ಬೇಸಾಯದಲ್ಲಿ ಆಗಬೇಕಾದ ಸುಧಾರಣೆಗಳು

(ಇಗೋ ವಿಜ್ಞಾನ – 2020 ಪೈಪೋಟಿಯಲ್ಲಿ ವಿಶೇಷ ಬಹುಮಾನ ಪಡೆದ ಬರಹ)

ನಯನ.ಸಿ.ಕೆ.

ಬೇಸಾಯದಲ್ಲಿ ಇಂದು ಆಗಬೇಕಾದ ಮುಖ್ಯ ಸುಧಾರಣೆಗಳೆಂದರೆ:

೧. ಉಳುವ ರೈತನಿಗೆ ಆದಾಯ ಬರಬೇಕಾದರೆ ಯಾವ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಬೇಕು?
೨. ರೈತ, ಮಾರುಕಟ್ಟೆ ಮತ್ತು ಗ್ರಾಹಕ – ಇವರ ನಡುವಿನ ನಂಟನ್ನು ಸರಿದೂಗಿಸುವುದು ಹೇಗೆ?

ಇದರ ವಿವರಗಳನ್ನು ಕೆಳಗೆ ನೋಡೋಣ.

ಭೂಮಿಯನ್ನು ಉಳುಮೆಮಾಡಿ, ಸಸ್ಯಗಳನ್ನು ಪೋಷಿಸಿ, ಅದರಿಂದ ಮಾನವ ಮತ್ತು ಪ್ರಾಣಿಗಳಿಗೆ ಉಪಯೋಗಗಳನ್ನು ಪಡೆಯುವುದೇ ವ್ಯವಸಾಯ. ವ್ಯವಸಾಯ ಮಾನವನಿಗೆ ಅಗತ್ಯವಾದ ಆಹಾರ ಧಾನ್ಯಗಳನ್ನು ಹಾಗೂ ಕೈಗಾರಿಕೆಗಳಿಗೆ ಕಚ್ಚಾವಸ್ತುಗಳನ್ನು ಪೂರೈಸುತ್ತದೆ.

ಕೃಷಿಭೂಮಿಯ ಸ್ವರೂಪ, ವಾಯುಗುಣ, ಮಳೆಹಂಚಿಕೆ, ಮಣ್ಣಿನಗುಣ, ಬಂಡವಾಳ ಹೂಡಿಕೆಯ ಆಧಾರದ ಮೇಲೆ ಭಾರತದ ವಿವಿಧ ಭಾಗಗಳಲ್ಲಿ ವಿವಿಧ ಬಗೆಯ ಬೇಸಾಯ ಪದ್ಧತಿಗಳು ರೂಡಿಯಲ್ಲಿವೆ. ಅಂತೆಯೇ ವ್ಯವಸಾಯದ ಮುಖ್ಯ ಲಕ್ಷಣಗಳಾದ ಭೂಬಳಕೆ, ಬೆಳೆಸುವ ಬೆಳೆಗಳು, ತಳಿ, ಇಳುವರಿ, ಬಳಸುವ ಉಪಕರಣಗಳು ಮತ್ತು ಗೊಬ್ಬರಗಳ ಬಳಕೆ ಸ್ಥಳದಿಂದ ಸ್ಥಳಕ್ಕೆ ವ್ಯತ್ಯಾಸ ಹೊಂದುತ್ತದೆ.

ಕೃಷಿ ಕ್ಷೇತ್ರದಲ್ಲಿ ಮುನ್ನಡೆಯಬೇಕಾದರೆ, ಲಾಭ ಗಳಿಸಬೇಕಾದರೆ ರೈತರು ಆಧುನಿಕ ಕೃಷಿ ಪದ್ದತಿ ಹಾಗೂ ತಂತ್ರಜ್ಞಾನದ ಅಳವಡಿಕೆ ಅಥವಾ ಬಳಕೆಯ ಪರಿಕಲ್ಪನೆಯನ್ನು ಅರ್ಥೈಸಿಕೊಳ್ಳಬೇಕು. ಇತ್ತೀಚಿನ ದಿನಗಳಲ್ಲಿ ರೈತರು ಎದುರಿಸುತ್ತಿರುವ ಪ್ರಮುಖ ಸಮಸ್ಯೆಯೆಂದರೆ  ಕಾರ್ಮಿಕರ ಕೊರತೆ. ಕೂಲಿಭತ್ಯೆ ಹೆಚ್ಚಳದಿಂದಾಗಿ ದುಡಿಯುವ ಜನರಿಲ್ಲದ ಮನೆಗಳಲ್ಲಿ ಉತ್ಪಾದನಾ ವೆಚ್ಚ ಹೆಚ್ಚಳದಿಂದ ಕೃಷಿಯಿಂದ, ಲಾಭ ಪಡೆಯುವುದು ಕನಸಿನ ಮಾತಾಗಿದೆ. ಇದರಿಂದ ವಿಮುಕ್ತಿ ಹೊಂದಲು, ಅಂದರೆ ಕೃಷಿಯ ಕಾರ್ಯಕ್ಷಮತೆ ಹೆಚ್ಚಿಸಿ ಮತ್ತು ಉತ್ಪಾದನಾ ವೆಚ್ಚ ತಗ್ಗಿಸಿ, ಹೆಚ್ಚು ಲಾಭಗಳಿಸಲು  “ಕೃಷಿ ಯಾಂತ್ರೀಕರಣ” ಹಾಗೂ “ಆಧುನಿಕ ತಂತ್ರಜ್ಞಾನ”ದ ಬಳಕೆ ಅನಿವಾರ್ಯವಾಗಿದೆ.

