ತನ್ನಿಂದ ತಾನೇ ಸರಿದೂಗಿಸಿಕೊಳ್ಳಬಲ್ಲ ಬೈಕ್

ಜಯತೀರ್ಥ ನಾಡಗೌಡ.

ಬಿಎಮ್‌ಡಬ್ಲ್ಯೂ (BMW) ಕಾರು ತಯಾರಕ ಕೂಟವಾಗಿ ಹೆಸರು ಮಾಡುವ ಮೊದಲೇ ಇಗ್ಗಾಲಿ ಬಂಡಿ (ಬೈಕ್) ತಯಾರಿಕೆಯಲ್ಲಿ ಹೆಸರುವಾಸಿ ಕೂಟವಾಗಿತ್ತು. ಇಂದಿಗೂ ಬಿಎಮ್‌ಡಬ್ಲ್ಯೂ ಬೈಕ್‌ಗಳಿಗೆ ಭಾರೀ ಬೇಡಿಕೆ. ಬೈಕ್ ತಯಾರಿಕೆಯಲ್ಲಿ ಹಲವಾರು ವರುಶಗಳ ಇತಿಹಾಸ ಹೊಂದಿರುವ ಬಿಎಮ್‌ಡಬ್ಲ್ಯೂ, ಬೈಕ್ ಓಡಿಸುವ ಹವ್ಯಾಸಿಗರಿಗೆ ಬಲು ಅಚ್ಚುಮೆಚ್ಚು. 2016ರ ವರುಶ ಬಿಎಮ್‌ಡಬ್ಲ್ಯೂ ಕೂಟಕ್ಕೆ ನೂರನೇ ಹುಟ್ಟುಹಬ್ಬದ ಸಂಭ್ರಮವಾಗಿತ್ತು. ಇದನ್ನು ಆಚರಿಸಲೆಂದೇ ಬಿಎಮ್‌ಡಬ್ಲ್ಯೂ ಕೂಟ, ಹೊಸದೊಂದು ಇಗ್ಗಾಲಿ ಬಂಡಿಯ ಹೊಳಹನ್ನು (Concept) ಮುಂದಿಟ್ಟಿತ್ತು. ಬಿಎಮ್‌ಡಬ್ಲ್ಯೂರವರ ಈ ಹೊಸ ಹೊಳಹಿನ ಇಗ್ಗಾಲಿ ಬಂಡಿಯ ಬಗ್ಗೆ ತಿಳಿಯೋಣ ಬನ್ನಿ.

 ಈಗ ಎಲ್ಲವೂ ಚೂಟಿ ಎಣಿಗಳ (Smart Devices) ಕಾಲ. ನಮ್ಮ ಮೊಬೈಲ್, ಎಣ್ಣುಕ (Computer), ಅಲ್ಲದೇ ಮುಂದೊಮ್ಮೆ ಇಂಟರ್‌ನೆಟ್ ಆಫ್ ತಿಂಗ್ಸ್ (Internet of Things) ಮೂಲಕ ನಾವು ಬಳಸುವ ಹೆಚ್ಚಿನ ವಸ್ತುಗಳು ಚೂಟಿಯಾಗಿರಲಿವೆ. ಬಿಎಮ್‌ಡಬ್ಲ್ಯೂ ಇದೀಗ ತನ್ನ ಬೈಕ್‌ಗಳನ್ನು ಚೂಟಿಯಾಗಿಸುವತ್ತ ಸಾಗಿದೆ. ಬಿಎಮ್‌ಡಬ್ಲ್ಯೂ ಮೋಟರ್ರಾಡ್ ಕೂಟದ ವಿಷನ್ ನೆಕ್ಸ್ಟ್ 100 (Vision Next 100)  ಹೆಸರಿನ ಈ ವಿಶೇಷ ಬೈಕ್ ಓಡಿಸುಗರಿಗೆ ಬೇರೆಯದೇ ಆದ ಅನುಭವ ನೀಡಲಿದೆ. ಈ ಇಗ್ಗಾಲಿ ಬಂಡಿ ಸೆಲ್ಫ್ ಬ್ಯಾಲನ್ಸಿಂಗ್ (Self Balancing bike) ಎಂಬ ಏರ್ಪಾಟನ್ನು ಹೊಂದುವ ಮೂಲಕ ಪೂರ್ತಿಯಾಗಿ ತನ್ನಿಡಿತದಲ್ಲಿರಲಿದೆ. ಹೊಸಬರೂ ಕೂಡ ಈ ಬಂಡಿಯನ್ನು ಸಲೀಸಾಗಿ ಓಡಿಸಿಕೊಂಡು ಹೋಗುವಂತೆ ಅಣಿಗೊಳಿಸುತ್ತಿದ್ದಾರಂತೆ ಬಿಎಮ್‌ಡಬ್ಲ್ಯೂ ಬಿಣಿಯರಿಗರು(Engineers). ಇದರ ಇನ್ನೊಂದು ಪ್ರಮುಖ ವಿಶೇಷತೆಯೆಂದರೆ ಈ ಇಗ್ಗಾಲಿ ಬಂಡಿ ಓಡಿಸುಗನಿಗೆ ಯಾವುದೇ ಅಡೆತಡೆಯಾಗದಂತೆ ಸುಲಭವಾಗಿ ಕಾಪಾಡಬಲ್ಲುದು. ಹಾಗಾಗಿ ಓಡಿಸುಗರು ತಲೆಗಾಪು (Helmet) ತೊಟ್ಟುಕೊಳ್ಳುವುದು ಬೇಕಿಲ್ಲ.

 ಹೊಸ ಓಡಿಸುಗರಿಗೆ ಇದೊಂದು ವರವಾದರೆ, ಅನುಭವಿ ಓಡಿಸುಗರಿಗೆ ಇದು ಹೆಚ್ಚಿನ ನೆರವು ನೀಡಲಿದೆಯಂತೆ. ಈ ಬೈಕ್‌‌ನೊಂದಿಗೆ ವೈಸರ್ (Visor) ಎಂಬ ಕನ್ನಡಕವನ್ನು ಓಡಿಸುಗರು ಧರಿಸಬೇಕಾಗುತ್ತದೆ. ಈ ವೈಸರ್ ಕನ್ನಡಕ ಸುತ್ತಮುತ್ತಲಿನ ಸ್ಥಿತಿಗತಿ ಬಗ್ಗೆ, ದಾರಿಯ ಬಗ್ಗೆ ಓಡಿಸುಗನಿಗೆ ಮಾಹಿತಿ ಕಳಿಸುತ್ತಿರುತ್ತದೆ. ಇದಕ್ಕೆ ತಕ್ಕಂತೆ ಓಡಿಸುಗರು ಬದಲಾವಣೆ ಮಾಡಿಕೊಂಡು ಬಂಡಿ ಓಡಿಸಿಕೊಂಡು ಹೋಗಬಹುದು. ಓಡಿಸುಗನ ಕಣ್ಣಾಡಿಸುವಿಕೆಯ ಮೂಲಕವೇ ಈ ವೈಸರ್ ಕನ್ನಡಕ ಬಂಡಿಗೆ ಮಾಹಿತಿ ಹಂಚಿಕೊಳ್ಳಲಿದೆ. ಇದಲ್ಲದೇ ಓಡಿಸುಗನ ಬಗೆ (Rider’s Style) ಅರಿಯಬಲ್ಲ ಚಳಕ(technology) ಈ ಇಗ್ಗಾಲಿ ಬಂಡಿ ಹೊಂದಿದ್ದು ಅದಕ್ಕೆ ತಕ್ಕಂತೆ ಸಾಗಬಲ್ಲದಾಗಿದೆ. ಗೂಗಲ್, ಟೆಸ್ಲಾ ಕೂಟದವರು ಬೆಳೆಸುತ್ತಿರುವ ತಂತಾನೇ ಸಾಗಬಲ್ಲ ಕಾರುಗಳಲ್ಲಿರುವ ಚಳಕಗಳಿಗೆ ಈ ಇಗ್ಗಾಲಿ ಬಂಡಿಯ ಚಳಕ ಸರಿಸಾಟಿಯಾಗಿ ನಿಲ್ಲಬಲ್ಲದು.

ವೈಸರ್ ಕನ್ನಡಕ ತೊಟ್ಟು ತನ್ನಿಂದ ತಾನೇ ಸರಿದೂಗಿಸಿಕೊಳ್ಳುವ ಬೈಕ್ ಮೇಲೆ ಸಾಗುತ್ತಿರುವ ಓಡಿಸುಗ

 ಬಿಎಮ್‌ಡಬ್ಲ್ಯೂ ಮುಂದಾಳುಗಳಲ್ಲೊಬ್ಬರಾದ ಹೋಲ್ಗರ್ ಹಾಂಪ್ (Holger Hampf) ಹೇಳುವಂತೆ,”ವಿಷನ್ ನೆಕ್ಸ್ಟ್ 100 ಬಂಡಿಯ, ಮಾಡುಗೆಯ ಜಾಣ್ಮೆಯು (Artificial Intelligence) ತನ್ನ ಸುತ್ತಲಿನ ಬಗ್ಗೆ, ಹೆಚ್ಚು ಹರವಿನ ಮಾಹಿತಿ ಪಡೆಯಬಲ್ಲದಾಗಿದ್ದು, ಬಂಡಿಯ ಮುಂದೆ ಕಾಣಲಿರುವ ದಾರಿಯ ಬಗ್ಗೆ ಕರಾರುವಕ್ಕಾದ ವಿವರ ಓಡಿಸುಗನ ಮುಂದಿಡಲಿದೆ.”  ಸಾಮಾನ್ಯವಾಗಿ ಬಂಡಿಗಳನ್ನು ತಿರುಗಿಸುವಾಗ ಬಂಡಿಯ ವೇಗವನ್ನು ಕಡಿಮೆಗೊಳಿಸಿ ಅದರ ಹಿಡಿಕೆಯನ್ನು(Handle bar) ಸಂಪೂರ್ಣವಾಗಿ ವಾಲಿಸಿಕೊಳ್ಳುತ್ತ ಬಂಡಿಯ ಅಡಿಗಟ್ಟು (Chassis frame) ಪೂರ್ತಿಯಾಗಿ ತಿರುಗುವಂತೆ  ಮಾಡಬೇಕಾಗುತ್ತದೆ. ಹೆಚ್ಚಿನ ವೇಗದಿಂದ ಬಂಡಿಯನ್ನು ತಿರುಗಿಸಬೇಕೆಂದಾಗ ಬಂಡಿಯ ಮೇಲಿನ ಹಿಡಿತ ತಪ್ಪಿ ಬಂಡಿ ಬೇರೆಡೆಗೆ ವಾಲುವ ಸಾಧ್ಯತೆ ಹೆಚ್ಚು. ಆದರೆ ಬಿಎಮ್‌ಡಬ್ಲ್ಯೂ ಕೂಟದವರ ಹೊಳಹಿನ ಬೈಕ್,  “ಫ್ಲೆಕ್ಸ್ ಫ್ರೇಮ್” (Flex Frame) ಚಳಕವನ್ನು ಅಳವಡಿಸಿಕೊಂಡಿದ್ದು ವೇಗದಿಂದ ಬೈಕ್ ತಿರುಗಿಸಿದಾಗಲೂ ಸಲೀಸಾಗಿ ಮುನ್ನುಗ್ಗಲಿದೆ. ಈ ಚಳಕದ ನೆರವಿನಿಂದ, ಬಂಡಿ ಓಡಿಸುಗರು 100 ಮೈಲಿ ಪ್ರತಿ ಗಂಟೆ ವೇಗದಲ್ಲೂ ಯಾವುದೇ ಅಳುಕಿಲ್ಲದೆ ಬಂಡಿಯನ್ನು ಸರ್ರನೆ ತಿರುಗಿಸಿ ಕೊಂಡೊಯ್ಯಬಹುದೆಂಬುದು ಕೂಟದವರ ಅಂಬೋಣ.

” ನಮ್ಮ ಬೈಕುಗಳು, ಹತ್ತಾರು ವರುಶಗಳ ಮುಂದಿರುವ ಸಮಸ್ಯೆಗಳನ್ನು ನೀಗಿಸಬಲ್ಲ ಈಡುಗಾರಿಕೆ (Design) ಹೊಂದಿರುತ್ತವೆ. ಈ ಹೊಸ ಹೊಳಹಿನ ಬಂಡಿಯಲ್ಲಿ ಅಡೆತಡೆಯಿಲ್ಲದ ಓಡಾಟದ ಅನುಭವ ನಿಮ್ಮದಾಗಿರಲಿದೆ, ತಲೆಗಾಪಿನಂತ ಯಾವುದೇ ಕಾಪಿನ ಎಣಿಗಳು (Safety Devices) ನಿಮಗೆ ಬೇಕಿಲ್ಲ “, ಎಂಬುದು ಬಿಎಮ್‌ಡಬ್ಲ್ಯೂ ಈಡುಗಾರಿಕೆಯ ಮುಂದಾಳು ಎಡ್ಗಾರ್ ಹೆನ್ರಿಶ್ (Edgar Heinrich) ಅನಿಸಿಕೆ. 2030-40ರ ಹೊತ್ತಿಗೆ ಈ ಹೊಳಹನ್ನು ದಿಟವಾಗಿಸುವತ್ತ ಬಿಎಮ್‌ಡಬ್ಲ್ಯೂ ಕೂಟ ಹೆಜ್ಜೆ ಇಡುತ್ತಿದೆ. ಅಲ್ಲಿಯವರೆಗೆ ಈ ವಿಶೇಷ ಬೈಕ್‌ಗಾಗಿ ಕಾಯಲೇಬೇಕು.

(** ಬಿಎಮ್‌ಡಬ್ಲ್ಯೂ ಮೋಟರ್ರಾಡ್ ಎಂಬುದು ಬಿಎಮ್‌ಡಬ್ಲ್ಯೂ ಬೈಕ್ ಕೂಟದ ಹೆಸರು)

ಮಾಹಿತಿ ಮತ್ತು ತಿಟ್ಟ ಸೆಲೆ: bmw-motorrad

ಕಾರುಗಳಿಂದ ಸಿಗಲಿದೆ ಕುಡಿಯುವ ನೀರು

ಜಯತೀರ್ಥ ನಾಡಗೌಡ.

ಕುಡಿಯುವ ನೀರು ಬಲು ಮುಖ್ಯ. ಅದರಲ್ಲೂ ಬೇಸಿಗೆಯಲ್ಲಿ ಬೇರೆನೂ ಸಿಗದೇ ಇದ್ದರೂ ಇರಬಹುದು, ಆದರೆ ನೀರು ಇಲ್ಲದಿದ್ದರೆ ಬಾಳು ಊಹಿಸಿಕೊಳ್ಳಲು ಆಗದು. ಜಗತ್ತು ಎಷ್ಟೇ ಮುಂದುವರೆದರೂ ಹಲವೆಡೆ ನೀರು ಸಿಗದೇ ಮಂದಿಯ ಪರದಾಟ ಇನ್ನೂ ಮುಂದುವರೆಯುತ್ತಲೇ ಇದೆ. ಅದರಲ್ಲೂ ದೂರದ ಪಯಣಕ್ಕೆ ಕಾರು/ಗಾಡಿಗಳಲ್ಲಿ ತಪ್ಪದೇ ನೀರಿನ ಬಾಟಲಿಗಳನ್ನು ಕೊಂಡೊಯ್ಯಲೇಬೇಕು. ಮರಳುಗಾಡಿನಲ್ಲಿ ಕಾರಿನಲ್ಲಿ ಕುಳಿತು ಸಾಗುತ್ತಿದ್ದೀರಿ ಅಂತ ಅಂದುಕೊಳ್ಳಿರಿ, ನಿಮ್ಮ ನೀರಿನ ಬಾಟಲಿಗಳು ಖಾಲಿ, ಹೊರಗೆ ಎಲ್ಲೂ ಕುಡಿಯಲು ನೀರು ಸಿಗದಂತಿದ್ದರೆ ಹೇಗೆ? ಬಾಯಾರಿಕೆಯನ್ನು ಹೇಗೆ ತಣಿಸುವುದು ಎಂದು ಒದ್ದಾಡುವ ಪರಿಸ್ಥಿತಿ ಅದು. ಆದರೆ, ಇಲ್ಲೊಂದು ಹೊಸ ಚಳಕ ನಮ್ಮ ಮುಂದಿದೆ. ಈಗ ಕಾರಿನ ಮೂಲಕವೇ ಕುಡಿಯುವ ನೀರನ್ನು ಪಡೆಯಬಹುದು! ನೀರಿಗಾಗಿ ಅಲ್ಲಿಲ್ಲಿ ತಡಕಾಡುವ, ಅಂಗಡಿ/ಹೋಟೆಲ್‌ಗಳಲ್ಲಿ ದುಡ್ಡು ಕೊಟ್ಟು ನೀರು ಕುಡಿಯಬೇಕಿಲ್ಲ. ಹೌದು ನೂರಾರು ವರುಶಗಳ ಹಳಮೆ ಹೊಂದಿರುವ ಜಗತ್ತಿನೆಲ್ಲೆಡೆ ಹೆಸರುವಾಸಿಯಾಗಿರುವ ಫೋರ‍್ಡ್ ಕಾರು (Ford) ತಯಾರಕ ಕೂಟ ಇಂತದೊಂದು ಹೊಳಹನ್ನು(Concept) ಎಲ್ಲರ ಮುಂದಿಟ್ಟಿದೆ.

ಎಲ್ಲ ಕಾರುಗಳಲ್ಲಿ ಇದೀಗ ಗಾಳಿ ಪಾಡುಕದ ಏರ್ಪಾಟನ್ನು(Air conditioning system) ಅಳವಡಿಸಿರುತ್ತಾರೆ.  ನೀರಾವಿಯು ಗಾಳಿ ಪಾಡುಕದ ಏರ್ಪಾಟಿನ ಇಂಗುಕದ(Condenser) ಮೇಲೆ ಕೂಡಿಕೊಳ್ಳುತ್ತವೆ. ಹೀಗೆ ಕೂಡಿಕೊಂಡ ನೀರಾವಿ ಸುತ್ತ ಮುತ್ತಲಿನ ವಾತಾವರಣದ ಬಿಸುಪಿನಿಂದ ನೀರಾಗಿ ಮಾರ್ಪಟ್ಟು ನೆಲಕ್ಕೆ ಬೀಳುತ್ತದೆ. ಈ ರೀತಿ ನೀರು ನೆಲಕ್ಕೆ ಬಿದ್ದು ಪೋಲಾಗುವ ಬದಲು ಅದನ್ನೇಕೆ ಬಳಸಬಾರದೆಂದು ಫೋರ‍್ಡ್ ಕಂಪನಿಯ ಪ್ರಮುಖ ಇಂಜಿನೀಯರ್ ಡೌಗ್ ಮಾರ್ಟಿನ್(Doug Martin) ಅವರಿಗೆ ಅನಿಸಿತು. ಈ ದಿಕ್ಕಿನಲ್ಲಿ ಕೆಲಸ ಮಾಡಿ, ನೀರಾವಿಯನ್ನು ಬಳಸಿಕೊಂಡು ಕಾರಿನ ಒಳಗಡೆಯೇ ಕುಡಿಯುವ ನೀರು ಸಿಗುವ ಹಾಗೆ ಮಾಡಬಹುದೆಂದು ಮಾರ್ಟಿನ್ ತೋರಿಸಿಕೊಟ್ಟಿದ್ದಾರೆ.

ದಕ್ಷಿಣ ಅಮೇರಿಕಾದ ಪೆರು ದೇಶದ ಬಿಲ್‌ಬೋರ್ಡ್ ಗಳೇ (Billboard) ಈ ಹೊಳಹಿನ ಹಿಂದಿನ ಸ್ಪೂರ್ತಿ ಎಂದು ಮಾರ್ಟಿನ್ ಹೇಳಿಕೊಂಡಿದ್ದಾರೆ. ಬಿಲ್‌ಬೋರ್ಡ್ ಎಂಬ ಬಯಲರಿಕೆ ಹಲಗೆಗಳು(Advertising Boards/Hoardings) ವಾತಾವರಣದ ಆವಿಯನ್ನು ಕೂಡಿಟ್ಟು, ಆ ನೀರನ್ನು ಸೋಸಿ, ಕುಡಿಯುವ ನೀರನ್ನು ಒದಗಿಸಿಕೊಡುತ್ತವೆ. ಇದೇ ಬಗೆಯಲ್ಲಿ, ಬಂಡಿಯ ಗಾಳಿಪಾಡುಕದ ಏರ್ಪಾಟಿನ ನೀರಾವಿಯನ್ನು ಕೂಡಿಟ್ಟು, ಅದೇ ನೀರನ್ನು ಸೋಸಿ, ನೀರಿನ ಚೀಲದಲ್ಲಿ ಕೂಡಿಟ್ಟು ಬೇಕೆಂದಾಗ ಕುಡಿಯಬಹುದು. ಸಂಗಡಿಗ ಜಾನ್ ರೊಲಿಂಗರ್(John Rollinger) ಜೊತೆಗೂಡಿ ಮೊದಲ ಮಾದರಿಯನ್ನು ತಯಾರಿಸಿ ಓಡಿಸುಗನ ಪಕ್ಕದಲ್ಲಿ ಚಿಕ್ಕ ನಲ್ಲಿಯೊಂದರ ಮೂಲಕ ನೀರನ್ನು ಒದಗಿಸುವ ಏರ್ಪಾಟು ಅಣಿ ಮಾಡಿ ತೋರಿಸಿದ್ದಾರೆ ಮಾರ್ಟಿನ್.

ಈ ಏರ್ಪಾಟು ಎಷ್ಟು ನೀರನ್ನು ಕೊಡುತ್ತದೆ ಎಂಬ ಪ್ರಶ್ನೆಗೆ, ಸುಮಾರು 1.9ಲೀಟರ್ ಎಂದು ಮಾರ್ಟಿನ್ ವಿವರಿಸಿದ್ದಾರೆ. ಬಂಡಿಯ ಗಾಳಿ ಪಾಡುಕದ ಏರ್ಪಾಟಿಗೆ ತಕ್ಕಂತೆ ನೀರಿನ ಪ್ರಮಾಣ ಹೆಚ್ಚು ಕಡಿಮೆಯಾಗುತ್ತದೆ. ದೂರದ ಪಯಣಗಳಿಗೆ ಇದು ನೆರವಾಗಲಿದೆ. ಬಂಡಿಯಲ್ಲೇ ನೀರು ಸಿಗುವುದರಿಂದ ನೀರಿಗಾಗಿ ಹೆಚ್ಚು ಅಲೆದಾಡಬೇಕಿಲ್ಲ. ಕಾರಿನ AC ಏರ್ಪಾಟಿನ ಇಂಗಿಸುಕದ(Condenser) ಮೂಲಕ ಹೊರಬರುವ ನೀರನ್ನು ಒಂದು ಪುಟ್ಟ ಕೊಳಾಯಿ ಇಲ್ಲವೇ ಬುಟ್ಟಿಯಲ್ಲಿ ಕೂಡಿಡಲಾಗುತ್ತದೆ. ಇದೇ ನೀರನ್ನು ಚೊಕ್ಕಟವಾಗಿಸಲು ಸೋಸುಕವೊಂದನ್ನು ಅಳವಡಿಸಿರಲಾಗುತ್ತದೆ, ಸೋಸುಕದ ಮೂಲಕ ನೀರನ್ನು ಎತ್ತುಕದಿಂದ(Pump) ಓಡಿಸುಗನೆಡೆಯಲ್ಲಿ(Driver Cabin) ನಲ್ಲಿ(tap) ಮೂಲಕ ಪಡೆದುಕೊಳ್ಳಬಹುದು. ನೀರು ಪಡೆಯುವ ಈ ಪುಟ್ಟ ಏರ್ಪಾಟಿಗೆ ಹೆಚ್ಚಿನ ದುಡ್ಡು ಮತ್ತು ಜಾಗದ ಅವಶ್ಯಕತೆಯಿಲ್ಲ. ಒಂದು ನೀರಿನ ಕೊಳಾಯಿ, ಸೋಸುಕ, ನೀರಿನ ಕೊಳವೆ ಮತ್ತು ನಲ್ಲಿಯಂತ ಕಡಿಮೆ ವೆಚ್ಚದ ವಸ್ತುಗಳಿದ್ದರೆ ಆಯಿತು.

