ರಂಗಾಕು – ಜಪಾನಲ್ಲೊಂದು ಅರಿಮೆಯ ಚಳುವಳಿ

ಪ್ರಶಾಂತ ಸೊರಟೂರ.

 

ಜಪಾನ್

ಹೆಸರು ಕೇಳಿದೊಡನೆ ನಮ್ಮೆದುರಿಗೆ ನಿಲ್ಲುವುದು ಅದರ ರೊಬೋಟ್‍ಗಳು, ತಾನೋಡಗಳ (automobiles) ಕೈಗಾರಿಕೆಗಳು, ಮುಂಚೂಣಿಯಲ್ಲಿ ನಿಲ್ಲುವ ಅದರ ಅರಕೆಗಳು, ಎಂತದೇ ಅವಘಡಗಳನ್ನು ಎಂಟೆದೆಯಿಂದ ಒಗ್ಗಟ್ಟಾಗಿ, ಜಾಣ್ಮೆಯಿಂದ ಎದುರಿಸುವ ಅದರ ನಾಡಿಗರು.

ಸಂಪನ್ಮೂಲಗಳ ಕೊರತೆಯನ್ನು ಎದುರಿಸಿದರೂ ನಾಡೊಂದು ಹೇಗೆ ಇಷ್ಟೊಂದು ಮುಂದುವರೆಯಿತು? ಹೇಗೆ ಸಾಯನ್ಸ್ ಮತ್ತು ಟೆಕ್ನಾಲಜಿಯಲ್ಲಿ ಅದಿಂದು ಮುನ್ನೆಲೆಗೆ ಬಂತು? ಅನ್ನುವ ಕೇಳ್ವಿಯ ಜಾಡು ಹಿಡಿದು ನಡೆದಾಗ ಹಲವು ಮುಂದುವರೆದ ನಾಡುಗಳಲ್ಲಿ ನಡೆದಂತೆ ಜಪಾನಲ್ಲೂ ಕೂಡ ಅದರ ನುಡಿಯ ಸುತ್ತ ಚಳುವಳಿ ನಡೆದಿರುವುದು, ಅರಿಮೆಯನ್ನು ತನ್ನದಾಗಿಸುವ ಕೆಲಸ ಎಡೆಬಿಡದೇ ಸಾಗಿದ್ದು ಕಾಣುತ್ತದೆ. ಜಪಾನಿನಲ್ಲಿ ನಡೆದ ಅರಿಮೆಯನ್ನು ತನ್ನಾದಾಗಿಸುವ ಅಂತಹ ಕಾಲಘಟ್ಟವೊಂದರ ಬಗ್ಗೆ ಈಗ ತಿಳಿಯೋಣ ಬನ್ನಿ.

ಬೇಲಿಯ ನಾಡು:
ಕ್ರಿ.ಶ. 1633 ರಿಂದ 1853 ರ ಹೊತ್ತಿನಲ್ಲಿ ಜಪಾನ್ ನಾಡಿಗರನ್ನು ಹೊರನಾಡುಗಳ ಒಡನಾಟದಿಂದ ದೂರ ಉಳಿಸಲಾಗಿತ್ತು. ಜಪಾನ್‍ನಿಂದ ಹೊರಹೋಗುವವರನ್ನು ಮತ್ತು ಜಪಾನಿಗೆ ಬೇರೆ ನಾಡಿಂದ ಬರುವವರನ್ನು ನೇಣಿಗೇರಿಸುವಂತಹ ಕಟ್ಟಲೆಗಳು ಆಗ ಜಾರಿಯಲ್ಲಿದ್ದವು. ಹೊರನಾಡುಗಳು ಅದರಲ್ಲೂ ಸ್ಪೇನ್ ಮತ್ತು ಪೋರ್ಚುಗಲ್ ದೇಶಗಳ ಆಳ್ವಿಕೆಯ ಮತ್ತು ಧಾರ್ಮಿಕ ದಾಳಿಯನ್ನು ತಡೆಗಟ್ಟಲು ಜಪಾನ್ ದೊರೆಗಳು ಇಂತಹ ದಾರಿಯನ್ನು ಆಯ್ಕೆಮಾಡಿಕೊಂಡಿದ್ದರು. ಬೇರೆ ನಾಡುಗಳಿಂದ ನೇರವಾದ ಒಡನಾಟ ಕಳಚಲ್ಪಟ್ಟ ಆ ಹೊತ್ತಿನ ಜಪಾನ್‍ನ್ನು ಸಾಕೊಕು (Sakoku) ಅಂದರೆ ಸರಪಳಿಯ ಇಲ್ಲವೇ ಬೇಲಿಯ ನಾಡು ಎಂದು ಕರೆಯಲಾಗುತ್ತದೆ.

ಹೊರನಾಡುಗಳಿಂದ ಜಪಾನಿಗರು ನೇರವಾದ ಒಡನಾಟದಿಂದ ದೂರವಿದ್ದರೂ, ಈ ಹೊತ್ತಿನಲ್ಲಿ ಕೆಲವು ರೇವುಪಟ್ಟಣಗಳಿಂದ ಹೊರದೇಶಗಳೊಡನೆ ವ್ಯಾಪಾರ, ಕೊಡುಕೊಳ್ಳುವಿಕೆಗೆ ಕೆಲವು ಕಟ್ಟುಪಾಡುಗಳೊಂದಿಗೆ ಅವಕಾಶವನ್ನು ನೀಡಲಾಗಿತ್ತು. ನಾಗಾಸಾಕಿ ಊರಿನ ಬಳಿ ಡೆಜಿಮಾ (Dejima) ಎಂಬ ತಾಣವನ್ನು ಇದಕ್ಕಾಗಿ ಅಣಿಗೊಳಿಸಲಾಗಿತ್ತು. ಡೆಜಿಮಾ ಮೂಲಕ ಮುಖ್ಯವಾಗಿ ಡಚ್ಚರು ಜಪಾನಿನೊಡನೆ ಒಳ್ಳೆಯ ನಂಟನ್ನು ಬೆಳಸಿಕೊಂಡರು. ಆಗ ಶುರುವಾದದ್ದೇ ಡಚ್ಚರಿಂದ ಪಡುವಣ ನಾಡುಗಳ ಅರಿಮೆಯ ಸಾರವನ್ನು ಹೀರುವ ಜಪಾನಿಗರ ಚಳುವಳಿ.

rangaku_Dutch_trader_watching_an_incoming_VOC_ship_at_Dejima_by_Kawahara_Keiga

(ಡಚ್ಚರ ಹಡಗನ್ನು ಜಪಾನಿಗೆ ಬರಮಾಡಿಕೊಳ್ಳುತ್ತಿರುವ ತಿಟ್ಟ)

ರಂಗಾಕು – ಚಳುವಳಿ:

ಬೇರೆ ನಾಡುಗಳಿಂದ ಒಡನಾಟ ಕಡಿಯಲ್ಪಟ್ಟಿದ್ದರೂ ಡಚ್ಚರು ಜಪಾನಿಗೆ ಪಡುವಣ ದೇಶದಲ್ಲಿ ನಡೆಯುತ್ತಿರುವ ಅರಿಮೆಯ ಮಾಹಿತಿಯನ್ನು, ಅಲ್ಲಿ ಹುಟ್ಟುತ್ತಿದ್ದ ಸಲಕರಣೆಗಳನ್ನು, ಕೈಗಾರಿಕೆಗಳ ತಿಳುವಳಿಕೆಯನ್ನು ತಮ್ಮ ವ್ಯಾಪಾರದೊಂದಿಗೆ ಹೊತ್ತು ತರುತ್ತಿದ್ದರು. ಹೀಗಾಗಿಯೇ ಜಪಾನ್ ಡಚ್ಚರ ಮೇಲೆ ತನ್ನ ನಂಬಿಕೆಯನ್ನು ಇರಿಸತೊಡಗಿತು, ಅವರಿಂದ ವ್ಯಾಪಾರಾದಾಚೆಗೆ ಪಡುವಣದ ಅರಿವನ್ನು ತನ್ನದಾಗಿಸಿಕೊಳ್ಳುವಲ್ಲಿ ಗೊತ್ತುಗುರಿಯನ್ನು ಇಟ್ಟುಕೊಂಡು ಕೆಲಸ ಮಾಡತೊಡಗಿತು. ಅರಿಮೆಯ ಈ ಕಲಿಯುವಿಕೆಯನ್ನು ಜಪಾನಿನಲ್ಲಿ ರಂಗಾಕು (Rangaku) ಅಂದರೆ ಡಚ್ಚರಿಂದ ಕಲಿಯುವಿಕೆ ಇಲ್ಲವೇ ಪಡುವಣದಿಂದ ಕಲಿಯುವಿಕೆ (Western learning) ಎಂದು ಕರೆಯಲಾಗುತ್ತದೆ.

ಚಳುವಳಿಯ ಮೊದಲ ಹಂತ:

ಪಡುವಣದಿಂದ ಕಲಿಯುವ ಅರಿಮೆಯ ಚಳುವಳಿಯಾದ ರಂಗಾಕುವಿನ ಮೊದಲ ಹಂತವನ್ನು 1640–1720 ಎಂದು ಗುರುತಿಸಲಾಗುತ್ತದೆ. ಈ ಹಂತದಲ್ಲಿ ಕಲಿಯುವಿಕೆ ತುಂಬಾ ಹಿಡಿತದಲ್ಲಿತ್ತು ಅನ್ನಬಹುದು. ಕಡಲ ಮತ್ತು ಮದ್ದರಿಮೆಯ ವಿಷಯಗಳನ್ನು ಬಿಟ್ಟು ಬೇರೆಲ್ಲ ಬಗೆಯ ಪಡುವಣದ ಹೊತ್ತಗೆಗಳನ್ನು ತಡೆಹಿಡಿಯಲಾಗಿತ್ತು. ಮೊದಲ ಹಂತವಾಗಿ ಜಪಾನ್ ಮತ್ತು ಡಚ್ ನುಡಿ ಬಲ್ಲವರನ್ನು ಹೊತ್ತಗೆಗಳ ಅನುವಾದಕ್ಕೆ ಅಣಿಗೊಳಿಸಲಾಗಿತ್ತು. ಇವರ ಕೆಲಸವೆಂದರೆ ಡಚ್ಚರು ಒದಗಿಸುವ ತಿಳುವಳಿಕೆಯನ್ನು ಜಪಾನಿ ನುಡಿಗೆ ಅನುವಾದಿಸುವುದು. ಪ್ರತಿ ವರುಶ ಜಪಾನಿಗೆ ಬರುವಾಗ ಡಚ್ಚರು ಪಡುವಣ ದೇಶಗಳಲ್ಲಿ ಏನು ನಡೆದಿದೆ, ಯಾವ ಬಗೆಯ ಕೈಗಾರಿಕೆಗಳು, ಅರಿಮೆಯ ಏಳಿಗೆಗಳು ನಡೆದಿವೆ ಅನ್ನುವುದನ್ನು ಜಪಾನಿಗರಿಗೆ ತಿಳಿಸಲು ಕೋರಲಾಯಿತು. ಇದರ ಬದಲಾಗಿ ಡಚ್ಚರಿಗೆ ತಮ್ಮ ಸರಕುಗಳನ್ನು ಮಾರಾಟ ಮಾಡಲು ಹೆಚ್ಚಿನ ಅವಕಾಶಗಳನ್ನು ಒದಗಿಸಲಾಯಿತು.

ಮೊದಲಿಗೆ ಡಚ್ಚರಿಂದ ಪಡೆದ ಹೊತ್ತಗೆಗಳು ಜಪಾನಿ ನುಡಿಗೆ ಅನುವಾದಿಸಲ್ಪಟ್ಟರೆ, ಬರಬರುತ್ತಾ ಡಚ್ಚರು ಹೊತ್ತು ತರುತ್ತಿದ್ದ ದೂರತೋರುಕಗಳು (telescopes), ಗಡಿಯಾರಗಳು, ಸೀರುತೋರ‍್ಪುಗಳು (microscopes), ನಾಡತಿಟ್ಟಗಳು (maps/globes), ಕನ್ನಡಕಗಳು ಮುಂತಾದ ಸಲಕರಣೆಗಳ ಮಾರಾಟ ಹೆಚ್ಚತೊಡಗಿತು. ಅವುಗಳ ಬಳಕೆಯ ಬಗ್ಗೆ ಜಪಾನಿಗರು ತುಂಬಾ ನಲ್ಮೆಯಿಂದ ಡಚ್ಚರಿಂದ ಕಲಿತರು.

rangaku_microscope

(ಮೈಕ್ರೋಸ್ಕೋಪ್ ಬಗ್ಗೆ ತಿಳಿಸುತ್ತಿರುವ ಜಪಾನಿ ಹೊತ್ತಗೆ)

ಚಳುವಳಿಯ ಎರಡನೆ ಹಂತ:

1720-1839 ರ ಹಂತವನ್ನು ಕಲಿಕೆಯ ಎರಡನೆಯ ಹಂತವೆಂದು ಗುರುತಿಸಲಾಗುತ್ತದೆ. ಈ ಹಂತದಲ್ಲಿ ಪಡುವಣದ ಹಲವಾರು ಅರಿಮೆಯ ಹೊತ್ತಗೆಗಳು ತುಂಬಾ ಬಿರುಸಿನಿಂದ ಜಪಾನಿ ನುಡಿಗೆ ಅನುವಾದಿಸಲ್ಪಟ್ಟವು. ಇದರಲ್ಲಿ ತುಂಬಾ ಮುಖ್ಯವಾದ ಹೊತ್ತಗೆ ಎಂದರೆ ಮೊರಿಶಿಮಾ ಎಂಬುವವರು ಜಪಾನಿ ನುಡಿಗೆ ಅನುವಾದಿಸಿದ ’ಡಚ್ಚರ ಹೇಳಿಕೆಗಳು’ (Sayings of the Dutch). ಈ ಹೊತ್ತಗೆಯಲ್ಲಿ ಮೈಕ್ರೋಸ್ಕೋಪ್ ಕೆಲಸ ಮಾಡುವ ಬಗೆ, ಬಿಸಿ ಗಾಳಿಚಂಡಿನ ಅರಿಮೆಯ ಹಿನ್ನೆಲೆ, ಪಡುವಣದಲ್ಲಿರುವ ಬೇನೆಗಳ ಮತ್ತು ಅವುಗಳನ್ನು ಗುಣಪಡಿಸುವ ಮದ್ದರಿಮೆಯ ತಿಳುವಳಿಕೆ, ಹಡಗುಗಳ ಕಟ್ಟಣೆ, ಮಿಂಚರಿಮೆಯ ಅರಿವು ಮುಂತಾದ ಹತ್ತು ಹಲವಾರು ತಿಳುವಳಿಕೆಯನ್ನು ಜಪಾನಿ ನುಡಿಯಲ್ಲಿ ತಿಳಿಸಲಾಯಿತು.

rangaku_First_Japanese_treatise_on_Western_anatomy

(ಮದ್ದರಿಮೆಯ ಬಗ್ಗೆ ಬರೆಯಲಾದ ಮೊದಲ ಜಪಾನಿ ಹೊತ್ತಗೆ)

rangaku_RangakuElectricityManual

(ಇಲೆಕ್ಟ್ರಿಸಿಟಿ ಬಗ್ಗೆ ಬರೆಯಲಾದ ಮೊದಲ ಜಪಾನಿ ಹೊತ್ತಗೆ)

1804 ರಿಂದ 1829 ರ ಹೊತ್ತಿನಲ್ಲಿ ಜಪಾನಿನಲ್ಲಿ ಹಲವಾರು ಶಾಲೆಗಳು ತೆರೆಯಲ್ಪಟ್ಟವು. ಈ ಮೂಲಕ ಮೊದಲ ಹಂತಕ್ಕಿಂತ ಬಿರುಸಾಗಿ ಎರಡನೇ ಹಂತದಲ್ಲಿ ಜಪಾನಿಗರು ತಮ್ಮ ನುಡಿಯಲ್ಲಿ ದೊರೆತ ಪಡುವಣದ ಅರಿಮೆಯ ಸಾರವನ್ನು ಹೀರತೊಡಗಿರದರು.

ಚಳುವಳಿಯ ಮೂರನೆಯ ಹಂತ:

1829 ರ ಈಚೆಗಿನ ಹಂತವನ್ನು ಪಡುವಣದಿಂದ ಕಲಿಯುವಿಕೆಯ ಮೂರನೆಯ ಹಂತವೆಂದು ಗುರುತಿಸಲಾಗುತ್ತದೆ. ಈ ಹಂತದಲ್ಲಿ ರಂಗಾಕು ಚಳುವಳಿ ರಾಜಕೀಯ ವಲಯದಲ್ಲಿ ಹೆಚ್ಚು ಚರ್ಚೆಗೆ ಒಳಗಾಯಿತು. ಪಡುವಣದೊಂದಿಗೆ ಒಡನಾಟ ಜಪಾನಿಗರಿಗೆ ಒಳ್ಳೆಯದೇ ಹೊರತು ಕೆಡುಕಿನದಲ್ಲ ಅನ್ನುವಂತ ಮಾತುಗಳು ಹೆಚ್ಚಾಗಿ ಕೇಳತೊಡಗಿದವು. ಬೇಲಿಯ ನಾಡಾಗಿದ್ದ ಜಪಾನನ್ನು ಪಡುವಣದ ಮತ್ತು ಇತರ ಹೊರಜಗತ್ತಿನ ಕಲಿಕೆಗೆ ತೆರವುಗೊಳಿಸಬೇಕು ಅನ್ನುವ ಕೂಗುಗಳು ಕೇಳಿಸಿದವು.

ಮುಂದಿನ ಕೆಲವು ವರುಶಗಳಲ್ಲಿ ಜಪಾನ್ ಇಡಿ ಜಗತ್ತಿಗೆ ತೆರೆದುಕೊಳ್ಳುವುದಕ್ಕೆ ಮುಂಚಿತವಾಗಿಯೇ ರಂಗಾಕು ಚಳುವಳಿ ಜಪಾನಿಗರ ಅರಿಮೆಗೆ ಒಳ್ಳೆಯ ಅಡಿಪಾಯವನ್ನು ಹಾಕಿಕೊಟ್ಟಿತ್ತು.

ಚಳುವಳಿಯಲ್ಲಿ ಪದಕಟ್ಟಣೆ:

ಪಡುವಣದಿಂದ ತಿಳುವಳಿಕೆಯನ್ನು ತಮ್ಮದಾಗಿಸಿಕೊಳ್ಳಲು ಹಾತೊರೆದ ಜಪಾನಿಗರು ಮೊದಲು ಅವುಗಳನ್ನು ತಮ್ಮ ನುಡಿಗೆ ತರುವಂತಾಗಲು ಪದಕಟ್ಟಣೆಯಲ್ಲಿ ತುಂಬಾ ಬಿರುಸಿನಿಂದ ತೊಡಗಿದರು. ಮದ್ದರಿಮೆ (medical science) , ಇರುವರಿಮೆ (physical science), ಮಿಂಚರಿಮೆ (electrical science), ಇರ‍್ಪರಿಮೆ (chemistry), ಬೆಳಕರಿಮೆ (optics), ಉಸಿರಿಯರಿಮೆ (biology), ಬಾನರಿಮೆ (astronomy), ಚಳಕದರಿಮೆ (mechanical engineering) ಮುಂತಾದ ಹತ್ತು ಹಲವಾರು ಅರಿಮೆಯ ಕವಲುಗಳಲ್ಲಿ ದೊರೆತ ಪಡುವಣದ ಅರಿವನ್ನು ತಿಳಿಸಲು ಜಪಾನಿಗರು ಸಾವಿರಾರು ಜಪಾನಿ ಪದಗಳನ್ನು ಹುಟ್ಟುಹಾಕಿದರು.

ಶಿಜುಕಿ (Shizuki) ಎಂಬುವವರು ಫಿಸಿಕ್ಸ್ ವಿಷಯದ ಪದಗಳಿಗೆ ಜಪಾನಿ ಪದಗಳನ್ನು ಕಟ್ಟಿದರೆ, ಉಡಗವಾ ಯೊನ್ (Udagawa Yōan) ಎಂಬುವವರು ಕೆಮಿಸ್ಟ್ರಿಯಲ್ಲಿ ಪದಗಳನ್ನು, ಹಶಿಮೋಟೋ ಮುನಿಯೋಶಿ (Hashimoto Muneyoshi) ಮಿಂಚರಿಮೆಯ ಪದಗಳನ್ನು ಜಪಾನಿ ನುಡಿಯಲ್ಲಿ ಟಂಕಿಸಿದರು. ಒಟ್ಟಾರೆಯಾಗಿ ಈ ಚಳುವಳಿಯಲ್ಲಿ ಅರಿಮೆಯ ಪದಗಳ ಹಾಲ್ಗಡಲೇ ಹರಿಯೆತೆಂದರೆ ತಪ್ಪಾಗಲಾರದು. ಹೀಗೆ ಕಟ್ಟಲ್ಪಟ್ಟ ಜಪಾನಿ ಪದಗಳನ್ನು ಬಳಸಿಕೊಂಡು ಜಪಾನಿಗರು ಹಲವಾರು ಹೊತ್ತಗೆಗಳನ್ನು ಬರೆದರು. ಈ ಮೂಲಕ ಅರಿಮೆಯನ್ನು ತಮ್ಮ ನುಡಿಯಲ್ಲೇ ಎಲ್ಲರಿಗೂ ಎಟುಕುವಂತೆ ಮಾಡಿದರು.