ಕೃಷಿ ಯಾಂತ್ರೀಕರಣ

ಮಾನವಸಂಪನ್ಮೂಲದ ಕೊರತೆ ಕೃಷಿಕ್ಷೇತ್ರದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಅಲ್ಪಸ್ವಲ್ಪ ಯಂತ್ರಗಳ ಅಳವಡಿಕೆ ತೀರಾ ಅಗತ್ಯವಾಗಿದೆ. ಭೂಮಿ ಯನ್ನು ಅಣಿಗೊಳಿಸಲು  ಮತ್ತು ಆಳವಾಗಿ ಉಳುಮೆ ಮಾಡಲು ಟ್ರ್ಯಾಕ್ಟರ್ ಗಳ ಬಳಕೆ ಸಾಮಾನ್ಯವಾಗಿದೆ. ನವೀಕರಣಗೊಂಡ ೪೦ಹೆಚ್ ಪಿ ಟ್ರ್ಯಾಕ್ಟರ್ ಗಳ ಬಳಕೆ ಹೆಚ್ಚಾಗಿದೆ. ಬಹುಪಯೋಗಿ ಕಳೆ ಕೊಚ್ಚುವ ಯಂತ್ರ, ಹಾಲು ಹಿಂಡುವ ಯಂತ್ರ, ಪಾಲಿ ಟನಲ್ ಡ್ರೈಯರ್, ವಿದ್ಯುತ್ ಬೇಲಿ, ರೋಟರಿ ಟಿಲ್ಲರ್, ಕೀಟನಾಶಕಗಳ ಸಿಂಪಡಣೆಗೆ ವಿವಿಧ ಬಗೆಯ ಸ್ಪ್ರೇಯರ್ ಗಳು , ಮಿಸ್ಟ್ ಬ್ಲೋಯರ್, ಗುಂಡಿ ತೋಡುವ ಯಂತ್ರ, ಸಂಯೋಜಿತ ಕೊಯ್ಲು ಮತ್ತು ನಾಟಿಯಂತ್ರ, ಮುಂತಾದವುಗಳು ಹೆಚ್ಚು ಉಪಯುಕ್ತವಾಗಿವೆ.

ಜಿ ಪಿ ಎಸ್ ತಂತ್ರಜ್ಞಾನ ಅಳವಡಿಸಿರುವ  ಆಟೊಪೈಲಟ್ ಸ್ಪ್ರೇಯರ್ ಮತ್ತು ಟ್ರ್ಯಾಕ್ಟರ್ ಗಳು ಹೆಚ್ಚು ಸಾಮರ್ಥ್ಯ ಹೊಂದಿವೆ. ಇವು ಸ್ವಯಂಚಾಲಿತವಾಗಿದ್ದು, ಮಾನವ ತೊಡಕುಗಳ ಪ್ರಮಾಣ ಕಡಿಮೆ.

“ಸಮಯೋಚಿತ ಉತ್ಪಾದನೆ” ಕೃಷಿಯಲ್ಲಿ ಲಾಭಗಳಿಸಲು  ಒಂದು ಪ್ರಮುಖ ಅಂಶವಾಗಿದೆ. ಮುಂಗಡ ಬಿತ್ತನೆ, ಸಮಯಕ್ಕೆ ಸರಿಯಾಗಿ ಕಟಾವು ಮಾಡುವುದು ಮತ್ತು ಫಸಲನ್ನು ಸರಿಯಾದ ಸಮಯದಲ್ಲಿ ಮತ್ತು ಸ್ಥಳದಲ್ಲಿ ಶೇಖರಿಸುವುದು ಅತ್ಯಗತ್ಯ. ಫಸಲುಗಳನ್ನು ಶೇಖರಿಸಿ ಅಗತ್ಯಬಿದ್ದಾಗ, ಅಂದರೆ ಹೆಚ್ಚಿನ ಬೆಲೆ ದೊರೆತಾಗ ಮಾರಲು ಶೀತಲ ಶೇಖರಣಾ ಘಟಕದ  ಅವಶ್ಯಕತೆ ಇದೆ. ಹಾಗಾಗಿ  ರೈತರು ಸರ್ಕಾರದಿಂದ  ದೊರೆಯುವ ಸವಲತ್ತುಗಳನ್ನು  ಬಳಸಿಕೊಂಡು ತಾಲೂಕು ಅಥವಾ ಹೋಬಳಿ ಮಟ್ಟದಲ್ಲಿ  ಹೆಚ್ಚು ಅವಶ್ಯಕತೆಯಿರುವಲ್ಲಿ,  ಈ ಘಟಕಗಳನ್ನು  ನಿರ್ಮಿಸಿಕೊಳ್ಳುವುದು ಹೆಚ್ಚು ಉಪಯುಕ್ತ .

ಬೆಳೆ ಸೆನ್ಸರ್ಸ್ :

samvedagala-balake(ಚಿತ್ರ ಕೃಪೆ: Benedette cuffari)