ಈಗಾಗಲೇ ಮಾದರಿಯೊಂದನ್ನು ಸಿದ್ಧಪಡಿಸಿ ತೋರಿಸಿರುವ ಮಾರ್ಟಿನ್ ಮತ್ತು ಅವರ ತಂಡ, ಮಾದರಿ ತಯಾರಿಸಿ 7-8 ವರುಷ ಕಳೆದರೂ ಈ ಏರ್ಪಾಟಿನ ಕಾರು ಮಾರುಕಟ್ಟೆಗೆ ಯಾವಾಗ ಹೊರಬರುವುದು ಎಂಬುದನ್ನು ಇನ್ನೂ ಹೊರಹಾಕಿಲ್ಲ. 

 

ಮಾಹಿತಿ ಮತ್ತು ತಿಟ್ಟ ಸೆಲೆ:

http://newatlas.com/on-the-go-h2o-air-conditioner-water/45458/

Thirsty? Try On-The-Go H2O (ford.com)

ಮಿದುಳ್ ಬಂಡಿ

ಜಯತೀರ್ಥ ನಾಡಗೌಡ.

ಹೆದ್ದಾರಿಯೊಂದರಲ್ಲಿ ಬಂಡಿಯಲ್ಲಿ ಸಾಗುತ್ತಿದ್ದೀರಿ, ಸಾಲು ಬದಲಿಸಬೇಕೆಂದು(Lane change) ನೀವು ಅಂದುಕೊಳ್ಳುತ್ತಿದ್ದಂತೆ ನಿಮ್ಮ ಬಂಡಿ ಸಾಲು ಬದಲಿಸಿಬಿಟ್ಟಿರುತ್ತದೆ. ಕಡಿದಾದ ಕಣಿವೆಯ ತಿರುವೊಂದರಲ್ಲಿ ಗಾಡಿ ತಿರುಗಿಸಬೇಕಲ್ಲ ಎಂದು ನೀವು ವಿಚಾರ ಮಾಡುತ್ತಿರುವಾಗಲೇ ನಿಮ್ಮ ಗಾಡಿ ತಿರುವಿಕೊಂಡು ಮುನ್ನುಗ್ಗಿರುತ್ತದೆ. ಇದೇನಿದು ಎಂದುಕೊಳ್ಳುತ್ತಿದ್ದೀರಾ? ಹೌದು, ಇದೇ ಬ್ರೈನ್ ಟು ವೆಹಿಕಲ್(Brain to Vehicle) ಅನ್ನುವ ಹೊಸ ಚಳಕ(Technology).

ಜಗತ್ತಿನ ಮುಂಚೂಣಿಯ ಬಂಡಿ ತಯಾರಕ ಕೂಟ ನಿಸ್ಸಾನ್(Nissan) ಇಂತದೊಂದು ಹೊಸ ಚಳಕ ಎಲ್ಲರ ಮುಂದಿಟ್ಟಿದೆ. ಈ ಮಿದುಳ್ ಬಂಡಿಯನ್ನು (ಮಿದುಳಿನ ಅಲೆ ಗುರುತಿಸಿ ಕೆಲಸ ಮಾಡುವ ಬಂಡಿ), 2018ರ ಅಮೇರಿಕಾದಲ್ಲಿ ನಡೆದ ವರ್ಡ್ ಎಕಾನಾಮಿಕ್ ಫೋರಮ್‌ನಲ್ಲಿ(World Economic Forum) ನಿಸ್ಸಾನ್ ಕೂಟ ಈ ಚಳಕದ ಪರಿಚಯ ಮಾಡಿಸಿತ್ತು. ಫೋರಮ್ ನಲ್ಲಿ ಸೇರಿದ್ದ ಮಂದಿಗೆ, ಹೆದ್ದಾರಿಯಲ್ಲಿ ಇಂತ ಗಾಡಿ ಓಡಿಸುವ ಅವಕಾಶ ನೀಡಲಾಗಿತ್ತು. ಈ ಚಳಕ ಅಳವಡಿಸಿಕೊಂಡ ಗಾಡಿ, ದಿಟಹೊತ್ತಿನಲ್ಲಿ(Real Time) ತಂತಾನೇ ಹೊಂದಾಣಿಕೆ ಮಾಡಿಕೊಂಡು ಸಾಗುವ ಹೊಸ ಅನುಭವವೊಂದನ್ನು ಓಡಿಸುಗರಿಗೆ ನೀಡಿತ್ತು. ಮಿದುಳಿನ ಅಲೆಗಳ ಮೂಲಕ ಓಡಿಸುಗನ ಕೆಲಸ ಮಾಡುವುದು ಮತ್ತು ಓಡಿಸುಗರ ಅನಾನುಕೂಲಗಳನ್ನು ತಿಳಿಯುವುದು – ಈ ಏರ್ಪಾಟಿನ ಪ್ರಮುಖ ಕೆಲಸ.

ಈ ಚಳಕವನ್ನು ಎರಡು ಭಾಗಗಳಲ್ಲಿ ಬೇರ್ಪಡಿಸಬಹುದು, ಮೊದಲನೇಯದಾಗಿ ಮುನ್ಹೊಳಹುವಿಕೆ(Prediction): 

ಗಾಡಿಯನ್ನು ಓಡಿಸುಗನೇ ಓಡಿಸುತ್ತಿರುವಾಗ(Normal mode), ಓಡಿಸುಗನ ಮಿದುಳಿನ ಚಟುವಟಿಕೆಯನ್ನು ಈ ಚಳಕ ಮೊದಲೇ ಅರಿತು, ಆತ ಬಂಡಿಯನ್ನು ತಿರುಗಿಸಿಕೊಳ್ಳುವ ಇಲ್ಲವೇ ಬಂಡಿಯ ವೇಗ(Speed) ಹೆಚ್ಚಿಸಲು ತುಳಿಗೆಯನ್ನು(Accelerator Pedal) ಹೆಚ್ಚಿಗೆ ಒತ್ತುವ ಕ್ಷಣಗಳ ಮೊದಲೇ ಈ ಕೆಲಸ ನಡೆದು ಹೋಗಿರುತ್ತದೆ. ಅಂದರೆ ಇಲ್ಲಿ ಮಾರ್ಪೆಸಕದ ಹೊತ್ತು(Reaction Time) ಕಡಿತಗೊಂಡು, ಗಾಡಿ ಓಡಿಸುವಿಕೆಯ ನಲಿವನ್ನು ಹೆಚ್ಚಿಸುತ್ತದೆ. ಉದಾಹರಣೆಗೆ, ಇಕ್ಕಟ್ಟಿನ ಬೆಟ್ಟ-ಗುಡ್ಡದ ದಾರಿಯಲ್ಲಿ ಓಡಿಸುಗರು ಸಲೀಸಾಗಿ ಗಾಡಿ ಓಡಿಸಿಕೊಂಡು ಹೋಗಬಹುದು. ಇಂತಲ್ಲಿ, ನುರಿತ ಓಡಿಸುಗರು, ಈ ಚಳಕದ ಮೂಲಕ ತಮ್ಮ ಅಳವುತನವನ್ನು(Efficiency) ಇನ್ನೂ ಹೆಚ್ಚಿಸಿಕೊಳ್ಳಬಹುದು.

ಚಳಕದ ಎರಡನೇ ಬಾಗಕಂಡುಹಿಡಿಯುವಿಕೆ(Detection): 

ಈ ಹಂತದಲ್ಲಿ ಗಾಡಿ ತಂತಾನೇ ಸಾಗುವ ಬಗೆಯಲ್ಲಿದೆ(Autonomous Mode) ಎಂದುಕೊಳ್ಳಿ, ಈಗಲೂ ಓಡಿಸುಗನ ಮಿದುಳಿನಲ್ಲಿ ಬರುವ ಯೋಚನೆಗಳನ್ನು ಅದು ತಿಳಿದುಕೊಳ್ಳುತ್ತಿರುತ್ತದೆ. ಕಟ್ಟುಜಾಣ್ಮೆಯ(Artificial Intelligence) ಮೂಲಕ ಓಡಿಸುಗನ ಕಿರಿಕಿರಿ, ಅನಾನುಕೂಲಗಳನ್ನು ಅರಿಯುವ ಈ ಚಳಕ, ಬಂಡಿ ಓಡಿಸುವ ಬಗೆಯನ್ನು ಬದಲಿಸುವ ಕೆಲಸ ಮಾಡುತ್ತದೆ. ಉದಾಹರಣೆಗೆ, ಹೆದ್ದಾರಿಯಲ್ಲಿ ಹೋಗುವಾಗ, ಗಾಡಿ ತಂತಾನೇ ಒಂದು ವೇಗದಲ್ಲಿ ಸಾಗುತ್ತಿರುತ್ತದೆ, ಆಗ ಓಡಿಸುಗ ತನ್ನ ಬಂಡಿ ಹೆಚ್ಚಿನ ವೇಗದ ಸಾಲು(Fast Speed Lane) ಯಲ್ಲಿ ಸಾಗಬೇಕೆಂದುಕೊಂಡರೆ, ಕೆಲವು ಸೆಕೆಂಡುಗಳ ನಂತರ ಬಂಡಿ ಅದನ್ನರಿತು, ಓಡಿಸುಗ ಅಂದುಕೊಂಡಂತೆ ಅವನಿಷ್ಟದ ಓಣಿಯಲ್ಲಿ ಸಾಗುತ್ತದೆ.

ನಿಸ್ಸಾನ್‌ರವರ ಮಿದುಳ್ ಬಂಡಿ ಚಳಕ, ಗಾಡಿಗೆ ಸಂಬಂಧಿಸಿದಂತೆ, ದಿಟಹೊತ್ತಿನಲ್ಲಿ ಮಿದುಳಿನ ಅಲೆಗಳನ್ನು, ಚಟುವಟಿಕೆಗಳನ್ನು ಅರಿಯುವ ಮೊಟ್ಟ ಮೊದಲ ಚಳಕವಾಗಿದೆ. ಮಿದುಳಿನ ಅಲೆ ಅರಿಯಲು ಈ ಚಳಕದಲ್ಲಿ ಓಡಿಸುಗ ಒಂದು ಟೋಪಿ ತಲೆಗೆ ಧರಿಸಬೇಕು. ಈ ಟೋಪಿ ಸಾಮಾನ್ಯ ಟೋಪಿಯಾಗಿರದೇ, ಎಲೆಕ್ಟ್ರೊಎನ್ಸಿಫಾಲೋಗ್ರಫಿ(Electroencephalography) ಬಳಸಿ ಓಡಿಸುಗನ ಮಿದುಳಿನ ಅಲೆಗಳ ಅರಿವುಕಗಳ(Brain Wave Sensors) ಮೂಲಕ ಓಡಿಸುಗನ ಯೋಚನೆಗಳನ್ನು ದಿಟಹೊತ್ತಿನಲ್ಲಿ ಅರಿತು ಗಾಡಿಯ ಗಣಕಕ್ಕೆ(Computer) ಸಾಗಿಸುವಂತದ್ದು. ಇನ್ನೇನು ಗಾಡಿ ಓಡಿಸುಗ ತುಳಿಗೆಯನ್ನು ಬಲವಾಗಿ ತುಳಿಯಬೇಕು, ಬಂಡಿಯನ್ನು ತಿರುಗಿಸಬೇಕು ಎಂದುಕೊಳ್ಳುತ್ತಿರುವ 0.2 ರಿಂದ 0.5 ಸೆಕೆಂಡುಗಳ ಮೊದಲೇ ಆ ಕೆಲಸವನ್ನು ಬಂಡಿ ಮಾಡಿರುತ್ತದೆ.

ಮಿದುಳ್ ಬಂಡಿ ಓಡಿಸುಗರು ಧರಿಸಬೇಕಾದ ಟೋಪಿ

ಈ ಚಳಕವನ್ನು ಓಡಿಸುಗರ, ಪಯಣಿಗರ ಮತ್ತು ಬಂಡಿಯ ಕಾಪಿನ(Safety) ಬಗ್ಗೆ ಯಾವುದೇ ರಾಜಿಮಾಡಿಕೊಳ್ಳದಂತೆ ತಯಾರು ಮಾಡಲಾಗುತ್ತಿದೆ. ಈ ಹೊಸ ಚಳಕದ ಮೇಲೆ ಬಲು ನಂಬುಗೆ ಇಟ್ಟುಕೊಂಡಿರುವ ನಿಸ್ಸಾನ್ ಕೂಟದ ಮಾರಾಟ ವಿಭಾಗದ ಹಿರಿಯಾಳು ಡ್ಯಾನಿಯಲ್ ಶಿಲ್ಲಾಚಿ(Daniele Schillaci), ಮುಂಬರುವ ವರುಶಗಳಲ್ಲಿ ತಂತಾನೇ ಓಡುವ ಗಾಡಿಗಳ ಸಂಖ್ಯೆ ಏರಿಕೆಯಾಗಲಿದ್ದು, ಅಲ್ಲಿ ತಮ್ಮ ಮಿದುಳ್ ಬಂಡಿ ಚಳಕ ಸಾಕಷ್ಟು ಕ್ರಾಂತಿ ಉಂಟುಮಾಡಲಿದೆಯೆಂದು ಹೇಳಿಕೊಂಡಿದ್ದಾರೆ. ಈ ಚಳಕ ಬಲು ಭದ್ರವಾಗಿದ್ದು(Safe), ಓಡಿಸುಗರಿಗೆ ಹೊಸ ಹುರುಪು ಮತ್ತು ನಲಿವು ತರಲಿದೆ ಎನ್ನುತ್ತಾರೆ-ಶಿಲ್ಲಾಚಿ.

ಈ ಚಳಕದ ಅನಾನುಕೂಲವೆಂದರೆ ಇಲ್ಲಿ ಓಡಿಸುಗನ ಮಿದುಳಿನಲ್ಲಿ ನಡೆಯುವ ಚಟುವಟಿಕೆಗಳನ್ನು ಅರಿಯುವುದರ ಮೂಲಕ ಅವರ ಗುಟ್ಟಿನ(Privacy) ವಿಷಯ ಇತರರಿಗೆ ತಿಳಿಯುವ ಸಾಧ್ಯತೆ ಇರುತ್ತದೆ. ಇದರ ಬಗ್ಗೆ ಸಾಕಶ್ಟು ಚರ್ಚೆಗಳು ನಡೆಯುತ್ತಿವೆ. ಓಡಿಸುಗನ ತಲೆಯಲ್ಲಿ ಬರುವ ವಿಚಾರಗಳು ಗಾಡಿಯ ಗಣಕದ ಮೂಲಕ ತಿಳಿದು ಆಯಾ ವ್ಯಕ್ತಿಗಳ ಪ್ರೈವೆಸಿಗೆ ಅಡ್ಡಿಯುಂಟಾಗುವುದು ಖಚಿತ. ಇನ್ನೂ ಗಾಡಿಯ ಗಣಕದ ಮೂಲಕ ಈ ವಿಚಾರಗಳು ಇತರರಿಗೆ ಸೋರಿಕೆಯಾದರೆ ಹೆಚ್ಚಿನ ತೊಂದರೆ ತಪ್ಪಿದಲ್ಲ. ಈ ಅನಾನುಕೂಲ ಮೆಟ್ಟಿ, ಹೊಸ ಚಳಕದಲ್ಲಿ ಹೇಗೆ ನಿಸ್ಸಾನ್ ಕೂಟದವರು ಗೆಲುವು ಕಾಣಲಿದ್ದಾರೆ ಎಂದು ಜಗತ್ತೇ ಎದುರುನೋಡುತ್ತಿದೆ. ಕಳೆದ 2-3 ವರ್ಷಗಳಲ್ಲಿ ನಿಸ್ಸಾನ್ ತಮ್ಮ ಮಿದುಳ್-ಬಂಡಿಯ ಬೆಳವಣಿಗೆ ಬಗ್ಗೆ ಹೆಚ್ಚಿನ ಗುಟ್ಟು ಬಿಟ್ಟುಕೊಟ್ಟಿಲ್ಲ. ಇದರರ್ಥ ತಂತ್ರಜ್ಞಾನದ ಬಗ್ಗೆ ಇನ್ನೂ ಹೆಚ್ಚಿನ ಅರಕೆ ನಡೆಯುತ್ತಿರಬಹುದೆಂದು ಆಟೋಮೊಬೈಲ್ ವಲಯದಲ್ಲಿ ಕೇಳಿಬಂದ ಸುದ್ದಿ. ಬ್ರೈನ್-ಟು-ವೆಹಿಕಲ್ ಬೀದಿಗಿಳಿಯಲು ಇನ್ನೂ ಕಾಯಲೇಬೇಕು.

ಮಾಹಿತಿ ಮತ್ತು ತಿಟ್ಟ ಸೆಲೆ:  nissan

ಏನಿದು ಓಟಾ ತಂತ್ರಜ್ಞಾನ?

ಜಯತೀರ್ಥ ನಾಡಗೌಡ.

ಓಟಾ(OTA) ಎಂದರೆ ಓವರ್-ದಿ-ಏರ್(Over-the-Air) ಎಂದು ಬಿಡಿಸಿ ಹೇಳಬಹುದು. ಚೂಟಿಯುಲಿ(Smartphone), ಕಂಪ್ಯೂಟರ್, ಸ್ಮಾರ್ಟ್ ಕೈಗಡಿಯಾರ ಮುಂತಾದ ಗ್ಯಾಜೆಟ್ ಬಳಸುವ ಹಲವರು ಈ ಹೆಸರು ಕೇಳಿರುತ್ತೀರಿ. ಬಹುತೇಕ ಚೂಟಿಯುಲಿ, ಕಂಪ್ಯೂಟರ್‌ಗಳ ಬಳಕೆದಾರರಿಗೆ ನವಿರಣಿಗೆ (Software) ಹೊಸದಾಗಿಸಲು ಸಂದೇಶಗಳು ಬಂದಿರುವುದು ಸಹಜ. ಹಲವಾರು ಬಾರಿ ಈ ಸಂದೇಶಗಳನ್ನು ಕ್ಲಿಕ್ಕಿಸಿ ಚೂಟಿಯುಲಿ, ಕಂಪ್ಯೂಟರ್ ನವಿರಣಿಗೆಯನ್ನು ಹೊಸದಾಗಿಸಿಕೊಂಡಿರುತ್ತೆವೆ.ಆದರೆ ಈ ಸಂದೇಶ/ಮುನ್ಸೂಚನೆಗಳು(Notification) ಹೇಗೆ ತಾನಾಗೇ ಬರುತ್ತವೆ? ಇವುಗಳನ್ನು ಯಾರು ಕಳಿಸುತ್ತಾರೆ? ಇವೆಲ್ಲ ಪ್ರಶ್ನೆಗಳಿಗೆ ಉತ್ತರವೇ ಓವರ್-ದಿ-ಏರ್  ತಂತ್ರಜ್ಞಾನ. 

ತಂತಿಯಿಲ್ಲದ, ವೈಫೈ ಇಲ್ಲವೇ ಸೆಲ್ಯುಲಾರ್ ಸಂಪರ್ಕಗಳ ಮೂಲಕ ಚೂಟಿಯುಲಿ, ಕಂಪ್ಯೂಟರ್,ಸೆಟ್-ಟಾಪ್ ಬಾಕ್ಸ್, ಕಾರುಗಳ ಟೆಲಿಕಮ್ಯುನಿಕೇಶನ್ ಮುಂತಾದ ಎಂಬೆಡೆಡ್(Embedded) ಉಪಕರಣಗಳಿಗೆ ಹೊಸದಿಕೆ(update) ಮಾಡುವ ಏರ್ಪಾಟನ್ನು ಓವರ್-ದಿ-ಏರ್ ಅಪ್ಡೇಟ್ ಚಳಕ ಎನ್ನುತ್ತಾರೆ. ಇದರಲ್ಲಿ ಯಾವುದೇ ತಂತ್ರಜ್ಞರ(Technician) ಅಗತ್ಯವಿರುವುದಿಲ್ಲ.  ಅಗತ್ಯ ಉಪಕರಣಗಳಿಗೆ ನೇರವಾಗಿ ಸಂದೇಶದ ಮೂಲಕ ಈ ಅಪ್ಡೇಟ್‍ಗಳನ್ನು ಕಳುಹಿಸಿಕೊಡಲಾಗುತ್ತದೆ. ಈ ತಂತ್ರಜ್ಞಾನದ ಅಳವಡಿಕೆಯ ಮೊದಲು ತಂತ್ರಜ್ಞರು ನೇರವಾಗಿ ಇಲ್ಲವೇ ನೆರವುದಾಣಗಳಿಗೆ(Service Centre) ಭೇಟಿ ನೀಡಿಯೋ , ಕಂಪ್ಯೂಟರ್, ಚೂಟಿ ಕೈಗಡಿಯಾರ(Smart Watch) ಮುಂತಾದವುಗಳ ನವಿರಣಿಗೆಯನ್ನು ಹೊಸದಾಗಿಸಿಕೊಂಡು ಬರಬೇಕಿತ್ತು. ಓಟಾ ಚಳಕದ ಮೂಲಕ ನಮ್ಮ ಉಪಕರಣಗಳಿಗೆ ನೇರವಾಗಿ ಹೊಸದಾದ ಸಾಫ್ಟ್‌ವೇರ್ ಬಂದಿರುತ್ತದೆ, ನಮಗೆ ಬೇಕೆಂದಾಗ ಹೊಸದಾಗಿಸಿಕೊಳ್ಳುವ ಸೌಲಭ್ಯವನ್ನು ಇದು ಒದಗಿಸಿಕೊಟ್ಟಿದೆ. ಈ ಓಟಾ ಚಳಕ ಕೆಲಸ ಮಾಡುವ ಬಗೆಯನ್ನು ಸುಮಾರು 7-8 ಭಾಗಗಳಾಗಿ ಬಿಡಿಸಬಹುದು. ಇದನ್ನು ವಿವರಿಸಲು ಉದಾಹರಣೆಗಾಗಿ, ಚೂಟಿಯುಲಿಯೊಂದರ ಸಾಫ್ಟ್‌ವೇರ್ ಹೊಸದಾಗಿಸುವಿಕೆ ಹೇಗೆ ನಡೆಯುತ್ತದೆ ಎಂದು ನೋಡೋಣ. 