ಕನ್ನಡಿಗರಿಗೆ ರಂಗಾಕು ಕಲಿಸುವ ಪಾಠ:

ಜಪಾನಿಗರ ರಂಗಾಕು ಚಳುವಳಿಯಿಂದ ಕನ್ನಡಿಗರು ಕಲಿಯಬೇಕಾದ ಮುಖ್ಯ ಪಾಠವೆಂದರೆ, ಜಗತ್ತಿನ ಯಾವುದೇ ಮೂಲೆಯಲ್ಲಿರುವ ತಿಳುವಳಿಕೆಯನ್ನಾಗಲಿ ತಮ್ಮ ನುಡಿ ಸಮಾಜಕ್ಕೆ ತಲುಪಿಸಬೇಕೆಂದರೆ, ಆ ತಿಳುವಳಿಕೆಯನ್ನು ತಮ್ಮ ನುಡಿಗೆ ತರುವಂತಹ ಕೆಲಸ ಆಗಬೇಕು.

ಆದರೆ ಕನ್ನಡಿಗರು ಇಂದು ಇದರ ಎದುರಾದ ನಿಲುವನ್ನು ಹೊಂದಿರುವಂತಿದೆ. ಇಂಗ್ಲಿಶಲ್ಲಿ ಇಲ್ಲವೇ ಇನ್ನೊಂದು ನುಡಿಯಲ್ಲಿರುವ ತಿಳುವಳಿಕೆಯನ್ನು ತಮ್ಮದಾಗಿಸಿಕೊಳ್ಳಲು ಇಡಿ ಕನ್ನಡ ನುಡಿ ಸಮಾಜ ಇಂಗ್ಲಿಶ್ ಕಲಿಯಬೇಕು ಅನ್ನುವಂತ ತಪ್ಪು ತಿಳುವಳಿಕೆಯನ್ನು ಹೊಂದಿದೆ. ಇದರ ಬದಲಾಗಿ ಹೊರಜಗತ್ತಿನ ಅರಿವನ್ನು ಕನ್ನಡಕ್ಕೆ ತರುವ ಕೆಲಸ ತುಂಬಾ ಮುಖ್ಯ ಅನ್ನುವುದನ್ನು ಇಂದು ಮನಗಾಣಬೇಕಿದೆ ಮತ್ತು ಈ ನಿಟ್ಟಿನಲ್ಲಿ ಕನ್ನಡಿಗರು ಎಡೆಬಿಡದೇ ತೊಡಗಬೇಕಿದೆ.

(ಮಾಹಿತಿ ಮತ್ತು ತಿಟ್ಟಗಳ ಸೆಲೆ: http://en.wikipedia.org/wiki/Rangaku , japan-experience.com)

ಮೈಯೊಂದು ಕನ್ನಡಿ

ಪ್ರಶಾಂತ ಸೊರಟೂರ.

  • ಸಿಟ್ಟಿನಿಂದ ಆತನ ಮೋರೆ ಕೆಂಡದಂತಾಗಿತ್ತು.
  • ನಲ್ಲನ ಮಾತಿಗೆ ನಲ್ಲೆಯ ಕಣ್ಣುಗಳು ನಾಚಿ ನೀರಾದವು.
  • ಏನಾದಿತೋ ಎಂಬ ಅಂಜಿಕೆಯಿಂದ ಆತನ ಕೈ-ಕಾಲುಗಳು ನಡುಗುತ್ತಿದ್ದವು.
  • ಆ ಮಾತನ್ನು ಕೇಳಿ ಅಲ್ಲಿ ನೆರೆದವರೆಲ್ಲಾ ಬೆರಗಿನಿಂದ ಹುಬ್ಬೇರಿಸಿದರು.
  • ಅವರಲ್ಲಿ ಯಾವುದೋ ಕೊರಗಿದೆಯಂತಾ ಅವರ ಬಾಡಿದ ಮುಖವೇ ಹೇಳುತ್ತಿದೆ.
  • ಹೆಮ್ಮೆಯಿಂದ ಎದೆಯುಬ್ಬಿಸಿ ತನ್ನವರ ಕುರಿತು ಆತ ತಿಳಿಸಿಕೊಡುತ್ತಿದ್ದ.

ಇಂತಹ ಹಲವಾರು ಸಾಲುಗಳನ್ನು ಬದುಕಿನಲ್ಲಿ ಕಂಡ ಇಲ್ಲವೇ ಕತೆ-ಕಾದಂಬರಿಗಳಲ್ಲಿ ಓದಿದ ಅನುಭವ ನಿಮಗಾಗಿರಬಹುದು. ಬೇರೆ ಬೇರೆ ಭಾವನೆಗಳಿಗೆ ನಮ್ಮ ಮೈಯಲ್ಲಿ ಬದಲಾಣೆಗಳಾಗುತ್ತವೆ ಅಂತಾ ಗೊತ್ತಿದ್ದರೂ ಅವುಗಳಿಗೆ ಕರಾರುವಕ್ಕಾದ ನಂಟನ್ನು ತೋರಿಸಬಹುದೇ? ಭಾವನೆ ಮತ್ತು ಮೈಯಿಯ ನಂಟು ನಡೆ-ನುಡಿಗಳಿಗೆ, ನಾಡಿಗೆ ತಕ್ಕಂತೆ ಬೇರೆಯಾಗಿರುತ್ತದೆಯೇ? ಅನ್ನುವಂತ ಕೇಳ್ವಿಗಳು ಅರಿಗರನ್ನು ಹಿಂದಿನಿಂದಲೂ ಕಾಡಿದಂತವು.

ಈ ನಿಟ್ಟಿನಲ್ಲಿ ನಡೆದ ಅರಕೆಯೊಂದು ಬೆಳಕುಚೆಲ್ಲಿದ್ದು, ಮೊಟ್ಟಮೊದಲ ಬಾರಿಗೆ ಭಾವನೆಗೆ ತಕ್ಕಂತೆ ನಮ್ಮ ಮೈಯಿಯ ಯಾವ-ಯಾವ ಭಾಗಗಳು ಹೆಚ್ಚು ಹುರುಪುಗೊಳ್ಳುತ್ತವೆ ಎಂದು ತೋರಿಸಿಕೊಟ್ಟಿದೆ. ಇದರ ಜತೆಗೆ ಭಾವನೆಗಳಿಗೆ ಮೈ  ನಡೆದುಕೊಳ್ಳುವ ರೀತಿಯಲ್ಲಿ ನಾಡುಗಳ ಎಲ್ಲೆಗಳಾಚೆ ಹಲವಾರು ವಿಷಯಗಳಲ್ಲಿ ಒಂತನವಿರುವುದು ಈ ಅರಕೆಯಲ್ಲಿ ಕಂಡುಬಂದಿದೆ. ಈ ಅರಕೆಯ ದೊರೆತಗಳನ್ನು (results) ಅಮೇರಿಕಾದ ನ್ಯಾಶನಲ್ ಆಕಾಡಮಿ ಆಪ್ ಸಯನ್ಸ್ ಹೊಮ್ಮಿಸಿದೆ.

ಪಿನ್‍ಲ್ಯಾಂಡ್, ಸ್ವೀಡನ್ ಮತ್ತು ತೈವಾನ್ ನಾಡುಗಳ ಸುಮಾರು 700 ಮಂದಿ ಪಾಲ್ಗೊಂಡಿದ್ದ ಪ್ರಯೋಗದಲ್ಲಿ ಬೇರೆ ಬೇರೆ ಭಾವನೆಗಳನ್ನು ಹೊಮ್ಮಿಸುವ ಪದಗಳು, ವಿಡಿಯೋಗಳು, ಕತೆಗಳನ್ನು ಪಾಲ್ಗೊಂಡವರ ಮುಂದಿಡಲಾಯಿತು.

ಭಾವನೆಗೆ ತಕ್ಕಂತೆ ತಮ್ಮ ಮೈಯಲ್ಲಿ ಎಂತ ಬದಲಾವಣೆಗಳಾದವು, ಯಾವ-ಯಾವ ಭಾಗಗಳು ಹೆಚ್ಚು ಹುರುಪುಗೊಂಡಿರುವಂತೆ ತೋರಿದವು ಅಂತಾ ಪಾಲ್ಗೊಂಡವರಿಂದಲೇ ಅರಕೆಗಾರರು ಪಡೆದುಕೊಂಡರು. ಆಮೇಲೆ ಅವರ ನಾಡುಗಳ ನಡೆ-ನುಡಿಗಳಿಂದಾಗಿಯೇ ಬಂದಿರಬಹುದಾದ ಕೆಲವು ಹೊರತುಗಳನ್ನು (exceptions) ಅರಕೆಗಾರರು ಕೈಬಿಟ್ಟರು. ಹೀಗೆ ಭಾವನೆಗೆ ತಕ್ಕಂತೆ ಮಾರ್ಪಡುವ  ಮೈಗನ್ನಡಿಯ ಒಟ್ಟು ನೋಟವನ್ನು ಅಣಿಗೊಳಿಸಲಾಯಿತು.

Body_Emotions

(ಭಾವನೆ ಮತ್ತು ಮೈ  ಭಾಗಗಳ ನಂಟು ತೋರಿಸುತ್ತಿರುವ ತಿಟ್ಟ. ಎಲ್ಲಕ್ಕಿಂತ ಹೆಚ್ಚು ಹುರುಪುಗೊಂಡಿರುವ ಭಾಗಗಳು ಹಳದಿ ಬಣ್ಣದಲ್ಲಿ ಮತ್ತು ಕಡಿಮೆ ಹುರುಪುಗೊಂಡಿರುವ ಭಾಗಗಳನ್ನು ನೀಲಿ ಬಣ್ಣದಲ್ಲಿ ತೋರಿಸಲಾಗಿದೆ)

ಬೇರೆ ಬೇರೆ ಭಾವನೆಗಳಿಗೆ, ಮೈಯಿಯ ಬೇರೆ ಭಾಗಗಳು ಹುರುಪುಗೊಂಡಿರುವುದು ಕಂಡಿತಾದರೂ ಕೆಲವು ಭಾವನೆಗಳಿಗೆ ಮೈಯಿಯ  ಅದೇ ಭಾಗಗಳು ಹೆಚ್ಚು ಹುರುಪುಗೊಂಡಿರುವುದು ಕಂಡಿತು. ಎತ್ತುಗೆಗೆ: ಸಿಟ್ಟು ಮತ್ತು ಅಂಜಿಕೆಗೆ ಎದೆಯ ಮೇಲ್ಭಾಗ ಹೆಚ್ಚು ಹುರುಪುಗೊಳ್ಳುವಂತಹ ವಿಷಯ. ಹೀಗಾಗಲು ಸಿಟ್ಟು ಇಲ್ಲವೇ ಅಂಜಿಕೆಯಾದಾಗ ಉಸಿರಾಟ ಮತ್ತು ನಾಡಿ ಮಿಡಿತ ಹೆಚ್ಚಾಗುವುದು ಮುಖ್ಯ ಕಾರಣವಿರಬಹುದೆಂದು ಅರಕೆಗಾರರು ತಿಳಿಸಿದ್ದಾರೆ.

ಈ ಅರಕೆಯಲ್ಲಿ ಇನ್ನೊಂದು ಕರಾರುವಕ್ಕಾಗಿ ಕಂಡುಬಂದಿದ್ದೆಂದರೆ, ’ನಲಿವು’ ಆದಾಗ ಅಷ್ಟೇ ಇಡೀ ಮಯ್ಯಿ ಹೆಚ್ಚು ಹುರುಪುಗೊಳ್ಳುತ್ತದೆ. ಗೊತ್ತಾಯಿತಲ್ಲ, ನಲಿವಿನ ’ಹುರುಪು’ ಎಂತದು ಅಂತಾ 🙂.

ತಿಳಿವಿನ ಮತ್ತು ತಿಟ್ಟಸೆಲೆ: discovermagazine)

ಇವಿ ಕೊಳ್ಳುವಿಕೆಯ ಸಮಸ್ಯೆ ಮತ್ತು ಪರಿಹಾರ (1ನೇ ಕಂತು)

ಜಯತೀರ್ಥ ನಾಡಗೌಡ

ಕಳೆದ ಕೆಲವು ವರುಶಗಳಿಂದ ಇಲೆಕ್ಟ್ರಿಕ್ ಗಾಡಿಗಳು ಸಾಲುಸಾಲಾಗಿ ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ. ಹೆಚ್ಚಿನ ಹರವು(Range), ಕಡಿಮೆ ಸಮಯದಲ್ಲಿ 80% ಚಾರ್ಜ್ ಆಗಬಲ್ಲ ಬೇರೆ ಬೇರೆ ಗಾಡಿಗಳು ಬಂದರೂ, ಕೊಳ್ಳುಗರ ಪ್ರಮಾಣದಲ್ಲಿ ಕೊಂಚ ಏರಿಕೆ ಕಂಡದ್ದು ಬಿಟ್ಟರೆ, ಇವಿಯೆಂದರೆ ಮೂಗು ಮುರಿಯುವವರ ಸಂಖ್ಯೆ ಇನ್ನೂ ಕಡಿಮೆಯಾಗಿಲ್ಲ. ಇಲೆಕ್ಟ್ರಿಕ್ ವೆಹಿಕಲ್‌ಗಳ ಕುರಿತಾದ ಕೆಲವು ಸುಳ್ಳು ಸುದ್ದಿಗಳು, ಗಾಳಿ ಸುದ್ದಿಗಳು ಜನರಲ್ಲಿ ಅರಿವಿನ ಕೊರತೆ ಮೂಡಿಸಿ ಕೊಳ್ಳುಗರನ್ನು ಅನುಮಾನ ಹೆಚ್ಚಿಸಿ ಗೊಂದಲದಲ್ಲಿರಿಸಿವೆ. ಸರಕಾರ ಇಲೆಕ್ಟ್ರಿಕ್ ಬಂಡಿ ತಯಾರಕರಿಗೆ ಮತ್ತು ಕೊಳ್ಳುಗರಿಗೆ ಹಲವು ಕೊಡುಗೆ ನೀಡಿದರೂ, ಇವಿ ಕೊಳ್ಳುಗರ ಸಂಖ್ಯೆ ಹೇಳಿಕೊಳ್ಳುವ ಮಟ್ಟಿಗೆ ಏರಿಕೆ ಕಂಡಿಲ್ಲ. ಈ ಎಲ್ಲ ಅಂತೆಕಂತೆಗಳ ಬಗ್ಗೆ ವೈಜ್ಞಾನಿಕವಾಗಿ ಬೆಳಕು ಹರಿಸಿ ನೋಡೋಣ.

ಹರವಿನ ದುಗುಡ(Range Anxiety): ಇಲೆಕ್ಟ್ರಿಕ್ ವೆಹಿಕಲ್ ಕೊಳ್ಳುವಿಕೆಗೆ ಹಿಂದೇಟು ಹಾಕುತ್ತಿರುವುದರ ಮೊದಲ ಕಾರಣ ರೇಂಜ್ ಆಂಕ್ಷೈಟಿ ಅಂದರೆ ಹರವಿನ ದುಗುಡ. ಹರವಿನ ದುಗುಡವೆಂದರೆ, ಮುಂದಿನ ಚಾರ್ಜಿಂಗ್ ತಾಣ ಸಿಗುವ ಮೊದಲೇ ಗಾಡಿಯ ಚಾರ್ಜಿಂಗ್ ಎಲ್ಲಿ ಖಾಲಿಯಾಗಿ ಬಿಡುತ್ತೋ ಪಯಣದ ನಡು ದಾರಿಯಲ್ಲಿಯೇ ಚಾರ್ಜಿಂಗ್ ಖಾಲಿಯಾದರೆ ಹೇಗೆ ಎಂದು ಕಾಡುವ ಭಯ. ಇಲೆಕ್ಟ್ರಿಕ್ ಕಾರು ಓಡಿಸುಗರಿಗೆ, ಕಾರು ಕೊಂಡವರ ಹರವಿನ ದುಗುಡ, ಈ ಅಳಲು ಇನ್ನೂ ಇದ್ದೇ ಇದೆ. ಗಾಡಿಗೆ ಹತ್ತಿರದ ಹುರುಪು ತುಂಬುವ ತಾಣಗಳ(Charging station) ಮಾಹಿತಿ ನೀಡುವ ಸಾಕಷ್ಟು ಆಪ್‌ಗಳು ಬಂದರೂ ನಿಖರವಾದ ಮಾಹಿತಿಯ ಕೊರತೆ ನೀಗುವಲ್ಲಿ ಇವುಗಳಿಂದ ಸಾಧ್ಯವಾಗಿಲ್ಲ ಎಂಬುದು ಸತ್ಯ. ಇದೇ ವಿಷಯವಾಗಿ ಎರಡನೇ ಪ್ರಮುಖ ಅಂಶವೆಂದರೆ, ದೇಶದ ಉದ್ದಗಲಕ್ಕೂ ಸಾಕಷ್ಟು ಚಾರ್ಜಿಂಗ್ ತಾಣಗಳನ್ನು ಬೆಳೆಸಿರುವ ಕಂಪನಿಗಳು ಆ ಚಾರ್ಜಿಂಗ್ ತಾಣಗಳ ನಿರ್ವಹಣೆಯನ್ನು ಸರಿಯಾಗಿ ಮಾಡುತ್ತಿಲ್ಲ. ಕಾಲ ಕಾಲಕ್ಕೆ ಅವುಗಳು ಸರಿಯಾಗಿ ಕೆಲಸ ಮಾಡುತ್ತಿವೆಯೇ ಎಂಬುದರ ಬಗ್ಗೆ ನೋಡಿ, ಸರಿಪಡಿಸುತ್ತಿಲ್ಲ. ಅದೇ ರೀತಿ ಈ ಚಾರ್ಜಿಂಗ್ ತಾಣಗಳು ಕೆಲಸ ಮಾಡುತ್ತಿವೆಯೇ ಇಲ್ಲವೇ ಎಂಬುದರ ಬಗ್ಗೆ ಈ ಮೇಲೆ ತಿಳಿಸಿದ ಆಪ್‌ಗಳಲ್ಲೂ ನಿಖರವಾದ ಮಾಹಿತಿ ಇರುವುದಿಲ್ಲ.

ಹಲವು ಮಾದರಿಗಳ ಕೊರತೆ: ಇವಿಗಳಲ್ಲಿ ಆಯ್ಕೆ ಕಡಿಮೆ. ಡೀಸೆಲ್, ಪೆಟ್ರೋಲ್ ಗಾಡಿಗಳಲ್ಲಿ ಚಿಕ್ಕ ಗಾಡಿಯಿಂದ ಹಿಡಿದು ಎಸ್‌ಯುವಿವರೆಗೂ ಹಲವು ಆಯ್ಕೆಗಳಿವೆ. ಟಾಟಾ, ಮಹೀಂದ್ರ, ಎಮ್‌ಜಿ, ಮುಂತಾದ ಕಾರು ತಯಾರಕರು ಹೊಸ ಇವಿಗಳನ್ನು ಮಾರುಕಟ್ಟೆಗೆ ತಂದರೂ, ಸುಜುಕಿ, ಹ್ಯುಂಡಾಯ್, ಟೊಯೊಟಾ, ಹೋಂಡಾ ರವರು ಇನ್ನೂ ತಮ್ಮ ಇವಿಗಳನ್ನು ಹೊರತಂದಿಲ್ಲ. ಇದರಿಂದ ಕೊಳ್ಳುಗರಿಗೆ ಆಯ್ಕೆಗಳು ಮಿತಿಯಲ್ಲಿವೆ.

ಚಾರ್ಜಿಂಗ್ ತಾಣಗಳ ಕೊರತೆ: ಬೆಂಗಳೂರು, ಬೊಂಬಾಯಿ, ದೆಹಲಿ ಮುಂತಾದ ದೊಡ್ಡ ನಗರಗಳಲ್ಲಿ ಚಾರ್ಜಿಂಗ್ ತಾಣಗಳು ಹೆಚ್ಚಿನ ಸಂಖ್ಯೆಯಲ್ಲಿದ್ದರೂ, ಎರಡನೇ ಹಾಗೂ ಮೂರನೇ ಮಟ್ಟದ ಜಿಲ್ಲಾ, ತಾಲೂಕು ಕೇಂದ್ರಗಳಲ್ಲಿ ಹುರುಪು ತುಂಬುವ ತಾಣಗಳು ಇನ್ನೂ ಬೆರಳೆಣಿಕೆಯಷ್ಟಿವೆ. ಈ ಸೌಕರ್ಯದ ಕೊರತೆಯಿಂದ ಇವಿ ಕೊಳ್ಳುಗರು ಮನಸು ಬದಲಿಸಿ ಪೆಟ್ರೋಲ್/ಡೀಸೇಲ್ ಗಾಡಿಗಳ ಮೊರೆಹೋಗುತ್ತಿದ್ದಾರೆ.

ಬೆಲೆಯ ಸಮಸ್ಯೆ: ಎಷ್ಟೇ ಹೊಸ ಕಾರುಗಳು ಮಾರುಕಟ್ಟೆಗೆ ಬಂದರೂ, ಇವಿಗಳ ಬೆಲೆ ಪೆಟ್ರೋಲ್/ಡೀಸೇಲ್ ಕಾರುಗಳಿಗಿಂತ ತುಸು ಹೆಚ್ಚು. ಇದು ಇವಿ ಕೊಳ್ಳುಗರ ಮತ್ತೊಂದು ದೂರು. ಭಾರತದಲ್ಲಿ ಹಲವಾರು ಕಾರು ಕೊಳ್ಳುಗರು ಕಾರಿನ ಬೆಲೆ ನೋಡಿ ಕೊಳ್ಳುವ ನಿರ್ಧಾರ ಮಾಡುವುದುಂಟು. ಇವಿ ಮತ್ತು ಪೆಟ್ರೋಲ್/ಡೀಸೇಲ್ ಕಾರುಗಳ ನಡುವಿರುವ ಬೆಲೆ ವ್ಯತ್ಯಾಸ, ಇವಿ ಕೊಳ್ಳುವಿಕೆಯಿಂದ ದೂರವಿರಿಸಿದೆ.