ರಸಗೊಬ್ಬರ ಹಾಗೂ ಕೀಟನಾಶಕಗಳ ಪರಿಣಾಮಕಾರಿ ಸಿಂಪಡಣೆ ಒಂದು ದೊಡ್ಡ ಸವಾಲಾಗಿ ಪರಿಣಮಿಸಿದೆ. ಮುಖ್ಯವಾಗಿ, ಪ್ರತ್ಯೇಕ ಬೆಳೆಗೆ ಬೇಕಾದ ನಿರ್ದಿಷ್ಠ ರಸಗೊಬ್ಬರದ ಬಳಕೆ, ಸಿಂಪಡಿಸಬೇಕಾದ  ಸಮಯ  ಮತ್ತು ಅಳತೆ – ಇವುಗಳು ಸಾಮಾನ್ಯ ರೈತರಿಗೆ ತಿಳಿದಿರುವುದಿಲ್ಲ. ಕ್ರಾಪ್ ಸೆನ್ಸಾರ್ ಗಳು ಈ ಕಾರ್ಯವನ್ನು ಸುಲಭವಾಗಿಸುತ್ತವೆ. ಈ ತಂತ್ರಜ್ಞಾನದಿಂದ ಬೆಳೆಗಳ ಗುಣಮಟ್ಟವನ್ನು  ಅಳೆಯುವುದಲ್ಲದೆ, ಕೃಷಿ  ಭೂಮಿಯ  ಮೇಲ್ಮೈ ಕೂರೆತದ ಸಂಭವನೀಯತೆಯನ್ನು  ತಗ್ಗಿಸುತ್ತದೆ. ಈ ಬೆಳೆ ಸೆನ್ಸರ್ ಗಳು ಬೆಳೆಸಸ್ಯಗಳಿಗೆ  ಅಗತ್ಯವಾದ  ರಸಗೊಬ್ಬರ ಅಥವಾ ಕೀಟನಾಶಕದ  ಅಳತೆಯನ್ನು, ಅಗತ್ಯವಾದ ಸಮಯವನ್ನೂ ನಿರ್ದೇಶಿಸುವಂತೆ  ವಿನ್ಯಾಸಗೊಂಡಿವೆ. ಇವುಗಳ ಬಳಕೆಯಿಂದಾಗಿ  ಸಸ್ಯಗಳ ಗುಣಮಟ್ಟವನ್ನು ಕಾಪಾಡಿಕೊಂಡು ಅಗತ್ಯವಿರುವಷ್ಟೇ  ಕ್ರಿಮಿನಾಶಕ, ಗೊಬ್ಬರಗಳನ್ನು ಒದಗಿಸುವುದರಿಂದ ಅವುಗಳ ನಿಯಮಿತ ಬಳಕೆಯಿಂದಾಗಿ, ಹೂಡಿಕೆಯನ್ನು ತಗ್ಗಿಸಿ, ಮಣ್ಣಿನ ಗುಣಮಟ್ಟವನ್ನು ಕಾಪಾಡಿಕೊಂಡು ಹೆಚ್ಚಿನ ಲಾಭ ಪಡೆಯಬಹುದಾಗಿದೆ.

ಮಾಹಿತಿ ತಂತ್ರಜ್ಞಾನದ ಬಳಕೆ

ಇತ್ತೀಚಿನ ದಿನಗಳಲ್ಲಿ  ರಿಮೋಟ್ ಸೆನ್ಸಿಂಗ್, ಜಿಪಿಎಸ್ ಮತ್ತು ಜಿಯೋಗ್ರಾಫಿಕಲ್ ಇನ್ಫರ್ಮೇಷನ್ ಸಿಸ್ಟಮ್ ತಂತ್ರಜ್ಞಾನಗಳು ಕೃಷಿ ಚಟುವಟಿಕೆಗಳ ಮೌಲ್ಯಮಾಪನ ಮತ್ತು ನಿರ್ವಹಣೆಯಲ್ಲಿ ಗಮನಾರ್ಹ ಪಾತ್ರವಹಿಸುತ್ತಿವೆ. ಇವು ಅನೇಕ ತರನಾಗಿ ಉಪಯುಕ್ತವಾಗಿವೆ. ಫಸಲಿನ ಬೆಳವಣಿಗೆಯ ಗುಣಮಟ್ಟ ನೋಡಿಕೊಳ್ಳುವುದು, ಮಣ್ಣಿನ ತೇವಾಂಶ, ಫಲವತ್ತತೆಯ ಮೌಲ್ಯಮಾಪನ, ಬೆಳೆಗೆ ತಗುಲಬಹುದಾದ ಅಥವಾ ತಗುಲಿರಬಹುದಾದ ರೋಗ ಮತ್ತು ಕೀಟಗಳ ಭಾದೆ, ನೀರಿನ ಉಬ್ಬರ ಅಥವಾ ಕೊರತೆಯ ಸ್ಥಿತಿಗತಿ, ಅಂದಾಜು ಇಳುವರಿ, ಹವಾಮಾನ ವೈಪರೀತ್ಯದ ವರದಿಗಳ ನಿಖರ ಮಾಹಿತಿಯಿಂದಾಗಿ, ಕೃಷಿ ಪದ್ಧತಿಯ ಸಂರಕ್ಷಣೆ ಹಾಗೂ ಕೃಷಿಕ ಸಮುದಾಯದ ಆರ್ಥಿಕ ಸ್ಥಿತಿಗತಿಯ ಸುಧಾರಣೆ ಸಾಧ್ಯವಾಗುತ್ತದೆ. ಜಿಪಿಎಸ್ ತಂತ್ರಜ್ಞಾನದಿಂದ, ನಿರ್ದಿಷ್ಟ ಭೂಮಿಯಿಂದ ಬರುವ ಇಳುವರಿಯನ್ನು ಊಹಿಸಿ ದಾಖಲಿಸಬಹುದು. ಈ ಇಳುವರಿ ನಕ್ಷೆಯನ್ನು ಅವಲಂಬಿಸಿಕೊಂಡು ಯಾವ ಬೆಳೆ ಬೆಳೆಯುವುದು ಸೂಕ್ತವೆಂದು ನಿರ್ಣಯ ಮಾಡುವುದರೊಂದಿಗೆ, ಅತಿ ಹೆಚ್ಚುಉತ್ಪಾದನೆಯಿಂದಾಗುವ ಬೆಲೆ ಕುಸಿತದ ನಷ್ಟ ತಪ್ಪುತ್ತದೆ.