  1. ಮೊದನೇಯದಾಗಿ, ಉಪಕರಣ ಸಂಪರ್ಕ ಸಾಧಿಸುವುದು. ಮೊಬೈಲ್‌ನ ಸೆಟ್ಟಿಂಗ್ಸ್ ಹೋಗಿ ನಾವು ಸಾಫ್ಟ್‌ವೇರ್ ಅಪ್ಡೇಟ್ ಮೇಲೆ ಬೆರಳು ಒತ್ತಿದಾಗ ಉಪಕರಣವು ಸಂಪರ್ಕ ಸಾಧಿಸಿದಂತೆ. 
  2. ಎರಡನೇ ಹಂತದಲ್ಲಿ ಸಂಪರ್ಕ ಸಾಧನೆ ಮಾಡಿದ ಮೊಬೈಲ್ ಭದ್ರತೆಯ ಧೃಡೀಕರಣಕ್ಕೆ ಒಳಪಡುತ್ತದೆ. ಅಂದರೆ ಸಂಪರ್ಕ ಸಾಧಿಸಿದ ಪೋನ್ ಸಾಫ್ಟ್‌ವೇರ್ ಪಡೆಯಲು ತಕ್ಕುದಾಗಿದೆಯೇ ಎಂಬ ಪರೀಕ್ಷೆಗೊಳಪಡುತ್ತದೆ. ಅನಧಿಕೃತ ಪೋನ್‌ಗಳು ಸಂಪರ್ಕ ಸಾಧಿಸದಂತೆ ಇದು ತಡೆಯುತ್ತದೆ.
  3. ಮೂರನೇ ಹಂತವನ್ನು ಡೇಟಾ ಸಾಗಣೆಯ ಮಿಂಕಟ್ಟಲೆಯ ಆಯ್ಕೆಯ(Selection of Data Transmission Protocol) ಹಂತವೆಂದು ಕರೆಯುತ್ತಾರೆ. ಸರ್ವರ್‌ನಿಂದ ಯಾವ ಮಿಂಕಟ್ಟಲೆ(Protocol) ಮೂಲಕ ಹೊಸದಾದ ಡೇಟಾ ಕಳುಹಿಸಬೇಕೆಂಬುದು ನಿರ್ಧಾರವಾಗುತ್ತದೆ. ಮೊಬೈಲ್ ಫೋನ್ ವೈಫೈ ಮೂಲಕವೋ, ಒಂದು ವೇಳೆ ಮೊಬೈಲ್ ವೈಫೈ ಸಂಪರ್ಕದಲ್ಲಿರದಿದ್ದರೆ ಸೆಲ್ಯುಲಾರ್ ನೆಟ್‌ವರ್ಕ್ ಮೂಲಕ ಕಳುಹಿಸಬೇಕೆಂದು ನಿರ್ಧಾರವಾಗುತ್ತದೆ. IoT ಮೂಲಕ ಬೆಸೆದುಕೊಂಡಿರುವ ಕೆಲವು ಉಪಕರಣಗಳಾದ ಟಿವಿ, ಸೆಟ್-ಟಾಪ್-ಬಾಕ್ಸ್, ವಾಶಿಂಗ್ ಮಶೀನ್‌ಗಳಿಗೆ low-power protocol ಗಳಾದ MQTT, CoAP ಮೂಲಕ ಸರ್ವರ್‌ಗಳಿಂದ ಡೇಟಾ ಸಾಗಣೆ ಮಾಡಲಾಗುತ್ತದೆ.
  4. ಈ ಹಂತದಲ್ಲಿ ಸಾಗಿಸಲ್ಪಟ್ಟ ಹೊಸದಾದ ಸಾಫ್ಟ್‌ವೇರ್ ಮೊಬೈಲ್ ಸಾಧನಕ್ಕಿಳಿಸಿಕೊಳ್ಳುವ(Download) ಕೆಲಸ ನಡೆಯುತ್ತದೆ.
  5. 5ನೇ ಹಂತದಲ್ಲಿ ಡೇಟಾ, ಪ್ಯಾಕೆಟ್‌ಗಳಲ್ಲಿ ಬಂದು ಮೊಬೈಲ್ ಸಾಧನದಲ್ಲಿರುತ್ತದೆ. ವಿವಿಧ ಪ್ಯಾಕೆಟ್ ಗಳ ರೂಪದಲ್ಲಿ ಬಂದು ಸೇರಿದ ಈ ಡೇಟಾವನ್ನು ಮೊಬೈಲ್ ಫೋನ್ ಒಟ್ಟುಗೂಡಿಸುತ್ತದೆ.
  6. 6ನೇ ಹಂತದಲ್ಲಿ ಸರಿಯಾದ, ಭದ್ರವಾದ ಡೇಟಾವನ್ನು ಮೊಬೈಲ್‌ಗೆ ಅಳವಡಿಸಲಾಗುತ್ತದೆ(Installation). 
  7. ಕೊನೆಯ ಹಂತ: ಕೊನೆಯದಾಗಿ, ಬಂದ ಡೇಟಾವನ್ನು ಸರಿಯಾಗಿ ಅಳವಡಿಸಲಾಗಿದೆಯೆಂದು ಮೊಬೈಲ್ ಸಾಧನ ಸರ್ವರ್‌ಗೆ ತಲುಪೊಪ್ಪಿಗೆಯನ್ನು(Acknowledgement) ಕಳುಹಿಸುವದರೊಂದಿಗೆ ಓಟಾದ ಕೆಲಸ ಮುಗಿಯುತ್ತದೆ.

ಪ್ರತಿಹಂತದಲ್ಲೂ ಸರ್ವರ್‌ನಿಂದ ಮೊಬೈಲ್‌ಗೆ ಸರಿಯಾದ, ಭದ್ರವಾದ ಮತ್ತು ಅಳುವುಳ್ಳ(Efficient) ಮಾಹಿತಿ ಸಾಗಣೆಯಾಗುವುದನ್ನು ಸಾಗಣೆ ನಿರ್ವಹಣಾ ಮಿಂಕಟ್ಟಲೆ(Transmission Control Protocol) ನೋಡಿಕೊಳ್ಳುತ್ತದೆ.

ಓಟಾ, ಹಲವಾರು ಬೇರೆ ಹೆಸರುಗಳಿಂದಲೂ ಕರೆಯಲ್ಪಡುತ್ತದೆ. ಅವುಗಳು ಹೀಗಿವೆ:

ಫೋಟಾ- ಫರ್ಮ್‌ವೇರ್ ಓವರ್-ದಿ-ಏರ್ Firmware-over-the-air (FOTA) 

ಸೋಟಾ- ಸಾಫ್ಟ್‌ವೇರ್ ಓವರ್-ದಿ-ಏರ್ Software over-the-air (SOTA) 

ಓಟಾಪ್- ಓವರ್-ದಿ-ಏರ್ ಪ್ರೊವಿಸಿನಿಂಗ್ Over-the-air provisioning (OTAP) 

ಓಟಾಸ್ಪ್- ಓವರ್-ದಿ-ಏರ್ ಸರ್ವೀಸ್ ಪ್ರೊವಿಸಿನಿಂಗ್ Over-the-air service provisioning (OTASP) 

ಓಟಾಪಾ- ಓವರ್-ದಿ-ಏರ್ ಪ್ಯಾರಮೀಟರ್ ಅಡ್ಮಿನಿಸ್ಟ್ರೇಶನ್- Over-the-air parameter administration (OTAPA).

 

ಓಟಾ ತಂತ್ರಜ್ಞಾನದ ಪ್ರಮುಖ ಅನುಕೂಲಗಳು ಹೀಗಿವೆ:

1.ಸರಿಯಾದ, ಭದ್ರವಾದ ಮಾಹಿತಿಯ ಸಾಗಣೆ.

2.ಯಾವುದೇ ತಂತ್ರಜ್ಞರ ನೆರವು ಬೇಕಾಗಿಲ್ಲ. ಮೊಬೈಲ್, ಕಾರು, ಟಿವಿ ಆಯಾ ಉಪಕರಣಗಳ ಮಾಲೀಕರೇ ನೇರವಾಗಿ ಡೇಟಾ ಪಡೆದು ಅಪ್ಡೇಟ್ ಮಾಡಿಕೊಳ್ಳಬಹುದು.

3.ನೆರವುದಾಣ, ರಿಪೇರಿ ಅಂಗಡಿಗಳಿಗೆ ಹೋಗಬೇಕಾಗಿಲ್ಲ. ಸಮಯ ಮತ್ತು ಹಣದ ಉಳಿತಾಯ.

4.ಬೇಕೆಂದಾಗ,ಬೇಕಾದ ಸಮಯದಲ್ಲಿ ಅಪ್ಡೇಟ್ ಮಾಡಿಕೊಳ್ಳುವ ಸವಲತ್ತು.

 

ಗಾಳಿಯಿಂದ ಕುಡಿಯುವ ನೀರನ್ನು ಪಡೆಯಲೊಂದು ಚಳಕ

ಜಯತೀರ್ಥ ನಾಡಗೌಡ.

ಊಟ ಸಿಗದಿದ್ದರೂ ಮನುಷ್ಯ ಬದುಕಬಲ್ಲ. ಆದರೆ ಉಸಿರ್ಗಾಳಿ(Oxygen) ಮತ್ತು ಕುಡಿಯುವ ನೀರು ಇಲ್ಲದೇ ಹೋದರೆ ನಮ್ಮ ಬದುಕನ್ನು ಊಹಿಸಿಕೊಳ್ಳಲಾಗದು. ಈ ಜಗತ್ತಿನ 2/3 ರಷ್ಟು ನೀರಿನಿಂದಲೇ ತುಂಬಿದೆ, ಆದರೆ ಇದರಲ್ಲಿ ಕುಡಿಯಲು ತಕ್ಕುದಾದ ನೀರು ಬಹಳ ಕಡಿಮೆ. ಇತ್ತೀಚಿನ ದಿನಗಳಲ್ಲಂತೂ ವಾತಾವರಣದ ಏರುಪೇರುಗಳಿಂದ ಚೊಕ್ಕವಾದ ಕುಡಿಯುವ ನೀರನ್ನು ಕಳೆದುಕೊಳ್ಳುತ್ತಿದ್ದೇವೆ. ಕುಡಿಯುವ ನೀರು ಪಡೆಯಲು ಇಂದಿನ ದಿನಗಳಲ್ಲೂ ಮಂದಿ ಹಲವಾರು ಮೈಲಿ ಸಾಗುವ ಪರಿಸ್ಥಿತಿ ಭಾರತದಲ್ಲಿದೆ.

ಆಫ್ರಿಕಾ ಖಂಡದ ಹಿಂದುಳಿದ ನಾಡುಗಳಲ್ಲೊಂದಾದ ಇಥಿಯೋಪಿಯಾ (Ethiopia) ಕೂಡ ಇದಕ್ಕೆ ಹೊರತಾಗಿಲ್ಲ. ಇಥಿಯೋಪಿಯಾ ನಾಡಿನ ಕೆಲವೆಡೆ ಒಳ್ಳೆಯ ನೀರು ಪಡೆಯಲು ಸುಮಾರು ಆರು ಗಂಟೆ ಅಲೆದಾಡಬೇಕಂತೆ. ಈ ನಾಡಿನಲ್ಲಿ ಕುಡಿಯುವ ನೀರನ್ನು ಹುಡುಕಿ ತರಲು ಮಕ್ಕಳು-ಮಂದಿ ಸೇರಿ ವರುಶಕ್ಕೆ ಸುಮಾರು 4 ಸಾವಿರ ಕೋಟಿಯಷ್ಟು ಗಂಟೆಗಳನ್ನು ಬಳಸುತ್ತಾರಂತೆ. ಇಷ್ಟಾದರೂ ಕುಡಿಯಲು ತಕ್ಕುದಾದ ನೀರು ಸಿಗುವುದು ಕಷ್ಟದ ಕೆಲಸ. ಹತ್ತಿರದಲ್ಲಿರುವ ಕೆರೆ, ಬಾವಿ, ಹೊಂಡದ ನೀರು, ಕೊಳಚೆ ಮತ್ತು ನಂಜಿನ ವೈರಸ್ ಗಳಿಂದ ಕೂಡಿರುತ್ತವೆ. ಪ್ರತಿ ವರುಶ ನೂರಾರು ಕೋಟಿ ಮಂದಿ ಆಫ್ರಿಕಾದಲ್ಲಿ ಕುಡಿಯುವ ನೀರಿನ ಕೊರತೆ ಅನುಭವಿಸುತ್ತಿದ್ದಾರೆ.

ಈ ವಿಷಯದ ಆಳವರಿತ ಹಾಲಿವುಡ್ ನ ಹೆಸರುವಾಸಿ ನಟ ಹಾಗು ವಾಟರ್ ಡಾಟ್ ಆರ‍್ಗ್ (water.org) ಕೂಟ ಹುಟ್ಟು ಹಾಕಿದ ಮ್ಯಾಟ್ ಡಮೋನ್ (Matt Damon), ಇವರೊಂದಿಗೆ ಮೈಕ್ರೊಸಾಫ್ಟ್ ಕೂಟದ ಬಿಲ್ಲ್ ಗೇಟ್ಸ್ (Bill Gates) ಒಂದಾಗಿ ಹೊಸ ಹಮ್ಮುಗೆಯೊಂದಕ್ಕೆ ಕೈ ಹಾಕಿದ್ದುಂಟು. ಕೊಳಚೆ ಹಾಗೂ ಬಳಸಿದ ನೀರನ್ನು ಮರಳಿ ಕುಡಿಯುವ ನೀರಾಗಿ ಮಾರ್ಪಡಿಸುವುದೇ ಈ ಹಮ್ಮುಗೆಯ ಕೆಲಸ. ಯಾವುದೇ ಲಾಭದ ಉದ್ದೇಶವಿರದ ಈ ಕೆಲಸಕ್ಕೆಂದೇ ಇಲ್ಲಿಯವರೆಗೆ ನೂರಾರು ಲಕ್ಷ ರೂಪಾಯಿಗಳ ವೆಚ್ಚ ಮಾಡಲಾಗುತ್ತಿದೆ. ಇಂತ ಬೆನ್ನುತಟ್ಟುವ ಕೆಲಸವೊಂದು ನಡೆಯುತ್ತಿದ್ದರೂ ಇದು ಪರಿಣಾಮಕಾರಿಯಾಗಿರಲಾರದು ಎಂಬುದು ಕೆಲವರ ವಾದ. ಈ ಚಳಕ ತೊಡಕಿನಿಂದ ಕೂಡಿದೆ, ಇಥಿಯೋಪಿಯಾದ ಹಳ್ಳಿಗರು ಇದನ್ನು ಬಳಸಿಕೊಳ್ಳುವುದು ಮತ್ತು ಇದು ಕೆಟ್ಟಾಗ, ಸರಿಪಡಿಸುವುದು ಸುಲಭವಲ್ಲವೆಂಬುದು ವಾದಿಸುವರ ಹೇಳಿಕೆ. ಈ ಹಮ್ಮುಗೆಯಲ್ಲಿ ಹಣದ ವೆಚ್ಚ ಹೆಚ್ಚಿದ್ದು ಮುಂಬೊತ್ತಿನ (future) ದಿನಗಳಲ್ಲಿ ಇದನ್ನು ಸರಿದೂಗಿಸಿಕೊಂಡು ಹೋಗುವದಕ್ಕೂ ಹೆಚ್ಚಿನ ಹಣ ತಗಲುತ್ತದೆಂದು ಇವರು ಹೇಳಿದ್ದಾರೆ.

ಕುಡಿಯುವ ನೀರನ್ನು ಚೊಕ್ಕಗೊಳಿಸಲು ಹಲವರು ಹರಸಾಹಸ ಪಡುತ್ತಿರುವ ಈ ಹೊತ್ತಿನಲ್ಲೇ ಅರ್ಟುರೋ ವಿಟ್ಟೋರಿ (Arturo Vittori) ಎಂಬ ಕೈಗಾರಿಕೆ ಈಡುಗಾರ (Industrial Designer) ಮತ್ತು ಅವರ ಜೊತೆ ಕೆಲಸಗಾರ ಆಂಡ್ರಿಯಾಸ್ ವೊಗ್ಲರ್ (Andreas Vogler) ಇಬ್ಬರೂ ಸೇರಿ ಸುಲಭ, ಸರಳ ಮತ್ತು ಅಗ್ಗದ ಮಾಡುಗೆಯೊಂದನ್ನು (product) ಮುಂದಿಟ್ಟಿದ್ದಾರೆ. ಈ ಉತ್ಪನ್ನದ ಹೆಸರು ವಾರ್ಕಾ ವಾಟರ್. ಬೀಸುವ ಗಾಳಿಯಲ್ಲಿರುವ ನೀರನ್ನು ಹಿಡಿದು ಅದನ್ನೇ ಕುಡಿಯುವ ನೀರಾಗಿ ಮಾರ್ಪಡಿಸುವ ಚಳಕ. ವಾರ್ಕಾ ವಾಟರ್ (Warka Water) ಅನ್ನು ತೊಡಕಿಲ್ಲದೆ ಸುಲಭವಾಗಿ ಜೋಡಿಸಬಹುದಾಗಿದ್ದು ಇದರ ಬೆಲೆಯು ಅಗ್ಗವಾಗಿದೆ.

ವಾರ್ಕಾ ವಾಟರ್ ಮೂವತ್ತು ಅಡಿ ಉದ್ದವಾಗಿದ್ದು ಹೂದಾನಿಯ ಆಕಾರದ ಗೋಪುರವೆನ್ನಬಹುದು. ಇಥಿಯೋಪಿಯಾದ ಪ್ರಮುಖ ಮರವೊಂದರಿಂದ ವಾರ್ಕಾ ಎನ್ನುವ ಹೆಸರು ಮೂಡಿದೆ. ವಾರ್ಕಾ ವಾಟರ್ ಗೋಪುರದ ಹೊರಮೈ ಇಲಾಸ್ಟಿಕ್ ಕೊಳವೆಯಂತ ವಸ್ತುವಿನಿಂದ ತಯಾರಿಸಲಾಗಿದೆ. ಇದರಿಂದ ತೂಕವು ಹಗುರವಾಗಿರುತ್ತದೆ. ಈ ಕೊಳವೆಗಳು ಒಂದಕ್ಕೊಂದು ಬದಿಯಲ್ಲಿ ಗಟ್ಟಿಯಾಗಿ ಹೆಣೆಯಲ್ಪಟ್ಟಿರಿವುದರಿಂದ ಜೋರಾಗಿ ಬೀಸುವ ಗಾಳಿಗೆ ಮಯ್ಯೊಡ್ಡಿದಾಗಲೂ, ಗಟ್ಟಿಯಾಗಿ ನಿಂತು ಗಾಳಿಯು ತಮ್ಮ ಮೂಲಕ ಹಾಯ್ದು ಹೋಗುವಂತೆ ನೋಡಿಕೊಳ್ಳುತ್ತವೆ. ಇದರೊಳಗೆ ನೈಲಾನ್ ಬಲೆಯೊಂದನ್ನು ತೂಗು ಹಾಕಲಾಗಿದ್ದು ಇದು ಚೀನಿಯರ ದೊಡ್ಡ ಕೈಬೆಳಕಿನಂತೆ (Lantern) ಕಾಣಿಸುತ್ತದೆ. ಜೋರು ಗಾಳಿ ಇದರಲ್ಲಿ ಹಾಯ್ದು ಹೋದಾಗ ಗಾಳಿಯಲ್ಲಿನ ನೀರಿನ ಇಬ್ಬನಿಗಳು ಕೂಡಿಡಲ್ಪಡುತ್ತವೆ. ಗಾಳಿಯು ಇಂಗುತ್ತಲೆ ಈ ಇಬ್ಬನಿಯ ಹನಿಗಳು ನೀರಾಗಿ ಕೆಳ ಭಾಗಕ್ಕೆ ಹರಿಯುತ್ತ ಬುಗುಣಿಯಲ್ಲಿ ಬಂದು ಸೇರುತ್ತವೆ. ಈ ಬುಗುಣಿಗೆ ಕೊಳವೆ ಜೋಡಿಸಿ ನಲ್ಲಿಯಂತೆ ನೀರು ಪಡೆಯಬಹುದಾಗಿರುತ್ತದೆ.

ವಿಟ್ಟೋರಿಯವರ ಈ ಅರಕೆ ಹೊಸದೇನು ಅಲ್ಲ, ಈ ಹಿಂದೆ ಪ್ರಖ್ಯಾತ ಎಮ್.ಐ.ಟಿ (MIT) ಕಲಿಕೆವೀಡಿನ ಓದುಗನೊಬ್ಬ ಇದನ್ನೇ ಹೋಲುವ ಎಣಿಕೆಯೊಂದನ್ನು(Concept)  ಬೆಳವಣಿಗೆಗೊಳಿಸಿದ್ದ. ಆದರೆ ಈ ಹಿಂದೆ ಬೆಳವಣಿಗೆ ಹೊಂದಿದ ಎಲ್ಲ ಎಣಿಕೆಗಳಿಂತ ವಿಟ್ಟೋರಿಯವರ ಮಾದರಿಯು ಅಗ್ಗದ ಬೆಲೆಯಲ್ಲಿ ಹೆಚ್ಚು ನೀರನ್ನು ನೀಡುವಂತದ್ದಾಗಿರುವುದರಿಂದ ಜಗತ್ತಿನೆಲ್ಲೆಡೆ ಸುದ್ದಿ ಮಾಡುತ್ತಿದೆ.

ಇಥಿಯೋಪಿಯಾದಂತ ನಾಡುಗಳಲ್ಲಿ ಮಂದಿಗೆ ಬೇಕಾಗುವ ಸೌಕರ್ಯಗಳ ಕೊರತೆಯಿದೆ. ಕೊಳವೆ ಬಾವಿಯನ್ನು ಮಾಡಿಸಲು ಸಾವಿರಾರು ಅಡಿ ಭೂಮಿಯನ್ನು ಕೊರೆಯಬೇಕು. ನಂತರ ಭೂಮಿಯಿಂದ ನೀರನ್ನು ಮೇಲೆತ್ತಲು ಒತ್ತುಕಗಳನ್ನು(Pump) ಬಳಸಬೇಕಾಗುತ್ತದೆ. ನೆನಪಿರಲಿ ಈ ಒತ್ತುಕಗಳಿಗೆ ಮಿಂಚಿನ ಕಸುವಿನ(Electricity) ಅಗತ್ಯವಿರುತ್ತದೆ. ಇಷ್ಟೆಲ್ಲ ಮಾಡಲು ಸಾಕಷ್ಟು ದುಡ್ಡನ್ನು ಹೂಡಿಕೆ ಮಾಡಬೇಕು. ಇದಕ್ಕೆ ವಾರ್ಕಾ ವಾಟರ್ ಪರಿಹಾರವಾಗಲಿದೆ ಎಂಬುದು ವಿಟ್ಟೋರಿಯವರ ಅಂಬೋಣ.

ವಾರ್ಕಾ ಗೋಪುರಗಳ ಒರೆಗೆ ಹಚ್ಚುವ(Testing) ಕೆಲಸ ನಡೆಯುತ್ತಿದ್ದು, ಇದು ದಿನವೊಂದಕ್ಕೆ 25 ಗ್ಯಾಲನ್ ಅಂದರೆ ಸುಮಾರು 95 ಲೀಟರ್ ಗಳಶ್ಟು ನೀರನ್ನು ಒದಗಿಸಬಲ್ಲದು. ಬಿಸುಪಿನ ಏರುಪೇರು ಹೆಚ್ಚಿರುವ ಮರಳುಗಾಡಿನಲ್ಲೂ ಇವುಗಳ ಕೆಲಸ ಪರಿಣಾಮಕಾರಿಯಾಗಿರುವ ಸುದ್ದಿ ವಿಟ್ಟೋರಿಯವರ ಹುರುಪು ಹೆಚ್ಚಾಗಿಸಿದೆ. ಈ ಗೋಪುರಗಳ ಕಟ್ಟಲು ಸುಲಭವಾಗಿ ಅಳಿದುಹೋಗಬಲ್ಲ ಸಾಮಗ್ರಿ ಬಳಸಲಾಗಿದೆ ಇದರಿಂದ ವಾತಾವರಣಕ್ಕೂ ಯಾವುದೇ ತೊಂದರೆಯುಂಟಾಗುವುದಿಲ್ಲ. ಅಲ್ಲದೇ ಸ್ಥಳೀಯರಿಗೆ ಇದರ ಬಳಕೆ, ಜೋಡಿಸುವಿಕೆ ಮತ್ತು ಸರಿದೂಗಿಸುವಿಕೆಯ ಬಗ್ಗೆ ಅರಿವು ಮಾಡಿಕೊಟ್ಟರೆ ಸುಲಭವಾಗಿ ಕಾಯ್ದುಕೊಂಡು ಹೋಗಬಹುದಂತೆ. ಇದಕ್ಕೆಂದೇ ವಿಶೇಷ ಪಳಗಿದ ಕೆಲಸಗಾರರು ಬೇಕಿಲ್ಲ.