ಚಾರ್ಜಿಂಗ್ ಹಾಕದಂತಿರುವ ಅಡೆತಡೆ: ಹಲವು ನಗರ ಪ್ರದೇಶಗಳಲ್ಲಿ ಬಹುಮಹಡಿ ಕಟ್ಟಡ, ವಸತಿ ವಠಾರಗಳಲ್ಲಿ ಇವಿಗಳನ್ನು ಚಾರ್ಜಿಂಗ್ ಹಾಕಲು ಬಿಡುತ್ತಿಲ್ಲ. ಬೆಂಕಿ ಅವಘಡ, ಶಾರ್ಟ್ ಸರ್ಕ್ಯೂಟ್ ಮುಂತಾದ ಸಮಸ್ಯೆಗಳ ಕಾರಣವೊಡ್ಡಿ ನಗರಗಳ ಬಹುಮಹಡಿ ಕಟ್ಟಡ, ಕಚೇರಿಗಳಲ್ಲಿ ಚಾರ್ಜಿಂಗ್ ಹಾಕಲು ಅನುಮತಿ ನೀಡದ ಕಾರಣ, ಜನ ತಮ್ಮ ಇವಿಗಳನ್ನು ಚಾರ್ಜಿಂಗ್ ಸ್ಟೇಶನ್‌ಗಳಲ್ಲಿ ನಿಲ್ಲಿಸುವ ಪರಿಸ್ತಿತಿ ಇದೆ. ಇದಕ್ಕೆ ಬೇಸತ್ತು ,ಕೆಲವರು ಇವಿಗಳನ್ನು ಕೊಳ್ಳದೇ ಇರುವುದು ವಾಸಿ ಎನ್ನುವ ನಿರ್ಧಾರಕ್ಕೆ ಬಂದಿದ್ದಾರೆ.

ಹರವಿನ ವ್ಯತ್ಯಾಸ: ಕಾರು ತಯಾರಕರು ನೀಡುವ ಹರವಿಗೂ , ನಿಜವಾಗಿ ಓಡಿಸಿದಾಗ ಕಂಡುಬರುವ ಹರವಿಗೂ ಬಹಳ ದೊಡ್ಡ ಅಂತರ ಕಂಡುಬರುತ್ತಿದೆ. ಕೆಲವು ಕಾರು ತಯಾರಕರು 300-320ಕಿಮೀ ಹರವು ಎಂದು ಹೇಳಿಕೊಂಡಿರುತ್ತಾರೆ, ತಮ್ಮ ಕಾರಿನ ಕೈಪಿಡಿಯಲ್ಲಿ ಮೂಡಿಸಿರುತ್ತಾರೆ. ಆದರೆ ಗಾಡಿಯನ್ನು ಓಡಿಸಿದಾಗ, ಹರವಿನಲ್ಲಿ 60-80 ಕಿಮೀ ಕಡಿತವಾಗಿರುವುದು ಕಂಡುಬರುತ್ತದೆ. ಇದರಿಂದ ಇವಿ ಕೊಳ್ಳಬೇಕೆಂದಿರುವ ಹಲವರಿಗೆ ಗೊಂದಲಗಳು ಮೂಡುತ್ತಿವೆ.

ಮರುಮಾರಾಟದ ಬೆಲೆ: ಬೆಲೆಯ ವಿಷಯಕ್ಕೆ ಬಂದರೆ, ಭಾರತದಲ್ಲಿ ಹಲವರು ತಮ್ಮ ಹಳೆಯ ಕಾರುಗಳನ್ನು ಮಾರಿ ಹೊಸ ಕಾರುಗಳನ್ನು ಕೊಳ್ಳುವ ವಾಡಿಕೆಯವರು. ಆಗ ಇಂತಹ ಕೊಳ್ಳುಗರು ತಾವು ಕೊಂಡ ಕಾರು ಮುಂದಿನ ಕೆಲವು ವರ್ಷಗಳಲ್ಲಿ ಮಾರಬೇಕಾಗಿ ಬಂದಾಗ, ಮರುಮಾರಾಟಕ್ಕೆ ಎಷ್ಟು ಬೆಲೆ ಬರಬಹುದೆಂದು ಲೆಕ್ಕಾಚಾರ ಮಾಡಿಯೇ ಹೊಸ ಗಾಡಿ ಕೊಳ್ಳುವ ತೀರ್ಮಾನ ಮಾಡಿರುತ್ತಾರೆ.ಇವಿ ವಿಷಯದಲ್ಲಿ, ಮರುಮಾರಾಟದ ಬೆಲೆ ಹೆಚ್ಚು ಹೇಳಿಕೊಳ್ಳುವಂತಿಲ್ಲ. ಇವಿ ತಯಾರಕರು, ಬ್ಯಾಟರಿಗೆ 8-10 ವರ್ಷಗಳ ವಾರಂಟಿ ನೀಡಿದರೂ ಬ್ಯಾಟರಿಗಳು ಬೇಗನೆ ಸವೆದು,ಹೆಚ್ಚು ವರ್ಷ ಬಾಳಿಕೆ ಬರುವಿದಿಲ್ಲ ಎಂಬ ತಿಳುವಳಿಕೆ ಜನರಲ್ಲಿ ಮಾಡಿದೆ. ಮುಂದೊಮ್ಮೆ ಬ್ಯಾಟರಿಯನ್ನು ಬದಲಾಯಿಸುವ ಪರಿಸ್ತಿತಿ ಬಂದರೆ, ಬ್ಯಾಟರಿ ಬದಲಾಯಿಸುವ ಬೆಲೆಯ ಹೊರೆ ಹೆಚ್ಚಲಿದೆ ಎಂದು ಮರುಮಾರಾಟಗೊಳ್ಳುವ ಇವಿಗಳಿಗೆ ಬೇಡಿಕೆ ಇಲ್ಲವೇ ಇಲ್ಲ ಎನ್ನಬಹುದು. ಬ್ಯಾಟರಿಗಳ ಕುರಿತಾಗಿ ಇನ್ನೊಂದು ಪ್ರಮುಖ ಅಂಶವೆಂದರೆ, 8-10 ವರ್ಷಗಳ ನಂತರ ಈ ಗಾಡಿಗಳ ಬ್ಯಾಟರಿಗಳನ್ನು ಬದಲಿಸಬೇಕೆ ಇಲ್ಲವೇ ಎಂಬ ಬಗ್ಗೆ ಅನುಮಾನಗಳಿವೆ. ಒಂದೊಮ್ಮೆ ಬ್ಯಾಟರಿ ಬದಲಿಸುವ ಸಂದರ್ಭ ಬಂದಾಗ ಗಾಡಿಯ 40-50% ಹಣ ಬ್ಯಾಟರಿ ಮೇಲೆ ಸುರಿಯಬೇಕು. ಇದಕ್ಕೆ ಇವಿ ಕೊಳ್ಳುವ ಮುಂಚೆ, ಖರೀದಿಸಲು ಹತ್ತಾರು ಬಾರಿ ಯೋಚನೆ ಮಾಡುವಂತಾಗಿದೆ.

ಮಾರಾಟದ ನಂತರ ನೆರವು ಮತ್ತು ಬೆಂಬಲದ ಕೊರತೆ: ಇವಿಗಳಲ್ಲಿ ಹಲವು ಹೊಸ ಕಾರುಗಳು ಬಂದರೂ, ಕಾರು ತಯಾರಕರ ಕಡೆಯಿಂದ ಮಾರಾಟದ ನಂತರ ಗುಣಮಟ್ಟದ ನೆರವು ಮತ್ತು ಬೆಂಬಲ ಸಿಗುತ್ತಿಲ್ಲ. ಕೆಲವು ಗಾಡಿಗಳ ತಯಾರಕರ ಒಳ್ಳೆಯ ನೆರವಿನ ಜಾಲವನ್ನು ಹೊಂದಿಲ್ಲ, ಒಂದು ಪಕ್ಷ ಹೊಂದಿದ್ದರೂ ಅವರಲ್ಲಿ ನುರಿತ ಸಿಬ್ಬಂದಿಯ ಕೊರತೆಯಿದೆ. ಇವಿಗಳನ್ನು ಸರ್ವೀಸ್ ಮಾಡಿ, ರೀಪೆರ್ ಮಾಡುವ ನುರಿತ ತಂತ್ರಜ್ಞರು ಸಿಗುತ್ತಿಲ್ಲ. ಇದರಿಂದ ಇವಿ ಮಾಲೀಕರು ಸರಿಯಾಗಿ ತಮ್ಮ ಕಾರುಗಳ ಸರ್ವೀಸ್ ಮಾಡುತ್ತಿಲ್ಲ, ಹಲವು ದಿನಗಳವರೆಗೂ ಕಾರು ಸರ್ವೀಸ್ ಮಾಡಿ ಮರಳಿಸುತ್ತಿಲ್ಲ ಎಂದು ಗೋಳಿಡುತ್ತಿದ್ದಾರೆ. ಇದು , ಇವಿ ಕೊಳ್ಳಬಯಸುವವರನ್ನು ಚಿಂತೆಗೀಡು ಮಾಡಿದೆ. ಇದು ಅಲ್ಲದೇ, ಕೆಲವು ಗಾಡಿ ಮಾಲೀಕರು ತಾವು ಕೊಂಡ ಗಾಡಿಗಳನ್ನು ತಮಗಿಷ್ಟದ ರೀತಿಯಾಗಿ ಚಿಕ್ಕ-ಪುಟ್ಟ ಮಾರ್ಪಾಡು ಮಾಡುವ ಹವ್ಯಾಸಿಗಳಾಗಿರುತ್ತಾರೆ. ಇಂತವರು ಒಂದು ಚಿಕ್ಕ ಪುಟ್ಟ ದೀಪದ ಬಲ್ಬ್ ಬದಲಿಸಿದರೂ, ಹೊಸದಾಗಿ ಇಲೆಕ್ಟ್ರಾನಿಕ್ ಕ್ಯಾಮೆರಾಗಳನ್ನು ಅಳವಡಿಸಿಕೊಂಡರೂ ವಾರಂಟಿ ಮೀರುತ್ತದೆಂದು ಇವಿ ತಯಾರಕರು ಕಟ್ಟಳೆ ಹೇರಿರುವುದು, ಕಿರಿಕಿರಿಯಾಗಿದೆ.

ಗಾಲಿಗಳುಳ್ಳ ಕಂಪ್ಯೂಟರ್: ಹೆಚ್ಚುತ್ತಿರುವ ತಂತ್ರಜ್ಞಾನ, ADAS ನಂತ ವಿಶೇಷತೆ ಹೆಚ್ಚಳದಿಂದ, ಟೆಕ್-ಸ್ಯಾವಿಯಿಲ್ಲದ ಜನತೆ ಇವಿಗಳನ್ನು, ಗಾಲಿಗಳನ್ನು ಹೊಂದಿರುವ ಕಂಪ್ಯೂಟರ್‌ಗಳೆಂದು ನೋಡುತ್ತಿದ್ದಾರೆ. ತಂತ್ರಜ್ಞಾನ ಅರಿವಿಲ್ಲದ ಜನತೆ ಇವಿಗಳು ನಮಗಲ್ಲ ಎನ್ನುವ ಭಾವನೆಗೆ ಬಂದಂತಿದೆ, ಇದು ಕೂಡ ಇವಿ ಕೊಳ್ಳುವಿಕೆಗೆ ಹಿನ್ನಡೆಯೊಡ್ಡಿದೆ.

ಮುಂದಿನ ಬರಹದಲ್ಲಿ ಈ ಎಲ್ಲ ಸಮಸ್ಯೆಗಳಿರುವ ಪರಿಹಾರಗಳತ್ತ ನೋಟ ಹರಿಸೋಣ.

ತಿಟ್ಟ ಸೆಲೆ: elecvulum.com

ನೆಲದಾಳದಲ್ಲಿ ಹೊಸ ನೀರು

ಪ್ರಶಾಂತ ಸೊರಟೂರ.

ಈಗ ಕಡಲಿನಲ್ಲಿರುವ ನೀರಿಗಿಂತ ಮೂರು ಪಟ್ಟು ಹೆಚ್ಚಿನ ನೀರು ನೆಲದಾಳದಲ್ಲಿ ದೊರೆತಿದೆ !

ಎಂಬಂತ ಬಿಸಿ ಸುದ್ದಿ ಹಲವು ವರ್ಷಗಳಿಂದ ಜಗತ್ತಿನೆಲ್ಲೆಡೆ ಪಸರಿಸಿತ್ತು. ಹನಿ ನೀರಿಗಾಗಿ ಪರದಾಡುತ್ತಿರುವ ಇಂದಿನ ದಿನಗಳಲ್ಲಿ ಹೊಸದಾಗಿ ದೊರೆತ ಹೇರಳವಾದ ನೀರಿನ ಸೆಲೆ ಎಲ್ಲರನ್ನೂ ಸೆಳೆದಿತ್ತು. ಆದರೆ ಹಾಗೆ ದೊರೆತ ಸೆಲೆಯ ಆಳಕ್ಕೆ ಹೋಗುವುದು ಮತ್ತು ಅಲ್ಲಿಂದ ನೀರೆತ್ತಿ ನೆಲದ ಮೇಲ್ಗಡೆ ತರುವುದು ಈ ಹೊತ್ತಿಗಂತೂ ಆಗದ ಮಾತು ಅನ್ನುವಂತ ವಿಷಯ ಹಲವು ಮಂದಿಯ ಗಮನಕ್ಕೆ ಬರಲಿಲ್ಲವೆನ್ನಬಹುದು.

ಹೊಸ ನೀರಿನ ಸೆಲೆ ಎಟುಕದ ಕನ್ನಡಿಯಲ್ಲಿರುವ ಗಂಟಿನಂತಾದರೂ, ಈ ಹೊಸ ಕಂಡುಹಿಡಿಯುವಿಕೆ ನೆಲದಲ್ಲಿ ಕಡಲುಗಳು ಹೇಗೆ ಉಂಟಾದವು ಅನ್ನುವಂತ ಸಿಕ್ಕಲಾದ ಪ್ರಶ್ನೆಗೆ ಸರಿಯಾದ ಉತ್ತರ ನೀಡಲಿದೆಯೆಂದು ಅರಿಮೆಗಾರರು ಅಂದುಕೊಂಡಿದ್ದಾರೆ. ನೀರಿನ ಈ ಹೊಸ ಸೆಲೆಯತ್ತ ಹೋಗುವ ಮುನ್ನ ನಮ್ಮ ನೆಲದ ಆಳಕ್ಕೆ ಮೊದಲು ಇಳಿಯೋಣ ಬನ್ನಿ.

ನೆಲದ ಮೇಲ್ಮಯಲ್ಲಿ ಕಡಲು, ಬೆಟ್ಟಗಳು ಇರುವುದು ಕಣ್ಣಿಗೆ ಕಾಣಿಸುವಂತದು. ನೆಲದಲ್ಲಿ ನೀರಿನ ಪಾಲು ಮೂರುಪಟ್ಟಿದೆ ಅನ್ನುವುದು ಅದರ ಮೇಲ್ಮಯನ್ನು ತೆಗೆದುಕೊಂಡಾಗಷ್ಟೇ ದಿಟ, ಆದರೆ ಅದರ ಒಡಲಾಳದ ರಚನೆಯನ್ನು ತಿಳಿದುಕೊಂಡಾಗ ಅದರ ಇಡಿಯಾದ ಕಟ್ಟಣೆ ನಮ್ಮ ಅರಿವಿಗೆ ಬರಬಲ್ಲದು. ನೆಲದ ಒಟ್ಟಾರೆ ತೂಕಕ್ಕೆ ಹೋಲಿಸಿದಾಗ ನೀರಿನ ತೂಕ, ಅದರ ಪ್ರಮಾಣ ತುಂಬಾನೇ ಕಡಿಮೆ. ನೆಲದಾಳವು ಮುಖ್ಯವಾಗಿ ಕಬ್ಬಿಣದಂತಹ ಜಲ್ಲಿಯ ವಸ್ತುಗಳಿಂದ ಕೂಡಿದೆ.

ಹಿಂದಿನ ಬರಹವೊಂದರಲ್ಲಿ ನೆಲದ ದುಂಡಗಲವು ಸುಮಾರು 12,756 ಕಿ.ಮೀ. ಮತ್ತು ಅದರ ರಾಶಿಯು (mass) ಸುಮಾರು 5.98 x1024 kg ಇರುವುದನ್ನು ತಿಳಿದುಕೊಂಡಿದ್ದೆವು. ನೆಲದ ಮೇಲ್ಮಯಿಂದ ನೆಲದ ನಡುವು (center) ಸುಮಾರು 12,756/ = 6378 ಕಿ.ಮೀ. ಆಳದಲ್ಲಿದೆ.

ಅದರ ಒಟ್ಟು ರಾಶಿಯಲ್ಲಿ ಕಬ್ಬಿಣವು ಸುಮಾರು 32.1%, ಆಕ್ಸಿಜನ್ 30.1%, ಸಿಲಿಕಾನ್ 15.1%, ಮ್ಯಾಗ್ನೇಸಿಯಂ 13.9%, ಗಂದಕ 2.9%, ನಿಕೆಲ್ 1.8%, ಕ್ಯಾಲ್ಸಿಯಂ 1.5% ಮತ್ತು ಅಲ್ಯುಮಿನಿಯಂ 1.4% ರಷ್ಟಿದೆ. ಕೆಳಗಿನ ತಿಟ್ಟದಲ್ಲಿ ನೆಲದ ಒಟ್ಟಾರೆ ಸೀಳುನೋಟವನ್ನು ತೋರಿಸಲಾಗಿದೆ.

ನೆಲದ ಇಟ್ಟಳವನ್ನು (structure) ತೊಗಟೆ (0-35 km), ಮೇಲ್ ಹೊದಿಕೆ (35-60 km), ಹೊದಿಕೆ (35-2890 km), ಹೊರತಿರುಳು (2890-5150) ಮತ್ತು ಒಳತಿರುಳು (5150-6378 km) ಅಂತಾ ಗುರುತಿಸಲಾಗಿದೆ. ನೆಲದ ಒಳತಿರುಳು ಮತ್ತು ಹೊರತಿರುಳಿನ ಭಾಗ ತುಂಬಾ ದಟ್ಟಣೆ ಹೊಂದಿದ್ದು ಮುಖ್ಯವಾಗಿ ಕರಗಿದ ಕಬ್ಬಿಣದಿಂದ ಕೂಡಿದೆ. ಹೊದಿಕೆಯ ಭಾಗವು ಸಿಲಿಕೇಟ್ ಕಲ್ಲುಗಳಿಂದ ಕೂಡಿದ್ದು ಕಬ್ಬಿಣ ಮತ್ತು ಮ್ಯಾಗ್ನೇಸಿಯಂ ಜಲ್ಲಿಗಳನ್ನು ಒಳಗೊಂಡಿದೆ. ತೊಗಟೆಯ ಭಾಗವು ಕಡಲಾಳ, ಕಲ್ಲುಗಳು, ಜಲ್ಲಿಗಳಿಂದ ಕೂಡಿದೆ.

ನೆಲದ ಆಳದಲ್ಲಿ ತುಂಬಾನೇ ಒತ್ತಡ ಮತ್ತು ಬಿಸುಪಿರುವುದರಿಂದ ಅದರ ಆಳಕ್ಕೆ ಕೆಲವು ಕಿ.ಮೀ. ಗಳಷ್ಟೇ ಮನುಷ್ಯರು ಮಾಡಿದ ಸಲಕರಣೆಗಗಳು ಇಳಿಯಬಲ್ಲವು. ಹಾಗೆ ನೋಡಿದರೆ ಇಲ್ಲಿಯವರೆಗೆ ನೆಲದ ಮೇಲ್ಮಯಿಂದ ಮನುಷ್ಯರಿಗೆ ಕೊರೆಯಲು ಆದ ತೂತಿನ ಆಳ ಬರೀ 12.3 ಕಿ.ಮೀ. (ರಷ್ಯಾ ಕೈಗೊಂಡ ತೂತು ಕೊರೆಯುವ ಹಮ್ಮುಗೆ, 1989). ನೆಲದಾಳದಲ್ಲಿ ಸಲಕರಣೆಗಳನ್ನು ಇಳಿಸಲು ಆಗದಿದ್ದರೂ, ನೆಲದ ಇಟ್ಟಳವನ್ನು ಅರಿಮೆಯ ಇತರ ಚಳಕಗಳನ್ನು ಬಳಸಿ ಅರಿತುಕೊಳ್ಳಲಾಗುತ್ತದೆ. ಅಂತಹ ಅರಿಮೆಯ ಚಳಕದಲ್ಲಿ ಮುಕ್ಯವಾದದ್ದು ನಡುಕದರಿಮೆ (Seismology).

ಮುಖ್ಯವಾಗಿ ನೆಲದ ತೊಗಟೆಯ ಭಾಗದಲ್ಲಿ ಬಿಡುಗಡೆಯಾಗುವ ಹೇರಳವಾದ ಕಸುವಿನಿಂದಾಗಿ ‘ನೆಲನಡುಕಗಳು’ (earthquakes) ಉಂಟಾಗುತ್ತವೆ. ಹೀಗೆ ಉಂಟಾದ ನೆಲನಡುಕಗಳು ಹೊಮ್ಮಿಸುವ ನಡುಕದ ಅಲೆಗಳು (seismic waves), ನೆಲದ ಮೇಲ್ಮಯಿಂದ ಹಿಡಿದು ಅದರ ತಿರುಳಿನ ಭಾಗದವರೆಗೆ ತೂರಬಲ್ಲವು. ನಡುಕದ ಅಲೆಗಳ ಹರಡುವ ಬಗೆ, ಅವುಗಳ ವೇಗ, ನೆಲದ ಇಟ್ಟಳವನ್ನು ಮೇಲೆ ತಿಳಿಸಿರುವಂತೆ ಗುರುತಿಸಲು ನೆರವಾಗಿವೆ. ನಡುಕದ ಅಲೆಗಳು ಬೇರೆ ಬೇರೆ ವಸ್ತುಗಳಲ್ಲಿ ಬೇರೆಯಾದ ವೇಗದಿಂದ ಹರಡುತ್ತವೆ. ಒಣಕಲ್ಲಿನಂತಹ ರಚನೆಯಲ್ಲಿ ಅವುಗಳ ವೇಗ ಬೇರೆಯಾಗಿದ್ದರೆ ನೀರಿನಿಂದ ಕೂಡಿದ ಹಸಿಕಲ್ಲಿನಲ್ಲಿ ವೇಗವು ಬೇರೆಯಾಗಿರುತ್ತದೆ.