ಸಂರಕ್ಷಿತ ಕೃಷಿ ( ಹಸಿರು ಮನೆ ತಂತ್ರಜ್ಞಾನ)

hasiru-mane

ಚಿತ್ರ ಕೃಪೆ: Krishijagran.com

ಪಾಲಿಹೌಸ್ ಅಥವಾ ಹಸಿರುಮನೆಗಳಲ್ಲಿ, ಬೆಳೆಯುವ ಬೆಳೆಗಳ ಬೇಸಾಯಕ್ಕೆ ಅನುಕೂಲವಾದ ವಾತಾವರಣ ಕಲ್ಪಿಸಿ, ಉತ್ತಮ ಗುಣಮಟ್ಟ ಮತ್ತು ಅಧಿಕ ಇಳುವರಿ ಪಡೆಯಬಹುದಾಗಿದೆ. ಭಾರ ಕಡಿಮೆಯಿದ್ದು, ಹೆಚ್ಚು ಲಾಭ ತರುವಂತಹ ತರಕಾರಿ, ಹೂವು ಹಾಗೂ ಹಣ್ಣಿನ ಬೆಳೆಗಳಿಗೆ ಇದು ಸೂಕ್ತ. ಉತ್ತಮ ತಳಿಗಳನ್ನು ಅಳವಡಿಸಿಕೊಂಡು ವೈಜ್ಞಾನಿಕವಾಗಿ ಕಡಿಮೆ ಸ್ಥಳದಲ್ಲಿ ಉತ್ತಮ ಗುಣಮಟ್ಟದ ಇಳುವರಿ ಮತ್ತು ಹೆಚ್ಚಿನ ಉತ್ಪಾದಕತೆ ಪಡೆಯಬಹುದು. ವರ್ಷದ ಎಲ್ಲಾ ಕಾಲದಲ್ಲೂ ಮಾರುಕಟ್ಟೆಗೆ ತಕ್ಕಂತೆ ಬೆಳೆಗಳನ್ನು ಬೆಳೆದು ಲಾಭಗಳಿಸಬಹುದು ಮತ್ತು ಒಳ್ಳೆಯ ಗುಣಮ್ಟದ ಹಾಗೂ ರಫ್ತುಮಾಡಲು ಯೋಗ್ಯವಾದ ಬೆಳೆ ಸಾಧ್ಯವಾಗುತ್ತದೆ.

ಜೈವಿಕ ತಂತ್ರಜ್ಞಾನ

ಕೃಷಿ ಅಭಿವೃದ್ಧಿಯಲ್ಲಿ ಜೈವಿಕ ತಂತ್ರಜ್ಞಾನ ಪ್ರಮುಖ ಪಾತ್ರವಹಿಸಿದೆ. ಟ್ರಾನ್‍ಜೆನಿಕ್ (ಕುಲಾಂತರಿ ತಳಿ) ತಂತ್ರಜ್ಞಾನದಿಂದ ಸುಧಾರಿತ ಇಳುವರಿ, ವಾತಾವರಣದ ಒತ್ತಡಕ್ಕೆ ಪ್ರತಿರೋಧಕತೆ, ಹೆಚ್ಚಿನ ಪೌಷ್ಟಿಕತೆ, ಗ್ಲೈಫೋಸೇಟ್ (ರೌಂಡಪ್), ಫಾಸ್ಫೀನೋತ್ರಿಸಿನ್ (ಬಾಸ್ಟಾ)  ಮುಂತಾದ ಕಳೆನಾಶಕ ಔಷಧಗಳಿಗೆ, ನಿರೋಧಕ ಶಕ್ತಿ ಹೊಂದಿರುವ ಬೆಳೆ ಸಸ್ಯಗಳು ದೊರಕುತ್ತಿವೆ.  ಕೀಟ ಹಾಗೂ ರೋಗ ನಿರೋಧಕ ತಳಿಗಳಾದ ಬಿ ಟಿ ಹತ್ತಿ, ಭತ್ತ, ಟೊಮ್ಯಾಟೋ, ಬದನೆ ಮುಂತಾದವು, ಇಳುವರಿಯ ಗುಣಮಟ್ಟ ಹೆಚ್ಚಿಸಿ ಲಾಭ ತಂದುಕೊಡುತ್ತಿವೆ.  ಉಪಯುಕ್ತ ಗುಣಗಳನ್ನು ಸಮೀಕರಿಸಿ ತಯಾರಿಸಿದ ಹೈಬ್ರಿಡ್ ತಳಿಗಳಿಂದ ರೋಗನಿರೋಧಕತೆ, ಅಧಿಕ ಇಳುವರಿ ಮತ್ತು ಬರನಿರೋಧಕ ಶಕ್ತಿ ಹೊಂದಿದ್ದು ಪ್ರಾದೇಶಿಕ ತಳಿಗಳಿಗಿಂತ ಹೆಚ್ಚು ಉಪಯುಕ್ತವಾಗಿವೆ.

ಅಂಗಾಂಶ ಕೃಷಿ ಮತ್ತು ಕ್ಲೋನಿಂಗ್ ತಂತ್ರಜ್ಞಾನವು, ಪ್ರಮುಖವಾಗಿ ತಿರುಳು, ಮರದ ದಿಮ್ಮಿ, ತೊಗಟೆ, ಹಣ್ಣು ಮುಂತಾದ ಉತ್ಪನ್ನಗಳಿಗಾಗಿ ಬೆಳೆಯುವ ಅರಣ್ಯ ಕೃಷಿ ಮತ್ತು ತೋಟಗಾರಿಕಾ ಬೆಳೆಗಳಲ್ಲಿ ಹೆಚ್ಚು ಬಳಕೆಯಲ್ಲಿದೆ. ಕಡಿಮೆ ಸಮ ಯ ದಲ್ಲಿ ಅಧಿಕ ಸಂಖ್ಯೆಯ ಸಸಿಗಳು, ಬೀಜದ ಜಡಸ್ಥಿತಿ ಹಾಗೂ ಅದು ಮೊಳೆತು ಸಸಿಯಾಗಿ ಫಲಕೊಡಲು ತೆಗೆದುಕೊಳ್ಳುವ ಕಾಲಾವಧಿ, ಈ ವಿಧಾನದಲ್ಲಿ ಉತ್ಪಾದಿಸಿದ ಸಸ್ಯಗಳಲ್ಲಿ ದುಪ್ಪಟ್ಟು ಕಡಿಮೆಯಿರುತ್ತದೆ.