ವಾರ್ಕಾ ಗೋಪುರವೊಂದನ್ನು ಆಣಿಗೊಳಿಸಿ ಜೋಡಿಸಲು 500 ಡಾಲರ್ ಹಣ ಸಾಕಂತೆ. ಬಿಲ್ ಗೇಟ್ಸ್, ಮ್ಯಾಟ್ ಡಮೋನ್ ಹಮ್ಮುಗೆ ಬಳಸುತ್ತಿರುವ ಕೊಳಚೆ ನೀರು ಚೊಕ್ಕಗೊಳಿಸುವ ಚಳಕಕ್ಕಿಂತ ಮುಕ್ಕಾಲು ಭಾಗ ಕಡಿಮೆ (ಇದರ ಬೆಲೆ ಸುಮಾರು 2200 ಡಾಲರ್ ). ಹೆಚ್ಚಿನ ಸಂಖ್ಯೆಯಲ್ಲಿ ಅಣಿಗೊಳಿಸಿದರೆ ಬೆಲೆಯು ಇನ್ನೂ ಅಗ್ಗವಾಗಿರಲಿದೆ ಎಂದು ಹೇಳುತ್ತಾರೆ ವಿಟ್ಟೋರಿ. ಮುಂದಿನ ದಿನಗಳಲ್ಲಿ ವಾರ್ಕಾ ವಾಟರ್ ಗೋಪುರಗಳನ್ನು ಇಥಿಯೋಪಿಯಾದಲ್ಲಿ ನೆಡಲು ತಯಾರಿ ನಡೆಸಿರುವ ವಿಟ್ಟೋರಿಯವರು ಇದಕ್ಕೆ ಬಂಡವಾಳ ಹೂಡಿಕೆದಾರರ ಹುಡುಕುವ ಕೆಲಸದಲ್ಲಿದ್ದಾರೆ.

ವಿಟ್ಟೋರಿಯವರು ಹೇಳುವ ಪ್ರಕಾರ “ಚೊಕ್ಕ ಕುಡಿಯುವ ನೀರನ್ನು ಒದಗಿಸುವುದಷ್ಟೇ ಈ ಹಮ್ಮುಗೆಯ ಉದ್ದೇಶವಲ್ಲ, ಕುಡಿಯುವ ನೀರು ಹೊತ್ತು ತರಲು ಇಥಿಯೋಪಿಯಾ ಮಕ್ಕಳು ಪೋಲು ಮಾಡುತ್ತಿರುವ ಹೊತ್ತನ್ನು ಇದು ಅಳಿಸಿಹಾಕಬಲ್ಲದು. ಈ ಹೊತ್ತನ್ನು ಕಲಿಕೆಯಂತ ಇತರೆ ಕೆಲಸಗಳಲ್ಲಿ ತೊಡಗಿಸಿದರೆ ಮಕ್ಕಳ ಮುಂಬೊತ್ತು ಬೆಳಗಲಿದೆ”. ಇಂತ ಸಾಮಾಜಿಕ ಕಳಕಳಿಯ ಅರಕೆಗಳು ಜಗತ್ತಿನಲ್ಲಿ ಇಮ್ಮಡಿಗೊಳ್ಳಲಿ, ವಿಟ್ಟೋರಿಯವರ ಹಮ್ಮುಗೆಗೆ ಒಳ್ಳೆಯದಾಗಲಿ.

 

ಎ.ಸಿ.(ಏರ್ ಕಂಡಿಷನರ್) ಹೇಗೆ ಕೆಲಸ ಮಾಡುತ್ತದೆ?

ಜಯತೀರ್ಥ ನಾಡಗೌಡ.

ಇಂದು ಎ.ಸಿ. ಸರ್ವೇ ಸಾಮಾನ್ಯವಾಗಿ ಎಲ್ಲಕಡೆ ಕಂಡುಬರುವ ಉಪಕರಣ. ನಾವಿರುವ ಕೋಣೆಯ ಒಳಗಿನ ಬಿಸುಪನ್ನು ಹೊರಗಟ್ಟಿ ತಂಪಾದ ಗಾಳಿ ಒದಗಿಸುವುದು ಇದರ ಕೆಲಸ. ಭಾರತದಂತ ಹೆಚ್ಚು ಬಿಸುಪಿನ ದೇಶಗಳಲ್ಲಂತೂ ಬೇಸಿಗೆಯಲ್ಲಿ ಎ.ಸಿ.ಯಿರದೇ ಎಷ್ಟೋ ಕಚೇರಿ, ಹೋಟೆಲ್, ಸಿನಿಮಾ ಮಂದಿರ, ಬ್ಯಾಂಕ್‌ಗಳು ಕೆಲಸ ಮಾಡಲಾರದಷ್ಟು ಇವುಗಳ ಬೇಡಿಕೆ. ತಂಪುಗಾಳಿ ನೀಡಿ ಸೆಕೆಯ ವಾತಾವರಣಕ್ಕೆ ಕಡಿವಾಣ ಹಾಕುವ ಎ.ಸಿ.ಗಳು ಹೇಗೆ ಕೆಲಸ ಮಾಡುತ್ತವೆ ನೋಡೋಣ ಬನ್ನಿ.

ಎ.ಸಿ. ಹೇಗೆ ಕೆಲಸ ಮಾಡುತ್ತದೆ ಎಂದು ತಿಳಿಯಲು, ಅದರ ಪ್ರಮುಖ ಬಿಡಿಭಾಗಗಳು ಯಾವುವೆಂದು ಅರಿಯೋಣ. ಯಾವುದೇ ಎ.ಸಿ.ಯಲ್ಲಿ ಕೆಳಕಂಡ ಭಾಗಗಳು ಪ್ರಮುಖವಾಗಿರುತ್ತವೆ:

ಒತ್ತುಕ(Compressor)

ಇಂಗಿಸುಕ(Condenser)

ಸೋಸುಕ(Filter)

ಬೀಸಣಿಗೆ(Fan)

ತಂಪುಕ(Refrigerant Chemical)

ಸಾಮಾನ್ಯವಾಗಿ ತಂಪುಕ ಒಂದು ಬಿಸುಪನ್ನು ಹೀರುವ ರಾಸಾಯನಿಕವಾಗಿದ್ದು, ಗಾಳಿಯ ರೂಪದಲ್ಲಿ ಎ.ಸಿ.ಯಲ್ಲಿ ಕೂಡಿಟ್ಟಿರುತ್ತಾರೆ.

ಎ.ಸಿ. ಶುರುವಾದ ಮೇಲೆ,ಮೊದಲು ಆವಿಯಾಗಿಸುಕದ(Evaporator) ಬಳಿಯಿರುವ ಬೀಸಣಿಗೆ ಕೋಣೆಯ ಬಿಸಿಗಾಳಿಯನ್ನು ಎಳೆದುಕೊಳ್ಳುತ್ತದೆ. ಈ ಬಿಸುಪಿನ ಗಾಳಿಯಲ್ಲಿರುವ ಕಸ, ಧೂಳನ್ನು ಸೋಸುಕ ಬೇರ್ಪಡಿಸಿ, ಆವಿಯಾಗಿಸುಕದ ಸುರುಳಿಗಳ(Evaporator Coils) ಮೇಲೆ ಹರಿಸುತ್ತದೆ. ಆಗ ತಂಪಾದ ಈ ಸುರುಳಿಗಳು, ಬಿಸಿ ಗಾಳಿಯಲ್ಲಿರುವ ಬಿಸುಪನ್ನು ಕಡಿಮೆಯಾಗಿಸಿ ಬೀಸಣಿಗೆ ಮೂಲಕ ಕೋಣೆಗೆ ತಂಪು ಗಾಳಿಯನ್ನು ಹೊರಸೂಸುತ್ತವೆ. ಇದೆಲ್ಲ ಕೋಣೆಯಲ್ಲಿರುವ ಎ.ಸಿ.ಯ ಮುಂಭಾಗದಲ್ಲಿ ನಡೆಯುತ್ತದೆ. ಕೋಣೆಯ ಹಿಂದಿರುವ ಎ.ಸಿ.ಯ ಹಿಂಭಾಗದಲ್ಲಿ,  ತಂಪುಕವು ಒತ್ತುಕದ ಮೂಲಕ ಸಾಗಿ, ಹೆಚ್ಚಿನ ಒತ್ತಡ ಮತ್ತು ಬಿಸುಪಿಗೇರುತ್ತದೆ. ಹೆಚ್ಚು ಬಿಸಿಯಾಗಿರುವ  ತಂಪುಕ ಇಂಗಿಸುಕದ ಮೂಲಕ ಸಾಗಿದಾಗ ಅಲ್ಲಿನ ವಾತಾವರಣದ ಕಡಿಮೆ ಬಿಸುಪಿನ ಗಾಳಿ ಮತ್ತು ತಂಪುಕದ ನಡುವೆ ಬಿಸುಪು ವಿನಿಮಯವಾಗಿ(Heat Exchange), ಬಿಸಿಯಾಗಿರುವ ತಂಪುಕ ತನ್ನ ಬಿಸುಪನ್ನು ಕಳೆದುಕೊಳ್ಳುತ್ತದೆ, ತಂಪುಕದ ಬಿಸುಪು ಪಡೆದ ಅಲ್ಲಿನ ಗಾಳಿಯನ್ನು ಇಂಗಿಸುಕದ ಹಿಂದಿರುವ ಬೀಸಣಿಗೆ ಹೊರಹಾಕುತ್ತದೆ. ಮುಂದೆ, ತಂಪುಕ ಹಿಗ್ಗುವ ತೆರಪಿನ(Expansion Valve) ಮೂಲಕ ಸಾಗಿದಾಗ ದ್ರವರೂಪದಿಂದ ತಂಪಾದ ಗಾಳಿ ರೂಪಕ್ಕೆ ಮಾರ್ಪಾಡುಗೊಳ್ಳುತ್ತೆ. ಇದೇ ತಂಪಾದ ತಂಪುಕ ಗಾಳಿ ಆವಿಯಾಗಿಸುಕದ ಮೇಲೆ ಸಾಗಿದಾಗ, ಅದೇ ಪ್ರಕ್ರಿಯೆ ಮರುಕಳಿಸುತ್ತದೆ. ಈ ಸಂಪೂರ್ಣ ಪ್ರಕ್ರಿಯೆಯಲ್ಲಿ ಎ.ಸಿ.ಯು, ಯಾವುದೇ ಹೊರಗಿನ ತಾಜಾ ಗಾಳಿಯನ್ನು ತನ್ನೊಳಗೆಳೆದುಕೊಂಡು  ಕೋಣೆ/ ಕೊಠಡಿಗಳನ್ನು ತಂಪಾಗಿಸುವುದಿಲ್ಲ. ಬದಲಿಗೆ,ಕೋಣೆಯಲ್ಲಿರುವ ಬಿಸಿಗಾಳಿಯನ್ನೇ ಒಳಗೆಳೆದುಕೊಂಡು ತಂಪಾಗಿಸಿ ಮತ್ತೆ ಕೋಣೆಗೆ ಸೂಸುತ್ತದೆ. ಇದನ್ನು ಬಿಸಿಗಾಳಿಯ ಮರುಬಳಕೆ ಎನ್ನಬಹುದು. ಈ ಬಿಸುಪಿನ ವಿನಿಮಯ ಪ್ರಕ್ರಿಯೆಯಲ್ಲಿ ಕೋಣೆಯ ಗಾಳಿಯಲ್ಲಿನ ತೇವಾಂಶವನ್ನು ಹೀರುವ ಕೆಲಸವೂ ನಡೆದಿರುತ್ತದೆ.

ಮನೆಗಳಲ್ಲಿ ಕಂಡುಬರುವ ಎ.ಸಿ.ಯ ಬಿಡಿಭಾಗಗಳು

ಎ.ಸಿ.ಗಳಲ್ಲಿ ಪ್ರಮುಖವಾಗಿ ಎರಡು ಬಗೆ. ನಡುನಟ್ಟ ಎ.ಸಿ.(Centralized AC) ಒಂದು ಬಗೆಯಾದರೆ, ಭಾಗವಾದ ಅಂದರೆ ಸ್ಪ್ಲಿಟ್ ಎ.ಸಿ.(Split AC) ಇನ್ನೊಂದು ಪ್ರಮುಖ ಬಗೆಯಾಗಿದೆ. ಒಂದೆಡೆ ಕೇಂದ್ರಿತ ಎ.ಸಿ.ಗಳು ದೊಡ್ಡ ಕಚೇರಿ, ಬ್ಯಾಂಕ್, ಮುಂತಾದೆಡೆ ಜೋಡಿಸಲು ಮತ್ತು ಬಳಸಲು ಸೂಕ್ತ. ದೊಡ್ಡ ಕಚೇರಿ, ಬ್ಯಾಂಕ್, ಆಸ್ಪತ್ರೆಯ ಗ್ಯಾರೇಜ್, ತಳಮಹಡಿಯಲ್ಲೋ ಎ.ಸಿ.ಯ ಮುಂಭಾಗವನ್ನು ಅಳವಡಿಸಿ, ಕೊಳವೆಗಳ(Ducts) ಮೂಲಕ ತಂಪಾದ ಗಾಳಿಯನ್ನು ಬೇಕಾದ ಹಲವಾರು ಕೋಣೆಗಳಿಗೆ ಸಾಗುವಂತೆ ಏರ್ಪಾಟು ಮಾಡಿರುತ್ತಾರೆ. ಇಂತಹ ಎ.ಸಿ.ಗಳು ಕಡಿಮೆ ಅಳವಡಿಕೆಯ ವೆಚ್ಚ, ಒಂದೆಡೆಯಿಂದ ಎಲ್ಲ ಕೋಣೆಗಳ ಗಾಳಿಯ ನಿಯಂತ್ರಣ ಮತ್ತು ಎಲ್ಲ ಕೋಣೆಗಳು ಒಂದೇ ಗುಣಮಟ್ಟದ ಗಾಳಿ ಒದಗಿಸುವ ಅನುಕೂಲಗಳನ್ನು ಹೊಂದಿವೆ. ಕಚೇರಿ, ಆಸ್ಪತ್ರೆ ಮುಂತಾದೆಡೆ ನಡುನಟ್ಟ ಎ.ಸಿ. ಒದಗಿಸಲು ಕೊಳವೆಗಳನ್ನು ಜೋಡಿಸಿಕೊಳ್ಳಬೇಕು, ಇದಕ್ಕೆ ಹೆಚ್ಚಿನ ವೆಚ್ಚ ಮತ್ತು ಜಾಗ ತಗುಲುತ್ತದೆ. ಇಂತಹ ಎ.ಸಿ.ಗಳ ಅಳವುತನವೂ ಕಡಿಮೆಯಿರುವುದರಿಂದ ಹೆಚ್ಚಿನ ವಿದ್ಯುತ್ ಬಿಲ್‌ಗೆ ಹಣ ನೀಡಬೇಕಾಗುತ್ತದೆ.

ಚಿಕ್ಕದಾದ ಸ್ಪ್ಲಿಟ್ ಎ.ಸಿ.ಗಳನ್ನು ಮನೆಗಳಲ್ಲಿ ಹೆಚ್ಚಾಗಿ ಕಾಣುತ್ತೇವೆ. ಮನೆಯ ಮಲಗುವ ಕೋಣೆಗೆ ಮಾತ್ರವೇ ಎ.ಸಿ. ಬೇಕಿದ್ದರೆ, ಈ ಚಿಕ್ಕದಾದ ಎ.ಸಿ.ಗಳು ಹೆಚ್ಚು ತಕ್ಕುದಾಗಿವೆ. ಹೆಚ್ಚು ಕಸುವಿನ ಅಳವುತನ(Energy Efficiency), ಅಳವಡಿಸಲು ಕಡಿಮೆ ಜಾಗ, ನಡುನಟ್ಟ ಎ.ಸಿ.ಗಳಿಗಿಂತ ಕಡಿಮೆ ವಿದ್ಯುತ ಬಿಲ್ ಇವೆಲ್ಲ ಅನುಕೂಲಗಳನ್ನು ಹೊಂದಿದೆ. ಮನೆಯೊಂದರಲ್ಲಿ ಕೋಣೆಗೊಂದರಂತೆ ಈ ಸ್ಪ್ಲಿಟ್ ಎ.ಸಿ. ಅಳವಡಿಸಿದರೆ, ಅಳವಡಿಕೆ ವೆಚ್ಚ ಹೆಚ್ಚಾಗುತ್ತದೆ. ಪ್ರತಿಕೋಣೆಯಲೂ ಎ.ಸಿ.ಯ ಮುಂಭಾಗ ಇರಲೇಬೇಕು, ಇದರಿಂದ ಗೋಡೆಗಳ/ ಮನೆಯ ಒಳಾಂಗಣದ ಅಂದ ಹಾಳಗೆಡುವುತ್ತವೆ. ನಡುನಟ್ಟ ಅಳವಡಿಕೆಯ ಎ.ಸಿ.ಗಳಲ್ಲಿ ಕಂಡುಬರುವ ಸೋಸುಕಗಳು ಹೆಚ್ಚಿನ ಕಸ ಕಡ್ಡಿ ಧೂಳು ಬೇರ್ಪಡಿಸುವ ಸಾಮರ್ಥ್ಯ ಹೊಂದಿರುವುದರಿಂದ ಅವು ಸ್ಪ್ಲಿಟ್ ಎ.ಸಿ.ಗಿಂತ ಒಳ್ಳೆಯ ಗುಣಮಟ್ಟದ ಗಾಳಿಯನ್ನು ಹೊರಸೂಸುತ್ತವೆ.

 

ಮಾಹಿತಿ ಮತ್ತು ತಿಟ್ಟ ಸೆಲೆ:

A Guide to How a Split Air Conditioner Works


https://point-s.ca/en/blog-and-advices/how-does-your-cars-air-conditioning-work
https://www.carrier.com/residential/en/us/products/air-conditioners/how-do-air-conditioners-work/

How Does an Air Conditioner Work?

ಕನೆಕ್ಟೆಡ್ ಕಾರುಗಳು(Connected Cars)

ಜಯತೀರ್ಥ ನಾಡಗೌಡ.

ಮಿಂಬಲೆ(ಇಂಟರ್ನೆಟ್)ಗೆ ಬೆಸೆದುಕೊಂಡಿರುವ ಯಾವುದೇ ಕಾರನ್ನು ಕನೆಕ್ಟೆಡ್ ಕಾರು ಎನ್ನಬಹುದು. ಕನೆಕ್ಟೆಡ್ ಕಾರು ಮಿಂಬಲೆ ಮೂಲಕ ಡೇಟಾ ಹಂಚಿಕೊಂಡು ಬೇರೆ ಎಲೆಕ್ಟ್ರಾನಿಕ್ ವಸ್ತುಗಳೊಂದಿಗೆ ವ್ಯವಹರಿಸುವುದು. ಈ ವಸ್ತು ಇಲ್ಲವೇ ಉಪಕರಣಗಳು ಕಾರಿನ ಒಳಗೂ ಇರುವಂತ ಇಲ್ಲವೇ ಹೊರಗಿರುವಂತವವೂ ಆಗಿರಬಹುದು. ಉದಾಹರಣೆಗೆ ಕಾರೊಂದು ಮಿಂಬಲೆ ಮೂಲಕ ಇನ್ನೊಂದು ಕಾರಿನೊಂದಿಗೆ ಇಲ್ಲವೇ ಸ್ಮಾರ್ಟ್‌ಫೋನ್ /ಸ್ಮಾರ್ಟ್‌ವಾಚ್‌ಗಳಂತ ಬೇರೆ ಉಪಕರಣೊಂದಿಗೆ ಮಾಹಿತಿ ಹಂಚಿಕೆ ಅಥವಾ ಮಾಹಿತಿ ಪಡೆದುಕೊಳ್ಳಬಹುದು. ಈ ರೀತಿ ಕಾರೊಂದು ಇನ್ನೊಂದು  ವಸ್ತುವಿನೊಂದಿಗೆ ಬೆಸೆದುಕೊಂಡರೆ ಅದು ಬೆಸುಗೆಯ ಕಾರು ಎನ್ನಿಸಿಕೊಳ್ಳುತ್ತದೆ.

ಕಾರುಗಳು ಹೇಗೆ ಬೆಸೆದುಕೊಳ್ಳುತ್ತವೆ? ಇದರ ಕೆಲಸ ಮಾಡುವ ವಿಧಾನ ಹೇಗೆ?

ಈ ಬೆಸುಗೆಯ ಕಾರುಗಳು ಕೆಳಗೆ ನೀಡಿರುವ ಎರಡರಲ್ಲಿ ಒಂದು ಏರ್ಪಾಟಿನ ಮೂಲಕ ಕೆಲಸ ಮಾಡುತ್ತವೆ.

  1. ಮೊದಲನೇ ಏರ್ಪಾಟು, ಟೆಥೆರ್ಡ್(Tethered) – ಟೆಥೆರ್ ಅಂದರೆ ವ್ಯಾಪ್ತಿ/ಮಿತಿಯೊಳಗೆ ಎಂಬ ಅರ್ಥ ಬರುತ್ತದೆ. ಈ ಏರ್ಪಾಟಿನಲ್ಲಿ ಕಾರು ಪಯಣಿಗರ ಮೊಬೈಲ್ ನೊಂದಿಗೆ ಬೆಸೆದುಕೊಳ್ಳುವ ಸಾಮರ್ಥ್ಯ ಹೊಂದಿರುತ್ತದೆ.
  2. ಎರಡನೇ ಏರ್ಪಾಟು, ಎಂಬೆಡೆಡ್(Embedded) – ಈ ಏರ್ಪಾಟನ್ನು ಕನ್ನಡದಲ್ಲಿ ನಾಟಿದ/ಹುದುಗಿಸಿದ ಏರ್ಪಾಟು ಎನ್ನಬಹುದು. ಇದರಲ್ಲಿ ಗಾಡಿಯ ಒಳಗಿನ ಟೆಲೆಮಾಟಿಕ್ಸ್ ಕಂಟ್ರೋಲರ್ ದಲ್ಲಿ(Telematics ECU) ಎಂಟೆನ್ನಾ(Antenna) ಮತ್ತು ಸೆಮಿಕಂಡಕ್ಟರ್ ಚಿಪ್ ಸೇರಿರುತ್ತದೆ. ಇವುಗಳ ಮೂಲಕ ಗಾಡಿಯು ಬೇರೆ ದೂರದ ಉಪಕರಣಗಳೊಂದಿಗೆ ಸುಲಭವಾಗಿ ಸಂಪರ್ಕ ಮಾಡಬಹುದು.