ಮುಮ್ಮಲೆಗಳು (Primary/P Waves) ಎಂದು ಗುರುತಿಸಲಾಗುವ ನಡುಕದಲೆಗಳ ಒಂದು ಬಗೆ, ಗಟ್ಟಿಯಾದ ಮತ್ತು ನೀರಿನ ರೂಪದಲ್ಲಿರುವ ವಸ್ತಗಳೆರಡಲ್ಲೂ ಸಾಗಬಲ್ಲವು. ಅದೇ ಇಮ್ಮಲೆಗಳು (Secondary/S Waves) ಎಂಬ ನಡುಕದಲೆಗಳು ಗಟ್ಟಿಯಾದ ವಸ್ತುಗಳಲ್ಲಷ್ಟೇ ಸಾಗಬಲ್ಲವು.

Picture1

ಹಾಗೆನೇ ನೀರಿನ ರೂಪ ಇಲ್ಲವೇ ಅದರ ಅಂಶವನ್ನು ಹೊಂದಿದ ವಸ್ತುಗಳಲ್ಲಿ ಸಾಗುವಾಗ ಮುಮ್ಮಲೆಗಳ ವೇಗ ಬದಲಾಗುವುದು ಅರಕೆಯಿಂದ ತಿಳಿದುಬಂದಿದೆ. ಈ ಅರಿವನ್ನು ಬಳಸಿಕೊಂಡೇ ಇತ್ತೀಚಿಗೆ ನೆಲದಾಳದಲ್ಲಿ ’ನೀರಿದೆ’ ಎಂಬುದನ್ನು ಅಂದಾಜಿಸಲಾಗಿದೆ. ಈಗ ನಮ್ಮ ಈ ಬರಹದ ಮುಖ್ಯ  ವಿಷಯ’ನೆಲದಾಳ’ದಲ್ಲಿ ನೀರಿನತ್ತ ಬಂದಂತಾಯಿತು.

ಅಮೇರಿಕಾದ ನಾರ್ತ್ ವೆಸ್ಟರ್ನ್ ಯೂನಿವರ್ಸಿಟಿಯ ನೆಲದಿರುವರಿಗ (geophysicist) ಸ್ಟೀವ್ ಜಾಕಬ್ಸನ್ (Steve Jacobsen) ಮತ್ತು ನ್ಯೂ ಮೆಕ್ಸಿಕೋ ಯೂನಿವರ್ಸಿಟಿಯ ನಡುಕದಲೆಯರಿಗ (seismologist) ಬ್ರಾಂಡನ್ (Brandon Schmandt) ಅವರು ನಡುಕದರಿಮೆ ಬಳಸಿ, ನೆಲದ ಮೇಲ್ಮೈಯಿಂದ ಸುಮಾರು 660 ಕಿ.ಮೀ. ಆಳದಲ್ಲಿ ನೀರಿನ ಬಿಡಿಕಣಗಳಿದ್ದು, ಅವುಗಳು ರಿಂಗ್‍ವುಡಯ್ಟ್ (Ringwoodite) ಎಂಬ ಹರಳು ರೂಪದಲ್ಲಿರುವ ವಸ್ತುವಿಗೆ ಅಂಟಿಕೊಂಡಿರುವುದಾಗಿ ತಿಳಿಸಿದ್ದಾರೆ.

ರಿಂಗ್‍ವುಡಯ್ಟ್ (ಅದನ್ನು ಕಂಡುಹಿಡಿದ ಅರಿಮೆಗಾರರ ಹೆಸರಿನಿಂದ ಕರೆಯಲಾಗುತ್ತಿದೆ), ನೆಲದಾಳದ ಹೊದಿಕೆಯ ಭಾಗದಲ್ಲಿ ಹೇರಳವಾಗಿ ಇರುವ ವಸ್ತುವೆಂದು ನಡುಕದಲೆಗಳ ಮೂಲಕ ಈ ಮುಂಚೆ ಅರಿಯಲಾಗಿತ್ತು. ರಿಂಗ್‍ವುಡಯ್ಟ್ ಮುಖ್ಯವಾಗಿ  ಕಬ್ಬಿಣ ಮತ್ತು ಮ್ಯಾಗ್ನೇಸಿಯ್ಂ ನಿಂದ ಕೂಡಿದ್ದು, ತನ್ನ ತೂಕದ 2.1% ರಷ್ಟು ನೀರನ್ನು ಹಿಡಿದುಕೊಳ್ಳಬಲ್ಲದು ಅಂತಾನೂ ತಿಳಿಯಲಾಗಿತ್ತು. ಆದರೆ ಇಲ್ಲಿಯವರೆಗೆ ನೆಲದಾಳದ ರಿಂಗ್‍ವುಡಯ್ಟ್ ಹರಳಿನಲ್ಲಿ ನಿಜವಾಗಲೂ ನೀರಿದೆಯೇ ಎಂದು ಗೊತ್ತಾಗಿರಲಿಲ್ಲ.

BlueRingwoodite

(ನೆಲದ ಒಡಲಾಳದ ಹೊದಿಕೆಯ ಭಾಗದಲ್ಲಿ ಕಂಡುಬರುವ ರಿಂಗ್‍ವುಡಯ್ಟ್ ಹರಳು)

ಇಲ್ಲಿಯವರೆಗೆ ಉಂಟಾದ ಸುಮಾರು 500 ನೆಲನಡುಕಗಳ (earthquakes) ಮಾಹಿತಿಗಳನ್ನು ಸ್ಟೀವ್ ಜಾಕಬ್ಸನ್ ಅವರು ಒರೆಗೆಹಚ್ಚಿ ನೋಡಿದಾಗ, ನಡುಕದಲೆಗಳ (seismic waves) ವೇಗ ಸುಮಾರು 660 ಕಿ.ಮೀ. ನೆಲದಾಳಕ್ಕೆ ತಲುಪಿದಾಗಲೆಲ್ಲಾ ಬೇರೆಯಾಗಿರುವುದು ಮತ್ತು ಆ ವೇಗ ಹಸಿ ರೂಪದಲ್ಲಿರುವ ರಿಂಗ್‍ವುಡಯ್ಟ್ ಹರಳುಗಳಿಗೆ ತಾಗಿದಾಗ ಪಡೆಯುವ ವೇಗಕ್ಕೆ ಸಾಟಿಯಾಗಿದೆ ಎಂದು ತೋರಿಸಿದ್ದಾರೆ. ಇದಕ್ಕಾಗಿ ಅವರು ಮತ್ತು ಬ್ರಾಂಡನ್ ತಮ್ಮ ಅರಕೆಮನೆಯಲ್ಲಿ ಹಸಿ ಮತ್ತು ಒಣ ರಿಂಗ್‍ವುಡಯ್ಟ್ ಹರಳುಗಳಿಗೆ ನಡುಕದಲೆಗಳನ್ನು ತಾಗಿಸಿದಾಗ ದೊರೆತ ವೇಗ ಮತ್ತು ನೆಲನಡುಕಗಳು ನೀಡಿದ ಮಾಹಿತಿಯನ್ನು ತಾಳೆಹಾಕಿ ಈ ನಿಲುವಿಗೆ ಬಂದಿದ್ದಾರೆ.

ಹೀಗೆ ನೆಲದಾಳದಲ್ಲಿ ಇಳಿಯದೇ ಅರಿಮೆಯ ಚಳಕಗಳನ್ನು ಬಳಸಿ ನೆಲದ ಒಡಲಾಳದಲ್ಲಿ ನೀರಿರುವುದನ್ನು ಅರಿಮೆಗಾರರು ತೋರಿಸಿದಂತಾಗಿದೆ. ನಮಗೆ ಕಂಡಿರುವ ಈ ಹೊಸ ನೀರು ಬಳಕೆಗೆ ಎಟುಕದಂತಿದ್ದರೂ, ನಮ್ಮ ನೆಲದ ಮೇಲ್ಮೈಯಲ್ಲಿ ಉಂಟಾಗಿರುವ ಕಡಲುಗಳ ಹುಟ್ಟಿನ ಕತೆ ಮತ್ತು ಒಟ್ಟಾರೆಯಾಗಿ ನೆಲದ ರಚನೆಯ ಬಗ್ಗೆ ನಮಗೆ ಸಾಕಷ್ಟು ತಿಳುವಳಿಕೆಯನ್ನು ಮುಂದಿನ ದಿನಗಳಲ್ಲಿ ನೀಡಲಿದೆ.

(ಮಾಹಿತಿ ಮತ್ತು ತಿಟ್ಟ ಸೆಲೆಗಳು: www.usatoday.com, scitechdaily.comwikipedia.org)

E20 ವರವೋ ಇಲ್ಲ ಶಾಪವೋ?

ಜಯತೀರ್ಥ ನಾಡಗೌಡ

E20 ವಿಚಾರಗಳು ಎಲ್ಲೆಡೆ ಮಾತುಕತೆಯ ವಿಷಯವಾಗಿದೆ. ಫೇಸ್‍ಬುಕ್, ಎಕ್ಸ್, ಲಿಂಕ್ಡ್‌ಇನ್ ನಂತಹ ಸಾಮಾಜಿಕ ಜಾಲತಾಣಗಳಿಂದ ಹಿಡಿದು ರಾಜಕೀಯವಲಯಗಳಲ್ಲೂ ಇದೇ ಪ್ರಮುಖ ವಿಷಯ. ಈ ಹೊತ್ತಿನ ವಿಷಯ ವಸ್ತುವಾಗಿರುವ E20 ಬಗ್ಗೆ ತಿಳಿಯೋಣ ಬನ್ನಿ.

ಏನಿದು E20?

ಇಥೆನಾಲ್‌ನ 20% ಪ್ರಮಾಣದಲ್ಲಿ ಪೆಟ್ರೋಲ್ ಉರುವಲಿನೊಂದಿಗೆ ಬೆರೆಸಿದರೆ ಅದೇ E20. ವಾಹನಗಳಲ್ಲಿ E20 ಬಳಸಿದರೆ ಕಾರ್ಬನ್ ನಂತ ನಂಜಿನ ಹೊಗೆಯ ಪ್ರಮಾಣ ಕಡಿಮೆ ಮಾಡಿ, ಮುಗಿದುಹೋಗಬಲ್ಲ ಉರುವಲಾದ ಪೆಟ್ರೋಲ್ ಮೇಲಿನ ಅವಲಂಬನೆ ಕಡಿತಗೊಳಿಸಬಹುದು.

ಇಥೈಲ್ ಆಲ್ಕೋಹಾಲ್‍ನ ಕಿರಿದಾಗಿಸಿ ಇಥೆನಾಲ್ ಎಂದು ಕರೆಯುತ್ತಾರೆ. ಇಥೆನಾಲ್ ಒಂದು ನೀರಿನಂತೆ ತಿಳಿಯಾಗಿರುವ (ಯಾವುದೇ ಬಣ್ಣವಿರುವುದಿಲ್ಲ), ತನ್ನದೇ ವಿಶೇಷ ವಾಸನೆ ಮತ್ತು ರುಚಿ ಹೊಂದಿರುತ್ತದೆ. ಚೊಕ್ಕವಾಗಿರುವ ಇಥೆನಾಲ್ ವಿಷಕಾರಿಯಲ್ಲ ಹಾಗೂ ಜೈವಿಕ ಸರಪಣಿಯಲ್ಲಿ ಸುಲಭವಾಗಿ ಒಡೆದು ಸೇರಿಹೋಗಬಲ್ಲ (Biodegradable) ರಾಸಾಯನಿಕ. ರಾಸಾಯನಿಕವಾಗಿ ಇದನ್ನು C2H5OH ಎಂದು ಬರೆಯಬಹುದು. ಇದರಲ್ಲಿ ಕಾರ್ಬನ್, ಹೈಡ್ರೋಜನ್ ಮತ್ತು ಆಕ್ಸಿಜನ್ ಅಣುಗಳು ಸೇರಿರುತ್ತವೆ. ಇಥೆನಾಲ್ ವಾತಾವರಣದಲ್ಲಿ ಸೋರಿಕೆಯಾದರೆ ಯಾವುದೇ ಅಪಾಯವೂ ಇರುವುದಿಲ್ಲ. ಆದರೆ ಉರುವಲಿನ ರೂಪದಲ್ಲಿರುವ ಇಥೆನಾಲ್‍ಗೆ ಡಿನಾಚ್ಯುರಂಟ್‌(Denaturant) ರಾಸಾಯನಿಕ ಸೇರಿಸುತ್ತಾರೆ, ಆದುದ್ದರಿಂದ ಇದು ಕುಡಿಯಲು ತಕ್ಕುದಲ್ಲ.

E20 ತಯಾರಿಸುವ ಬಗೆ:

ಸ್ಟಾರ್ಚ್ ಮತ್ತು ಸಕ್ಕರೆ ಪ್ರಮಾಣ ಹೊಂದಿರುವ ಕಬ್ಬು, ಮೆಕ್ಕೆಜೋಳ, ಗೋಧಿ, ಬಾರ್ಲಿ ಮುಂತಾದ ಬೆಳೆಗಳಿಂದ ಇಥೆನಾಲ್ ಪಡೆಯಬಹುದು. ಬೆಳೆಗಳನ್ನು ಹುದುಗೆಬ್ಬಿಸುವ(Fermentation) ಮೂಲಕ ಇಥೆನಾಲ್ ಪಡೆಯಬಹುದು. ದನಕರು, ಆಡು ಮೇಕೆ ಮುಂತಾದ ಸಾಕುಪ್ರಾಣಿಗಳಿಗೆ ನೀಡಲಾಗುವ ಬಾರ್ಲಿಯಂತ ಬೇಳೆಕಾಳುಗಳಿಗೆ ಯೀಸ್ಟ್, ಬ್ಯಾಕ್ಟೇರಿಯಾಗಳನ್ನು ಸೇರಿಸಿದಾಗ ಅವುಗಳಿಂದ ಹೆಚ್ಚಿನ ಪ್ರಮಾಣದ ಸಕ್ಕರೆ, ಸ್ಟಾರ್ಚ್ ಕೊಬ್ಬನ್ನು ಪಡೆಯಬಹುದು ಇದರಿಂದಲೇ ಇಥೆನಾಲ್ ಪ್ರಮಾಣ ಹೆಚ್ಚಿಸಬಹುದು. ಹೀಗೆ ಹುದುಗೆಬ್ಬಿಸುವಿಕೆಯಿಂದ ಪಡೆದಂತಹ ಇಥೆನಾಲ್ ಜೊತೆಗೆ ನೀರು, ಇತರೆ ವಸ್ತುಗಳು ಸೇರಿರುತ್ತವೆ. ಇವುಗಳಿಂದ ಇಥೆನಾಲ್‌ಅನ್ನು ವಿಂಗಡಿಸಲು ಬಟ್ಟಿ ಇಳಿಸುವಿಕೆ(Distillation) ಮಾಡಲಾಗುತ್ತದೆ. ಇದರಿಂದಲೂ ಚೊಕ್ಕ ಇಥೆನಾಲ್ ಸಿಗದೇ ಇದ್ದಾಗ ನೀರಿಳಿತ(Dehydration) ಮಾಡಿ ಇಥೆನಾಲ್ ಅನ್ನು ಹೊರತೆಗೆಯಲಾಗುತ್ತದೆ. ಈ ರೀತಿ ಸಿಗುವ ಇಥೆನಾಲ್‌ಗೆ ಪೆಟ್ರೋಲ್ ಉರುವಲನ್ನು ಅಳತೆಗೆ ತಕ್ಕಂತೆ ಅಂದರೆ E10,E15 ಮತ್ತು E20 ಮಿಶ್ರಣ ಬೆರೆಸಿ ಉರುವಲನ್ನು ಬಳಕೆಗೆ ತಕ್ಕುದಾಗಿರುವಂತೆ ಮಾಡುತ್ತಾರೆ. 

E20 ವರವೋ ಇಲ್ಲ ಶಾಪವೋ?

ಈ20 ಪೆಟ್ರೋಲ್‌ದಿಂದ ಅನುಕೂಲವೋ ಇಲ್ಲವೇ ಅನಾನುಕೂಲವೋ ಎಂಬುದು ಹಲವರಿಗೆ ಪ್ರಶ್ನೆಯಾಗಿಯೇ ಉಳಿದಿದೆ. ಹಲವಾರು ಗಾಡಿ ಓಡಿಸುಗರು, ಮಾಲೀಕರು ಈ20 ಪೆಟ್ರೋಲ್ ಬಳಸಬೇಕೆ ಇಲ್ಲವೇ ಎಂಬ ಗೊಂದಲದಲ್ಲಿದ್ದಾರೆ. ಈ20 ಉರುವಲು ಬಳಸಿ ಓಡಾಡುತ್ತಿರುವ ಹಲವು ಕಾರುಗಳ ಮಾಲೀಕರು ಕಡಿಮೆ ಮೈಲಿಯೋಟ, ಬಿಣಿಗೆಯ(Engine) ಬಾಳಿಕೆ-ತಾಳಿಕೆ ಕುರಿತು ಅಸಮಾಧಾನವನ್ನು ಹೊರಹಾಕಿದ್ದಾರೆ. ಇದನ್ನು ಕೊಂಚ ಆಳಕ್ಕಿಳಿದು ನೋಡೋಣ.

ಏಪ್ರಿಲ್ 2023ರಲ್ಲಿ ಭಾರತದ ಆಯ್ದ ನಗರಗಳಲ್ಲಿ ಈ20 ಉರುವಲಿನ ಬಳಕೆಗೆ, ಭಾರತ ಸರಕಾರ ಶುರುಮಾಡಿತ್ತು. ಭಾರತದೆಲ್ಲೆಡೆ ಇದೇ ವರ್ಷದ ಏಪ್ರಿಲ್ ನಿಂದ ಈ20 ಉರುವಲಿನ ಬಳಕೆಯನ್ನು ಕಡ್ಡಾಯಗೊಳಿಸಲಾಗಿತ್ತು. ಬೇಗನೇ ಈ20 ಬಳಕೆಯನ್ನು ಅಳವಡಿಸಿಕೊಳ್ಳಲು ಮೊದ-ಮೊದಲು ವಾಹನ ಮತ್ತು ಬಿಡಿಭಾಗಗಳ ತಯಾರಕರು ಹಿಂದೇಟುಹಾಕಿದ್ದರು. ಕಾರಣ, ಕಡಿಮೆ ಹೊತ್ತಿನಲ್ಲಿ ಬಿಣಿಗೆ ಮತ್ತು ವಾಹನಗಳನ್ನು ಓರೆಗೆ ಹಚ್ಚಿ, ಬಿಡಿಭಾಗಗಳನ್ನು ಪರೀಕ್ಷಿಸಿ ಅವುಗಳ ತಾಳಿಕೆ ಬಾಳಿಕೆಯ ಬಗ್ಗೆ ಮಾಹಿತಿ ಕಲೆಹಾಕಲಾಗದೆಂದು ಒತ್ತಾಯಿಸಿದ್ದರು.

ಪೆಟ್ರೋಲ್‍ನೊಂದಿಗೆ ಇಥೆನಾಲ್ ಬೆರಸಿದಾಗ ಅಂದರೆ ಈ20 ಯಿಂದಾಗುವ ಅನುಕೂಲಗಳು:

  1. ಹೇರಳವಾದ ಆಕ್ಸಿಜನ್ ಹೊಂದಿರುವ ಇಥೆನಾಲ್ ಮಿಶ್ರಣ ಹೆಚ್ಚಿನ ಆಕ್ಟೇನ್ ನಂಬರ್ (Octane Number-RON) ಪಡೆದಿದೆ. ಇದರಿಂದ ಬಿಣಿಗೆಯೊಳಗೆ ಉರುವಲು ಚೆನ್ನಾಗಿ ಉರಿದು ಕಡಿಮೆ ಕಾರ್ಬನ್, ಇತರೆ ಹೊಗೆ ಹೊರಸೂಸುತ್ತದೆ. ಇದು ಪರಿಸರ ಹೆಚ್ಚು ಹಸನಾಗಿಡುತ್ತದೆ.
  2. ಹೆಚ್ಚಿನ ಆಕ್ಟೇನ್ ನಂಬರ್ ಹೊಂದಿರುವ ಈ20ಯಿಂದ, ಪೆಟ್ರೋಲ್ ಬಿಣಿಗೆಗಳಲ್ಲಿ ಕಂಡುಬರುವ ನಾಕಿಂಗ್(Knocking) ಸಮಸ್ಯೆಯನ್ನು ಕಡಿತಗೊಳಿಸುತ್ತದೆ. ಇದರಿಂದ ಬಿಣಿಗೆಯ ಬಾಳಿಕೆಯು ಹೆಚ್ಚಲಿದೆ.
  3. ಸಾಮಾನ್ಯ ಪೆಟ್ರೋಲ್ ಬದಲು 80% ಪೆಟ್ರೋಲ್ ಮತ್ತು 20% ಇಥೆನಾಲ್ ಬಳಕೆಯಿಂದ, ಹೆಚ್ಚಿನ ಪೆಟ್ರೋಲ್ ಮೇಲಿನ ಅವಲಂಬನೆ ಮತ್ತು ಪೆಟ್ರೋಲ್ ಆಮದಿನ ಮೇಲೆ ಭಾರತದ ಹೊರೆ ತಪ್ಪುತ್ತದೆ. ಇದರಿಂದ ಸರಕಾರಕ್ಕೆ ಕೋಟ್ಯಾಂತರ ಹಣದ ಉಳಿತಾಯವಾಗಲಿದೆ.
  4. ಇಥೆನಾಲ್ ದೇಶದಲ್ಲೇ ತಯಾರಿಸಬಹುದು, ಇದರಿಂದ ದೇಶದೊಳಗಿನ ಇಥೆನಾಲ್ ಕೈಗಾರಿಕೆಗೆ ಹುರುಪು ತುಂಬುವುದಲ್ಲದೇ ದೇಶದ ಹಣಕಾಸಿಗೆ ಲಾಭ ತರಲಿದೆ.
  5. ದೇಶೀಯ ಕೃಷಿ ಆಧಾರಿತ ಕೈಗಾರಿಕೆಗೆ ಬೆಂಬಲ ನೀಡುವುದರಿಂದ ಹೆಚ್ಚಿನ ಕೆಲಸಗಳು ಹುಟ್ಟುಕೊಳ್ಳುವುದಲ್ಲದೇ ಹಳ್ಳಿ-ಹೋಬಳಿ ಮಟ್ಟದ ಆರ್ಥಿಕತೆಯನ್ನು ಬಲಪಡಿಸಲಿದೆ.