ಜೈವಿಕ ತಂತ್ರಜ್ಞಾನದ ಪರ ಮತ್ತು ವಿರೋಧದ ಚರ್ಚೆಗಳು ಹಲವಾರು ವರುಷಗಳಿಂದ ನಡೆಯುತ್ತಿವೆ. ಈ ನಿಟ್ಟಿನಲ್ಲಿ ವೈಜ್ಞಾನಿಕವಾಗಿ ಸರಿಯಾಗಿರುವ ಕ್ರಮಗಳನ್ನು ಜಾರಿಗೆ ತರಬೇಕು. ಹೆಚ್ಚು ಇಳುವರಿ ಪಡೆಯುವಂತಾಗಬೇಕು ಆದರೆ ಇದರಿಂದ ಭೂಮಿಯ ಫಲವತ್ತತೆ ಹಾಳಾಗದಂತೆಯೂ ನೋಡಿಕೊಳ್ಳಬೇಕು. ಹೀಗಾಗಿ ಇಲ್ಲಿ ಸಮದೂಗಿದ ನಡೆ ತುಂಬಾ ಮುಖ್ಯ.

ಆಧುನಿಕ ನೀರಾವರಿ ಪದ್ಧತಿ

ಇತ್ತೀ ಚಿ ನ ದಿನಗಳಲ್ಲಿ, ಬೆಳೆಗೆ ಅಗತ್ಯವಿರುವ ಪ್ರಮಾಣದಲ್ಲಿ  ನೀರನ್ನು ಒದಗಿಸಿ, ಹೆಚ್ಚು ನೀರು ಪೋಲಾಗುವುದನ್ನು ತಡೆಗಟ್ಟುವಲ್ಲಿ ಮಹತ್ತರ ಆವಿಷ್ಕಾರಗಳು ನಡೆದಿವೆ. ಅದರ ಪರಿಣಾಮವಾಗಿ ಡ್ರಿಪ್ ಅಟೋಮೇಶನ್ ಸಿಸ್ಟಮ್ (ತಂತಾನೇ ನಡೆಯುವ ಹನಿ ನೀರಾವರಿ ವ್ಯವಸ್ಥೆ)  ಅನ್ನು ಫೋನಿನಿಂದ ಪ್ರೋಗ್ರಾಂ ಮಾಡಬಹುದು  ಮತ್ತು ಅದು ನಿಖರ ಪ್ರಮಾಣದ ನೀರನ್ನು ಹಾಯಿಸುತ್ತದೆ .

ಹೊಸ ಮಾದರಿಯ ಡೀಪ್ ಡ್ರಿಪ್ ಇರ್ರಿಗೇಶನ್ (ಆಳ ಹನಿ ನೀರಾವರಿ) ಇತ್ತೀಚಿಗೆ ನಮ್ಮ ದೇಶಕ್ಕೆ ಪರಿಚಯಗೊಂಡಿದೆ. ಈ ವ್ಯವಸ್ಥೆಯಿಂದ ಬೇರಿಗೆ ನೇರವಾಗಿ  ನೀರುಣಿಸುವುದರಿಂದ ಉಳಿದೆಲ್ಲ ನೀರಾವರಿ ತಂತ್ರಜ್ಞಾನಕ್ಕೆ ಹೋಲಿಸಿದರೆ, ಇದು ಹೆಚ್ಚು ನೀರನ್ನು ಉಳಿಸುತ್ತದೆ ಮತ್ತು ಮರದ ಸುತ್ತ ಕಳೆಯೂ ಬೆಳೆಯುವುದಿಲ್ಲ.

neerina-vitarane(ಚಿತ್ರ ಕೃಪೆ: chahtech.com)

ಹೀಗೆ ಸ್ವಯಂಚಾಲಿತ ಸೂಕ್ಷ್ಮ ಹನಿ ನೀರಾವರಿ ಅಥವಾ ತುಂತುರು ನೀರಾವರಿ ಪದ್ದತಿಯಿಂದ, ನೀರಿನ ಮಿತಬಳಕೆ ಮಾಡಿಕೊಂಡು ಹೆಚ್ಚಿನ ಆದಾಯಗಳಿಸಬಹುದು.

ಕೃಷಿ  ಬೆಳೆವಣಿಗೆಯಲ್ಲಿ  ಸ್ಮಾರ್ಟ್ ಫೋನ್

smartphone-balake(ಚಿತ್ರಕೃಪೆ: lmkt.com)

ಸ್ಮಾರ್ಟ್ ಫೋನ್ ಬಳಕೆ ಈಗ ಸರ್ವೇಸಾಮಾನ್ಯ. ಇದರ ಬಳಕೆಯಿಂದ ಕೃಷಿಕಾರ್ಯಗಳನ್ನು ಸುಲಭಗೊಳಿಸಬಹುದಾಗಿದೆ. ಮಣ್ಣಿನ ತೇವಾಂಶ, ಉಷ್ಣಾಂಶ,ಹವಾಗುಣ ದಾಖಲಿಸುವ ರೋ ಬೋಟಿಕ್ಸ್ ಟೆಕ್ನಾಲಜಿಯನ್ನು  ಕೃಷಿಭೂಮಿಯಲ್ಲಿ   ಅಳವಡಿಸಿ, ಅದರ ದಾಖಲೆಗಳನ್ನು ಸ್ಮಾರ್ಟ್ ಫೋನಿನಿಂದ ನೋಡಬಹುದು. ಅದಕ್ಕೆ ತಕ್ಕಂತಹ ಬದಲಾವಣೆ ಗಳನ್ನೂ  ಅಳವಡಿಸಿಕೊಳ್ಳಬಹುದು. ಉದಾಹರಣೆಗೆ, ಉಷ್ಣಾಂಶ ಹೆಚ್ಚಾಗಿದ್ದರೆ ನೀರುಣಿಸುವುದು, ಪಾಲಿಹೌಸ್ ನ  ಮೇಲ್ಛಾವಣಿಯನ್ನು ಅಗತ್ಯಕ್ಕೆ ತಕ್ಕಂತೆ ಸರಿಸುವುದು.