ಇದನ್ನು ಒಟ್ಟಾರೆಯಾಗಿ ಹೇಳಬೇಕೆಂದರೆ, ಮೊಬೈಲ್ ಫೋನ್‌ಗೆ ಬರುವ ತಂತ್ರಾಂಶದ ಅಪ್ಡೇಟ್‌ಗಳಂತೆ, ಬೆಸುಗೆಯ ಕಾರುಗಳು ಈ ರೀತಿ ಸಾಫ್ಟ್‌ವೇರ್ ಅಪ್ಡೇಟ್‌ಗಳನ್ನು ಪಡೆದು ಕೆಳಗಿಸಿಕೊಳ್ಳಬಲ್ಲವು, ಹೊರ ಜಗತ್ತಿನ ವಸ್ತುಗಳೊಂದಿಗೆ ಸಂಪರ್ಕ ಪಡೆಯಬಲ್ಲವು ಮತ್ತು ತನ್ನ ಸುತ್ತಲಿನ ಮಿತಿಯಲ್ಲಿನ ಇತರೆ ವಸ್ತುಗಳೊಂದಿಗೆ ಮಿಂಬಲೆ ಇಲ್ಲವೇ ಕಾರಿನ ವೈಫೈ (Wifi) ಮೂಲಕ ಸಂಪರ್ಕ ಹೊಂದಬಲ್ಲವು.

ಬೆಸುಗೆಯ ಕಾರುಗಳು ಹೇಗೆ ಮಾತುಕತೆ ನಡೆಸಬಲ್ಲವು?

ಬೆಸುಗೆಯ ಕಾರುಗಳು ಹೊರಜಗತ್ತಿನ ವಸ್ತುಗಳೊಂದಿಗೆ ವ್ಯವಹಾರ/ಸಂಪರ್ಕ ಮಾಡುವುದನ್ನು 5 ಬಗೆಗಳಾಗಿ ವಿಂಗಡಿಸಬಹುದು.

  1. ಒಂದು ಬಂಡಿ(ಕಾರು/ಗಾಡಿ) ಮತ್ತೊಂದು ಬಂಡಿ ಇಲ್ಲವೇ ಬಂಡಿಗಳೊಂದಿಗೆ ಮಾಹಿತಿ ಸಂಪರ್ಕ ಮಾಡಬಹುದು. ಇದನ್ನು ವೆಹಿಕಲ್ ಟು ವೆಹಿಕಲ್ ಮಾಹಿತಿ ಒಡನಾಟ ಎನ್ನುತ್ತಾರೆ(V2V). ಒಂದು ಕಾರು ನಿರ್ದಿಷ್ಟ ಜಾಗದಲ್ಲಿ ಸಾಗುತ್ತಿರುತ್ತದೆ, ಅದು ಸಾಗುವ ವೇಗ, ದಾರಿ, ತಡೆತದ ಸ್ಥಿತಿ(braking situation) ಮುಂತಾದ ಮಾಹಿತಿಯನ್ನು ಈ ಕಾರು ಕಲೆ ಹಾಕಿ ಇನ್ನೊಂದು ಕಾರಿಗೆ ಕಳಿಸಬಹುದು. ಈ ವಿಧದ ಮೂಲಕ ಬೇಜವ್ದಾರಿ ಬಂಡಿ ಓಡಿಸುಗರನ್ನು, ಇಲ್ಲವೇ ದಾರಿ ತಪ್ಪಿಸಿ ಬೇರೆ ದಾರಿಯಲ್ಲಿ ಹೋಗುವ ಬಂಡಿಗಳನ್ನು ಗುರುತಿಸಿ, ಅಗತ್ಯ ಕ್ರಮ ಕೈಗೊಳ್ಳಬಹುದು. ಬಹುತೇಕ ಕ್ಯಾಬ್/ಟ್ಯಾಕ್ಸಿ ಸೇವೆಗಳನ್ನು ಒದಗಿಸುವ ಕಂಪನಿಯವರು ತಮ್ಮ ಕಾರುಗಳು ಸರಿಯಾದ ದಾರಿಯಲ್ಲಿ ಸಾಗುತ್ತಿವೆಯೇ  ಇಲ್ಲವೇ ಎಂಬುದನ್ನು ಪತ್ತೆ ಹಚ್ಚಬಹುದು. ಗಾಡಿಗಳಲ್ಲಿ ಪರಾರಿಯಾಗುವ ಕಳ್ಳಕಾಕರನ್ನು/ಅಪಹರಣಕಾರರನ್ನು, ಅವರು ಸಾಗುವ ದಾರಿಯ ಬಗ್ಗೆ ನಿಖರ ಮಾಹಿತಿ ನೀಡುವ ಮೂಲಕ ಈ ಬಗೆಯು ಪೋಲೀಸ್‍ರಿಗೆ ನೆರವಾಗುತ್ತದೆ. 
  2. ಎರಡನೇ ಬಗೆ, ಗಾಡಿ ಮತ್ತು ದಾರಿಹೋಕರ ನಡುವೆ ಸಂಪರ್ಕ(V2P-ವೆಹಿಕಲ್ ಟು ಪೆಡೆಸ್ಟ್ರಿಯನ್):

ಇಲ್ಲಿ ಕಾರು ದಾರಿಯಲ್ಲಿ ಓಡಾಡುವ ಇತರೆ ದಾರಿಹೋಕರನ್ನು ಅರಿವುಕಗಳ ಮೂಲಕ ಗುರುತಿಸಿ, ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿ ಅಪಘಾತ ತಡೆಯುತ್ತದೆ.

  1. ಗಾಡಿ ಮತ್ತು ಇತರೆ ಮೂಲಭೂತ ಸೌಕರ್ಯಗಳ ನಡುವಿನ ಸಂಪರ್ಕ(V2I-ವೆಹಿಕಲ್ ಟು ಇನ್ಫ್ರಾಸ್ಟ್ರಕ್ಚರ್): 

ಈ ಬಗೆಯಲ್ಲಿ ಕಾರು ತನ್ನ ಸುತ್ತಲಿನ ಪರಿಸರ, ಸೇತುವೆ, ಕಟ್ಟಡ, ಬೀದಿ ದೀಪ, ಸಂಚಾರದ ದಟ್ಟಣೆ, ಎದುರಾಗುವ ಸಂಚಾರಿ ಸಿಗ್ನಲ್ ಹೀಗೆ ಹಲವಾರು ಮಾಹಿತಿಯನ್ನು ಪಡೆದು ಅದನ್ನು ಹಂಚಿಕೊಳ್ಳಬಲ್ಲದು. ಈ ಮಾಹಿತಿ ಸಂಚಾರ ದಟ್ಟಣೆ ನಿರ್ವಹಿಸುವ ಪೋಲೀಸ್‍ರಿಗೆ, ತುರ್ತು ಸಮಯದಲ್ಲಿ ಅಂಬ್ಯುಲೆನ್ಸ್‌ಗಳಿಗೆ ನೆರವಾಗುತ್ತವೆ. ನಮ್ಮ ಮೊಬೈಲ್‌ಗಳಲ್ಲಿ ಕಂಡುಬರುವ ದಾರಿತಲುಪು ಏರ್ಪಾಟು(Navigation System) ಮಾಹಿತಿಗಿಂತಲೂ ಇಲ್ಲಿ ಹೆಚ್ಚು ನಿಖರ ಮತ್ತು ನೇರವಾದ ಮಾಹಿತಿ(Real time Data) ಒದಗಿಸುವ ವ್ಯವಸ್ತೆ ಇರುತ್ತದೆ.

  1. ಗಾಡಿ ಮತ್ತು ಕ್ಲೌಡ್ ಮಾಹಿತಿ ಸಂಪರ್ಕ(V2C-ವೆಹಿಕಲ್ ಟು ಕ್ಲೌಡ್): ಕಾರುಗಳು ಮೂಲಕ ಕ್ಲೌಡ್‍ನಲ್ಲಿ ಮಾಹಿತಿ ಕೂಡಿಟ್ಟುಕೊಳ್ಳಬಹುದು. ಉದಾಹರಣೆಗೆ, ಗಾಡಿಯೊಂದು ಎಷ್ಟು ಬಾರಿ ರಿಪೇರಿಯಾಗಿದೆ, ಎಷ್ಟು ಸಲ ಸರ್ವೀಸ್ ಮಾಡಿಸಲ್ಪಟ್ಟಿದೆ, ದಾರಿ ಮಧ್ಯೆದಲ್ಲಿ ಕಾರು ಕೆಟ್ಟು ನಿಂತ ಪರಿಸ್ಥಿತಿ, ಹೀಗೆ ಎಲ್ಲ ದಾಖಲೆಗಳನ್ನು ಕ್ಲೌಡ್ ಮೂಲಕ ಕೂಡಿಟ್ಟು, ಬೇಕೆಂದಾಗ ಅದನ್ನು ಬಳಸಿಕೊಳ್ಳಬಹುದು.
  2. ಗಾಡಿ ಮತ್ತು ಮೇಲಿನ ಎಲ್ಲವೂಗಳೊಂದಿಗೆ ಸಂಪರ್ಕ(V2X-ವೆಹಿಕಲ್ ಟು ಎವೆರಿಥಿಂಗ್):

ಈ ವಿಧದಲ್ಲಿ ಗಾಡಿಯೊಂದು ಮೇಲೆ ತಿಳಿಸಿದ ಎಲ್ಲವೂಗಳೊಂದಿಗೆ ಮಾಹಿತಿ ಪಡೆಯುವುದು-ಹಂಚುವುದನ್ನು ಮಾಡಬಹುದು. ಇದರಿಂದ ಗಾಡಿಯೊಂದು ಒಂದೇ ಸಮಯದಲ್ಲಿ ಬೇರೆ ಗಾಡಿಯೊಂದಕ್ಕೆ ಬೆಸೆದುಕೊಂಡು ಸುತ್ತಲಿನ ವಾತಾವರಣದ ಮಾಹಿತಿ ಹಂಚಿ, ಸಂಚಾರ ದಟ್ಟಣೆಯ ಮಾಹಿತಿ ಪಡೆದು, ದಾರಿಹೋಕರು ಎದುರಾದರೆ ಗಾಡಿ ನಿಲ್ಲಿಸುವಂತೆ ಓಡಿಸುಗನನ್ನು ಎಚ್ಚರಿಸಬಹುದು. ಮತ್ತೆ ಎಲ್ಲ ಮಾಹಿತಿಯನ್ನು ಮುಂದೆ ಬಳಸಲು ಕ್ಲೌಡ್‌ನಲ್ಲಿ ಕೂಡಿಡಬಹುದು. ಈ ಎಲ್ಲವೂ ಒಟ್ಟಿಗೆ ನಡೆದು,  ಸಾಕಷ್ಟು ಮಾಹಿತಿ ಒಂದು ಗಾಡಿಯಿಂದ ಇನ್ನೊಂದು ಗಾಡಿಗೆ ರವಾನೆಯಾಗುತ್ತಿರುತ್ತದೆ.

ಬೆಸುಗೆಯ ಕಾರುಗಳ ಅನುಕೂಲಗಳೇನು?

ಗಾಡಿಯೊಳಗಡೆ ಮನೋರಂಜನೆ, ಭದ್ರತೆ ಮತ್ತು ಅಪಘಾತ ತಡೆಯುವಿಕೆ, ಸಾರಿಗೆ ದಟ್ಟಣೆ, ಬಂಡಿಯನ್ನು ಸುಲಭವಾಗಿ ಹಿಡಿತದಲ್ಲಿಟ್ಟುಕೊಳ್ಳುವ ವಿಷಯಗಳಲ್ಲಿ ಬೆಸುಗೆಯ ಕಾರುಗಳು ಮಹತ್ತರ ಪಾತ್ರ ವಹಿಸಲಿವೆ. ಹೆಚ್ಚುತ್ತಿರುವ ಜನಸಂಖ್ಯೆಗೆ ತಕ್ಕಂತೆ ಹೆಚ್ಚಿನ ಬಂಡಿಗಳ ಓಡಾಟವನ್ನು ಸುಲಭ ಸರಳಗೊಳಿಸಿ, ಸಾರಿಗೆ ಏರ್ಪಾಟಿನಲ್ಲಿ ಸೂಕ್ತ ಬದಲಾವಣೆ ತರುವಲ್ಲಿ ಬೆಸುಗೆಯ ಕಾರುಗಳು ನೆರವಾಗುವುದು ಖಚಿತ.

ಇಂದು ಮಾರುಕಟ್ಟೆಯಲ್ಲಿರುವ ಬಹುತೇಕ ಕಾರುಗಳು ಒಳ್ಳೆಯ ಗುಣಮಟ್ಟದ ತಿಳಿನಲಿ ಏರ್ಪಾಟು(Infotainment System), ಅಂಡ್ರ್ಯಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಏರ್ಪಾಟಿನಿಂದ ಸರಳವಾಗಿ ಜೋಡಣೆಗೊಳ್ಳುತ್ತವೆ. ಈ ಏರ್ಪಾಟುಗಳಿಗೆ ಹೆಚ್ಚಿನ ನಿಖರ ಮಾಹಿತಿ ಒದಗಿಸಿ ಕಾರು ಓಡಿಸುಗರಿಗೆ ದಾರಿತೋರಲಿದೆ ಬೆಸುಗೆಯ ಕಾರುಗಳು. ಒಬ್ಬ ವ್ಯಕ್ತಿ ಕಾರಿನಲ್ಲಿ ಮಾರುಕಟ್ಟೆಗೆ ಹೋಗಿದ್ದಾಗ,, ಅವಸರದಲ್ಲಿ ಕಾರು ಪಾರ್ಕ್ ಮಾಡಿ, ಕಾರಿಗೆ ಬೀಗ ಹಾಕದೇ ದೂರ ಬಂದಾಗ, ಕಾರಿಗೆ ಬೀಗ ಹಾಕದೇ ಇರುವುದು ನೆನಪಾಗುತ್ತದೆ. ಆದರೆ,ಆ ವ್ಯಕ್ತಿಗೆ ನೆನಪಾಗುವ ಮೊದಲೇ ಆತನ ಮೊಬೈಲ್ ತಕ್ಷಣ ಎಚ್ಚರಿಕೆ ಸಂದೇಶ ನೀಡುತ್ತದೆ. ಕನೆಕ್ಟೆಡ್ ಕಾರ್ ತಂತ್ರಜ್ಞಾನದ ಮೂಲಕ ಬೆಸೆದುಕೊಂಡ ಕಾರು ಮತ್ತು ಮೊಬೈಲ್, ಇಂತ ಹೊತ್ತಲ್ಲಿ ಸಹಾಯಕ್ಕೆ ಬರುತ್ತದೆ. ಟ್ಯಾಕ್ಸಿ ಕಂಪನಿಯ ಮಾಲೀಕನೊಬ್ಬ ತನ್ನ ಮೊಬೈಲ್ ಮೂಲಕವೇ ತನ್ನ ಹತ್ತಾರು ಟ್ಯಾಕ್ಸಿಗಳು ಸರಿಯಾದ ದಾರಿಯಲ್ಲಿ ಸಾಗುತ್ತಿವೆಯೇ ಇಲ್ಲವೇ ಎಂಬುದನ್ನು ಕ್ಷಣಾರ್ಧದಲ್ಲಿ ಕಂಡುಕೊಳ್ಳಬಹುದು. ತನ್ನ ಟ್ಯಾಕ್ಸಿ ಓಡಿಸುಗರಿಗೆ ಸಾಗುವ ದಾರಿಯ ಸಂಚಾರ ದಟ್ಟಣೆಯ ಮಾಹಿತಿ ಒದಗಿಸಿ, ಅದಕ್ಕೆ ತಕ್ಕಂತೆ ಮಾರ್ಗ ಬದಲಿಸಿ ಸುಲಭವಾಗಿ ಊರು ಮುಟ್ಟುವ ಸಲಹೆ ನೀಡಬಹುದು. ಕಾರಿನಲ್ಲಿ ದೂರದ ಊರಿಗೆ ಸಾಗುತ್ತಿದ್ದೀರಿ, ಮನೆಯಲ್ಲಿ ಗೀಸರ್ ಆಫ್ ಮಾಡುವುದು ಆಗ ನೆನಪಾಗುತ್ತದೆ, ಚಿಂತೆ ಬೇಡ ನಿಮ್ಮ ಕಾರು ಮನೆಯಲ್ಲಿನ ಗೀಸರ್ ಆಫ್ ಮಾಡುತ್ತದೆ. ನೀವು ಮತ್ತು ಕುಟುಂಬ, ವಾರದ ಕೊನೆಯಲ್ಲಿ ಮಾಲ್‍ವೊಂದಕ್ಕೆ ಹೋಗಬೇಕೆಂದುಕೊಂಡಿರುತ್ತೀರಿ, ಆ ಮಾಲ್‍ನಲ್ಲಿ ಪಾರ್ಕಿಂಗ್‌ಗೆ ಎಷ್ಟು ಜಾಗಗಳು ಖಾಲಿ ಇವೆ ಎಂಬುದನ್ನು ನಿಮ್ಮ ಕಾರು ನಿಮಗೆ ತಿಳಿಸುತ್ತದೆ. ಮಾಲ್‌ನ ಸುತ್ತಮುತ್ತಲಿನ ಪರಿಸರದ ನೇರ ಮಾಹಿತಿ ಕನೆಕ್ಟೆಡ್ ಕಾರ್ ಮೂಲಕ ನಿಮ್ಮ ಕಾರು ಪಡೆದುಕೊಂಡು ನಿಮಗೆ ಮಾಹಿತಿ ನೀಡುತ್ತದೆ. ಆಗ ನೀವು ಪಾರ್ಕಿಂಗ್‍ಗಾಗಿ ಅಲೆದಾಡುವ-ಸಮಯ ಕಳೆಯುವ ಅಗತ್ಯ ಇರುವುದಿಲ್ಲ. ಇನ್ನೊಂದು ಪ್ರಮುಖ ಅನುಕೂಲವೆಂದರೆ ಜಿಯೋ ಫೆನ್ಸಿಂಗ್(Geo-Fencing). ಅಂದರೆ ನಿರ್ದಿಷ್ಟ ದಾರಿಯಲ್ಲಿ, ನಿರ್ದಿಷ್ಟ ವಾತಾವರಣದಲ್ಲಿ ಮಾತ್ರ ಗಾಡಿ ಓಡಿಸುವಂತೆ ಮಾಡುವುದು. ಉದಾಹರಣೆಗೆ ನೀವು ನಿಮ್ಮ ಮನೆಯಲ್ಲಿ  ಮಗ/ಮಗಳಿಗೆ ಕಾಲೇಜಿಗೆ ಹೋಗಿಬರಲು ಕಾರನ್ನು ಕೊಡಿಸುತ್ತೀರಿ ಎಂದುಕೊಳ್ಳಿ. ದಿನವೂ ಮಕ್ಕಳು ಕಾಲೇಜಿಗೆ ಅದೇ ದಾರಿಯಲ್ಲಿ ಸಾಗಿ ಮರಳಿ ಬರುವಂತೆ ಮಾಡಬಹುದು, ಬಂಡಿ ಅದೇ ವಾತಾವರಣದಲ್ಲಿ ಸಾಗಿ ಬರುವ ಮಾಹಿತಿಯನ್ನು ಒಮ್ಮೆ ಜಿಯೋ ಫೆನ್ಸಿಂಗ್ ಮೂಲಕ ಫೀಡ್ ಮಾಡಿ, ಕನೆಕ್ಟೆಡ್ ಕಾರು ಮೂಲಕ ನಿಮ್ಮ ಮೊಬೈಲ್ ಮತ್ತು ಕಾರು ಬೆಸೆದುಕೊಂಡಿದ್ದರೆ, ಈ ದೈನಂದಿನ ಕಾಲೇಜಿಗೆ ಹೋಗಿ ಬರುವ ದಾರಿಯಲ್ಲಿ ವ್ಯತ್ಯಾಸವಾದರೆ ಕೂಡಲೇ ನಿಮ್ಮ ಮೊಬೈಲ್‌ಗೆ ಎಚ್ಚರಿಕೆ ಸಂದೇಶ ಬರುತ್ತದೆ. ಹೀಗೆ ಕಾರು ಓಡಾಡುವ ಚಟುವಟಿಕೆಯ ಮೇಲೆ ಸುಲಭವಾಗಿ ಕಣ್ಣಿಡಬಹುದು. ಕಾರೊಂದು ದಾರಿಯಲ್ಲಿ ಸಾಗುವಾಗ ಅಪಘಾತಕ್ಕೀಡಾದರೆ, ಕೂಡಲೇ ಹತ್ತಿರದ ಸಂಚಾರಿ ಪೋಲೀಸ್‍ರಿಗೂ ಇಲ್ಲ ಅಪಘಾತವಾದ ವ್ಯಕ್ತಿಗಳ ಕುಟುಂಬಕ್ಕೆ ಕೂಡಲೇ ಕಾರು ಮಾಹಿತಿ ಒದಗಿಸಿ ಜೀವ ಉಳಿಸುವ ಕೆಲಸ ಮಾಡುತ್ತದೆ. ಮಳೆಗಾಲದಲ್ಲಿ ಗಾಡಿಯೊಂದು ಘಾಟಿ ಪ್ರದೇಶದಲ್ಲಿ ಸಾಗುತ್ತಿದೆ, ಮುಂದೆ ಹತ್ತಾರು ಮೈಲಿ ದೂರದಲ್ಲಿ ಗುಡ್ಡ ಕುಸಿತ, ಭೂಕುಸಿತವಾದರೆ, ಕೂಡಲೇ ಅದರ ಮಾಹಿತಿ ಗಾಡಿಗೆ ತಲುಪುತ್ತದೆ. ಆಗ ಓಡಿಸುಗ ಮುಂದೆ ಸಾಗುವ ಅಪಾಯವನ್ನು ಅರಿತು ಗಾಡಿಯ ಸಾಗುವ ದಾರಿಯನ್ನು ಬದಲಿಸಿಯೋ ಇಲ್ಲವೇ ಭದ್ರವಾದ ಜಾಗವನ್ನು ಸೇರಿಕೊಳ್ಳಬಹುದು. ದೈನಂದಿನ ವ್ಯವಹಾರದ ಮೇಲೆ ಕಣ್ಣಿಡಲು, ಕಳ್ಳ-ಕಾಕರ ಚಟುವಟಿಕೆಗಳ ಮಾಹಿತಿ ಪಡೆದು ಪೋಲೀಸ್ ವ್ಯವಸ್ಥೆಗೆ ನೆರವಾಗಲು ಬೆಸುಗೆಯ ಗಾಡಿಗಳ ಅಗತ್ಯವಿರಲಿದೆ.