ಅನಾನುಕೂಲಗಳು:

  1. ಈಗ ರಸ್ತೆಯಲ್ಲಿ ಓಡಾಡುವ ಎಲ್ಲ ಪೆಟ್ರೋಲ್ ಬಂಡಿಗಳು ಈ20 ಬಳಕೆಗೆ ತಕ್ಕುದಾಗಿಲ್ಲ. 2023ಕ್ಕಿಂತಲೂ ಹಳೆಯದಾದ ಗಾಡಿಗಳು ಸಾಕಷ್ಟಿವೆ. ಆದ್ದರಿಂದ ಎಲ್ಲ ಗಾಡಿಗಳಿಗೆ ಈ20 ಉರುವಲನ್ನು ಬಳಕೆ ಮಾಡಲಾಗದು. ಹಳೆಯ ಗಾಡಿಗಳು ಈ20 ಉರುವಲಿಗೆ ತಕ್ಕ ಬಿಡಿಭಾಗಗಳನ್ನು ಪಡೆದಿಲ್ಲ. ಹಳತಾದ ಗಾಡಿಗಳಿಗೆ ಈ20 ಉರುವಲು ಬಳಸುವುದು ಸರಿಯಲ್ಲ.
  2. ತುಕ್ಕು ಹಿಡಿಯುವಿಕೆಯ ಸಮಸ್ಯೆ: ಇಥೆನಾಲ್ ತನ್ನದೇಯಾದ ರಾಸಾಯನಿಕ ಗುಣಗಳನ್ನು ಹೊಂದಿದೆ, ಇದಕ್ಕೆ ತಕ್ಕಂತ ಉರುವಿಲಿನ ಕೊಳವೆ/ಕೊಳಾಯಿ (fuel tank/pipes) ಮುಂತಾದ ಬಿಡಿಭಾಗಗಳನ್ನು ಮಾರ್ಪಡಿಸಬೇಕು. ಇಲ್ಲದೇ ಹೋದಲ್ಲಿ ಬಿಡಿಭಾಗಗಳು ಬೇಗನೇ ಹಾಳಗುವ ಸಾಧ್ಯತೆಯಿರುತ್ತದೆ.
  3. ಇಥೆನಾಲ್ ಹೆಚ್ಚು ತೇವಾಂಶ ಹೀರಿಕೊಳ್ಳುವ ಗುಣಹೊಂದಿದೆ. ಇದೇ ಕಾರಣಕೆ, ಮೇಲೆ ಹೇಳಿದಂತೆ ಇದು ತುಕ್ಕು ಹಿಡಿಯಲು ನೆರವಾಗುತ್ತದೆ. ಇದರಿಂದ ಕೇವಲ ಲೋಹದ ಬಿಡಿಭಾಗಗಳಷ್ಟೇ ಅಲ್ಲದೇ, ಪ್ಲ್ಯಾಸ್ಟಿಕ್, ರಬ್ಬರ್ ಭಾಗಗಳು ಸವೆದು, ಬಿರುಕು ಮೂಡಲಾರಂಭಿಸಿ ಹಾಳಾಗುತ್ತವೆ.
  4. ಇಥೆನಾಲ್ ತಯಾರಿಸಲು ಕಬ್ಬು, ಮೆಕ್ಕೆಜೋಳದಂತ ಬೆಳೆಗಳು ಬೇಕು. ಹೆಚ್ಚಿನ ಇಳುವರಿ ಪಡೆಯಲು ರೈತರು  ಹೆಚ್ಚಿನ ರಸಗೊಬ್ಬರ, ಕೀಟನಾಶಕಗಳನ್ನು ಬಳಸಿ ಹೊಲಗದ್ದೆಗಳಿಗೆ ಹೆಚ್ಚಿನ ಹಾನಿ ಮಾಡುವುದಲ್ಲದೇ, ವಾತಾವರಣದ ಮಾಲಿನ್ಯಕ್ಕೆ ಕಾರಣವಾಗಬಹುದು. ಇದು ಮಣ್ಣಿನ ಸವಕಳಿಯನ್ನು ಇಮ್ಮಡಿಗೊಳಿಸುವ ಅಪಾಯ ತಂದೊಡ್ಡಲಿದೆ.
  5. ಇಥೆನಾಲ್ ಬಳಕೆಗೆ ತಕ್ಕಂತ ಸೌಲಭ್ಯಗಳನ್ನು ಬೆಳವಣಿಗೆಗೊಳಿಸುವುದು ಸುಲಭವಲ್ಲ. ಇಥೆನಾಲ್ ತಯಾರಿಸಿ, ಕೂಡಿಡಲು ಕೊಳಾಯಿಗಳು, ಅದನ್ನು ಸಾಗಿಸಲು ಹಳ್ಳಿಯಿಂದ ದಿಲ್ಲಿಯವರೆಗೆ ನಳಿಕೆ/ಕೊಳವೆಗಳ ಸಂಪರ್ಕ ಜಾಲವನ್ನು ಬೆಳವಣಿಗೆ ಮಾಡಲು ಸಾವಿರಾರು ಕೋಟಿ ಹಣಬೇಕು. ಇದು ದೇಶದ ಬೊಕ್ಕಸಕ್ಕೆ ಹೊರೆಯಾಗುವುದು.
  6. ಇನ್ನೊಂದು ಪ್ರಮುಖ ಅನಾನುಕೂಲವೆಂದರೆ, ಇಥೆನಾಲ್ ಒಳ್ಳೆಯ ಕರುಗುಕ(solvent). ಇದು ಉರುವಲು ಚೀಲದಲ್ಲಿರುವ ಕಸಕಡ್ಡಿಗಳನ್ನು ಕರಗಿಸಿಕೊಂಡಿರುತ್ತದೆ. ಇದು ಮುಂದೆ ಚಿಮ್ಮುಕ(Nozzle), ಸೋಸುಕಗಳನ್ನು(Filter) ಸೇರಿ, ಅವುಗಳಿಗೆ ಅಡ್ದಿಯಾಗುತ್ತದೆ. ಇದು ಗಾಡಿಯ ಮೈಲಿಯೋಟ ಮೇಲೆ ಪರಿಣಾಮ ಬೀರುವುದಲ್ಲದೇ, ಗಾಡಿಯನ್ನು ಪದೇ ಪದೇ ನೆರವುತಾಣಗಳಿಗೆ ಕೊಂಡೊಯ್ದು ಸೋಸುಕ ಮುಂತಾದವುಗಳನ್ನು ಸ್ವಚ್ಚಗೊಳಿಸಬೇಕಾಗುತ್ತದೆ.

ನಮ್ಮದು ಈಗಾಗಲೇ ಒಂದು ಬಂಡಿಯಿದ್ದರೆ ಏನು ಮಾಡಬೇಕು? ಈ20 ಉರುವಲು ಬಳಸಬೇಕೆ ಬೇಡವೇ?

  1. ನಮ್ಮ ಗಾಡಿಯ ಜೊತೆಗೆ ನೀಡಲಾಗಿರುವ ಕೈಪಿಡಿಯನ್ನು ಓದಿ, ಯಾವ ಉರುವಲು ಬಳಸಬೇಕು ಎಂಬುದನ್ನು ತಿಳಿದುಕೊಳ್ಳಿ. ಹೆಚ್ಚಿನ ಅನುಮಾನಗಳಿದ್ದಲ್ಲಿ, ಹತ್ತಿರದ ಮಾರಾಟ ಮಳಿಗೆಗೆ ಭೇಟಿ ನೀಡಿ ಪೂರ್ತಿ ವಿವರ ಪಡೆದು ಕೊಳ್ಳಬೇಕು.
  2. ಗಾಡಿಯು ಈ20 ಉರುವಲಿಗೆ ತಕ್ಕದಾಗಿಲ್ಲವಾದರೆ, ಈ ಉರುವಲನ್ನು ಬಳಸುವುದು ಬೇಡ. ಹಲವು ಗಾಡಿ ತಯಾರಕರು ಹಳೆಯ ಗಾಡಿಗಳನ್ನು ಈ20ಗೆ ತಕ್ಕಂತೆ ಮಾರ್ಪಾಡಿಸುವ ಕೆಲಸದಲ್ಲಿದ್ದಾರೆ. ಅವರನ್ನು ಸಂಪರ್ಕಿಸಿ, ಮಾಹಿತಿ ಪಡೆದು, ಮಾರ್ಪಡಿಸಿದ ನಂತರ, ತಯಾರಕರ ಸಲಹೆಯಂತೆ ಈ20 ಉರುವಲಿನ ಬಳಕೆ ಮಾಡಬಹುದು.

ಈ20ಗೆ ಮಾರ್ಪಾಡಿಸಲು ಬಂಡಿ ತಯಾರಕರು ಬಂಡಿಯಲ್ಲಿ ಯಾವ ರೀತಿಯ ಬದಲಾವಣೆಗಳು ಇರಲಿವೆ.

  1. ಮೊದಲನೇಯದಾಗಿ ಉರುವಲನ್ನು ಹೊತ್ತೊಯ್ಯುವ ಕೊಳವೆ, ಉರುವಲು ಚೀಲ(Fuel Tank), ಚಿಮ್ಮುಕ, ಬಿಣಿಗೆಯಲ್ಲಿ ಉರುವಲು ಏರ್ಪಾಟಿನ ವಿವಿಧ ಭಾಗಗಳು ಮಾರ್ಪಡಿಸಲಾಗುತ್ತದೆ.
  2. ಉರುವಲು ಏರ್ಪಾಟಿನಲ್ಲಿ ಬಳಸಲಾಗುವ ರಬ್ಬರ್, ಪ್ಲ್ಯಾಸ್ಟಿಕ್ ಮುಂತಾದ ಸವೆದು ಹೋಗುವ ಭಾಗಗಳು ಬದಲಾಯಿಸಿ ಈ20ಗೆ ತಕ್ಕಂತೆ ಮರು ಈಡುಗಾರಿಕೆ ಮಾಡುತ್ತಾರೆ.
  3. ಬಂಡಿಯಲ್ಲಿ ಬಳಸಲಾಗುವ ಆಕ್ಸಿಜನ್ ಅರಿವಿಕ(O2 Sensor), ಉರುವಲಿನ ಅರಿವಿಕಗಳನ್ನು(Fuel Sensor) ಮರು ಈಡುಗಾರಿಕೆ ಮಾಡಿಯೋ ಇಲ್ಲವೋ ಉರುವಲಿಗೆ ತಕ್ಕಂತೆ ಮರು ತಿಡಿ/ತಿದ್ದುಪಡಿ ಮಾಡಿ, ಬಿಣಿಗೆಯ ಗಣಕದೊಂದಿಗೆ ಸರಿಹೊಂದಿಸುತ್ತಾರೆ (Calibration).
  4. ಇವೆಲ್ಲ ಮುಗಿದ ಮೇಲೆ, ಮಾರ್ಪಾಡುಗೊಂಡ ಬಿಣಿಗೆ ಮತ್ತು ಬಂಡಿಗಳನ್ನು ವಿವಿಧ ರೀತಿಯಾಗಿ ನೂರಾರು ಗಂಟೆಗಳ ಕಾಲ ಓರೆಗೆ ಹಚ್ಚಿ ಎಲ್ಲವೂ ನೆಟ್ಟಗೆ ಕೆಲಸ ಮಾಡಲಾಗುತ್ತಿದೆಯೇ ಎನ್ನುವುದನ್ನು ತಿಳಿದುಕೊಳ್ಳುತ್ತಾರೆ.

 

ಈ20 ಉರುವಲನ್ನು ಬಳಸುವ ಮುನ್ನ, ನಿಮ್ಮ ಬಂಡಿ ತಯಾರಕರು ನೀಡಿರುವ ಬಳಕೆಯ ಸಲಹೆ-ಸೂಚನೆ ಗಳನ್ನು ತಿಳಿದುಕೊಂಡು ಮುಂದುವರೆಯುವುದು ಒಳ್ಳೆಯದು.

ಕರೆಂಟ್ ಶಾಕ್ – ಏನಿದರ ಹಿನ್ನೆಲೆ?

ಹರ್ಷಿತ್ ಮಂಜುನಾಥ್.

electric shock

ನೀವೊಂದು ಗಾದೆ ಕೇಳಿರಬಹುದು.

ಬಟ್ಟೆ ಮುಳ್ಳಿನ ಮೇಲೆ ಬಿದ್ದರು, ಮುಳ್ಳೇ ಬಟ್ಟೆಯ ಮೇಲೆ ಬಿದ್ದರೂ ಹರಿಯುವುದು ಬಟ್ಟೆಯೇ!

ಈ ಗಾದೆಗೂ ಮಾನವನಿಗೂ ಮಿಂಚುಹೊಡೆತಕ್ಕೂ (Electric shock) ತುಂಬಾ ಹೊಂದಾಣಿಕೆಯಿದೆ. ಅಂದರೆ ಮನುಷ್ಯನ ಮಯ್ಯಿಗೆ ಮಿಂಚು ತಗಲಿದರೂ, ಮಿಂಚಿಗೆ ಮಯ್ಯಿ ತಗುಲಿದರೂ ಮಿಂಚುಹೊಡೆತಗಳು ಅನುಭವವಾಗುವುದು ಮನುಷ್ಯನಿಗೆ.  ಮಯ್ ತೊಗಲು, ಹುರಿಕಟ್ಟು(Muscle), ಕೂದಲು ಸೇರಿದಂತೆ ಮನುಷ್ಯನ ಅಂಗಗಳು ಮಿಂಚಿನ ಹರಿವಿಗೆ ತಗಲುವುದರಿಂದ ಮಿಂಚುಹೊಡೆತಗಳು ಏರ್ಪಡುತ್ತವೆ.

ಸಾಮಾನ್ಯವಾಗಿ ಮನುಷ್ಯನ ಗಮನಕ್ಕೆ ಬರಬಲ್ಲ ಮಿಂಚು, ಮಿಂಚಿನ ನೇರ ಹರಿವು(Direct current) ಅತವಾ ಬದಲಿ ಹರಿವು (Alternate current) ಮತ್ತು ಸಲದೆಣಿಕೆ(Frequency)ಯನ್ನು ನೆಚ್ಚಿಕೊಂಡಿರುತ್ತದೆ. ಆದರೆ ಕೆಲವೊಮ್ಮೆ ಸಣ್ಣ ಪ್ರಮಾಣದ ಮಿಂಚು ಮನುಷ್ಯನ ಗಮನಕ್ಕೆ ಬಾರದೆಯೂ ಇರಬಹುದು. ಅಷ್ಟಕ್ಕೂ ಮಯ್ಯಿಗೆ ಮಿಂಚು ತಗುಲಿದೊಡನೆ ಮಯ್ಯಿ ಮಿಂಚನ್ನು ಏಕೆ ಸೆಳೆದುಕೊಳ್ಳುತ್ತದೆ? ಮಿಂಚು ಮನುಷ್ಯನ ಮಯ್ಯ ಮೇಲೆ ಹರಿದಾಡಲು ನೆರವಾಗಬಲ್ಲ ಅಂಶಗಳೇನು? ಮತ್ತು ಮಿಂಚೊಡೆತಗಳು ಮನುಷ್ಯನ ಬದುಕಿಗೆ ಹೇಗೆ ಕುತ್ತು ತರುತ್ತವೆ? ಎಂಬುದನ್ನು ಮುಂದೆ ತಿಳಿಯೋಣ.

ಮನುಷ್ಯನ ಮಯ್ಯಿಗೆ ಮಿಂಚು ತಗಲಿದೊಡನೆ ಮಯ್ಯಿ ಮಿಂಚನ್ನು ಸೆಳೆದುಕೊಳ್ಳಲು ಮುಕ್ಯ ಕಾರಣ ರಾಸಾಯನಿಕ ಕಸುವು (Chemical energy). ಇದು ಮಯ್ಯಿಯ ಒಳಗಡೆ ಏರ್ಪಡುವ ಸೀರಕೂಟಗಳು (Atoms)  ಮತ್ತು ಅಣುಕೂಟಗಳ (Molecules) ಪ್ರತಿಕ್ರಿಯೆಯಿಂದ (Reactions) ಏರ್ಪಡುತ್ತದೆ.

  • ನಾವು ಸೇವಿಸುವ ಕೆಲವು ಆಹಾರ ಹೊಟ್ಟೆಯೊಳಗೆ ಕರಗುವ ಹೊತ್ತಿನಲ್ಲಿ ಆಹಾರಗಳಲ್ಲಿರುವ ಅಣುಕೂಟಗಳು ಚಿಕ್ಕ ಚಿಕ್ಕ ಅಣುಕೂಟಗಳಾಗಿ ಬೇರ್ಪಡುತ್ತವೆ. ಈ ಅಣುಕೂಟಗಳು ಮನುಷ್ಯನ  ಮಯ್ಯೊಳಗೆ ಉಸಿರುಗಾಳಿ(O2-Oxygen), ಸೋಡಿಯಂ (Na-Sodium), ಪೊಟ್ಯಾಶಿಯಂ  (K-Potassium), ಮತ್ತು ಬೇರುಸುಣ್ಣ(Ca-Calcium) ನಂತಹ ಬೇರಡಕಗಳನ್ನು (Elements) ಕಟ್ಟಿಕೊಡುತ್ತದೆ.
  • ಅಲ್ಲದೇ ಇವೆಲ್ಲಕ್ಕೂ ಅದರದ್ದೇ ಆದ ಮಿಂಚಿನ ಹುರುಪು (Electrical charge) ಇರುತ್ತದೆ. ಅಂದರೆ ಇವುಗಳಲ್ಲಿ ಗೊತ್ತುಮಾಡಿದ ಎಣಿಕೆಯ ಕೊಡುವಣಿಗಳು (Protons), ನೆಲೆವಣಿಗಳು (Neutrons) ಮತ್ತು ಕಳೆವಣಿಗಳು (Electrons) ಇರುತ್ತವೆ. ಇಂತಹ ಮಿಂಚಿನ ಹುರುಪುಗಳು ಕೂಡು-ಹುರುಪು (Positive charge) ಆಗಿರಲೂಬಹುದು ಅತವಾ ಕಳೆ-ಹುರುಪು(Negative charge) ಆಗಿರಲೂಬಹುದು, ಒಟ್ಟಿನಲ್ಲಿ ಇವು ಅಣುಕೂಟಗಳೊಂದಿಗೆ ಪ್ರತಿಕ್ರಿಯಿಸುತ್ತದೆ.
  • ಇಂತಹ ಕ್ರಿಯೆಯನ್ನು ಅಣು ಕೂಡಿಕೆ (Nuclear fusion) ಎನ್ನುವರು, ಮತ್ತು ಈ ಪ್ರಕ್ರಿಯೆಗಳು ಮಿಂಚು ಹರಿಯಲು ಬೇಕಾದ ಕಸುವನ್ನು ಹುಟ್ಟುಹಾಕುತ್ತದೆ.

ಹೀಗೆ ಮಿಂಚು ಮಯ್ಯ ಒಳಗಡೆಗೆ ಹರಿಯಲು ಬೇಕಾದ ಅಂಶಗಳು ಮಯ್ಯಲ್ಲಿರುವುದರಿಂದ ಮಿಂಚು ಮಯ್ಯೊಳಗೆ ಹರಿದು ಮಿಂಚೊಡೆತದ ಅರಿವು ನಮಗಾಗುತ್ತದೆ. ಇಂತಹ ಮಿಂಚುಹೊಡೆತಗಳು ಸಾವು ತರಲೂಬಹುದು. ಹೀಗೆ ಮಿಂಚಿನಿಂದಾಗುವ ಸಾವನ್ನು ಮಿಂಮಡಿತ (Electrocution) ಎನ್ನುವರು. ಆದರೆ ನಿಮಗೆ ತಿಳಿದಿರಲಿ, ಹೆಚ್ಚಿನ ಮಿಂಚೊಡೆತದ ಸಾವುಗಳು ಮಿಂಚಿನ ಬದಲಿ ಹರಿವಿನಿಂದ ಆಗುತ್ತದೆ. ಮತ್ತು ಹೆಚ್ಚಾಗಿ 500 ವೋಲ್ಟ್ ಗಿಂತಲೂ ಕಡಿಮೆ ಹರಿವಿನಿಂದ ಆಗುತ್ತದೆ. ಅಂದ ಮಾತ್ರಕ್ಕೆ ಹೆಚ್ಚು ವೋಲ್ಟ್ ಇರುವ ಮಿಂಚೊಡೆತ ಅಪಾಯಕಾರಿಯಲ್ಲ ಎಂದಲ್ಲ. ಇಲ್ಲಿ ಮನುಷ್ಯನ ಮಯ್ಯಲ್ಲಿರುವ ತಡೆತ(Resistance) ಹೆಚ್ಚಿನ ಪಾತ್ರವಹಿಸುತ್ತದೆ.