ಕೃಷಿ ಅಪ್ಲಿ ಕೇ ಷನ್ ಗಳು ವ್ಯವಹಾರದಲ್ಲಿ ನಿರ್ಣಾಯಕ ನಿರ್ಧಾರಗಳನ್ನು ಕೈಗೊಳ್ಳಲು ಸಹಾಯಕವಾಗಿವೆ. ಇವುಗಳಿಂದ ಜಾಗತಿಕ ಕೃಷಿ, ಉಪಗ್ರಹ ಚಿತ್ರಣ, ದತ್ತಾಂಶ, ವಿಶ್ಲೇಷಣೆ, ತಜ್ಞರ ಸಲಹೆ, ಮೊಬೈಲ್ ಕ್ಯಾಮರಾದಿಂದ ರೋಗಗಳ ನಿರ್ಣಯ ಪಡೆಯಬಹುದಾಗಿದೆ. ಡಿಜಿಟಲ್ ಯುಗದಲ್ಲಿರುವ ಯುವ ರೈತರಿಗೆ ಬೇಸಾಯದ ಮಾಹಿತಿಗಳು ಬೆರಳ ತುದಿಯಲ್ಲಿ ದೊರೆಯುತ್ತವೆ.

1. ಸಣ್ಣ ಹಿಡುವಳಿದಾರರು ಗಣನೀಯ ಪ್ರಮಾಣದ ವೆಚ್ಚವನ್ನು ಭರಿಸಲಾರದೆ ಸಾಂಪ್ರದಾಯಿಕ ಪದ್ಧತಿಯನ್ನೇ ಅನುಸರಿಸುತ್ತಿದ್ದಾರೆ. ಇದರಿಂದ ಉತ್ಪಾದನಾ ವೆಚ್ಚ ಹಾಗೂ ಬರುವ ಲಾಭಕ್ಕೆ ಹೆಚ್ಚೇನು ಅಂತರವಿರುವುದಿಲ್ಲ, ಹೀಗಾಗಿ ಮಧ್ಯಮ ವರ್ಗದ ಕೃಷಿಕರ ಪರಿಸ್ಥಿತಿ ಚಿಂತಾಜನಕವಾಗಿದೆ. ನಮ್ಮ ರಾಜ್ಯದಲ್ಲಿ ಸಣ್ಣ ಮತ್ತು ಅತೀ ಸಣ್ಣ ರೈತರ ಪ್ರಮಾಣವು ಶೇಕಡ ೭೦ ರಷ್ಟಿದ್ದು ಸಮಗ್ರಕೃಷಿ ಮಾಡುವುದು ಸೂಕ್ತ. ಈ ಪದ್ಧತಿಯಲ್ಲಿ, ಒಂದರಲ್ಲಿ ನಷ್ಟ ಹೊಂದಿದರೂ ಆಧಾರಕ್ಕೆ ಇನ್ನೊಂದಿರುತ್ತದೆ. ಪೂರಕವಾದ ಉಪಕಸುಬಿನಿಂದ ವರ್ಷವಿಡೀ ಆದಾಯ ಬರುತ್ತಿರುತ್ತದೆ. ಕೃಷಿತ್ಯಾಜ್ಯಗಳನ್ನು ಬಳಸಿ ಎರೆಹುಳು ಗೊಬ್ಬರ, ಕಾಂಪೋಸ್ಟ್ ತಯಾರಿಸಿಕೊಂಡು ತಮ್ಮ ಜಮೀನಿಗೆ ಅವಶ್ಯಕವಿರುವ ಪೋಷಕಾಂಶಗಳನ್ನು ಸಾವಯವ ರೂಪದಲ್ಲಿ ಬಳಸುವುದರಿಂದ ರಾಸಾಯನಿಕ ಗೊಬ್ಬರಗಳ ಅವಲಂಬನೆಯನ್ನೂ ಕಡಿತಗೊಳಿಸಬಹುದು.

2. ಫಸಲು ಚೆನ್ನಾಗಿ ಬಂದಿದ್ದರೂ ಮಾರುಕಟ್ಟೆಯಲ್ಲಿ ರೈತರಿಗೆ ಉತ್ತಮ ಬೆಲೆ ಸಿಗುವುದಿಲ್ಲ. ಮಧ್ಯವರ್ತಿಗಳ ಹಾವಳಿಯಿಂದ ಮಾರುಕಟ್ಟೆಗೆ ನೇರವಾಗಿ ರೈತ ಪ್ರವೇಶಿಸಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಪರಿಹಾರವೆಂದರೆ ರೈತರು ಬೆಳೆದ ಬೆಳೆಗಳನ್ನು ನೇರವಾಗಿ ಗ್ರಾಹಕರಿಗೆ ತಲುಪಿಸುವ ವ್ಯವಸ್ಥೆ ಮಾಡುವುದು.

ಕೃಷಿಭೂಮಿ ಇರುವ ಪ್ರದೇಶ, ಮಾರಬೇಕಾಗುವ ಉತ್ಪನ್ನ, ಅದರ ಪ್ರಮಾಣ ಮತ್ತು ಬೆಳೆಯುವ ರೈತನ ಸ್ಥಿತಿಗತಿ ಮುಂತಾದ ಅಂಶಗಳನ್ನು ಆಧರಿಸಿ ರೈತರಿಂದ ನೇರವಾಗಿ ಗ್ರಹಕರಿಗೆ ಉತ್ಪನ್ನವನ್ನು ತಲುಪಿಸುವ ಪರಿಕಲ್ಪನೆಯಲ್ಲಿ ವಿವಿಧ ವಿಧಗಳಿವೆ. ಅವುಗಳೆಂದರೆ ರಸ್ತೆಬದಿಯ ಅಂಗಡಿಗಳು, ರಸ್ತೆಬದಿಯ ಮಾರುಕಟ್ಟೆ, ರೈತ ಮಾರುಕಟ್ಟೆ, ಗ್ರಾಹಕರೇ ಫಸಲನ್ನು ಆರಿಸಿಕೊಳ್ಳುವುದು. ಇನ್ನಿತರ ಆಯ್ಕೆಗಳೆಂದರೆ ಇ- ಮಾರುಕಟ್ಟೆ, ನೇರವಾಗಿ ರೆಸ್ಟೋರೆಂಟ್, ಹೋಟೆಲ್ ಉದ್ಯಮಗಳಿಗೆ ಮಾರುವುದು, ಕೃಷಿ ಅರಣ್ಯ ಅಥವಾ ತೋಟಗಾರಿಕೆ ಬೆಳೆಗಳನ್ನು ಫಸಲಿನ ಕಟಾವಿಗೆ ಗುತ್ತಿಗೆಕೊಡುವುದು.

