದೆ?
ಜೇನು ನೀರಿನಲ್ಲಿ ಕರಗುವಂತಹ ಮಂದವಾದ ರಸ. 10 ರಿಂದ 18 ಡಿಗ್ರಿ ಸೆಲ್ಸಿಯಸ್ ಬಿಸುಪಿನಲ್ಲಿ ಕಾಳು-ಕಾಳಾಗುವ ಗುಣವನ್ನು ಹೊಂದಿದೆ. ಜೇನುತುಪ್ಪವು ಕೊಂಚ ಹುಳಿಯ ಅಂಶವನ್ನು ಹೊಂದಿದ್ದು ಇದರ ಹುಳಿಯಳತೆ (pH) 3.4-6.1 ಇರುತ್ತದೆ. ಜೇನಿನಲ್ಲಿ ಹೆಚ್ಚಿರುವ ಸಕ್ಕರೆ, ಹುಳಿ, ಹೈಡ್ರೋಜನ್ ಪೆರಾಕ್ಸೈಡ್, ಪ್ಲೆವೊನಾಯ್ಡ್ಸ್(flavonoids), ಪಿನಾಲಿಕ್ಸ್ (phenolics) ಮತ್ತು ಟರ‍್ಪೆನೆಸ್ (terpenes)ಗಳಿರುವುದರಿಂದ ಜೇನು ಒಳ್ಳೆಯ ಕೊಳೆಯಳಿಕ (antiseptic) ಹಾಗು ಸೀರುಸಿರಿಗಳ (micro-organisms) ಬೆಳವಣಿಗೆ ತಡೆಯುವ ಗುಣವನ್ನು ಪಡೆದುಕೊಂಡಿದೆ.

ಜೇನಿನಲ್ಲಿರುವ ಮತ್ತಷ್ಟು ಅಡಕಗಳು:Jenu_aDaka

ಬಾಳುಳುಪು (Vitamins): ಎ, ಬೀಟಾ ಕೆರೋಟೀನ್ (Beta carotene), ಬಿ1 ತಯಾಮೀನ್(B1 Thiamin), ಬಿ2 ರೈಬೋಪ್ಲವಿನ್ (B2 Riboflavin), ಬಿ3 ನಯಾಸಿನ್ (B3 Niacin), ಬಿ5 ಪೆಂಟಾತನಿಕ್ ಹುಳಿ (B5 Pantothenic acid), ಬಿ6 ಪೈರಿಡೊಕ್ಸಿನ್ (B6 Pyridoxine), ಬಿ8 ಬಯೋಟಿನ್ (B8 Biotin), ಬಿ9 ಪೊಲೇಟ್ (B9 Folate), ಸಿ, ಡಿ, ಇ ಮತ್ತು ಕೆ.

ಮಿನರಲ್ಸ್: ಕ್ಯಾಲ್ಸಿಯಂ, ತಾಮ್ರ, ಅಯೋಡಿನ್, ಕಬ್ಬಿಣ, ಮೆಗ್ನೇಶಿಯಂ, ಮ್ಯಾಂಗನೀಸ್, ಪೊಟಾಸಿಯಂ, ಸೋಡಿಯಂ, ಸಲ್ಪರ್, ಪಾಸ್ಪರಸ್ ಮತ್ತು ಜಿಂಕ್.

ಅಮೈನೊ ಹುಳಿಗಳು ಮತ್ತು ಕಳೆವಣಿಕಾಪು (Anti-oxidants) ಗಳು ಜೇನಿನಲ್ಲಿರುವ ಇತರ ಕೆಲವು ಮುಖ್ಯವಾದ ಅಡಕಗಳು. ಜೇನುತುಪ್ಪದ ತಿಣ್ಮೆ(Density) 1.36 ಕಿ.ಗ್ರಾಂ/ಲೀಟರ್ (ನೀರಿಗಿಂತ 36% ಹೆಚ್ಚಿನ ತಿಣ್ಮೆಯನ್ನು ಇದು ಹೊಂದಿದೆ.)

ಜೇನು ಕೆಡದಿರಲು ಕಾರಣವೇನು?
ಜೇನಿನಲ್ಲಿರುವ ನೀರಿನ ಅಂಶವು 20% ಕಡಿಮೆ ಇರುವುದರಿಂದ ಇದರ ನೀರಿನ ಚಟುವಟಿಕೆ (water activity) 0.6 (0 ಯಿಂದ 1 ರ ಅಳತೆಯಲ್ಲಿ) ಇರುತ್ತದೆ. ಬ್ಯಾಕ್ಟೀರಿಯಾ ಹಾಗು ಪಂಗಸ್ ನಂತಹ ಸೀರುಸಿರುಗಳು ತಮ್ಮ ಕೆಲಸವನ್ನು ನಡೆಸಲು ನೀರಿನ ಚಟುವಟಿಕೆಯು 0.75 ಗಿಂತ ಹೆಚ್ಚಿರಬೇಕು. ಹಾಗಾಗಿ ಜೇನಿನಲ್ಲಿ ಯಾವುದೇ ಸೀರಿಸುರಿಗಳು ತಮ್ಮ ಕೆಲಸ ಮಾಡಲಾಗದೇ ಜೇನು ಹಲವು ಕಾಲ ಕೆಡದಂತೆ ಇರುತ್ತದೆ. ಇದಲ್ಲದೇ ಜೇನಿನ ಹುಳಿಯಳತೆ (pH), ಜೇನಿನಲ್ಲಿರುವ ಗ್ಲೂಕೊನಿಕ್ ಆಸಿಡ್ ಹಾಗು ಇತರೆ ಅಡಕಗಳು ಇದನ್ನು ಕೆಡದಂತೆ ಇರಲು ನೆರವಾಗುತ್ತವೆ. ಹೀಗೆ ಹಲವು ಹಂತಗಳ ಮೂಲಕ ಹೂವಿನ ಸಿಹಿಯು ಜೇನಾಗಿ ಹಲವು ವರುಶಗಳ ಕಾಲ ಕೆಡದಂತೆ ಉಳಿಯುವ ತಿನಿಸಾಗಿ ಮಾರ್ಪಾಡಾಗುತ್ತದೆ.

(ಮಾಹಿತಿ ಸೆಲೆ: westmtnapiary.com)
(ಚಿತ್ರ ಸೆಲೆ: ಅಭಿಲಾಷ್, ವಿಕಿಪೀಡಿಯಾ)