ಅಂದರೆ ಮಯ್ಯ ಒಣಬಾಗಕ್ಕೆ ಮಿಂಚು ತಗುಲಿದರೆ ಮಯ್ಯೊಳಗೆ ಹರಿಯಬಲ್ಲ ಮಿಂಚಿನ ಸಾಧ್ಯತೆಗಿಂತ, ತಂಪಿನ ಭಾಗಕ್ಕೆ ಮಿಂಚು ತಗುಲಿದರೆ ಮಿಂಚೊಡೆತ ಆಗುವ ಸಾಧ್ಯತೆ ಹೆಚ್ಚಿರುತ್ತದೆ. ಕಾರಣ ಒಣಭಾಗಕ್ಕೆ ಹೆಚ್ಚಿನ ತಡೆತವಿರುತ್ತದೆ. ಹಾಗಾಗಿ ಇದು ಅಷ್ಟು  ಬೇಗನೆ ಮಿಂಚನ್ನು ತನ್ನೊಳಗೆ ಬಿಟ್ಟುಕೊಳ್ಳುವುದಿಲ್ಲ. ಆದರೆ ತಂಪಿರುವ ಭಾಗಕ್ಕೆ ತಡೆತ ಕಡಿಮೆ ಇರುವುದರಿಂದ ಬೇಗನೆ ಮಿಂಚು ಮಯ್ಯೊಳಗೆ ಹರಿಯುತ್ತದೆ. ಮಿಂಚು ಮನುಷ್ಯನ ಮಯ್ಯ ಯಾವುದೇ ಬಾಗಕ್ಕೆ ತಾಕಿದರೂ ಆ ಭಾಗವನ್ನು ಹಾನಿಗೊಳಿಸುತ್ತದೆ. ಹಾಗಾಗಿ ಮಿಂಚೊಡೆತದಿಂದ ಗಾಯಗಳಾಗುವುದು ಸಹಜ.

ಆದರೆ ಇಲ್ಲಿ ನಾವು ಕೆಲವು ವಿಷಯಗಳನ್ನು ಗಮನಿಸಬೇಕು.

  • ಮಿಂಚೊಡೆತ ನಡೆದಾಗ ಎಷ್ಟು ಆಂಪ್ (Amp) ಮಿಂಚು ಒಳಹರಿವಾಗಿದೆ.
  • ಮಯ್ಯಲ್ಲಿ ಮಿಂಚು ಹರಿದಾಡುವ ದಾರಿ
  • ಮಯ್ಯಿ ಮಿಂಚಿಗೆ ಸೋಕಿರುವ ಒಟ್ಟು ಹೊತ್ತು.

ಮಿಂಚೊಡೆತದಿಂದ ಮಯ್ಯಲ್ಲಿ ಆಗಬಹುದಾದ ಅರಿದಾದ (important) ತೊಂದರೆಗಳೆಂದರೆ,
i. ಮಯ್ ಸುಡುವಿಕೆ (burns): ಮಿಂಚಿನ ಹರಿವಿಗೆ  ಮಯ್ ಒಡ್ಡುವ ತಡೆತದಿಂದಾಗಿ (resistance) ಹೊಮ್ಮುವ ಬಿಸುಪು (heat) ಗೂಡುಕಟ್ಟುಗಳನ್ನು (tissues) ಸುಡುತ್ತದೆ.
ii. ಗುಂಡಿಗೆಯ ತೊರೆಗೋಣೆಗಳಏರ್ಪಡಿತವನ್ನು ಉಂಟುಮಾಡುತ್ತದೆ (ventricular fibrillation).
iii. ಮಿಂಚು ತನ್ನ ಹರಿವಿನ ಹಾದಿಯಲ್ಲಿ ಬರುವು ನರಗಳಿಗೂ ಹಾನಿಯನ್ನುಂಟು ಮಾಡುವ ಅಳವನ್ನು ಹೊಂದಿದೆ.

ಮಿಂಚೊಡೆತದಿಂದ ಮಯ್ಯಲ್ಲಿ ಉಂಟಾಗುವ ಏರು-ಪೇರುಗಳು ಮನುಷ್ಯರನ್ನು ಸಾವಿನ ದವಡಿಗೂ ನೂಕಬಹುದು. ಹೀಗೆ ಮಿಂಚೊಡೆತದಿಂದ  ಆಗುವು ಸಾವನ್ನು ‘ಎಲೆಕ್ಟ್ರಿಕ್ಯೂಶನ್’ ಎಂದು ಹೇಳಲಾಗುತ್ತದೆ. ಕನ್ನಡದಲ್ಲಿ ಇದನ್ನು ‘ಮಿಂಮಡಿತ’ ಎಂದು ಹೇಳಬಹುದು. ‘ಎಲೆಕ್ಟ್ರಿಕ್ಯೂಶನ್’ ಪದವನ್ನು 1890 ರಲ್ಲಿ ಮೊದಲಸಲ ಬಳಸಲಾಯಿತು. ಆ ಹೊತ್ತಿನಲ್ಲಿ ಮಿಂಚನ್ನು ಬಳಸಿ ಕೈದಿಗಳನ್ನು ಕೊಲ್ಲುತ್ತಿದ್ದ ಬಗೆಯನ್ನಷ್ಟೇ ‘ಎಲೆಕ್ಟ್ರಿಕ್ಯೂಶನ್’ ಎಂದು ಕರೆಯುತ್ತಿದ್ದರು. ಮುಂದೆ ಮಿಂಚಿನ ಕೆಟ್ಟಾಗುಹಗಳಿಂದ (accident) ಉಂಟಾಗುವ ಸಾವುಗಳಿಗೂ ‘ಎಲೆಕ್ಟ್ರಿಕ್ಯೂಶನ್’ ಪದವನ್ನು ಬಳಸಲಾರಂಬಿಸಿದರು.

(ತಿಟ್ಟಸೆಲೆ: dawsonpower.com)

ಎಬಿಎಸ್(ABS) ಹೇಗೆ ಕೆಲಸ ಮಾಡುತ್ತದೆ?

ಜಯತೀರ್ಥ ನಾಡಗೌಡ

ಇಂದಿನ ಬಹುತೇಕ ಎಲ್ಲ ನಾಲ್ಗಾಲಿ ಗಾಡಿಗಳಲ್ಲಿ ಎಬಿಎಸ್ ಎಂಬ ಕಾಪಿನ(Safety) ಏರ್ಪಾಡು ಕಾಣಸಿಗುತ್ತದೆ. ಕಾರು ಬಂಡಿಗಳಲ್ಲಿ ಕಾಣಸಿಗುವ ಬಲುಮುಖ್ಯ ಕಾಪಿನ ಏರ್ಪಾಡು ಎಬಿಎಸ್. ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಮ್(Anti-Lock Braking System) ಇದರ ಚಿಕ್ಕ ರೂಪವೇ ಎಬಿಎಸ್ ಎಂಬ ಹೆಸರು ಪಡೆದಿದೆ. ಈ ಏರ್ಪಾಡು ಹೇಗೆ ಕೆಲಸ ಮಾಡುತ್ತದೆ ನೋಡುವ ಬನ್ನಿ.

ಸಾಮಾನ್ಯವಾಗಿ ಗಾಡಿ ಓಡಿಸುವಾಗ ಎದುರಿಗೆ ಅಡೆತಡೆ ಬಂದಾಗ, ಓಡಿಸುಗ ಬ್ರೇಕ್ ತುಳಿಗೆಯನ್ನು (Pedal) ತುಳಿಯುತ್ತಾನೆ. ಇದರಿಂದ ಗಾಲಿಗಳ ಮೇಲೆ, ತಡೆತದ ಏರ್ಪಾಟಿನ ಭಾಗವಾಗಿರುವ ಸಿಲಿಂಡರ್‌ಗಳು ಒತ್ತಡ ಹಾಕಿ ಗಾಲಿಗಳು ಚಲಿಸಿದಂತೆ ಅವುಗಳನ್ನು ಬಿಗಿ ಹಿಡಿಯುತ್ತವೆ. ಇದು ಗಾಲಿಗಳನ್ನು ಹಿಂದೆ ಮುಂದೆ ಅಲ್ಲಾಡದಂತೆ ಸರ್ರನೆ ಲಾಕ್ ಮಾಡಿದಂತೆ.  ಈ ರೀತಿ ಮಾಡಿದಾಗ ತಿಗುರಿ(Steering) ಹಿಡಿತ ತಪ್ಪಿ ಗಾಡಿಯೂ ಅಕ್ಕ ಪಕ್ಕಕ್ಕೆ ಜಾರಿ ಅವಘಡ ಉಂಟಾಗುವುದು. ಎಬಿಎಸ್ ಹೊಂದಿರದ ಹಲವಾರು ಕಾರುಗಳು, ದಿಢೀರ್ ಬ್ರೇಕ್ ಹಾಕಿದಾಗ ಗಾಲಿಗಳು ಕೂಡಲೇ ಲಾಕ್‍ಆಗಿ, ತಿಗುರಿ ಹಿಡಿತ ತಪ್ಪಿ ಅಕ್ಕ ಪಕ್ಕ ಚಲಿಸಿ ಅಪಘಾತಕ್ಕೆ ಗುರಿಯಾಗಿದ್ದುಂಟು.

ಎಬಿಎಸ್ ಏರ್ಪಾಟಿನ ಕಾರಿನಲ್ಲಿ ಒಂದು ಗಣಕ(Control Unit), ಪ್ರತಿಯೊಂದು ಗಾಲಿಯು ವೇಗದ ಅರಿವಿಕ(Wheel Speed Sensor) ಹೊಂದಿರುತ್ತವೆ. ಓಡಿಸುಗ ಮುಂದಿರುವ ಅಡೆತಡೆ ಅರಿತು ಬ್ರೇಕ್ ತುಳಿದಾಗ, ಏರ್ಪಾಟಿನ ಗಣಕ ಗಾಲಿಗಳ ವೇಗವನ್ನು ತಿಳಿದುಕೊಳ್ಳುತ್ತದೆ. ಯಾವುದಾದರೂ ಒಂದು ಗಾಲಿ ಇನ್ನೊಂದು ಗಾಲಿಗಿಂತ ಹೆಚ್ಚು ವೇಗವಾಗಿ ತಿರುಗುತ್ತಿದ್ದರೆ, ಗಣಕವೂ ವೇಗವಾಗಿ ತಿರುಗುತ್ತಿರುವ ಗಾಲಿಯ ವೇಗವನ್ನು ಹಿಡಿತದಲ್ಲಿರುವಂತೆ ತಡೆತದ ಕೀಲೆಣ್ಣೆಯ(Brake Fluid) ಒತ್ತಡವನ್ನು ಕಡಿಮೆ ಮಾಡಿ, ಇತರೆ ಗಾಲಿಗಳ ಮಟ್ಟದಲ್ಲಿರುವಂತೆ ಮಾಡುತ್ತದೆ. ಇದರಿಂದ ಗಾಲಿಯೂ ಲಾಕ್ ಆಗದಂತೆ ತಡೆಯುತ್ತದೆ. ಗಾಲಿಯು ಮತ್ತೆ ಹಿಡಿತ ಕಂಡುಕೊಂಡಾಗ ಅಗತ್ಯ ಮಟ್ಟದ ಒತ್ತಡವನ್ನು ನೀಡಿ ಗಾಡಿ ಓಡಿಸುಗ ತಿಗುರಿ ಮೇಲಿನ ಹಿಡಿತ ತಪ್ಪದಂತೆ, ಸರಿಯಾಗಿ ಗಾಡಿ ತೆರಳುವಂತೆ ನೋಡಿಕೊಳ್ಳುತ್ತದೆ. ಈ ರೀತಿಯ ಒಂದು ಸುತ್ತು ಬ್ರೇಕಿಂಗ್ ಸಂದರ್ಭಗಳಲ್ಲಿ ಸೆಕೆಂಡ್‌ಗೆ ಹಲವಾರು ಬಾರಿ ನಡೆಯುತ್ತಿರುತ್ತದೆ. ಕಾರಿನ ಯಾವ ಗಾಲಿಯೂ ಲಾಕ್ ಆಗದಂತೆ ಒತ್ತಡ ಕಡಿಮೆ ಮಾಡುವುದು- ಹಿಡಿತಕ್ಕೆ ಬಂದಾಗ ಸರಿಯಾದ ಒತ್ತಡ ಕಾದುಕೊಳ್ಳುವುದು.  ಇದರಿಂದ ತುರ್ತು ಸಂದರ್ಭಗಳಲ್ಲಿ ಓಡಿಸುಗ ಬೆದರದೇ ತಿಗುರಿಯನ್ನು ಮುಂದಿರುವ ಅಡೆತಡೆಯನ್ನು ತಪ್ಪಿಸಿ, ತಿರುಗಿಸಿಕೊಂಡು ಅಪಾಯದಿಂದ ಪಾರಾಗಬಹುದು. ಎಬಿಎಸ್ ಏರ್ಪಾಟಿನ ಪ್ರಮುಖ ಅನುಕೂಲಗಳನ್ನು ಪಟ್ಟಿ ಮಾಡುವುದಾದರೆ, ಅವು ಹೀಗಿವೆ

  1. ಗಾಡಿಯ ಗಾಲಿಗಳು ಲಾಕ್ ಆಗಿ ಅತ್ತಿತ್ತ ಜಾರದಂತೆ ನೋಡಿಕೊಳ್ಳುವುದು ಮತ್ತು ಗಾಡಿಯು ತನ್ನ ತಿಗುರಿಯ ಹಿಡಿತ ಕಳೆದುಕೊಳ್ಳದಂತೆ ನೋಡಿಕೊಳ್ಳುವುದು
  2. ಓಡಿಸುಗನ ಬ್ರೇಕ್ ಹಾಕಿದಾಗ ಸುಲಭವಾಗಿ ಗಾಡಿ ಮುಂದೆ ಗುದ್ದುವಿಕೆಯಾಗದಂತೆ ತನ್ನಿಷ್ಟದ ಕಡೆ ತಿರುಗಿಸಲು ಸಹಾಯ ಮಾಡುತ್ತದೆ
  3. ಬ್ರೇಕ್ ಹಾಕಿದಾಗ ಗಾಡಿಯು ಮುಂದಿನ ಅಡೆತಡೆಗಿಂತ ದೂರದಲ್ಲಿ ನಿಲ್ಲುವಂತೆ ಮಾಡುವುದು.

ಎಬಿಎಸ್ ಏರ್ಪಾಡು ಕೆಲಸ ಮಾಡುವ ಬಗೆಯನ್ನು ಕೆಳಗಿನ ತಿಟ್ಟದಲ್ಲಿ ನೋಡಿ ತಿಳಿಯಬಹುದು.

ಮೇಲಿನ ತಿಟ್ಟದಲ್ಲಿ ನೋಡಿದಾಗ, ಮೊದಲನೇಯದಾಗಿ ಎಬಿಎಸ್ ಹೊಂದಿರುವ ಕಾರು, ಓಡಿಸುಗ ಬ್ರೇಕ್ ಹಾಕಿದಾಗಲೂ ಗಾಲಿಗಳು ಲಾಕ್ ಆಗದಂತೆ ನೋಡಿಕೊಂಡು ಸರಾಗವಾಗಿ ಗಾಡಿಯು ಅಡೆತಡೆ ತಪ್ಪಿಸಿ ಸಾಗುವಂತೆ ಮಾಡುತ್ತದೆ. ಅದೇ ೨ನೇ ತಿಟ್ಟದಲ್ಲಿ ಕಾರಿನ ಗಾಲಿಗಳು ಲಾಕ್ ಆಗಿ ಓಡಿಸುಗ ಹತೋಟಿ ತಪ್ಪಿ ಮುಂದಿರುವ ಅಡೆತಡೆಗೆ ಗುದ್ದಿರುವುದನ್ನು ನೋಡಬಹುದು.

ತಿಟ್ಟ ಸೆಲೆ: spinny.com

 

ಕಾರಿನ ಬಗೆಗಳು

ಜಯತೀರ್ಥ ನಾಡಗೌಡ

ನಾವೆಲ್ಲರೂ ದಿನ ನಿತ್ಯ ಹಲವಾರು ಬಗೆ ಕಾರುಗಳನ್ನು ನೋಡಿರುತ್ತೇವೆ. ಕಾರು ಬಂಡಿಗಳಲ್ಲಿ ಹಲವು ಬಗೆ. ಕಾರು ಕೊಂಡುಕೊಳ್ಳಬೇಕೆನ್ನುವರಿಗೆ ಇಂದಿನ ಮಾರುಕಟ್ಟೆಯಲ್ಲಂತೂ ಸಾಕಷ್ಟು ಆಯ್ಕೆಗಳು. ಮೇಲಿಂದ ಮೇಲೆ ಮಾರುಕಟ್ಟೆಗೆ ಹೊಸ ಬಂಡಿಗಳು ಬರುತ್ತಲೇ ಇವೆ. ಈ ಬಗೆ ಬಗೆಯ ಆಕಾರ ಗಾತ್ರದಲ್ಲಿ ಕಂಡುಬರುವ ಕಾರು ಬಂಡಿಗಳ ಬಗ್ಗೆ ಒಂದು ಕಿರುನೋಟ ಇಲ್ಲಿದೆ.

ಹ್ಯಾಚ್-ಬ್ಯಾಕ್ (ಕಿರು / ಹಿಂಗದ) ಕಾರುಗಳು:
ಕಾರಿನ ಹಿಂಭಾಗದಲ್ಲಿ ಮೇಲೆಳೆದುಕೊಳ್ಳುವ ಬಾಗಿಲು ಹೊಂದಿರುವರಿಂದ ಇವುಗಳನ್ನು ಹ್ಯಾಚ್-ಬ್ಯಾಕ್ ಕಾರುಗಳೆಂದು ಕರೆಯಲಾರಂಭಿಸಿದರಂತೆ. ನಂತರದ ದಿನಗಳಲ್ಲಿ ಈ ರೀತಿಯ ಬಾಗಿಲಿನ ವಿನ್ಯಾಸ ಬದಲಾವಣೆ ಮಾಡಿಕೊಳ್ಳಲಾಯಿತು. ಇವುಗಳು ನೋಡಲು ಚಿಕ್ಕವು. 3 ಪಯಣಿಗರು ಜೊತೆಗೆ ಒಬ್ಬ ಓಡಿಸುಗ, ಒಟ್ಟು ನಾಲ್ವರು(3+1) ಕೂತು ಸಾಗಲು ಅನುವಾಗುವ ಕಿರಿದಾದ ಕಾರುಗಳು ಇವು. ಸರಕುಚಾಚು ಅಂದರೆ ಡಿಕ್ಕಿಯಲ್ಲಿ ಪುಟ್ಟದಾದ ಕೆಲವೇ ವಸ್ತುಗಳನ್ನು ಇವುಗಳಲ್ಲಿರಿಸಿ ಸಾಗಬಹುದಾಗಿದೆ.

ಹ್ಯಾಚ್-ಬ್ಯಾಕ್ ಕಾರುಗಳನ್ನು ಮುಖ್ಯವಾಗಿ 2 ಪೆಟ್ಟಿಗೆಯಂತೆ ವಿಭಾಗಿಸಿರಲಾಗಿರುತ್ತದೆ (2-box design). ಮುಂಭಾಗದ ಬಿಣಿಗೆ (engine) ಒಂದು ಪೆಟ್ಟಿಗೆಯ ಭಾಗವಾದರೆ, ಪಯಣಿಗರು ಕೂಡುವ ಜಾಗ ಮತ್ತು ಸರಕುಚಾಚು ಸೇರಿ ಇನ್ನೊಂದು ಪೆಟ್ಟಿಗೆಯಾಗುತ್ತದೆ. ಈ ಕಾರುಗಳು ನಾಲ್ಕು ಇಲ್ಲವೇ ಅಯ್ದು ಬಾಗಿಲುಗಳನ್ನು ಹೊಂದಿರುತ್ತವೆ. ಇದೀಗ ಮಾರುಕಟ್ಟೆಯಲ್ಲಿ ತರತರದ ಹ್ಯಾಚ್-ಬ್ಯಾಕ್ ಕಾರುಗಳು ಕಾಣಸಿಗುತ್ತವೆ. ಮಾರುತಿ ಸುಜುಕಿಯಂತೂ ಹಲವು ಮಾದರಿಗಳನ್ನು ಹೊಂದಿದೆ. ಇವುಗಳಲ್ಲಿ ಸ್ವಿಪ್ಟ್, ಅಲ್ಟೋ, ವ್ಯಾಗನ್-ಆರ್, ಸೆಲೆರಿಯೋ ಮುಂತಾದವುಗಳು ಹೆಸರುವಾಸಿಯಾಗಿವೆ. ಹ್ಯುಂಡಾಯ್ ಆಯ್-10,  ಆಯ್ -20, ಹೀಗೆ ನಿಮ್ಮ ಅವಶ್ಯಕತೆಗೆ ತಕ್ಕಂತೆ ಆಯ್ಕೆಗಳು ಸಾಕಶ್ಟಿವೆ.

ಸೆಡಾನ್/ ಸಲೂನ್ ಕಾರುಗಳು:
‘ಸೆಡೆ’ ಎಂಬುದು ಇಟಾಲಿಯನ್ ನುಡಿಯಲ್ಲಿ ಕುರ್ಚಿ ಎಂದು ಅರ್ಥ, ಲ್ಯಾಟಿನ್ ನಲ್ಲಿ ಸೆಡೆರ‍್- ಎಂದರೆ ಕುಳಿತುಕೊಳ್ಳು ಎಂಬರ್ಥವಿದೆ. ಇಟಾಲಿಯನ್, ಲ್ಯಾಟಿನ್ ಮೂಲದಿಂದ ಸೇಡಾನ್ ಪದದ ಬಳಕೆ ಶುರುವಾಯಿತು ಎಂದು ಹೇಳುವುದುಂಟು.