ರಸ್ತೆಬದಿಯ ಅಂಗಡಿ

ಕೃಷಿಕ ತಾನು ಬೆಳೆದ ಉತ್ಪನ್ನಗಳನ್ನು ತನ್ನ ಕೃಷಿ ಭೂಮಿಯಲ್ಲೇ ಗ್ರಾಹಕರಿಗೆ ಮಾರುವುದು. ಇದರಿಂದ ಮಾರುಕಟ್ಟೆಗೆ ಸಾಗಾಣಿಕಾ ವೆಚ್ಚವನ್ನು ಕಡಿತಗಳಿಸಬಹುದಲ್ಲದೆ ಗ್ರಾಹಕರ ಬೇಡಿಕೆಗೆ ಅನುಸಾರವಾಗಿ ಉತ್ಪಾದನಾ ಪ್ರಮಾಣವನ್ನು ಹೆಚ್ಚಿಸಬಹುದಾಗಿದೆ.

ರಸ್ತೆಬದಿಯ ಮಾರುಕಟ್ಟೆ

ಒಂದು ಪ್ರದೇಶದ ರೈತ ಸಮುದಾಯ ಒಂದುಗೂಡಿ, ತಾವು ವರ್ಷವಿಡೀ ಬೆಳೆಯುವ ವಿವಿಧ ಬೆಳೆಗಳನ್ನು, ಋತುಕಾಲಿಕ ಹಣ್ಣು ಮತ್ತು ತರಕಾರಿಗಳನ್ನು ಒಂದೆಡೆ ಒಟ್ಟುಗೂಡಿಸಿ, ಗ್ರಾಹಕರಿಗೆ ಹತ್ತಿರದ ಜಾಗದಲ್ಲಿ ರಸ್ತೆಬದಿಯ ಮಾರುಕಟ್ಟೆ ಸೌಲಭ್ಯ ರೂಪಿಸುವುದರಿಂದ, ಹೆಚ್ಚಿನ ಆದಾಯಗಳಿಸುವುದರೊಂದಿಗೆ ಕುಟುಂಬ ಸದ್ಯಸ್ಯರನ್ನೂ ತೊಡಗಿಸಿಕೊಂಡು ಉದ್ಯೋಗಸ್ಥರನ್ನಾಗಿಸಬಹುದು.

ರೈತ ಮಾರುಕಟ್ಟೆ

ರೈತ ಮಾರುಕಟ್ಟೆ ಸಹಕಾರಿ ಸಂಸ್ಥೆಗಳು, ರೈತ ಉತ್ಪಾದಕರ ಸಂಸ್ಥೆ ಅಥವಾ ಪುರಸಭೆಯ ಮುಖಾಂತರ ರೈತರು ಅಥವಾ ಮಾರಾಟಗಾರರು ಒಪ್ಪಿದ ಮಾರ್ಗಸೂಚಿ, ನಿಯಮ ಮತ್ತು ಕಾಯ್ದೆಗಳಡಿಯಲ್ಲಿ ಕಾರ್ಯನಿರ್ವಹಿಸುತ್ತವೆ. ಈ ಸೌಲಭ್ಯವು ಪ್ರತ್ಯೇಕ ಮಳಿಗೆಗಳನ್ನೊಳಗೊಂಡ, ವಿಶಾಲವಾದ ಸ್ಥಿರ ಮಾರುಕಟ್ಟೆಯಿಂದ ಹಿಡಿದು ರಸ್ತೆಬದಿಯ ಗಾಡಿ ವ್ಯಾಪಾರದವರೆಗೂ ವ್ಯಾಪಿಸಿದೆ. ಅಗತ್ಯ ಉತ್ಪನ್ನಗಳನ್ನು ಕ್ರೋಢೀಕರಿಸಿ ಒಂದೆಡೆ ಮಾರುವುದರಿಂದ ಗ್ರಾಹಕರನ್ನು ಸೆಳೆಯುವುದರೊಟ್ಟಿಗೆ, ಮಧ್ಯವರ್ತಿಗಳ ಹಸ್ತಕ್ಷೇಪ ತಗ್ಗಿಸಿ ಹೆಚ್ಚಿನ ಬೆಲೆ ಸಿಗುತ್ತದೆ.