ಅನಾನುಕೂಲಗಳ ವಿಷಯ ಬಂದಾಗ, ಕಾರುಗಳ ಹ್ಯಾಕಿಂಗ್ ಮುಖ್ಯವಾದ ತೊಡಕಾಗುವ ಸಾಧ್ಯತೆ ಇದೆ. ಮಿಂಬಲೆ ಮೂಲಕ ಬೆಸೆದುಕೊಂಡಿರುವ ಗಾಡಿಗಳನ್ನು ವೆಬ್ಸೈಟ್ ಹ್ಯಾಕ್ ಮಾಡುವಂತೆ ದೂರದಲೆಲ್ಲೋ ಇರುವ ವ್ಯಕ್ತಿಯೊಬ್ಬ ಹ್ಯಾಕ್ ಮಾಡಿ ತನ್ನ ವಶಕ್ಕೆ ತೆಗೆದುಕೊಂಡರೆ ಆಗುವ ಅನಾಹುತಗಳನ್ನು ಯೋಚಿಸಿ. ಇನ್ನೂ ದಿಗಿಲುಕೋರರು ಕಾರುಗಳನ್ನು ತಮ್ಮ ವಶಕ್ಕೆ ಪಡೆದು, ಯಾವುದೋ ದೇಶದ ಮೂಲೆಯಿಂದ ಕಾರನ್ನು ಅದರ ಮಾಲೀಕನ ಮೊಬೈಲ್ ಹೀಗೆ ಎಲ್ಲವನ್ನೂ ತನ್ನ ಹಿಡಿತಕ್ಕೆ ಪಡೆದು ಕೊಲೆ ಸುಲಿಗೆ ಮಾಡುವ ಅಪಾಯ ತಪ್ಪಿದ್ದಲ್ಲ. ಮಾದಕ ವಸ್ತು ಸಾಗಾಟಗಾರರು ಈ ತಂತ್ರಜ್ಞಾನದ ಮೂಲಕ ಕಳ್ಳದಾರಿಗಳ ಮೂಲಕ ಯಾರಿಗೂ ತಿಳಿಯದಂತೆ ಮಾದಕ ವಸ್ತುಗಳನ್ನು ಸಾಗಾಟ ಮಾಡಿ ಸಮಾಜವನ್ನು ಹಾಳುಗೆಡುವಬಹುದು. 

ಮಾಹಿತಿ ಗುಟ್ಟನ್ನು ಕಾಪಾಡಿಕೊಳ್ಳುವುದು ಕಷ್ಟ. ಬೆಸುಗೆಯ ಗಾಡಿಗಳನ್ನು ಕ್ಲೌಡ್, ಆಪ್ ಮೂಲಕ ಸಾಕಷ್ಟು ಮಾಹಿತಿಯನ್ನು ಕೂಡಿಟ್ಟುಕೊಳ್ಳುವುದರಿಂದ ಕಾರಿನೊಡೆಯರ ವೈಯುಕ್ತಿಕ ಮಾಹಿತಿ ಕಾರು ತಯಾರಕರಿಗೆ ಸುಲಭವಾಗಿ ತಲುಪುತ್ತದೆ. ಇಂತ ಮಾಹಿತಿಗೆ ಪ್ರವೇಶವಕಾಶ(Access) ಹೊಂದಿರುವವರು ತಮಗಿಷ್ಟದಂತೆ ದುರುಪಯೋಗ ಪಡಿಸಿಕೊಳ್ಳುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. 

ಬೆಸುಗೆಯ ಗಾಡಿಗಳ ಸಾಧಕ ಬಾಧಕಗಳ ಚರ್ಚೆಗಳು ದಿನೇದಿನೇ ಜೋರಾಗಿ ನಡೆಯುತ್ತಲೇ ಇವೆ. ಬೆಸುಗೆಯ ಗಾಡಿಗಳ ಅನಾನುಕೂಲಗಳಿಗೆ ಪರಿಹಾರ ಕಂಡುಕೊಳ್ಳುವ ಕೆಲಸಗಳು ಭರದಲ್ಲಿ ಸಾಗಿವೆ. ಇದರ ಮಧ್ಯೆಯೇ ಸಾಕಷ್ಟು ಬೆಸುಗೆಯ ಗಾಡಿಗಳು ಭಾರತ ಸೇರಿದಂತೆ ಹಲವು ದೇಶಗಳಲ್ಲಿ ದಿನವೂ ಓಡಾಡುತ್ತಿವೆ.

ಮಾಹಿತಿ ಸೆಲೆ: connected cars
ತಿಟ್ಟ ಸೆಲೆ: connected cars pic

ದುಂಡಾಕಾರದ ರನ್‌ವೇ

ಜಯತೀರ್ಥ ನಾಡಗೌಡ.

ಜಗತ್ತಿನೆಲ್ಲೆಡೆ ಹೆಚ್ಚು ಮಂದಿಯ ಓಡಾಟ, ವಿಮಾನ ಸಾರಿಗೆಯ ಮೇಲೂ ದಟ್ಟಣೆ ಹೆಚ್ಚಿಸಿದೆ. ನಮ್ಮ ರಾಜ್ಯದ ಬೆಂಗಳೂರು, ಮಂಗಳೂರು ಸೇರಿದಂತೆ ಭಾರತದ ಪ್ರಮುಖ ಬಾನೋಡತಾಣಗಳು ಇಂದು ಕಿಕ್ಕಿರಿದಿರುತ್ತವೆ. ದುಬೈ, ಫ್ರಾಂಕ್‌ಪರ್ಟ್, ಪ್ಯಾರಿಸ್, ಲಂಡನ್, ಸಿಂಗಪುರ್, ನ್ಯೂಯಾರ್ಕ್ ಮುಂತಾದ ಬಾನೋಡ ತಾಣಗಳ ಮೂಲಕ ಪ್ರತಿ ವರುಶ ಕೋಟಿಗಟ್ಟಲೆ ಪ್ರವಾಸಿಗರು ಓಡಾಡುತ್ತಾರೆ. ದಿನವೊಂದಕ್ಕೆ ನೂರಾರು ಬಾನೋಡಗಳು ಇಲ್ಲಿಗೆ ಬಂದಿಳಿಯುತ್ತವೆ ಮತ್ತು ಇಲ್ಲಿಂದ ಬೇರೆಡೆಗೆ ಹಾರುತ್ತವೆ. ಹೀಗಾಗಿ ಈ ಬಾನೋಡ ತಾಣಗಳ ಓಡುದಾರಿ(Runway) ಯಾವಾಗಲೂ ಬ್ಯುಸಿ. ಲಂಡನ್ ಬಾನೋಡತಾಣದಲ್ಲಿ ಪ್ರತಿ 45 ಸೆಕೆಂಡ್‌ಗಳಿಗೊಮ್ಮೆ ಬಾನೋಡವೊಂದು ಮುಗಿಲಿನತ್ತ ಹಾರುತ್ತದೆ. ದಿನವೊಂದಕ್ಕೆ ಹಾರುವ ಮತ್ತು ಬಂದಿಳಿಯುವ ಒಟ್ಟು ಬಾನೋಡಗಳು 1400, ಅಂದರೆ ಪ್ರತಿ ವರುಷಕ್ಕೆ 5 ಲಕ್ಷಕ್ಕೂ ಹೆಚ್ಚು ಬಾನೋಡಗಳು. ನಮ್ಮ ಬೆಂಗಳೂರಿನ ನಾಡಪ್ರಭು ಕೆಂಪೇಗೌಡ ಬಾನೋಡತಾಣದ ಅಂಕಿ ಸಂಖ್ಯೆಗಳತ್ತ ಗಮನ ಹಾಯಿಸಿದರೆ, ಪ್ರತಿ ವರುಶ 2 ಕೋಟಿಗೂ ಹೆಚ್ಚಿನ ಪ್ರಯಾಣಿಕರು ಇಲ್ಲಿ ಓಡಾಟ ನಡೆಸುತ್ತಾರಂತೆ. ಅಂದರೆ ದಿನವೊಂದಕ್ಕೆ ಸುಮಾರು 55 ಸಾವಿರ ಪ್ರಯಾಣಿಕರು. ಒಂದೇ ದಿನದಲ್ಲಿ ಸುಮಾರು 500 ಬಾನೋಡಗಳು ಕೆಂಪೇಗೌಡ ಬಾನೋಡತಾಣದಲ್ಲಿ ಓಡಾಟ ನಡೆಸುತ್ತವೆ.

 ಈ ಓಡುದಾರಿಗಳು ಬ್ಯುಸಿಯಾಗಿರುವುದರಿಂದ ಮುಂಬರುವ ದಿನಗಳಲ್ಲಿ ಹೆಚ್ಚಿನ ಬಾನೋಡ ತಾಣಗಳನ್ನು ಕಟ್ಟುವ ಅಗತ್ಯವಿದೆ. ಹೊಸ ಬಾನೋಡ ತಾಣಗಳನ್ನು ಕಟ್ಟಲು ಸಾವಿರಾರು ಎಕರೆಗಳಷ್ಟು ಜಾಗಬೇಕು. ಬಾನೋಡತಾಣಗಳ ಈ ಸಮಸ್ಯೆಯ ಬಗ್ಗೆ ಆಳವಾದ ಅರಕೆ ನಡೆಸಿರುವ ನೆದರ್‌ಲ್ಯಾಂಡ್ಸ್ ಏರ್‌ಪೋರ್ಟ್ಸ್ ಸೆಂಟರ್‌ನ(NLR) ಮುಖ್ಯ ಸಂಶೋಧನಾ ವಿಜ್ಞಾನಿ ಹೆಂಕ್ ಹೆಸ್ಸಿಲಿಂಕ್(Henk Hesselink), ಒಂದು ಹೊಸದಾದ ಯೋಜನೆಯನ್ನು(Concept) ಮುಂದಿಟ್ಟಿದ್ದಿದ್ದಾರೆ. ಅದೇ “ದುಂಡಾಕಾರದ ಓಡುದಾರಿ”  ಇಂಗ್ಲಿಷ್‌ನಲ್ಲಿ ಎಂಡ್‌ಲೆಸ್ ರನ್‍ವೇ ಇಲ್ಲವೇ ಸರ್ಕ್ಯೂಲರ್ ರನ್‍ವೇ (Endless Runway/Circular Runway) ಎಂಬುದು.

ಒಂದು ಬಾನೋಡ ಹಾರುವುದು ಇಲ್ಲವೇ ನೆಲಕ್ಕೆ ಬಂದಿಳಿಯುವುದು ಸುಲಭದ ಕೆಲಸ ಅಲ್ಲ. ಒಂದು ಬಾನೋಡ ನೆಲಕ್ಕಿಳಿಯುತ್ತಿರುವಾಗ ಅದು ಸಾಕಷ್ಟು ಗಾಳಿಯೊತ್ತಡಕ್ಕೆ ಒಳಗಾಗುತ್ತದೆ. ಹೀಗಾಗಿ ಬಾನೋಡವೊಂದು ಗಾಳಿ ಬೀಸುವ ದಿಕ್ಕಿಗೆ ವಿರುದ್ದವಾಗಿ ಕೆಳಗಿಳಿಸುವುದು ಕಷ್ಟ. ಇದನ್ನು ಕ್ರಾಸ್‌ವಿಂಡ್ ಲ್ಯಾಂಡಿಂಗ್ ಎನ್ನುತ್ತಾರೆ. ಹೆಚ್ಚಿನ ಬಾನೋಡಗಳು ಗಾಳಿ ಬೀಸುವ ದಿಕ್ಕಿನಲ್ಲೇ ಇಳಿಯುತ್ತವೆ. ಅದಕ್ಕೆಂದೇ ಬಾನೋಡವೊಂದನ್ನು ಕೆಳಗಿಳಿಸುವಾಗ ನಿಧಾನಕ್ಕೆ ಅದನ್ನು ಗಾಳಿ ಬೀಸುವ ದಿಕ್ಕಿಗೆ ತರುತ್ತ ಇಳಿಸುತ್ತಾರೆ. ಇಂತಹದ್ದಕ್ಕೆಲ್ಲ ಹತ್ತಾರು ಕಿಲೋಮೀಟರ್ ಗಟ್ಟಲೆ ದೊಡ್ಡ ಓಡುದಾರಿ ಕಟ್ಟಿಸಬೇಕು. ಇವುಗಳಿಗೆ ಸಾಕಷ್ಟು ಜಾಗ ಬೇಕಾಗುತದೆ. ಹೆಸ್ಸಿಲಿಂಕ್ ಅವರ ದುಂಡಾಕಾರದ ಓಡುದಾರಿಗೆ ಕೇವಲ 3.5 ಕಿಲೋಮೀಟರ್ ವ್ಯಾಸದ(Diameter) ದುಂಡಷ್ಟೇ(Circle) ಸಾಕಂತೆ. ಈ ದುಂಡಿನ ಸುತ್ತಲೂ ಒಂದೇ ಕಾಲಕ್ಕೆ 3 ಬಾನೋಡಗಳು ಹಾರಬಹುದು ಮತ್ತು 3 ಬಾನೋಡಗಳು ಕೆಳಗಿಳಿಯಬಹುದು. ಹೆಸ್ಸೆಲಿಂಕ್ ಅವರ ದುಂಡಾಕಾರದ ಓಡುದಾರಿಯ ಪ್ರಮುಖ ಅನುಕೂಲಗಳು(Advantages) ಹೀಗಿವೆ: 

ಈಗಿರುವ ಬಾನೋಡತಾಣಗಳಿಗಿಂತ, ದುಂಡನೆಯ ಓಡುದಾರಿಯ ಬಾನೋಡ ತಾಣಗಳು 2/3ರಷ್ಟು ಜಾಗವನ್ನು ಉಳಿತಾಯ ಮಾಡುತ್ತವೆ.ಸಾಮಾನ್ಯವಾಗಿ ಬಾನೋಡ ತಾಣಗಳಲ್ಲಿ ಬಾನೋಡಗಳು ಒಂದೇ ಕಡೆಯಿಂದ ಮೇಲೇರುವುದು ಮತ್ತು ಬಂದಿಳಿಯುವುದರಿಂದ ಒಂದೆಡೆ ದಿಕ್ಕಿನಲ್ಲಿ ಹೆಚ್ಚು ಸದ್ದು ಗದ್ದಲ ಇರುತ್ತದೆ. ಓಡುದಾರಿ ದುಂಡಿನ ಸುತ್ತಲೂ ಬಾನೋಡಗಳು ಏರುವುದು-ಇಳಿಯುವುದು ಮಾಡುವುದರಿಂದ, ಸದ್ದಿನ ಪರಿಣಾಮ ಎಲ್ಲೆಡೆ ಒಂದೇ ಸಮನಾಗಿರುತ್ತದೆ. ಹೀಗಾಗಿ ಬಾನೋಡ ತಾಣಗಳ ಅಕ್ಕ ಪಕ್ಕದ ಮನೆ ಮಾಡಿಕೊಂಡಿರುವವರಿಗೆ ಸದ್ದು ಗದ್ದಲ ಕಡಿಮೆಯಾಗಲಿದೆ.

ಒಂದೇ ಹೊತ್ತಿಗೆ ಹಲವಾರು ಬಾನೋಡಗಳು ಹಾರಲು-ಇಳಿಯಲು ಸಾಧ್ಯವಾಗುವುದರಿಂದ, ಒಂದೇ ಬಾನೋಡತಾಣ ಕಡಿಮೆ ಹೊತ್ತಿನಲ್ಲಿ ಹೆಚ್ಚಿನ ಸಂಖ್ಯೆಯ ಬಾನೋಡಗಳ ಹಾರಾಟಕ್ಕೆ ಅನುವು ಮಾಡಿಕೊಟ್ಟು, ಬಾನೋಡತಾಣಗಳ ಸಿಬ್ಬಂದಿ ಮತ್ತು ಪ್ರಯಾಣಿಕರ ಹೊತ್ತು ಉಳಿತಾಯವಾಗಲಿದೆ.ಈ ದುಂಡಾಕಾರದ ಓಡುದಾರಿಗಳ ಬಳಕೆಯಿಂದ, ಈಗಿನ ನೇರವಾಗಿರುವ ಓಡುದಾರಿಗಳಿಗೆ ತಗಲುವ ಸಿಬ್ಬಂದಿಯಲ್ಲಿ ಮುಕ್ಕಾಲು ಭಾಗ ಕಡಿತಗೊಳ್ಳಬಹುದೆಂದು ಹೆಸ್ಸಿಲಿಂಕ್ ಹೇಳಿದ್ದಾರೆ. ಬಾನೋಡತಾಣಗಳ ಅಳವು(Capacity) ಹೆಚ್ಚಲಿದೆ. ಬಾನೋಡಗಳು ಗಾಳಿಯ ಒತ್ತಡಕ್ಕೆ ತಕ್ಕಂತೆ ಇಳಿಯಬೇಕೆಂಬ ತೊಂದರೆಯೂ ಇರುವುದಿಲ್ಲ.

ಹೆಸ್ಸಿಲಿಂಕ್ ಮತ್ತವರ ತಂಡ, ಈ ಯೋಜನೆಗಾಗಿ ಗಣಕಯಂತ್ರಗಳ ಮೂಲಕ ಅಣುಕು(Simulations) ಮಾಡಿನೋಡಿದ್ದಾರೆ. “ಈ ಯೋಜನೆ ಸಾಕಾರಗೊಳ್ಳಲು ಹೆಚ್ಚಿನ ಹೊತ್ತು ತಗುಲುತ್ತದೆ. ದುಂಡಗಿನ ಓಡುದಾರಿ ಇನ್ನೂ ಈಗ ತಾನೆ ಹುಟ್ಟಿದ ಮಗುವಿನ ಹಂತದಲ್ಲಿದೆ. ಅಣುಕುಗಳ ಮೂಲಕ ಕೆಲವು ಮಾದರಿಗಳನ್ನು ತಯಾರಿಸಿ, ಡ್ರ‍ೋನ್‌ಗಳನ್ನು ಬಳಸಿ ಪರೀಕ್ಷೆಗಳು ನಡೆಸಬೇಕಾಗಿದೆ. ನಂತರ ಮಾದರಿ ಬಾನೋಡ ತಾಣ ಕಟ್ಟಿಸಿ ಅಲ್ಲಿ ಎಲ್ಲವನ್ನು ನೈಜ ಪರೀಕ್ಷೆ ನಡೆಸುವ ಕೆಲಸವಾಗಬೇಕು. ಇದೆಲ್ಲ ಕೂಡಲೇ ಆಗುವಂತ ಕೆಲಸವಲ್ಲ, ಏನಿಲ್ಲವೆಂದರೂ ಹತ್ತಾರು ವರುಶಗಳ ಬಳಿಕವೇ ಇಂತ ಒಂದು ಬಾನೋಡ ತಾಣವನ್ನು ನಾವು ನೋಡಬಹುದು” ಎನ್ನುತ್ತಾರೆ ಹೆಸ್ಸಿಲಿಂಕ್. ಪ್ಯಾರಿಸ್‌ನ ಸಿ.ಡಿ.ಜಿ.(Charles de Gaulle) ಬಾನೋಡ ತಾಣದಲ್ಲಿ ಹೆಚ್ಚಿನ ಪ್ರಯಾಣಿಕರು, ಬಾನೋಡಗಳು ತುಂಬಿ ಗಿಜಿಗಿಡುವ ದಿನವನ್ನೇ ನಮ್ಮ ಅಣುಕುಗಳಿಗೆ ಬಳಸಿಕೊಂಡಿದ್ದೇವೆ. ಒಳ್ಳೆಯ ಫಲಿತಾಂಶಗಳು(Results) ಕಂಡುಬಂದಿವೆ ಎಂದು ಹಿಗ್ಗಿನಿಂದ ಹೇಳಿಕೊಂಡಿದ್ದಾರೆ ಹೆಸ್ಸಿಲಿಂಕ್.

ಈ ದುಂಡಾಕಾರದ ಓಡುದಾರಿಯ ಬಗ್ಗೆ ಸಾಕಶ್ಟು ಪ್ರಶ್ನೆಗಳು ಎದ್ದಿವೆ. ಇದೆಲ್ಲದಕ್ಕೂ ತಕ್ಕ ಉತ್ತರಗಳನ್ನು ಹೆಸ್ಸಿಲಿಂಕ್ ಮತ್ತವರ ತಂಡದವರು ಕಂಡುಕೊಂಡಿದ್ದಾರೆ. ಕ್ರಾಸ್‌ವಿಂಡ್ ಲ್ಯಾಂಡಿಗ್ ಮಾಡುವಾಗ ಉಂಟಾಗುವ ತೊಂದರೆಗಳ ಬಗ್ಗೆಯೂ ಈ ತಂಡ ಪರಿಹಾರ ಕಂಡುಕೊಂಡಿದೆ. [ಕ್ರಾಸ್‌ವಿಂಡ್ ಲ್ಯಾಂಡಿಗ್ ಅಂದರೆ ಓಡುದಾರಿಗೆ ಅಡ್ಡವಾಗಿ (Perpendicular) ಗಾಳಿ ಬೀಸುತ್ತಿರುತ್ತದೆ, ಆಗ ಬಾನೋಡ ಓಲಾಟಕ್ಕೆ(Yaw), ಉರುಳಾಟಕ್ಕೆ (Rolling) ಒಳಪಡುವ ಸಾಧ್ಯತೆ ಹೆಚ್ಚು. ಇದು ಪ್ರಯಾಣಿಕರಿಗೆ ತೊಂದರೆಯುಂಟು ಮಾಡುತ್ತದೆ]. ನೆದರ್‌ಲ್ಯಾಂಡ್ಸ್ ಬಾನೋಡ ಸಂಶೋಧನಾಲಯದ ಈ ಕೆಲಸಕ್ಕೆ ಜರ್ಮನಿ, ಫ್ರಾನ್ಸ್, ಪೋಲ್ಯಾಂಡ್ ಮತ್ತು ಸ್ಪೇನ್ ದೇಶಗಳ ವಿವಿಧ ಬಾನೋಡ ಸಂಶೋಧನಾಲಯಗಳು ಕೈಜೋಡಿಸಿವೆ. ಇಂತ ಓಡುದಾರಿಯುಳ್ಳ ಬಾನೋಡ ತಾಣ ಕಟ್ಟಿಸಲು , ಈಗಿರುವ ಬಾನೋಡ ತಾಣಗಳಿಗಿಂತ ಅರ್ಧಪಟ್ಟು ಹೆಚ್ಚು ಹಣ ಹೂಡಬೇಕಾಗಬಹುದಂತೆ. ಆದರೆ ಇದರಿಂದ ಸಾಕಷ್ಟು ಜಾಗ/ಭೂಮಿ ಉಳಿತಾಯವಾಗಲಿದೆ ಮತ್ತು ಮೇಲೆ ತಿಳಿಸಿದ ಅನುಕೂಲಗಳನ್ನು ಪಡೆಯಬಹುದಾಗಿದೆ. ಈ ದುಂಡಾಕಾರದ ಓಡುದಾರಿ ಸಾಕಾರಗೊಳ್ಳುವುದನ್ನು ನಾವಿನ್ನೂ ಕಾಯಲೇಬೇಕು.

(ಬಾನೋಡಗಳ ಹಾರಾಟದ ಕುರಿತಾಗಿ ಮೇಲ್ಕಂಡ ಅಂಕಿ-ಅಂಶಗಳು ಕೋವಿಡ್ ಮುಂಚಿನ ಅಂಕಿ-ಅಂಶಗಳಾಗಿವೆ. ಜಗತ್ತು ಕೋವಿಡ್ ಮುಂಚಿನ ರೀತಿಗೆ ಮರಳುತ್ತಿದೆ. ಆದ್ದರಿಂದ ಅಂಕಿ-ಅಂಶಗಳಲ್ಲಿ ಚಿಕ್ಕಪುಟ್ಟ ಬದಲಾವಣೆ ಕಾಣಬಹುದು).

 

ಅಡಾಸ್- ಅಡ್ವಾನ್ಸ್ ಡ್ರೈವರ್ ಅಸ್ಸಿಸ್ಟ್ ಸಿಸ್ಟಮ್(Advance Driver Assist System)

ಜಯತೀರ್ಥ ನಾಡಗೌಡ.