ಉತ್ತರ ಅಮೇರಿಕೆಯ ನಾಡುಗಳು, ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್ ಮುಂತಾದೆಡೆಗಳಲ್ಲಿ ಇವುಗಳನ್ನು ಸೆಡಾನ್ ಎಂದರೆ ಬ್ರಿಟನ್, ಐರ್ಲೆಂಡ್ ಕಡೆಗಳಲ್ಲಿ ಸಲೂನ್ ಕಾರುಗಳೆಂದು ಹೇಳುವರು. ಸೆಡಾನ್ ಕಾರುಗಳನ್ನು 3-ಪೆಟ್ಟಿಗೆ ಮಾದರಿಯಲ್ಲಿ (3-box design) ಮಾಡಲಾಗಿರುತ್ತದೆ. ಬಿಣಿಗೆ, ಪಯಣಿಗರು ಮತ್ತು ಸರಕುಚಾಚು ಹೀಗೆ 3-ಪೆಟ್ಟಿಗೆಯಾಕಾರದಲ್ಲಿ ಇವುಗಳನ್ನು ಬೇರ‍್ಪಡಿಸಬಹುದು.

ನಾಲ್ಕು ಇಲ್ಲವೇ ಐದು ಬಾಗಿಲಿರುವ ಸೆಡಾನ್ ಕಾರುಗಳು ಹೆಚ್ಚಿನ ಕಾಲುಚಾಚು (legroom), ಸರಕುಚಾಚು(boot space) ಹೊಂದಿರುತ್ತವೆ. ಇದರಿಂದ ಇವು ಕಿರುಕಾರುಗಳಿಗಿಂತ ದೊಡ್ಡದೆನೆಸಿಕೊಳ್ಳುತ್ತವೆ. ಕಾರುಕೊಳ್ಳುಗರಿಗೆ ಸೆಡಾನ್ ಕಾರುಗಳು ಅಚ್ಚುಮೆಚ್ಚು, ಮನೆಯವರೆಲ್ಲ ಒಟ್ಟಾಗಿ ಸೇರಿ ಪ್ರಯಾಣ ಮಾಡಲು ಇವು ತಕ್ಕುದಾಗಿವೆ.

 ಸ್ಕೋಡಾ ಸ್ಲಾವಿಯಾ, ಫೋಕ್ಸ್‌ವ್ಯಾಗನ್ ವಿರ್ಚುಸ್, ಹ್ಯುಂಡಾಯ್ ವೆರ್ನಾ,  ಹೋಂಡಾ ಸಿಟಿ , ಮುಂತಾದವುಗಳು ಈ ಪಟ್ಟಿಗೆ ಸೇರುವ ಕಾರುಗಳು., ಮುಂತಾದವುಗಳು ಮಾರುಕಟ್ಟೆಯಲ್ಲಿ ಕಂಡುಬರುತ್ತವೆ.

ಮರ್ಸಿಡೀಸ್ ಬೆಂಜ್, ಔಡಿ, ಬಿ.ಎಮ್.ಡ್ಬ್ಲ್ಯೂ, ಟೊಯೊಟಾ ಕೊರೊಲ್ಲಾ ಕಾರುಗಳು ಸಿರಿಮೆಯ (ಲಕ್ಸರಿ) ಸೆಡಾನ್ ಸಾಲಿಗೆ ಸೇರುತ್ತವೆ. ಸಾಮಾನ್ಯ ಸೆಡಾನ್ ಕಾರಿನಂತೆ ಅಲ್ಲದೇ ಇವುಗಳಲ್ಲಿ ಸಿರಿಮೆಯ ಹೆಚ್ಚಿನ ವಿಶೇಷತೆಗಳನ್ನು ನೀಡಿರಲಾಗುತ್ತದೆ. ಭಾರತದಲ್ಲಿ ಇಂತ ಕಾರುಗಳ ಸಂಕ್ಯೆಯು ಹೆಚ್ಚಳವಾಗಿದೆ.

ಕಿರುಸೆಡಾನ್ (ಕಾಂಪ್ಯಾಕ್ಟ್ ಸೆಡಾನ್):

ನಮ್ಮ ಮಾರುಕಟ್ಟೆಯೇ ಹೀಗೆ, ಮಂದಿ ಬೇಡಿಕೆಗಳು ಮೇಲಿಂದ ಮೇಲೆ ಬದಲಾಗುತ್ತಲೇ ಇರುತ್ತವೆ. ಅದಕ್ಕೆಂದೇ ಭಾರತದಲ್ಲಿ ಕಿರು ಸೆಡಾನ್ ಕಾರುಗಳೆಂಬ ಹೊಸ ಮಾದರಿಗಳು ಕಾಣಸಿಗುತ್ತವೆ. ಇವುಗಳು ಅತ್ತ ಹ್ಯಾಚ್-ಬ್ಯಾಕ್ ಅಲ್ಲದೇ ಇತ್ತ ಸೆಡಾನ್ ಅಲ್ಲದೇ ಕಿರು-ಸೆಡಾನ್ ಎಂಬ ಹಣೆಪಟ್ಟಿ ಹೊತ್ತಿವೆ. ಸಾಮಾನ್ಯ ಸೆಡಾನ್ ಗಿಂತ ಕಡಿಮೆ ಬೆಲೆ, ಹ್ಯಾಚ್-ಬ್ಯಾಕ್ ಕಾರಿಗಿಂತ ಹೆಚ್ಚು ಸರಕುಚಾಚು ಹೊಂದಿರುವ ಕಿರು ಸೆಡಾನ್ ಹೆಚ್ಚಿನ ಮಂದಿಯನ್ನು ಸೆಳೆಯುತ್ತಿವೆ. ಹೋಂಡಾ ಅಮೇಜ್, ಟಾಟಾ ಟಿಗೊರ್, ಸುಜುಕಿ ಸ್ವಿಪ್ಟ್ ಡಿಜೈರ್, ಹ್ಯುಂಡಾಯ್ ಔರಾ ಇವುಗಳಲ್ಲಿ ಪ್ರಮುಖವಾದವು.

ಆಟೋಟದ (sports) ಇಲ್ಲವೇ ಬಿರುಸಿನ ಕಾರು:
ಮೈ ನವಿರೇಳಿಸುವ ವೇಗ, ಅಳವುತನ (efficiency), ಹೆಚ್ಚಿನ ಬಲದಿಂದ ಮಾಡಲ್ಪಟ್ಟಿರುವ ಕಾರುಗಳೇ ಆಟೋಟ ಇಲ್ಲವೇ ಬಿರುಸಿನ ಕಾರುಗಳು ಎಂದು ಕರೆಯಬಹುದಾದ ಪಟ್ಟಿಗೆ ಸೇರಿವೆ. ಆಟೋಟದ ಕಾರುಗಳು ಓಡಿಸುಗರಿಗೆ ಮನತಲ್ಲಣಿಸುವ ಅನುಭವ ನೀಡುವಂತವು. ಹೆಚ್ಚಾಗಿ ಇವುಗಳಲ್ಲಿ ಇಬ್ಬರು ಕುಳಿತುಕೊಳ್ಳುವಷ್ಟೇ ಜಾಗ ಹೊಂದಿರುತ್ತವೆ. ಓಡಿಸುಗನ ಹಿಡಿತಕ್ಕೆ ಅನುವಾಗಲೆಂದು ಆಟೋಟದ ಕಾರುಗಳು ಕಡಿಮೆ ತೂಕ ಹೊಂದುವಂತೆ ಮಾಡಿರುತ್ತಾರೆ. ಇವುಗಳು ಎರಡು ಕದಗಳನ್ನು ಮಾತ್ರ ಹೊಂದಿರುತ್ತವೆ.

ಪೋರ್ಶ್, ಲಾಂಬೋರ್ಗಿನಿ, ಫೆರಾರಿ, ಮರ್ಸಿಡೀಸ್ ಮೆಕ್ಲಾರೆನ್, ಬಿ.ಎಂ.ಡ್ಬ್ಲ್ಯೂ, ಬೆಂಟ್ಲೆ, ಆಸ್ಟನ್ ಮಾರ‍್ಟಿನ್, ಜಾಗ್ವಾರ್ ಮುಂತಾದ ಕೂಟಗಳು ಇಂತ ಆಟೋಟದ ಕಾರುಗಳನ್ನು ಮಾಡುವುದರಲ್ಲಿ ಖ್ಯಾತಿ ಪಡೆದಿವೆ. ಫಾರ‍್ಮುಲಾ-1 ಪಣಗಳಲ್ಲಿ ಈ ಈ ತೆರನಾದ ಕಾರುಗಳದ್ದೇ ಕಾರುಬಾರು.

ಕೂಪೇ-ಕೂಪ್ ಕಾರುಗಳು:
ಫ್ರೆಂಚ್ ಪದ “ಕೂಪೇ”ಯಿಂದ ಈ ಕಾರುಗಳಿಗೆ ಹೆಸರು ಬಂದಿದೆ. ಇಂಗ್ಲಿಶ್ ನುಡಿಯಾಡುವರು ಇವನ್ನು ಕೂಪ್ ಎಂದು ಕರೆದರೆ, ಫ್ರೆಂಚ್‌ರ ಪ್ರಭಾವ ಹೆಚ್ಚಿದ್ದ ಯೂರೋಪ್ ನಲ್ಲಿ ಇವುಗಳು ಕೂಪೇ ಕಾರುಗಳೆಂದೇ ಹೆಸರು ಪಡೆದಿದ್ದವು. ಕೂಪೇ ಕಾರುಗಳು ಆಟೋಟದ ಬಂಡಿಯಂತೆ ಎರಡು ಬಾಗಿಲು ಮತ್ತು ಇಬ್ಬರು ಕೂಡಲಷ್ಟೇ ಜಾಗ ಹೊಂದಿರುತ್ತವೆ. ಕೆಲವು ಕೂಪೇಗಳು ಹಿಂಬದಿಯಲ್ಲಿ ಕಿರಿದಾದ ಕೂರುವ ಜಾಗ ಹೊಂದಿರುತ್ತಿದ್ದವು. ಆದರೆ ಇವುಗಳು ಸೆಡಾನ್ ನಂತೆ ಮೈ ಪಡೆದಿರುವುದರಿಂದ ಇವುಗಳನ್ನು ಎರಡು ಬಾಗಿಲಿನ ಸೆಡಾನ್ ಎನ್ನಬಹುದು. 1930-40 ಹೊತ್ತಿನಲ್ಲಿ ಈ ಕಾರುಗಳು ಬಲು ಮೆಚ್ಚುಗೆಗಳಿಸಿದ್ದವು. ಮಂದಿಯ ಬಳಕೆಗೆ ತಕ್ಕಂತೆ ಕೂಪೇಗಳಲ್ಲೂ ಕ್ಲಬ್ ಕೂಪೇ, ಬಿಜಿನೆಸ್ ಕೂಪೇ, ಒಪೇರಾ ಕೂಪೇಗಳೆಂದು ಹಲವು ಬಗೆಗಳಾಗಿ ಬೇರ್ಪಡಿಸಲಾಗಿತ್ತು. ಇಂದಿನ ದಿನಗಳಲ್ಲಿ ಕೂಪೇ ಕಾರುಗಳು ಕಾಣಸಿಗುವುದು ಕಷ್ಟ.

ಮಾರ್ಪುಗಳು (convertibles):
ಹೆಸರೇ ಸೂಚಿಸುವಂತೆ ಇವುಗಳನ್ನು ಮಾರ್ಪಡಿಸಬಹುದು. ಕಾರಿನ ಮೇಲ್ಚಾವಣಿಯನ್ನು ಮಡಚಿ ಗಾಳಿಗೆ ತೆರೆದುಕೊಳ್ಳುವ ಕಾರುಗಳನ್ನಾಗಿಸಬಹುದು ಮತ್ತು ನಮಗೆ ಬೇಕೆಂದಾಗ ಮೇಲ್ಚಾವಣಿಯನ್ನು ಸೇರಿಸಿ ಸಾಮಾನ್ಯ ಬಂಡಿಗಳಂತೆ ಇವುಗಳನ್ನು ಬಳಸಬಹುದು. ಈ ಕಾರುಗಳು ಹೆಚ್ಚಾಗಿ ಅಮೇರಿಕಾ, ಯೂರೋಪ್, ಜಪಾನ್‌ನಂತ ಬೀದಿಗಳಲ್ಲಿ ಕಾಣಸಿಗುತ್ತವೆ. ಮಾರ್ಪು ಕಾರುಗಳು ಹೆಚ್ಚಾಗಿ ಬಿಡುವಿನ ಹೊತ್ತಿನಲ್ಲಿ ದೂರದ ಊರಿನ ಪಯಣಗಳಿಗೆ ಬಳಸಲ್ಪಡುತ್ತವೆ. ಮರ್ಸಿಡೀಸ್, ಬಿ.ಎಂ.ಡ್ಬ್ಲ್ಯೂ ಮುಂತಾದ ಕೂಟಗಳ ಮಾರ್ಪು ಬಂಡಿಗಳು ಭಾರತದಲ್ಲೂ ಮಾರಾಟಕ್ಕಿವೆ.

ಲಿಮೊಸಿನ್ ಕಾರು:
ಉದ್ದನೆಯ, ಅತಿ ಹೆಚ್ಚಿನ ಗಾಲಿಗಳ ನಡುವಿನ ದೂರ ಹೊಂದಿರುವ ಲಿಮೊಸಿನ್ ಕಾರುಗಳನ್ನು ಸುಲಭವಾಗಿ ಗುರುತಿಸಬಹುದು. ಲಿಮೊಸಿನ್ ಕಾರುಗಳಲ್ಲಿ ಓಡಿಸುಗ ಮತ್ತು ಪಯಣಿಗರು ಕೂರುವ ಜಾಗಗಳು ಇತರೆ ಕಾರುಗಳಂತೆ ಇರದೇ, ಗೋಡೆಯಿಂದ ಬೇರ್ಪಟ್ಟಿರುತ್ತವೆ. ಲಿಮೊಸಿನ್ ಕಾರು, ಫ್ರೆಂಚ್ ನಾಡಿನ ಲಿಮೊಸ್ ಭಾಗದಿಂದ ಈ ಹೆಸರನ್ನು ಪಡೆದುಕೊಂಡಿದೆ. ಲಿಮೊಸ್ ಬಾಗದ ಮಂದಿ ತೊಡುಗೆಯಂತೆ ಈ ಕಾರುಗಳನ್ನು ಮಾಡಲಾಗಿರುತ್ತದಂತೆ.
ಲಿಮೊಸಿನ್ಗಳು ಮದುವೆಯಲ್ಲಿ ಮದುಮಕ್ಕಳ ಹೊತ್ತೊಯ್ಯಲು, ಔತಣ ಕೂಟ ಇಂತ ಮೊದಲಾದ ಸಮಾರಂಭಗಳಲ್ಲಿ ಬಳಕೆ ಮಾಡಲಾಗುತ್ತದೆ.

ಹಲ ಬಳಕೆಯ ಬಂಡಿಗಳು (Multi Utility Vehicles – MUV):
ಹಲ ಬಳಕೆಯ ಬಂಡಿಗಳು ಸಾಮಾನ್ಯದ ಕಾರುಗಳಿಗಿಂತ ದೊಡ್ಡದಾಗಿದ್ದು 5 ಕ್ಕಿಂತ ಹೆಚ್ಚಿನ ಜನರು ಕುಳಿತು ಸಾಗಲು ಮಾಡಲಾಗಿರುತ್ತದೆ. ಇವುಗಳಲ್ಲಿ ಹೆಚ್ಚಿನ ಸರಕನ್ನು ಸಾಗಿಸಲು ಜಾಗವಿರುತ್ತದೆ. ಇವುಗಳಲ್ಲಿ ಕೂಡ ಹಲ ಬಳಕೆಯ, ಆಟೋಟದ ಬಳಕೆಯ ಬಂಡಿಗಳೆಂದು ಬೇರ್ಮೆ ಇದೆ. ಹಲ ಬಳಕೆಯ ಬಂಡಿಗಳು ಹೆಚ್ಚಾಗಿ ಜನರನ್ನು ಮತ್ತು ಸರಕನ್ನು ಹೊತ್ತೊಯ್ಯಲು ತಕ್ಕ ಆಕಾರ, ಗಾತ್ರದಲ್ಲಿ ಸಿದ್ದಗೊಳಿಸಿರಲಾಗುತ್ತದೆ. ಆದರೆ ಆಟೋಟದ ಬಳಕೆಯ ಬಂಡಿಗಳು ಗುಡ್ಡಗಾಡು, ಕಣಿವೆ, ಬಿರುಸಿನ ತಿರುವುಗಳ ಕಿರಿದಾರಿಗಳಲ್ಲಿ ಸುಲಭವಾಗಿ ಮುನ್ನುಗ್ಗುವ ಬಲ ಪಡೆದುಕೊಂಡಿರುತ್ತವೆ. ಆಟೋಟದ ಬಳಕೆಯ ಬಂಡಿಗಳು ಸರಕು ಸಾಗಣೆಗಿಂತಲೂ ಹೆಚ್ಚಾಗಿ ಮಂದಿಯ ಪಯಣಕ್ಕೆ ಬಳಕೆಯಾಗುತ್ತವೆ.

ಭಾರತದ ಮಹೀಂದ್ರಾ ಮತ್ತು ಮಹೀಂದ್ರಾ ಹಲ ಬಳಕೆಯ ಬಂಡಿ ತಯಾರಿಕೆಯಲ್ಲಿ ಮುಂಚೂಣಿಯಲ್ಲಿದೆ. ಬೊಲೆರೊ, ಸ್ಕಾರ‍್ಪಿಯೊ, ಎಕ್ಸ್.ಯು.ವಿ.7.ಒ.ಒ ಮುಂತಾದ ಮಾದರಿಗಳು ಮಹೀಂದ್ರಾ ಕೂಟ ಮಾರಾಟ ಮಾಡುತ್ತಿರುವ ಹಲಬಳಕೆಯ ಬಂಡಿಗಳು. ಫೋರ್ಡ್ ಎಂಡೆವರ್, ಟೊಯೊಟಾ ಫಾರ್ಚುನರ್,  ಇನ್ನೋವಾ, ಟಾಟಾ ಹ್ಯಾರಿಯರ್, ಸಫಾರಿ,  ಭಾರತದ ಮಾರುಕಟ್ಟೆಯಲ್ಲಿರುವ ಪ್ರಮುಕ ಹಲಬಳಕೆಯ ಬಂಡಿಗಳು.

(ತಿಟ್ಟ ಮತ್ತು ಮಾಹಿತಿ ಸೆಲೆಗಳು: wikipedia.org, www.infovisual.info, www.m3forum.net)

 

3-Phase ಕರೆಂಟ್ ಅಂದರೇನು?

ಪ್ರಶಾಂತ ಸೊರಟೂರ.

3 Phase

3 ಫೇಸ್ ಕರೆಂಟ್ ಕುರಿತು ಒಂಚೂರು ಸರಳವಾಗಿಸಿ ಹೇಳುವ ಪ್ರಯತ್ನವಿದು (ಪಠ್ಯಪುಸ್ತಕದ ಹೊರತಾಗಿ ಸರಳವಾಗಿ ತಿಳಿಸುವ ಪ್ರಯತ್ನ).

1) 3 ಬೇರೆ ಬೇರೆಯಾದ ತಂತಿಗಳನ್ನು ಬಳಸಿ ಕರೆಂಟ್ ಸಾಗಿಸುವುದಕ್ಕೆ 3 ಫೇಸ್ (ಹಂತ) ಅನ್ನುತ್ತಾರೆ. ಅಂದರೆ 1 ಫೇಸ್ನಲ್ಲಿ ಕರೆಂಟ್ ಸಾಗಿಸಲು 1 ತಂತಿ  ಬೇಕಾದರೆ 10 ಫೇಸ್ಗೆ 10 ತಂತಿಗಳು ಬೇಕು. ಹಾಗಾದರೆ ಫೇಸ್ ಅಂದರೇನು? ಮುಂದೆ ತಿಳಿದುಕೊಳ್ಳೋಣ.