ಮಾರುಕಟ್ಟೆ

ವಿದ್ಯಾವಂತ ಯುವಜನಾಂಗ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವಲ್ಲಿ ಮುಂದಿದ್ದಾರೆ.  ಇತ್ತೀಚೆಗೆ ಇ- ಮಾರ್ಕೆಟಿಂಗ್ ಅಥವಾ ಆನ್ಲೈನ್ ಮಾರ್ಕೆಟಿಂಗ್ ಹೆಚ್ಚು ಚಾಲ್ತಿಗೆ ಬರುತ್ತಿದೆ. ಕೃಷಿ ಕ್ಷೇತ್ರದಲ್ಲೂ ಈ ವ್ಯವಸ್ಥೆ ಅಳವಡಿಕೆಯಾಗುತ್ತಿದೆ. ಯುವ ಕೃಷಿಕರು ಸಾಫ್ಟ್ ವೇರ್ ಗಳನ್ನು ಅಭಿವೃದ್ಧಿಪಡಿಸಿ ಇಲ್ಲವೇ ಇತರ ವೆಬ್ಸೈಟ್ ಗಳ ಸಹಾಯದಿಂದ ತಾವು ಬೆಳೆದ ಪದಾರ್ಥಗಳನ್ನು ಹೊಲದಲ್ಲೇ ಸಂಸ್ಕರಿಸಿ, ಪ್ಯಾಕಿಂಗ್ ಮಾಡಿ ಗ್ರಾಹಕರ ಮನೆಬಾಗಿಲಿಗೆ ತಲುಪಿಸುವ ವ್ಯವಸ್ಥೆ ಮಾಡುವುದರಿಂದ ಲಾಭಗಳಿಸುವುದರೊಂದಿಗೆ ನಿರುದ್ಯೋಗಿಗಳಿಗೆ ಉದ್ಯೋಗವನ್ನೂ ಸೃಷ್ಟಿಸಬಹುದು. ಅತ್ಯಂತ ಅಗತ್ಯವಿರುವ, ದಿನಬಳಕೆಯ ಹೂವು, ಹಣ್ಣು, ತರಕಾರಿ, ದಿನಸಿ ಪದಾರ್ಥಗಳಿಗೆ ಈ ವ್ಯವಸ್ಥೆ ಉತ್ತಮವಾಗಬಲ್ಲದು.

ರೆಸ್ಟೋರೆಂಟ್, ಹೋಟೆಲ್ ಉದ್ಯಮ, ಶಾಲೆ ಹಾಗೂ ಇನ್ನಿತರ ಸಂಸ್ಥೆಗಳಿಗೆ ನೇರವಾಗಿ ತರಕಾರಿ, ಇನ್ನಿತರ ಉತ್ಪನ್ನಗಳನ್ನು ಮಾರುವುದರಿಂದ ಮಧ್ಯವರ್ತಿಗಳ ಭಾಗವಹಿಸುವಿಕೆಯನ್ನು ತಡೆದು, ಸಗಟು ವ್ಯಾಪಾರಿತನವನ್ನೂ ನಿರ್ವಹಿಸಬಹುದು. ಆದರೆ ಇದಕ್ಕೆ ಕಾರ್ಯಕ್ಷಮತೆಯುಳ್ಳ ಜನರ ಅವಶ್ಯಕತೆ ಇರುತ್ತದೆ.

ಬೇರೆ ರಾಜ್ಯಗಳಿಗೆ ಹೋಲಿಸಿದರೆ, ಕರ್ನಾಟಕ ಇ-ಮಾರುಕಟ್ಟೆ ಅಳವಡಿಸಿಕೊಳ್ಳುವಲ್ಲಿ ಮುಂಚೂಣಿಯಲ್ಲಿದೆ. ಕರ್ನಾಟಕದ ಮಾದರಿಯನ್ನು ಈಗ ಕೇಂದ್ರ ಸರಕಾರ ರಾಷ್ಟ್ರೀಯ ಮಟ್ಟದಲ್ಲಿ ಅಳವಡಿಸಲು ಮುಂದಾಗುತ್ತಿದೆ.

Capture(ವೆಬ್‍ಸೈಟ್ : ಕೃಷಿ ಮಾರಾಟ ವಾಹಿನಿ)

ಒಂದು ರೈತ ಕುಟುಂಬದ ಹೆಣ್ಣುಮಗಳಾಗಿ ನಾನು ಕಂಡಂತೆ ಸರ್ಕಾರದ ಕೃಷಿ ಯೋಜನೆಗಳು ಕೇವಲ ಕಡತಗಳಲ್ಲಿ ಮುದ್ರಿತಗೊಂಡು ಮುಚ್ಚಿಡುವಂತಾಗಿವೆ. ಬೆಳೆವಿಮೆಯಂತಹ ಯೋಜನೆಗಳಿಂದ  ವಿಮಾ ಕಂಪನಿಗಳು ಬೊಕ್ಕಸ ತುಂಬಿಸಿಕೊಳ್ಳುತ್ತವೆಯಷ್ಟೇ ಎಂಬುದು ರೈತರ ಅಭಿಪ್ರಾಯ ಹಾಗೂ ಎಷ್ಟೋ ಅಗತ್ಯವಿರುವ ಯೋಜನೆಗಳು, ಕಾರ್ಯನೀತಿಗಳು ರೈತರನ್ನು ತಲುಪುತ್ತಿಲ್ಲ, ಸಕ್ರಿಯವಾಗಿಲ್ಲ ಎಂಬುದು ವಿಷಾದನೀಯ.

ಬೆಳೆಗೆ ಸೂಕ್ತ ಬೆಲೆ ದೊರೆಯಬೇಕು, ಅಧಿಕ ಉತ್ಪಾದನೆಯಿಂದ ಠೇವಣಿ ಕಳೆದುಕೊಳ್ಳುವ ಸ್ಥಿತಿಯುಂಟಾಗಬಾರದೆಂದರೆ, ಪ್ರತಿಯೊಂದು ಬೆಳೆಗೂ ಬೆಂಬಲ ಬೆಲೆ ನಿಗದಿಯಾಗಬೇಕು. ಮಾರುಕಟ್ಟೆ ವ್ಯವಸ್ಥೆಯನ್ನು ಸುಧಾರಿಸುವುದು ಕೇವಲ ಪರಿಕಲ್ಪನೆಗಳಾಗದೆ, ಕಾರ್ಯರೂಪ ಪಡೆಯಬೇಕಾಗಿದೆ. ದಲ್ಲಾಳಿಗಳ ಹಾವಳಿ ನಿಯತ್ರಣಗೊಂಡರೆ ಪೂರ್ಣಪ್ರಮಾಣದ ಹಣ ಬೆಳೆಗಾರರ ಕೈಸೇರುವುದರಲ್ಲಿ ಸಂಶಯವಿಲ್ಲ ಎಂಬುದು ನನ್ನ ಸ್ವಗತ.

Bookmark the permalink.

Comments are closed.

Comments are closed