ಅಡಾಸ್ – ಕಳೆದ 10-12 ವರುಶಗಳಿಂದ ಆಟೋಮೊಬೈಲ್ ಕೈಗಾರಿಕೆಯಲ್ಲಿ ಈ ಹೆಸರು ಕೇಳದವರು ಅತಿ ವಿರಳ. ಚಕ್ರದಿಂದ ಎತ್ತಿನಗಾಡಿಯಾಗಿ, ಮುಂದೆ ಜುಮ್ಮನೆ ಸಾಗುವ ಕಾರು-ಬಸ್ಸು ಮುಂತಾದವುಗಳನ್ನು ನಿರ್ಮಿಸುತ್ತಲೇ ಹೋದ ಮನುಕುಲ, ಸಾರಿಗೆ ಏರ್ಪಾಟಿನಲ್ಲಿ ಸಾಕಷ್ಟು ಬದಲಾವಣೆ ಮಾಡುತ್ತಲೇ ಸಾಗಿದೆ. ತನ್ನಿಂದ ತಾನೇ ಓಡುವ ಕಾರು ಬಳಸುವ ಯುಗದ ಹೊಸ್ತಿಲು ತಲುಪಿದ್ದೇವೆ. ಇದೆಲ್ಲವೂ ಅಡಾಸ್ ತಂತ್ರಜ್ಞಾನದ ಫಲ.

ನಮ್ಮಲ್ಲಿ ಹಲವು ಇಂಜಿನೀಯರ್, ತಂತ್ರಜ್ಞಾನಿಗಳಿಗೆ ಈ ಅಡಾಸ್ ಪದ ಹೊಸದೇನಲ್ಲ. ಇನ್ನೂ ಕೆಲವು ಕಾರು ಬಳಕೆದಾರರು ಈ ತಂತ್ರಜ್ಞಾನ ಬಳಸಿದ್ದರೂ ಅವರಿಗೆ ಇದರ ಬಗ್ಗೆ ಅರಿವಿರುವುದಿಲ್ಲ. ಆಟೋಮೊಬೈಲ್ ಉದ್ಯಮದ ಚಿತ್ರಣವನ್ನೇ ಬದಲು ಮಾಡಲಿರುವ ಈ ಹೊಸ ಚಳಕದ ಬಗ್ಗೆ ಅರಿಯೋಣ ಬನ್ನಿ. 

ಅಡಾಸ್- ಅಡ್ವಾನ್ಸ್ ಡ್ರೈವರ್ ಅಸ್ಸಿಸ್ಟ್ ಸಿಸ್ಟಮ್(Advance Driver Assist System) ಇದರ ಕಿರುರೂಪವೇ ಅಡಾಸ್(ADAS). ಸರಳವಾಗಿ ಕನ್ನಡದಲ್ಲಿ ಹೇಳಬೇಕೆಂದರೆ, ಗಾಡಿ ಓಡಿಸುಗನಿಗೆ ನೆರವಾಗಬಲ್ಲ ಒಂದು ಚೂಟಿ ಏರ್ಪಾಟು ಇದು.  ಇಂದು ಜಗತ್ತಿನಾದ್ಯಂತ ಓಡಾಡುವ ಬಹುತೇಕ ಎಲ್ಲ ಕಾರು,ಬಸ್ಸು,ಲಾರಿಗಳಲ್ಲಿ ಅಳವಡಿಸಲ್ಪಟ್ಟ ಹಲವಾರು ಏರ್ಪಾಟುಗಳಲ್ಲಿ ಗಣಕಗಳ ಬಳಕೆ ಮಾಡಲಾಗುತ್ತದೆ. ಈ ಎಲ್ಲ ಗಣಕಗಳಿಗೆ ಮಾಹಿತಿ ನೀಡಿ ಕಾರನ್ನು ಸರಾಗವಾಗಿ ಕೊಂಡೊಯ್ಯಲು ಹಲವು ಅರಿವುಕಗಳನ್ನು ಕಾರುಗಳಲ್ಲಿ ಜೋಡಿಸಲಾಗಿರುತ್ತದೆ. ಇದು ಕೂಡ ಅಡಾಸ್ ವ್ಯವಸ್ಥೆಯ ಒಂದು ಭಾಗವೇ.

ಎಷ್ಟೇ ಜಾಗರೂಕರಾಗಿದ್ದರೂ ಮನುಷ್ಯನು ಮಾಡುವ ತಪ್ಪುಗಳಿಂದ ಸಾರಿಗೆಯ ಅಪಘಾತ, ಅವಘಡಗಳು ಕಡಿಮೆಯಾಗುತ್ತಿಲ್ಲ. ಈ ನಿಟ್ಟಿನಲ್ಲಿ ಕೆಲಸಕ್ಕಿಳಿದ ಆಟೋಮೊಬೈಲ್ ಉದ್ಯಮದವರು, ಅಡಾಸ್ ವಿಶೇಷತೆಗಳನ್ನು ಗಾಡಿಗಳಲ್ಲಿ ಬಳಸಿ ಸಾರಿಗೆ ಅಪಘಾತಗಳನ್ನು ಕಡಿಮೆ ಮಾಡುವತ್ತ ಸಾಗಿದ್ದಾರೆ. ಇದೇ ಅಡಾಸ್ ತಂತ್ರಜ್ಞಾನ ಮುನ್ನೆಲೆಗೆ ಬರಲು ಕಾರಣ. ಅಪಘಾತ, ಗಾಡಿಗಳ ಡಿಕ್ಕಿಯಾಗುವಂತ ತುರ್ತು ಸಂದರ್ಭಗಳನ್ನು ಕೂಡಲೇ ಅರಿತು ಓಡಿಸುಗನನ್ನು ಎಚ್ಚರಿಸಿ ಅಪಘಾತಗಳನ್ನು ತಡೆಯುವುದೇ ಅಡಾಸ್ ಚಳಕದ(Technology) ಮುಖ್ಯ ಕೆಲಸ. ಈ ಚಳಕವೇ ನಮ್ಮ ಕಾರುಗಳಲ್ಲಿ ಸುರಕ್ಷತೆಯ ಏರ್ಪಾಟುಗಳನ್ನು ಹೆಚ್ಚಿಸುತ್ತಿದೆ. ಇಂದು ಹಲವಾರು ಗಾಡಿಗಳಲ್ಲಿ ಓಡಿಸುಗ ಕೂರುಮಣೆಯ ಪಟ್ಟಿ (ಸೀಟ್ ಬೆಲ್ಟ್) ಬಳಸದೇ ಹೋದರೆ ಇಂಜೀನ್ ಶುರುವಾಗಲ್ಲ, ಗಾಡಿಯ ಗಾಲಿಗಳಲ್ಲಿ ಗಾಳಿಯು ಕಡಿಮೆಯಾದರೆ ತಕ್ಷಣ ಓಡಿಸುಗನ ಮುಂದಿರುವ ತೋರುಮಣೆಯಲ್ಲಿ ಅಲಾರ್ಮ್ ಬರುತ್ತದೆ, ಗಾಡಿಯ ವೇಗ 80-100 ಕಿ.ಮೀ.ಪ್ರತಿಗಂಟೆ ದಾಟುತ್ತಿದ್ದಂತೆ ಗಾಡಿಯ ಅಲಾರ್ಮ್ ಎಚ್ಚರಿಕೆಯ ಗಂಟೆ ಬಾರಿಸತೊಡಗುತ್ತದೆ. ಇವೆಲ್ಲವೂ ಅಪಘಾತ, ಗುದ್ದಾಟ ತಡೆಗಟ್ಟಬಲ್ಲ ಅಡಾಸ್‌ನ ಒಂದು ಭಾಗ.ಈ ಹೊಸ ಅಡಾಸ್ ಅನ್ನು ಬಲು ಮುಖ್ಯವಾಗಿ ಈ ಕೆಳಕಂಡ ಭದ್ರತೆಯ ಏರ್ಪಾಟುಗಳಲ್ಲಿ ಬಳಸಲಾಗುತ್ತಿದೆ.

1. ಬೀದಿಗಳಲ್ಲಿ ಸಾಗುವಾಗ ಜನ/ಜಾನುವಾರುಗಳ ಗುರುತಿಸುವಿಕೆ

2. ಹೆದ್ದಾರಿಗಳಲ್ಲಿ ಸಾಗುವಾಗ ಲೇನ್ ಬದಲಾವಣೆ ಗುರುತಿಸುವಿಕೆ ಮತ್ತು ಎಚ್ಚರಿಸುವಿಕೆ

3. ಸಂಚಾರ ದಟ್ಟಣೆಯ ಸಿಗ್ನಲ್ ಗುರುತಿಸುವಿಕೆ

4. ತುರ್ತು ಸಮಯಗಳಲ್ಲಿ ಗಾಡಿ ತಡೆಯುವಿಕೆ

5. ದಿಡೀರನೆ ಎದುರಾಗಬಲ್ಲ ತಿರುವುಗಳ ಗುರುತಿಸುವಿಕೆ

 ಈ ಎಲ್ಲ ಭದ್ರತೆಯ ವಿಷಯಗಳಲ್ಲಿ ಅಡಾಸ್ ಅಳವಡಿಸಿಕೊಳ್ಳಲು ಸಾಕಷ್ಟು ಅರಿವುಕ(Sensor), ರಡಾರ್ ಮತ್ತು ಕ್ಯಾಮೆರಾಗಳ ಬಳಕೆ ಮಾಡಲಾಗುತ್ತದೆ. ಗಾಡಿಯ ಸುತ್ತಮುತ್ತಲಿನ ಆಗುಹೋಗುಗಳು, ಬಗೆ ಬಗೆಯ ಸದ್ದು ಸಪ್ಪಳಗಳನ್ನು ಈ ಅರಿವುಕಗಳು, ರಡಾರ್ ಗಳು ಯಾವ ತಪ್ಪಿಲ್ಲದಂತೆ ಅರಿತು ಗಾಡಿಯ ಗಣಕದ ಮೂಲಕ ಓಡಿಸುಗನಿಗೆ ಸಂದೇಶ ಕಳಿಸುವಲ್ಲಿ ತೊಡಗಿರುತ್ತವೆ. ಗಾಡಿಯ ಸುತ್ತಲೂ 360 ಡಿಗ್ರಿ ಕ್ಯಾಮೆರಾಗಳು ಚಕಚಕನೆ ಪಟಗಳನ್ನು ಸೆರೆಹಿಡಿದು ಗಾಡಿಯ ಗಣಕಕ್ಕೆ ಮಾಹಿತಿ ನೀಡುತ್ತವೆ, ಇದರಿಂದ ಮುಂದೆ ಆಗಬಹುದಾದ ಅನಾಹುತಗಳ ಬಗ್ಗೆ ಮುಂಚೆಯೇ ಎಚ್ಚರಿಸಿ ಅವುಗಳನ್ನು ತಪ್ಪಿಸುವಲ್ಲಿ ನೆರವಾಗುತ್ತವೆ.

ಅಡಾಸ್‌ನ ವಿವಿಧ ವಿಶೇಷತೆಗಳ ತೋರುವ ಚಿತ್ರ

ಹೀಗೆ ಅಡಾಸ್ ನ ಆಳ ಅರಿತ ಆಟೋಮೊಬೈಲ್ ಕೈಗಾರಿಕೆ, ಅಡಾಸ್ ನ ವಿವಿಧ ಹಂತಗಳಾಗಿ ವಿಂಗಡಿಸಿದೆ. ಒಟ್ಟು 6 ಹಂತಗಳ ಅಡಾಸ್ ನೋಡಬಹುದು. ಇವುಗಳು ಹೀಗಿವೆ.

ಸೊನ್ನೆ ಹಂತ: ಇದರಲ್ಲಿ ಎಲ್ಲವೂ ಮನುಷ್ಯನ ಹಿಡಿತ ಅಂದರೆ ಗಾಡಿಯ ಬಹುಪಾಲು ಏರ್ಪಾಟುಗಳು ಓಡಿಸುಗರ ಹಿಡಿತದಲ್ಲಿರುತ್ತವೆ. ತಂತಾನೇ ಕೆಲಸ ಮಾಡುವ ಗಣಕ, ರಡಾರ್, ಅರಿವುಕಗಳು ಕಡಿಮೆಯೇ. ತಿಗುರಿ(Steering), ತಡೆತ(Brake), ವೇಗ ಏರಿಸುಕ(Accelerator) ಎಲ್ಲವನ್ನೂ ಓಡಿಸುಗನೇ ಮಾಡಬೇಕು. ಆದರೆ ಭದ್ರತೆಯ ಕೆಲವು ವಿಶೇಷತೆಗಳಾದ ಕ್ಯಾಮೆರಾ, ದಿಡೀರ್ ಎದುರಾಗುವ ತಿರುವುಗಳ ಬಗ್ಗೆ ಮುನ್ಸೂಚನೆ ನೀಡುವ ಏರ್ಪಾಟು, ಗಾಡಿಗಳಲ್ಲಿ ಅಳವಡಿಸಬಹುದು.

ಮೊದಲ ಹಂತ: ಚಿಕ್ಕ ಪ್ರಮಾಣದಲ್ಲಿ ಗಾಡಿ ಹಿಡಿತದ ವಿಶೇಷತೆಗಳನ್ನು ನೀಡಲಾಗಿರುತ್ತದೆ. ಮಾರ್ಪಾಟುಗೊಳ್ಳುವ ಸುಯ್ ಅಂಕೆ ಏರ್ಪಾಟು(Adaptive Cruise Control) ಇದಕ್ಕೆ ಒಳ್ಳೆಯ ಉದಾಹರಣೆ. ಹೆದ್ದಾರಿಯಲ್ಲಿ ಚಲಿಸುವಾಗ, ಗಾಡಿಯು ದಾರಿಯ ಸ್ಥಿತಿಗತಿಗೆ ತಕ್ಕಂತೆ  ವೇಗ ಮಾರ್ಪಾಟು ಮಾಡಿಕೊಂಡು ಸಾಗುತ್ತಿರುತ್ತದೆ. ಸಂದರ್ಭಕ್ಕೆ ತಕ್ಕಂತೆ ವೇಗ ಏರಿಸುಕ(Accelerator) ಮತ್ತು ಬೇರ್ಪಡಕಗಳ(Clutch) ಮೇಲಿನ ಕಾಲ್ತೆಗೆದು, ಓಡಿಸುಗ ನೆಮ್ಮದಿಯಿಂದ ಸಾಗಬಹುದು.

ಎರಡನೇ ಹಂತ: ಇದನ್ನು ಅರೆ-ಸ್ವತಂತ್ರದ ಗಾಡಿಯೆನ್ನಬಹುದು. ಇದರಲ್ಲಿ ತಿಗುರಿ ಮತ್ತು ಗಾಡಿಯ ವೇಗ ಏರಿಸುವ ಕೆಲಸಗಳನ್ನು ಗಾಡಿಯೇ ನೋಡಿಕೊಳ್ಳುತ್ತದೆ. ಓಡಿಸುಗ ಕೂಡ ಇದನ್ನು ನಿರ್ವಹಿಸಬಹುದು. ಇನ್ನೂ ಗಾಡಿಯ ತಡೆಯೊಡ್ಡುವಿಕೆ(braking), ಲೇನ್ ಬದಲಾವಣೆ(Lane Change), ನಿಲುಗಡೆ ವ್ಯವಸ್ಥೆಯನ್ನು(Parking) ಓಡಿಸುಗನೇ ನೋಡಿಕೊಳ್ಳಬೇಕು.

ಮೂರನೇ ಹಂತ: ಈ ಹಂತದಲ್ಲಿ ಗಾಡಿಯು ಬಹುತೇಕ ಎಲ್ಲ ಏರ್ಪಾಟುಗಳನ್ನು ಸ್ವತಹ ತಾನೇ ನಿಯಂತ್ರಣದಲ್ಲಿ ಇಟ್ಟುಕೊಳ್ಳಬಲ್ಲದಾದರೂ ಕೆಲವು ಸಂದರ್ಭಗಳಲ್ಲಿ ಓಡಿಸುಗನ ನಿಯಂತ್ರಣ ಬೇಕೇಬೇಕು. ಉದಾಹರಣೆಗೆ, ಸಂಚಾರ ದಟ್ಟಣೆಯ ಸಂದರ್ಭಗಳಲ್ಲಿ ಗಾಡಿಯ ಗಣಕ ಏರ್ಪಾಟು ಗಾಡಿಯ ಸಂಪೂರ್ಣ ಹಿಡಿತ ಪಡೆಯಬಲ್ಲುದು. ಓಡಿಸುಗ ಹಾಯಾಗಿ ಪತ್ರಿಕೆ ಓದುತ್ತಲೋ, ಮೊಬೈಲ್ ನೋಡುತ್ತಲೋ ಕಾಲ ಕಳೆಯಬಹುದು. ಕೆಲವೊಮ್ಮೆ ಅವಶ್ಯವೆನಿಸಿದಾಗ ಗಾಡಿಯು ತೋರುಮಣೆಯ(Dashboard) ಮೂಲಕ ಓಡಿಸುಗನಿಗೆ ಸಂದೇಶ ನೀಡಿ, ಹಿಡಿತವನ್ನು ಓಡಿಸುಗ ತೆಗೆದುಕೊಳ್ಳುವಂತೆ ಎಚ್ಚರಿಸುತ್ತದೆ.

ನಾಲ್ಕನೇ ಹಂತದ ಅಡಾಸ್ – ಗಾಡಿಯು ನಿರ್ದಿಷ್ಟ ಸನ್ನಿವೇಶಗಳಲ್ಲಿ ಸಂಪೂರ್ಣ ತನ್ನ ಹಿಡಿತದಲ್ಲೇ ಓಡುವ ಸಾಮರ್ಥ್ಯ ಹೊಂದಿರುತ್ತದೆ. ಗಾಡಿಯು ಒಂದು ನಿರ್ದಿಷ್ಟ ಪರಿಮಿತಿಯಲ್ಲಿ ಎಲ್ಲವನ್ನೂ ಸ್ವತಹ ನಿರ್ವಹಿಸುವ ಸಾಮರ್ಥ್ಯ ಹೊಂದಿರುತ್ತದೆ. ಆದರೆ ಆ ಪರಿಮಿತಿಯನ್ನು ಮೀರಿದ ಸಂದರ್ಭಗಳಲ್ಲಿ ಅದು ಓಡಿಸುಗನೇ ಗಾಡಿ ನಿರ್ವಹಿಸುವಂತೆ ಸಂದೇಶ ನೀಡುತ್ತದೆ. ಉದಾಹರಣೆಗೆ, ಅತಿಯಾದ ಮಂಜುಗಡ್ಡೆಯಿಂದ ಕೂಡಿದ ದಾರಿಗಳಲ್ಲಿ ಗಾಡಿ ಓಡಿಸುಗನ ಹಿಡಿತಕ್ಕೆ ಮರಳಬಹುದು. 

ಐದನೇಯ ಹಂತ: ಕೊನೆಯ ಹಂತದಲ್ಲಿ ಗಾಡಿಯು ಸಂಪೂರ್ಣವಾಗಿ ತನ್ನಿಂದ ತಾನೇ ಓಡಬಲ್ಲದು. ಇದಕ್ಕೆ ಬೇಕಾದ ಎಲ್ಲ ಏರ್ಪಾಟುಗಳನ್ನು ಗಾಡಿಯು ತಾನೇ ಮಾಡುವ ಸಾಮರ್ಥ್ಯ ಹೊಂದಿರುತ್ತದೆ. ಇದರಲ್ಲಿ ಯಾವುದೇ ತೆರನಾಗಿ ಓಡಿಸುಗ ಬೇಕಾಗಿರುವುದಿಲ್ಲ. ಕಾರಿನಲ್ಲಿ ಬರೀ ಸವಾರರು ಕುಳಿತು ಆದೇಶ ನೀಡಿದರೆ ಕಾರು ಸಾಗಿಕೊಂಡು ಹೋಗುತ್ತದೆ.

ಇಲ್ಲಿ ಗಮನಿಸಬೇಕಾದ ಅಂಶಗಳೆಂದರೆ, ಗಾಡಿ ತಯಾರಕರು ತಮಗೆ ಬೇಕಾದ ಹಂತವನ್ನು ಆಯ್ದುಕೊಂಡು ಅದಕ್ಕೆ ತಕ್ಕ ಏರ್ಪಾಟುಗಳನ್ನು ಅರಿವುಕ, ಕ್ಯಾಮೆರಾ, ರಡಾರ್ ಬಳಸಿ ನೀಡಿರುತ್ತಾರೆ. ನೀವು ಒಂದಕ್ಕಿಂತ ಒಂದು ಮೇಲ್ ಹಂತಕ್ಕೆ ಹೋದಂತೆ ಹೆಚ್ಚಿನ ಅರಿವುಕ, ರಡಾರ್ ಮತ್ತು ಅದಕ್ಕೆ ತಕ್ಕುದಾದ ಗಣಕ ತಂತ್ರಾಂಶಗಳನ್ನು ಬಳಸಬೇಕು, ಅದಕ್ಕೆ ಹೆಚ್ಚಿನ ಹಣವೂ ಬೇಕಾಗುತ್ತದೆ. ಅದಕ್ಕಾಗಿ, ಗಾಡಿ ತಯಾರಕರು ನಮ್ಮದು 2ನೇ ಹಂತದ ಅಡಾಸ್ ವಿಶೇಶತೆಗಳುಳ್ಳ ಗಾಡಿಯೆಂದೋ, 3ನೇ ಹಂತದ ಅಡಾಸ್ ಗಾಡಿಯೆಂದೋ ತಯಾರಿಸಿ ಮಾರುಕಟ್ಟೆ ತರುತ್ತಿದ್ದಾರೆ.

ಹಂತ ಹೆಚ್ಚಿದಂತೆ ಗಾಡಿಯ ಹಿಡಿತ ಹೆಚ್ಚಾಗುತ್ತ ಸಾಗುವುದು

ಜಗತ್ತಿನಾದ್ಯಂತ ಇಂದು ಎರಡನೇ ಹಂತದ ಅಡಾಸ್ ವಿಶೇಷತೆಗಳುಳ್ಳ ಹಲವು ಕಾರುಗಳು ಬಿಡುಗಡೆಯಾಗಿವೆ. ಮುಂದಿನ ಹಂತದ ಅಡಾಸ್ ವಿಶೇಷತೆಗಳ ಗಾಡಿಗಳನ್ನು ಟೆಸ್ಲಾ, ಗೂಗಲ್, ಜಿಎಮ್ ಸೇರಿದಂತೆ ದೊಡ್ಡ ಕಂಪನಿಗಳು ಸಿದ್ಧಪಡಿಸಿದ್ದರೂ ಇನ್ನೂ ಮಾರಾಟಕ್ಕೆ ಲಭ್ಯವಾಗಿಲ್ಲ. ಅದರಲ್ಲೂ 4 ಮತ್ತು 5ನೇ ಹಂತದ ಅಡಾಸ್ ವಿಶೇಷತೆಯೆಂದರೆ ಹೆಚ್ಚು ಕಡಿಮೆ ತನ್ನಿಂದ ತಾನೇ ಓಡುವ ಕಾರುಗಳು. ತಂತ್ರಜ್ಞಾನ ಬೆಳೆದರೂ ಅದಕ್ಕೆ ತಕ್ಕ ಕಾನೂನು-ಕಟ್ಟುಪಾಡುಗಳು ಇನ್ನೂ ಪೂರ್ಣ ಪ್ರಮಾಣದಲ್ಲಿ ಸಿದ್ಧಗೊಂಡಿಲ್ಲ.

ಅಡಾಸ್ ನಮಗೆ ಹೇಗೆ ಉಪಯೋಗವಾಗಲಿದೆ?