2) ಕರೆಂಟ್ ಅಲೆಯ ರೂಪದಲ್ಲಿ ಹೊಮ್ಮುತ್ತದೆ. ಕೆರೆಯಲ್ಲಿ ಕಲ್ಲು ಎಸೆದಾಗ ಚಿಕ್ಕ ತೆರೆಯ ಅಲೆಗಳು ಹೇಗೆ ಹೊಮ್ಮುವವೋ ಹಾಗೆ ಕರೆಂಟ್ ಕೂಡಾ ಅಲೆಗಳಂತೆ ಸಾಗುತ್ತದೆ. ಕಲ್ಲು ತಾಕಿದ ಸ್ಥಳದಿಂದ ಅಲೆಗಳು ಎಲ್ಲ ಕಡೆ  ಹರಡುವುದನ್ನೂ ನೀವು ಗಮನಿಸಿರಬಹುದು. ಈಗ ಅದೇ ಅಲೆಗಳು ಒಂದು ಕೊಳವೆಯಲ್ಲಿ ಸಾಗಿದರೆ ಹೇಗಿರುತ್ತೆ ಅನ್ನುವುದನ್ನು ಊಹಿಸಿಕೊಳ್ಳಿ ಹೀಗೆನೇ ಕರೆಂಟ್ ಕೂಡಾ ಅಲೆಗಳಂತೆ ಒಂದು ತಂತಿಯಲ್ಲಿ ಏರಿಳಿತದೊಂದಿಗೆ ಸಾಗುತ್ತದೆ. ಆದರೆ ನೀರಿನ ಅಲೆಗಳಿಗೆ ಹೋಲಿಸಿದಾಗ ಕರೆಂಟ್ ಅಲೆಗಳ ಏರಿಳಿತ ತುಂಬಾನೇ ಹೆಚ್ಚಾಗಿರುತ್ತದೆ. ನಮ್ಮ ಮನೆಗೆ ತಲುಪುವ ಕರೆಂಟ್ ಈ ತರಹದಲ್ಲಿ ಪ್ರತಿ ಸೆಕೆಂಡಿಗೆ 50 ಸಲದ ಏರಿಳಿತ ಹೊಂದಿರುತ್ತದೆ! ಇದಕ್ಕೆ ಸಲದೆಣಿಕೆ (frequency) ಅನ್ನುತ್ತಾರೆ. ಮೀಟರಗಳ ಮೇಲೆ 50 Hz ಅಂತಾ ಬರೆದಿರುವುದನ್ನು ನೀವು ಗಮನಿಸಿರಬಹುದು ಅದೇ ಈ  ಸಲದೆಣಿಕೆ (frequency). ಮೇಲೆ ತಿಳಿಸಿದಂತೆ ಕರೆಂಟ್ ಏರು-ಇಳಿತದೊಂದಿಗೆ ಸಾಗುತ್ತದೆ. ಏರಿಕೆಯ ಕೊನೆಯಲ್ಲಿ, ಎಲ್ಲಕ್ಕಿಂತ ಹೆಚ್ಚಿನ ಕರೆಂಟ್ ಇದ್ದರೆ ಇಳಿತದ ಕೊನೆಯಲ್ಲಿ ಕರೆಂಟ್ ಎಲ್ಲಕ್ಕಿಂತ ಕಡಿಮೆಯಿರುತ್ತದೆ. ಈ ಏರು-ಇಳಿತದಲ್ಲಿ ಕರೆಂಟಿನ ಯಾವುದೇ ಹಂತವನ್ನು ‘ಫೇಸ್’ ಅಂತಾ ಕರೆಯಲಾಗುತ್ತದೆ.

3) ಇದಕ್ಕೊಂದು ಉದಾಹರಣೆಯನ್ನು ತೆಗೆದುಕೊಳ್ಳೋಣ. ಚಂದ್ರ ಅಮವಾಸ್ಯೆಯಿಂದ ಹುಣ್ಣಿಮೆವರೆಗೆ ದೊಡ್ಡದಾಗುವಂತೆ ಕಾಣಿಸಿದರೆ ಹುಣ್ಣಿಮೆಯಿಂದ ಅಮವಾಸ್ಯೆಯೆಡೆಗೆ ಸಾಗಿದಾಗ ಚಿಕ್ಕದಾಗುವಂತೆ ಕಾಣಿಸುತ್ತಾನೆ. ಹುಣ್ಣಿಮೆಯ ತುಂಬು ಚಂದಿರ ಮತ್ತು ಅಮವಾಸ್ಯೆಯ ಮರೆಯಾದ ಚಂದ್ರನ ನಡುವಿನ ದಿನಗಳಲ್ಲಿ ನಮಗೆ ಚಂದ್ರನ ಹಲವು ಹಂತಗಳು ಕಾಣಿಸುತ್ತವೆ. ಒಮ್ಮೆ ಚಂದ್ರ ಅರೆ (1/2) ಚಂದ್ರನಾದರೆ ಇನ್ನೊಮ್ಮೆ ಮುಕ್ಕಾಲು (3/4) ಚಂದ್ರನಂತೆ ಕಾಣುತ್ತಾನೆ. ಇದನ್ನೇ ‘ಹಂತ’ ಇಲ್ಲವೇ ಫೇಸ್ ಅಂತಾ ಕರೆಯೋದು! ಕರೆಂಟಿನ್ ಏರು-ಇಳಿತದಲ್ಲಿರುವ ಹಂತ/ಫೇಸ್.

4) ಈಗ, ಒಂದಕ್ಕೊಂದು ಜೋಡಿಸಿರದ 2 ತಂತಿಗಳಿವೆ ಅಂದುಕೊಳ್ಳಿ. ಅವುಗಳಲ್ಲಿ ಹರಿಯುವ ಕರೆಂಟ್ ಎರಡರಲ್ಲೂ ಒಂದೇ ಹಂತದಲ್ಲಿ (ಫೇಸ್) ಇರಲು ಸಾಧ್ಯವೇ ? ಅಂದರೆ ಒಂದು ತಂತಿಯಲ್ಲಿ ಕರೆಂಟ್ ಏರಿಕೆಯ ತುದಿಯಲ್ಲಿದ್ದರೇ ಎರಡನೇಯ ತಂತಿಯಲ್ಲೂ ಕರೆಂಟ್ ಅದೇ ಹಂತದಲ್ಲಿ ಇರಲು ಸಾಧ್ಯವೇ ? ಹಾಗೊಮ್ಮೆ ಇದ್ದರೆ ಅದು ಕಾಕತಾಳಿಯವಷ್ಟೇ. ಅಂದರೆ 10 ಬೇರ್ಪಟ್ಟ ತಂತಿಗಳನ್ನು ತೆಗೆದುಕೊಂಡರೆ ಅವುಗಳಲ್ಲಿ ಹರಿಯುವ ಕರೆಂಟಿನ ಹಂತ (ಫೇಸ್) ಬೇರೆ ಬೇರೆಯಾಗಿರುತ್ತದೆ. ಒಂದರಲ್ಲಿ ಕರೆಂಟ್ ಏರಿಕೆಯಾಗುತ್ತಿದ್ದರೆ ಇನ್ನೊಂದರಲ್ಲಿ ಇಳಿಕೆಯಾಗುತ್ತಿರಬಹುದು, ಮತ್ತೊಂದರಲ್ಲಿ ಇವೆರಡರ ನಡುವಿನ ಯಾವುದೇ ಹಂತದಲ್ಲಿರಬಹುದು.

5) ಆಯಿತು! ಈಗ ಈ ಹಂತ/ಫೇಸ್ ನಮಗೆ ಹೇಗೆ ನೆರವಾಗುತ್ತದೆ ಎಂದು ತಿಳಿಯಬೇಕಲ್ಲ! ಕರೆಂಟ್ ಯಾವ ರೀತಿಯಲ್ಲಿ ಕೆಲಸ ಮಾಡುತ್ತದೆ ಅಂತಾ ಒಮ್ಮೆ ನೆನಪಿಸಿಕೊಳ್ಳೋಣ. ಅದೊಂದು ಶಕ್ತಿಯ ಪೆಟ್ಟು/ಹೊಡೆತ ಇದ್ದಂಗೆ. ಗಾಡಿಯನ್ನು ಶುರುಮಾಡಲು ‘ಕಿಕ್’ ಹೊಡೆಯುತ್ತಿವಲ್ಲ ಹಾಗಿರುವ ಪೆಟ್ಟು/ಹೊಡೆತ ಅದು. ಮೇಲೆ ನೋಡಿದಂತೆ ಕರೆಂಟಿನದು ಪ್ರತಿ ಸೆಕೆಂಡಿಗೆ 50 ಹೊಡೆತ/ಪೆಟ್ಟುಗಳು. 1 ಫೇಸ್ ಬಳಸಿ ಈ ಬಗೆಯ ಕರೆಂಟ್ ಪೆಟ್ಟುಗಳಿಂದ ಚಿಕ್ಕದಾದ ಮೋಟಾರ್‍ ನಡೆಸಬಹುದು ಆದರೆ ಅದೇ ಗದ್ದೆಯಲ್ಲಿ ಬೇಕಾದ 10 HP ಯಷ್ಟು ದೊಡ್ಡದಾದ ಪಂಪ್ ನಡೆಸಲು ಹೆಚ್ಚಿನ ಕಸುವು ಬೇಕು. ಇಂತಲ್ಲಿ 1 ತಂತಿಯಿಂದ ಹೊರಡುವ ಕರೆಂಟಿನ ಪೆಟ್ಟುಗಳನ್ನು ಕೊಡುವುದಕ್ಕಿಂತ 2-3 ತಂತಿಗಳಲ್ಲಿ ಕರೆಂಟ್ ಹರಿಸಿ ಪೆಟ್ಟುಗಳನ್ನು ಕೊಟ್ಟರೆ ಪಂಪನ್ನು ಸುಲಬವಾಗಿ ಓಡಿಸಬಹುದು. ಒಂದು ಗಾಲಿಯನ್ನು ಒಬ್ಬರೇ ತಿರುಗಿಸುವುದಕ್ಕಿಂತ ಹಲವು ಜನರು ಒಂದಾಗಿ ಸುಲಭವಾಗಿ ತಿರುಗಿಸಿದಂತೆಯೇ ಇದು.

6) ಹಾಗಾಗಿ, ದೊಡ್ಡ ಸಲಕರಣೆಗಳನ್ನು ನಡೆಸಲು 1 ಫೇಸ್ ಕರೆಂಟಗಿಂತ 3 ಫೇಸ್ ಕರೆಂಟ್ ಒಳ್ಳೆಯದು. ಹಾಗಿದ್ದರೆ 4 ಇಲ್ಲವೇ 5 ಫೇಸಗಳನ್ನು ಏಕೆ ಬಳಸಬಾರದು ಅನ್ನುವ ಪ್ರಶ್ನೆ ಹಲವರಲ್ಲಿ ಮೂಡಬಹುದು. ಇದಕ್ಕೆ ಉತ್ತರ ಸರಳವಾಗಿದೆ 3 ಫೇಸಗಳಲ್ಲಿ ಕಡಿಮೆ ದುಡ್ಡಿನಿಂದ ಮಾಡಬಹುದಾದುಕ್ಕೆ 4-5 ಫೇಸ್ಗಳನ್ನು ಯಾಕೇ ಬಳಸಬೇಕು, ಅಲ್ಲವೇ ?! ಆದ್ದರಿಂದ ಅಗತ್ಯವಿರುವ ಎಲ್ಲೆಡೆ  ಕಡಿಮೆ ವೆಚ್ಚದ 3 ಫೇಸ ಕರೆಂಟನ್ನೇ ಬಳಸಲಾಗುತ್ತದೆ.

7) ಗಮನಿಸಿ ನೋಡಿ ನಿಮ್ಮ ಅಕ್ಕಪಕ್ಕದಲ್ಲಿರುವ ಟ್ರಾನ್ಸ್ಪಾರ್ಮರ್ ಇಂದ ಕರೆಂಟ್ 3 ತಂತಿಯಲ್ಲಿ ಹೊರಬರುತ್ತದೆ. ಅಂದರೆ ಅದು 3 ಫೇಸ್ ಆಗಿರುತ್ತದೆ. ಅಲ್ಲಿಂದ ಕರೆಂಟನ್ನು ಕಂಬವೊಂದಕ್ಕೆ ಸಾಗಿಸಿ, ಮುಂದೆ ಎಲ್ಲರ ಮನೆಗೆ ನೀಡಲಾಗುತ್ತದೆ. ಕರೆಂಟ್ ಕಂಬದಿಂದ ಹೊರಡುವ ತಂತಿಗಳ ಮೇಲೆ ಇಲ್ಲವೇ ಬದಿಯಲ್ಲಿ ಇನ್ನೊಂದು ಹೆಚ್ಚಿನ ತಂತಿ ಇರಬಹುದು ಇದಕ್ಕೆ ನ್ಯೂಟ್ರಲ್ ಇಲ್ಲವೇ ಗ್ರೌಂಡ್ (ನೆಲ) ತಂತಿ ಅನ್ನುತ್ತಾರೆ. ಇದು ಕರೆಂಟಿನಲ್ಲಿ ಏರಿಳಿತವಾದಾಗ ಹೆಚ್ಚಿನ ಕರೆಂಟನ್ನು ನೆಲಕ್ಕೆ ಸಾಗಿಸಿ ತೊಂದರೆಯಿಂದ ಕಾಪಾಡುತ್ತದೆ.

8) ಹೀಗೆ, ದೊಡ್ಡ ಸಲಕರಣೆಗಳಿಗೆ ಹೆಚ್ಚಿನ ಕರೆಂಟ್ ಬೇಕಾದಾಗ ಎಲ್ಲ 3 ತಂತಿಗಳಿಂದ ಕರೆಂಟನ್ನು ಪಡೆಯಲಾಗುತ್ತದೆ. ಅದೇ ನಿಮ್ಮ ಮನೆಯಲ್ಲಿ ಚಿಕ್ಕ ಸಲಕರಣೆಗಳಿದ್ದು ಅವುಗಳಿಗೆ ಕರೆಂಟ್ ಕಡಿಮೆ ಬೇಕಾಗಿದ್ದರೆ 3 ತಂತಿಗಳಲ್ಲಿ ಬರೀ 1 ತಂತಿಯಿಂದ ಕರೆಂಟ್ ಪಡೆದರೂ ಸಾಕು. ಅದರಿಂದಲೇ ಟ್ಯೂಬಲಯ್ಟ್, ಫ್ಯಾನ್, ಮಿಕ್ಸರ್‍ ಮುಂತಾದ ಸಲಕರಣೆಗಳನ್ನು ನಡೆಸಬಹುದು.

ನಿಮ್ಮಲ್ಲಿ ಒಂಚೂರು ಹೆಚ್ಚಿಗೆನೇ ಕರೆಂಟಿನಿಂದ ನಡೆಯುವ ಉಪಕರಣಗಳಿದ್ದರೆ ಆಗ 2 ತಂತಿಗಳಿಂದ ನಿಮ್ಮ ಮನೆಗೆ ಕರೆಂಟನ್ನು ಒದಗಿಸಲಾಗುತ್ತದೆ. ಟ್ಯೂಬಲಯ್ಟನಂತಹ ಬೆಳಕಿನ ಸಲಕರಣೆಗಳಿಗೆ ಒಂದು ತಂತಿಯಾದರೆ, ಕರೆಂಟ್ ಒಲೆಯಂತಹ ಬಿಸಿ ಮಾಡುವ ಸಲಕರಣೆಗಳನ್ನು ನಡೆಸಲು ಎರಡನೆಯದು.

ಸರಿ ಹಾಗಾದ್ರೆ, ಮುಂದಿನ ಸರತಿ ಕರೆಂಟ್ ಕಂಬದಲ್ಲಿ 3 ತಂತಿಗಳು ಏಕಿವೆ ಅನ್ನುವ ಪ್ರಶ್ನೆಯನ್ನು ಯಾರಾದರೂ ನಿಮಗೆ ಕೇಳಿದರೆ ನೀವೇ ಅದಕ್ಕೆ ಉತ್ತರಿಸಬಲ್ಲಿರಿ, ಅಲ್ಲವೇ !

ಇಂಗ್ಲಿಷ್ ಮೂಲ: ‘ಬೆಸ್ಕಾಂ ಮಣಿವಣ್ಣನ್’.

ಕನ್ನಡಕ್ಕೆ: ಪ್ರಶಾಂತ ಸೊರಟೂರ

ಇವಿ ಮೋಟಾರ್‌ಗಳ ಜಗತ್ತು (ಭಾಗ-೨)

ಜಯತೀರ್ಥ ನಾಡಗೌಡ

ಹಿಂದಿನ ಬರಹದಲ್ಲಿ ೩ ಬಗೆಯ ಇಲೆಕ್ಟ್ರಿಕ್ ಓಡುಗೆಗಳ ಬಗ್ಗೆ ತಿಳಿದಿದ್ದೆವು. ಇದೀಗ ಅದನ್ನು ಮುಂದುವರೆಸುತ್ತ, ಇತರೆ ಓಡುಗೆಗಳ ಬಗೆಗಳನ್ನು ತಿಳಿಯೋಣ ಬನ್ನಿ.

 

  1. ಸ್ವಿಚ್ಡ್ ರಿಲಕ್ಟನ್ಸ್ ಓಡುಗೆ (Switch Reluctance Motor):

ಇದರಲ್ಲಿ ರೋಟಾರ್‌ಗೆ ಯಾವುದೇ ಸೆಳೆಗಲ್ಲಾಗಲಿ(Magnet) ಇಲ್ಲವೇ ತಂತಿಸುರುಳಿಗಳನ್ನು(Windings) ಬಳಸುವುದಿಲ್ಲ. ಬದಲಾಗಿ ಇವು ರಿಲಕ್ಟನ್ಸ್ ನಿಂದ ಉಂಟಾಗುವ ಸೆಳೆಬಲವನ್ನೇ ಬಳಸಿಕೊಂಡು ಕೆಲಸ ಮಾಡಬಲ್ಲವು. ಇವುಗಳು ಕೆಲಸ ಮಾಡುವಾಗ ಹೆಚ್ಚಿನ ಸದ್ದುಂಟು ಮಾಡುತ್ತವೆ, ಮತ್ತು ಇವುಗಳು ಕೆಲಸ ಮಾಡುವ ಬಗೆ ತುಸು ಜಟಿಲವಾಗಿರುವುದರಿಂದ ಇವುಗಳನ್ನು ಹಿಡಿತದಲ್ಲಿಡುವುದು ಅಷ್ಟೇ ಕಷ್ಟ. ಇವುಗಳ ಕಸುವಿನ ದಟ್ಟಣೆ ಮತ್ತು ಇವುಗಳ ತಂಪಾಗಿಸುವಿಕೆ, ಇತರ ಓಡುಗೆಗಳ ಹೋಲಿಕೆಯಲ್ಲಿ ಮಧ್ಯಮ ಮಟ್ಟದಲ್ಲಿರುತ್ತದೆ. SRM ಓಡುಗೆಗಳೆಂದೇ ಕರೆಯಲ್ಪಡುವ ಈ ಓಡುಗೆಗಳ ದಕ್ಷತೆಯು 85% ಕ್ಕೂ ಹೆಚ್ಚು. ಈ ಬಗೆಯ ಮೋಟಾರ್‌ಗಳಲ್ಲಿ ಯಾವುದೇ ಸೆಳೆಗಲ್ಲು ಮತ್ತು ತಂತಿಸುರುಳಿ ಇಲ್ಲದ ಕಾರಣ ಇವುಗಳು ಬಲು ಅಗ್ಗವಾಗಿರುತ್ತವೆ. ಆದರೆ ಇವುಗಳನ್ನು ಕೆಲವೇ ಕೆಲವು ಚೀನಾ ಮೂಲದ ಇವಿ ತಯಾರಕರು ಬಳಸುತ್ತಿದ್ದಾರೆ.

  1. ಆಕ್ಷಿಯಲ್ ಫ್ಲಕ್ಸ್ ಮೋಟಾರ್ (Axial Flux Motor):

ಈ ಬಗೆಯ ಓಡುಗೆಗಳಲ್ಲಿ ಉಂಟಾಗುವ ಸೆಳೆಗಲ್ಲಿನ ಹರಿವು(Magnetic Flux) ಅದರ ನಡುಗೆರೆ(Axial) ಮೂಲಕ ಸಾಗುತ್ತದೆ. ದಕ್ಷತೆಯಲ್ಲಿ ಮತ್ತು ಕಸುವಿನ ದಟ್ಟಣೆಯಲ್ಲಿ ಎಲ್ಲ ಮೋಟಾರ್‌ಗಳಿಗಿಂತ ಮೇಲು. ಇದೇ ಕಾರಣಕ್ಕೆ ಇವುಗಳನ್ನು ಫೆರಾರಿಯಂತ ದುಬಾರಿ ಮತ್ತು ಸೂಪರ್ ಕಾರುಗಳಲ್ಲಿ ಬಳಸುತ್ತಾರೆ. ಈ ಮೋಟಾರ್‌ಗಳು ಗಾತ್ರದಲ್ಲಿ ಚಿಕ್ಕದಾಗಿದ್ದು ತೂಕದಲ್ಲೂ ಹಗುರ. ಇವುಗಳನ್ನು ಹಿಡಿತದಲ್ಲಿಡುವುದು PMSM ಓಡುಗೆಗಳಂತೆ ಇರಲಿದೆ. ಇವುಗಳ ತಂಪಾಗಿಸುವಿಕೆಯೂ ಸಲೀಸು. ಆಕ್ಷಿಯಲ್ ಫ್ಲಕ್ಸ್ ಓಡುಗೆಗಳಲ್ಲಿ ಹೆಚ್ಚು ಗಟ್ಟಿಮುಟ್ಟಾದ ಸೆಳೆಗಲ್ಲಿನ ಬಳಕೆಯಿಂದ ದುಬಾರಿ ಎನಿಸಿಕೊಂಡಿವೆ.

  1. ಸಿಂಕ್ರೋನಸ್ ರಿಲಕ್ಟನ್ಸ್ ಮೋಟಾರ್ಸ್ (Synchronous Reluctance Motors):

ಇವುಗಳಲ್ಲೂ ರೋಟಾರ್‌ಗೆ ಯಾವುದೇ ಸೆಳೆಗಲ್ಲಾಗಲಿ ಇಲ್ಲವೇ ತಂತಿಸುರುಳಿಗಳನ್ನು ಬಳಸುವುದಿಲ್ಲ. ಇವುಗಳನ್ನು ಹಿಡಿತದಲ್ಲಿಡುವ ಬಗೆಯು PMSM ಬಗೆಯ ಓಡುಗೆಗಳಂತೆ ಇರಲಿವೆ. ಈ ಓಡುಗೆಗಳ ಕಸುವಿನ ದಟ್ಟಣೆ ಮತ್ತು ದಕ್ಷತೆಯೂ ಹೆಚ್ಚಾಗಿದೆ. ಬೆಲೆಯಲ್ಲಿ PMSM ಓಡುಗೆಗಳಿಗಿಂತ ಅಗ್ಗ ಮತ್ತು ಇಂಡಕ್ಷನ್ ಓಡುಗೆಗಳಿಗಿಂತ ತುಸು ಹೆಚ್ಚು. ಇವುಗಳನ್ನು ಕೈಗಾರಿಕೆಯಲ್ಲಿ ಮತ್ತು ವೋಲ್ವೋ ಟ್ರಕ್‌ಗಳಲ್ಲಿ ಬಳಕೆ ಮಾಡಲಾಗುತ್ತಿದೆ.