ಅಡಾಸ್ ಅಭಿವ್ರದ್ಧಿ ಪಡಿಸಿದ್ದೇ, ಅಪಘಾತ, ಗುದ್ದುವಿಕೆಯಂತ ಅಪಾಯಗಳನ್ನು ತಡೆದು ಗಾಡಿಯಲ್ಲಿ ಸಾಗುವವರು ಸುರಕ್ಷಿತವಾಗಿ ಪ್ರಯಾಣ ಮಾಡಲೆಂದು. ಇಂದು ಸಾಕಷ್ಟು ಗಾಡಿಗಳಲ್ಲಿ ಹೆಚ್ಚಿನ ಭದ್ರತೆಯ ವಿಶೇಷತೆಗಳು ಕಾಣುತ್ತಿರುವುದು ಅಡಾಸ್ ಬಳಕೆಯಿಂದ. ಅಡಾಸ್ ಬಳಕೆಯಿಂದ ನಮ್ಮ ಕಾರುಗಳು ಹೆಚ್ಚು ಭದ್ರವಾಗಲಿವೆ. ನಮ್ಮ ದೇಶದಲ್ಲಿ ಮಾರಾಟವಾಗುತ್ತಿರುವ ಹಲವು ಕಾರುಗಳಲ್ಲೂ ಇಂದು ಅಡಾಸ್ ವಿಶೇಷತೆಗಳಿಂದ ಕೂಡಿವೆ. ಕಾರು ಓಡಿಸುವಾತ ಅಕಸ್ಮಾತ್ ನಿದ್ದೆಗೆ ಜಾರಿದರೆ ಎಚ್ಚರಿಕೆ, ಗಾಡಿಯ ವೇಗ > 80-100 ಕಿಮೀ/ಗಂಟೆ ಮೀರಿದರೆ ಎಚ್ಚರಿಕೆ, ಗಾಲಿಯ ಒತ್ತಡ ಕಡಿಮೆಯಾದರೆ ಎಚ್ಚರಿಕೆ, ಗಾಡಿ ನಿಲುಗಡೆಗೆ ನೆರವಾಗಲು ಹಿಂಬದಿಯ ಕ್ಯಾಮೆರಾ, ಹೀಗೆ ಕಾಪಿನ ವಿಶೇಷತೆಗಳು ಇಂದಿನ ಹಲವು ಕಾರುಗಳಲ್ಲಿ ಕಂಡು ಬರುತ್ತವೆ. ಕಾರುಗಳು ಆಟೋನೊಮಸ್ ಆದಂತೆ ನಾವು ಟ್ರಾಫಿಕ್ ಅಪಘಾತ ಕಡಿತಗೊಳಿಸಿ, ಸಂಚಾರ ದಟ್ಟಣೆಯ ಸಮಸ್ಯೆಗೆ ಪರಿಹಾರ ಕೊಂಡುಕೊಳ್ಳಬಹುದು.

ಇಂದು ಜಗತ್ತಿನ ಹಲವೆಡೆ ಮಾರಾಟಗೊಳ್ಳುವ ಬಹುತೇಕ ಕಾರುಗಳು 2ನೇ ಹಂತದ ವರೆಗಿನ ಅಡಾಸ್ ವಿಶೇಷತೆಗಳನ್ನು ಪಡೆದು ಬರುತ್ತಿವೆ.ಜಪಾನ್, ಅಮೇರಿಕಾ, ಯುರೋಪ್ ಒಕ್ಕೂಟದ ದೇಶಗಳು, ಕೊರಿಯಾ ಮುಂತಾದ ದೇಶಗಳಲ್ಲಿ 1-2 ನೇ ಹಂತದವರೆಗಿನ ಅಡಾಸ್ ಕಾರುಗಳು ಹೆಚ್ಚುತ್ತಿವೆ. ನಮ್ಮ ದೇಶದಲ್ಲಿ ಅಡಾಸ್ 2ನೇ ಹಂತದ ಹಲವು ಕಾರುಗಳು ಮಾರಾಟಗೊಳ್ಳುತ್ತಿವೆ. ಮಹೀಂದ್ರಾ ಎ‍‍ಕ್ಸ್‌ಯುವಿ 7ಒ‍ಒ, ಹೋಂಡಾ ಸಿಟಿ ಈಹೆಚ್‍ವಿ, ಎಮ್‍ಜಿ ಹೆಕ್ಟರ್, ಗ್ಲಾಸ್ಟರ್,ಝೆಡ್‍ಎಸ್ ಇವಿ, ಹ್ಯುಂಡಾಯ್ ಟುಕ್ಸಾನ್, ಟಾಟಾ ಸಫಾರಿ ಮುಂತಾದವು ಅಡಾಸ್‌ನ ವಿವಿಧ ವಿಶೇಷತೆಗಳನ್ನು ಹೊಂದಿವೆ.

ಅಡಾಸ್ ತಂತ್ರಜ್ಞಾನದ ಸವಾಲುಗಳು:

ತಂತ್ರಜ್ಞಾನ ಇದ್ದಲ್ಲಿ ಸವಾಲುಗಳಿಗೂ ಕೊರತೆ ಇರಲ್ಲ. ಹೊಸ ತಂತ್ರಜ್ಞಾನ ಬಂದಂತೆ ಅದಕ್ಕೆ ಸಂಬಂಧಿಸಿದ ತೊಡಕು ತೊಂದರೆಗಳು ಅದರ ಜೊತೆಯಲ್ಲೇ ಸಾಗಿಬರುತ್ತವೆ. ಅಡಾಸ್ ತಂತ್ರಜ್ಣ್ಯಾನವನ್ನು ಅಪಘಾತ ಅವಘಡ ತಡೆಯಲೆಂದೇ ಅಭಿವೃದ್ಧಿ ಪಡಿಸಿದ್ದರೂ, ಅದೇ ವಿಶೇಷತೆ ನಮಗೆ ತೊಂದರೆ ಉಂಟು ಮಾಡಿದರೆ? ಉದಾಹರಣೆಗೆ 5ನೇ ಹಂತದ ತನ್ನಿಂದ ತಾನೇ ಸಾಗಬಲ್ಲ ಕಾರುಗಳಿಂದ ಅಪಘಾತವಾದರೆ ಯಾರು ಹೊಣೆ? ಯಾಕೆಂದರೆ ಈ ಕಾರುಗಳಲ್ಲಿ ಓಡಿಸುಗನಿರುವುದಿಲ್ಲ, ಬರೀ ಸವಾರರು ಮಾತ್ರ. ಈ ಅಪಘಾತಗಳು ವಿಮೆಯ ವ್ಯಾಪ್ತಿಯ ಒಳಗಡೆ ಬರುತ್ತವೆಯೇ ಇಲ್ಲವೇ ಎಂಬುದು ಮುಂದಿನ ಪ್ರಶ್ನೆ? ಈ ಅಪಘಾತ,ವಿಮೆಯ ವಿಷಯಗಳಿಗೆ ತಕ್ಕ ಕಟ್ಟಳೆ-ಕಟ್ಟಪಾಡುಗಳು ಇನ್ನೂ ಎಳವೆಯಲ್ಲಿವೆ. ಹಲವು ದೇಶಗಳ ಸರ್ಕಾರಗಳು ಕಟ್ಟಳೆ-ಕಟ್ಟಪಾಡುಗಳ ಕುರಿತಾಗಿ ಸಾಕಷ್ಟು ಗೊಂದಲದಲ್ಲಿವೆ. ಇದಕ್ಕೆ ತಕ್ಕ ಪರಿಹಾರ ಕಂಡುಕೊಳ್ಳುವವರೆಗೂ ಇಂತ ಗಾಡಿಗಳನ್ನು ಮಾರಾಟಕ್ಕೆ ಬಿಡಬಾರದೆಂಬ ಕೂಗು ಎದ್ದಿದೆ.

ಎರಡನೇ ಸವಾಲು, ಅಡಾಸ್‌ನ ವಿವಿಧ ವಿಶೇಷತೆಗಳನ್ನು ಬೇರೆ ಬೇರೆ ಹೆಸರುಗಳಿಂದ ಕರೆಯುವುದರಿಂದ ವಿಶೇಷತೆಗಳ ಬಗ್ಗೆ ಹಲವು ಗಾಡಿ ತಯಾರಕರ ನಡುವೆ, ಕೊಳ್ಳುವರ ಮಧ್ಯೆ ಗೊಂದಲಗಳಿವೆ. ಕೆಲವು ವಿಶೇಷತೆಗಳು ಕೆಲವು ಸಂದರ್ಭಗಳಲ್ಲಿ ಮಾತ್ರ ನೆಟ್ಟಗೆ ಕೆಲಸ ಮಾಡಬಲ್ಲವು.ಬೆಟ್ಟ-ಗುಡ್ಡ-ಘಾಟಿ ರಸ್ತೆಗಳಲ್ಲಿ ಗಾಡಿಯಲ್ಲಿರುವ ಅರಿವುಕ, ಕ್ಯಾಮೆರಾ, ರಡಾರ್‌ಗಳಿಗೆ ಸಮಸ್ಯೆ ಎದುರಾಗಲಿದೆ. ಹೆದ್ದಾರಿಗಳಲ್ಲಿ ಲೇನ್ ಅಂದರೆ ಓಣಿಗಳನ್ನು ಸರಿಯಾಗಿ ಬಣ್ಣದಿಂದ ಗುರುತಿಸಿರುತ್ತಾರೆ ಹೀಗಾಗಿ ಗಾಡಿಯ ಕ್ಯಾಮೆರಾಗಳು ಅವುಗಳನ್ನು ಗುರುತಿಸಿ, ಓಣಿ ದಾಟುವಿಕೆಯನ್ನು ಚೆನ್ನಾಗಿ ನಿರ್ವಹಿಸಬಲ್ಲವು. ಅದೇ ಚಿಕ್ಕ ಪುಟ್ಟ ದಾರಿಗಳಲ್ಲಿ ಬಣ್ಣದಿಂದ ಗುರುತಿಸದ ಲೇನ್‍ಗಳಲ್ಲಿ ಓಣಿ ಗುರುತಿಸುವಿಕೆಯಂತ ವಿಶೇಷತೆ ಹೇಗೆ ಕೆಲಸ ಮಾಡುತ್ತವೆ ಎಂಬುದರ ಬಗ್ಗೆ ಪ್ರಶ್ನೆಗಳಿವೆ.

ಹಲವು ಗಣಕಗಳಿಂದ ಕೂಡಿರುವ ಈ ಅಡಾಸ್ ಗಾಡಿಗಳಿಗೆ ಸುಭದ್ರವಾದ ಸೈಬರ್ ಭದ್ರತೆಯ ತಂತ್ರಾಂಶ ಒದಗಿಸುವ ಅವಶ್ಯಕತೆಯಿದೆ. ದಿಗಿಲುಕೋರರು, ಕಳ್ಳ-ಕಾಕರು ಗಾಡಿಯ ಗಣಕಗಳನ್ನು ತಮ್ಮ ಹಿಡಿತಕ್ಕೆ ಪಡೆದು ಬೇಕಾಬಿಟ್ಟಿ ಬಳಕೆ ಮಾಡಿ ಸಮಾಜಕ್ಕೆ ಕೆಡುಕುಂಟು ಮಾಡುವ ಸಾಧ್ಯತೆಗಳಿವೆ. ಇದನ್ನು ಮೆಟ್ಟಿ ನಿಂತು ಅಡಾಸ್ ತಂತ್ರಜ್ಞಾನ ಬೆಳೆಯಲಿ, ಸಮಾಜಕ್ಕೆ ಒಳ್ಳೆಯ ಕೊಡುಗೆಯಾಗಲಿ.

ಏನಿದು ಮೋಡ ಬಿತ್ತನೆ?

ಪ್ರಶಾಂತ ಸೊರಟೂರ.

‘ಮೋಡ ಬಿತ್ತನೆ’, ಕೆಲವು ವರ್ಷಗಳ ಹಿಂದೆ ಹೀಗೊಂದು ಪದ ಒಮ್ಮೆಲೇ ಬೆಳಕಿಗೆ ಬಂತು, ಬರಗಾಲದಿಂದ ತತ್ತರಿಸಿದ್ದ ಕರ್ನಾಟಕಕ್ಕೆ ಮಳೆ ಬರಿಸಲು ಮೋಡದಲ್ಲಿಯೇ ವಿಮಾನದಿಂದ ಬಿತ್ತನೆಯ ಕೆಲಸವಂತೆ, ಅದು ಮಳೆ ತರುತ್ತದಂತೆ ಅನ್ನುವ ಮಾತುಗಳು ಎಲ್ಲೆಡೆ ಹರಡ ತೊಡಗಿದ್ದವು. ನೆಲದಲ್ಲಿ ಬಿತ್ತನೆ ಮಾಡಿದ, ನೋಡಿದ ಕನ್ನಡಿಗರಿಗೆ ಬಾನಿನಲ್ಲಿ ಮಾಡುವ ಇದ್ಯಾವ ಬಗೆಯ ಬಿತ್ತನೆ ಅನ್ನಿಸಿತ್ತು. ಕೆಲ ಊರುಗಳ ಮೇಲೆ ವಿಮಾನಗಳು ಹಾರಾಡಿ ’ಮೋಡ ಬಿತ್ತನೆ’ಯಿಂದ ಮಳೆ ಸುರಿಸಿದ್ದೂ ಸುದ್ದಿಯಾಯಿತು. ಇಡೀ ದೇಶದಲ್ಲಿಯೇ ಈ ತರಹ ಮಳೆ ಸುರಿಸಲು ಮೋಡ ಬಿತ್ತನೆಗೆ ಕೈಹಾಕಿದ ಮೊದಲ ನಾಡು ಕರ್ನಾಟಕ ಅನ್ನುವ ಸುದ್ದಿಯಾಯಿತು.

ಮೋಡ ಬಿತ್ತನೆಯ ಬಗ್ಗೆ ತಿಳಿದುಕೊಳ್ಳುವ ಮುನ್ನ, ಮೋಡ ಮತ್ತು ಮಳೆಯ ಬಗ್ಗೆ ಒಂಚೂರು ತಿಳಿದುಕೊಳ್ಳೋಣ. ಕಡಲು, ಹೊಳೆ ಮತ್ತು ನೆಲದ ಹಲವೆಡೆ ಇರುವ ನೀರು ಬಿಸಿಲಿಗೆ ಕಾಯ್ದು ಆವಿಯಾಗುತ್ತದೆ. ಹೀಗೆ ಉಂಟಾದ ನೀರಾವಿಯು ಗಾಳಿಯೊಡನೆ ಬೆರೆತು ಬಾನಿನೆಡೆಗೆ ಸಾಗ ತೊಡಗುತ್ತದೆ. ಗಾಳಿಯು ಬಿಸಿಯಾದಷ್ಟು ಅದು ತನ್ನಲ್ಲಿ ಹೆಚ್ಚೆಚ್ಚು ನೀರಾವಿಯನ್ನು ಅಡಗಿಸಿಟ್ಟುಕೊಳ್ಳಬಲ್ಲದು, ಆದರೆ ನೆಲದಿಂದ ಮೇಲೆ-ಮೇಲೆ ಹೋದಂತೆಲ್ಲಾ ಅಲ್ಲಿರುವ ಬಿಸುಪು (temperature) ಕಡಿಮೆಯಾಗುತ್ತಾ ಹೋಗುತ್ತದೆ. ಒಂದು ಹಂತದಲ್ಲಿ ಬಿಸುಪು ತುಂಬಾ ಕಡಿಮೆಯಾಗಿ ಗಾಳಿಗೆ ತನ್ನಲ್ಲಿ ಇನ್ನಷ್ಟು ನೀರಾವಿಯನ್ನು ಹಿಡಿದಿಟ್ಟುಕೊಳ್ಳಲು ಆಗುವುದಿಲ್ಲ. ಈ ಹಂತದ ಗಾಳಿಯನ್ನು ‘ತಣಿದ ಗಾಳಿ’ (saturated air) ಅಂತಾ ಕರೆಯುತ್ತಾರೆ. ಈ ತಣಿದ ಗಾಳಿಯು ತೂಕವಾದ ನೀರಾವಿಯನ್ನು ಹೊತ್ತುಕೊಂಡು ಬಾನಿನಲ್ಲಿ ಒಂದೆಡೆ ನೆಲೆ ನಿಲ್ಲುತ್ತದೆ, ಇವೇ ಮೋಡಗಳು.

ಹೀಗೆ ನೆಲೆಗೊಂಡ ಮೋಡದಲ್ಲಿ ನೀರ ಹನಿಗಳು ತುಂಬಾ ತಂಪಾಗಿದ್ದು ಅವುಗಳ ಬಿಸುಪು (temperature) ಕೆಲವೊಮ್ಮೆ – 40° ಸೆಲ್ಸಿಯಸ್ ಆಗಿರುತ್ತದೆ. ಇಲ್ಲಿ ಇನ್ನೊಂದು ತಿಳಿದುಕೊಳ್ಳಬೇಕಾದ ವಿಶಯವೆಂದರೆ ಇಷ್ಟು ತಂಪಾಗಿದ್ದರೂ ಎಲ್ಲ ಹನಿಗಳು ಗಟ್ಟಿ ಮಂಜಿನ ರೂಪದಲ್ಲಿರದೇ ಕೆಲವು ಹನಿಗಳು ನೀರಿನ ರೂಪದಲ್ಲೇ ಉಳಿದಿರುತ್ತವೆ. ಇದಕ್ಕೆ ಕಾರಣವೆಂದರೆ ಸಾಮಾನ್ಯ ಒತ್ತಡದಲ್ಲಿ 0° ಸೆ. ಹೆಪ್ಪುಗಟ್ಟುವ ನೀರು ಬಾನಿನಲ್ಲಿ, ಮೇಲೆ ಹೋದಂತೆ ಒತ್ತಡ ಕಡಿಮೆ ಇರುವುದರಿಂದ ಅದರ ಹೆಪ್ಪುಗಟ್ಟುವಿಕೆ ಬಿಸುಪು (freezing temperature) ಕಡಿಮೆಯಾಗುತ್ತಾ ಹೋಗುತ್ತದೆ

ಮೋಡಗಳಲ್ಲಿರುವ ಚಿಕ್ಕ ನೀರಿನ ಹನಿಗಳು ಮತ್ತು ಮಂಜಿನ (ಗಟ್ಟಿ ನೀರು) ಹನಿಗಳು ಒಂದಕ್ಕೊಂದು ಬೆಸೆದು ಇಲ್ಲವೇ ಮೋಡದಲ್ಲಿರುವ ಇತರೆ ಪುಟಾಣಿ ಕಣಗಳನ್ನು ಸುತ್ತುವರೆದು ದೊಡ್ಡದಾಗುತ್ತಾ ಹೋಗುತ್ತವೆ. ಹೀಗೆ ದೊಡ್ಡದಾದ ನೀರಿನ, ಮಂಜಿನ ಹನಿ ಹೊತ್ತುಕೊಂಡಿರುವ ಮೋಡಕ್ಕೆ ಅವುಗಳ ತೂಕ ತಾಳಿಕೊಳ್ಳಲು ಆಗದಂತ ಪರಿಸ್ಥಿತಿ ಬಂದುಬಿಡುತ್ತದೆ. ಆಗಲೇ ಅವು ನೆಲಕ್ಕೆ ಮಳೆಯಾಗಿ ಸುರಿಯ ತೊಡಗುತ್ತವೆ.

ಮೋಡಗಳ ಕುರಿತಾದ ಮೇಲಿನ ವಿಷಯದಲ್ಲಿ ಗಮನಿಸಬೇಕಾದುದೆಂದರೆ, ಮೋಡಗಳು ಮಳೆಯಾಗಬೇಕಾದರೆ ಅವುಗಳಲ್ಲಿರುವ ನೀರಿನ ಹನಿಗಳು ಒಂದೋ ಹೆಚ್ಚಾಗಬೇಕು ಇಲ್ಲವೇ ಆ ನೀರ ಹನಿಗಳು ಒಂದಾಗಿ ದೊಡ್ಡದಾಗಬೇಕು. ಇದರಲ್ಲಿ ಎರಡನೇ ಬಗೆಯನ್ನು ಬಳಸಿ ಮಳೆ ತರಿಸುವುದೇ ‘ಮೋಡ ಬಿತ್ತನೆ’ಯ ಹಿಂದಿರುವ ಚಳಕ. ಮೋಡ ಬಿತ್ತನೆಯಲ್ಲಿ, ಬೆಳ್ಳಿಯ ಆಯೋಡಾಯಡ್ ಇಲ್ಲವೇ ಒಣ ಮಂಜು ಎಂದು ಕರೆಯಲ್ಪಡುವ ಗಟ್ಟಿ ಕಾರ್ಬನ್ ತುಣುಕುಗಳನ್ನು ವಿಮಾನಗಳ ಮೂಲಕ ಮೋಡಗಳ ಮೇಲೆ ಚಿಮುಕಿಸಲಾಗುತ್ತದೆ. ಹೀಗೆ ಚಿಮುಕಿಸಿದ ತುಣುಕುಗಳು ಮೋಡದಲ್ಲಿರುವ ನೀರಿನ, ಮಂಜಿನ ಹನಿಗಳನ್ನು ತನ್ನೆಡೆಗೆ ಸೆಳೆದು ದೊಡ್ಡದಾಗಿಸುತ್ತವೆ. ಹೀಗೆ ಒಂದುಗೂಡಿ ದೊಡ್ಡದಾದ ನೀರ ಹನಿಗಳ ಬಾರ ತಾಳಲಾಗದೇ ಮೋಡಗಳು, ಮಳೆಯಾಗಿ ಸುರಿಯ ತೊಡಗುತ್ತವೆ.

‘ಮೋಡ ಬಿತ್ತನೆ’ಯ ಕೆಲಸ ಯಾವಾಗಲೂ ಗೆಲುವು ಕಾಣುತ್ತದೆ ಅನ್ನಲಾಗದು, ಮೋಡದಲ್ಲಿರುವ ನೀರ ಹನಿಗಳ ಗಾತ್ರ, ಅವುಗಳ ಸುತ್ತಿರುವ ವಾತಾವರಣ ಇದರ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ. ಜಗತ್ತಿನ ಹಲವೆಡೆ ಮೋಡ ಬಿತ್ತನೆಯ ಕೆಲಸವನ್ನು ಕೈಗೊಂಡರೂ ಎಲ್ಲಾ ಕಡೆ ಇದಕ್ಕೆ ಒಪ್ಪಿಗೆ ಪಡೆಯಲು ಇನ್ನೂ ಆಗಿಲ್ಲ. ಆದರೆ ಚೀನಾ ದೇಶ ಯಾವುದೇ ಅನುಮಾನಗಳನ್ನು ಇಟ್ಟುಕೊಳ್ಳದೇ ’ಮೋಡ ಬಿತ್ತನೆ’ಯಲ್ಲಿ ಪ್ರತಿ ವರ್ಷ ಹೆಚ್ಚಿನ ದುಡ್ಡು ತೊಡಗಿಸುತ್ತಾ ಹೊರಟಿದೆ. ಬೀಜಿಂಗ್ ಒಲಂಪಿಕ್ಸಿನಲ್ಲಿ ಮಳೆಯಿಂದ ಆಟ ಹಾಳಾಗಬಾರದೆಂದು, ಮೋಡ ಬಿತ್ತನೆ ಮಾಡಿ ಆಟಕ್ಕಿಂತ ಹಲವು ದಿನಗಳ ಮೊದಲೇ ಮೋಡಗಳನ್ನು ಮಳೆಯಾಗಿಸಿದ್ದು ಇಲ್ಲಿ ನೆನಪಿಸಿಕೊಳ್ಳಬಹುದು. ಕರ್ನಾಟಕದಲ್ಲಿ 2003 ರಿಂದ ಮೋಡಬಿತ್ತನೆಯನ್ನು ಕೈಗೊಳ್ಳಲಾಗಿದೆ .

ಮಾಹಿತಿ ಸೆಲೆ: